Saturday, January 22, 2011

ಅಗಣಿತ ನೆನಪಿನ ಗಣಿತಶಾಸ್ತ್ರ

ನಿನ್ನ ನೆನಪುಗಳೆಲ್ಲ ಗಣಿತ ಶಾಸ್ತ್ರದ ತಿರುವುಗಳಂತೆ ಗೆಳೆಯಾ..
ಹಗಲಲ್ಲಿ ಸರಳ, ರಾತ್ರಿಯಿಡೀ ವಕ್ರ ರೇಖೆಯ ಠರಾವು
ಮುಗ್ಧತೆಯ ಚೌಕದಲಿ ನಗೆಯ ಚಿಮ್ಮಿದಾಗ
ಮಿಡಿವ ಎದೆ ವೃತ್ತದಲಿ ಸಂತಸದ ಗುಣಾಕಾರ
ಇಲ್ಲಸಲ್ಲದ ಯೋಚನೆಗಳ ನಡುವೆ ನಿಲ್ಲದ ಯೋಜನೆಗಳ
ಸಮಾನಾಂತರ ರೇಖೆಗಳ ಓಲಾಟ
ಕಳೆದ ಸಮೆಯದ ಲೆಕ್ಕ ಮರಳಿ ಬಾರದ ಉತ್ತರಗಳ
ನೆನೆನೆನೆದು ತೊಳಲಾಡುವಾಗ
ಕನಸುಗಳ ಭಾಗಾಕಾರ
ನೋವುಗಳ ಕಳೆವ ಆಸೆಗಳ ಕೂಡುವ
ಅಂಕಿ ಅಂಶಗಳ ಗುದ್ದಾಟದಲಿ
ಚಿತ್ತದ ಭಿತ್ತಿಯಲಿ ಅಸಂಖ್ಯಾತ ಚುಕ್ಕೆಗಳ ಭಿನ್ನರಾಶಿ
ಭಾವಗಳ ಕರಿಮುಗಿಲು ಹೊದಿಸಿ ಚಾದರ
ಕನಸು ಚದುರಿ ಭ್ರಮೆಯು ಕರಗಿ
ಎಲ್ಲವೂ ಎಲ್ಲದರಲಿ ಒಂದಾಗುತ್ತ
ಕೊನೆಗುಳಿದ್ದಿದ್ದು ನಿರ್ಲಿಪ್ತ ಶೂನ್ಯ ಮಾತ್ರ!

ಸ್ನೇಹಾ ಭಾರ್ಗವ್

ಅಜ್ಜಿಯ ನಗು

ಓ ನವ ನಾಗರಿಕರೇ,
ಧsನದಾಯಿ ದರಿದ್ರರೇ
ಗೊತ್ತೇ ನಿಮಗೆ
ಈ ನಗುವಿನ ಬೆಲೆ-ಎಂದು
ಅಣಕಿಸುತ್ತಿರುವೆಯಾ ಅಜ್ಜಿ ||

ಶ್ರಮಿಕಳಾದರೂ ಬಡವಿ ನೀನು |
ಹೃದಯ ಶ್ರೀಮಂತಿಕೆಯ ಕಡಲು ನೀನು|
ನಗದ ಗುಮ್ಮರಿಗೆ ಪಾಠ ನೀನು |
ನಗುವೆಂಬ ಆಭರಣ ತೊಟ್ಟ
ವೈರಾಗ್ಯಮೂರ್ತಿ ನೀನು||

ಪ್ರೀತಿ-ಪ್ರೇಮ ಮರೆತೋಯ್ತು |
ಯಾಂತ್ರಿಕತೆ ಬದುಕಾಯ್ತು |
ನಗುವ ಪ್ರಮೇಯ ಇಲ್ಲವಾಯ್ತು |
ಆತ್ಮ ವಿಮರ್ಶೆ ಮಾಡಿಕೊಂಡರೆ
ನಕ್ಕಿದ್ದು ಶೂನ್ಯವೆಂದು ಗೊತ್ತಾಯ್ತು ||

ಅಜ್ಜಿ ಓ ಅಜ್ಜಿ
ದಯವಿಟ್ಟು ನಿಲ್ಲಿಸು ನಗುವುದನ್ನು |
ಅಸೂಯೆಯಾಗುತಿದೆ ನಮಗೆ ನೋಡಿ
ನಿನ್ನ ವಿಶಾಲ ಹೃದಯವನ್ನು
ಇನ್ನು ಮುಂದಾದರೂ ಕಲಿಯುತ್ತೇವೆ
ಹೃದಯ ತುಂಬಿ ಅಲ್ಲದಿದ್ದರೂ
ಬಾಯಿತುಂಬ ನಗುವುದನ್ನು ||

ಬುದ್ದೆಪ್ಪ

ಬೇಡುವ ಮಕ್ಕಳು

ಬೇಡುವ ಮಕ್ಕಳ
ಬವಣೆಯ ಚಿತ್ರವಿದು
ಬದುಕುವೆಯಾ ನೀನು
ಬೀದಿಬೀದಿ ತಿರುಗಿ.
ಹೊನ್ನ ಹೂವಿನಂತ
ಎಸಳು ಕೈಗೆ
ನಿನ್ನ ಜೀವದ ಪಾತ್ರೆ
ತುಂಬುವ ಶಕ್ತಿ
ಇದೆಯೆಂದರೆ
ನಂಬಬಲ್ಲುದೇ
ಈ ಜಗದ ವಿಧಿ.
ಆಳೆತ್ತರ ಮೈ ಚಾಚಿ ಸಾಗುವ
ಆ ನಿರ್ಜೀವ ಚಕ್ರಗಳಂತೆ
ನಿನ್ನ ಬದುಕು ನಿನ್ನಗಾಲಿಯ
ಬಿಸಿಲು ನೆರಳಿನ ನಡುವೆ
ಸಾಗುವುದೇ?
ಬಿಸಿಲು ನೆಳಲುಗಳು
ವೃಕ್ಷವಿಲ್ಲದ ಹಸಿರು
ಎದೆಯೊಳಗಿನ ನಿಟ್ಟುಸಿರು

ಪ್ರಿಯಾ ಎಂ. ಭಟ್
ಬರಡು ಬಾಳಿನ ಕೆಸರು
ನಿನಗದುವೇ
ಜೀವಶಕ್ತಿ ನೀರು.
ಬಚುಕಿದರೆ ಮಾನವ
ನಿನ್ನಂತೆ ಧರೆಯಲ್ಲಿ
ಶ್ರಮಜೀವಿಗೆ ಅರೆಹೊಟ್ಟೆ
ಇದು ನಮ್ಮ
ಕರ್ಮ.

