Saturday, January 16, 2010

ಜೀವನದ ಸಾರ

ಗುರುಹಿರಿಯರಿಗೆ ಎಂದಿಗೂ ಇದಿರಾಡಬೇಡ
ತಾಯಿ ತಂದೆಯರ ಸೇವೆ ನೀ ಮರೆಯಬೇಡ
ಆಸ್ತಿಗಾಗಿ ಸೋದರರೊಡನೆ ನೀ ಕಾದಬೇಡ
ಸತಿಸುತರ ಹೊಣೆ ಪರರಿಗೆ ಕೊಡಬೇಡ

ಮನೆಗೆ ಬಂದ ಅತಿಥಿಗಳ ನೀ ಬೈಯಬೇಡ
ಕೆಳಗೆ ಬಿದ್ದವರ ಕಂಡು ಎಂದೂ ನಗಬೇಡ
ದುರ್ಜನರ ಜೊತೆ ನೀನೆಂದೂ ಕೂಡಬೇಡ
ಸಜ್ಜನರ ಸಂಗವನು ನೀನೆಂದೂ ಬಿಡಬೇಡ

ಮರೆಯದಿರು ಎಂದೂ ಉಪಕಾರ ಮಾಡಿದವರನ್ನು
ಎಂದೆಂದೂ ಮಾಡದಿರು ನೀನ್ಯಾರಿಗೂ ಅಪಕಾರವನ್ನು
ಮಾಡಬೇಡ ಪರರ ಅಂಗನೆಯ ಸಹವಾಸವನ್ನು
ಕರುಬಬೇಡ ಕಂಡು ಇನ್ನೊಬ್ಬರ ಸಂಪತ್ತನ್ನು

ಮಾಡದಿರು ಚುಕ್ಕಾಣಿ ಇಲ್ಲದ ಹಡಗಿನ ಪಯಣವನ್ನು
ನಡೆಸದಿರು ಗುರಿಯಿಲ್ಲದ ನೀರಸ ಜೀವನವನ್ನು
ಫಲದಲ್ಲಿ ನಮಗಿಲ್ಲ ಅಧಿಕಾರ, ಮಾಡಬೇಕು ಕರ್ಮವನ್ನು
ಮಾಡಿಕೊಳ್ಳಬೇಕು ಆತ್ಮೋದ್ಧಾರ ಅರಿತು ಈ ಸತ್ಯವನ್ನು

ಜೀವನದಲಿ ನಾನು ನನ್ನದೆಂಬುವದೆಲ್ಲ ಅಹಂಕಾರ
ನಾನೇ ಎಲ್ಲಗಿಂತ ಮಿಗಿಲು ಎಂಬುದು ದುರಹಂಕಾರ
ದೂಷಿಸಿ ಮಾಡದಿರು ನೀನೆಂದೂ ಯಾರ ತಿರಸ್ಕಾರ
ಅರಿತುಕೊ ನಾವೆಲ್ಲ ಆ ದೇವನ ದೊಡ್ಡ ಅವಿಷ್ಕಾರ

ತಿಳಿದುಕೊ, ಎರಡು ದಿನಗಳ ಸಂತೆ ಈ ನಮ್ಮ ಸಂಸಾರ
ಬಿಟ್ಟುಬಿಡು ಹುಸಿಯ ಜಂಬ ತೊರೆದು ಮಮಕಾರ
ಅರಿತು ಆತ್ಮವನು ಮಾಡಿಕೊ ದೇವರ ಸಾಕ್ಷಾತ್ಕಾರ
ಮರೆಯುದಿರು ಮನುಜ, ಇದುವೆ ಜೀವನದ ಸಾರ


ಸಪ್ಟೆಂಬರ್ ೧೪, ೨೦೦೯ ನಾ ಹರಿಶ್ಚಂದ್ರ

ನಿಮಗೆಷ್ಟು ಗೊತ್ತು? ಕಸದ ಕಿಮ್ಮತ್ತು!

