Saturday, December 18, 2010

ಗೋವಾ ಮುಕ್ತಿ ಗಾಥೆ

ಮಿತ್ರರೇ,

ಭಾರತಕ್ಕೆ ಸ್ವಾತಂತ್ರ್ಯ ದೊರೆತು ದಶಕಗಳೇ ಕಳೆದಿದ್ದರೂ ಗೋವಾ ಎಂಬ ಪ್ರಾಚೀನ ಭಾರತದ ಅವಿಭಾಜ್ಯ ಅಂಗವಾಗಿದ್ದ ಪ್ರದೇಶ ಪೋರ್ಚುಗೀಸರ ಕಪಿಮುಷ್ಟಿಯಲ್ಲೇ ಇತ್ತು. ಬ್ರಿಟೀಶರಿಗಿಂತ ಕ್ರೂರವಾದ ಆಡಳಿತ ನಡೆಸಿದ ಪೋರ್ಚುಗೀಸರ ಕಬಂಧಬಾಹುಗಳಿಂದ ೧೯೬೧ ಡಿಸೆಂಬರ್ ೧೯ ರಂದು ಗೋವಾ ಮುಕ್ತಿಯನ್ನು ಪಡೆಯಿತು. ಇದು ಗೋವಾ ವಿಮೋಚನೆಯ ೫೦ ನೇ ಅಂದರೆ ಸುವರ್ಣಮಹೋತ್ಸವ ವರ್ಷ. ಗೋವಾವನ್ನು ಮುಕ್ತಗೊಳಿಸಲು ಕೈಗೊಂಡ ಮುಕ್ತಿ ಸಂಗ್ರಾಮದ ವೀರಗಾಥೆ ಇಲ್ಲಿದೆ. ಇದು ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಕಥೆ. ದಯವಿಟ್ಟು ಓದಿ ಪ್ರತಿಕ್ರಿಯಿಸಿ.
೧೪೯೮ ರಲ್ಲಿ ಗುಡ್‌ಹೋಪ್ ಭೂಶಿರವನ್ನು ಪ್ರದಕ್ಷಿಣೆ ಹಾಕಿ ಕ್ಯಾಲಿಕತ್‌ಗೆ ಬಂದಿಳಿದ ವಾಸ್ಕೋ-ಡಿ-ಗಾಮಾ ಭಾರತದಲ್ಲಿ ಪೋರ್ಚುಗೀಸರ ಶಕೆಯ ಆರಂಭಕರ್ತನಾದ. ೧೫೧೦ ರಲ್ಲಿ ಪೋರ್ಚುಗೀಸ್ ಸೇನಾನಿ ಅಲ್ಬುಕರ್ಕನ ದಾಳಿಯೊಂದಿಗೆ ಗೋವಾದಲ್ಲಿ ಪೋರ್ಚುಗೀಸರ ಪ್ರವೇಶವಾಯಿತು. ಸ್ಥಳೀಯ ಹಿಂದೂ ಮುಖಂಡ ತಿಮ್ಮಯ್ಯನ ಸಹಾಯದೊಂದಿಗೆ ಆದಿಲ್ ಶಾಹಿಯಿಂದ ಗೋವಾವನ್ನು ಕೈವಶ ಮಾಡಿಕೊಂಡ ಅಲ್ಬುಕರ್ಕ ಭರತಖಂಡದ ಮೊದಲ ಯುರೋಪೀಯ ಸಾಮ್ರಾಜ್ಯ ಸ್ಥಾಪಕನಾದ. ಮುಸ್ಲೀಮ ಅರಸರ ಆಡಳಿತದಿಂದ ಬೇಸತ್ತಿದ್ದ ಹಿಂದೂಗಳು ಅವನಿಗೆ ಸಹಾಯ ಮಾಡಿದರು. ತಿಮ್ಮಯ್ಯನಿಗೆ ನಗರಾಧಿಕಾರಿ ಪಟ್ಟ ದೊರೆಯಿತು.
ಸಹಜವಾಗಿಯೇ ಪೋರ್ಚುಗಲ್ ನೊಂದಿಗೆ ವ್ಯಾಪಾರ ಆರಂಭವಾದಾಗ ವಿನಿಮಯದ ಸಮಸ್ಯೆ ಎದುರಾಯಿತು. ಆ ಸಂದರ್ಭವನ್ನು ಬಳಸಿಕೊಂಡು ಪೋರ್ಚುಗೀಸ್ ನಾಣ್ಯದ ಬಳಕೆಯನ್ನು ಜಾರಿಗೆ ತಂದ ಅಲ್ಬುಕರ್ಕ್. ಸುವರ್ಣ, ರಜತ ಹಾಗೂ ಕಂಚಿನ ನಾಣ್ಯಗಳು ಪೋರ್ಚುಗೀಸ್ ರಾಜನ ಮುದ್ರೆಯೊಂದಿಗೆ ಟಂಕಿಸಲ್ಪಟ್ಟು ಚಲಾವಣೆಗೆ ಬಂದವು.
ಕ್ರಮೇಣ ಪೋರ್ಚುಗೀಸರು ವ್ಯಾಪಾರದ ಮೇಲೆ ಹಾಗೂ ಆರ್ಥಿಕ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿದರು. ಮೊದಲು ಸಾಮಾಜಿಕ ವ್ಯವಸ್ಥೆಯ ಪರಿವರ್ತನೆಗೆ ಕೈಹಾಕದಿದ್ದರೂ ಕ್ರಮೇಣ ಮತಾಂತರ ಪ್ರಕ್ರಿಯೆ ಆರಂಭಗೊಂಡಿತ್ತು. ೧೫೮೩ ರಲ್ಲಿ ಕುಂಕೋಳಿಯಲ್ಲಿ ನಡೆಯುತ್ತಿರುವ ಮಿಶನರಿ ಚಟುವಟಿಕೆಗಳು ಸಣ್ಣ ಕಿಡಿಯನ್ನು ಹೊತ್ತಿಸಿದವು. ಅದು ಎಲ್ಲ ಪಾದ್ರಿಗಳ ಕೊಲೆಯಲ್ಲಿ ಪರ್ಯವಸಾನವಾದಾಗ ಪೋರ್ಚುಗೀಸರು ಕ್ರುದ್ಧರಾದರು. ಎಲ್ಲ ಹಳ್ಳಿಯ ಮುಖಂಡರನ್ನು ಮಾತುಕತೆಗೆಂದು ಕರೆದು ಅವರನ್ನೆಲ್ಲ ಕೋಟೆಯೊಳಗಡೆ ಕೊಂದರು. ಹಳ್ಳಿಗರು ತಮ್ಮ ಪರಂಪರಾಗತ ಮುಖಂಡರನ್ನು ಕಳೆದುಕೊಂಡರು. ನಂತರ ಪೋರ್ಚುಗೀಸರು ಸ್ಥಳೀಯರ ಜಮೀನುಗಳನ್ನು ಆಕ್ರಮಿಸಿಕೊಳ್ಳತೊಡಗಿದರು.
ಪೋರ್ಚುಗೀಸರ ದಬ್ಬಾಳಿಕೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಕ್ರಮೇಣ ಸ್ವಾತಂತ್ರ್ಯಾಂದೋಲನದ ಗಾಳಿ ಬೀಸಹತ್ತಿತು. ಅನೇಕರು ಈಗಾಗಲೇ ತಮ್ಮ ದೇವರೊಂದಿಗೆ ನೆರೆಯ ರಾಜ್ಯಗಳನ್ನು ಸೇರಿದ್ದರು. ೧೯೧೦ ರಲ್ಲಿ ಪೋರ್ಚುಗಲ್‌ನಲ್ಲಿ ಸಾಮ್ರಾಜ್ಯಶಾಹಿಯ ಅಂತ್ಯವಾದಾಗ ವಸಾಹತುಗಳಿಗೆ ಸ್ವಾತಂತ್ರ್ಯ ದೊರೆಯಬಹುದೆಂಬ ಆಶಾವಾದವಿತ್ತು. ಆದರೆ ಅದು ಹುಸಿಯಾದಾಗ ಪ್ರತಿಭಟನೆ ಆರಂಭವಾಯಿತು. ಶ್ರೀ ಲೂಯಿಸ್ ದೆ ಮೆನೆಜಿಸ್ ಬ್ರಗಾಂಜಾ ಗೋವಾದ ಮೊದಲ ಪೋರ್ಚುಗೀಸ್ ದಿನಪತ್ರಿಕೆ "ಓ ಹೆರಾಲ್ಡೋ" ವನ್ನು ಆರಂಭಿಸಿದರು. ಅದು ಪೋರ್ಚುಗೀಸರ ದುರಾಡಳಿತವನ್ನು ಟೀಕಿಸುತ್ತಿತ್ತು. ೧೯೧೭ ರಲ್ಲಿ ಜಾರಿಗೆ ಬಂದ "ಕಾರ್ತಾ ಒರ್ಗೆನಿಕಾ" ಎಂಬ ಕಾನೂನು ಜನರ ನಾಗರಿಕ ಸ್ವಾತಂತ್ರ್ಯವನ್ನು ಕಡಿಮೆ ಮಾಡಿತ್ತು. ಅದನ್ನು ವಿರೋಧಿಸಿ ಬ್ರಗಾಂಜಾ ಒಂದು ಬೃಹತ್ ಮೆರವಣಿಗೆಯನ್ನು ಮಡಗಾಂವನಲ್ಲಿ ಆಚಿiಜಿಸಿದರು.
೧೯೨೮ರಲ್ಲಿ ಟಿ.ಬಿ.ಕುನ್ಹಾ ಗೋವಾ ರಾಷ್ಟ್ರೀಯ ಕಾಂಗ್ರೆಸ್‌ನ್ನು ಸ್ಥಾಪಿಸಿದರು. ಕಲಕತ್ತಾದಲ್ಲಿ ನಡೆದ ಭಾರತೀಯ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಇದಕ್ಕೆ ಮಾನ್ಯತೆ ದೊರೆಯಿತು. ಪೋರ್ಚುಗೀಸ್ ಸರಕಾರ ಈ ಮಾನ್ಯತೆಯನ್ನು ರದ್ದು ಮಾಡುವಂತೆ ಭಾರತೀಯ ಕಾಂಗ್ರೆಸ್ಸಿ ನ ಮೇಲೆ ಒತ್ತಡ ಹೇರಿದರು. ೧೯೩೮ರಲ್ಲಿ ಮುಂಬಯಿಯಲ್ಲಿ ನೆಲೆಸಿದ್ದ ಗೋವೀಯರು ಹಂಗಾಮಿ ಗೋವಾ ಕಾಂಗ್ರೆಸ್‌ನ್ನು ಸ್ಥಾಪಿಸಿದರು.
ನಲವತ್ತರ ದಶಕದಲ್ಲಿ ದೇಶದ ಸ್ವಾತಂತ್ರ್ಯಾಂದೋಲನ ಸ್ಪಷ್ಟ ರೂಪವನ್ನು ಪಡೆದಿತ್ತು. ೧೯೪೬ರಲ್ಲಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವ ಸೂಚನೆ ನೀಡುತ್ತಿದ್ದಂತೆ ಗೋವಾ ಜನರಲ್ಲೂ ಆಶಾಭಾವ ಮೂಡಿತ್ತು.
೧೯೪೬ರಲ್ಲಿ ಟಿ.ಬಿ.ಕುನ್ಹಾ ಬಂಧಿತರಾಗಿದ್ದರು. ಆಗ ಏ.ಜಿ.ತೆಂಡುಲ್ಕರ್ ಅವರು ಗೋವಾ ಕಾಂಗ್ರೆಸ್‌ನ ನೇತೃತ್ವ ವಹಿಸಿ ಗೋವಾದ ಹೊರವಲಯವಾದ ಲೋಂಡಾದಲ್ಲಿ ಸಮಾವೇಶವನ್ನು ಏರ್ಪಡಿಸಿದ್ದರು.
೧೯೪೬ ಜೂನ್ ೧೮ರಂದು ರಾಮ ಮನೋಹರ್ ಲೋಹಿಯಾ ಅವರು ಮಡಗಾಂವ್‌ನಲ್ಲಿ ದೊಡ್ಡ ಸಮಾವೇಶವನ್ನು ನಡೆಸಿದರು. ಅವರನ್ನು ೧೫೦೦ ಜನರ ಜೊತೆಗೆ ಬಂಧಿಸಲಾಯಿತು. ಗೋವಾದ ಮುಖಂಡರಾದ ಟಿ.ಬಿ.ಕುನ್ಹಾ, ಪುರುಷೋತ್ತಮ ಕಾಕೋಡ್ಕರ್ ಮತ್ತು ಲಕ್ಷ್ಮಿಕಾಂತ ಭೆಂಬ್ರೆ ಅವರನ್ನು ಪೋರ್ಚುಗಲ್‌ಗೆ ರವಾನಿಸಲಾಯಿತು. ಇದೊಂದು ಅವಿಸ್ಮರಣೀಯ ಘಟನೆ. ಇದನ್ನು ಕ್ರಾಂತಿ ದಿನ ಎಂದು ಆಚರಿಸಲಾಗುತ್ತದೆ. ಅಕ್ಟೋಬರ್‌ನಿಂದ ನವೆಂಬರ್‌ವರೆಗೆ ಅನೇಕ ಸತ್ಯಾಗ್ರಹಗಳು ನಡೆದವು. ನಾಯಕರೆಲ್ಲ ಬಂಧಿತರಾದಾಗ ಗೋವಾ ಕಾಂಗ್ರೆಸ್ ಮುಂಬಯಿಯಿಂದ ಕಾರ್ಯನಿರ್ವಹಿಸಹತ್ತಿತು.
ಇದೇ ಸಮಯದಲ್ಲಿ ಭಿನ್ನ ಭಿನ್ನ ಲಕ್ಷ್ಯದೊಂದಿಗೆ ಹಲವಾರು ರಾಜಕೀಯ ಪಕ್ಷಗಳು ಸ್ಥಾಪನೆಗೊಂಡವು. ಒಬ್ಬರು ಗೋವಾವನ್ನು ಮಹಾರಾಷ್ಟ್ರದೊಂದಿಗೆ ಸೇರಿಸಬೇಕು ಎಂದರೆ ಇನ್ನೊಬ್ಬರು ದಕ್ಷಿಣರಾಜ್ಯಕ್ಕೆ ಸೇರಿಸಬೇಕೆಂದು ಪ್ರತಿಪಾದಿಸಿದರು. ಕೆಲವರು ಸಂಪೂರ್ಣ ಸ್ವಾತಂತ್ರ್ಯಕ್ಕೆ ಹೋರಾಡಿದರೆ ಕೆಲವರು ಸ್ವಾಯತ್ತತೆ ಸಾಕೆಂದರು. ಇದನ್ನು ಗಮನಿಸಿದ ಗಾಂಧೀಜಿ ಎಲ್ಲರೂ ಒಟ್ಟು ಸೇರಿ ಹೋರಾಡಲು ಕರೆ ನೀಡಿದರು. ೧೯೪೭ರಲ್ಲಿ ಮುಂಬಯಿಯಲ್ಲಿ ಸಭೆ ಸೇರಿದ ಎಲ್ಲ ಪಕ್ಷಗಳ ಮುಖಂಡರು "ಪೋರ್ಚುಗೀಸರೇ ಗೋವಾ ಬಿಟ್ಟು ತೊಲಗಿ" ಆಂದೋಲನಕ್ಕೆ ಚಾಲನೆ ನೀಡಿದರು.
೧೯೪೮ ರಲ್ಲಿ ಗೋವಾವನ್ನು ಭಾರತ ಒಕ್ಕೂಟಕ್ಕೆ ಸೇರಿಸುವ ಸಲುವಾಗಿಮಾತುಕತೆಗೆ ಪೋರ್ಚುಗೀಸರನ್ನು ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಆಹ್ವಾನಿಸಿದರು. ಆದರೆ ಅವರು ಸಿದ್ಧರಿರಲಿಲ್ಲ. ೧೯೫೩ ರಲ್ಲಿ ಪೋರ್ಚುಗಲ್‌ನಲ್ಲಿರುವ ಭಾರತೀಯ ನಿಯೋಗದ ಮೂಲಕ ಮತ್ತೆ ಮಾತುಕತೆ ಪ್ರಯತ್ನ ಆಂಭವಾಯಿತು. ಆದರೆ ಪೋರ್ಚುಗೀಸರು ನೇರ ವರ್ಗಾವಣೆಗೆ ಒಪ್ಪಲಿಲ್ಲ. ಎರಡು ದೇಶಗಳ ನಡುವಿನ ರಾಜಕೀಯ ಸಂಬಂಧ ಹಳಸಿತು. ಜೂನ್ ೧೧ ರಂದು ನೆಹರು ಗೋವಾವನ್ನು ಭಾರತದ ಒಕ್ಕೂಟಕ್ಕೆ ಸೇರಿಸುವುದಾಗಿ ಸಾರ್ವಜನಿಕವಾಗಿ ಉದ್ಘೋಷಿಸಿದರು.

ಕ್ರಾಂತಿಕಾರಿ ಹೋರಾಟ:

ಆಝಾದ್ ಗೋಮಂತಕ ದಳ ಎಂಬ ಗುಂಪು ಕ್ರಾಂತಿಯ ಮೂಲಕ ಸ್ವಾತಂತ್ರ್ಯ ಪಡೆಯಲು ಯತ್ನಿಸಿತು. ಪೋಲಿಸ್ ಠಾಣೆ ಹಾಗೂ ಕಾರ್ಖಾನೆಗಳ ಮೇಲೆ ಈ ದಳ ದಾಳಿ ನಡೆಸಿತು. ಅನೇಕ ಬಾಂಬ್ ದಾಳಿಗಳು ನಡೆದವು. ಪೋರ್ಚುಗೀಸರು ತಮ್ಮ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿದರು. ಶಿವಾಜಿರಾವ್ ಗೋವಿಂದರಾವ್ ದೇಸಾಯಿ ಅವರು ಗೋವಾ ವಿಮೋಚನಾ ಸೇನೆಯನ್ನು ಸ್ಥಾಪಿಸಿದರು.
೧೯೫೩ರಲ್ಲಿ ಟಿ.ಬಿ.ಕುನ್ಹಾ ಗೋವಾ ಕ್ರಿಯಾ ಸಮಿತಿಯನ್ನು ರಚಿಸಿದರು. ೧೯೫೪ ಅಗಸ್ಟ್ ೧೫ರಂದು ಬೃಹತ್ ಸತ್ಯಾಗ್ರಹ ಆರಂಭವಾಯಿತು. ಪಿ.ಡಿ.ಗಾಯತೊಂಡೆ ಬಂಧಿತರಾದರು. ಸತ್ಯಾಗ್ರಹಿಗಳಿಗೆ ಸಹಾಯ ಒದಗಿಸಲು ಗೋವಾ ವಿಮೋಚನ ಸಹಾಯಕ ಸಮಿತಿಯ ರಚನೆಯಾಯಿತು. ಮಹಾರಾಷ್ಟ್ರದ ಪ್ರಜಾ ಸಮಾಜವಾದಿ ಪಕ್ಷ ಸತ್ಯಾಗ್ರಹಿಗಳ ಬೆಂಬಲಕ್ಕೆ ಬಂತು.
ಭಾರತ ಸರಕಾರವು ತನ್ನ ಸಾರ್ವಭೌಮತೆಗೆ ಭಂಗ ತರುತ್ತಿದೆ ಎಂದು ಪೋರ್ಚುಗಲ್ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ದೂರಿತ್ತ ಪರಿಣಾಮ ಸತ್ಯಾಗ್ರಹಿಗಳಿಗೆ ತನ್ನ ಬೆಂಬಲವಿಲ್ಲ ಎಂದು ನೆಹರು ಉದ್ಘೋಷಿಸ ಬೇಕಾಯಿತು. ಇದು ಗೋವಾದ ಸ್ವಾತಂತ್ರ್ಯ ಆಂದೋಲನಕ್ಕೆ ಭಾರಿ ಹೊಡೆತ ಕೊಟ್ಟಿತು. ಕೆಲವರು ತೆರೆಖೋಲ್ ಕೋಟೆಯೊಳಗೆ ನುಗ್ಗಲು ಯತ್ನಿಸಿದರು. ಸರಿಯಾದ ಬೆಂಬಲ ಸಿಗಲಿಲ್ಲ. ೧೯೫೪ರ ಜೂನ್ ೧೮ರಂದು ಭಾರತದ ಸತ್ಯಾಗ್ರಹಿಗಳು ಗೋವಾದಲ್ಲಿ ಭಾರತದ ಧ್ವಜವನ್ನು ಹಾರಿಸಲು ಯತ್ನಿಸಿದರು. ನಾಯಕರು ಹಾಗೂ ಬೆಂಬಲಿಗರು ಬಂಧಿತರಾದರು. ಡಾ. ಗಾಯತೊಂಡೆ ಹಾಗೂ ದೇಶಪಾಂಡೆ ಪೋರ್ಚುಗಲ್‌ಗೆ ರವಾನೆಯಾದರು.
೧೯೫೪ರ ಜುಲೈ ೧೯೫೪ ರಂದು ಫ್ರಾನ್ಸಿಸ್ ಮಸ್ಕರೆನ್ಹಾಸ್ ಅವರ ನೇತೃತ್ವದ ಗೋವಾ ಸಂಯುಕ್ತ ರಂಗ ದಾದ್ರವನ್ನು ಪೋರ್ಚುಗೀಸರ ಮುಷ್ಟಿಯಿಂದ ಬಿಡಿಸಿತು. ಜುಲೈ ೨೮ರಂದು ರಾಷ್ಟ್ರೀಯ ವಿಮೋಚನಾ ಆಂದೋಲನ ಸಂಘಟನೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಹಾಗೂ ಆಜಾದ್ ಗೋಮಂತಕ ದಳಗಳು ಒಟ್ಟು ಸೇರಿ ನಗರ ಹವೇಲಿ ಯ ಮೇಲೆ ದಾಳಿ ಮಾಡಿ ಅಗಸ್ಟ್ ೨ ರಂದು ಅದನ್ನು ಮುಕ್ತಗೊಳಿಸಿದರು.
ಇದು ಗೋವಾದ ಸತ್ಯಾಗ್ರಹಿಗಳ ಉತ್ಸಾಹ ಹೆಚ್ಚಿಸಿತು. ೧೯೫೪ರ ಅಗಸ್ಟ್ ೧೫ರಂದು ಹೊರಗಿನ ಅನೇಕ ಸತ್ಯಾಗ್ರಹಿಗಳು ಭಾರತೀಯ ಸರಕಾರದ ನಿಷೇಧವನ್ನು ಲೆಕ್ಕಿಸದೆ ಗೋವಾ ಪ್ರವೇಶಿಸಿದರು. ಪೋರ್ಚುಗೀಸರು ಅನೇಕರನ್ನು ಕೊಂದರು. ಅನೇಕರು ಗಾಯಗೊಂಡರು.
೧೯೬೧ ರಲ್ಲಿ ಭಾರತ ಸರಕಾರ ಶಕ್ತಿಪ್ರಯೋಗದಿಂದಲಾದರೂ ಗೋವಾವನ್ನು ಮುಕ್ತಗೊಳಿಸುವ ತನ್ನ ಇಂಗಿತವನ್ನು ಪುನರುಚ್ಚರಿಸಿತು. ಅಗಸ್ಟ್ ತಿಂಗಳಲ್ಲಿ ಸೇನೆಯ ಸಿದ್ಧತೆಯ ಆರಂಭವಾಯಿತು. ಡಿಸೆಂಬರ್ ೧ರಂದು ನೆಹರು ಗೋವಾದ ವಿಷಯದಲ್ಲಿ ಸರಕಾರ ಸುಮ್ಮನಿರುವುದಿಲ್ಲವೆಂದು ಉದ್ಘೋಷಿಸಿದರು. ಗೋವಾದ ಸಮೀಪದ ಪ್ರಮುಖ ನಗರಗಳಲ್ಲಿ ಸೈನ್ಯ ಜಮಾವಣೆ ಗೊಂಡಿತು. ನೆಹರು ಬಲವಂತವಾಗಿ ಗೋವಾವನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂದು ಸೇನೆಗೆ ಆಜ್ಞಾಪಿಸಿದರು. "ಆಪರೇಶನ್ ವಿಜಯ್" ಆರಂಭವಾಯಿತು.
ಡಿಸೆಂಬರ್ ೧೧ ರ ಹೊತ್ತಿಗೆ ಭಾರತೀಯ ಸೇನೆ ಬೆಳಗಾವಿಯನ್ನು ತಲುಪಿತು. ನವೆಂಬರ್ ೨೮ ರಂದೇ ನೌಕಾಪಡೆಯ ಐ.ಎನ್.ಎಸ್. ರಜಪೂತ್, ಐ.ಎನ್.ಎಸ್. ಕಿರಪನ್, ಐ.ಎನ್.ಎಸ್. ಬಿಟ್ವಾ, ಐ.ಎನ್.ಎಸ್.ಬಿಯಸ್ ಮುಂತಾದ ಯುದ್ಧ ನೌಕೆಗಳು ರಣರಂಗವನ್ನು ಪ್ರವೇಶಿಸಿದ್ದವು. ಐ.ಎನ್.ಎಸ್.ಮೈಸೂರ್, ಐ.ಎನ್.ಎಸ್. ತ್ರಿಶೂಲ್, ಐ.ಎನ್.ಎಸ್.ಕುಠಾರ್, ಐ.ಎನ್.ಎಸ್. ಖುಕ್ರಿ, ಐ.ಎನ್.ಎಸ್. ಕಾರವಾರ, ಐ.ಎನ್.ಎಸ್. ಕಾಕಿನದಾ, ಐ.ಎನ್.ಎಸ್. ಐ.ಎನ್.ಎಸ್. ಕಣ್ಣಾನೂರ್, ಐ.ಎನ್.ಎಸ್. ಬಿಮಲಿಪಟ್ಟಣ್, ಐ.ಎನ್.ಎಸ್. ಧಾರಿಣಿ ಇವನ್ನು ಸೇರಿಕೊಂಡವು.
ಮೊದಲ ಲಕ್ಷ್ಯ ಅಂಜದಿವ್ ದ್ವೀಪ. ಲೆಫ್ಟಿನಂಟ್ ಅರುಣ್ ಅಡಿಟ್ಟೋ ಅವರ ನೇತೃತ್ವದಲ್ಲಿ ದಾಳಿ ಆರಂಭವಾಯಿತು. ಡಿಸೆಂಬರ್ ೧೮ ರ ಮಧ್ಯಾಹ್ನ ೨.೪೫ ರ ಹೊತ್ತಿಗೆ ಅಂಜದೀವ್ ಸ್ವತಂತ್ರವಾಯಿತು. ೭ ನಾವಿಕರು ಈ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿದರು. ಅನೇಕರು ಗಾಯಗೊಂಡರು.
ಮರ್ಮಗೋವಾ ಸಾಗರದಲ್ಲಿದ್ದ ಅಲ್ಬುಕರ್ಕ ಹಡಗಿನ ಮೇಲೆ ದಾಳಿ ಆರಂಭವಾಯಿತು. ಡಿಸೆಂಬರ್ ೧೯ರಂದು ದಾಳಿ ಮುಂದುವರಿದು ಅಂದು ಸಾಯಂಕಾಲ ೬ ಗಂಟೆಯ ಹೊತ್ತಿಗೆ ಕಾರ್ಯಾಚರಣೆ ಮುಕ್ತಾಯವಾಯಿತು. ಪೋರ್ಚುಗೀಸರ ಗವರ್ನರ್ ಜನರಲ್ ವಸ್ಸಲೊ ಡಿ ಸಿಲ್ವಾ ಸಂಜೆ ೭.೩೦ಕ್ಕೆ ಶರಣಾಗತಿಪತ್ರಕ್ಕೆ ಸಹಿ ಹಾಕಿದನು.
ಹೀಗೆ ೪೦ ತಾಸುಗಳ ಕಾರ್ಯಾಚರಣೆ ಗೋವಾದ ವಿದೇಶೀ ಸರಕಾರವನ್ನು ಉರುಳಿಸಿತು. "ಆಪರೇಶನ್ ವಿಜಯ್" ಅನ್ವರ್ಥಕವಾಯಿತು.