ಕಥೆ-ಅಸಹಜ

ನಾನು ತುಂಬಾ ಒಳ್ಳೆಯ ಮನುಷ್ಯ.. ಹಾಗಂತ ಎಲ್ಲರೂ ಹೇಳುತ್ತಾರೆ.. ಅದನ್ನು ಕೇಳಲಿಕ್ಕೆ ಬಹಳ ಖುಷಿಯಂತೂ ಹೌದು..... ಹೆಮ್ಮೆಯೂ ಆಗುತ್ತದೆ...
ಆದರೆ ...
ಆತ್ಮಸಾಕ್ಷಿಯಾಗಿ ನಿಜ ಹೇಳುತ್ತೇನೆ...
ಒಳ್ಳೆಯವನಾಗಿರುವುದು ಒಂಥರಾ ಹಿಂಸೆ ಕಣ್ರೀ... ಕೆಲವು ಸಂದರ್ಭ ಯಾಕಾದ್ರೂ ಒಳ್ಳೆಯವನಾದೆ ಅನ್ನಿಸಿ ಬಿಡುತ್ತದೆ..
ಕೆಲವರು ಹಾಗಿರುವದಿಲ್ಲ ನೋಡಿ...
ಬೇರೆಯವರೆಲ್ಲ ಯಾಕೆ ? ನನ್ನ ಪರಮಾಪ್ತ ಗೆಳೆಯನನ್ನೇ ತೆಗೆದು ಕೊಳ್ಳಿ.. ಜೀವನದ ಪ್ರತಿ ಕ್ಷಣವನ್ನೂ ಸಂತೋಷದಿಂದ ಕಳೆಯುತ್ತಿದ್ದಾನೆ..
ಬಹಳ ಹೆಣ್ಣುಮಕ್ಕಳ ಗೆಳೆತನ ಅವನಿಗಿದೆ...
ಅದು ಕೇವಲ ಗೆಳೆತನ ಅಲ್ಲ ಅಂತ ಎಲ್ಲರಿಗೂ ಗೊತ್ತು...
ಕಾಲೇಜಿನಲ್ಲಿ ಪ್ರತಿವರ್ಷ ಒಂದೊಂದು ಹೆಣ್ಣುಮಕ್ಕಳ ಜೊತೆ ಓಡಾಡಿದ.. ಪ್ರೀತಿ, ಪ್ರೇಮ ಅಂತೆಲ್ಲ ಹೇಳಿಕೊಂಡ... ತಾನು ಮದುವೆಯಾಗುವ ಹೆಣ್ಣನ್ನು ನನ್ನಿಂದ ಸಿಲೆಕ್ಟ್ ಮಾಡಿಸಿದ..!
ಆತ ನನ್ನ ಬಳಿ ಹೇಳಿದ್ದು ಇಷ್ಟೆ...
"ನೋಡೊ... ಬದುಕಿನ ಬಗೆಗೆ ಬಹಳ ತಲೆ ಕೆಡಿಸಿಕೊಂಡವನು ನೀನು...ನನ್ನ ಬದುಕಿನ ಬಗೆಗೆ ನನಗಿಂತ ನಿನಗೆ ಹೆಚ್ಚಿನ ಕಾಳಜಿ ಇದೆ.. ನನ್ನ ಸ್ವಭಾವ ಎಲ್ಲದೂ ನಿನಗೆ ಗೊತ್ತು... ನಾನು ಮದುವೆಯಾಗುವ ಹುಡುಗಿಯನ್ನು ನೀನೇ ನಿರ್ಧರಿಸು... ನಾನು ಕಣ್ಮುಚ್ಚಿ ತಾಳಿ ಕಟ್ಟುತ್ತೇನೆ..."
ನನ್ನ ಗೆಳೆಯನ ಹೆಂಡತಿಯನ್ನು ನಾನೇ ಹುಡುಕಿ ನಿಶ್ಚಯ ಮಾಡಿಕೊಟ್ಟೆ... ಅವನ ಮನೆಯವರು ನೋಡಿ "ಸಂಬಂಧ" ಚೆನ್ನಾಗಿದೆ ಅಂತ ನಿರ್ಣಯಿಸಿದ್ದರು..
ನಾನು ಹೋಗಿ.. ಹುಡುಗಿ ನೋಡಿ... ನನ್ನ ಗೆಳೆಯನಿಗೆ " ಯೋಗ್ಯವಾದ " ಹುಡುಗಿ ಅಂತ ಒಪ್ಪಿಗೆ ಕೊಟ್ಟು ಬಂದಿದ್ದೆ...
ಆತ ಕಣ್ಮುಚ್ಚಿ ತಾಳಿಕಟ್ಟಲಿಲ್ಲ..!
ಮದುವೆಗೆ ಮೊದಲು ಅವಳ ಸಂಗಡನೂ.. ಸಿನೇಮಾ.... ಪಾರ್ಕು.. ಲಾಜ್ ಅಂತೆಲ್ಲ ಓಡಾಡಿದ..!
ವಿಷಯ ಏನು ಗೊತ್ತಾ..?
ಮದುವೆಯಾಗಿ ನಾಲ್ಕೈದು ತಿಂಗಳಾಗಿದೆ... ಇದೀಗ ತಾನೆ ಅವನನ್ನು ಏರ್ ಪೋರ್ಟ್ ಗೆ ಬಿಟ್ಟು ಬರುತ್ತಿದ್ದೇನೆ...ನನ್ನ ಜೊತೆ ಅವನ ಮಡದಿಯೂ ಇದ್ದಾಳೆ..
ಅವನು ತುರ್ತಾದ ಕೆಲಸದ ಮೇಲೆ ಜಪಾನ್ ದೇಶಕ್ಕೆ ಹೋಗುವ ಸಂದರ್ಭ ಬಂತು..
"ನೋಡೊ... ನನಗೇನೂ ಚಿಂತೆಯಿಲ್ಲ...
ಒಂದುವಾರ ಅಷ್ಟೆ ವಾಪಸ್ಸು ಬಂದು ಬಿಡ್ತೇನೆ...
ನೀನಿರ್ತಿಯಲ್ಲ.. ಅವಳಿಗೆ ಧೈರ್ಯ ಹೇಳು..."
ನಾನು ಒಳ್ಳೆಯವನಲ್ಲವೇ.. ಇಂಥಹ ಸಂದರ್ಭಗಳನ್ನು ನಿಭಾಯಿಸಲು ಖುಷಿಯಾಗುತ್ತದೆ.. ಒಳ್ಳೇ ತನದ ಬದುಕು ಸಾರ್ಥಕ ಅನ್ನಿಸುವಂಥಹ ಸಂದರ್ಭಗಳು...
ನಾನು ಕಾರ್ ಡ್ರೈವ್ ಮಾಡುತ್ತಿದ್ದೇನೆ...
ಅವಳನ್ನೊಮ್ಮೆ ಗಮನಿಸಿದೆ...
ಮನದಲ್ಲಿ ಕೆಟ್ಟ ಯೋಚನೆ ಬರುತ್ತಿದೆಯಾ...? ಒಂಟಿ ಹೆಣ್ಣು...! ಯಾರೂ ಇಲ್ಲದ ಸಂದರ್ಭ..!
ಇದು ಕೆಟ್ಟದ್ದು ಅನ್ನಿಸಿದರೂ... ಬೇಡ ಅನ್ನಿಸಿದ್ದರೂ...ಹಿತವಾಗಿತ್ತು....
ತುಂಬಾ ಚೆಲುವೆ...!
ಕಣ್ಣು... ಮೂಗು..!.