ನಿಮಗೆಷ್ಟು ಗೊತ್ತು? ಕಸದ ಕಿಮ್ಮತ್ತು!
ಲೇಖನ: ಅಂಕ್ನಳ್ಳಿ ಜಯರಾಂ
========================================================================
ಇತ್ತೀಚೆಗೆ ನಗರಗಳಲ್ಲಿ ಕಸ ವಿಲೇವಾರಿ ಸಮಸ್ಯೆ ಬಿಗಡಾಯಿಸಿದೆ. ಈ ಭೀಕರ ಸಮಸ್ಯೆ ನಿವಾರಣೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ನಿತ್ಯ ಉತ್ಪತ್ತಿಯಾಗುವ ಮನೆಯ ಸುತ್ತಲಿನ ಕಸ-ಕೊಳೆಗಳನ್ನು ಅಕ್ಕ-ಪಕ್ಕದವರ ಆಸ್ತಿ ಇಲ್ಲವೆ ಸಾರ್ವಜನಿಕ ಸ್ಥಳಗಳಲ್ಲಿ ಚೆಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣರಾಗುವ ಬದಲು ಕಸದಿಂದ ರಸಭರಿತ ಗೊಬ್ಬರ ತಯಾರಿಸಿ ಹಸಿರು ಅರಳಿಸಬಹುದು. ಈ ನಿಟ್ಟಿನಲ್ಲಿ ಪ್ರಯತ್ನಿಸಿ ಯಶಸ್ಸು ಸಾಧಿಸಿದವರ ಯಶೋಗಾಥೆ ಇಲ್ಲಿದೆ.
=========================================================================
ಕೇವಲ ಮೂರು ಮಂದಿ ಇರುವ ಮನೆಯಲ್ಲಿ ದೊರೆಯುವ ಎಲ್ಲ ಗೃಹ ತ್ಯಾಜ್ಯವೂ ಗೊಬ್ಬರವಾಗಿ ಪರಿವರ್ತನೆಯಾಗುತ್ತಿದೆ. ಇದರಿಂದ ಕೈತೋಟವೂ ಸೊಂಪಾಗಿ ಬೆಳೆದು ಪರಿಸರ ನಿರ್ಮಲವಾಗಿದೆ. ಅಷ್ಟೆ ಅಲ್ಲ, ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗುತ್ತಿರುವುದರಿಂದ ವಾಸನೆಯಿಲ್ಲ. ಹಾಗಾಗಿ ಇಲಿ ಕಾಟವೂ ಇಲ್ಲ. ಸೆಗಣಿ ಗೊಬ್ಬರ ಮತ್ತು ಜೈವಿಕ ದ್ರಾವಣ(ಎಫ಼ೆಕ್ಟೀವ್ ಮೈಕ್ರೊ ಆರ್ಗ್ಯಾನಿಸಮ್-ಇ.ಎಮ್)ವನ್ನು ಆಗಾಗ್ಗೆ ಖರೀದಿಸುವುದು ಬಿಟ್ಟರೆ ಬೇರೆ ಖರ್ಚಿಲ್ಲ ಎನ್ನುತ್ತಾರೆ, ಮಾಪುಸ ಸಮೀಪದ ಮೊಯಿರಾ ಗ್ರಾಮದ ಫೆಲಿಕ್ಸ್ ಡಿ.ಕುನ್ಹಾ. ಹತ್ತು ವರ್ಷಗಳ ಹಿಂದೆ ‘ಗೋವಾ ಪೌಂಡೇಷನ್’ ಸಹಕಾರದಿಂದ ನಾಲ್ಕು ಸಾವಿರ ವೆಚ್ಚದಲ್ಲಿ ನಿರ್ಮಿಸಿಕೊಂಡಿರುವ ಎರೆ ಘಟಕದಿಂದ ಇಷ್ಟೆಲ್ಲ ಅನುಕೂಲವಾಗಿದೆ. ಈ ಊರಲ್ಲಿ ಮೊಟ್ಟಮೊದಲು ಎರೆ ಘಟಕ ಸ್ಥಾಪಿಸಿದ ಹೆಗ್ಗಳಿಕೆಯೂ ಇವರದು!

ಈ ಕುನ್ಹಾ ಮನೆಯಿಂದ ಕಿಲೋ ಮೀಟರ್ ಅಂತರದಲ್ಲಿರುವ ನಿವೃತ್ತ ಶಿಕ್ಷಕಿ ಮಾರಿಯಾ ಕೊಹಿಲೋ ನಾಲ್ಕು ನಾಯಿ ಹಾಗೂ ಎರಡು ಬೆಕ್ಕುಗಳ ಒಡತಿ. ಈಕೆ ತನ್ನ ಮನೆಯ ಒದ್ದೆ ಕಸವನ್ನು ಎರೆ ಘಟಕಕ್ಕೆ ಮೂಲವಸ್ತುವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಮೋಯಿರಾ ಸೇತುವೆಯ ಬಳಿ ಚೆಲ್ಲಪಿಲ್ಲಿಯಾಗಿ ಬೀಳುವ ಕಸವನ್ನೂ ವಾರಕ್ಕೊಮ್ಮೆ ಒಟ್ಟುಗೂಡಿಸಿ ತಂದು ಸಸ್ಯ ರಸಪಾಕ (ಗೊಬ್ಬರ) ತಯಾರಿಸುವ ಇವರ ಜಾಣ್ಮೆಯನ್ನೆಲ್ಲರೂ ಮೆಚ್ಚಲೇಬೇಕು.