ಮಹಾಬಲ ಭಟ್, ಗೋವಾ

Friday, December 17, 2010

ಭಗವದ್ಗೀತೆ-ಯುವಕರ ಚೈತನ್ಯಸ್ರೋತ.

ಭಗವದ್ಗೀತೆಯ ಬಗ್ಗೆ ವಿಚಾರಬಂದಾಗಲೆಲ್ಲ ಸ್ವಾಮಿ ವಿವೇಕಾನಂದರು ನೆನಪಾಗುತ್ತಾರೆ. "ಭಗವದ್ಗೀತೆ ೬೦ನ್ನು ದಾಟಿದವರ ಕಾಲಕ್ಷೇಪಗ್ರಂಥವೆಂದು ತಿಳಿದು ನಿವೃತ್ತಿಯ ನಂತರ ಆ ಗ್ರಂಥವನ್ನು ತೆರೆದರೆ ಮೊದಲೇ ಓದಿದ್ದರೆ ಜೀವನದಲ್ಲಿ ಏನನ್ನಾದರೂ ಮಾಡಬಹುದಿತ್ತಲ್ಲ ಎಂದು ಪಶ್ಚಾತ್ತಾಪವಾಗುತ್ತದೆ." ಹೌದು. ಭಗವದ್ಗೀತೆ ಮುದುಕರು ಓದಬೇಕಾದ ಗೊಡ್ಡು ಗ್ರಂಥವಲ್ಲ. ಅದರಲ್ಲಿ ನಮ್ಮ ಯುವ ಪೀಳಿಗೆ ಓದಿ ಅನುಸರಿಸಬೇಕಾದ ಅದೆಷ್ಟೋ ಅಂಶಗಳಿವೆ. ಮೋಕ್ಷಪ್ರಾಪ್ತಿಯೇ ಭಗವದ್ಗೀತೆಯ ಲಕ್ಷ್ಯವಾದರೂ ಕರ್ಮಯೋಗದ ಉದ್ಗ್ರಂಥ ಅದು.
ಭಗವದ್ಗೀತೆಯ ವಿಷಯದಲ್ಲಿ ನಾವು ಪ್ರಥಮವಾಗಿ ಗಮನಿಸಬೇಕಾದ ಅಂಶ ಅಂದರೆ ಅದನ್ನು ಬೋಧಿಸಿದ್ದು ಯಾವುದೇ ತಪೋಭೂಮಿಯಲ್ಲಲ್ಲ; ಖಾಡಾಖಾಡಿ ಯುದ್ಧ ಮಾಡಬೇಕಾದ ರಣರಂಗವೆಂಬ ಕರ್ಮಭೂಮಿಯಲ್ಲಿ. ಎರಡನೆಯ ಅಂಶ ಇದನ್ನು ಬೋಧಿಸಿದವನು ಯಾವುದೇ ಋಷಿಯಲ್ಲ; ಭಾರತದ ಸಾರ್ವಕಾಲಿಕ ರಾಜಕೀಯ ಮುತ್ಸದ್ಧಿ ಶ್ರೀಕೃಷ್ಣ. ಮೂರನೆಯ ಅಂಶ ಇದನ್ನು ಬೋಧಿಸಿದ್ದು ಸಾವಿನಂಚಿನಲ್ಲಿರುವ ವೃದ್ಧನಿಗೋ, ಮೂಗು ಮುಚ್ಚಿಕೊಂಡು ತಪಸ್ಸನ್ನಾಚರಿಸುವ ತಪಸ್ವಿಗೋ ಅಲ್ಲ; ಅರ್ಜುನ ಎಂಬ ಬಿಸಿರಕ್ತದ ವೀರಯೋಧನಿಗೆ. ಬೋಧನೆಯ ಉದ್ದೇಶ ಮೋಕ್ಷಪ್ರಾಪ್ತಿಯಲ್ಲ; ಕರ್ತವ್ಯವಿಮುಖನಾದವನನ್ನು ಕಾರ್ಯಸಮ್ಮುಖಿಯಾಗಿ ಮಾಡುವುದು. ಇಷ್ಟಿದ್ದೂ ನಾವು ಇಂದಿಗೂ ಭಗವದ್ಗೀತೆಯನ್ನು ವೃದ್ಧರ ಕಾಲಕ್ಷೇಪ ಗ್ರಂಥ ಎಂದು ಭಾವಿಸುತ್ತೇವೆ. ಜಗತ್ತಿನ ಅತ್ಯಂತ ಬುದ್ಧಿವಂತ ವ್ಯಕ್ತಿಯೆಂದು ಗುರುತಿಸಲ್ಪಟ್ಟ ಆಲ್ಬರ್ಟ್ ಐನ್‌ಸ್ಟೈನ್ ಭಾರತೀಯನೊಬ್ಬನಿಗೆ ಹೀಗೆ ಛೀಮಾರಿ ಹಾಕಿದ್ದರು.
""You hail from India in the name of Hindu philosophy, yet you have not cared to learn Sanskrit. Come along; see my library which treasures classics from Sanskrit, the Geeta and other treasures on Hindu Philosophy. They are the main source of inspirations and guidelines for the purpose of scientific investigations and formulation of theories".

ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಬಂದಿದ್ದು ಧರ್ಮಸಂಕಟ. ಅವನ ಮುಂದೆ ಧರ್ಮ ಹಾಗೂ ಅಧರ್ಮಗಳಲ್ಲಿ ಒಂದನ್ನು ಆರಿಸಿಕೊಳ್ಳುವ ಸಮಸ್ಯೆಯಿರಲಿಲ್ಲ. ಎರಡು ಧರ್ಮಗಳಲ್ಲಿ ಯಾವುದು ಶ್ರೇಷ್ಠ ಎಂಬುದು ಅವನ ಮುಂದಿರುವ ಸಮಸ್ಯೆಯಾಗಿತ್ತು. ಒಂದೆಡೆ ’ಅಹಿಂಸಾ ಪರಮೋ ಧರ್ಮ:’ ಎಂಬ ಆರ್ಷ ವಾಕ್ಯ. ಇನ್ನೊಂದೆಡೆ ’ಕ್ಷತ್ರಿಯಧರ್ಮ’. ಆ ಕಾಲಕ್ಕೆ ಆ ಸ್ಥಳದಲ್ಲಿ ಯಾವ ಧರ್ಮವನ್ನು ಆಶ್ರಯಿಸಬೇಕು ಎಂಬುದು ಆತನ ಸಮಸ್ಯೆಯಾಗಿತ್ತು. ಆತನೇನೂ ನಿರಕ್ಷರಿಯಲ್ಲ. ವೇದ ವೇದಾಂಗಗಳಲ್ಲೂ ಶಸ್ತ್ರವಿದ್ಯೆಯಲ್ಲೂ ಪಾರಂಗತನಾಗಿ ಸೋಲಿಲ್ಲದ ಸರದಾರ ಎನಿಸಿಕೊಂಡವ. ಅಂಥವನೇ ಕೌರವಸೇನೆಯ ಮುಂದೆ ದಿಙ್ಮೂಢನಾಗಬೇಕಾಯಿತು. ನಮ್ಮ ಜೀವನದಲ್ಲೂ ನಾವೆಲ್ಲ ಅರ್ಜುನರೇ. ಇಂದು ನಾವು ಅನೇಕ ಪದವಿಗಳನ್ನು ಪಡೆದುಕೊಂಡಿದ್ದರೂ ಅದನ್ನು ಸಂದಿಗ್ಧ ಪರಿಸ್ಥಿತಿಯಲ್ಲಿ ಉಪಯೋಗಿಸಿಕೊಳ್ಳಲಾಗದೆ ಕರ್ತವ್ಯಭ್ರಷ್ಟರಾಗುತ್ತೇವೆ. ಈ ಮನೋವ್ಯಾಧಿ ಬುದ್ಧಿವಂತರೆನಿಸಿಕೊಂಡವರಲ್ಲೇ ಹೆಚ್ಚು. ಇಂದು ದಿನಕ್ಕೊಂದರಂತೆ ತಲೆ ಎತ್ತುತ್ತಿರುವ ಕೌನ್ಸೆಲಿಂಗ್ ಸೆಂಟರ್‌ಗಳೇ ಅದಕ್ಕೆ ಸಾಕ್ಷಿ. "ಯುದ್ಧ ಮಾಡಲಾರೆ; ವನಕ್ಕೆ ಹೋಗಿ ತಪಸ್ಸು ಮಾಡುತ್ತೇನೆ ಎಂದ ಹೇಡಿ ಅರ್ಜುನನಂತೆ ಕಷ್ಟವನ್ನು ಎದುರಿಸಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದೆ ಇಂದಿನ ಯುವ ಸಮಾಜ. "ಕ್ಲೈಬ್ಯಂ ಮಾ ಸ್ಮ ಗಮ: ಪಾರ್ಥ!"(ಅರ್ಜುನ ನಪುಂಸಕನಾಗಬೇಡ!) ಎಂಬ ಚಾವಟಿಯೇಟು ನಮ್ಮ ಬೆನ್ನಿಗೇ ಬಿದ್ದಿದೆಯೆಂದು ತಿಳಿಯಬೇಕು.
ಇಂದು ಜನಪ್ರಿಯವಾಗುತ್ತಿರುವ ಸ್ಟ್ರೆಸ್ ಮೆನೇಜ್‌ಮೆಂಟ್ ಭಗವದ್ಗೀತೆಯ ಕೂಸು. ಒಂದೆಡೆ ಯುದ್ಧ ಮಾಡುವ ಅನಿವಾರ್ಯತೆ, ಇನ್ನೊಂದೆಡೆ ಬಲಿಯ ಸ್ಥಾನದಲ್ಲಿ ನಿಂತಿರುವ ಬಂಧು-ಬಳಗ. ಈ ದ್ವಂದ್ವದಲ್ಲಿ ಸಿಲುಕಿರುವ ಅರ್ಜುನ ನಮ್ಮೆಲ್ಲರ ಪ್ರತಿನಿಧಿ. ತಾಯಿ-ಹೆಂಡತಿ, ಉದ್ಯೋಗ-ವಿದ್ಯಾಭ್ಯಾಸ, ವ್ಯಷ್ಟಿ-ಸಮಷ್ಟಿ, ಕುಟುಂಬ-ರಾಷ್ಟ್ರ ಈ ದ್ವಂದ್ವಗಳಲ್ಲಿ ಸಿಲುಕಿದ ಮಾನವ ತನ್ನ ಸಮೀಪ ಕೃಷ್ಣನಿಲ್ಲದೆ ತೊಳಲಾಡುತ್ತಿದ್ದಾನೆ. ಇಂತಹ ಮನೋವ್ಯಾಧಿಗೆ ಅಮೃತೌಷಧವಾಗಬಲ್ಲದು ಭಗವದ್ಗೀತೆ. ಸಂತೋಷದಲ್ಲಿ ಅತಿಯಾಗಿ ಹಿಗ್ಗಿದರೆ ಮಾತ್ರ ದು:ಖದಲ್ಲಿ ಕುಗ್ಗುಂಟು. ಯಶಸ್ವಿಯಾದಾಗ ಅಹಂಕಾರಿಯಾದರೆ ಮಾತ್ರ ಅಸಫಲನಾದಾಗ ದು:ಖಪಡಬೇಕಾಗುವುದು. ಈ ಸಮಸ್ಯೆಯ ಪರಿಹಾರಕ್ಕೆ ಬೀಜಮಂತ್ರ "ಸಮತ್ವಂ ಯೋಗ ಉಚ್ಯತೇ". ಜೋರಾಗಿ ಗಾಳಿಬೀಸದ ಸ್ಥಳದಲ್ಲಿರುವ ದೀಪದಂತೆ ಮನಸ್ಸು ಸ್ಥಿರವಾಗಿದ್ದರೆ ಬದುಕು ಪ್ರಕಾಶಮಾನವಾಗುತ್ತದೆ ಹೊಯ್ದಾಡುವ ಮನಸ್ಸು ಬದುಕನ್ನು ಅಸ್ಥಿರಗೊಳಿಸುತ್ತದೆ. ಯಾವನು ಜಯ-ಅಪಜಯಗಳಲ್ಲಿ, ಲಾಭ-ನಷ್ಟಗಳಲ್ಲಿ, ಸುಖದು:ಖಗಳಲ್ಲಿ ಒಂದೇ ಮನೋಸ್ಥಿತಿಯನ್ನು ಇಟ್ಟುಕೊಳ್ಳಬಲ್ಲನೋ ಅವನು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾನೆ.

ಭಗವದ್ಗೀತೆಯ ಬಗ್ಗೆ ಇಷ್ಟೆಲ್ಲ ತಿಳಿದ ಮೇಲೂ ನೀವು ಭಗವದ್ಗೀತೆ ಇರುವುದು ವೃದ್ದರಿಗಾಗಿ ಎನ್ನುತ್ತೀರಾ? ಕಳೆದ ವರ್ಷ ಅಲಹಾಬಾದ್ ಉಚ್ಚನ್ಯಾಯಲಯ ಭಗವದ್ಗೀತೆಯನ್ನು ರಾಷ್ಟ್ರೀಯ ಧರ್ಮಗ್ರಂಥವೆಂದು ಉದ್ಘೋಷಿಸಬೇಕು ಎಂದು ಸರಕಾರಕ್ಕೆ ಸಲಹೆ ಮಾಡಿತ್ತು. ಸರಕಾರ ಅದನ್ನು ಮಾಡಲಾರದು; ನಾವಾದರೂ ಮಾಡೋಣವೆ?
ಲೇಖಕರು:
ಮಹಾಬಲ ಭಟ್
ಸಂಸ್ಕೃತ ಉಪನ್ಯಾಸಕರು, ಗೋವಾ
mahabalabhat@gmail.com

Address:
St. Xavier’s Higher Secondary School
Mapusa, Bardez, Goa – 403 507
Mob: 09860060373