ಕೆನ್ನೆಯ ಮೇಲೆ ಆಗಾಗ ಇಳಿದು ಬರುವ ಕೂದಲು...! ಹರವಾದ.... ಬಿಳುಪಾದ... ನುಣುಪಾದ ಗಲ್ಲ......!
ವಾಹ್ !!.....
ಛೇ..!! ಹೀಗೆಲ್ಲ ನೋಡ ಬಾರದು.. ವಿಚಾರವನ್ನೂ ಮಾಡಬಾರದು...
"ನಿಮ್ಮ ಗೆಳೆಯ ಕಾಲೇಜುದಿನಗಳಲ್ಲಿ ಹೇಗಿದ್ದ...?’
ಆಕೆ ನನ್ನ ನೋಟವನ್ನೇ ಗಮನಿಸುತ್ತ ಕೇಳಿದಳು...
" ನನ್ನ ಗೆಳೆಯ ತುಂಬಾ ತುಂಟನಾಗಿದ್ದ.. ಯಾವಾಗಲೂ ಗೆಳೆಯರ ಗುಂಪು ಅವನ ಹಿಂದೆ ಇರ್ತಿತ್ತು...."
".. ಹೆಣ್ಣುಮಕ್ಕಳು...?..? "
ಬಹಳ ತೀಕ್ಷ್ಣವಾಗಿತ್ತು ಅವಳ ಪ್ರಶ್ನೆ...
ನಾನು ತಡವರಿಸಿದೆ...
"ನನಗೆ ಗೊತ್ತು... ನನ್ನವರು ಹೆಣ್ಣುಮಕ್ಕಳ ಸಂಗಡ ಓಡಾಡುತ್ತಿದ್ದರು... ಅವರೇ..ನನ್ನ ಬಳಿ ಹೇಳಿಕೊಂಡಿದ್ದಾರೆ..."
"ಹೌದಾ...? !!..
ಅಪಾರ್ಥ ಮಾಡಿಕೊಳ್ಳ ಬೇಡಿ... ಆತನದು ಬರಿ.. ಸ್ನೇಹ ಅಷ್ಟೆ.. ಪ್ರೀತಿ.., ಪ್ರೇಮ ಏನೂ ಇಲ್ಲವಾಗಿತ್ತು...."
"ಆ ವಯಸ್ಸಿನ ಪ್ರೀತಿ, ಪ್ರೇಮಗಳ ಅರ್ಥ ನನಗೆ ಚೆನ್ನಾಗಿ ಗೊತ್ತು..."
ನಾನು ತಲೆ ಕೆರೆದು ಕೊಂಡೆ...
ಈ ಮಾತನ್ನು ಎಲ್ಲಿಯವರೆಗೆ ಅರ್ಥ ಮಾಡಿಕೊಳ್ಳ ಬಹುದು ಅಂತ ...
ಹೆಣ್ಣು ಮಕ್ಕಳನ್ನು ಅರ್ಥ ಮಾಡಿಕೊಳ್ಳುವದೇ.. ಕಷ್ಟ...
ಗೆಳೆಯನಿದ್ದಾಗ ಅವಳು ಈ ಥರಹದ ಮಾತುಗಳನ್ನು ಯಾವತ್ತೂ ಆಡಿಯೇ ಇಲ್ಲ... ಮಾತು ಬಹಳ ಕಡಿಮೆ...
ಒಂದು ಮುಗಳ್ನಗು.. ಚಂದದ ನೋಟದಲ್ಲಿ ಮಾತು ಮುಗಿಸಿ ಬಿಡುತ್ತಿದ್ದಳು...
" ಹೋಗ್ಲಿ ಬಿಡಿ... ಆಗ ಅಂಥಾದ್ದೇನೂ ನಡೆದಿಲ್ಲ..
ಈಗ ಚೆನ್ನಾಗಿದ್ದಾನಲ್ಲ... ನಿಮ್ಮಿಬ್ಬರ ಪ್ರೀತಿ, ಪ್ರೇಮನೋಡಿ ಖುಷಿಯಾಗುತ್ತದೆ..."
" ಥ್ಯಾಂಕ್ಯೂ...... ನೀವು ಯಾಕೆ ಮದುವೆಯಾಗಿಲ್ಲ...?"
" ನಾನು ಬಯಸುವಂಥಹ ಹುಡುಗಿ ಸಿಕ್ಕಿಲ್ಲ..."
"ಅಥವಾ... ನೀವು ಬಯಸಿದ ಹುಡುಗಿ ನಿಮ್ಮನ್ನು ಬಯಸಲಿಲ್ಲ..... ಅಲ್ಲವಾ?"
"ಓಹ್...! ನನ್ನ ಗೆಳೆಯ ಅದನ್ನೂ ನಿಮಗೆ ಹೇಳಿಬಿಟ್ಟಿದ್ದಾನೋ...ಹೋಗ್ಲಿ ಬಿಡಿ..ಅದೆಲ್ಲ ಈಗ ಯಾಕೆ..?"
"ನೀವು ಗಂಡಸರು ....ನಿಮ್ಮ ಆಸೆ.. ಬಯಕೆಗಳ ಬಗೆಗಷ್ಟೇ ವಿಚಾರ ಯಾಕೆ ಮಾಡುತ್ತೀರಿ...? ಪ್ರತಿ ಹೆಣ್ಣಿಗೂ ಬೇಕು ಬೇಡಗಳಿರುತ್ತವೆ. ಅದರ ಬಗೆಗೆ ಯಾಕೆ ವಿಚಾರ ಮಾಡೋದಿಲ್ಲ...?
ನನಗೆ ಆಶ್ಚರ್ಯವಾಯಿತು...
"ಯಾಕೆ...? ನಿಮಗೆ ಏನಾದರೂ... ಬೇರೆ ಬೇಕು ಬೇಡಗಳಿದ್ದವೆ..? "
" ಇದ್ದವೋ... ಇಲ್ಲವೋ...ಈಗ ಹೇಳಿ ಏನು ಪ್ರಯೋಜನ...? ಒಂದು ನೆಲೆ... ಒಂದು ಬದುಕು ಸಿಕ್ಕಿದೆ... ಬಾಳ ಬೇಕಲ್ಲ... ಇಲ್ಲಿಯೇ.. ಖುಷಿ ಕಾಣ ಬೇಕಲ್ಲ..."
ಅಂದರೆ... .. ಇವಳಿಗೆ ಮನಸ್ಸಿಲ್ಲದ ಮದುವೆಯಾ?
ಅಷ್ಟರಲ್ಲಿ ಮನೆ ಬಂತು...
ನಾನು ಅವಳನ್ನು ಬಿಟ್ಟು ಕೊಡಲು ಹಾಲ್ ತನಕ ಬಂದೆ...
"ನೋಡಿ... ಹೇಗಿದ್ದರೂ.. ಪಕ್ಕದ ಮನೆಯಲ್ಲೇ ಇರ್ತಿನಲ್ಲ...ಏನಾದರೂ ಬೇಕಿದ್ದಲ್ಲಿ ಫೋನ್ ಮಾಡಿ... ತಕ್ಷಣ ಬಂದುಬಿಡುತ್ತೇನೆ..."
"ಊಟ ಮಾಡಿ ಹೋಗಿ... ಬೇಗನೇ.. ಊಟಕ್ಕೆ ತಯಾರು ಮಾಡುತ್ತೇನೆ...ಒಬ್ಬಳೆ ಊಟ ಮಾಡುವದು ಬಲು ಬೋರು...
ನನಗೂ ಸರಿಯೆನ್ನಿಸಿತು....