ಹಾಗೆಯೇ ಗ್ರಾಮದ ಜನರೊಡನೆ ಸ್ನೇಹದಿಂದ ವರ್ತಿಸಿ, ಅವರ ಮನಗೆದ್ದು ಕಸವನ್ನು ರಸವಾಗಿಸಲು ಪ್ರೇರೇಪಿಸುತ್ತಿರುವವರು ಅಸಗಾಂವ್ ನ ಜಾಯ್ಸಿ ಬ್ರಗಾಂಜ಼ಾ. ಇವರು ತಮ್ಮ ತೋಟದ ಗೇರು ಮರಗಳು ಮತ್ತು ಅಲಂಕಾರಿಕ ಸಸ್ಯಗಳಿಗೆ ಪೋಷಕಾಂಶಗಳನ್ನು ಮನೆಯಲ್ಲಿರುವ ಮೂರು ತೊಟ್ಟಿಯ ಎರೆ ಘಟಕ ಒದಗಿಸುತ್ತಿದೆ ಎಂದು ಸಂತಸಪಡುತ್ತಾರೆ. ಎಪ್ಪತ್ತೊಂಬತ್ತರ ಹರೆಯದ ಇವರು ಎರೆ ಘಟಕ ನಿರ್ವಹಣೆಯಲ್ಲಿ ಇಪ್ಪತ್ತೊಂಬತ್ತರ ಉತ್ಸಾಹ ತೋರುತ್ತಾರೆ.

ಮೋಹನ್ ತೆಂಡುಲ್ಕರ್ ಓರ್ವ ತೋಟಗಾರಿಕೆ ತಜ್ಞ. ಮೋಲ್ಕಾರ್ನೆಮ್ ನ ಇವರು ತಮ್ಮ ತೋಟದ ತೆಂಗು, ಕಂಗು, ಬಾಳೆ, ಗೋಡಂಬಿ ಗಿಡಗಳಿಗೆ ಸಾವಯವ ಗೊಬ್ಬರವನ್ನಷ್ಟೇ ಉಣಿಸುತ್ತಾರಂತೆ. ಎರೆಗೊಬ್ಬರ ತಯಾರಿಕೆಯಲ್ಲಿ ಬಹಳ ನಿಪುಣರಾಗಿರುವ ಇವರು ೨೭ ಚದರ ಮೀಟರ್ ವಿಸ್ತೀರ್ಣದ ಎರೆ ಘಟಕ ಹೊಂದಿದ್ದು ಪ್ರತಿ ವರ್ಷ ೨೦ ಟನ್ ಗಿಂತಲೂ ಹೆಚ್ಚು ಗೊಬ್ಬರ ತಯಾರಿಸುತ್ತಿರುವುದಾಗಿ ತಿಳಿಸುತ್ತಾರೆ.

ಆರಂಭದಲ್ಲಿ ಹಲವು ತೊಡಕುಗಳನ್ನು ಎದುರಿಸಿದ ತೆಂಡುಲ್ಕರ್ ಇಂದು ಒಬ್ಬ ಸಮರ್ಥ ರೈತ ತರಬೇತುದಾರರಾಗಿದ್ದಾರೆ. ಅಷ್ಟೆ ಅಲ್ಲ, ವಿವಿಧ ಘಟಕಗಳಿಗೆ ಎರೆ ಹುಳುಗಳನ್ನೂ ಪೂರೈಸುತ್ತಿದ್ದಾರೆ. ಮನೆಯ ಸುತ್ತಲಿನ ಕಸ ವಿಲೇವಾರಿಗೆ ಸುಲಭ ವಿಧಾನ ‘ಎರೆಘಟಕ’ ಎಂದು ಬಲವಾಗಿ ನಂಬಿರುವ ಇವರು ‘ಸಾಧಾರಣ ಗೊಬ್ಬರಕ್ಕಿಂತಲೂ ತೀವ್ರವಾಗಿ ಎರೆಗೊಬ್ಬರ ತಯಾರಾಗುತ್ತದೆ. ಜೊತೆಗೆ ಮಾರುಕಟ್ಟೆ ಬೇಡಿಕೆಯೂ ಚೆನ್ನಾಗಿದ್ದು ಕಿಲೋ ಒಂದಕ್ಕೆ ೨೦ ರೂ. ನಂತೆ ಮಾರಾಟವಾಗುತ್ತಿದೆ. ಇದನ್ನು ನಾವೇಕೆ ಅನುಸರಿಸಬಾರದು?’ ಎನ್ನುವ ಪ್ರಶ್ನೆಯನ್ನೂ ನಮ್ಮೆದುರಿಗಿಡುತ್ತಾರೆ.

ಇರಲಿ ಮನೆಗೊಂದು ಎರೆಘಟಕ: ‘ನಾವು ಕಸ ಕೊಳೆಗಳನ್ನು ಅಕ್ಕ-ಪಕ್ಕದವರ ಆಸ್ತಿಗೆ ಚೆಲ್ಲುವ ಬದಲು ಅದರಿಂದ ಸತ್ವಭರಿತ ಗೊಬ್ಬರ ತಯಾರಿಸಿ ಬಳಸಬಹುದು’ ಎಂಬುದನ್ನು ಮಾಡಿ ತೋರಿದವರು ಅಂಬೋಲಿಯ ಪಶುವೈದ್ಯ ಡಾ.ಮಹೇಂದ್ರ ಬಾಲೆ. ಇವರ ಪ್ರೇರಣೆಯಿಂದ ನೆರೆಹೊರೆಯಲ್ಲಿ ಏಳು ಎರೆಗುಂಡಿಗಳು ತಲೆ ಎತ್ತಿವೆ. ಜೊತೆಗೆ ‘ಕ್ಯೂಪೆಮ್’ ನ ಶಾಲೆಯಲ್ಲಿ ಮಕ್ಕಳು ಮಾಡಿ ಕಲಿಯಲು ಮುಂದಾಗಿದ್ದಾರೆ.

