Wednesday, March 16, 2011

ಗೋವಾ ಕನ್ನಡ ಸಮಾಜಕ್ಕೆ ಪ್ರಶಸ್ತಿಯ ಗರಿ


ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನವು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಕನ್ನಡ ಭಾಷೆ, ಕಲೆ, ಸಾಹಿತ್ಯ ಸಂಸ್ಕೃತಿ, ಇತಿಹಾಸ ಹಾಗೂ ಪರಂಪರೆಗಳನ್ನು ವಿವಿಧ ರಾಜ್ಯಗಳಲ್ಲಿ ಹರಡಿರುವ ಕನ್ನಡಿಗರಿಗೆ ತಲುಪಿಸುವ ಉದ್ದೇಶದಿಂದ ಕೇರಳ, ಕರ್ನಾಟಕ ಹಾಗೂ ಇತರ ರಾಜ್ಯಗಳಿಂದ ಅಷ್ಟೇ ಅಲ್ಲ ಅನಿವಾಸಿ ಭಾರತೀಯ ಕನ್ನಡಿಗರನ್ನು ಆಮಂತ್ರಿಸಿ ಪ್ರೋತ್ಸಾಹಿಸುವುದಕ್ಕಾಗಿ ಹಾಗೂ ಸಂಸ್ಕೃತಿ ವಿನಿಮಯಕ್ಕಾಗಿ ಕಾಸರಗೋಡಿನ ಲಲಿತಕಲಾ ಸದನದಲ್ಲಿ ಜನವರಿ ೨೯ ಹಾಗೂ ೩೦ರಂದು ಕೇರಳರಾಜ್ಯ ೪ನೇ ಕನ್ನಡ ಸಮ್ಮೇಳನ ಹಾಗೂ ಕೇರಳ ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಉತ್ಸವವನ್ನು ಹಮ್ಮಿಕೊಂಡಿತ್ತು.
ಈ ಸಂzರ್ಭದಲ್ಲಿ ಪ್ರತಿಷ್ಠಾನವು ತನ್ನ ೨೦ನೆಯ ವರ್ಷದ ಪ್ರತಿಷ್ಠಿತ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ರಾಷ್ಟ್ರೀಯ ಪ್ರಶಸ್ತಿಯನ್ನು ಗೋವಾ ಕನ್ನಡ ಸಮಾಜಕ್ಕೆ ನೀಡಿ ಗೌರವಿಸಿತು. ಸಮಾಜದ ಪರವಾಗಿ ಉಪಾಧ್ಯಕ್ಷೆ ಸೌ.ಅನುರಾಧಾ ಯಾಳಗಿಯವರು ಈ ಪ್ರಶಸ್ತಿಯನ್ನು ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆನಿಯ ಅಧ್ಯಕ್ಷ ಶ್ರೀ ಟಿ.ಎಸ್.ನಾಗಾಭರಣ ಅವರಿಂದ ಸ್ವೀಕರಿಸಿದರು. ವೇದಿಕೆಯಲ್ಲಿ ಪ್ರಸಿದ್ಧ ಚಲನಚಿತ್ರ ವಸ್ತ್ರವಿನ್ಯಾಸಕಿ ಶ್ರೀಮತಿ ನಾಗಾಭರಣ, ಸಾಹಿತಿ ಮೋಹನ ನಾಗಮ್ಮನವರ್, ಚಲನಚಿತ್ರ ನಟಿ ಕಾವ್ಯಶ್ರೀ ಪಂಡಿತ್, ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಶಿವರಾಮ ಕಾಸರಗೋಡು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಉತ್ಸವದ ಅಂಗವಾಗಿ ನಡೆದ ವಿವಿಧ ಸಾಂಸ್ಕ್ರುತಿಕ ಕಾರ್ಯಕ್ರಮಗಳಲ್ಲಿ ಯಕ್ಷಗಾನ ತೊಗಲು ಗೊಂಬೆಯಾಟ, ಡೊಳ್ಳೂ ಕುಣಿತ, ಸಂಭಾಳ ವಾದನ, ಕರಡಿ ಮಜಲು, ದಾಸವಾಣಿ, ಭರತನಾಟ್ಯ, ಕೂಚಿಪುಡಿ ನೃತ್ಯ, ಕರಗ ನೃತ್ಯ, ಮಯೂರಿ ನೃತ್ಯ, ನಾಗನೃತ್ಯ, ಸ್ಯಾಕ್ಸೊಫೊನ್ ವಾದನ, ನಾಟಕ ಮುಂತಾದವು ಮನ ಸೆಳೆದವು. ಹೊರನಾಡು ಹಾಗೂ ಗಡಿನಾಡ ಕನ್ನಡಿಗರ ಸಮಸ್ಯೆಗಳನ್ನು ಕುರಿತು ಚಿಂತನಾಗೋಷ್ಠಿ, ಕವಿಸಮ್ಮೇಳನ, ಪರಂಪರಾಗತ ಯಕ್ಷಗಾನ ಮುಖವರ್ಣಿಕೆಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಮೊದಲಾದವು ಸಮಾರಂಭಕ್ಕೆ ಮೆರಗು ನೀಡಿದ್ದವು.
ಗೋವಾ ಕೇಸರಿಗೆ ಪ್ರಶಸ್ತಿ:
ಇದೇ ಸಂದರ್ಬದಲ್ಲಿ ಗೋವಾದ ಪ್ರತಿಷ್ಠಿತ ಕನ್ನಡ ಪಾಕ್ಷಿಕ ಗೋವಾ ಕೇಸರಿ ಪತ್ರಿಕೆಗೂ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪತ್ರಿಕೆಯ ಪರವಾಗಿ ಶ್ರೀ ಅರುನಕುಮಾರ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