Tuesday, November 30, 2010

ಭಾಷಾ ಭಾವೈಕ್ಯ ಸಮಾವೇಶ
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಗೋವಾ ಕನ್ನಡ ಸಮಾಜ ಪಣಜಿ ಜಂಟಿಯಾಗಿ ಪಣಜಿಯಲ್ಲಿ ’ಹೊರನಾಡ ಕನ್ನಡಿಗರ ಭವಿಷ್ಯ ಚಿಂತನೆ ಹಾಗೂ ಭಾಷಾ ಭಾವೈಕ್ಯ ಸಮಾವೇಶವನ್ನು ಆಯೋಜಿಸಿದ್ದವು. ಗಾಂಧಿಜಯಂತಿಯಂದು ಮಧ್ಯಾಹ್ನ ೩.೩೦ ಕ್ಕೆ ಆರಂಭವಾದ ಈ ಸಮಾವೇಶ ಗೋವಾ ಕನ್ನಡಿಗರ ಮನಸ್ಸಿನಲ್ಲಿ ಅಳಿಯದ ಛಾಪನ್ನು ಮೂಡಿಸಿತು.
ಕಾರ್ಯಕ್ರಮಕ್ಕೆ ಭರ್ಜರಿ ಆರಂಭವನ್ನು ಒದಗಿಸಿದವರು ಶ್ರೀ ನಾಗರಾಜಮೂರ್ತಿಯವರು. ತಮ್ಮ ವೈವಿಧ್ಯಮಯ ಕಲಾತಂಡಗಳ ಮೂಲಕ ಅತ್ಯದ್ಭುತ ನೃತ್ಯ ಹಾಗೂ ಜಾನಪದ ಕಲಾ ಪ್ರದರ್ಶನವನ್ನು ಪ್ರಸ್ತುತಪಡಿಸಿ ಕರ್ನಾಟಕದ ಭವ್ಯ ಜಾನಪದ ಸಂಸ್ಕೃತಿಯನ್ನು ತೆರೆದಿಟ್ಟರು. ಕಂಸಾಳೆ, ಸುಗ್ಗಿ, ನಂದಿಕೋಲು, ಡೊಳ್ಳು, ಲಂಬಾಣಿ ಕುಣಿತಗಳು ಸಮರ್ಥನಿರ್ದೇಶನದಿಂದಾಗಿ ಜನಮನ ಸೂರೆಗೊಳ್ಳುವಲ್ಲಿ ಸಮರ್ಥವಾದವು. ಯಾವ ಮೋಹನ ಮುರಳಿ ಕರೆಯಿತೊ.. ಮುಂತಾದ ಭಾವಗೀತೆಗಳನ್ನೂ ಮಾತಾಡ್ ಮಾತಾಡ್ ಮಲ್ಲಿಗೆ.. ಇತ್ಯಾದಿ ಜಾನಪದ ಗೀತೆಗಳನ್ನೂ ನೃತ್ಯಕ್ಕೆ ಅಳವಡಿಸಿದ ಪ್ರಯೋಗ ಅತ್ಯಂತ ಯಶಸ್ವಿಯಾಗಿತ್ತು. ಸಾಮಾನ್ಯವಾಗಿ ಪುರುಷರಿಗೇ ಮೀಸಲಾಗಿದ್ದ ಡೊಳ್ಳು ಕುಣಿತವನ್ನು ಮಹಿಳಾ ತಂಡವೂ ಪ್ರದರ್ಶಿಸಿ ಸೈ ಅನಿಸಿಕೊಂಡಿತು. ಇದೇ ಸಂದರ್ಭದಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ ೧೦ ವರ್ಷದ ಬಾಲಿಕೆ ವಾಸ್ಕೋ ನಿವಾಸಿ ಕು. ಪ್ರತಿಕ್ಷಾ ಮುಂದೆ ತಾನೊಬ್ಬ ಉತ್ತಮ ನೃತ್ಯಗಾತಿಯಾಗಬಲ್ಲೆನೆಂಬುದನ್ನು ತೋರಿಸಿಕೊಟ್ಟಳು.
ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಉದ್ಘಾಟಿಸಿದರು. ವಿಜಯ ಕರ್ನಾಟಕ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಶ್ರೀ ವಿಶ್ವೇಶ್ವರ ಭಟ್ ಮುಖ್ಯ ಅತಿಥಿಗಳಾಗಿದ್ದರು. ಗೋವಾ ಕನ್ನಡ ಸಮಾಜದ ಅಧ್ಯಕ್ಷ ವಿಜಯ ಶೆಟ್ಟಿ ಸ್ವಾಗತಿಸಿದರೆ, ಕಾರ್ಯಕ್ರಮದ ಸಂಚಾಲಕ ವಿಷ್ಣು ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಶಾಂತರಾಜು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮ ನಿರೂಪಣೆಯ ಹೊಣೆ ಮಹಾಬಲ ಭಟ್ ಅವರದ್ದಾಗಿತ್ತು.
ಮರುದಿನ ಮುಂಜಾನೆ ೧೦ ಗಂಟೆಗೆ ಹೊರನಾಡ ಕನ್ನಡಿಗರ ಭವಿಷ್ಯದ ಕುರಿತು ಶ್ರಿ ವ್ಯಾಸ ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಚಿಂತನಗೋಷ್ಟಿ ನಡೆಯಿತು. ಗೋವಾದ ಪ್ರಸಿದ್ಧ ಸಾಹಿತಿ ಡಾ.ಅರವಿಂದ ಯಾಳಗಿಯವರು ಹೊರನಾಡ ಕನ್ನಡಿಗರ ಬದುಕು ಬವಣೆಗಳನ್ನು ವಿಶ್ಲೇಷಿಸುತ್ತ ’ಹೊರನಾಡಿನಲ್ಲಿರುವ ಪ್ರತಿಭಾವಂತರಿಗೆ ಸರಕಾರದ ವಿವಿಧ ವಿಭಾಗಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ’ ಎಂದು ವಿಷಾದಿಸಿದರು. ಖ್ಯಾತ ಚಿತ್ರನಿರ್ದೇಶಕ ಬಿ.ಸುರೇಶ ಅವರು ಕನ್ನಡಿಗರ ವಲಸೆಗೆ ಅನ್ನದ ಪ್ರಶ್ನೆಯ ಪಾತ್ರವೆಷ್ಟು ಎಂಬುದನ್ನು ವಿವರಿಸುತ್ತ, ’ಹೊರನಾಡ ಕನ್ನಡಿಗರು ತಮ್ಮ ಅವಕಾಶಗಳನ್ನು ತಾವೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಅವರು ತಮ್ಮ ಕನ್ನಡತನವನ್ನು ಮರೆಯದಿರುವುದೂ ಅಗತ್ಯ’ ಎಂದು ಅಭಿಪ್ರಾಯಪಟ್ಟರು.ಶ್ರೀ ವ್ಯಾಸ ದೇಶಪಾಂಡೆ ’ಹೊರನಾಡ ಕನ್ನಡಿಗರ ಸಮಸ್ಯೆಗೆ ಸರಕಾರ ಸ್ಪಂದಿಸಬೇಕು’ ಎಂದು ಅಭಿಪ್ರಾಯಪಡುತ್ತ ಸಮಾರೋಪಗೊಳಿಸಿದರು. ಈ ಗೋಷ್ಟಿಯ ನಿರ್ವಹಣೆಯನ್ನು ಸೌ.ಕೋಮಲಾ ಮಾಡಿದರು. ಸಿ.ಕೆ. ಜೋಶಿ ಸ್ವಾಗತಿಸಿದರು, ಕಲ್ಮೇಶ ಪಾಟೀಲ ವಂದಿಸಿದರು.
ಅನಂತರ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿಯವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಟಿ ನಡೆಯಿತು. ಕನ್ನಡ ನಾಡಿನ ಕೆಲವು ಕವಿಗಳ ಜೊತೆಗೆ ಗೋವಾದ ಕನ್ನಡ, ಕೊಂಕಣಿ, ಮರಾಠಿ, ಹಿಂದಿ, ಇಂಗ್ಲಿಷ್ ಹಾಗೂ ಸಂಸ್ಕೃತ ಕವಿಗಳು ತಮ್ಮ ಕವನ ವಾಚಿಸಿದರು. ಕವನವಾಚನದ ಸಂದರ್ಭದಲ್ಲಿ ಕವಿಯ ಪರಿಚಯ ಹಾಗೂ ಕವನ ಪರದೆಯ ಮೇಲೆ ಮೂಡುವ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಅಧ್ಯಕ್ಷತೆ ವಹಿಸಿದ್ದ ಜಯಂತ ಕಾಯ್ಕಿಣಿ ಕವಿಯ ಮನಸ್ಥಿತಿ ಹಾಗೂ ಕಾವ್ಯದ ಉತ್ಪತ್ತಿಯ ರಹಸ್ಯವನ್ನು ವಿಶದವಾಗಿ ವಿಶ್ಲೇಷಿಸಿದರು.
ಭೋಜನೋತ್ತರ ವಾಣಿ ಮರಡೂರ ಅವರ ಗಾಯನ ಗಮನ ಸೆಳೆಯಿತು. ಸ್ಥಳೀಯ ಕಲಾವಿದೆ ಸೌ.ಅಖಿಲಾ ಕುರಂದವಾಡ ಎರಡು ಹಾಡನ್ನು ಪ್ರಸ್ತುತಪಡಿಸಿ ಜನರ ಮೆಚ್ಚುಗೆಗೆ ಪಾತ್ರರಾದರು. ನಂತರ ಸ್ಥಳೀಯ ಕೊಂಕಣಿ ಕಲಾವಿದರಿಂದ ಕೊಂಕಣಿಯಲ್ಲಿ ಗೋವಾದ ಜಾನಪದ ನೃತ್ಯ ಪ್ರದರ್ಶನ ನಡೆಯಿತು. ಅವರ ಅಮೋಘ ದೀಪನೃತ್ಯ ಜನರ ಪ್ರಶಂಸೆಗೆ ಪಾತ್ರವಾಯಿತು.
ತಮ್ಮ ವಿಶಿಷ್ಟ ಮಾತಿನ ಶೈಲಿಯಿಂದ ಪ್ರಸಿದ್ಧರಾಗಿರುವ ಪ್ರೊ.ಕೃಷ್ಣೇಗೌಡರು ನಡೆಸಿಕೊಟ್ಟ ’ಮಾತಿನ ಮಂಟಪ’ ಕಾರ್ಯಕ್ರಮ ಪ್ರೇಕ್ಷಕರಿಗೆ ರಂಜನೆ ನೀಡಿತು. ಅವರ ಬಾಯಿಂದ ಹರಿದು ಬರುತ್ತಿರುವ ಜಾನಪದ ಗೀತೆಗಳು, ಕನ್ನಡ ಸಂಸ್ಕೃತಿಯ ಅತ್ಯಮೂಲ್ಯ ಸಾಹಿತ್ಯ ನುಡಿಝರಿಯಲ್ಲಿ ಮಿಂದ ಪ್ರೇಕ್ಷಕರು ಮಂತ್ರಮುಗ್ಧರಾದರು.
ಸಾಯಂಕಾಲ ನಡೆದ ಸಮಾರೋಪದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಚಂದ್ರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉತ್ತರ ಗೋವಾದ ಸಂಸದ ಶ್ರೀಪಾದ ನಾಯ್ಕ ಆಗಮಿಸಿದ್ದರು. ಡಾ. ನಾ. ಡಿಸೋಜಾ ಸಮಾರೋಪ ಭಾಷಣ ಮಾಡಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಸೌ. ಅಖಿಲಾ ಕುರಂದವಾಡ ಮಾಡಿದರೆ ಅರುಣಕುಮಾರ ಆಭಾರ ಪ್ರದರ್ಶನವನ್ನು ಮಾಡಿದರು.
ಕೊನೆಯಲ್ಲಿ ನಾಗರಾಜಮೂರ್ತಿಯವ ನಿರ್ದೇಶನದಲ್ಲಿ ’ಕೊಂದವರಾರು?’ ಎಂಬ ನಾಟಕ ಪ್ರದರ್ಶಿತವಾಯಿತು.
ಎರಡು ದಿನಗಳ ಈ ಸಮಾವೇಶಕ್ಕೆ ಆತಿಥ್ಯವನ್ನು ನೀಡಿದ್ದು ಗೋವಾದ ಕನ್ನಡಿಗರ ಧ್ವನಿಯಾಗಿರುವ ಪಣಜಿಯ ಗೋವಾ ಕನ್ನಡ ಸಮಾಜ. ಕಳೆದು ಇಪ್ಪತ್ತೈದು ವರ್ಷಗಳಿಂದ ಗೋವಾದಲ್ಲಿ ಕನ್ನಡ ಚಟುವಟಿಕೆಗಳನ್ನು ನಡೆಸುತ್ತ ಕನ್ನಡತನವನ್ನು ಜೀವಂತವಾಗಿರಿಸಿದ ಈ ಸಂಸ್ಥೆ ಕಳೆದವರ್ಷ ಕನ್ನಡ ಸಂಸ್ಕೃತಿ ಇಲಾಖೆಯವರ ’ಕನ್ನಡ ಸಂಸ್ಕೃತಿ ಉತ್ಸವ’ವನ್ನೂ ಯಶಸ್ವಿಯಾಗಿ ನಡೆಸಿಕೊಟ್ಟಿತ್ತು. ಕಾರ್ಯಕರ್ತರು ಅಪಾರ ಪರಿಶ್ರಮದಿಂದ ಈ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಿದರು. ಗೋವಾದ ವಿವಿಧೆಡೆಗಳಿಂದ ಹರಿದುಬಂದ ಅಪಾರ ಜನಸ್ತೋಮ ಕಾರ್ಯಕ್ರಮದ ಯಶಸ್ವಿತೆಗೆ ಸಾಕ್ಷಿಯಾಯಿತು.
ಒರಿಸ್ಸಾದಲ್ಲಿ ಸರಸೂ ಸರಿದಾಟ
ಸರಸ್ವತಿ ಸರದಾರ
ಬೆಳಿಗ್ಗೆ ೫ಕ್ಕೇ ಜನಸಂದಣಿಯಿರುವ ಜಾಗ ಯಾವುದು? ಎಂಬ ನನ್ನ ಪ್ರಶ್ನೆಗೆ "ಏರ‍್ಪೋರ್ಟ್" ಥಟ್ ಅಂತ ಉತ್ತರಿಸಿದ ೯ ವರ್ಷದ ಹಿತೇಶ್. ಇದನ್ನು ಪ್ರತ್ಯಕ್ಷ ನೋಡಿದ್ದು ಇಂದು. ನಂಗು - ಪಂಗು ವಿದೇಶೀಯರು, ಸರ್ಕಾರಿ ಖರ್ಚಿನಲ್ಲಿ ಸುತ್ತಾಡುವ ಅಧಿಕಾರಿಗಳು, ಖಾಸಗೀ ಕಂಪನಿಯ ಲ್ಯಾಪ್ ಟ್ಯಾಪ್ ಧಾರಿಗಳು. ಬೆಳಿಗ್ಗೆ ಹಾರಿ ಸಂಜೆಗೆ ಹಿಂತಿರುಗುವ ಉದ್ಯೋಗಪತಿಗಳು. ಠಾಕು ಠೀಕಾಗಿ ತಿರುಗಾಡುವ ಬೆಡಗಿಯರು. ಹೀಗೆ ಆಸಕ್ತಿ ಹುಟ್ಟಿಸುವಂತಹ ವಾತಾವರಣದಿಂದ ಮನಕ್ಕೆ ಮುದವುಂಟಾಯಿತು.
ಬ್ರೆಡ್ - ಜ್ಯಾಮ್ ಹಣ್ಣುಗಳ ನಾಷ್ಟಾ ಮಾಡಿ ಹಳೆಯ ಚಲನಚಿತ್ರವೊಂದನ್ನು ನೋಡುತ್ತಾ ಬಾಲ್ಯದ ದಿನಗಳನ್ನು ನೆನಸಿಕೊಂಡೆ. ಮೊದಲ ಬಾರಿಗೆ ವಿಮಾನದಲ್ಲಿ ಪಯಣಿಸಿದ್ದು ಮಾಮ ಅತ್ತೆಯೊಡನೆ ದಿಲ್ಲಿಗೆ ಹೋದಾಗ. ಆಗ ಬರೀ ಸಿರಿವಂತರೇ ಹಾರಾಡುತ್ತಿದ್ದರು. "ಬಲಗಾಲು ಇಟ್ಟು ವಿಮಾನ ಹತ್ತು." ಎಂದು ಹೇಳುತ್ತಿದ್ದ ಮಾಮ, ಬಾತ್ ರೂಮಿಗೆ ಹೋಗಿ ಬನ್ನಿ ಎಂದು ಕಾಳಜಿ ತೆಗೆದುಕೊಳ್ಳುತ್ತಿದ್ದ ಅತ್ತೆ, ಮನದಲ್ಲಿ ಮೂಡಿದ ಭಯ ಆತಂಕ ಮುಚ್ಚಿಕೊಳ್ಳಲು ಕಿಸಿಕಿಸಿ ನಗುವ ನಾನು ಮತ್ತು ಅನು- ಇಂದು ಟ್ರಾಲಿಯಲ್ಲಿ ಸಾಮಾನು vಳ್ಳಿಕೊಂಡು ಮೊಬೈಲ್ ನಲ್ಲಿ ಮಾತಾಡಿಕೊಂಡು ಅತಿಯಾದ ಸುರಕ್ಷಾ ಚಿಂತೆಗಳಿಂದ ಹೆಜ್ಜೆ ಹೆಜ್ಜೆಗೂ ಚೆಕಿಂಗ್ ಮಾಡಿಸಿಕೊಂಡು ಬ್ಲ್ಯಾಕ್ ಬೆರಿಯಲ್ಲಿ ಈ ಮೇಲ್ ಹಾವಳಿಯಲ್ಲಿ ನಿರತನಾದ ಪತಿಯೊಡನೆ ಪುಸ್ತಕದ ಮೊರೆಹೊಕ್ಕ ನನ್ನ ಪಯಣ ಆರಾಮದಾಯಕ.
ಶ್ರೀಮತಿ ಪಟ್ನಾಯಕರ ಪ್ರೀತಿಪೂರ್ಣ ಸ್ವಾಗತ, ಆದರಾತಿಥ್ಯ, ಮನೆಯಿಂದ ಇಷ್ಟು ದೂರ ಬಂದಿದ್ದೇನೆ ಎಂಬುದನ್ನು ಮರೆಸುವಂತಿತ್ತು. ಪ್ರಶಸ್ತ, ಸ್ವಚ್ಛ ಪ್ರವಾಸೀ ಮಂದಿರ, ರುಚಿ ರುಚಿಯಾಗಿ "ಮ್ ಚಮೀತ್" ಅಡಿಗೆ ಮಾಡಿ ಹಾಕುವ "ದೇಬು" ಎಲ್ಲವೂ ನನಗಾಗಿ ಕಾದಂತಿತ್ತು. ೪೦ ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಎ.ಸಿ. ಇಲ್ಲದೇ ಇರುವುದು ಅಶಕ್ಯವೆನಿಸಿತ್ತು. ನಾನೆಷ್ಟು ವಿಲಾಸ ಪೂರ್ಣ ಜೀವನ ನಡೆಸಿದ್ದೇನೆ ಎನಿಸಿತ್ತು.
ಸಂಜೆ ಉತ್ಸಾಹದ ಚಿಲುಮೆಯಂತಿರುವ ಆಂಟಿ ಸ್ನೇಹಮಯೀ ಶೋಮಾ, ತುಂಟ ಸಿದ್ಧೇಶನೊಡನೆ ಮಾಸೀಮಾ ಮಂದಿರ ನೋಡಲು ಹೋದೆವು. ಹೊರಗಿನಿಂದ ಅತೀ ಸುಂದರ ಅನಿಸಿತು. ದೇವರಿಗೆ ಕೈ ಮುಗಿಯಲು ಒಳಗೆ ಕಾಲಿಟ್ಟರೆ ಶಿವಲಿಂಗದ ಮೇಲೆಲ್ಲಾ ತಿರುಗಾಡುತ್ತಿರುವ ಜಿರಳೆಗಳು.! ಕಿಮಟು ವಾಸನೆ! ದುಡ್ಡು ಕೀಳಲು ಕಾದಿರುವ ಪಾಂಡಾಗಳು.!
ಲಿಂಗರಾಜ ಮಂದಿರದ ಪ್ರಾಂಗಣದಲ್ಲಿ ಒಟ್ಟು ನೂರಾ ಎಂಟು ಚಿಕ್ಕ ದೊಡ್ಡ ಗುಡಿಗಳು. ಹೊರಗಿನಿಂದ ಅಭೂತ ಪೂರ್ವ ಎನಿಸುವ ಕಟ್ಟಡದ ಒಳಗೆ ಭೂಮಿಯಿಂದ ತಾನಾಗಿಯೇ ಉದ್ಭವಿಸಿರುವ ಶಿವಲಿಂಗ. ಹರಿಹರನ ಮಂದಿರವೆನಿಸಿರುವ ಇಲ್ಲಿ ಎಲ್ಲೆಡೆ ಹರಿಯ, ಹರನ, ಚಿಹ್ನೆಗಳು ಕಂಡುಬಂದವು. ದೇವರಿಗೆ ಎಡೆ ಉಣಿಸಲು ಪ್ರತೀ ದೇವಾಲಯದಲ್ಲೂ ಅಡುಗೆ ಮನೆ ವ್ಯವಸ್ಥೆ ಇದೆ. ಇಲ್ಲಿನ ’ಭೋಗ್’ ಎಂದರೆ ’ಪ್ರಸಾದ’ಕ್ಕೆ ನಮ್ಮ ಕಾಣಿಕೆ ಸಲ್ಲಿಸಬಹುದು. ಸಲ್ಲಿಸಲೇಬೇಕು ಎಂಬುದು ಕಳ್ಳ ಪಾಂಡಾಗಳ ಅಭಿಪ್ರಾಯ. ದಿನಕ್ಕೆ ಮೂರು ಹೊತ್ತು ಇಲ್ಲಿನ ಪ್ರಸಾದ ತಿಂದುಂಡು ಆರಾಮಾಗಿ ಕಾಲ ಕಳೆಯುವ ಮೈಗಳ್ಳರ ಸಂಖ್ಯೆಯೇನೂ ಕಡಿಮೆಯಿಲ್ಲ..
ಏಕಾಂಮ್ರ ಹಾಟ್ ಭುವನೇಶ್ವರದ ಒಂದು ಉದ್ಯಾನದಲ್ಲಿರುವ ಹ್ಯಾಂಡಿಕ್ರಾಪ್ಟ್ ಸೆಂಟರ್. ಅಲ್ಲಿನ ವೇದಿಕೆ ಮೇಲೆ ಉತ್ಕಲ್ ದಿವಸ ರಾಜ್ಯೋತ್ಸವ ಸಮಾರಂಭ ನಡೆದಿತ್ತು. ಎಪ್ರಿಲ್ ೧ ರಂದು ನೆರೆದ ಜನರನ್ನು ರಾಜಕಾರಣಿಗಳು ಫೂಲ್ ಮಾಡುತ್ತಿದ್ದರು. ಎಲ್ಲಾ ದರ ಕೇಳಿ ಏನೂ ಕೊಳ್ಳದೇ ಮನೆಗೆ ಹಿಂತಿರುಗಿದೆವು.
ಮರುದಿನ ಮುಂಜಾನೆ ಕೋನಾರ್ಕಕ್ಕೆ ಹೊರಟೆವು. ಎತ್ತಿನ ಗಾಡಿಗಿಂತ ಸ್ವಲ್ಪ ಹೆಚ್ಚು ವೇಗವಾಗಿ ಕಾರು ನಡೆಸುತ್ತಿದ್ದ ರಬಿ. ಇಲ್ಲಿನ ಜನರೆಲ್ಲಾ ಬಹಳ ಸೌಮ್ಯವಾಗಿ ಮಾತನಾಡುತ್ತಾರೆ. ಕೋನಾರ್ಕದ ಸೂರ್ಯ ಮಂದಿರ ವರ್ಲ್ಡ ಹೆರಿಟೇಜ್ ಮಾನ್ಯುಮೆಂಟ್ ಎಂದು ಕರೆಯಲ್ಪಟ್ಟಿದೆ. ದೊಡ್ಡ ಉದ್ಯಾನವನದ ನಡುವೆ ಇದೆ. ಸುಂದರವಾದ ಕಟ್ಟಡ. ಮೊದಲಿಗೆ ಕಂಡುಬರುವುದು ಮನುಷ್ಯನನ್ನು ತುಳಿದು ನಿಂತಿರುವ ಆನೆಗಳು, ಅದರ ಮೇಲೆ ಸವಾರಿ ಮಾಡುತ್ತಿರುವ ಸೂರ್ಯನ ರಥ. ದೇವಾಲಯದ ಹೊರಗಿನ ಕಟ್ಟಡ, ಕೆತ್ತನೆಯಷ್ಟೇ ನೋಡಬಹುದು. ಶಿಥಿಲಗೊಳ್ಳುತ್ತಿರುವ ದೇಗುಲದ ರಕ್ಷಣೆಗೆ ಕೆಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಬಾಲ ಸೂರ್ಯ, ಪ್ರೌಢ ಸೂರ್ಯ ಹೀಗೆ ಸೂರ್ಯನ ಮೂರು ವಿಗ್ರಹಗಳನ್ನು ಕಾಣಬಹುದು. ಗರ್ಭಗೃಹದ ಒಳಗೆ ಯಾವ ವಿಗ್ರಹವೂ ಇಲ್ಲ. ಇಲ್ಲಿನ ಸೂರ್ಯನ ವಿಗ್ರಹವನ್ನು ಬಹಳ ಹಿಂದೆಯೇ ಇಲ್ಲಿ ಸ್ಥಳಾಂತರಿಸಲಾಗಿದೆ. ೨೦ ನೇ ಶತಮಾನದ ಆಂಗ್ಲ ಅಧಿಕಾರಿಯೊಬ್ಬನ ಆಜ್ಞೆಯ ಮೇರೆಗೆ ದೇಗುಲದ ಒಳಗೆ ಯಾರೂ ಹೋಗದಂತೆ ಮರಳಿನ ಚೀಲಗಳನ್ನು ತುಂಬಿಸಿದ್ದಾರೆ. ಇಲ್ಲಿನ ಸೂರ್ಯನ ರಥದ ಚಕ್ರ ಅತೀ ಸುಂದರವಾಗಿದೆ. ದಾರಿಯುದ್ದಕ್ಕೂ ಇದೇ ’ಕೋನಾರ್ಕ ವೀಲ್’ ನ ಚಿಕ್ಕ ಪುಟ್ಟ ಪ್ರತಿಗಳನ್ನು ಮಾರಲು ಇಟ್ಟಿದ್ದಾರೆ. ಕಲ್ಲಿನಲ್ಲಿ ಮರದಲ್ಲಿ ಮಾಡಿದ ಈ ಕಲಾಕೃತಿಗಳು ಸುಂದರವಾಗಿವೆ.