ಹಾಲಿನಲ್ಲಿ ಕುಳಿತೆ... ಆಕೆ ಟಿವಿ ಆನ್ ಮಾಡಿ ರಿಮೋಟ್ ಕೊಟ್ಟಳು...
ಕಣ್ಣು ಟಿವಿ ನೋಡುತ್ತಿದ್ದರೂ ಮನ ಎಲ್ಲೋ ಓಡಾಡುತ್ತಿತ್ತು...ಮನದಲ್ಲಿ ಕೆಟ್ಟ ಆಲೋಚನೆಗಳು...
ಹೇಳಲಾಗದ ದ್ವಂದ್ವಗಳು...
ಈ ಕೆಟ್ಟ ಮನಸ್ಸು,, ಆಲೋಚನೆಗಳು.. ಖುಷಿ ಕೊಡುವದಂತೂ ನಿಜ...
ಆಕೆ ಲಗುಬಗೆಯಿಂದ ಅಡುಗೆ ರೆಡಿ ಮಾಡಿ ಊಟಕ್ಕೆ ಕರೆದಳು...
ಅವಳು ಸೀರೆ ಉಟ್ಟ ರೀತಿ.... ಇಷ್ಟವಾಗ ತೊಡಗಿತು.....
ನಾನು ಡೈನಿಂಗ್ ಟೇಬಲ್ ಮುಂದೆ ಕುಳಿತೆ...