ವೇದ ಗಣಿತ - ೨

ಏಕಾಧಿಕೇನ ಪೂರ್ವೇಣ
(ಮುಂದುವರಿದ ಭಾಗ)
ಈ ಸೂತ್ರವನ್ನು ಉಪಯೋಗಿಸಿ ಐದರಿಂದ ಕೊನೆಗೊಳ್ಳುವ ಸಂಖ್ಯೆಗಳ ವರ್ಗವನ್ನು ಕಂಡು ಹಿಡಿಯುವ ವಿಧಾನವನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ಈ ಸೂತ್ರವನ್ನು ಭಿನ್ನರಾಶಿಗಳಿಗೂ ವಿಸ್ತರಿಸಬಹುದು.
ಉದಾ: 1½ X 1½
ಇಲ್ಲಿ ಪೂರ್ಣಾಂಕ ಸಮಾನವಾಗಿದ್ದು, ಎರಡೂ ಸಂಖ್ಯೆಯ ಭಿನ್ನರಾಶಿ ಭಾಗಗಳನ್ನು ಕೂಡಿಸಿದರೆ ೧ ಆಗುತ್ತದೆ. ಅಂತಹ ಸಂದರ್ಭದಲ್ಲಿ ಈ ಸೂತ್ರವನ್ನು ಉಪಯೋಗಿಸಬಹುದು.

1X(1+1)/(½X½) = (1X2)/ ¼
= 2/¼= 2¼


ವಿವರಣೆ: ಪೂರ್ಣಾಂಕಕ್ಕೆ ಏಕಾಧಿಕೇನ ಪೂರ್ವೇಣ ಸೂತ್ರದ ಪ್ರಕಾರ ೧ ನ್ನು ಕೂಡಿಸಿ ಬಂದ ಉತ್ತರದಿಂದ ಆ ಪೂರ್ಣಾಂಕವನ್ನು ಗುಣಿಸಿ. ಈಗ ಸಿಗುವ ಉತ್ತರ ನಮ್ಮ ಕೊನೆಯ ಉತ್ತರದ ಪೂರ್ವಭಾಗ. ಎರಡೂ ಸಂಖ್ಯೆಗಳ ಭಿನ್ನರಾಶಿಭಾಗಗಳನ್ನು ಗುಣಿಸಿದರೆ ಅಂತಿಮ ಉತ್ತರದ ಕೊನೆಯ ಭಾಗ ಸಿಗುತ್ತದೆ.
ಇನ್ನೊಂದು ಉದಾಹರಣೆ: 6¼X6¾
= [6X(6+1)]/(¼X¾)]
= (6X7)/ 3/16
= 423/16
ನೀವೇ ಪ್ರಯತ್ನಿಸಿ:
5 1/6X 55/6; 3 5/9X 34/9