ನಂತರ ಜಗನ್ನಾಥ ಮಂದಿರ ನೋಡಲು ಪುರಿಗೆ ಹೋದೆವು. ಕಾರನ್ನು ದೇವಸ್ಥಾನದಿಂದ ಒಂದು ಕಿಲೋಮೀಟರ್ ದೂರದಲ್ಲೇ ನಿಲ್ಲಿಸಿ ಸೈಕಲ್ ರಿಕ್ಷಾದಲ್ಲಿ ದೇಗುಲಕ್ಕೆ ಹೋಗಬೇಕು. ವಿಲಾಸೀ ಜೀವನದಿಂದ ಭಾರವಾದ ನಮ್ಮ ದೇಹಗಳನ್ನು ಈ ಬಡಕಲು ದೇಹದ ರಿಕ್ಷಾವಾಲಾಗಳ ಮೇಲೆ ಹೊರಿಸುವುದು ಹಿಂಸೆ ಉಂಟುಮಾಡಿತ್ತು. ಅವರ ಜೀವನ ಆಧಾರವನ್ನು ಅವರಿಮದ ಕಿತ್ತುಕೊಳ್ಳಬಾರದೆಂಬ ಶೋಮಾಳ ತರ್ಕವೂ ಸರಿ ಎನಿಸಿ, ಸೈಕಲ್ ರಿಕ್ಷಾ ಹತ್ತಿದೆವು. ದೇವಸ್ಥಾನಕ್ಕೆ ಹೋಗುವ ಬೀದಿಯಲ್ಲಿ ಹಲವಾರು ಸತ್ರ ಗಳಿದ್ದವು. ಇಲ್ಲಿ ಬಂದು ಇದ್ದುಬಿಡುವ ಭಕ್ತರಿಗೇನೂ ಕಡಿಮೆಯಿಲ್ಲ. ಇಲ್ಲಿನ ರಥಯಾತ್ರಾದ ಸಮಯದಲ್ಲಿ ಇರುವೆಗಳಿಗೂ ಜಾಗ ಇರುವುದಿಲ್ಲವಂತೆ.! ದೊಡ್ಡ ಪ್ರಾಂಗಣದ ತುಂಬೆಲ್ಲಾ ಭಕ್ತರು - ನಡೆಯಲು ಒದ್ದಾಡುವ ಮುದುಕ ಮುದುಕಿಯರು. ಭಕ್ತಿಯಿಂದ ಮಂತ್ರ ಪಠಿಸುತ್ತಾ ಓಡಾಡುವ ಹೆಂಗಸರು. ಅಪ್ಪ ಅಮ್ಮಂದಿರ ಒತ್ತಾಯಕ್ಕೆ ಬಂದ ಹರೆಯದವರು, ನಮ್ಮ ಆಚಾರ ವಿಚಾರ ಗಳನ್ನು ಕುತೂಹಲದಿಂದ ನೋಡುವ ವಿದೇಶೀಯರು, ಎಲ್ಲಿ ಎಷ್ಟು ಹೊಲಸಿದೆ ಎಂಬುದನ್ನೇ ಗಮನಿಸುವ ನಮ್ಮಂತಹ ಪಡ್ಡೆ ಬುದ್ಧಿಜೀವಿಗಳು. ಹೀಗೆ ಹತ್ತು ಹಲವರಿದ್ದರು. ಇಲ್ಲಿನ ಪದ್ಧತಿಯಂತೆ ತುಪ್ಪದ ಹಣತೆಯೊಂದನ್ನು ಕೊಂಡು ಅದಕ್ಕಾಗಿಯೇ ಮಾಡಿದ ಜಾಗದಲ್ಲಿ ಹಚ್ಚಿಟ್ಟೆವು. ಗೋವಾದ ಚರ್ಚುಗಳಲ್ಲೂ ಮೊಂಬತ್ತಿ ಹಚ್ಚುವ ಸಂಪ್ರದಾಯವಿದೆ. ನಮ್ಮ ಧರ್ಮಗಳು ಬಿನ್ನತೆಯಲ್ಲಿಯೂ ಏಕತೆಯನ್ನು ಹೊಂದಿರುವುದು ಸೋಜಿಗವಲ್ಲವೇ? ಅಲ್ಲಿನ ಬಿಸಿಲಿನಲ್ಲಿ ಮತ್ತೇನೂ ನೋಡುವ ಮನಸಾಗದೇ ಭುವನೇಶ್ವರಕ್ಕೆ ಮರಳಿದೆವು.
ಅದೇ ಸಂಜೆ ಕಟಕ್ ನೋಡಲು ಹೋದೆವು. ಕಟಕ್ ಓರಿಸ್ಸಾದ ಹಳೆಯ ರಾಜಧಾನಿ. ಇಲ್ಲಿನ ಗಜಿಬಿಜಿ ಗಲ್ಲಿಗಳು ಭುವನೇಶ್ವರದ ಸ್ವಚ್ಛ ಪ್ರಶಸ್ತ ರಾಜಬೀದಿಗಳಿಗಿಂತ ಬಹಳ ಬೇರೆ. ಇಲ್ಲಿ ಹರಿಯುವ ಚಂದ್ರಭಾಗಾ ನದಿ ದೊಡ್ಡದು ಅನಿಸಿತು. ಮರುದಿನ ಮುಂಜಾನೆಯೇ ವ್ಯಾಪಾರಕ್ಕಿಳಿದೆ. ಇಲ್ಲಿಮ ಸುಂದರ ಕಾಟನ್ ಸೀರೆಗಳನ್ನು ಕೊಂಡೆ. ಬೆಳ್ಳಿಯ ಫಿಲಿಗ್ರಿ ಮಾಡಿದ ಆಭರಣಗಳು ಇಲ್ಲಿನ ವೈಶಿಷ್ಟ್ಯ ಸೀರೆಗಳು ತುಟ್ಟಿ ಅನಿಸಿದರ ಒಡವೆಗಳು ಪರವಾಗಿಲ್ಲ ಅನಿಸಿದವು. ನಾಲ್ಕು ದಿನಗಳು ಹೇಗೆ ಕಳೆದೆವೆಂದೇ ತಿಳಿಯಲಿಲ್ಲ. ಮರಳಿ ಗೂಡು ಸೇರಿದಾಗ ಗೋವಾದ ಸ್ವಚ್ಛತೆಯ ಬೆಲೆ ತಿಳಿದಿತ್ತು.
ಅವಿಸ್ಮರಣೀಯ ನಮ್ಮ ಬಾಲ್ಯ
-ಶರ್ವಾಣಿ ಭಟ್
ಬಾಲ್ಯ ಎಂದಾಕ್ಷಣ ಯಾರಿಗಾದರೂ ಒಮ್ಮೆ ಕಿವಿ ಚುರುಕಾಗುತ್ತದೆ; ಮನಸ್ಸು ಮಗುವಾಗುತ್ತದೆ. ಬಾಲ್ಯದ ಸವಿನೆನಪಿನಲ್ಲಿ ನಿಂತುಕೊಳ್ಳುವುದು ಎಂದರೆ ಅದೇನೋ ಸಂಭ್ರಮ-ಸಡಗರ. ಮೊಗೆಮೊಗೆದಷ್ಟೂ ಮುಗಿಲೆತ್ತರಕ್ಕೆ ಚಿಮ್ಮುವುದು ಈ ಬಾಲ್ಯದ ನೆನಪುಗಳ ಬುಗ್ಗೆ. ಈ ಬಾಲ್ಯಜೀವನದ ನೆನಪು ಮುಂದೊಮ್ಮೆ ಮುದನೀಡುವ ಸಿಹಿಬುತ್ತಿಯಾದೀತೆಂಬ ಕಲ್ಪನೆಯೂ ಬಾರದೇ ಕಳೆದುಹೋಗುತ್ತದೆ. ಈ ನೆನಪುಗಳಿಗಿರುವ ಮಾಧುರ್ಯ ಬಾಲ್ಯದ ಆ ಕ್ಷಣಗಳಿಗೆ ಇರುವುದಿಲ್ಲ. ಏನೇನೋ ತಿಳಿದದ್ದು, ತಿಳಿಯದ್ದು, ತಿಳಿಯದಂತೆ ತೋಚಿದ್ದನ್ನೆಲ್ಲ ಮಾಡುವುದೇ ಬಾಲ್ಯ.
ಹಿರಿಯರು ವಿಧಿಸಿದ ಬಂಧನಗಳಿಂದ ಒಂದಿಷ್ಟು ಸ್ವಾತಂತ್ರ್ಯವನ್ನು ಕಸಿದುಕೊಂಡು ಅನುಭವಿಸುವಂಥದ್ದು ಅಂದಿನ ಬಾಲ್ಯ. ಅಲ್ಲಿ ಹೋಗಬೇಡ, ಅದನ್ನು ಕೇಳಬೇಡ, ಹೇಳಿದಂತೆ ಮಾಡು ಇತ್ಯಾದಿ ಕಟ್ಟಳೆಗಳ ನಡುವೆಯೇ ಮನಸ್ಸಿಗೆ ತೋಚಿದ ಕೆಲಸವನ್ನು ಮಾಡುವುದು, ಅದಕ್ಕೆ ಬೈಸಿಕೊಳ್ಳುವುದು, ಕಿಲಾಡಿತನ ಹೆಚ್ಚಾದರೆ ’ಛಡಿ ಛಂ ಛಂ’. ಸಾಕಷ್ಟು ಅತ್ತು ಸುಸ್ತಾದ ಮೇಲೆ ಮಲಗಿದರಾಯಿತು. ಇಷ್ಟಾದರೂ ಮರುದಿನ ಮತ್ತೆ ನಮ್ಮ ವರಸೆ ತೋರುವುದೇ.
ನಮ್ಮ ಬಾಲ್ಯದ ಪ್ರಮುಖ ಆಕರ್ಷಣೆ ’ಕಥಾಕಾಲಕ್ಷೇಪ’. ಕಥೆಗಳ ಭಾಂಡಾರವಾಗಿರುವ ಅಜ್ಜ ಅಜ್ಜಿಯರು ಹೇಳುವ ರಾಮಾಯಣ, ಮಹಾಭಾರತದಂತಹ ಪುರಾಣ ಕಥೆಗಳು, ಕಾಕಣ್ಣ ಗುಬ್ಬಣ್ಣನಂತಹ ಕಾಲ್ಪನಿಕ ಕಥೆಗಳು ನಮ್ಮ ಬುದ್ಧಿಯ ಕಲ್ಪನೆಯ ಪರಿಧಿಯನ್ನು ವಿಸ್ತರಿಸುತ್ತಿದ್ದವು ಎಂಬುದರಲ್ಲಿ ಸಂದೇಹವೇ ಇಲ್ಲ. ಹೇಳಿದ್ದೇ ಕಥೆಯನ್ನು ನಾಲ್ಕಾರು ಬಾರಿ ಹೇಳಿದರೂ ಕೇಳಲು ಬೇಸರವಿಲ್ಲ. ಕೊನೆಯಲ್ಲಿ ನೀನು ಹಾಗೆ ಮಾಡಬಾರದು, ಹೀಗೆ ಮಾಡಬಾರದು ಎಂದು ಅಜ್ಜಿ ಹೇಳದಿದ್ದರೂ ನಮಗದು ಅರ್ಥವಾಗಿ ಹೋಗುತ್ತಿತ್ತು. ನೀತಿಗ್ರಹಣ ಸಹಜವಾಗಿ ಆಗಿ ಹೋಗುತ್ತಿತ್ತು. ಇಂದಿನ ಮಕ್ಕಳನ್ನು ನೋಡಿದಾಗ ಅಯ್ಯೋ ಪಾಪ ಅನ್ನಿಸುತ್ತದೆ. ಅಜ್ಜ ಅಜ್ಜಿಯರೊಂದಿಗೆ ಮಕ್ಕಳು ಬೆರೆಯುವುದೇ ಅಪರೂಪ. ಇಂದಿನ ಪುಟ್ಟ ಸಂಸಾರದ ಪದ್ಧತಿಯಲ್ಲಿ ನಮ್ಮ ಮಕ್ಕಳಿಗೆ ಅಜ್ಜಿಯ ಕಥೆ ಎಲ್ಲಿ ಲಭ್ಯವಾಗಬೇಕು? ಪಟ್ಟಣದಲ್ಲಿ ಬೆಳೆಯುತ್ತ ಕಂಗ್ಲೀಷನ್ನೋ, ಹಿಂಗ್ಲೀಷನ್ನೋ ಕಲಿಯುವ ಮಕ್ಕಳಿಗೆ ಅಜ್ಜಿಯ ಶುದ್ಧ ಗ್ರಾಮ್ಯ ಕನ್ನಡ ಅರ್ಥವಾಗುವುದೇ? ಹಾಗಾಗಿ ಟಿ.ವಿ.ಯಂತಹ ಮಾಧ್ಯಮದೆದುರು ಅವರ ಬಾಲ್ಯ ಕಳೆದು ಹೋಗುತ್ತಿದೆ. ಅದರಿಂದ ಅವರು ಕಲಿತಿದ್ದೆಷ್ಟೋ, ಕಳೆದುಕೊಂಡಿದ್ದೆಷ್ಟೋ ದೇವರೇ ಹೇಳಬೇಕು.
ಅಂದು ಬೇಸಿಗೆ ರಜೆ ಬಂತೆಂದರೆ ಸಾಕು ಹಿಗ್ಗೋ ಹಿಗ್ಗೋ. ಅಕ್ಕ, ಅಣ್ಣ, ತಮ್ಮ, ತಂಗಿ, ಅಕ್ಕಪಕ್ಕದ ಗೆಳೆಯರನ್ನೆಲ್ಲ ಸೇರಿಸಿ ಆಟ ಆಡುವುದೇ ಆಡುವುದು. ಅಮ್ಮ ಊಟಕ್ಕೆ ಕರೆದರೂ ಹೋಗುವ ಮನಸ್ಸಿಲ್ಲ. ಲಗೋರಿ, ಚಿಣ್ಣಿದಾಂಡು, ಕುಂಟುಬಿಲ್ಲೆ ಹೀಗೆ ಆಟದ ವಿಧಗಳಿಗಂತೂ ಕೊನೆಯಿಲ್ಲ. ಕತ್ತಲೆಯಾಯಿತೆಂದರೆ ಮನೆಯನ್ನೇನೋ ಸೇರುತ್ತಿದ್ದೆವು. ಆದರೆ ಮನೆಪಾಠದ ಕಾಟವಿಲ್ಲವಲ್ಲ. ಹಾಗಾಗಿ ಅಲ್ಲಿ ನಮ್ಮ ಒಳಾಂಗಣ ಆಟ ಶುರುವಾಗುತ್ತಿತ್ತು. ಚೆನ್ನೆಮಣೆ, ಗದುಗಿನ ಕಾಯಿ, ಕವಡೆ, ಬಳೆ ಚೂರುಗಳ ಆಟ ಆರಂಭ. ಈ ಆಟಗಳಿಗೆ ದುಡ್ಡು ಕೊಟ್ಟು ಯಾವುದೇ ಸಾಮಗ್ರಿ ತರಬೇಕಾಗಿರಲಿಲ್ಲ. ಹುಣಸೇಬೀಜ, ಕಲ್ಲುಹರಳು, ಒಡೆದ ಬಳೆಯ ಚೂರುಗಳು ಇವೆಲ್ಲ ಆಗಿನ ಆಟಿಗೆ ಸಾಮಗ್ರಿಗಳು. ಆದರೆ ಇವುಗಳಿಂದ ಸಿಗುವ ಆನಂದ ಮಾತ್ರ ಅಪರಿಮಿತ. ಇಂದಿನ ಮಕ್ಕಳ ಹಾಗೆ ವರ್ಷವಾಗುವುದರೊಳಗೇ ಬ್ಯಾಟ್, ಬಾಲ್ ಹಿಡಿದವರು ನಾವಲ್ಲ.
ಅಜ್ಜನಮನೆಯ ವಾಸ ಮಕ್ಕಳಿಗೆ ಅತಿ ಪ್ರಿಯವಾದದ್ದು. ಅಜ್ಜ ಅಜ್ಜಿಯರೂ ಮೊಮ್ಮಕ್ಕಳು ಯಾವಾಗ ಬರುತ್ತಾರೆ ಎಂದು ಕಾಯುತ್ತಿರುತ್ತಿದ್ದರು. ಮೊಮ್ಮಕ್ಕಳಿಗೆ ಕೊಡುವ ಸಲುವಾಗಿಯೇ ಏನೇನೋ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಅವರ ಪ್ರೀತಿ ಮಮತೆಯಲ್ಲಿ, ಅಕ್ಕರೆಯ ತೋಳಿನಲ್ಲಿ ಅಂದಿನ ಮಕ್ಕಳು ನಲಿಯುತ್ತಿದ್ದರು. ಆದರೆ ಇಂದಿನ ಮಕ್ಕಳಿಗೆ ಆ ಅಜ್ಜನ ಮನೆಯ ಆನಂದ ಸಿಗುತ್ತಿಲ್ಲ. ಇಂದು ಹಳ್ಳಿಗಳಲ್ಲಿಯೂ ಮಕ್ಕಳ ದಂಡು ಇಲ್ಲ. ಹಾಗಾಗಿ ಸಾಮೂಹಿಕ ಆಟಗಳು ಮರೆಯಾಗುತ್ತಿವೆ. ಇಂದು ಶಾಲೆಗಳೋ ಅಥವಾ ಸ್ವಯಂ ಸೇವಾ ಸಂಸ್ಥೆಗಳೋ ನಡೆಸುವ ಬೇಸಿಗೆ ಶಿಬಿರಕ್ಕೆ ಮಕ್ಕಳನ್ನು ಸೇರಿಸುತ್ತಾರೆ. ಯಾಕೆಂದರೆ ರಜೆ ಬಂತೆಂದರೆ ಮಕ್ಕಳಿಗೆ ’ಟೈಂ ಪಾಸ್’ ಸಮಸ್ಯೆ, ಪಾಲಕರಿಗೆ ಅದೇ ಒಂದು ತಲೆನೋವು. ಹಾಗಾಗಿ ಇಂತಹ ಶಿಬಿರಗಳಿಗೆ ಸಾಗಹಾಕುತ್ತಾರೆ. ಆಧುನಿಕ ಯುಗದಲ್ಲಿ ಇಂತಹ ಶಿಬಿರಗಳು ಉತ್ತಮವೇನೋ ಸರಿ ಆದರೆ ಮಕ್ಕಳಿಗೆ ಅಜ್ಜನ ಮನೆಯಲ್ಲಿ ಸಿಗುವ ಆನಂದ ಮಾತ್ರ ಸಿಗಲು ಸಾಧ್ಯವಿಲ್ಲ. ಅಜ್ಜನ ಮನೆಯಂತೆಯೇ ಅತ್ತೆಯ ಮನೆ, ಚಿಕ್ಕಮ್ಮನ ಮನೆ ಇವೆಲ್ಲ ಆಪ್ಯಾಯಮಾನವಾಗಿತ್ತು. ಹೀಗೆ ಸಂಬಂಧಿಗಳ ಮನೆಯಲ್ಲಿ ಉಳಿದು ಮಕ್ಕಳು ಸ್ವಾವಲಂಬನೆಯನ್ನೂ, ಇತರರೊಂದಿಗೆ ಬೆರೆಯುವ ರೂಢಿಯನ್ನೂ ಬೆಳೆಸಿಕೊಳ್ಳುತ್ತಿದ್ದರು. ಇಂದು ಟಿ.ವಿ.ಚಾನೆಲ್‌ಗಳು ಆರಂಭಿಸುವ ವಿಶೇಷ ಕಾರ್ಟೂನ್ ಕಾರ್ಯಕ್ರಮಗಳನ್ನು ನೋಡುತ್ತಲೇ ಬೇಸಿಗೆ ರಜೆ ಕಳೆದುಹೋಗುತ್ತದೆ.
ಮಳೆಗಾಲ ಚಳಿಗಾಲಗಳನ್ನೂ ಕೂಡ ನಾವು ಅನುಭವಿಸಿದಂತೆ ಈಗಿನ ಮಕ್ಕಳು ಅನುಭವಿಸುತ್ತಿಲ್ಲ ಅನಿಸುತ್ತದೆ. ತುಂತುರು ಮಳೆಯಲ್ಲಿಯೇ ಕುಂಟುಬಿಲ್ಲೆ ಕಬಡ್ಡಿಗಳನ್ನು ಆಡುವ ಸೊಗಸು, ಜಡಿಮಳೆಯಲ್ಲಿ ಬೆಚ್ಚನೆಯ ಮನೆಯೊಳಗೆ ಚೆನ್ನೆಮಣೆ ಆಡುವ ಸೊಬಗು ಈಗೆಲ್ಲಿದೆ? ಆಗೆಲ್ಲ ಮಳೆಯಲ್ಲಿ ಶಾಲೆಗೆ ಹೋಗಬೇಕೆಂದರೆ ಪ್ಲಾಸ್ಟಿಕ್‌ನ ’ಕೊಪ್ಪೆ’ಯಲ್ಲಿ ಮೈಯನ್ನು ಅಡಗಿಸಿಕೊಂಡು ಹೋಗಬೇಕು. ಮಲೆನಾಡಿನ ಗಾಳಿ ಮಳೆಗೆ ’ಕೊಡೆ’ ಹಾರಿಹೋಗುತ್ತದೆ ಎಂಬುದು ಪಾಲಕರ ಸಮಜಾಯಿಷಿ. ರೈನ್‌ಕೋಟ್ ಎಂಬ ಮಳೆ ಅಂಗಿ ಆಗಿನ್ನೂ ದುರ್ಲಭವಾಗಿತ್ತು. ಅಡಿಕೆ ಮರದ ’ಹಾಳೆ’ಯಿಂದ ತಯಾರಿಸಿದ ’ಗುರಾಕಿ’ ಸಿಕ್ಕಿದರೆ ಏನೋ ಖುಷಿ. ಶಾಲೆಯಿಂದ ಬರುವಾಗ ರಸ್ತೆಯ ಹೊಂಡದಲ್ಲಿ ಇಳಿದು ನೀರನ್ನು ಹಾರಿಸುತ್ತ ಆಟ ಆಡುತ್ತಲೇ ಬರುವ ಆನಂದ ಏ.ಸಿ. ಕಾರಿನಲ್ಲಿ ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಬರುವ ಮಕ್ಕಳಿಗೆ ಸಿಗಲು ಸಾಧ್ಯವೆ? ಬೇಸಿಗೆಯಲ್ಲಿ ಮಾಡಿದ ಹಲಸಿನ ಹಪ್ಪಳ, ಸಂಡಿಗೆಗಳನ್ನು ಮೆಲ್ಲುವ ಆ ಖುಷಿ ಈಗ ಸಿಗುವುದೇ?
ಚಳಿಗಾಲದಲ್ಲಿ ಬಚ್ಚಲ ಒಲೆಯ ಮುಂದೆಯೇ ನಮ್ಮ ಓದು ಬರಹ ಎಲ್ಲ. ಇಲ್ಲವೆ ಮನೆಯ ಮುಂದೆ ಎಲೆಗಳನ್ನು ಒಟ್ಟುಗೂಡಿಸಿ ’ಹೊಡಚಲು’ ಹಾಕಿ ಬೆಂಕಿ ಕಾಯಿಸುವುದು. ಚಳಿಯಿಂದ ತಪ್ಪಿಸಿಕೊಳ್ಳಲು ಸ್ವೆಟರ್ ಇಲ್ಲದೇ ಸಿಕ್ಕಿದ ಕಂಬಳಿಯ ಚೂರನ್ನೇ ಹೊದ್ದುಕೊಂಡು ಬೆಚ್ಚಗೆ ಮಲಗುವ ಆನಂದ ಏ.ಸಿ. ರೂಮಿನಲ್ಲಿ ಮಲಗಿದರೂ ಬರಲಾರದೇನೋ!
ನಮಗೆಲ್ಲ ಮನೆಯೇ ಮೊದಲ ಪಾಠಶಾಲೆ. ಎಲ್ಲ ಊರುಗಳಲ್ಲಿ ಬಾಲವಾಡಿಯೂ ಇರಲಿಲ್ಲ. ಹಾಗಾಗಿ ಆರು ವರ್ಷಗಳವರೆಗೆ ಮನೆಯಲ್ಲೇ ಶಾಲೆ. ಸಂಜೆ ದೇವರಿಗೆ ದೀಪಹಚ್ಚಿ ಭಜನೆ ಮಾಡಿ ಶುರುಮಾಡುವ ’ಬಾಯಿಪಾಠ’ದಲ್ಲಿ ಬಳ್ಳಿ (ವರ್ಣಮಾಲೆ), ಮಗ್ಗಿ, ವಾರದ ದಿನಗಳು, ಮಾಸಗಳು, ತಿಥಿಗಳು, ನಕ್ಷತ್ರಗಳು, ಸಂವತ್ಸರಗಳು ಎಲ್ಲವೂ ಬಾಯಿಪಾಠವಾಗಿ ಬಿಡುತ್ತಿತ್ತು. ಶಾಲೆ ಆರಂಭವಾದಕೂಡಲೇ ಒಂದು ’ಪಾಟಿ’ (ಸ್ಲೇಟ್) ಹಾಗೂ ’ಕಡ್ಡಿ’ಯನ್ನು ಹಿಡಿದುಕೊಂಡು ಶಾಲೆಗೆ ಹೋಗುವುದು. ಮೇಲಿನ ಕ್ಲಾಸಿಗೆ ಹೋದಕೂಡಲೇ ಆ ಪಾಟಿಗೊಂದು ಚೀಲ, ಪಾಟಿ ಚೀಲ ಅಂತಲೇ ಅದಕ್ಕೆ ಹೆಸರು. ಪೆನ್ನು - ಪಟ್ಟಿಯ ಪರಿಚಯವಾಗಿದ್ದು ಐದನೆಯ ಕ್ಲಾಸಿನಲ್ಲಿ. ಅಲ್ಲಿಯವರೆಗೆ ಹೋಮ್ ವರ್ಕ್, ಕ್ಲಾಸ್ ವರ್ಕ್ ಎಲ್ಲವೂ ಪಾಟಿಯಮೇಲೇ. ಬರೆದದ್ದನ್ನು ತಲೆಯಲ್ಲಿ ತುಂಬಿಸಿಕೊಂಡು ಅಳಿಸಿಬಿಡುವುದು. ದೊಡ್ಡವರು ಬೀಸಾಕಿದ ಬಳಸಿದ ಪೆನ್ ಏನಾದರೂ ಸಿಕ್ಕಿದರೆ ಅದಕ್ಕೆ ಬಳಪವನ್ನು ಸಿಕ್ಕಿಸಿಕೊಂಡು ಪೆನ್ನಿನ ಸ್ಟೈಲಿನಲ್ಲಿ ಬರೆಯುವುದೊಂದು ದೊಡ್ಡ ಹೆಮ್ಮೆ. ಇಂದೆಲ್ಲ ಮಕ್ಕಳಿಗೆ ನರ್ಸರಿಯಿಂದಲೇ ಪೆನ್ನು, ನೋಟ್‌ಬುಕ್, ಪೆನ್ಸಿಲ್ ಎಲ್ಲ ದೊರೆಯುತ್ತದೆ. ಅವರ ಆನಂದ ಇರುವುದು ’ಯೂಸ್ ಎಂಡ್ ಥ್ರೋ’ ದಲ್ಲಿ!
ನಮ್ಮ ಬಾಲ್ಯದ ಬಹು ಭಾಗ ಮುಗ್ಧತೆಯಲ್ಲೇ ಕಳೆದುಹೋಗಿತ್ತು. ಕೋಣ ಕರು ಹಾಕಿದೆಯಂತೆ ಎಂದರೂ ’ಹೌದಾ ಎಲ್ಲಿ’ ಎಂಬಷ್ಟು ಮುಗ್ಧತೆ. ಇಂದಿನ ಪೀಳಿಗೆಯ ಮಕ್ಕಳು ಬುದ್ಧಿವಂತರಾಗಿಯೇ ಹುಟ್ಟಿದವರು. ಅವರಿಗೆ ಆಧಾರ ಕೊಟ್ಟಷ್ಟೂ ಕಡಿಮೆಯೇ. ಚಿಕ್ಕವರಿರುವಾಗಲೇ ಸ್ವಾತಂತ್ರ್ಯಹೋರಾಟ ಆರಂಭಿಸಿಬಿಡುತ್ತಾರೆ. ನಾವು ನಮ್ಮ ಅವಶ್ಯಕತೆಯನ್ನು ನಮ್ಮ ಪಾಲಕರಿಗೆ ತಿಳಿಸಲು ಅದೆಷ್ಟು ರಿಹರ್ಸಲ್ ಮಾಡಿಕೊಳ್ಳುತ್ತಿದ್ದೆವು. ಆದರೆ ಈಗಿನ ಮಕ್ಕಳು ತಮ್ಮ ಹಕ್ಕೆಂಬಂತೆ ಎಲ್ಲವನ್ನೂ ’ಡಿಮ್ಯಾಂಡ್’ ಮಾಡುತ್ತಾರೆ.
ನಿಜ, ಬಾಲ್ಯದಲ್ಲಿ ನಮಗೆ ಸ್ವಾತಂತ್ರ್ಯವಿರಲಿಲ್ಲ. ನಾವು ಮಾಡಬೇಕೆಂದಿದ್ದನ್ನೆಲ್ಲ ಮಾಡಲು ಸಾಧ್ಯವಿರಲಿಲ್ಲ ಅಂದು ನಾವು ಯಾವಾಗ ಬೆಳೆದು ದೊಡ್ಡವರಾಗುತ್ತೇವೋ ರೆಕ್ಕೆ ಬಿಚ್ಚಿ ಹಾರುತ್ತೇವೋ ಎಂಬ ಕಾತರ ಇತ್ತು. ಇಂದು ಬೆಳೆದು ದೊಡ್ಡವರಾಗಿದ್ದೇವೆ. ಕೈಯಲ್ಲಿ ಹಣವಿದೆ, ಸ್ವಾತಂತ್ರ್ಯವಿದೆ. ಆದರೂ ನಾವಂದುಕೊಂಡದ್ದನ್ನೆಲ್ಲ ಮಾಡಲು ಸಾಧ್ಯವಿಲ್ಲ! ಹೀಗಿರುವಾಗ ಆ ಬಾಲ್ಯಕಾಲವೇ ಚೆನ್ನ ಅನ್ನಿಸದಿರುವುದೇ?
ಈ ಬಾಲ್ಯಕಾಲದ ವರ್ಣನೆ ಎಷ್ಟು ಮಾಡಿದರೂ ಮುಗಿಯುವಂಥದ್ದಲ್ಲ. ವ್ಯಕ್ತಿ ತನ್ನ ನೋವಿನ ಕ್ಷಣಗಳಲ್ಲಿ ತನ್ನ ಬಾಯಕ್ಕೆ ಮರಳುತ್ತಾನೆ. ವೃದ್ಧಾವಸ್ಥೆಯಲ್ಲಿಯೂ ಬಾಲ್ಯದ ಗೆಳೆಯನೇನಾದರೂ ಸಿಕ್ಕಿದರೆ ಬಾಲ್ಯದ ದಿನಗಳು ಮತ್ತೆ ಮರಳುತ್ತವೆ. ನಮಗೇನೋ ಬಾಲ್ಯದ ಬಗ್ಗೆ ನೆನಪು ಮಾಡಿಕೊಳ್ಳಲು ಎಷ್ಟೊಂದು ವಿಷಯಗಳಿವೆ. ಮುಂದಿನ ಪೀಳಿಗೆಯವರಿಗೆ ಕಾದು ನೋಡೋಣ.