‘ಎರೆಘಟಕ ನಿರ್ಮಿಸಲು ಸ್ಥಳವಿರಲಿಲ್ಲ. ಹಾಗಾಗಿ ಸೆಪ್ಟಿಕ್ ಟ್ಯಾಂಕ್ ಮೇಲ್ಭಾಗದಲ್ಲೇ ಎರೆ ಘಟಕ ನಿರ್ಮಿಸಿದೆ. ಇದರಿಂದ ನನಗೆ ಯಾವುದೇ ತೊಂದರೆಯಾಗಿಲ್ಲ’ ಎನ್ನುವ ಬಾಲೆ ಎರೆ ಘಟಕವನ್ನು ಮನೆ ಮಂದಿಯೇ ನಿರ್ವಹಿಸುತ್ತಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇವರು ಗೋವಾದ ಪ್ರತಿ ಮನೆಯಲ್ಲೂ ಇಂಥದ್ದೊಂದು ಎರೆ ಘಟಕ ಇರಬೇಕೆಂದು ಪ್ರತಿಪಾದಿಸುತ್ತಾರೆ.

ನಿಜ, ನಮ್ಮ ಸುತ್ತ-ಮುತ್ತ ನಾವೇ ತಿಪ್ಪೆ ಗುಂಡಿ ಸೃಷ್ಟಿಸಿಕೊಂಡು, ವಿಲೇವಾರಿಗೆ ಮಾತ್ರ ನಗರ ಪಾಲಿಕೆಯನ್ನು ದೂಷಿಸುವ ಬದಲು ಹಿತ್ತಲಲ್ಲೊಂದು ಎರೆ ಘಟಕ ನಿರ್ಮಿಸಿ ಕಸದಿಂದ ರಸಭರಿತ ಗೊಬ್ಬರ ತಯಾರಿಸಿ ಹಸಿರು ಅರಳಿಸಬಾರದೇಕೆ?! ಇತ್ತೀಚೆಗೆ ಫ್ಲಾಟ್‍ಗಳಲ್ಲಿ ಕಾಂಪೋಸ್ಟ್ ತಯಾರಿಸಲು ಕಂಬಗಳು ಬಂದಿವೆ. ಕಸ ವಿಲೇವಾರಿಗೆ ಹೇಳಿ ಮಾಡಿಸಿದಂತಿವೆ.
=========================================================================
ಬಾಕ್ಸ್ ಐಟಂ
ಅದ್ಭುತ ಕಸ
~~~~~~~~~
* ಕೃಷಿ, ಗೃಹ ತ್ಯಾಜ್ಯವನ್ನು ಎರೆಹುಳು ಬಳಸಿ ಸಮೃದ್ಧ ಗೊಬ್ಬರ ತಯಾರಿಸುವ ವಿಧಾನವೇ ಎರೆ ಘಟಕ.

* ಎರೆ ಗೊಬ್ಬರ ಸಂಪೂರ್ಣ ಸಾವಯವ, ಪರಿಸರ ಸ್ನೇಹಿ ಗೊಬ್ಬರ. ಇದು ತೇವಾಂಶ ಹಿಡಿದಿಟ್ಟು ಮಣ್ಣನ್ನು ಮೃದುಗೊಳಿಸಿ ಸೂಕ್ಷ್ಮ ಪೋಷಕಾಂಶಗಳನ್ನು ಬೆಳೆಗಳಿಗೆ ನೀಡುತ್ತದೆ.

* ಎರೆ ಘಟಕ(ಗುಂಡಿ)ಕ್ಕೆ ಸೂರ್ಯನ ಬೆಳಕು ನೇರವಾಗಿ ಬೀಳದಂತೆ ಸುಮಾರು ಎಂಟು ಅಡಿ ಎತ್ತರದ ಚಪ್ಪರ ನಿರ್ಮಿಸಿ ಗಾಳಿ ಬೆಳಕು ದೊರೆಯುವಂತೆ ಮಾಡಲು ಸುತ್ತಲೂ ತೆರೆದಿರಬೇಕು.

* ಸಾಮಾನ್ಯವಾಗಿ ೧೨/೧೨ ಅಡಿ ಸುತ್ತಳತೆಯ ಜಾಗದಲ್ಲಿ ೧೦/೦೩ ಅಡಿಯ ಮೂರು ಬೆಡ್ ತಯಾರಿಸಿಕೊಂಡರೆ ಸುಮಾರು ಹತ್ತು ಕ್ವಿಂಟಾಲ್ ತ್ಯಾಜ್ಯವನ್ನು ಗೊಬ್ಬರ ತಯಾರಿಕೆಗೆ ಬಳಸಬಹುದಾಗಿದೆ.