ಅಂತ್ಯಯೋರ್ದಶಕೇಪಿ:
ಈ ಸೂತ್ರದ ಸಹಾಯದಿಂದ ಹಿಂದಿನ ಸೂತ್ರವನ್ನು ಇನ್ನೂ ಹಿಗ್ಗಿಸಬಹುದು. ಕೊನೆಯ ಅಂಕೆಗಳ ಮೊತ್ತ ೧೦ ಆಗಿರುವಾಗಲೂ... ಎಂಬುದು ಈ ಸೂತ್ರದ ಅರ್ಥ. ಏಕಾಧಿಕೇನ ಪೂರ್ವೇಣ ಸೂತ್ರವನ್ನು ಉಪಯೋಗಿಸಬೇಕು ಎಂಬುದು ಅಧ್ಯಾಹಾರ.
ಉದಾ:23X 27
ಇಲ್ಲಿ ಎರಡೂ ಸಂಖ್ಯೆಗಳಲ್ಲಿ ದಶಕಸ್ಥಾನದ ಅಂಕೆಗಳು ಸಮಾನವಾಗಿವೆ. ಬಿಡಿ ಸ್ಥಾನದ ಅಂಕೆಗಳ ಮೊತ್ತ=೧೦. ಇಂತಹ ಸಂದರ್ಭದಲ್ಲಿ ಏಕಾಧಿಕೇನ ಪೂರ್ವೇಣ ಸೂತ್ರದ ಉಪಯೋಗ ಶಕ್ಯ.

23X 27= [2X(2+1)]/(3X7) = (2X3)/21 = 621
52X58 = [5X(5+1)]/(2X8) = (5X6)/16 = 3016
71X79 = [7X(7+1)]/(1X9) = (7X8)/09 = 5609


ನಿಮ್ಮ ಅಭ್ಯಾಸಕ್ಕಾಗಿ: 34X36, 102X108, 87X83
-ಮಹಾಬಲ ಭಟ್

ಗಂಧರ್ವಲೋಕ ಸೇರಿದ ಗಾನಗಾರುಡಿಗ

ಭಾರತರತ್ನ ಪ್ರಶಸ್ತಿ ಪುರಸ್ಕೃತ ಪಂ.ಭೀಮಸೇನ ಜೋಶಿ ಅವರ ಸಾಧನೆ ಅಪಾರ. ’ಓಡುವ ನದಿ ಸಮುದ್ರ ಸೇರಲೇ ಬೇಕು ’ ಎಂಬಂತೆ ಎಲ್ಲೊ ಹುಟ್ಟಿ ಎಲ್ಲೊ ಬೆಳೆದು ಹೆತ್ತ ತಾಯಿ, ಜನ್ಮಭೂಮಿ, ಕರ್ಮಭೂಮಿಗಳಿಗಲ್ಲದೆ ಇಡೀ ದೇಶಕ್ಕೆ ಕೀರ್ತಿಯನ್ನು ತಂದ ಹೆಮ್ಮೆಯ ಪುತ್ರ.
’ ವಿದ್ಯೆ ಸಾಧಕನ ಸೊತ್ತೇ ಹೊರತು ಸೋಮಾರಿಯ ಸೊತ್ತಲ್ಲ’ ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆ ಭೀಮಸೇನ ಜೋಶಿಯವರು. ಹಾರುತ ಹಾರುತ ಬಲುದೂರ ಸಾಗುವ ಗಾಳಿಪಟದಂತೆ ಸತತ ಪರಿಶ್ರಮದಿಂದ ಗಂಧರ್ವಲೋಕವನ್ನು ಮುಟ್ಟಿದ ಸಾಧಕರಿವರು. ಕೇಳುಗರ ಕಿವಿಗಿಂಪಾಗಿ, ಮನಸ್ಸಿಗೆ ತಂಪಾಗಿ ಭಾಸವಾಗುವ ಇವರ ಸಂಗೀತ, ಮುಖದಲ್ಲಿ ಎದ್ದು ಕಾಣುವ ಮುಗ್ಧತೆ ಸರಳತೆಗಳು ಅವರನ್ನು ಆತ್ಮೀಯರನ್ನಾಗಿಸುತ್ತವೆ. ಅವರ ಬಾಯಿಂದ ಬಂದ ಭಜನೆಗಳು, ಅಭಂಗಗಳು, ಖ್ಯಾಲ್‌ಗಳು ಜನರ ಬಾಯಲ್ಲಿ ನಲಿದಾಡುತ್ತಿವೆ. ಸಂಗೀತಕ್ಕೆ ಭಾಷೆಯ ತೊಡರಿಲ್ಲ. ಮರಾಠಿಯಲ್ಲಿ ಅವರು ಹಾಡಿದ ಅಭಂಗಗಳು ಕನ್ನಡಿಗರ ಹೃದಯವನ್ನೂ ಹೊಕ್ಕಿವೆ. ಸಂಗೀತದ ಗಂಧಗಾಳಿಯ ಅರಿವು ಇಲ್ಲದವರೂ ಇವರ ಹಾಡಿನ ಸಾಲುಗಳನ್ನು ಮೆಲುಕು ಹಾಕುವುದು ಸೋಜಿಗ.
ಸೌ. ಶೈಲಜಾ ಕಣವಿ, ಮಡಗಾಂವ್
ದಾಸರ ಪದಗಳಿಗೆ ಜೀವ ತುಂಬಿದ ಹಾಡುಗಾರ ಅವರು. ’ಪರಗತಿಗಿದು ನಿರ್ಧಾರಾ.. ನೋಡೋ’ ಎಂದು ಅವರು ಹಾಡಿದರೆಂದರೆ ಶ್ರೋತೃಗಳು ಪುರಂದರದಾಸರಂತೆ ತಮ್ಮೆಲ್ಲ ಆಸ್ತಿಯನ್ನು ದಾನಮಾಡಿ ದಾಸರಾಗಬೇಕೆಂಬ ಭಾವದಲ್ಲಿ ತೇಲಾಡುತ್ತಿದ್ದರು.
ಇಂತಹ ಮಹಾನ್ ಸಂಗೀತಗಾರ ಗಂಧರ್ವ ನಗರಿಯನ್ನು ಸೇರಿದ್ದಾರೆ. ಅವರ ನಾದಶರೀರ ಮಾತ್ರ ಎಂದಿಗೂ ಅಳಿಯದಷ್ಟು ಗಟ್ಟಿಯಾಗಿದೆ. ಅವರಿಗೊಂದು ಅಶ್ರುತರ್ಪಣ.