Monday, June 14, 2010

ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರು
"ಮೇರಾ ರಂಗ್ ದೇ , ಮಾಯಿ ರಂಗ್ ದೇ, ಮೇರಾ ರಂಗ್ ದೇ ಬಸಂತೀ ಚೋಲಾ..." ಹಾಗೊಂದು ಹಾಡು ಲಾಹೋರ್ ನ ಜೈಲಿನ ಗೋಡೆ ಗೋಡೆ ಗಳಲ್ಲಿ ಅನುರಣಿಸುತ್ತಾ, ಕೇಳಿದವರ ಎದೆಯಲ್ಲಿ ಹೊಸತೊಂದು ಭಾವ ಸೃಷ್ಟಿಸುತ್ತಾ ಸೆರೆಮನೆಯ ಎಲ್ಲೆಯನ್ನು ದಾಟಿ ಮಾರ್ದನಿಸುತ್ತಿತ್ತು. ಆ ಹಾಡು ಲಾಹೋರಿನ ಜೈಲಿನಲ್ಲಿ ಖೈದಿಗಳಿಗಾಗಿ ಏರ್ಪಡಿಸಿದ್ದ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮದ್ದಾಗಲಿ, ಸಂಗೀತ ಗೋಷ್ಠಿಯದ್ದಾಗಲಿ ಆಗಿರಲಿಲ್ಲ. ದೇಶಭಕ್ತಿಯ ಮಹಾಪರಾಧಕ್ಕಾಗಿ ನೇಣಿನ ಶಿಕ್ಷೆಗೆ ಒಳಗಾದ ಮೂವರು ಭಾರತೀಯ ಯುವಕರು ತಮ್ಮ ಬಲಿದಾನದ ಸಮಯ ಹತ್ತಿರವಾಯಿತೆಂದು ಸಂಭ್ರಮದಿಂದ ಆನಂದದಿಂದ ಹೇಳತೊಡಗಿದ್ದ ಹಾಡದು. ಸಾಯಲು ಹೊರಟವರಿಂದ ಸಂಭ್ರಮದ ಹಾಡು!
ತಾಯ ವಿಮೋಚನೆಗಾಗಿ, ಸ್ವಾತಂತ್ರ್ಯದ ಕನಸು ಕಂಡ ಆ ಮೂವರು ಭಾರತೀಯ ಯುವಕರಿಗೆ ಬ್ರಿಟಿಷ್ ಸರ್ಕಾರ ನೀಡಿದ್ದು ಗಲ್ಲು ಶಿಕ್ಷೆಯ ಉಡುಗೊರೆ. ನ್ಯಾಯಾಲಯದ ತೀರ್ಪಿನ ಪ್ರಕಾರ ಮರುದಿನ ಗಲ್ಲಿಗೇರಿಸಬೇಕಿತ್ತಾದರೂ ದೇಶಾಭಿಮಾನಿಗಳ ಪ್ರತಿಭಟನೆಗೆ ಹೆದರಿ ಬ್ರಿಟಿಷ್ ಸರ್ಕಾರ ಒಂದು ದಿನ ಮುಂಚೆಯೇ ಅವರನ್ನು ನೇಣಿಗೇರಿಸಲು ನಿರ್ಧರಿಸಿತ್ತು. ಸೆರೆಮನೆಯ ಅಧಿಕಾರಿಗಳು ಆ ಯುವಕರಿಗೆ ಈ ವಿಷಯ ತಿಳಿಸಿದಾಗ ಅವರಿಗೋ ಅತ್ಯಾನಂದ. ಆ ಮೂವರು ಗೆಳೆಯರಲ್ಲೂ ಪೈಪೋಟಿ - ತಮ್ಮಲ್ಲಿ ಮೊದಲು ಗಲ್ಲಿಗೇರುವ ಅವಕಾಶ ಯಾರದಿರಬೇಕು ಎಂಬ ಸಲುವಾಗಿ! ಅವರಿಗದು ಮಾತೃಭೂಮಿಯ ಮುಕ್ತಿಗಾಗಿ ಬಲಿದಾನಗೈಯ್ಯುವ ಭಾಗ್ಯ!
ಪ್ರತ್ಯಕ್ಷ ಸಾವಿನ ಎದುರು ನಿಂತಾಗಲೂ ಅವರಲ್ಲಿ ಭಯದ ಲವಲೇಶವೂ ಇಲ್ಲ. ಗಲ್ಲಿನ ವೇದಿಕೆ ಏರಿದಾಗಲೂ ಮುಖದಲ್ಲಿ ನಗು. ಇನ್ನು ಕೆಲವೇ ಕ್ಷಣಗಳಲ್ಲಿ ತಮ್ಮ ಜೀವ ತೆಗೆವ ನೇಣಿನ ಕುಣಿಕೆಯನ್ನು ಅವರು ಚುಂಬಿಸಿದರು. ಮನದಲ್ಲಿ ಅದೇನನ್ನೋ ಸಾಧಿಸಿದ ತೃಪ್ತಿ. ಮೊಗದಲ್ಲಿ ಚೈತನ್ಯದ ಚಿಲುಮೆ. ಸಾಯಲು ಹೊರಟವರ ಮುಖದಲ್ಲಿ ನಗು. ಬ್ರಿಟಿಷ್ ಅಧಿಕಾರಿಗಳಿಗೆ ಅತ್ಯಾಶ್ಚರ್ಯ. ಅಲ್ಲಿದ್ದವರು ಐದು ಮಂದಿ ಬ್ರಿಟಿಷ್ ಅಧಿಕಾರಿಗಳು. ಒಬ್ಬ ಬ್ರಿಟಿಷ್ ಅಧಿಕಾರಿ ಕೇಳಿದ ’ಯಾಕೆ ನಗುತ್ತಿದ್ದೀರಿ?’ ಬಲಿದಾನಕ್ಕೆ ಸಿದ್ಧನಾದ ಯುವಕರಲ್ಲಿ ಒಬ್ಬ ಹೇಳಿದ "ಸಾರ್ ನೀವು ಅದೃಷ್ಟವಂತರು!" ಬ್ರಿಟಿಷ್ ಅಧಿಕಾರಿಗೆ ಮತ್ತಷ್ಟು ಅಚ್ಚರಿ . ’ಕ್ಷಣದಲ್ಲಿ ಹೆಣವಾಗಿ ಉರುಳುವ ನೀವು ನಮ್ಮ ಅದೃಷ್ಟವನ್ನೇಕೆ ಹೊಗಳ್ತೀರಿ?’ ಆತನ ಪ್ರಶ್ನೆ. ಅದಕ್ಕೆ ಆ ಭಾರತೀಯ ಯುವಕ ನಗುತ್ತಲೇ ಉತ್ತರಿಸುತ್ತಾನೆ. "ತನ್ನ ತಾಯ್ನಾಡಿನ ಮುಕ್ತಿಗಾಗಿ, ಸ್ವಾತಂತ್ರ್ಯದ ಕನಸಿಗಾಗಿ ಈ ನಾಡಿನ ಯುವಕ ಅದೆಷ್ಟು ಆನಂದದಿಂದ, ಸಂತೋಷದಿಂದ, ಸಂಭ್ರಮದಿಂದ ಬಲಿದಾನ ಮಾಡ್ತಾನೆ, ಅದನ್ನು ನೋಡುವ ಅದೃಷ್ಟ ೩೦ ಕೋಟಿ ಭಾರತೀಯರಲ್ಲಿ ನಿಮಗೆ ಐದು ಜನರಿಗೆ ಮಾತ್ರ ಸಿಗ್ತಿರೋದು , ನೀವು ಅದೃಷ್ಟವಂತರು!"
ಎಂತಹ ತಾಕತ್ತಿನ ಮಾತದು. ಸಾವಿನ ಸಮ್ಮುಖದಲ್ಲೂ ಅಂದು ಹಾಗೆ ದಿಟ್ಟ ವಾಗಿ ಮಾತಾಡಿದವನು ನಮ್ಮೆಲ್ಲರ ಪ್ರೀತಿಯ ಸರ್ದಾರ್ ಭಗತ್ ಸಿಂಗ್. ಜತೆಗಿದ್ದವರು ಅವನಷ್ಟೇ ಉಜ್ವಲ ದೇಶಭಕ್ತಿ, ಸ್ವಾತಂತ್ರ್ಯದ ಕನಸನ್ನು ಎದೆಯೊಳಗಿಟ್ಟುಕೊಂಡಿದ್ದ ಸುಖದೇವ್ ಮತ್ತು ಶಿವರಾಂ ರಾಜಗುರು.
ಅಂದು ೨೩ ಮಾರ್ಚ್ ೧೯೩೧. ಇನ್ನೂ ತಾರುಣ್ಯದ ಹೊಸ್ತಿಲಲ್ಲಿದ್ದ ಭಗತ್ ಸಿಂಗ್, ಸುಖದೇವ್, ರಾಜಗುರು ಈ ನಮ್ಮ ಭಾರತದ ದಾಸ್ಯ ವಿಮೋಚನೆಗಾಗಿ, ತಮ್ಮ ಮಾತೃಭೂಮಿಯ ಅಗಾಧ ಪ್ರೀತಿ, ಉಜ್ವಲ ದೇಶಭಕ್ತಿಯ ಕಾರಣಕ್ಕಾಗಿ ನಗುನಗುತ್ತಲೇ ನೇಣಿಗೇರಿದ ದಿನ. ’ಈ ದೇಶಕಾಗಿ ಸಾಯಲೂ ಸಿದ್ಧ’ ಅನ್ನೋದು ಕೇವಲ ಮಾತಲ್ಲ, ಈ ದೇಶದ ಯುವಕರು ಮಾತೃಭೂಮಿಯ ಒಳಿತಿಗಾಗಿ ಸಾವಿಗೂ ಸವಾಲು ಹಾಕಬಲ್ಲರು ಎಂಬುದನ್ನು ಜಗತ್ತಿಗೇ ನಿರೂಪಿಸಿ ಸಾಧಿಸಿ ತೋರಿಸಿದ ದಿನ. ಅಂದು ಅವರಿಗಿದ್ದದ್ದು ಭಾರತದ ದಾಸ್ಯ ವಿಮೋಚನೆ ಹಾಗೂ ಸ್ವತಂತ್ರ ಭಾರತದ ಕನಸು ಮಾತ್ರ. ನಾವು ಸ್ವತಂತ್ರರಾಗಿ, ದಾಸ್ಯಮುಕ್ತರಾಗಿ ಇರುವ ಇಂದಿನ ಈ ದಿನಗಳಿಗಾಗಿ ಅವರು ತಮ್ಮ ಸುಂದರ ನಾಳೆಗಳನ್ನು ಬಲಿಕೊಟ್ಟಾಗ , ತಾಯ್ನಾಡಿಗಾಗಿ ನಗುನಗುತ್ತಾ ನೇಣಿಗೇರಿದಾಗ ಭಗತ್ ಸಿಂಗ್ ಗೆ ಕೇವಲ ೨೩ ವರ್ಷ, ಸುಖದೇವ್ ಗೆ ೨೭ ವರ್ಷ ಹಾಗೂ ರಾಜಗುರು ಗೆ ೨೫ ವರ್ಷ! ಯೌವನದ ಅಮಲು ಏರುವ ಹೊತ್ತಿನಲ್ಲೇ ತಮ್ಮೆಲ್ಲ ವೈಯಕ್ತಿಕ ಸುಖ ಸಂತೋಷಗಳನ್ನು ಬದಿಗಿರಿಸಿ ತಾಯಿ ಭಾರತೀಯ ಆನಂದ, ದಾಸ್ಯಮುಕ್ತಿಯನ್ನೇ ಜೀವನದ ಧ್ಯೇಯವಾಗಿಸಿ ಕೊಂಡವರು ಅವರು. ಜಗತ್ತಿನ ಸ್ವಾತಂತ್ರ್ಯ ಇತಿಹಾಸದಲ್ಲೇ ಅವರದು ಧೀರೋದಾತ್ತ ಅಧ್ಯಾಯ. ಇನ್ನೂ ಶತ ಶತಮಾನಗಳವರೆಗೆ ಭಾರತೀಯ ಯುವಕರಿಗೊಂದು ಆದರ್ಶ, ಅನುಪಮ ಮಾದರಿ, ಉಜ್ವಲ ಮಾರ್ಗದರ್ಶಿ.
ಮನೆಯಲ್ಲಿ ಮದುವೆ ಮಾಡುತ್ತೇನೆಂದಾಗ ’ಭಾರತದ ಸ್ವಾತಂತ್ರ್ಯವೇ ನನ್ನ ಮದುವೆ’ ಎಂದು ಪತ್ರ ಬರೆದಿಟ್ಟು ಮನೆಯಿಂದ ಹೊರಬಂದು ಸಂಪೂರ್ಣ ತನ್ನನ್ನೇ ದೇಶಕ್ಕಾಗಿ ಸಮರ್ಪಿಸಿಕೊಂಡ ಭಗತ್, ದೇಶಾಭಿಮಾನವನ್ನೇ ತಮ್ಮ ರಕ್ತದ ಕಣಕಣ ದಲ್ಲಿ ತುಂಬಿಕೊಂಡು, ದೇಶಭಕ್ತಿಯನ್ನೇ ಉಸಿರಾಡುತ್ತಾ ಬಲಿದಾನದ ಸಮಯ ಬಂದಾಗ ’ನಾನು ಮೊದಲು ನಾನು ಮೊದಲು’ ಎಂದು ಪೈಪೋಟಿಗಿಳಿದು ನಗು ನಗುತ್ತಾ ನೇಣಿ ಗೇರಿದ ಸುಖದೇವ್, ರಾಜಗುರು ... ಎಂತಹ ವೀರ ಪರಂಪರೆಯ ಮಕ್ಕಳು ನಾವು! ಆದರೆ ನಮ್ಮಲ್ಲೇಕಿಂದು ಆತ್ಮ ವಿಸ್ಮೃತಿಯ ಕರಿನೆರಳು? ನಾವಿಂದು ಬಲಿದಾನಗೈಯಬೇಕಿಲ್ಲ. ಮನೆ ಮಠ ಸಂಸಾರ ಬಿಟ್ಟು ಬರಬೇಕಿಲ್ಲ. ಯೌವನ, ಬದುಕನ್ನು ತ್ಯಾಗ ಮಾಡಬೇಕಿಲ್ಲ. ಆದರೆ ಕನಿಷ್ಟ ದೇಶವನ್ನು ಪ್ರೀತಿಸಲಾರೆವಾ? ದೇಶದ ಒಳಿತಿಗೆ ಸ್ಪಂದಿಸಲಾರೆವಾ? ಆ ವೀರ ಬಲಿದಾನಿಗಳ ಬಗ್ಗೆ ನಮ್ಮ ಮಕ್ಕಳಿಗೆ ಹೇಳಲಾರೆವಾ? ನಮ್ಮ ಈ ವೀರ ಪರಂಪರೆಯ ಬಗ್ಗೆ ಅಭಿಮಾನ ಮೂಡಿಸಲಾರೆವಾ? ಈ ದೇಶದ ರೈತ, ಗಡಿಕಾಯುವ ಸೈನಿಕರ ಕುರಿತು ಕಿಂಚಿತ್ತೂ ಕಾಳಜಿ ಹೊಂದಲಾರೆವಾ? ಅಷ್ಟೂ ಮಾಡಲಾಗದಿದ್ದರೆ ಸುಖಾಸುಮ್ಮನೆ ಈ ದೇಶಕ್ಕೆ ಬೈಯ್ಯೋದು ಬಿಟ್ಟು, ಈ ದೇಶವನ್ನು ಟೀಕಿಸೋದು ಬಿಟ್ಟು, ದೇಶಕ್ಕಾಗಿ ಕೆಲಸ ಮಾಡುತ್ತಿರುವವರ ಕಾಲೆಳೆಯೋದು ಬಿಟ್ಟು ಸುಮ್ಮನಿರಲಾರೆವಾ?
ದೇಶಕ್ಕಾಗಿ ನಾವೇನೂ ಮಾಡಬೇಕಿಲ್ಲ. ನನ್ನ ಹಳ್ಳಿ, ನನ್ನ ಊರು, ನನ್ನ ಜನ, ನನ್ನ ಸುತ್ತಮುತ್ತಲಿನ ಸಮಾಜಕ್ಕಾಗಿ ಸ್ಪಂದಿಸುವುದೇ, ತುಡಿಯುವುದೇ, ಸಮಾಜದ ಒಳಿತಿಗೆ ಶ್ರಮಿಸುವುದೇ ನಾವಿಂದು ಮಾಡಬೇಕಾದ ಕಾರ್ಯ. ಅದೇ ದೇಶ ಕಟ್ಟುವ ಕೆಲಸ.
ರಾಮಚಂದ್ರ ಹೆಗಡೆ ಸಿ. ಎಸ.
ಹೀಗೂ ಉಂಟು ಒಂದು ನಿಘಂಟು!
ಎಷ್ಟೋ ಸಲ ಹಠಾತ್ತಾಗಿ ನೆನಪಾದ ಏನೋ ಒಂದು ಕೆಲಸವನ್ನು ಮಾಡ ಹೋಗುತ್ತೇವೆ-ಅದೂ ಕೈಲಿದ್ದ ಕೆಲಸವನ್ನು ಬಿಟ್ಟು. ಆದರೆ ಅದು ಯಾವ ಕೆಲಸವೆಂಬುದನ್ನೇ ಮರೆಯುತ್ತೇವೆ. ವಸ್ತು, ಸ್ಥಳ, ಜನಗಳ ಹೆಸರು ಬೇಕೆಂದಾಗ ನೆನಪಾಗದೇ ಕೈಕೊಟ್ಟಾಗ ಅಲವತ್ತುಕೊಳ್ಳುವಂತೆ ಆಗುವುದು ಸಾಮಾನ್ಯ ಅನುಭವ.
ಎಲ್ಲಕ್ಕೂ ಹೆಚ್ಚಾಗಿ ಹೇಳ ಬೇಕೆನಿಸಿದ್ದನ್ನು ಹೇಳಲು ಯೋಗ್ಯ ಶಬ್ದ ಸಿಗದಾದಾಗ ನಮ್ಮ ಮನ ಹೇಗೆ ಚಡಪಡಿಸುತ್ತದೆ ನೋಡಿ! ನಾವು ಏನನ್ನೋ ಹೇಳಬಯಸುತ್ತೇವೆ, ಅದನ್ನು ನಿಖರವಾಗಿ ತೋರ್ಪಡಿಸುವ ಹಾಗೂ ವ್ಯಕ್ತಪಡಿಸುವ ಶಬ್ದವೊಂದಿದೆಯೆಂಬುದೂ ನಮಗೆ ಗೊತ್ತಿರುತ್ತದೆ, ಅಷ್ಟೇ ಅಲ್ಲ ಆ ಶಬ್ದ ನಮಗೆ ಪರಿಚಿತವಾದದ್ದೇ ಆಗಿರುತ್ತದೆ. ಆದರೆ ಗಂಟಲಲ್ಲಿರುವ ಆ ಶಬ್ದ ನಾಲಿಗೆಯ ಮೇಲೆ ಆಡಲು ಸಿದ್ಧವಿಲ್ಲ. ಅದನ್ನು ಹೊರತಬೇಕೆಂಬ ನಮ್ಮ ಛಲ ಹೆಚ್ಚಾದಷ್ಟೂ ಅದು ಹಟಮಾರಿಯಂತೆ ಹೊರಬರಲು ಊಂ... ಹೂಂ.... ಎನ್ನುತ್ತದೆ. ನಮಗೆ ಮೈಪರಚಿ ಕೊಳ್ಳುವಂತಾಗುತ್ತದೆ. ನಮ್ಮ ಮುಖಮುದ್ರೆ ಬದಲಾಗುತ್ತದೆ. ನಾವು ಹುಬ್ಬುಗಂಟಿಕ್ಕುತ್ತೇವೆ; ಕೈಕಾಲು ಕೊಡವುತ್ತೇವೆ; ಕುತ್ತಿಗೆ ಅಲ್ಲಾಡಿಸುತ್ತೇವೆ; ಹಣೆ ಒತ್ತಿಕೊಳ್ಳುತ್ತೇವೆ; ಏಕಾಗ್ರತೆ ಬಯಸಿ ಕಣ್ಣು ಮುಚ್ಚಿಕೊಳ್ಳುತ್ತೇವೆ. ಮಕ್ಕಳು ರಚ್ಚೆ ಹಿಡಿಯಲೂ ಬಹುದು. ಒಬ್ಬೊಬ್ಬರದು ಒಂದೊಂದು ತರಹ. ಮನಸ್ಸಿನ ಮೂಲೆ ಮೂಲೆಯನ್ನೂ ಜಾಲಾಡುತ್ತೇವೆ. ಆದರೆ ನಮ್ಮ ಮನದೆದುರೇ ಕುಣಿದಾಡುತ್ತಿರುವ ಆ ಶಬ್ದ ಮಾತ್ರ ಈಗ ಹಿಡಿದೇಬಿಟ್ಟೆವೆಂದುಕೊಳ್ಳು ತ್ತಿರುವಾಗಲೇ ಕೈಗೆಟುಕದ ಚತುರ ಆಟಗಾರನಂತೆ ದೂರ ನಿಂತು ಕೆಣಕುತ್ತದೆ. ನಾವಾವಾಗ ಹತಾಶೆಗೊಳ್ಳುತ್ತೇವೆ. ಮನ:ಶಾಸ್ತ್ರಜ್ಞರು ಈ ಸ್ಥಿತಿಯನ್ನು ಸೀನುವ ಕ್ರಿಯೆಗೆ ಹೋಲಿಸುತ್ತಾರಂತೆ. ಸೀನುವ ಕ್ರಿಯೆಯಲ್ಲಿ ಎಲ್ಲ ದೈಹಿಕ ಸಂವೇದನೆಗಳನ್ನು ಅನುಭವಿಸುತ್ತಿದ್ದೂ ಸೀನಲು ಸಾಧ್ಯವಾಗದೇ ಪಾಡುಪಡುತ್ತಿರುವಾಗ ಚೂರು ನಸ್ಯ ವಹಿಸುವ ಕಾರ್ಯವನ್ನೇ ಈ ವಿರುದ್ಧ ನಿಘಂಟೂ ಮಾಡುತ್ತದೆ. ಈ ನಸ್ಯ ನೀಡುವ ನೆಮ್ಮದಿ ಗಮನಾರ್ಹ ಎನ್ನುತ್ತಾರೆ ಪ್ರಕಾಶಕರು.
ನಾವು ಸೂಚಿಸಬಯಸುವ ಹಾಗೂ ನಮ್ಮ ಮನದಲ್ಲಿರುವ ಅರ್ಥವನ್ನು ಕೊಡುವ ಶಬ್ದಗಳ ಸಂಗ್ರಹವೇ ಈ ವಿರುದ್ಧ ನಿಘಂಟು. ರೂಢಿಯಲ್ಲಿರುವ ಸಾಮಾನ್ಯ ನಿಘಂಟುಗಳು ಶಬ್ದಗಳನ್ನು ವಿವರಿಸಿ ತಿಳಿಸುತ್ತಿದ್ದರೆ ವಿರುದ್ಧ ನಿಘಂಟು ನಮ್ಮ ವಿವರಗಳಿಗೆ ಸಮರ್ಪಕ ಶಬ್ದವೊಂದನ್ನು ನೀಡುವುದರಿಂದ ತುಂಬ ಸಹಕಾರಿಯಾಗಿದೆ. ಲೇಖಕರಿಗೆ ಕವಿಗಳಿಗೆ ಅಷ್ಟೇ ಅಲ್ಲದೆ ಮಾತುಗಾರಿಕೆಯೇ ಆಧಾರ ಸ್ತಂಭವಾಗಿರುವ ವೃತ್ತಿಯವರಿಗೆ ಇದರ ಮಹತ್ತ್ವ ಹೇಳತೀರದು. ಜನಸಾಮಾನ್ಯರಿಗೂ ಇದರ ಉಪಯೋಗ ಇಲ್ಲದಿಲ್ಲ. ಇದರ ಅಭ್ಯಾಸದಿಂದ ನಮ್ಮ ವಾಕ್ಚಾತುರ್ಯ ಹೆಚ್ಚುತ್ತದೆ. ಮಾತಿನಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ಬರವಣಿಗೆ ಹಾಗೂ ಮಾತಿನ ಶೈಲಿ ಹೆಚ್ಚು ಆಕರ್ಷಕವೂ ಪ್ರಭಾವಶಾಲಿಯೂ ಆಗುತ್ತದೆ. ನಮ್ಮ ಶಬ್ದ ಸಂಗ್ರಹ ವ್ಯಾಪಕವಾಗುತ್ತದೆ. ಒಂದು ಅಥವಾ ಹೆಚ್ಚು ವಾಕ್ಯಗಳಲ್ಲಿ ಹೇಳಬಹುದಾದ ಭಾವವನ್ನು ಒಂದೇ ಶಬ್ದದಲ್ಲಿ ವ್ಯಕ್ತಪಡಿಸಬಹುದು. ಸಾಮಾನ್ಯವಾಗಿ ರೂಢಿಯಲ್ಲಿರದ ಕುತೂಹಲಕಾರೀ ಹೊಸ ಶಬ್ದಗಳಿಂದ ಮನೋರಂಜನೆಯೂ ದೊರಕೀತು.
ಇನ್ನು ಈ ನಿಘಂಟನ್ನು ಉಪಯೋಗಿಸುವ ಬಗೆ ಹೇಗೆ? ಸ್ವಲ್ಪ ನೋಡೋಣ.
Audit ಎನ್ನುವ ಶಬ್ದ ನಮಗೆ ಗೊತ್ತು. "ಅರ್ಹ ವ್ಯಕ್ತಿಗಳಿಂದ ನಡೆಯುವ ಲೆಕ್ಕಪತ್ರಗಳ ಪರಿಶೀಲನೆ, ತಿದ್ದುಪಡಿ, ಸಮರ್ಥನೆ ಮುಂತಾದವುಗಳನ್ನು ಮಾಡುವುದು" ಎನ್ನಲು ಚಿuಜiಣ ಎನ್ನುತ್ತಾರೆನ್ನುವುದು ಚಿಛಿಛಿouಣ ಶಬ್ದದಡಿಯಲ್ಲಿ ದೊರೆಯುತ್ತದೆ. ಅಂತೆಯೇ ಅದಕ್ಕೆ ಸಂಬಂಧಿಸಿದ ಇತರ ಅನೇಕ ಶಬ್ದಗಳೂ ಕೂಡ. ವಿಶಿಷ್ಟ ಶಾಖೆ ಅಥವಾ ವಿಷಯಗಳಿಗಳಿಗೆ ಸಂಬಂಧಿಸಿದ "ಚಾರ್ಟ್"ಗಳಿದ್ದು ಅವುಗಳಡಿಯಲ್ಲೂ ಬೇಕಾದ ಶಬ್ದ ಸಿಕ್ಕೀತು.
ಇದನ್ನು ಉಪಯೋಗಿಸುವುದನ್ನು ರೂಢಿಸಿಕೊಳ್ಳಲು ಸಾಮಾನ್ಯ ನಿಘಂಟಿಗೆ ಬೇಕಾಗುವುದಕ್ಕಿಂತ ಹೆಚ್ಚು ತಾಳ್ಮೆ ಹಾಗೂ ಪರಿಶ್ರಮ ಬೇಕೆನಿಸುತ್ತದೆ. ನಿಜ. ಆದರೆ ಕನ್ನಡದಲ್ಲೂ ಇಂತಹ ಒಂದು ನಿಘಂಟು ಬಂದರೆ ಎಷ್ಟು ಚೆನ್ನ ಅಲ್ಲವೆ?