ಇಂಥಹ ಸಂದರ್ಭ ಮತ್ತೆ ಸಿಗಲಿಕ್ಕಿಲ್ಲ...
ಮನದಲ್ಲಿ ಏನೇನೋ ಯೋಚನೆಗಳು...
ಹೊಸ ಅನುಭವಕ್ಕಾಗಿ ಸಂದರ್ಭವೇ ನನ್ನನ್ನು ಹುಡುಕಿ ಬಂದಂತಿತ್ತು...
" ನಿಮ್ಮನ್ನು ಬಹಳ ದಿನಗಳಿಂದ ಒಂದು ಪ್ರಶ್ನೆ ಕೇಳಬೇಕಿತ್ತು..."
ನನ್ನ ಹೃದಯ ಬಡಿತ ಜೋರಾಯಿತು..
" ಕೇಳಿ... "
"ನೀವು ... ನಿಮ್ಮ ಗೆಳೆಯನಿಗಾಗಿ ಹೆಣ್ಣು ನೋಡಲು ಯಾಕೆ ಬಂದದ್ದು...? ಗೆಳೆಯನಿಗೆ ಬರಲಿಕ್ಕೆ ಏನಾಗಿತ್ತು...?"
"ಸ್ನೇಹ... ಪ್ರೀತಿ...ನಮ್ಮಿಬ್ಬರ ಗೆಳೆತನ.. ಇಬ್ಬರಿಗೂ ಒಬ್ಬರಿಗೊಬ್ಬರ ಋಣದ ಬದುಕು.. ನಂಬಿಕೆ... ವಿಶ್ವಾಸ.. ನಮ್ಮ ಗೆಳೆತನವೇ ಹಾಗಿದೆ.."
ಈ ಮಾತುಗಳನ್ನು ಹೇಳಲು ಬಲು ಕಷ್ಟವಾಯಿತು...
ಈ ಸಂದರ್ಭಕ್ಕೆ ಬೇಡ ಎನಿಸುತ್ತಿದ್ದರೂ ನಾಲಿಗೆ ಗೊತ್ತಿಲ್ಲದಂತೆ ಮಾತು ಆಡುತ್ತಿತ್ತು...
"ಇದು ಒಂದು ಥರಹದ ಮೋಸವಲ್ಲವೆ...? "ತಂಗಿಯನ್ನು ತೋರಿಸಿ ಅಕ್ಕನನ್ನು ಮದುವೆ ಮಾಡಿದರು" ಅನ್ನುವ ಗಾದೆಯ ಹಾಗಾಯ್ತು ಅಲ್ಲವೆ?"
ನಾನು ಅವಕ್ಕಾದೆ...!! ಏನಿದರ ಅರ್ಥ..!!.. ??...
"ನಾನು ಮೊದಲೇ ಹೇಳಿ ಬಂದಿದ್ದೆನಲ್ಲ...
ಮದುವೆ ನನಗಲ್ಲ... ನನ್ನ ಗೆಳೆಯನಿಗೆ ಅಂತ..."
" ನೋಡಿ... ನಾನು ಮೊದಲಿನಿಂದಲೂ ಸ್ವಲ್ಪ ಮಾತಲ್ಲಿ ಜೋರು.. ಮದುವೆಯಾದ ಮೇಲೆ ಸ್ವಭಾವ ಬದಲಿಸಿಕೊಳ್ಳ ಬೇಕಲ್ಲ.. ಹಾಗಾಗಿ ಸುಮ್ಮನಿರುವುದು ಅನಿವಾರ್ಯ.. ಸುಮ್ಮನಿರುತ್ತೇನೆ... ಇವತ್ತು ಸಂದರ್ಭ ಕೂಡಿ ಬಂದಿದೆ.. ಕೇಳಿ ಬಿಡುತ್ತೇನೆ..
ನೀವು ನನ್ನ ಸ್ಥಿತಿಯಲ್ಲಿದ್ದು ವಿಚಾರ ಮಾಡಿ.. ನನ್ನ ಭವಿಷ್ಯದ ಪ್ರೀತಿ... ನನ್ನ ಮುಂದಿನ ಬಾಳಿನ ಸಂಗಾತಿ ನನ್ನನ್ನು ನೋಡಲು ಬರುವದಿಲ್ಲ... ನನ್ನ ಅಂದವನ್ನು..ಚಂದವನ್ನು... ಬೇರೊಬ್ಬರು ಬಂದು ನಿರ್ಣಯಿಸುತ್ತಾರೆ... ನನ್ನ ಬದುಕಿನ ಕನಸನ್ನು ಮದುವೆಗೆ ಮೊದಲು.. ಕೊನೆ ಪಕ್ಷ ನೋಡುವಂಥಹ ಸಂದರ್ಭ ಕೂಡ ನನಗಿರುವದಿಲ್ಲ..."
ನನಗೆ ಪಿಚ್ಚೆನಿಸಿತು...ಅವಳ ಮಾತುಗಳ ಸತ್ಯ ನನ್ನನ್ನು ಇರಿಯಿತು...
ಅವಳೇ.. ಮತ್ತೆ ಮಾತನಾಡಿದಳು..
"ನೀವು ... ನಿಮ್ಮ ಗೆಳೆಯನಿಗಾಗಿ ನನ್ನನ್ನು ನೋಡಿದರೂ... ನನ್ನನ್ನು ನೋಡಿದ್ದು ... ನಿಮ್ಮ ಕಣ್ಣು... ನಿಮ್ಮ ಮನಸ್ಸು... ನಿಮಗೆ "ಇಷ್ಟವಾಗಿದ್ದಕ್ಕೆ" ನನ್ನನ್ನು ಗೆಳೆಯನಿಗಾಗಿ ಸಿಲೆಕ್ಟ್ ಮಾಡಿದ್ದೀರಿ ಅಲ್ಲವಾ?"
ನಾನು ತಡವರಿಸಿದೆ...
"ಸ್ಸಾರಿ... ಆ ಸಂದರ್ಭದಲ್ಲಿ ನಮ್ಮ ಗೆಳೆತನ ಬಿಟ್ಟು ಬೇರೆ ಯೋಚನೆ ಬರಲಿಲ್ಲ..."
ಊಟ ಸೊಗಸಾಗಿತ್ತು..
ದಿನಾ ನನ್ನ ಕೈ ಅಡುಗೆಯ ಸಪ್ಪೆ ಊಟ ನೆನಪಾಯಿತು..
ಆದರೆ..
ಆಸ್ವಾದಿಸುವಂಥಹ ಸವಿಯುವಂಥಹ ವಾತಾವರಣ ಅಲ್ಲಿರಲ್ಲಿಲ್ಲ...
ಇಬ್ಬರದೂ ಊಟವಾಯಿತು...
"ಸರಿ ... ನಾನಿನ್ನು ಹೊರಡುವೆ... ಬಾಗಿಲು ಹಾಕಿಕೊಳ್ಳಿ.."
ಪ್ಲೀಸ್.... ನೀವು ಈ ರಾತ್ರಿ ಇಲ್ಲಿಯೇ ಮಲಗಿ..."
"ಬೇಡಾ... ರಿ.."
ನಾನು ತೊದಲಿದೆ...
ಮತ್ತೆ ಹೇಳಲಾಗದ ಆಸೆ ಗರಿಗೆದರಿತು...!!
"ಪ್ಲೀಸ್.. ಪ್ಲೀಸ್... ನನಗೆ ಬಹಳ ಹೆದರಿಕೆ.."