ಒತ್ತಕ್ಷರಗಳೇ ಅಂಕೆಗಳು

ಕನ್ನಡ ವರ್ಣಮಾಲೆಯಲ್ಲಿ ಒತ್ತಕ್ಷರಗಳು ಬಲು ವಿಶಿಷ್ಟ. ಅಕ್ಷರದಿಂದ ಶಬ್ದವಾಗಿ ಶಬ್ದದಿಂದ ನುಡಿಯಾಗಿ, ನುಡಿಯೊಳು ಕಾಣುವ ಒತ್ತಾಸೆಯ ಒತ್ತಕ್ಷರಗಳು ಮುತ್ತಿನಂಥ ಅಂಕೆಗಳೂ ಹೌದು. ಇನ್ನ್ಯಾವ ಭಾಷೆಯ ಅಂಕೆಗೂ ಸಿಗದ ಹಿರಿಮೆ ಕನ್ನಡದ ಒತ್ತಕ್ಷರಗಳಿಗಿವೆ. ಇದು ನಮ್ಮೆಲ್ಲರಿಗೂ ಹರ್ಷದ, ಹೆಮ್ಮೆಯ, ಗೆಲ್ಮೆಯ ವಿಚಾರ.
ಹಾಗಾದರೆ ಏನೀ ಅಂಥ ವೈಶಿಷ್ಟ್ಯ? ಗಮನಿಸಿದ್ದೀರಾ? ೫ ಹಾಗೂ ೭ ನ್ನು ಬಿಟ್ಟು ಉಳಿದೆಲ್ಲ ಅಂಕೆಗಳೂ ಒತ್ತಕ್ಷರಗಳಾಗಿ ವರ್ಣಮಾಲೆಯಲ್ಲಿ ಬಳಕೆಯಲ್ಲಿವೆ. ಈ ಕೆಳಗಿನ ಪಟ್ಟಿ ನೋಡಿ. ನಿಮಗೇ ಅರ್ಥವಾಗುತ್ತೆ.
ಅಕ್ಷರ ಒತ್ತಕ್ಷರ ಅಂಕೆ ಉದಾಹರಣೆ
ಗ ೧ ೧ (೧) ಕಗ್ಗ, ಮೊಗ್ಗು
ತ ೨ ೨ (೨) ಮುತ್ತು, ಅತ್ತೆ, ಮುಕ್ತಾ
ನ ೩ ೩ (೩) ಅನ್ನ, ರನ್ನ, ಪ್ರಶ್ನೆ
ಳ ೪ ೪ (೪) ಕಳ್ಳ, ಮುಳ್ಳು, ಕುಂಬ್ಳೆ
ಮ ೬ ೬ (೬) ಅಮ್ಮ, ಗುಮ್ಮ, ಕಲ್ಮೇಶ
ಐ ೮ ೮ (೮) ಕೈ, ಮೈಸೂರು, ಸೈ
ರ್ ೯ ೯ (೯) ಕರ್ನಾಟಕ, ಮರ್ಮ
ಙ,ಞ,ಣ,ನ,ಮ ೦ ೦ (೦) ಬಂಗಾರ, ಚಂಚು, ಕಂಠ, ಅಂತರ, ಪಂಪ
ವಿಚಿತ್ರ ಅಲ್ಲವೆ?
-ವೆಂಕಟೇಶ್ ಕುಲಕರ್ಣಿ