ಸೌ. ವೀಣಾ ದೇವ್
ಜೀವನದಲಂಕಾರ ಮನಸಿನುದ್ಧಾರ
ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ‘ಧರ್ಮ’ ಎಂಬುದಿರುತ್ತದೆ. ‘ಧರ್ಮ’ ಎಂದಾಕ್ಷಣ ’ಖeಟigioಟಿ’ಎಂದು ಅರ್ಥೈಸಿ ಇದೇನು ಜಡ ವಸ್ತುವಿಗೂ ಧರ್ಮವೇ? ಇಂದು ಹುಬ್ಬೇರಿಸದಿರಿ. ನಾನು ‘ಧರ್ಮ’ ಪದವನ್ನು ಬಳಸಿದ್ದು ‘ಸ್ವಭಾವ’, ‘ಕರ್ತವ್ಯ’ ಎಂಬರ್ಥದಲ್ಲಿ. ಸುಡುವುದು ಬೆಂಕಿಯ ಧರ್ಮ, ಬೀಸುವುದು ಗಾಳಿಯ ಧರ್ಮ, ಕಲಿಸುವುದು ಶಿಕ್ಷಕನ ಧರ್ಮ, ಪ್ರಜೆಗಳನ್ನು ರಕ್ಷಿಸುವುದು ರಾಜಧರ್ಮ ಇತ್ಯಾದಿಯಾಗಿ ‘ಧರ್ಮ’ ಶಬ್ದವನ್ನು ನಾವು ಪ್ರಯೋಗಿಸುತ್ತೇವೆ. ಹಾಗಾದರೆ ಖeಟigioಟಿ ಎಂಬ ಪದಕ್ಕೆ ಪರ್ಯಾಯವಾಗಿ ಧರ್ಮ ಪದವನ್ನು ಬಳಸುವುದು ಶುದ್ಧ ತಪ್ಪೇ?. ಈ ಪ್ರಶ್ನೆಗೆ ಉತ್ತರಿಸಬೇಕಾದರೆ ‘ಧರ್ಮ’ ಪದದ ಅರ್ಥದ ಆಳಕ್ಕೆ ಇಳಿಯಬೇಕು. ಯತೋಽ ಭ್ಯುದಯನಿಃಶ್ರೇಯಸಸಿದ್ಧಿಃ ಸ ಧರ್ಮಃ ಎಂದಿದ್ದಾರೆ ಪ್ರಾಜ್ಞರು. ‘ಯಾವುದರಿಂದ ಇಹಲೋಕದಲ್ಲಿ ಅಭ್ಯುದಯವೂ, ಪರಲೋಕದಲ್ಲಿ ಮೋಕ್ಷವೂ ದೊರಕುವುದೋ ಅದೇ ‘ಧರ್ಮ’ ಅಂದರೆ ನಮ್ಮ ಯಾವ ವ್ಯವಹಾರದಿಂದ ನಮಗೆ ಶ್ರೇಯಸ್ಸುಂಟಾಗುತ್ತದೋ ಆ ಆಚರಣೆ ನಮ್ಮ ಧರ್ಮ. "ಧಾರಣಾತ್ ಧರ್ಮ ಇತ್ಯಾಹುಃ ಧರ್ಮೋ ಧಾರಯತಿ ಪ್ರಜಾಃ" ಎಂಬುದು ಇನ್ನೊಂದು ವ್ಯಾಖ್ಯೆ. ಯಾವುದು ನಮ್ಮನ್ನೆಲ್ಲ ಧರಿಸುತ್ತದೋ, ಅಥವಾ ಯಾವುದನ್ನು ನಾವು ಅವಿನಾಭಾವದಿಂದ ಧರಿಸುತ್ತೇವೋ ಅದೇ ಧರ್ಮ. ಹಿಂದೆ ತೆಗೆದುಕೊಂಡ ಉದಾಹರಣೆಯನ್ನೇ ಗಮನಿಸಿ. ಸುಡುವ ಸ್ವಭಾವ ಹಾಗೂ ಬೆಂಕಿ ಅವಿನಾಭಾವದಿಂದ ಬೆಸೆದುಕೊಂಡಿದೆ. ಹಾಗಾಗಿ ಸುಡುವುದು ಬೆಂಕಿಯ ಧರ್ಮವೆನ್ನುತ್ತೇವೆ. ಅದರಂತೆ ಯಾವ ಸ್ವಭಾವ-ಆಚರಣೆ-ವ್ಯವಹಾರಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಇರಬೇಕೋ ಅದೇ ‘ಧರ್ಮ’. ಹಾಗಾಗಿ ಧರ್ಮಾಚರಣೆ ಐಚ್ಛಿಕವಲ್ಲ ಅನಿವಾರ್ಯ.
ರಿಲಿಜನ್ ಎಂಬರ್ಥದಲ್ಲಿ ‘ಧರ್ಮ’ ಪದವನ್ನು ತೆಗೆದುಕೊಂಡರೂ ಮೇಲಿನ ವ್ಯಾಖ್ಯೆಯೊಂದಿಗೆ ಸಮನ್ವಯಿಸಬಹುದು. ಯಾವುದೇ ಸಾಮಾಜಿಕ ವ್ಯವಸ್ಥೆಯಲ್ಲಿ ಅದರಲ್ಲಿಯೂ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ‘ಮತ’ ಕ್ಕೊಂದು ವಿಶಿಷ್ಟ ಮಹತ್ವವಿದೆ. ವ್ಯಕ್ತಿಯೊಬ್ಬ ಯಾವುದಾದರೊಂದು ‘ಮತ’ಕ್ಕೇ ಸೇರಿರಲೇ ಬೇಕು. ತಾನು ಇಂತಹ ಮತಕ್ಕೆ ಸೇರಿದವನೆಂದು ಹೇಳಿಕೊಳ್ಳಲು ಇಷ್ಟಪಡದವರು ಕೆಲವೇ ಮಂದಿ. (ಬೇರೆ ಬೇರೆ ಕಾರಣಗಳಿಂದ ಹೊgಗಡೆ ಇಷ್ಟವಿಲ್ಲದಂತೆ ತೋರಿಕೊಂಡರೂ ಒಳಗಡೆ ಆ ಪ್ರಜ್ಞೆ ಇದ್ದೇ ಇರುತ್ತದೆ) ಕೆಲವರು ತಮ್ಮನ್ನು ಯಾವುದೇ ಮತದೊಂದಿಗೆ ಗುರುತಿಸಿಕೊಳ್ಳದಿದ್ದರೂ ಯಾವುದಾದ ರೊಂದು ಮತವನ್ನು ಮೆಚ್ಚಬಹುದು. ಇಂದು ಒಂದು ಮತದಲ್ಲಿ ಅತೃಪ್ತರಾದವರು ತಟಸ್ಥರಾಗಿರದೆ ಮತಾಂತರ ಹೊಂದು ತ್ತಿರುವುದೇ ಈ ವಾದವನ್ನು ಪುಷ್ಟಿಗೊಳಿಸುತ್ತದೆ. ಹಾಗಾಗಿ ೯೦% ಮಂದಿ ಒಂದಲ್ಲ ಒಂದು ರೀತಿಯಲ್ಲಿ ಧರ್ಮಾಚರಣೆಯನ್ನು ಮಾಡುತ್ತಾರೆ. ರಿಲಿಜನ್‌ನಲ್ಲಿರುವ ಉಪದೇಶಗಳು ನಮ್ಮ ಅಭ್ಯುದಯ - ನಿಃಶ್ರೇಯಸಗಳಿಗೆ ಕಾರಣಗಳಾಗುವುದರಿಂದ ಅವೂ ಕೂಡ ‘ಧರ್ಮ’ವೇ. ಕೆಲವು ಚಾರ್ವಾಕ ಮತಗಳನ್ನು ಬಿಟ್ಟರೆ ಜಗತ್ತಿನ ಎಲ್ಲ ಧರ್ಮಗಳಲ್ಲಿಯೂ ಇರುವ ಪ್ರಮುಖ ಅಂಶ - ‘ದೇವರು’. ಮಾನವಶಕ್ತಿಯನ್ನು ಮೀರಿದ ಶಿಷ್ಟಶಕ್ತಿಯನ್ನು ದೇವರೆಂದೂ ದುಷ್ಟಶಕ್ತಿಯನ್ನು ದಾನವರೆಂದೂ ಎಲ್ಲ ಧರ್ಮಗಳೂ ಒಪ್ಪಿವೆ. ಈ ದೇವರ ಕಲ್ಪನೆ (ಇದು ಕಲ್ಪನೆಯೋ ವಾಸ್ತವವೋ ಎಂಬ ಚರ್ಚೆ ಈ ಲೇಖನದ ವ್ಯಾಪ್ತಿಗೆ ಮೀರಿದ್ದು) ನಮ್ಮ ಜೀವನದಲ್ಲಿ ಅನೇಕ ಚಟುವಟಿಕೆಗಳನ್ನು ತಂದಿತ್ತಿದೆ. ಪೂಜೆ-ಪುನಸ್ಕಾರ-ಪ್ರಾರ್ಥನೆ ಇವೆಲ್ಲ ಧರ್ಮಾಚರಣೆಯ ಅಂಗಗಳಾಗಿವೆ. ಇವೆಲ್ಲ ಜೀವನದಲ್ಲಿ ಯಾಕೆ ಬೇಕು ಎಂಬುದಕ್ಕೆ ಡಿವಿಜಿ ಉತ್ತರಿಸುತ್ತಾರೆ
ದೇವ ಮಂದಿರ ಭಜನೆ ಪೂಜೆಪ್ರಸಾದಗಳು
ಜೀವನದಲಂಕಾರ ಮನಸಿನುದ್ಧಾರ |
ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವು
ದಾವುದಾದೊಡಮೊಳಿತು - ಮಂಕುತಿಮ್ಮ ||
ಎಲ್ಲ ಧರ್ಮಗಳಲ್ಲಿಯೂ ಹೇಳಿರುವ ಅಂತಿಮ ಪುರುಷಾರ್ಥ ಮೋಕ್ಷವೇ. ಈ ಮೋಕ್ಷದ ಕಲ್ಪನೆ ಬೇರೆ ಬೇರೆ ಧರ್ಮಗಳಲ್ಲಿ ಬೇರೆ ಬೇರೆಯಾಗಿರಬಹುದು. ಧರ್ಮಾಚರಣೆ, ಅರ್ಥಸಂಗ್ರಹ, ಕಾಮಸಂತೃಪ್ತಿ ಇವೆಲ್ಲ ಮೋಕ್ಷಕ್ಕೆ ಮಾರ್ಗಗಳೆಂದು ವೇದಗಳು ಸಾರುತ್ತವೆ. ಧರ್ಮ ರಹಿತ ಅರ್ಥಸಂಗ್ರಹ, ಕಾಮಾಚರಣೆಗಳು ನಿಷಿದ್ಧ ಹಾಗೂ ಪಾಪಕ್ಕೆ ಮೂಲ. ಜೀವನದ ಪ್ರತಿಯೊಂದು ಹೆಜ್ಜೆಯೂ ಧರ್ಮದೊಡಗೂಡಿ ಇರುವುದು ಮುಖ್ಯ. ಧರ್ಮಾಚರಣೆ ಎಂದಾಕ್ಷಣ ಉಪವಾಸ ವ್ರತ-ಭಜನೆಗಳೇ ಅಲ್ಲ. ಅವೆಲ್ಲ ಜೀವನಕ್ಕೊಂದು ಅಲಂಕಾರ ಹಾಗೂ ನಮ್ಮ ಮನಸ್ಸನ್ನು ಕ್ಷುಲ್ಲಕ ವಿಚಾರಗಳಿಂದ ದೂರೊಯ್ವ ಸಾಧನUಳಷ್ಟೆ. ಮಂಕುತಿಮ್ಮನೆಂದಂತೆ
- ‘ವೇದಗಳು ಶಾಸ್ತ್ರಗಳು ಲೋಕ ನೀತಿಗಳೆಲ್ಲ ಹಾದಿತೋರಲು ನಿಶಿಯೊಳುರಿವ ಪಂಜುಗಳು’. ಮಾನವೀಯತೆಯ ನಭಕ್ಕೇರಿದವನು ತಾನೆಂಬ ವಿಶ್ವಾಸ ವಿರುವವನಿಗೆ ಆ ಪಂಜುಗಳ ಅವಶ್ಯಕತೆಯಿಲ್ಲ. ಆದರೆ ವಿಚಾರವಾದಿ ಯೆಂದು ಸೋಗು ಹಾಕಿ ಧರ್ಮಾಚರಣೆ ಮೌಢ್ಯದ ಸಂಕೇತವೆಂದು ಅಬ್ಬರಿಸುವವರು ಮೂರ್ಖರಲ್ಲದೆ ಇನ್ನಾರು? ನೈಜವಾದ ಧರ್ಮಾಚರಣೆಯೊಂದಿಗೆ ಕಾಲಾಂತರದಲ್ಲಿ ಮೌಢ್ಯವೂ ಸೇರಿಕೊಂಡಿದೆ ಎಂಬುದು ನಿಜ. ಕೆಲವು ದಿನಗಳ ಹಿಂದೆ ಹಿಂದೂ ಧರ್ಮದ ಹುಳುಕನ್ನು ಹುಡುಕುವುದರಲ್ಲಿಯೇ ಆಸಕ್ತರಾಗಿರುವ ನನ್ನ ಮಿತ್ರರೊಬ್ಬರು ಅಪ್ಪಣೆ ಮಾಡಿದರು - ‘ದೇವದಾಸಿ ಪದ್ಧತಿ ನಮ್ಮ ಸಂಸ್ಕೃತಿಯಲ್ಲೇ ಇದೆ. ಇದು ಧಾರ್ಮಿಕವಾಗಿ ಅಂಗೀಕೃತವಾದ ಪದ್ಧತಿ’ ಎಂಬುದಾಗಿ. ಅವರ ಇತಿಹಾಸಜ್ಞಾನ ನೋಡಿ ಮನ ಮರುಗಿತು. ಹೌದು, ದೇವದಾಸಿಯಂತಹ ಅನೇಕ ಅನಿಷ್ಟ ಪದ್ಧತಿಗಳು ಧರ್ಮಾಚರಣೆಯ ಒಂದು ಅಂಗ ಎಂದು ಚರ್ಮದ ಕಣ್ಣುಗಳಿಗೆ ಗೋಚರವಾಗುವಂತೆ ಬೆಸೆದುಕೊಂಡು ಬಿಟ್ಟಿವೆ. ಇದು ಪವಿತ್ರ ಗಂಗಾನದಿಗೆ ಕಾಶಿಯ ಕೊಚ್ಚೆಯ ನೀರು ಸೇರಿಕೊಂಡಂತೆ. ಆದರೆ ಇವೆಲ್ಲ ಕಾಲಾಂತರದಲ್ಲಿ ಸ್ವಾರ್ಥಿ ಮನುಷ್ಯರಿಂದ ಸೃಷ್ಟಿಯಾದ ಅನಿಷ್ಟ ಆಚರಣೆಗಳು ಎಂಬ ನೀರಕ್ಷೀರ ವಿಭಾಗ ಜ್ಞಾನ ಈ ವಿಚಾರವಾದಿಗಳಿಗಿಲ್ಲ. ನನ್ನ ಅಭಿಪ್ರಾಯದಂತೆ ಪ್ರತಿಯೊಂದು ಧರ್ಮವೂ ವೈಚಾರಿಕ ಹಾಗೂ ವೈಜ್ಞಾನಿಕ ತಳಹದಿಯ ಮೇಲೆ ರೂಪಿತವಾಗಿದೆ. ಪ್ರಾಣಿಬಲಿ, ನರಬಲಿ, ಜಿಹಾದ್‌ಗಳನ್ನು ಯಾವ ಧರ್ಮವೂ ಪುರಸ್ಕರಿಸುವುದಿಲ್ಲ. ಇಂದಿನ ’ವೋಟ್‌ಬ್ಯಾಂಕ್’ ರಾಜಕೀಯದಲ್ಲಿ ಕೇಳಿಬರುತ್ತಿರುವ ಒಂದು ಪ್ರಮುಖ ಶಬ್ದ - ’ಧರ್ಮ ನಿರಪೇಕ್ಷತೆ’. ರಾಜಕೀಯದಲ್ಲಿ ಧರ್ಮ ನುಸುಳಬಾರದು ಎಂಬುದರ ಅರ್ಥ ಅಧರ್ಮದ ರಾಜಕೀಯ ಮಾಡಬೇಕೆಂದೆ? ನಿಮಗೆ ಗೊತ್ತೆ. ಸಂಸತ್ತಿನ ಸಭಾಧ್ಯಕ್ಷರ ಪೀಠದ ಮೇಲ್ಗಡೆ ಬರೆದಿರುವ ಸಂಸತ್ತಿನ ಧ್ಯೇಯವಾಕ್ಯ ‘ಧರ್ಮಚಕ್ರ ಪ್ರವರ್ತನಾಯ!’. ಅಲ್ಲಿಯೇ ಕುಳಿತು ರಾಜಕೀಯ ಮಾಡುವವರು ’ಧರ್ಮ ನಿರಪೇಕ್ಷತೆ’ಯ ಮಾತನಾಡುವುದು ಹಾಸ್ಯಾಸ್ಪದವಲ್ಲವೆ? ನಮಗಿಂದು ಬೇಕಾಗಿರುವುದು ಧರ್ಮನಿರಪೇಕ್ಷತೆಯಲ್ಲ, ಪರಧರ್ಮಸಹಿಷ್ಣುತೆ ಅಷ್ಟೆ.
ಇಡೀ ಭಗವದ್ಗೀತೆಯ ತಿರುಳು - ‘ಅರ್ಜುನ! ನಿನ್ನ ಕ್ಷತ್ರಿಯ ಧರ್ಮವನ್ನು ಪಾಲಿಸು’ ಎಂಬುದು. ಇದು ಸಾಲದೆ ನಮಗೆ ಧರ್ಮಮಾರ್ಗದಲ್ಲಿ ನಡೆಯಲು? ಎಡಗೆನ್ನೆಗೆ ಹೊಡೆದಾಗ ಬಲಗೆನ್ನೆಯನ್ನು ತೋರುವುದು ಮಾತ್ರ ಧರ್ಮವಲ್ಲ. ಅನ್ಯಾಯವಾದಾಗ ಎದುರಿಸುವುದೂ ಧರ್ಮವೇ. ಧರ್ಮಾಚರಣೆಗಳೆಲ್ಲ ಮೌಢ್ಯಗಳು ಎಂದು ಮೂಗು ಮುರಿಯದೆ ಮಣ್ಣನ್ನು ಸರಿಸಿ ಚಿನ್ನವನ್ನು ಪಡೆಯುವಂತೆ ಮೂಢನಂಬಿಕೆಗಳನ್ನು ನಿವಾರಿಸಿ ಶುದ್ಧ ಧರ್ಮಾಚರಣೆಯಲ್ಲಿನಮ್ಮನ್ನು ತೊಡಗಿಸಿಕೊಳ್ಳೋಣ. || ಧರ್ಮೋ ರಕ್ಷತಿ ರಕ್ಷಿತಃ ||
-ಮಹಾಬಲ ಭಟ್

Tuesday, January 26, 2010

ಬಂಧನವದೇನಲ್ಲ ಜೀವ ಜೀವ ಪ್ರೇಮ

ಬಂಧನವದೇನಲ್ಲ ಜೀವ ಜೀವ ಪ್ರೇಮ
ಒಂದೆ ನಿಲೆ ಜೀವವರೆ ಬೆರೆತರಲೆ ಪೂರ್ಣ
ದುಂದುಗವನ್ ಅರೆಗಯ್ದು ಸಂತಸವನಿಮ್ಮಡಿಪ
ಬಾಂಧವ್ಯ ದೈವಕೃಪೆ - ಮಂಕುತಿಮ್ಮ

ಮೊನ್ನೆ ನನ್ನ ಮದುವೆಯ ನಿಶ್ಚಿತಾರ್ಥದ ಮರುದಿನ ನನ್ನ ಸಹೋದ್ಯೋಗಿಯೊಬ್ಬರು ಮುಗುಳ್ನಗುತ್ತ ’ಅವರ್ ಡೀಪೆಸ್ಟ್ ಸಿಂಪಥಿಸ್ ಟು ಯು ಎಂದಾಗ ಒಂದರೆಕ್ಷಣ ತಬ್ಬಿಬ್ಬಾದರೂ ಸಾವರಿಸಿಕೊಂಡು ಅದರ ಹಿಂದಿರುವ ಧ್ವನಿಯನ್ನು ಅರ್ಥೈಸಿಕೊಂಡೆ. ಅವಿವಾಹಿತನಾದ ವ್ಯಕ್ತಿಯೊಬ್ಬನ ಮದುವೆ ನಿಶ್ಚಯವಾದಾಗ ನಾವು ಬಿದ್ದಿರುವ ಹಳ್ಳಕ್ಕೆ ಇವನು ಬೀಳುತ್ತಿದ್ದಾನಲ್ಲ ಎಂದು ಇತರ ವಿವಾಹಿತರು ಂಂvಇಂಂ?ಂ\ಡುವುದೂ ಸ್ವಾಭಾವಿಕ. ಬ್ರಹ್ಮಚಾರಿಯ ಸ್ವೇಚ್ಛಾಚಾರರೂಪೀ ಸ್ವಾತಂತ್ರ್ಯಕ್ಕೆ ಇದರಿಂದ ಕಡಿವಾಣ ಬೀಳುವುದರಿಂದ ’ಮದುವೆ’ ಎಂಬ ಮೂರಕ್ಷರದ ಪದದ ಜೊತೆಗೆ ’ಬಂಧನ’ ಎಂಬ ಇನ್ನೂ ಮೂರಕ್ಷರ ಸೇರಿಕೊಂಡಿದೆ

ವ್ಯಕ್ತಿಯೊಬ್ಬ ಅಣ್ಣ-ತಮ್ಮ-ತಂಗಿ-ತಂದೆ-ತಾಯಿ ಮೊದಲಾದ ಅನೇಕ ವಿಧವಾದ ಬಾಂಧವ್ಯದಿಂದ ಇತರ ವ್ಯಕ್ತಿಗಳೊಂದಿಗೂ, ಕುಟುಂಬ ಗಳೊಂದಿಗೂ ಬೆಸೆದುಕೊಂಡಿದ್ದರೂ, ಹೊಸ ಸಂಬಂಧವನ್ನು ಏರ್ಪಡಿಸುವ ’ಮದುವೆ’ ಎಂಬ ಪ್ರಕ್ರಿಯೆ ತುಂಬಾ ವಿಶಿಷ್ಟವಾದದ್ದು . ಒಮ್ಮೆಲೆ ತನ್ನ ಬಾಂಧವರ ಸಂಖ್ಯೆಯನ್ನು ಕನಿಷ್ಠ ೫೦% ನಷ್ಟು ಹೆಚ್ಚಿಸುವ ವಿವಾಹ ಎಂಬ ಬೆಸುಗೆ ಮಾನವ ಜೀವನದ ಒಂದು ವೈಶಿಷ್ಟ್ಯಪೂರ್ಣ ಹಂತ. ಸಾಮಾಜಿಕವಾದ ಒಂದು ಸ್ಥಾನ, ಜೈವಿಕವಾದ ಬಯಕೆಯ ತೃಪ್ತಿಗಾಗಿ ವಿವಾಹವೆನ್ನುವುದು ಬೇಕೇ ಬೇಕು ಎಂದು ಹಲವರು ಅಭಿಪ್ರಾಯಪಡುತ್ತಾರೆ. ಪ್ರಖ್ಯಾತ ಹನಿಗವನಕಾರ ಢುಂಢಿರಾಜ್ ಹೇಳಿದಂತೆ ’ಯೌವನದ ಹುಚ್ಚು ಹೊಳೆಯಾಗಿ ಹರಿಯದಂತೆ ಹಿರಿಯರು ಕಟ್ಟುವ ಬದುವೆ ಈ ಮದುವೆ’. ಸತ್ಸಂತಾನವೊಂದನ್ನು ಪಡೆದಾಗಲೇ ವಂಶಕ್ಕೆ ಕೀರ್ತಿ ಎಂಬ ಭಾವನೆಯಿಂದ ’ಪ್ರಜಾತಂತುಂ ಮಾ ವ್ಯವಚ್ಛೇತ್ಸೀ’ ಎಂಬುದಾಗಿ ವೇದಗಳೇ ಸಾರಿವೆ. ವಿದ್ಯಾಭ್ಯಾಸ ಮುಗಿಸಿ ಸ್ನಾತಕನಾದ ವ್ಯಕ್ತಿಯ ದೀಕ್ಷಾಂತ ಸಮಾರಂಭದಲ್ಲಿ ಸಂಸಾರಿಯಾಗಿ ವಂಶವನ್ನು ಮುಂದುವರಿಸು ಎಂಬ ಉಪದೇಶವೂ ಸೇರಿದೆ. ’ಮಾನುಷ ಸಖನ ಕೋರುವುದು ಬಡಜೀವ’ ಎಂಬಂತೆ ಸುಖದುಃಖಗಳನ್ನು ಹಂಚಿಕೊಳ್ಳಲೂ ಸಂಗಾತಿಯ ಅವಶ್ಯಕತೆಯಿದ್ದೇ ಇರುತ್ತದೆ. ಹಾಗಾಗಿಯೇ ಇದೊಂದು ಬಂಧನವೆನ್ನುವುದು ಗೊತ್ತಿದ್ದರೂ ಹೆಚ್ಚಿನವರು ಅದಕ್ಕೆ ತಮ್ಮ ಕೊರಳನ್ನೊಡ್ಡುವುದು. ಸಂಸಾರವೆನ್ನುವುದು ಮೋಕ್ಷಕ್ಕೆ ಪ್ರತಿಬಂಧಕ ಎಂಬುದನ್ನೂ ನಮ್ಮ ಆಧ್ಯಾತ್ಮ ಹೇಳುತ್ತದೆ. ದುಃಖಕ್ಕೆ ಮೂಲವಾದ ರಾಗ ಹುಟ್ಟುವುದು ನಾವು ಇತರ ವ್ಯಕ್ತಿಗಳನ್ನು ನಮ್ಮ ಸಂಬಂಧಿಕರು ಎಂಬ ’ಮಮ’ ಕಾರದಿಂದ ನೋಡಿದಾಗ ಈ ಐಹಿಕ ಸುಖದ ಚಕ್ರದಿಂದ ಪಾರಾಗಬೇಕೆನ್ನುವವನು ಈ ಮದುವೆಯ ಬಂಧನಕ್ಕೆ ಒಳಗಾಗಬಾರದು ಎಂಬುದಾಗಿ ಪ್ರತಿಪಾದಿಸಲಾಗಿದೆ.ಪಾರಮಾರ್ಥಿಕವಾದ ಮುಕ್ತಿಯನ್ನು ಪಡೆಯಲುಬೇಕಾದ ವೈರಾಗ್ಯ ಈ ವಿವಾಹಿತರಿಗೆ ಸುಲಭವಲ್ಲವಾದ್ದರಿಂದಲೇ ಮದುವೆಗೆ ’ಬಂಧನ’ ಎಂಬ ವಿಶೇಷಣ ಅಂಟಿಕೊಂಡಿರುವುದು. ಸಂಸಾರದಲ್ಲಿದ್ದುಕೊಂಡೇ ಮೋಕ್ಷವನ್ನು ಪಡೆಯಬಹುದೆಂದು ಜನಕನೇ ಮೊದಲಾದ ಅನೇಕ ಮಹನೀಯರು ತೋರಿಸಿಕೊಟ್ಟಿದ್ದಾರೆ. ’ಧರ್ಮಾ ವಿರುದ್ದೋ ಕಾಮೋಸ್ಮಿ’ ಎಂದು ಭಗವಂತನೂ ಒಪ್ಪಿಕೊಂಡಿದ್ದಾನೆ. ಅಂದರೆ ಧರ್ಮಕ್ಕೆ ವಿರುದ್ಧವಲ್ಲದ ಕಾಮಾಚರಣೆಯನ್ನು ಶಾಸ್ತ್ರಗಳೇ ಒಪ್ಪುತ್ತವೆ. ಸೌಂದರ್ಯಶಾಸ್ತ್ರವೂ ಒಂದು ಬಗೆಯ ಆಧ್ಮಾತ್ಮವಿದ್ಯೆಯೇ. ಆಧ್ಯಾತ್ಮಯೋಗಿಯೊಬ್ಬ ಸಂಸಾರದ ರಹಸ್ಯಗಳನ್ನೂ ತಿಳಿದುಕೊಂಡಿರಬೇಕು ಎಂಬುದಾಗಿ ಶ್ರೀ ಶಂಕರಾಚಾರ್ಯ - ಉಭಯಭಾರತೀಯರ ಸಂವಾದವೇ ನಮಗೆ ತಿಳಿಸಿಕೊಡುತ್ತದೆ. ಮೇಲಿನ ಪದ್ಯದಲ್ಲಿ ಡಿ.ವಿ.ಜಿ ಯವರು ಸ್ಪಷ್ಟ ಮಾತುಗಳಲ್ಲಿ ’ಧನ್ಯೋ ಗೃಹಸ್ಥಾಶ್ರಮ’ ಎಂಬ ಮಾತನ್ನು ಪುಷ್ಟಿಗೊಳಿಸಿದ್ದಾರೆ. ವಿವಾಹವೆನ್ನುವುದು ಬಂಧನವೇನಲ್ಲ. ಎರಡು ಹೃದಯಗಳನ್ನು ಕೂಡಿಸುವ ಪ್ರೇಮಬೆಸುಗೆ. ವ್ಯಕ್ತಿ ಒಬ್ಬಂಟಿಯಾಗಿದ್ದಾಗ ಪರಿಪೂರ್ಣನಲ್ಲ. ಬೆರೆತಾಗಲೇ ಪೂರ್ಣ. ಇದಕ್ಕೆ ಅರ್ಧನಾರೀಶ್ವರನೇ ಸಾಕ್ಷಿ. ನಮ್ಮ ಎಲ್ಲ ಸಮಸ್ಯೆಗಳನ್ನು ಅರೆದು ಸಂತೋಷವನ್ನು ಎರಡುಪಟ್ಟು ಮಾಡುವ ಮಾಂತ್ರಿಕತೆ ಈ ಬಾಂಧವ್ಯದಲ್ಲಿದೆ ಎನ್ನುತ್ತಾರೆ ಅವರು. ಹಾಗಾಗಿ ಈ ಬಾಂಧವ್ಯವೆನ್ನುವುದು ಒಂದು ಬಂಧನವಲ್ಲ, ದೈವಕೃಪೆ ಎಂಬುದು ಅವರ ಅಭಿಪ್ರಾಯ.
ಮಹಾಬಲ ಭಟ್ ; ಎಪ್ರಿಲ್ ೨೦೦೭ ನಲ್ಲಿ ಬರೆದಿದ್ದು.

Saturday, January 16, 2010

ಜೀವನದ ಸಾರ

ಗುರುಹಿರಿಯರಿಗೆ ಎಂದಿಗೂ ಇದಿರಾಡಬೇಡ
ತಾಯಿ ತಂದೆಯರ ಸೇವೆ ನೀ ಮರೆಯಬೇಡ
ಆಸ್ತಿಗಾಗಿ ಸೋದರರೊಡನೆ ನೀ ಕಾದಬೇಡ
ಸತಿಸುತರ ಹೊಣೆ ಪರರಿಗೆ ಕೊಡಬೇಡ

ಮನೆಗೆ ಬಂದ ಅತಿಥಿಗಳ ನೀ ಬೈಯಬೇಡ
ಕೆಳಗೆ ಬಿದ್ದವರ ಕಂಡು ಎಂದೂ ನಗಬೇಡ
ದುರ್ಜನರ ಜೊತೆ ನೀನೆಂದೂ ಕೂಡಬೇಡ
ಸಜ್ಜನರ ಸಂಗವನು ನೀನೆಂದೂ ಬಿಡಬೇಡ

ಮರೆಯದಿರು ಎಂದೂ ಉಪಕಾರ ಮಾಡಿದವರನ್ನು
ಎಂದೆಂದೂ ಮಾಡದಿರು ನೀನ್ಯಾರಿಗೂ ಅಪಕಾರವನ್ನು
ಮಾಡಬೇಡ ಪರರ ಅಂಗನೆಯ ಸಹವಾಸವನ್ನು
ಕರುಬಬೇಡ ಕಂಡು ಇನ್ನೊಬ್ಬರ ಸಂಪತ್ತನ್ನು

ಮಾಡದಿರು ಚುಕ್ಕಾಣಿ ಇಲ್ಲದ ಹಡಗಿನ ಪಯಣವನ್ನು
ನಡೆಸದಿರು ಗುರಿಯಿಲ್ಲದ ನೀರಸ ಜೀವನವನ್ನು
ಫಲದಲ್ಲಿ ನಮಗಿಲ್ಲ ಅಧಿಕಾರ, ಮಾಡಬೇಕು ಕರ್ಮವನ್ನು
ಮಾಡಿಕೊಳ್ಳಬೇಕು ಆತ್ಮೋದ್ಧಾರ ಅರಿತು ಈ ಸತ್ಯವನ್ನು

ಜೀವನದಲಿ ನಾನು ನನ್ನದೆಂಬುವದೆಲ್ಲ ಅಹಂಕಾರ
ನಾನೇ ಎಲ್ಲಗಿಂತ ಮಿಗಿಲು ಎಂಬುದು ದುರಹಂಕಾರ
ದೂಷಿಸಿ ಮಾಡದಿರು ನೀನೆಂದೂ ಯಾರ ತಿರಸ್ಕಾರ
ಅರಿತುಕೊ ನಾವೆಲ್ಲ ಆ ದೇವನ ದೊಡ್ಡ ಅವಿಷ್ಕಾರ

ತಿಳಿದುಕೊ, ಎರಡು ದಿನಗಳ ಸಂತೆ ಈ ನಮ್ಮ ಸಂಸಾರ
ಬಿಟ್ಟುಬಿಡು ಹುಸಿಯ ಜಂಬ ತೊರೆದು ಮಮಕಾರ
ಅರಿತು ಆತ್ಮವನು ಮಾಡಿಕೊ ದೇವರ ಸಾಕ್ಷಾತ್ಕಾರ
ಮರೆಯುದಿರು ಮನುಜ, ಇದುವೆ ಜೀವನದ ಸಾರ


ಸಪ್ಟೆಂಬರ್ ೧೪, ೨೦೦೯ ನಾ ಹರಿಶ್ಚಂದ್ರ

ನಿಮಗೆಷ್ಟು ಗೊತ್ತು? ಕಸದ ಕಿಮ್ಮತ್ತು!

ನಿಮಗೆಷ್ಟು ಗೊತ್ತು? ಕಸದ ಕಿಮ್ಮತ್ತು!
ಲೇಖನ: ಅಂಕ್ನಳ್ಳಿ ಜಯರಾಂ
========================================================================
ಇತ್ತೀಚೆಗೆ ನಗರಗಳಲ್ಲಿ ಕಸ ವಿಲೇವಾರಿ ಸಮಸ್ಯೆ ಬಿಗಡಾಯಿಸಿದೆ. ಈ ಭೀಕರ ಸಮಸ್ಯೆ ನಿವಾರಣೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ನಿತ್ಯ ಉತ್ಪತ್ತಿಯಾಗುವ ಮನೆಯ ಸುತ್ತಲಿನ ಕಸ-ಕೊಳೆಗಳನ್ನು ಅಕ್ಕ-ಪಕ್ಕದವರ ಆಸ್ತಿ ಇಲ್ಲವೆ ಸಾರ್ವಜನಿಕ ಸ್ಥಳಗಳಲ್ಲಿ ಚೆಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣರಾಗುವ ಬದಲು ಕಸದಿಂದ ರಸಭರಿತ ಗೊಬ್ಬರ ತಯಾರಿಸಿ ಹಸಿರು ಅರಳಿಸಬಹುದು. ಈ ನಿಟ್ಟಿನಲ್ಲಿ ಪ್ರಯತ್ನಿಸಿ ಯಶಸ್ಸು ಸಾಧಿಸಿದವರ ಯಶೋಗಾಥೆ ಇಲ್ಲಿದೆ.
=========================================================================
ಕೇವಲ ಮೂರು ಮಂದಿ ಇರುವ ಮನೆಯಲ್ಲಿ ದೊರೆಯುವ ಎಲ್ಲ ಗೃಹ ತ್ಯಾಜ್ಯವೂ ಗೊಬ್ಬರವಾಗಿ ಪರಿವರ್ತನೆಯಾಗುತ್ತಿದೆ. ಇದರಿಂದ ಕೈತೋಟವೂ ಸೊಂಪಾಗಿ ಬೆಳೆದು ಪರಿಸರ ನಿರ್ಮಲವಾಗಿದೆ. ಅಷ್ಟೆ ಅಲ್ಲ, ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗುತ್ತಿರುವುದರಿಂದ ವಾಸನೆಯಿಲ್ಲ. ಹಾಗಾಗಿ ಇಲಿ ಕಾಟವೂ ಇಲ್ಲ. ಸೆಗಣಿ ಗೊಬ್ಬರ ಮತ್ತು ಜೈವಿಕ ದ್ರಾವಣ(ಎಫ಼ೆಕ್ಟೀವ್ ಮೈಕ್ರೊ ಆರ್ಗ್ಯಾನಿಸಮ್-ಇ.ಎಮ್)ವನ್ನು ಆಗಾಗ್ಗೆ ಖರೀದಿಸುವುದು ಬಿಟ್ಟರೆ ಬೇರೆ ಖರ್ಚಿಲ್ಲ ಎನ್ನುತ್ತಾರೆ, ಮಾಪುಸ ಸಮೀಪದ ಮೊಯಿರಾ ಗ್ರಾಮದ ಫೆಲಿಕ್ಸ್ ಡಿ.ಕುನ್ಹಾ. ಹತ್ತು ವರ್ಷಗಳ ಹಿಂದೆ ‘ಗೋವಾ ಪೌಂಡೇಷನ್’ ಸಹಕಾರದಿಂದ ನಾಲ್ಕು ಸಾವಿರ ವೆಚ್ಚದಲ್ಲಿ ನಿರ್ಮಿಸಿಕೊಂಡಿರುವ ಎರೆ ಘಟಕದಿಂದ ಇಷ್ಟೆಲ್ಲ ಅನುಕೂಲವಾಗಿದೆ. ಈ ಊರಲ್ಲಿ ಮೊಟ್ಟಮೊದಲು ಎರೆ ಘಟಕ ಸ್ಥಾಪಿಸಿದ ಹೆಗ್ಗಳಿಕೆಯೂ ಇವರದು!

ಈ ಕುನ್ಹಾ ಮನೆಯಿಂದ ಕಿಲೋ ಮೀಟರ್ ಅಂತರದಲ್ಲಿರುವ ನಿವೃತ್ತ ಶಿಕ್ಷಕಿ ಮಾರಿಯಾ ಕೊಹಿಲೋ ನಾಲ್ಕು ನಾಯಿ ಹಾಗೂ ಎರಡು ಬೆಕ್ಕುಗಳ ಒಡತಿ. ಈಕೆ ತನ್ನ ಮನೆಯ ಒದ್ದೆ ಕಸವನ್ನು ಎರೆ ಘಟಕಕ್ಕೆ ಮೂಲವಸ್ತುವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಮೋಯಿರಾ ಸೇತುವೆಯ ಬಳಿ ಚೆಲ್ಲಪಿಲ್ಲಿಯಾಗಿ ಬೀಳುವ ಕಸವನ್ನೂ ವಾರಕ್ಕೊಮ್ಮೆ ಒಟ್ಟುಗೂಡಿಸಿ ತಂದು ಸಸ್ಯ ರಸಪಾಕ (ಗೊಬ್ಬರ) ತಯಾರಿಸುವ ಇವರ ಜಾಣ್ಮೆಯನ್ನೆಲ್ಲರೂ ಮೆಚ್ಚಲೇಬೇಕು.

ಹಾಗೆಯೇ ಗ್ರಾಮದ ಜನರೊಡನೆ ಸ್ನೇಹದಿಂದ ವರ್ತಿಸಿ, ಅವರ ಮನಗೆದ್ದು ಕಸವನ್ನು ರಸವಾಗಿಸಲು ಪ್ರೇರೇಪಿಸುತ್ತಿರುವವರು ಅಸಗಾಂವ್ ನ ಜಾಯ್ಸಿ ಬ್ರಗಾಂಜ಼ಾ. ಇವರು ತಮ್ಮ ತೋಟದ ಗೇರು ಮರಗಳು ಮತ್ತು ಅಲಂಕಾರಿಕ ಸಸ್ಯಗಳಿಗೆ ಪೋಷಕಾಂಶಗಳನ್ನು ಮನೆಯಲ್ಲಿರುವ ಮೂರು ತೊಟ್ಟಿಯ ಎರೆ ಘಟಕ ಒದಗಿಸುತ್ತಿದೆ ಎಂದು ಸಂತಸಪಡುತ್ತಾರೆ. ಎಪ್ಪತ್ತೊಂಬತ್ತರ ಹರೆಯದ ಇವರು ಎರೆ ಘಟಕ ನಿರ್ವಹಣೆಯಲ್ಲಿ ಇಪ್ಪತ್ತೊಂಬತ್ತರ ಉತ್ಸಾಹ ತೋರುತ್ತಾರೆ.

ಮೋಹನ್ ತೆಂಡುಲ್ಕರ್ ಓರ್ವ ತೋಟಗಾರಿಕೆ ತಜ್ಞ. ಮೋಲ್ಕಾರ್ನೆಮ್ ನ ಇವರು ತಮ್ಮ ತೋಟದ ತೆಂಗು, ಕಂಗು, ಬಾಳೆ, ಗೋಡಂಬಿ ಗಿಡಗಳಿಗೆ ಸಾವಯವ ಗೊಬ್ಬರವನ್ನಷ್ಟೇ ಉಣಿಸುತ್ತಾರಂತೆ. ಎರೆಗೊಬ್ಬರ ತಯಾರಿಕೆಯಲ್ಲಿ ಬಹಳ ನಿಪುಣರಾಗಿರುವ ಇವರು ೨೭ ಚದರ ಮೀಟರ್ ವಿಸ್ತೀರ್ಣದ ಎರೆ ಘಟಕ ಹೊಂದಿದ್ದು ಪ್ರತಿ ವರ್ಷ ೨೦ ಟನ್ ಗಿಂತಲೂ ಹೆಚ್ಚು ಗೊಬ್ಬರ ತಯಾರಿಸುತ್ತಿರುವುದಾಗಿ ತಿಳಿಸುತ್ತಾರೆ.

ಆರಂಭದಲ್ಲಿ ಹಲವು ತೊಡಕುಗಳನ್ನು ಎದುರಿಸಿದ ತೆಂಡುಲ್ಕರ್ ಇಂದು ಒಬ್ಬ ಸಮರ್ಥ ರೈತ ತರಬೇತುದಾರರಾಗಿದ್ದಾರೆ. ಅಷ್ಟೆ ಅಲ್ಲ, ವಿವಿಧ ಘಟಕಗಳಿಗೆ ಎರೆ ಹುಳುಗಳನ್ನೂ ಪೂರೈಸುತ್ತಿದ್ದಾರೆ. ಮನೆಯ ಸುತ್ತಲಿನ ಕಸ ವಿಲೇವಾರಿಗೆ ಸುಲಭ ವಿಧಾನ ‘ಎರೆಘಟಕ’ ಎಂದು ಬಲವಾಗಿ ನಂಬಿರುವ ಇವರು ‘ಸಾಧಾರಣ ಗೊಬ್ಬರಕ್ಕಿಂತಲೂ ತೀವ್ರವಾಗಿ ಎರೆಗೊಬ್ಬರ ತಯಾರಾಗುತ್ತದೆ. ಜೊತೆಗೆ ಮಾರುಕಟ್ಟೆ ಬೇಡಿಕೆಯೂ ಚೆನ್ನಾಗಿದ್ದು ಕಿಲೋ ಒಂದಕ್ಕೆ ೨೦ ರೂ. ನಂತೆ ಮಾರಾಟವಾಗುತ್ತಿದೆ. ಇದನ್ನು ನಾವೇಕೆ ಅನುಸರಿಸಬಾರದು?’ ಎನ್ನುವ ಪ್ರಶ್ನೆಯನ್ನೂ ನಮ್ಮೆದುರಿಗಿಡುತ್ತಾರೆ.