* ಬೆಡ್ ತಳಭಾಗದಲ್ಲಿ ಸ್ವಲ್ಪ ಮರಳನ್ನು ಹರಡಿ ಅದರ ಮೇಲೆ ತ್ಯಾಜ್ಯದ ಹಾಸಿಗೆ ನಿರ್ಮಿಸಿ ೪-೬ ಇಂಚಿನ ತ್ಯಾಜ್ಯದ ಪದರ, ನಂತರ ೧ ಇಂಚಿನ ಸೆಗಣಿ ಗೊಬ್ಬರ-ಹೀಗೆ ಪದರಗಳನ್ನು ನಿರ್ಮಿಸಿ ನೀರಿನಿಂದ ನೆನೆಸಬೇಕು. ಮೇಲ್ಭಾಗದಲ್ಲಿ ತ್ಯಾಜ್ಯದ ಪ್ರಮಾಣಕ್ಕನುಗುಣವಾಗಿ (ಕಿಲೋ ತ್ಯಾಜ್ಯಕ್ಕೆ ೧ರಂತೆ) ಎರೆಹುಳು ಬಿಟ್ಟು ಅದರ ಮೇಲೆ ಗೋಣಿ ಚೀಲವನ್ನು ಮುಚ್ಚಬೇಕು. ಪಕ್ಷಿ ಮತ್ತು ಕೀಟಗಳಿಂದ ಎರೆಹುಳು ರಕ್ಷಿಸಲು ಹಾಗೂ ತೇವಾಂಶ ಕಾಪಾಡಲು ಇದು ಅಗತ್ಯ. ಪ್ರತಿ ದಿನ ಇದರ ಮೇಲೆ ತೇವಾಂಶಕ್ಕೆ ಅಗತ್ಯವಿರುವಷ್ಟು ನೀರನ್ನು ತಪ್ಪದೆ ಹನಿಸಬೇಕು. ಜೊತೆಗೆ
ಹದಿನೈದು ದಿನಕ್ಕೊಮ್ಮೆ ತಳಭಾಗದ ಹಾಸಿಗೆಗೆ ತೊಂದರೆಯಾಗದಂತೆ ತ್ಯಾಜ್ಯವನ್ನು ಮೇಲಿನಿಂದ ಕೆಳಕ್ಕೆ ತಿರುಗಿಸುತ್ತಿರಬೇಕು. ಈ ರ‍ೀತಿ ಮಾಡುವುದರಿಂದ ಎರಡರಿಂದ ಎರಡೂವರೆ ತಿಂಗಳಲ್ಲಿ ಗೊಬ್ಬರ ಸಿದ್ಧವಾಗುತ್ತದೆ.

* ಎರೆಹುಳು ವೃದ್ಧಿ: ಸಮ ಪ್ರಮಾಣದ ಸೆಗಣಿ ಗೊಬ್ಬರ ಮತ್ತು ತ್ಯಾಜ್ಯ ಮಿಶ್ರಣಕ್ಕೆ ಪ್ರತಿ ೫ ಕಿಲೋ ಗೆ ೫೦ ರಂತೆ ಎರೆಹುಳು ಸೇರಿಸಿ ನೆರಳಿನಲ್ಲಿಟ್ಟು ಆಗಾಗ್ಗೆ ನೀರನ್ನು ಹನಿಸಿ ತೇವಾಂಶ ಕಾಪಾಡುತ್ತಿದ್ದರೆ ಎರಡು ತಿಂಗಳಲ್ಲಿ ಒಂದಕ್ಕೆ ಮುನ್ನೂರರಷ್ಟು ಹುಳು ತಯಾರಾಗುತ್ತವೆ. ಆನಂತರ ಇವನ್ನು ಗೊಬ್ಬರ ತಯಾರಿಕೆಗೆ ಬಳಸಬಹುದು.

* ಎರೆಹುಳುಗಳನ್ನು ಇರುವೆ, ಇಲಿ ಹಾಗೂ ಪಕ್ಷಿಗಳಿಂದ ರಕ್ಷಿಸುವುದು ತುಂಬಾ ಮುಖ್ಯ.
=========================================================================
ಅಂಕ್ನಳ್ಳಿ ಜಯರಾಂ
ಗೋವಾ ವಿಜ್ಞಾನ ಕೇಂದ್ರ
ಮರೀನ್ ಹೈವೇ, ಮೀರಾಮಾರ್,
ಪಣಜಿ, ಗೋವಾ-೪೦೩೦೦೧
ಮೊ.ನಂ.೦೯೪೨೦೬೮೫೪೯೫

ಗಡ್ಡ ಮೀಸೆ