ಕನ್ನಡಮ್ಮನ ವರ್ಣಮಾಲೆ

ಕನ್ನಡಮ್ಮನ ವರ್ಣಮಾಲೆ
ಅಕ್ಷರದಿ ಗಾರುಡಿ ಲೀಲೆ
ನವ್ಯ ತರಂಗಿಣಿಯ ಸೆಲೆ
ಇದು ಕವಿ ಕಲಿಕಬ್ಬಿಗರ ನೆಲೆ
ಸದಾ ಉರುಳದೇ ಅರಳಿರಲಿ ನಾಳೆ

ಮೊಗ್ಗೊಂದು ಹೂವಾಗಿ
ಹೂವೆರದು ಮುತ್ತಾಗಿ
ಚಿನ್ನ ಕನ್ನಡವು ಮೂರು ಲೋಕದಿ
ಬೆಳಗಲಿ ಬೆಳ್ಳಿ ದೀಪವಾಗಿ

ನಾಕು ವೇದಗಳ ಸಾರ ಹೀರಿ
ಆರು ಋತುಗಳಲಿಯೂ ನಮ್ಮ ಭಾಷೆ
ಪಸರಿಸುತಿರಲಿ ಐಸಿರಿಯು ಎಂಟು ದಿಸೆ
ನವ ಭಾವ ರಸಗಳ ಕರ್ನಾಟಕ ನಾಡು
ದಶ ಶತಕ ಇತಿಹಾಸದಿ ಗುಣಗಾನಿಪ
ಬಂಗಾರದ ಬೀಡು.
-ವೆಂಕಟೇಶ ಕುಲಕರ್ಣಿ

ಜನನುಡಿಗೆ ಶುಭ ಹಾರೈಕೆ

ಗೋವೆಯಲಿ ಕಟ್ಟಿದರು ಕನ್ನಡಿಗರೊಂದು ಗುಡಿ
ಊದಿದರು ಕೊಂಬು ಕಹಳೆ, ಬಾರಿಸಿದರು ದುಡಿ
ಹೊರಡಿಸಿದರು ಹೊನ್ನ ಹೊತ್ತಿಗೆ "ಗೋವಾ ಜನನುಡಿ"
ಹೊರನಾಡಿನಲೂ ಸವಿಯಿರಿ ಕನ್ನಡಿಗರೆ ಈ ಜೇನ್ನುಡಿ
-ನಾ ಹರಿಶ್ಚಂದ್ರ


ತನು ಮನವ ದಣಿಸಿ
ಧನಮದವ ದಹಿಸಿ
ನೀಡಿದೆ ಮರುಜನ್ಮ ದರ್ಪಣಕೆ
ಜ್ಞಾನ ಸಾಗರನ್ನೆ ಹರಿಸಿದೆ
ಪ್ರೀತಿ ವಾತ್ಸಲ್ಯದಿ ಮಿಂದು
ನಾನೆಂತು ನೀಡಲಿ ನಿನಗೆ?