ಇರಲಿ ಮನೆಗೊಂದು ಎರೆಘಟಕ: ‘ನಾವು ಕಸ ಕೊಳೆಗಳನ್ನು ಅಕ್ಕ-ಪಕ್ಕದವರ ಆಸ್ತಿಗೆ ಚೆಲ್ಲುವ ಬದಲು ಅದರಿಂದ ಸತ್ವಭರಿತ ಗೊಬ್ಬರ ತಯಾರಿಸಿ ಬಳಸಬಹುದು’ ಎಂಬುದನ್ನು ಮಾಡಿ ತೋರಿದವರು ಅಂಬೋಲಿಯ ಪಶುವೈದ್ಯ ಡಾ.ಮಹೇಂದ್ರ ಬಾಲೆ. ಇವರ ಪ್ರೇರಣೆಯಿಂದ ನೆರೆಹೊರೆಯಲ್ಲಿ ಏಳು ಎರೆಗುಂಡಿಗಳು ತಲೆ ಎತ್ತಿವೆ. ಜೊತೆಗೆ ‘ಕ್ಯೂಪೆಮ್’ ನ ಶಾಲೆಯಲ್ಲಿ ಮಕ್ಕಳು ಮಾಡಿ ಕಲಿಯಲು ಮುಂದಾಗಿದ್ದಾರೆ.

‘ಎರೆಘಟಕ ನಿರ್ಮಿಸಲು ಸ್ಥಳವಿರಲಿಲ್ಲ. ಹಾಗಾಗಿ ಸೆಪ್ಟಿಕ್ ಟ್ಯಾಂಕ್ ಮೇಲ್ಭಾಗದಲ್ಲೇ ಎರೆ ಘಟಕ ನಿರ್ಮಿಸಿದೆ. ಇದರಿಂದ ನನಗೆ ಯಾವುದೇ ತೊಂದರೆಯಾಗಿಲ್ಲ’ ಎನ್ನುವ ಬಾಲೆ ಎರೆ ಘಟಕವನ್ನು ಮನೆ ಮಂದಿಯೇ ನಿರ್ವಹಿಸುತ್ತಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇವರು ಗೋವಾದ ಪ್ರತಿ ಮನೆಯಲ್ಲೂ ಇಂಥದ್ದೊಂದು ಎರೆ ಘಟಕ ಇರಬೇಕೆಂದು ಪ್ರತಿಪಾದಿಸುತ್ತಾರೆ.

ನಿಜ, ನಮ್ಮ ಸುತ್ತ-ಮುತ್ತ ನಾವೇ ತಿಪ್ಪೆ ಗುಂಡಿ ಸೃಷ್ಟಿಸಿಕೊಂಡು, ವಿಲೇವಾರಿಗೆ ಮಾತ್ರ ನಗರ ಪಾಲಿಕೆಯನ್ನು ದೂಷಿಸುವ ಬದಲು ಹಿತ್ತಲಲ್ಲೊಂದು ಎರೆ ಘಟಕ ನಿರ್ಮಿಸಿ ಕಸದಿಂದ ರಸಭರಿತ ಗೊಬ್ಬರ ತಯಾರಿಸಿ ಹಸಿರು ಅರಳಿಸಬಾರದೇಕೆ?! ಇತ್ತೀಚೆಗೆ ಫ್ಲಾಟ್‍ಗಳಲ್ಲಿ ಕಾಂಪೋಸ್ಟ್ ತಯಾರಿಸಲು ಕಂಬಗಳು ಬಂದಿವೆ. ಕಸ ವಿಲೇವಾರಿಗೆ ಹೇಳಿ ಮಾಡಿಸಿದಂತಿವೆ.
=========================================================================
ಬಾಕ್ಸ್ ಐಟಂ
ಅದ್ಭುತ ಕಸ
~~~~~~~~~
* ಕೃಷಿ, ಗೃಹ ತ್ಯಾಜ್ಯವನ್ನು ಎರೆಹುಳು ಬಳಸಿ ಸಮೃದ್ಧ ಗೊಬ್ಬರ ತಯಾರಿಸುವ ವಿಧಾನವೇ ಎರೆ ಘಟಕ.

* ಎರೆ ಗೊಬ್ಬರ ಸಂಪೂರ್ಣ ಸಾವಯವ, ಪರಿಸರ ಸ್ನೇಹಿ ಗೊಬ್ಬರ. ಇದು ತೇವಾಂಶ ಹಿಡಿದಿಟ್ಟು ಮಣ್ಣನ್ನು ಮೃದುಗೊಳಿಸಿ ಸೂಕ್ಷ್ಮ ಪೋಷಕಾಂಶಗಳನ್ನು ಬೆಳೆಗಳಿಗೆ ನೀಡುತ್ತದೆ.

* ಎರೆ ಘಟಕ(ಗುಂಡಿ)ಕ್ಕೆ ಸೂರ್ಯನ ಬೆಳಕು ನೇರವಾಗಿ ಬೀಳದಂತೆ ಸುಮಾರು ಎಂಟು ಅಡಿ ಎತ್ತರದ ಚಪ್ಪರ ನಿರ್ಮಿಸಿ ಗಾಳಿ ಬೆಳಕು ದೊರೆಯುವಂತೆ ಮಾಡಲು ಸುತ್ತಲೂ ತೆರೆದಿರಬೇಕು.

* ಸಾಮಾನ್ಯವಾಗಿ ೧೨/೧೨ ಅಡಿ ಸುತ್ತಳತೆಯ ಜಾಗದಲ್ಲಿ ೧೦/೦೩ ಅಡಿಯ ಮೂರು ಬೆಡ್ ತಯಾರಿಸಿಕೊಂಡರೆ ಸುಮಾರು ಹತ್ತು ಕ್ವಿಂಟಾಲ್ ತ್ಯಾಜ್ಯವನ್ನು ಗೊಬ್ಬರ ತಯಾರಿಕೆಗೆ ಬಳಸಬಹುದಾಗಿದೆ.

* ಬೆಡ್ ತಳಭಾಗದಲ್ಲಿ ಸ್ವಲ್ಪ ಮರಳನ್ನು ಹರಡಿ ಅದರ ಮೇಲೆ ತ್ಯಾಜ್ಯದ ಹಾಸಿಗೆ ನಿರ್ಮಿಸಿ ೪-೬ ಇಂಚಿನ ತ್ಯಾಜ್ಯದ ಪದರ, ನಂತರ ೧ ಇಂಚಿನ ಸೆಗಣಿ ಗೊಬ್ಬರ-ಹೀಗೆ ಪದರಗಳನ್ನು ನಿರ್ಮಿಸಿ ನೀರಿನಿಂದ ನೆನೆಸಬೇಕು. ಮೇಲ್ಭಾಗದಲ್ಲಿ ತ್ಯಾಜ್ಯದ ಪ್ರಮಾಣಕ್ಕನುಗುಣವಾಗಿ (ಕಿಲೋ ತ್ಯಾಜ್ಯಕ್ಕೆ ೧ರಂತೆ) ಎರೆಹುಳು ಬಿಟ್ಟು ಅದರ ಮೇಲೆ ಗೋಣಿ ಚೀಲವನ್ನು ಮುಚ್ಚಬೇಕು. ಪಕ್ಷಿ ಮತ್ತು ಕೀಟಗಳಿಂದ ಎರೆಹುಳು ರಕ್ಷಿಸಲು ಹಾಗೂ ತೇವಾಂಶ ಕಾಪಾಡಲು ಇದು ಅಗತ್ಯ. ಪ್ರತಿ ದಿನ ಇದರ ಮೇಲೆ ತೇವಾಂಶಕ್ಕೆ ಅಗತ್ಯವಿರುವಷ್ಟು ನೀರನ್ನು ತಪ್ಪದೆ ಹನಿಸಬೇಕು. ಜೊತೆಗೆ
ಹದಿನೈದು ದಿನಕ್ಕೊಮ್ಮೆ ತಳಭಾಗದ ಹಾಸಿಗೆಗೆ ತೊಂದರೆಯಾಗದಂತೆ ತ್ಯಾಜ್ಯವನ್ನು ಮೇಲಿನಿಂದ ಕೆಳಕ್ಕೆ ತಿರುಗಿಸುತ್ತಿರಬೇಕು. ಈ ರ‍ೀತಿ ಮಾಡುವುದರಿಂದ ಎರಡರಿಂದ ಎರಡೂವರೆ ತಿಂಗಳಲ್ಲಿ ಗೊಬ್ಬರ ಸಿದ್ಧವಾಗುತ್ತದೆ.

* ಎರೆಹುಳು ವೃದ್ಧಿ: ಸಮ ಪ್ರಮಾಣದ ಸೆಗಣಿ ಗೊಬ್ಬರ ಮತ್ತು ತ್ಯಾಜ್ಯ ಮಿಶ್ರಣಕ್ಕೆ ಪ್ರತಿ ೫ ಕಿಲೋ ಗೆ ೫೦ ರಂತೆ ಎರೆಹುಳು ಸೇರಿಸಿ ನೆರಳಿನಲ್ಲಿಟ್ಟು ಆಗಾಗ್ಗೆ ನೀರನ್ನು ಹನಿಸಿ ತೇವಾಂಶ ಕಾಪಾಡುತ್ತಿದ್ದರೆ ಎರಡು ತಿಂಗಳಲ್ಲಿ ಒಂದಕ್ಕೆ ಮುನ್ನೂರರಷ್ಟು ಹುಳು ತಯಾರಾಗುತ್ತವೆ. ಆನಂತರ ಇವನ್ನು ಗೊಬ್ಬರ ತಯಾರಿಕೆಗೆ ಬಳಸಬಹುದು.

* ಎರೆಹುಳುಗಳನ್ನು ಇರುವೆ, ಇಲಿ ಹಾಗೂ ಪಕ್ಷಿಗಳಿಂದ ರಕ್ಷಿಸುವುದು ತುಂಬಾ ಮುಖ್ಯ.
=========================================================================
ಅಂಕ್ನಳ್ಳಿ ಜಯರಾಂ
ಗೋವಾ ವಿಜ್ಞಾನ ಕೇಂದ್ರ
ಮರೀನ್ ಹೈವೇ, ಮೀರಾಮಾರ್,
ಪಣಜಿ, ಗೋವಾ-೪೦೩೦೦೧
ಮೊ.ನಂ.೦೯೪೨೦೬೮೫೪೯೫

ಗಡ್ಡ ಮೀಸೆ


ನಮಗೆಲ್ಲ ತಿಳಿದಿರುವಂತೆ ಗಡ್ಡ ಮೀಸೆಗಳು ಬೆಳೆಯುವದು ಗಂಡಸರಿಗೆ ಮಾತ್ರ.ಆದರೆ ಕ್ವಚಿತ್ತಾಗಿ ಸಣ್ಣ ಗಡ್ಡ ಮೀಸೆಗಳಿರುವ ಸ್ತ್ರೀಯರನ್ನು ನೋಡಬಹುದು. ಇದು ಬಹುಶಃ ಪ್ರಕ್ರತಿಯ ವೈಚಿತ್ರ್ಯವೆಂದು ತಿಳಿಯಬೇಕಾದೀತು. ಆದರೆ ವೈದ್ಯರು ಈ ಬಗ್ಗೆ ಬೇರೆಬೇರೆ ಕಾರಣಗಳನ್ನು ಕೊಡಬಹುದು. ಆದು ಏನೇ ಇದ್ದರೂ ಸಹ ಗಡ್ಡ ಮೀಸೆಗಳು ಕೇವಲ ಪುರುಷರ ಆಸ್ತಿ ಎಂಬುದು ನಿರ್ವಿವಾದ. ಸ್ತ್ರೀ ಸ್ವಾತಂತ್ರ್ಯ ಮತ್ತು ಸ್ತ್ರೀ ಸಶಸ್ತ್ರೀಕರಣದ ಈ ದಿನಗಳಲ್ಲಿ ಗಡ್ಡ ಮೀಸೆಗಳ ಮೇಲೆ ಮಾತ್ರ ಸ್ತ್ರೀಯರು ತಮಗೂ ಏನು ಕಡಿಮೆ ಇಲ್ಲವೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ.

ಈ ಬಹುಮೂಲ್ಯ ಆಸ್ತಿಯಾದ ಗಡ್ಡ ಮೀಸೆಗಳು ಪುರುಷರಿಗೆ ಅವರ ಪೌರುಷದ ಮೂಲ ಮತ್ತು ಮೆರೆಯುವ ಸಾಧನಗಳೂ ಆಗಿವೆ. ಭಾರಿ ಮೀಸೆ ಬೆಳೆಸಿ ಅದನ್ನು ಆಗಿಂದಾಗ ಕೈಯಾಡಿಸುತ್ತ ತಿರುಪುವವನು ತಾನು ಜಗತ್ತನ್ನೇ ಎದುರಿಸಬಲ್ಲೆನೆಂದುಕೊಳ್ಳುತ್ತಾನೆ. ಮೀಸೆಯಿಂದ ಭಾರದ ವಸ್ತುಗಳನ್ನು ಎಳೆದು ಎತ್ತಿ ಮಾಡುವವರೂ ಇರುತ್ತಾರೆ. ಮೀಸೆ ಮಣ್ಣಾಗುವದು, ಮೀಸೆ ಬೋಳಿಸುವದು ಮುಂತಾದ ಪದಪುಂಜಗಳು ಮೀಸೆ ಪುರುಷರಿಗೆ ಎಷ್ಟು ಮಹತ್ತ್ವದ್ದು ಎಂಬ ಸಂಗತಿಯನ್ನು ತೋರಿಸಿ ಕೊಡುತ್ತವೆ. ಮೀಸೆಯನ್ನು ಕತ್ತರಿಸಿ ತರತರದ ಆಕ್ರತಿಗಳನ್ನು ಮಾಡಿಕೊಳ್ಳುತ್ತಾರೆ. ಹಿಟ್ಲರನ ಮೂಗಿನ ಕೆಳಗಿನ ಪುಟ್ಟ ನೊಣ ಮೀಸೆ ಸಾಕಷ್ಟು ಪ್ರಚಾರದಲ್ಲಿದೆ. ಒಬ್ಬನು ತನ್ನ ಮೀಸೆಯ ಮೇಲೆ ಕೈ ಹಾಕಿದರೆ ವಿರೋಧಿಗಳು ಅದನ್ನು ಜಗಳಕ್ಕೆ ಆಹ್ವಾನವೆಂದು ತಿಳಿಯಬಹುದು. ಸೈನ್ಯದಲ್ಲಿಯ ಅಧಿಕಾರಿಗಳಿಗೂ ದೊಡ್ಡ ಮೀಸೆಗೂ ಪುರಾತನ ಕಾಲದಿಂದಲೂ ಅತಿಶಯ ಮೈತ್ರಿ ಇದೆ. ಮೀಸೆಯನ್ನು ಕತ್ತರಿಸದೆ ಹಾಗೆಯೇ ಬೆಳೆಯಲು ಬಿಡುವವರೂ ಇದ್ದಾರೆ. ಇಂಥ ಮೀಸೆಯು ಅವರ ಬಾಯಿಯಲ್ಲೂ ಪ್ರವೇಶಿಸುತ್ತದೆ. ಈ ಮೀಸೆಯ ಒಡೆಯನು ತಿಂದು ಕುಡಿದು ಮಾಡಿದ ಪದಾರ್ಥಗಳೆಲ್ಲವೂ ಮೀಸೆಗೂ ಸಹ ಸಿಗುತ್ತವೆ. ಇಂಥ ಮೀಸೆಯನ್ನು ಬೆಳೆಸಿದವರು ತಮ್ಮ ಮೀಸೆಯನ್ನೇ ಕಡಿಯುತ್ತಿರುತ್ತಾರೆ.

ಗಡ್ಡವು ಮೀಸೆಗಿಂತ ಸ್ವಲ್ಪ ಹೆಚ್ಚು ಗಂಭೀರ. ಗಡ್ಡ ಬೆಳೆಸಿದ ಮನುಷ್ಯನನ್ನು ಸಾರ್ವಜನಿಕರು ಬೇರೆ ಬೇರೆ ರೀತಿಯಲ್ಲಿ ಕಾಣುತ್ತಾರೆ. ಗಡ್ಡದ ಬೆಳೆಯನ್ನು ವಿವಿಧ ರೂಪಗಳಲ್ಲಿ ಬೆಳೆಸಿ ಕತ್ತರಸಿ ಇಟ್ಟುಕೊಳ್ಳುತ್ತಾರೆ.ಇದರ ಫ಼್ಯಾಶನ್ನು ಸಹ ಇತರ ಫ಼್ಯಾಶನ್ನುಗಳಂತೆ ಬದಲಾಗುತ್ತಿರುತ್ತದೆ.ಗದ್ದದ ತುದಿಯಲ್ಲಿ ಒಂದು ಸಣ್ಣ ಕೇಶಪುಂಜವನ್ನಿಟ್ಟು ಉಳಿದ ಭಾಗವನ್ನೆಲ್ಲ ತೆಗೆದರೆ ಅದು ಬುಲ್ಗಾನಿನ್ ಗಡ್ಡವೆನ್ನಿಸಿಕೊಳ್ಳುತ್ತದೆ. ಇನ್ನು ಕೆಲವರು ಕಿವಿಯಿಂದ ಬಾಯಿಯವರೆಗೂ ಎರಡೂ ಕಡೆ ಕಾಯ್ದಿರಿಸಿರುತ್ತಾರೆ.ಇತ್ತೇಚೆಗೆ ನಾಲ್ಕಾರು ದಿನಗಳ ಬೆಳವಣಿಗೆಯ ಕುರುಚಲ ಗಡ್ಡವು ಹೆಚ್ಚು ಜನಪ್ರಿಯವಾಗುವಂತಿದೆ. ಕ್ರಿಕೆಟಿಗ ಸಚಿನ ಟೆಂಡುಲ್ಕರನಿಂದ ಈ ಮಾದರಿಯು ಪುರಸ್ಕ್ರತವಾಗುತ್ತಿದೆ.ಅವನ ಅಭಿಮಾನಿಗಳು ಅವನಂತೆ ಆಟವು ಸಾಧ್ಯವಿಲ್ಲವಾದರೆ ಗಡ್ಡವನ್ನಾದರೂ ಬೆಳೆಸಿ ತ್ರ್ರ‍ಪ್ತಿಪಟ್ಟುಕೊಳ್ಳುತ್ತಾರೆ.ಸಂಪೂರ್ಣ ಗಡ್ಡವನ್ನು ಬೆಳೆಸುವ ಕ್ರಮ ಹೆಚ್ಚಾಗಿ ಹಿರಿಯ ನಾಗರಿಕರ ಹಕ್ಕು. ಸನ್ಯಾಸಿಗಳಿಗೂ,ಆಚಾರ್ಯರಿಗೂ, ಗುರುಗಳಿಗೂ ಇದೊಂದು ಗುರುತಿನ ಚಿನ್ಹೆ ಎನ್ನುವಷ್ಟು ಸಾಮಾನ್ಯ.ಸಿಖ್ಖರು ಮಾತ್ರ ಗಡ್ಡ ಮೀಸೆಗಳನ್ನು ತೆಗೆಯುವಂತಿಲ್ಲ. ಮುಲ್ಲಾ, ಮೌಲ್ವಿಗಳಿಗೆ ಅದು ಅವರ ಧಾರ್ಮಿಕ ಸಂಕೇತ ಎನ್ನುವಷ್ಟು ಸಾಮಾನ್ಯ.ಉದ್ದವಾದ ಹೊಟ್ಟೆಯವರೆಗೂ ಬೆಳೆದ ಬಿಳಿಯ ಗಡ್ಡದ ಶೋಭೆಯೇ ಬೇರೆ.

ಗಡ್ಡ ಬೆಳೆಸುವದು ಅತಿ ಸುಲಭ.ಅದಕ್ಕೆ ದುಡ್ಡೂ ಬೇಡ, ಧೂಪವೂ ಬೇಡ. ತನ್ನಷ್ಟಕ್ಕೆ ತಾನೇ ಬೆಳೆಯುತ್ತಿರುತ್ತದೆ.ಆದರೆ ಅದನ್ನು ವ್ಯವಸ್ಥಿತ ರೀತಿಯಿಂದ ನೋಡಿಕೊಳ್ಳದಿದ್ದರೆ ತೊಂದರೆಗಳು ತಪ್ಪಿದ್ದಲ್ಲ. ಗಡ್ಡವನ್ನು ಪ್ರತಿದಿನ ಚೆನ್ನಾಗಿ ಶಾಂಪೂ ಹಚ್ಚಿ ತೊಳೆಯಬೇಕು.ಆ ಮೇಲೆ ಅದನ್ನು ಒಣಗಿಸಬೇಕು. ನಂತರ ಬಾಚಿ ಇಟ್ಟುಕೊಳ್ಳಬೇಕು.ಇದನ್ನೆಲ್ಲ ಮಾಡದಿದ್ದರೆ ಗಂಟು ಗಂಟಾಗಬಹುದು.ಹೇನು,ಕೂರೆ, ಉಣುಗುಗಳೂ ಆಗಬಹುದು. ಗಡ್ಡ ಮೀಸೆಗಳನ್ನು ಪೂರ್ಣವಾಗಿ ಬೆಳೆಸಿದವರು ತಮ್ಮ ಸಂಪತ್ತಿಗೆ ಅದೇ ಸ್ನಾನ ಮಾಡಿಸಿದಾಗ ಸಣ್ಣ ಮಕ್ಕಳು ಅವರನ್ನು ನೋಡಿ ಕಿರುಚಿಕೊಳ್ಳದಿದ್ದರೇ ಆಶ್ಚರ್ಯ. ಅದೇನೇ ಇದ್ದರೂ ಸೊಂಪಾಗಿ ಬೆಳೆದ ಉದ್ದವಾದ ಬಿಳಿಯ ಗಡ್ಡದ ಮೇಲೆ ಕೈ ಆಡಿಸುವಾಗ ಆಗುವ ಹಿತವಾದ ಅನುಭವ ಬಹುಶ: ಗಡ್ಡವನ್ನು ಕಾಪಾಡುವ ಎಲ್ಲ ತೊಂದರೆಗಳನ್ನೂ ಮರೆಯುವಂತೆ ಮಾಡುತ್ತಿರಬಹುದು. ವಿವಿಧ ರೂಪಗಳಲ್ಲಿ ಗಡ್ಡವನ್ನು ಬೆಳೆಸಿದರೆ,ಆಗಲೂ ಅದರ ಯೋಗಕ್ಷೇಮ ನೋಡಿಕೊಳ್ಳಲೇ ಬೇಕು.ಬಾಚುವದು, ಕಟ್ಟುವದು, ಅಲ್ಲದೆ ಪ್ರತಿ ವಾರಕ್ಕೋ,ಹದಿನೈದು ದಿವಸಕ್ಕೋ ಕೇಶ ಸಂಪತ್ತನ್ನು ಸರಿಯಾಗಿ ಕತ್ತರಿಸಬೇಕು.ಇದಲ್ಲದೆ, ತೊಳೆಯುವದು ವಗೈರೆ ಮಾಡಲೇಬೇಕು.

ಒಬ್ಬನ ಮುಖದ ಮತ್ತು ತಲೆಯ ಎಲ್ಲ ಕೂದಲುಗಳೂ ಹಣ್ಣಾಗಿದ್ದವು. ಕಿವಿ ಮುಚ್ಚುವಂತೆ ರುಮಾಲವನ್ನು ಸುತ್ತುತ್ತಿದ್ದ. ಗಡ್ಡ ಮೀಸೆಗಳಿಗೆ ಮಾತ್ರ ಕಪ್ಪು ಬಣ್ಣ ಹಚ್ಚುತ್ತಿದ್ದ. ಒಮ್ಮೆ ಒಂದು ಸಾರ್ವಜನಿಕ ಸ್ಥಳದಲ್ಲಿ ಹೇಗೋ ಅವನ ರುಮಾಲ ಬಿಚ್ಚಿ ಹೋಯಿತು. ಆಗ ತಲೆಯ ಬಿಳಿ ಕೂದಲುಗಳನ್ನು ನೋಡಿದವನೊಬ್ಬ ಕೇಳಿದ. ಏನ್ರೀ ನಿಮ್ಮ ತಲೆಯ ಕೂದಲು ಮಾತ್ರ ಬೆಳ್ಳಗಾಗಿದೆ ? ತಟ್ಟನೆ ಉತ್ತರ ಬಂದಿತು,ತಲೆಯ ಕೂದಲಿಗೆ ೧೫- ೧೬ ವರ್ಷ ವಯಸ್ಸು ಹೆಚ್ಚಿಗೆ ಆಗಿದೆಯಲ್ಲ ಅದಕ್ಕೇ. ಮೂರು ದಿನಗಳ ಗಡ್ಡವಿದ್ದರೆ ಆಲಸಿ ಎನ್ನುತ್ತಾರೆ, ಮೂರು ತಿಂಗಳ ಗಡ್ಡವಿದ್ದರೆ ಹುಚ್ಚನೆನ್ನುತ್ತಾರೆ, ನೀವು ಮೂರು ವರ್ಷ ಗಡ್ಡ ಬೆಳೆಸಿದರೆ ಗುರು ಎಂದು ಜನರು ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ.

ರಾಮಚಂದ್ರ ದೇವ
ಮೀರಾಮಾರ್ ಪಣಜಿ