ನಮಗೆಲ್ಲ ತಿಳಿದಿರುವಂತೆ ಗಡ್ಡ ಮೀಸೆಗಳು ಬೆಳೆಯುವದು ಗಂಡಸರಿಗೆ ಮಾತ್ರ.ಆದರೆ ಕ್ವಚಿತ್ತಾಗಿ ಸಣ್ಣ ಗಡ್ಡ ಮೀಸೆಗಳಿರುವ ಸ್ತ್ರೀಯರನ್ನು ನೋಡಬಹುದು. ಇದು ಬಹುಶಃ ಪ್ರಕ್ರತಿಯ ವೈಚಿತ್ರ್ಯವೆಂದು ತಿಳಿಯಬೇಕಾದೀತು. ಆದರೆ ವೈದ್ಯರು ಈ ಬಗ್ಗೆ ಬೇರೆಬೇರೆ ಕಾರಣಗಳನ್ನು ಕೊಡಬಹುದು. ಆದು ಏನೇ ಇದ್ದರೂ ಸಹ ಗಡ್ಡ ಮೀಸೆಗಳು ಕೇವಲ ಪುರುಷರ ಆಸ್ತಿ ಎಂಬುದು ನಿರ್ವಿವಾದ. ಸ್ತ್ರೀ ಸ್ವಾತಂತ್ರ್ಯ ಮತ್ತು ಸ್ತ್ರೀ ಸಶಸ್ತ್ರೀಕರಣದ ಈ ದಿನಗಳಲ್ಲಿ ಗಡ್ಡ ಮೀಸೆಗಳ ಮೇಲೆ ಮಾತ್ರ ಸ್ತ್ರೀಯರು ತಮಗೂ ಏನು ಕಡಿಮೆ ಇಲ್ಲವೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ.

ಈ ಬಹುಮೂಲ್ಯ ಆಸ್ತಿಯಾದ ಗಡ್ಡ ಮೀಸೆಗಳು ಪುರುಷರಿಗೆ ಅವರ ಪೌರುಷದ ಮೂಲ ಮತ್ತು ಮೆರೆಯುವ ಸಾಧನಗಳೂ ಆಗಿವೆ. ಭಾರಿ ಮೀಸೆ ಬೆಳೆಸಿ ಅದನ್ನು ಆಗಿಂದಾಗ ಕೈಯಾಡಿಸುತ್ತ ತಿರುಪುವವನು ತಾನು ಜಗತ್ತನ್ನೇ ಎದುರಿಸಬಲ್ಲೆನೆಂದುಕೊಳ್ಳುತ್ತಾನೆ. ಮೀಸೆಯಿಂದ ಭಾರದ ವಸ್ತುಗಳನ್ನು ಎಳೆದು ಎತ್ತಿ ಮಾಡುವವರೂ ಇರುತ್ತಾರೆ. ಮೀಸೆ ಮಣ್ಣಾಗುವದು, ಮೀಸೆ ಬೋಳಿಸುವದು ಮುಂತಾದ ಪದಪುಂಜಗಳು ಮೀಸೆ ಪುರುಷರಿಗೆ ಎಷ್ಟು ಮಹತ್ತ್ವದ್ದು ಎಂಬ ಸಂಗತಿಯನ್ನು ತೋರಿಸಿ ಕೊಡುತ್ತವೆ. ಮೀಸೆಯನ್ನು ಕತ್ತರಿಸಿ ತರತರದ ಆಕ್ರತಿಗಳನ್ನು ಮಾಡಿಕೊಳ್ಳುತ್ತಾರೆ. ಹಿಟ್ಲರನ ಮೂಗಿನ ಕೆಳಗಿನ ಪುಟ್ಟ ನೊಣ ಮೀಸೆ ಸಾಕಷ್ಟು ಪ್ರಚಾರದಲ್ಲಿದೆ. ಒಬ್ಬನು ತನ್ನ ಮೀಸೆಯ ಮೇಲೆ ಕೈ ಹಾಕಿದರೆ ವಿರೋಧಿಗಳು ಅದನ್ನು ಜಗಳಕ್ಕೆ ಆಹ್ವಾನವೆಂದು ತಿಳಿಯಬಹುದು. ಸೈನ್ಯದಲ್ಲಿಯ ಅಧಿಕಾರಿಗಳಿಗೂ ದೊಡ್ಡ ಮೀಸೆಗೂ ಪುರಾತನ ಕಾಲದಿಂದಲೂ ಅತಿಶಯ ಮೈತ್ರಿ ಇದೆ. ಮೀಸೆಯನ್ನು ಕತ್ತರಿಸದೆ ಹಾಗೆಯೇ ಬೆಳೆಯಲು ಬಿಡುವವರೂ ಇದ್ದಾರೆ. ಇಂಥ ಮೀಸೆಯು ಅವರ ಬಾಯಿಯಲ್ಲೂ ಪ್ರವೇಶಿಸುತ್ತದೆ. ಈ ಮೀಸೆಯ ಒಡೆಯನು ತಿಂದು ಕುಡಿದು ಮಾಡಿದ ಪದಾರ್ಥಗಳೆಲ್ಲವೂ ಮೀಸೆಗೂ ಸಹ ಸಿಗುತ್ತವೆ. ಇಂಥ ಮೀಸೆಯನ್ನು ಬೆಳೆಸಿದವರು ತಮ್ಮ ಮೀಸೆಯನ್ನೇ ಕಡಿಯುತ್ತಿರುತ್ತಾರೆ.

ಗಡ್ಡವು ಮೀಸೆಗಿಂತ ಸ್ವಲ್ಪ ಹೆಚ್ಚು ಗಂಭೀರ. ಗಡ್ಡ ಬೆಳೆಸಿದ ಮನುಷ್ಯನನ್ನು ಸಾರ್ವಜನಿಕರು ಬೇರೆ ಬೇರೆ ರೀತಿಯಲ್ಲಿ ಕಾಣುತ್ತಾರೆ. ಗಡ್ಡದ ಬೆಳೆಯನ್ನು ವಿವಿಧ ರೂಪಗಳಲ್ಲಿ ಬೆಳೆಸಿ ಕತ್ತರಸಿ ಇಟ್ಟುಕೊಳ್ಳುತ್ತಾರೆ.ಇದರ ಫ಼್ಯಾಶನ್ನು ಸಹ ಇತರ ಫ಼್ಯಾಶನ್ನುಗಳಂತೆ ಬದಲಾಗುತ್ತಿರುತ್ತದೆ.ಗದ್ದದ ತುದಿಯಲ್ಲಿ ಒಂದು ಸಣ್ಣ ಕೇಶಪುಂಜವನ್ನಿಟ್ಟು ಉಳಿದ ಭಾಗವನ್ನೆಲ್ಲ ತೆಗೆದರೆ ಅದು ಬುಲ್ಗಾನಿನ್ ಗಡ್ಡವೆನ್ನಿಸಿಕೊಳ್ಳುತ್ತದೆ. ಇನ್ನು ಕೆಲವರು ಕಿವಿಯಿಂದ ಬಾಯಿಯವರೆಗೂ ಎರಡೂ ಕಡೆ ಕಾಯ್ದಿರಿಸಿರುತ್ತಾರೆ.ಇತ್ತೇಚೆಗೆ ನಾಲ್ಕಾರು ದಿನಗಳ ಬೆಳವಣಿಗೆಯ ಕುರುಚಲ ಗಡ್ಡವು ಹೆಚ್ಚು ಜನಪ್ರಿಯವಾಗುವಂತಿದೆ. ಕ್ರಿಕೆಟಿಗ ಸಚಿನ ಟೆಂಡುಲ್ಕರನಿಂದ ಈ ಮಾದರಿಯು ಪುರಸ್ಕ್ರತವಾಗುತ್ತಿದೆ.ಅವನ ಅಭಿಮಾನಿಗಳು ಅವನಂತೆ ಆಟವು ಸಾಧ್ಯವಿಲ್ಲವಾದರೆ ಗಡ್ಡವನ್ನಾದರೂ ಬೆಳೆಸಿ ತ್ರ್ರ‍ಪ್ತಿಪಟ್ಟುಕೊಳ್ಳುತ್ತಾರೆ.ಸಂಪೂರ್ಣ ಗಡ್ಡವನ್ನು ಬೆಳೆಸುವ ಕ್ರಮ ಹೆಚ್ಚಾಗಿ ಹಿರಿಯ ನಾಗರಿಕರ ಹಕ್ಕು. ಸನ್ಯಾಸಿಗಳಿಗೂ,ಆಚಾರ್ಯರಿಗೂ, ಗುರುಗಳಿಗೂ ಇದೊಂದು ಗುರುತಿನ ಚಿನ್ಹೆ ಎನ್ನುವಷ್ಟು ಸಾಮಾನ್ಯ.ಸಿಖ್ಖರು ಮಾತ್ರ ಗಡ್ಡ ಮೀಸೆಗಳನ್ನು ತೆಗೆಯುವಂತಿಲ್ಲ. ಮುಲ್ಲಾ, ಮೌಲ್ವಿಗಳಿಗೆ ಅದು ಅವರ ಧಾರ್ಮಿಕ ಸಂಕೇತ ಎನ್ನುವಷ್ಟು ಸಾಮಾನ್ಯ.ಉದ್ದವಾದ ಹೊಟ್ಟೆಯವರೆಗೂ ಬೆಳೆದ ಬಿಳಿಯ ಗಡ್ಡದ ಶೋಭೆಯೇ ಬೇರೆ.

ಗಡ್ಡ ಬೆಳೆಸುವದು ಅತಿ ಸುಲಭ.ಅದಕ್ಕೆ ದುಡ್ಡೂ ಬೇಡ, ಧೂಪವೂ ಬೇಡ. ತನ್ನಷ್ಟಕ್ಕೆ ತಾನೇ ಬೆಳೆಯುತ್ತಿರುತ್ತದೆ.ಆದರೆ ಅದನ್ನು ವ್ಯವಸ್ಥಿತ ರೀತಿಯಿಂದ ನೋಡಿಕೊಳ್ಳದಿದ್ದರೆ ತೊಂದರೆಗಳು ತಪ್ಪಿದ್ದಲ್ಲ. ಗಡ್ಡವನ್ನು ಪ್ರತಿದಿನ ಚೆನ್ನಾಗಿ ಶಾಂಪೂ ಹಚ್ಚಿ ತೊಳೆಯಬೇಕು.