ಗಾತ್ರದಿ ಅಜವು
ಖ್ಯಾತಿಗೆ ಗಜವ
ಚಾಣಕ್ಯ ಛಲ ಹೊತ್ತು
ಜನಕೆ ಸ್ಪಂದನೆಯ ಪಣ ತೊಟ್ಟು
ದಾಪುಗಾಲಿಕ್ಕಿ ನಿಂದೆ
ಎಸೆವ ಹೊಸ್ತಿಲಲಿ ಈ ಎರಡು ವತ್ಸರದಿ

ಚಿಂತನೆಯ ನಡೆಸು ಚಿಂತಿಸಲು ಬೇಡ
ನಲಿವ ನೈದಿಲೆಯ ಮೇಲೆ
ನಡೆವ ಬಾಳು
ನಿನಗಾಗಿ ಕಾದಿದೆ
ಅದಕೆಂದೆ ನಾವಿಂದು ಕೋರುವೆವು
ಸಾವಿರ ಸಾವಿರ ಶುಭಾಶಯ
-ಅಖಿಲಾ ಕುರಂದವಾದ

ಮನೋಗತ

ನಮ್ಮ ನಿಮ್ಮೆಲ್ಲರ ನೆಚ್ಚಿನ ಗೋವಾ ಜನನುಡಿ ಎರಡು ವತ್ಸರಗಳನ್ನು ದಾಟಿ ಮೂರನೆಯ ವರ್ಷಕ್ಕೆ ದಾಪುಗಾಲಿಟ್ಟಿದೆ. ಎರಡನೆಯ ವರ್ಷ ಅನೇಕ ಏಳು ಬೀಳುಗಳನ್ನು ಕಂಡ ಪತ್ರಿಕೆ ಮುಂದೆ ಸಾಗುತ್ತಿರುವುದಂತೂ ನಿಜ. ಒಂದೆರಡು ಸಂಚಿಕೆಗಳು ಸಕಾಲದಲ್ಲಿ ಪ್ರಕಟವಾಗಿಲ್ಲ ಎಂಬುದನ್ನು ಬಿಟ್ಟರೆ ಹೊರಬಂದ ಸಂಚಿಕೆಗಳೆಲ್ಲ ಅರ್ಥಪೂರ್ಣವಾಗಿದ್ದು ನಿಮ್ಮ ಮೆಚ್ಚುಗೆಗೆ ಪಾತ್ರವಾಗಿದೆ ಎಂಬ ಸಮಾಧಾನವಿದೆ.
ಹಿಂದಿನ ವರ್ಷ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಂಗೀತದ ವಿಷಯದಲ್ಲಿ ವಿಶೇಷ ಸಂಚಿಕೆಯೊಂದನ್ನು ಹೊರತಂದಿದ್ದೆವು. ಈ ವರ್ಷ ಬರುವಷ್ಟರಲ್ಲಿ ನಮ್ಮ ನಾಡಿನ ಹೆಮ್ಮೆಯ ಗಾಯಕ ಭಾರತರತ್ನ ಭೀಮಸೇನ ಜೋಷಿ ಗಂಧರ್ವಲೋಕ ಸೇರಿದ್ದಾರೆ. ಅವರಿಗೆ ಗೋವಾ ಜನನುಡಿಯ ಅಶ್ರುತರ್ಪಣ.
ಈ ವರ್ಷ ಗೋವಾದಲ್ಲಿ ನೆಲೆಸಿರುವ ಕನ್ನಡ ಕವಿಗಳ ಕವನ ಸಂಕಲನವೊಂದನ್ನು ಹೊರತರಬೇಕೆಂದು ಕಾರ್ಯಪ್ರವೃತ್ತರಾಗಿದ್ದೇವೆ. ಅದಕ್ಕೆ ಸಾಕಷ್ಟು ಸಮಯ ಬೇಕಾಗಿರುವುದರಿಂದ ವಾರ್ಷಿಕೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ.
ಈ ಸಂಚಿಕೆಯೂ ಎರಡು ಸಂಚಿಕೆಗಳ ಗುಚ್ಛ. ಮುಂದಿನ ಮಾರ್ಚ್ ತಿಂಗಳ ಸಂಚಿಕೆಯು ಮಹಿಳಾ ವಿಶೇಷಾಂಕವಾಗಿ ಹೊರಬರಲಿದೆ.
ಗೋವಾ ರಾಜ್ಯ ವಸ್ತು ಸಂಗ್ರಹಾಲಯದಲ್ಲಿ ನಡೆದ ಗೋವಾ ಜನನುಡಿಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ ಎಲ್ಲ ಅಭಿಮಾನಿಗಳಿಗೂ ನಾವು ಕೃತಜ್ಞರು. ನಿಮ್ಮ ಸಹಕಾರ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇವೆ.