Saturday, March 26, 2011

ಗೋವಾದ ಶೋಭೆ ಹೆಚ್ಚಿಸುವಲ್ಲಿ ಕನ್ನಡಿಗರ ಪಾತ್ರ ಅಪಾರ - ವಿಕ್ಟೋರಿಯಾ ಡಿಸೋಜಾ
ಗೋವಾದ ಅಭಿವೃದ್ಧಿಯಲ್ಲಿ ಹಾಗೂ ಅದರ ಅಂದ ಹೆಚ್ಚಿಸುವಲ್ಲಿ ಕನ್ನಡಿಗರು ಕೊಡುತ್ತಿರುವ ಕೊಡುಗೆ ಅಪಾರ ಎಂದು ಗೋವಾ ವಿಧಾನಸಭೆಯ ಸಂತಾಕ್ರುಜ಼್ ಕ್ಷೇತ್ರದ ಶಾಸಕಿ ಹಾಗೂ ಮಾಜಿ ಮಂತ್ರಿ ಶ್ರೀಮತಿ ವಿಕ್ಟೋರಿಯಾ ಫರ್ನಾಂಡಿಸ್ ಅಭಿಪ್ರಾಯಪಟ್ಟರು. ಅವರು ಪಣಜಿಯ ಸಿದ್ಧಾರ್ಥ ಬಾಂದೋಡ್ಕರ್ ಸಭಾಭವನದಲ್ಲಿ ಗೋವಾ ಕನ್ನಡ ಸಮಾಜದ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಕನ್ನಡಿಗರು ಅತ್ಯಂತ ತಾಳ್ಮೆ, ಕಾಳಜಿ ಹಾಗೂ ಪ್ರಾಮಾಣಿಕತೆಗಳಿಂದ ಕೆಲಸ ಮಾಡುತ್ತಾರೆ. ನಗುಮೊಗದ ಸೇವೆ ಅವರ ಹೆಗ್ಗಳಿಕೆ. ಇಂದು ಗೋವಾದಲ್ಲಿ ಕಾಣುವ ದೊಡ್ಡ ದೊಡ್ಡ ಕಟ್ಟಡಗಳ ಹಿಂದೆ ಕನ್ನಡಿಗರ ಅಪಾರ ಶ್ರಮವಿದೆ. ಇಷ್ಟಾದರೂ ಕನ್ನಡಿಗರನ್ನು ಇಲ್ಲಿನವರು ಹೊರಗಿನವರು ಎಂದು ಮೂದಲಿಸುವುದು ದುರದೃಷ್ಟಕರ ಎಂದು ಅವರು ಹೇಳಿದರು. ಕರ್ನಾಟಕದ ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ತನ್ನ ತಂದೆಯ ಜೊತೆಗೆ ಕಾರವಾರದಲ್ಲಿ ವಸತಿ ಮಾಡಿದ ತನ್ನ ಬಾಲ್ಯದ ದಿನಗಳನ್ನು ಸ್ಮರಿಸಿದ ಶಾಸಕಿ, ದಾಂಡೇಲಿ, ಕುಮಟಾ, ಹೊನ್ನಾವರ ಮುಂತಾದ ಪ್ರದೇಶಗಳಲ್ಲಿ ತಾನು ಅಡ್ಡಾಡಿದ್ದನ್ನು ಮೆಲಕು ಹಾಕಿದರು. ತಾನು ಯಾವಾಗಲೂ ನಿಮ್ಮ ಜೊತೆಗೆ ಇರುವೆ ಎಂಬ ಭರವಸೆಯ ಮಾತನ್ನು ಅವರು ಆಡಿದರು. ಮಹಿಳೆಯರು ಇಂದು ಮಾಡುತ್ತಿರುವ ಸಾಧನೆಯ ಕುರಿತು ತೃಪ್ತಿ ವ್ಯಕ್ತಪಡಿಸಿದ ಅವರು ’ಮಹಿಳೆಯರ ಶೋಷಣೆ ಇಂದಿಗೂ ನಿಲ್ಲದಿರುವುದು ವಿಷಾದಕರ’ ಎಂದರು.
ಗೌರವಾತಿಥಿಯಾಗಿ ಪಾಲ್ಗೊಂಡಿದ್ದ ಹೃದ್ರೋಗ ತಜ್ಞೆ ಡಾ. ಜ್ಯೋತಿ ಕುಸನೂರ್ ಅವರು ಪ್ರಕ್ಷೇಪಕದ ಸಹಾಯದಿಂದ ದೃಶ್ಯ-ಶ್ರಾವ್ಯ ಮಾಧ್ಯಮದ ಮೂಲಕ ಹೃದಯದ ಕಾಯಿಲೆಗೆ ಸಂಬಂಧಪಟ್ಟ ಅತ್ಯವಶ್ಯಕ ಮಾಹಿತಿಗಳನ್ನು ನೀಡಿದರು. ಮಹಿಳೆಯರು ತಮ್ಮ ಕೆಲಸದ ನಡುವೆಯೂ ಆಹಾರದ ಬಗ್ಗೆ ಕಾಳಜಿವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೃದಯದ ಕಾಯಿಲೆಯಂಥ ಗಂಭೀರ ವಿಷಯವನ್ನು ಕೇಳಿ ಭಾರವಾಗಿದ್ದ ಹೃದಯವನ್ನು ಹಗುರಗೊಳಿಸಿದವರು ಶ್ರೀಮತಿ ಇಂದುಮತಿ ಸಾಲಿಮಠ ಅವರು. ದೂರದರ್ಶನದ ಪ್ರಖ್ಯಾತ ಹರಟೆಗಾರರಾದ ಗುಲ್ಬರ್ಗಾದ ಇಂದುಮತಿಯವರು ತಮ್ಮ ಉತ್ತರಕರ್ನಾಟಕದ ಹಾಸ್ಯ ಶೈಲಿಯ ಮಾತುಗಳಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.
ಗೋವಾ ಕನ್ನಡ ಸಮಾಜದ ಅಧ್ಯಕ್ಷ ಶ್ರೀ ವಿಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶ್ರೀಮತಿ ಅನುರಾಧಾ ಯಾಳಗಿಯವರು ಅತಿಥಿಗಳನ್ನು ಪರಿಚಯಿಸಿದರು. ಸಹಕಾರ್ಯದರ್ಶಿ ಶ್ರೀಮತಿ ಕಲ್ಪನಾ ಚವ್ಹಾಣ ವಂದನಾರ್ಪಣೆಗೈದರು. ಶ್ರೀಮತಿ ರಂಜನಾ ಜೋಶಿ ಹಾಗೂ ಶ್ರೀಮತಿ ಸುಮಾ ರಾವ್ ಅವರು ಕಾರ್ಯಕ್ರಮ ನಿರೂಪಿಸಿದರು.

ಮಹಿಳಾ ದಿನಾಚರಣೆ

ಶ್ರೀಮತಿ ವಿಕ್ಟೊರಿಯಾ ಫರ್ನಾಂಡಿಸ್ ಮಾತನಾಡುತ್ತಿರುವುದು.


ದೀಪಪ್ರಜ್ವಲಿಸಿ ಉದ್ಘಾಟನೆ



ಶ್ರೀಮತಿ ಇಂದುಮತಿ ಸಾಲಿಮಠ ಅವರಿಂದ ಹಾಸ್ಯದ ಹೊನಲು