ಆ ಮೇಲೆ ಅದನ್ನು ಒಣಗಿಸಬೇಕು. ನಂತರ ಬಾಚಿ ಇಟ್ಟುಕೊಳ್ಳಬೇಕು.ಇದನ್ನೆಲ್ಲ ಮಾಡದಿದ್ದರೆ ಗಂಟು ಗಂಟಾಗಬಹುದು.ಹೇನು,ಕೂರೆ, ಉಣುಗುಗಳೂ ಆಗಬಹುದು. ಗಡ್ಡ ಮೀಸೆಗಳನ್ನು ಪೂರ್ಣವಾಗಿ ಬೆಳೆಸಿದವರು ತಮ್ಮ ಸಂಪತ್ತಿಗೆ ಅದೇ ಸ್ನಾನ ಮಾಡಿಸಿದಾಗ ಸಣ್ಣ ಮಕ್ಕಳು ಅವರನ್ನು ನೋಡಿ ಕಿರುಚಿಕೊಳ್ಳದಿದ್ದರೇ ಆಶ್ಚರ್ಯ. ಅದೇನೇ ಇದ್ದರೂ ಸೊಂಪಾಗಿ ಬೆಳೆದ ಉದ್ದವಾದ ಬಿಳಿಯ ಗಡ್ಡದ ಮೇಲೆ ಕೈ ಆಡಿಸುವಾಗ ಆಗುವ ಹಿತವಾದ ಅನುಭವ ಬಹುಶ: ಗಡ್ಡವನ್ನು ಕಾಪಾಡುವ ಎಲ್ಲ ತೊಂದರೆಗಳನ್ನೂ ಮರೆಯುವಂತೆ ಮಾಡುತ್ತಿರಬಹುದು. ವಿವಿಧ ರೂಪಗಳಲ್ಲಿ ಗಡ್ಡವನ್ನು ಬೆಳೆಸಿದರೆ,ಆಗಲೂ ಅದರ ಯೋಗಕ್ಷೇಮ ನೋಡಿಕೊಳ್ಳಲೇ ಬೇಕು.ಬಾಚುವದು, ಕಟ್ಟುವದು, ಅಲ್ಲದೆ ಪ್ರತಿ ವಾರಕ್ಕೋ,ಹದಿನೈದು ದಿವಸಕ್ಕೋ ಕೇಶ ಸಂಪತ್ತನ್ನು ಸರಿಯಾಗಿ ಕತ್ತರಿಸಬೇಕು.ಇದಲ್ಲದೆ, ತೊಳೆಯುವದು ವಗೈರೆ ಮಾಡಲೇಬೇಕು.

ಒಬ್ಬನ ಮುಖದ ಮತ್ತು ತಲೆಯ ಎಲ್ಲ ಕೂದಲುಗಳೂ ಹಣ್ಣಾಗಿದ್ದವು. ಕಿವಿ ಮುಚ್ಚುವಂತೆ ರುಮಾಲವನ್ನು ಸುತ್ತುತ್ತಿದ್ದ. ಗಡ್ಡ ಮೀಸೆಗಳಿಗೆ ಮಾತ್ರ ಕಪ್ಪು ಬಣ್ಣ ಹಚ್ಚುತ್ತಿದ್ದ. ಒಮ್ಮೆ ಒಂದು ಸಾರ್ವಜನಿಕ ಸ್ಥಳದಲ್ಲಿ ಹೇಗೋ ಅವನ ರುಮಾಲ ಬಿಚ್ಚಿ ಹೋಯಿತು. ಆಗ ತಲೆಯ ಬಿಳಿ ಕೂದಲುಗಳನ್ನು ನೋಡಿದವನೊಬ್ಬ ಕೇಳಿದ. ಏನ್ರೀ ನಿಮ್ಮ ತಲೆಯ ಕೂದಲು ಮಾತ್ರ ಬೆಳ್ಳಗಾಗಿದೆ ? ತಟ್ಟನೆ ಉತ್ತರ ಬಂದಿತು,ತಲೆಯ ಕೂದಲಿಗೆ ೧೫- ೧೬ ವರ್ಷ ವಯಸ್ಸು ಹೆಚ್ಚಿಗೆ ಆಗಿದೆಯಲ್ಲ ಅದಕ್ಕೇ. ಮೂರು ದಿನಗಳ ಗಡ್ಡವಿದ್ದರೆ ಆಲಸಿ ಎನ್ನುತ್ತಾರೆ, ಮೂರು ತಿಂಗಳ ಗಡ್ಡವಿದ್ದರೆ ಹುಚ್ಚನೆನ್ನುತ್ತಾರೆ, ನೀವು ಮೂರು ವರ್ಷ ಗಡ್ಡ ಬೆಳೆಸಿದರೆ ಗುರು ಎಂದು ಜನರು ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ.

ರಾಮಚಂದ್ರ ದೇವ
ಮೀರಾಮಾರ್ ಪಣಜಿ