ಅವಳ ಬೊಗಸೆ ಕಣ್ಣುಗಳಿಗೆ ಇಲ್ಲವೆನ್ನಲಾಗಲಿಲ್ಲ....ದೇವರೇ.. ಏನಾದರೂ ಘಟಿಸಲಿ... !! ಏನಾದರೂ.....ಆಗಿ ಹೋಗಲಿ....! ಅನ್ನುತ್ತಿತ್ತು ಒಳ ಮನಸ್ಸು...!
ಮನಸ್ಸು ಬಯಸಿದ್ದು ಅದನ್ನೇ ಆದರೂ... ಬೇಡವೆನ್ನುವ ಮನಸ್ಸಲ್ಲಿ ಒಪ್ಪಿದೆ...
"ನನಗೆ ಹಾಸಿಗೆ ತರಲು ಸಹಾಯ ಮಾಡಿ...
ದಯವಿಟ್ಟು ಬನ್ನಿ..."
ನಾನು ಅವಳನ್ನು ಹಿಂಬಾಲಿಸಿದೆ...
ನಾವು ಇಬ್ಬರೇ.. !! ಈ ರಾತ್ರಿ... ಈ ಮನೆಯಲ್ಲಿ...!
ಒಂಥರಾ... ಪುಳಕ...! ಅಂಜಿಕೆ.. !!
ಮನದ ಹುಚ್ಚು ಆಲೋಚನೆಗಳಿಂದ ಒಂಥರಾ ಥ್ರಿಲ್ಲಾಯಿತು....
ಹತ್ತಿ ಹಾಸಿಗೆ ಭಾರವಿತ್ತು...ನಾನು ಅದನ್ನು ಎತ್ತುವಾಗ ಅವಳು ಸನಿಹ ಬಂದಳು...
ಅವಳ ಮೈಯಿಂದ ಒಂದು ಥರಹದ ಸುವಾಸನೆ...! ಮತ್ತೇರಿಸುವಂತಿತ್ತು...
ಭಾವನೆಗಳು ಕೆರಳ ತೊಡಗಿದವು... ಹಾಲಿಗೆ ಬಂದು ಇಳಿಸಲು ನೋಡಿದೆ...
ಸಹಾಯಕ್ಕೆ ಅವಳೂ ಬಂದಳು..
ಮತ್ತೆ ಹತ್ತಿರ ಬಂದಳು... ಅವಳ ಸ್ಪರ್ಷದಲ್ಲಿ ರೋಮಾಂಚನೆಯಿತ್ತು..
ಅವಳು ಬೆಡ್ ಶೀಟ್ ಹಾಸ ತೊಡಗಿದಳು.....
ಬಗ್ಗುವಾಗ ನನ್ನನ್ನೇ ನೋಡುತ್ತಿದ್ದಳು...!
ಆ ಬೊಗಸೆ ಕಣ್ಣುಗಳಲ್ಲಿ ಆಸೆ ಇದೆಯಾ? ಏನಿದು ನೋಟ...? ಏನಿದರ ಅರ್ಥ...? ನನ್ನನ್ನು ಬಾ ಎನ್ನುತ್ತಿದೆಯಾ...?
ಹೆಣ್ಣಿನ ಈ ಮೌನ ಭಾಷೆ ಅರ್ಥವಾಗುವಂತಿದ್ದರೆ...?
ನನ್ನ ಕಲ್ಪನೆಯಾ ಇದೆಲ್ಲಾ...? ನಾನು ಸ್ವಲ್ಪ ಧೈರ್ಯ ಮಾಡಿ ಬಿಡಲಾ...?
" ನೀವು ಮಲಗಿ... ಟಿವಿ ಆಫ್ ಮಾಡ್ತೀನಿ...
ಮತ್ತೆ ಏನಾದರೂ ಬೇಕಾ...?"
ನಾನು ಸ್ವಲ್ಪ ಮುಂದೆ ಹೋಗಿ ಅವಳ ಕೈ ಹಿಡಿದು ಕೊಳ್ಳ ಬೇಕು ಅಂದುಕೊಂಡೆ....
ಅಥವಾ ತಬ್ಬಿಕೊಂಡು ಬಿಡಲಾ...?
ಅವಳು ಟಿವಿ ಆಫ್ ಮಾಡಿದಳು...
ನನ್ನ ಗಮನ ಟಿವಿ ಕಡೆ ಸರಿಯಿತು...
ಟಿವಿ ಪಕ್ಕದಲ್ಲಿ ನನ್ನ ಗೆಳೆಯನ ಮದುವೆ ಫೋಟೊ...!
ಅವರಿಬ್ಬರ ಹೆಗಲ ಮೇಲೆ ಕೈ ಹಾಕಿ ನಿಂತಿರುವ ನನ್ನ ಫೋಟೊ...!!
ನನಗೆ ಏನನ್ನಿಸಿತೊ ... !
"ನೀವು ... ಬೆಡ್ ರೂಮ್ ಬಾಗಿಲು ಹಾಕಿಕೊಳ್ಳಿ... ಹೆದರಿಕೆ ಬೇಡ... ನಾನಿದ್ದೇನೆ... ಧೈರ್ಯವಾಗಿರಿ..."
ಅವಳು ನನ್ನನ್ನೊಮ್ಮೆ ನೋಡಿ... ಲೈಟ್ ಆಫ್ ಮಾಡಿ ... ಬೆಡ್ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಳು...
ಹೇಗೋ ... .. ಬೆಳಗಾಯಿತು.. .. ..
ನಾನು ಏಳುತ್ತಿರುವ ಹಾಗೆ ಅವಳು ಘಮಘಮಿಸುವ ಕಾಫೀ ತಂದಿದ್ದಳು...
" ರಾತ್ರಿ ನಿದ್ದೆ ಬಂತಾ...? "
ನಾನು ತಲೆಯಾಡಿಸಿದೆ...
" ನೀವು ... ತುಂಬಾ ಒಳ್ಳೆಯವರು ಕಣ್ರೀ...! ನನ್ನ ಯಜಮಾನ್ರು ನಿಮ್ಮ ಬಗೆಗೆ ಏನು ಹೇಳಿದ್ರು ಗೊತ್ತಾ ? "
" ನನ್ನ ಬಗೆಗಾ ? ಏನು ಹೇಳಿದ್ದ.. ? "
"ನೋಡು .. ಕೆಲವೊಮ್ಮೆ ನನಗೆ .. ನನ್ನ ಮೇಲೇ ...ನಂಬಿಕೆ ಇರುವದಿಲ್ಲ...
ಆದರೆ ...
ನನ್ನ ಗೆಳೆಯ ಹಾಗಲ್ಲ... ಸ್ಪಟಿಕದಂಥಹ ಮನುಷ್ಯ...!! ಶುದ್ಧ ಹೃದಯದ ಸ್ನೇಹ ಆತನದು...!!
ನಿಆ... ನನ್ನವರು ಹೇಳಿದ ಹಾಗೆ .. " ನೀವು ತುಂಬಾ ಒಳ್ಳೆಯವರು ಕಣ್ರೀ..."
ನಾನು ತಲೆಯಾಡಿಸಿದೆ....
ಇದು " ಕಥೆ "

ಪ್ರಕಾಶ ಹೆಗಡೆ

Thursday, January 20, 2011

ನಗು ನಗುತಾ ನಲೀ ನಲಿ........

ಸೌ. ಶೈಲಜಾ ಕಣವಿ
ಮಗು ಕಿಲ ಕಿಲ ನಗು.: ನಗುವುದೇ ಸ್ವರ್ಗ, ಅಳುವುದೇ ನರಕ. ನಗು ಎಲ್ಲರಿಗೂ ಬೇಕು. ನಕ್ಕರೆ ಮುಖದ ಕಾಂತಿ ಹೆಚ್ಚುತ್ತದೆ. ನಗೆ ಅತಿ ಮುಖ್ಯ. ನಾವು ಮತ್ತೊಬ್ಬರನ್ನು ನೋಡಿ ನಗುವುದು ಸರಿಯಲ್ಲ. ಯಾರಾದರೂ ಬಿದ್ದರೆ ನಗುವವರು ಬಹು ಜನ. ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚಾಗುತ್ತದೆ. ನಾಳೆ ನಾವೂ ಬೀಳಬಹುದಲ್ಲವೇ? ಆಗ ಊರೇ ನಗುವುದು. ನಡೆಯುವವನು ಎಡವುವನಲ್ಲದೇ ಕುಳಿತಿರುವವನು ಎಡವುವನೆ? ಕುಳಿತವರ ಮುಂದೆ ಎಡವಿ ಬಿದ್ದರೆ ನಗದೇ ಉಳಿಯುವವರುಂಟೇ?
ಅನೇಕ ವಿಧದ ನಗೆಗಳಿವೆ. ಕಿರುನಗೆ, ತುಂಟನಗೆ, ಮುಗುಳ್ನಗೆ, ಮೆಲುನಗೆ, ವ್ಯಂಗನಗೆ, ಅಟ್ಟಹಾಸದ ರಾಕ್ಷಸ ನಗೆ, ಕುಹಕ ನಗೆ ಮತ್ತು ಮೋಹಕ ನಗೆ. ತುಟಿಯ ಮೇಲೆ ತುಂಟ ಕಿರುನಗೆ, ಕೆನ್ನೆ ತುಂಬಾ ಕೆಂಡ ಸಂಪಿಗೆ ಎನ್ನುವಂತೆ ನಗೆ ಹಿತವಾಗಿದ್ದರೆ ಮುಖದ ಎಲ್ಲ ನರಗಳೂ ಕೆಲಸ ಮಾಡುತ್ತವೆ. ಆಗ ಮನುಷ್ಯರ ವಯಸ್ಸು ಸ್ವಲ್ಪ ಚಿಕ್ಕವರಂತೆ ಕಾಣುತ್ತದೆ. ಒಳಗೆ ಚಿಂತೆಗಳಿದ್ದರೂ ನಗುನಗುತಾ ಇದ್ದರೆ ಆಗ ಸಹಜವಾಗಿ ಕಷ್ಟ ಎದುರಿಸುವ ಧೈರ್ಯ ಬರುತ್ತದೆ.
ನಗುವಾಗ ಎಲ್ಲ ನೆಂಟರು
ಅಳುವಾಗ ಯಾರೂ ಇಲ್ಲ.
ನಮ್ಮ ನಗೆ ಇತರರಿಗೆ ಮಾರಕವಾಗಬಾರದು. ಮತ್ತೊಬ್ಬರನ್ನು ಗೇಲಿ ಮಾಡಿ (ಆಡಿಕೊಂಡು) ನಗುವುದು ಕೆಲವರಿಗೆ ಬಲು ಇಷ್ಟ. ಇಂದಿನ ದಿನಗಳಲ್ಲಿ ಸಾಮಾನ್ಯ ನಗು ಮಾಯವಾಗಿದೆ. ಎಲ್ಲೆಡೆ ಅಟ್ಟಹಾಸದ , ಕುಹಕನಗೆ, ಮತ್ತು ವ್ಯಂಗ್ಯ ನಗೆ ಇವೇ ಹೆಚ್ಚಾಗಿ ಕಾಣಸಿಗುತ್ತದೆ. ಮುಗುಳ್ನಗಲೂ ಸಮಯವಿಲ್ಲ. ಸಂಯಮವೂ ಇಲ್ಲ. ಯಂತ್ರಗಳಂತೆ ದುಡಿದು ಹಣಗಳಿಸುವುದಕ್ಕಾಗಿ ಜನ ತಮ್ಮ ಜೀವನ ಎಂದು ತಿಳಿದಿದ್ದಾರೆ.
ಮನೆಯಲ್ಲಿ ನಗಲು ಸಾಧ್ಯವಿಲ್ಲ ಎಂದು ಹಣ ಕೊಟ್ಟು ಹಾಸ್ಯ ಸಭೆಗಳಿಗೆ ಜನರು ಹೋಗಿ ಅಲ್ಲಿ ನಕ್ಕು ಬರುತ್ತಾರೆ. ಇದಕ್ಕೆ ಕಾರಣ ಮನೆಯಲ್ಲಿ ಎಲ್ಲರೂ ಸೇರಿ ಮಾತನಾಡದೇ ಇರುವುದು. ಈಗ ಎಲ್ಲರೂ ದೂರದರ್ಶನ, ಮೊಬೈಲ್, ದೂರವಾಣಿ ಮತ್ತು ಸಂಪರ್ಕ ಜಾಲಗಳ ಮೋಹಕ್ಕೆ ಒಳಗಾಗಿದ್ದಾರೆ. ಎಲ್ಲರೂ ಒಂದೇ ಮನೆಯಲ್ಲಿದ್ದರೂ ಆ ಮನೆ ಶಾಂತವಾಗಿರುತ್ತದೆ. ಇಲ್ಲವೇ ಮೊಬೈಲ್ ನಲ್ಲಿ ಮಾತನಾಡುತ್ತ ಕೆಲವರು, ಗಣಕಯಂತ್ರದ ಮುಂದೆ ಕೆಲವರು ಕುಳಿತಿರುತ್ತಾರೆ. ಇದಾವುದೂ ಬಾರದ ಮುದುಕರು ದೂರದರ್ಶನ ನೋಡುತ್ತಿರುತ್ತಾರೆ. ಹೀಗಾಗಿ ’ದೂರ ಎನ್ನುವುದು ಹತ್ತಿರ, ಹತ್ತಿರ ಎನ್ನುವುದು ದೂರ’ ಎನ್ನುವಂತಾಗಿದೆ. ಮನೆ ಮಂದಿ ಒಬ್ಬರಿಗೊಬ್ಬರು ಎದುರು ಬದುರು ನಿಂತು ಮಾತನಾಡುವುದು ಕಮ್ಮಿಯಾಗಿದೆ. ಎಲ್ಲೋ ಇರುವವರ ಜೊತೆ ಹರಟುತ್ತಾರೆ. ಎದುರಿಗೆ ಬಂದವರಿಗೆ ಕೈಸನ್ನೆ ತೋರಿಸಿಬಿಡುತ್ತಾರೆ. ಇನ್ನು ನಗುವ ಮಾತೆಲ್ಲಿ!?
ನಗಲು ವಯಸ್ಸಿನ ಮಿತಿಯಿಲ್ಲ. ಜಾತಿಯ ಸೋಂಕಿಲ್ಲ. ಅಕ್ಷರಸ್ಥ ಅನಕ್ಷರಸ್ಥ ಎಂಬ ಭೇದsವಿಲ್ಲ. ಧರ್ಮದ ಅಡೆತಡೆಗಳು, ಗಂಡು ಹೆಣ್ಣೆಂಬ ಭೇದವಿಲ್ಲ. ಆದರೆ ಕೆಲವರು ಸ್ತ್ರೀಯರು ನಕ್ಕರೆ ಕೆಡುತ್ತಾರೆ ಎಂದು ಹೇಳುತ್ತಾರೆ. ಹೆಣ್ಣಿಗೆ ನಗಲು ಹಕ್ಕಿಲ್ಲವೆ? ಸಂದರ್ಭ ಸಿಕ್ಕಾಗ ನಗುವುದು ಸಹಜ. ಕೆಲವೊಮ್ಮೆ ಹಳೆಯ ಘಟನೆಗಳನ್ನು ನೆನಪಿಸಿಕೊಂಡು ನಗುವುದುಂಟು. ಇದಕ್ಕೆ ಗುರು ಬೇಕಿಲ್ಲ. ಸರ್ಕಾರಕ್ಕೆ ಕರ ತೆರಬೇಕಿಲ್ಲ.
ನಕ್ಕರೆ ಮುಪ್ಪು ಸಹ ಮರೆಯುತ್ತದೆ.
ನಮ್ಮಲ್ಲಿ ಏನೂ ಇಲ್ಲ ಎಂದು ಕೊರಗುವ ಬದಲು, ಇದ್ದುದರಲ್ಲಿಯೇ ತೃಪ್ತಿ ಪಟ್ಟುಕೊಳ್ಳುವುದನ್ನು ಕಲಿಯಬೇಕು. ಬೇರೆಯವರ ಏಳಿಗೆ ಕಂಡು ಅಸೂಯೆಪಡಬಾರದು. ಬೇರೆಯವರ ಏಳಿಗೆ ಕಂಡು ಮನದಲ್ಲಿ ಮರುಗುವುದರ ಬದಲು ಇಂದಲ್ಲ ನಾಳೆ ನಾವೂ ಏಳಿಗೆ ಆಗುವೆವು ಎಂದು ತಿಳಿದು ಸಮಚಿತ್ತದಿಂದ ಇರುವುದು ಒಳ್ಳೆಯದು.
ನಗಿಸಲು ನೀನು ನಗುವೆನು ನಾನು
ನಾನೊಂದು ಬೊಂಬೆಯು ನೀ ಸೂತ್ರಧಾರಿ
ನಿನ್ನ ಎದುರು ನಾ ಪಾತ್ರಧಾರಿ ಎನ್ನುವಂತೆ ಎಷ್ಟೆಲ್ಲ ಸಂಪತ್ತಿದ್ದರೂ ನಗೆ ಇಲ್ಲದಿದ್ದರೆ ಅದು ಸುಖ ನೀಡದು. ಬಡತನವೇ ಇರಲಿ ಅಲ್ಲಿ ನಗು ತುಂಬಿದ್ದರೆ ಅದೇ ಸಿರಿತನವಾಗುವುದರಲ್ಲಿ ಸಂದೇಹವಿಲ್ಲ.
ನಗುವುದನು ಕಲಿತವನೆ,
ಬಾಳುವುದ ಅರಿತವನು
ನಗೆಯು ಬರುತಿದೆ ಎನಗೆ
ನಗೆಯು ಬರುತಿದೆ. ಜಗದೊಳಿರುವ ಮನುಜರೆಲ್ಲ
ಹಗರಣ ಮಾಡುವುದ ಕಂಡು,......
ಹಗರಣ ಮಾಡದೇ ಹಣಕ್ಕಾಗಿ ಹಪಾಹಪಿ ಮಾಡದೇ ಜೀವನದಲ್ಲಿ ಸಂತೋಷವಾಗಿ ಎಲ್ಲರೊಡನೆ ನಗುನಗುತಾ ಬಾಳಿದರೆ ಸಂತೋಷವಾಗಿ ಎಲ್ಲರೊಡನೆ ನಗುನಗುತಾ ಬಾಳಿದರೆ ಆ ಬಾಳು ಎಷ್ಟುಚೆನ್ನ ಅಲ್ಲವೆ?
ನಗು ನಗುತಾ ನಲಿ ನಲಿ
ಏನೇ ಆಗಲಿ

ಥೈಲ್ಯಾಂಡ್ ಪ್ರವಾಸ

ಸೌ. ವೀಣಾ ದೇವ್
ದೂರದರ್ಶನದ ಮೇಲೆ ಜಾಹೀರಾತು ಸಾಗಿತ್ತು. ಪತಿ ಹೆಂಡತಿಗೆ ಸ್ವತಃ ಮನೆಗೆಲಸ ಮಾಡಿ ಕೆಲಸದವಳಿಗೆ ಕೊಡುವ ಹಣವುಳಿಸಿ ಸಿಂಗಾಪುರಕ್ಕೆ ಹೋಗಬಹುದೆಂಬ ಇಂಗಿತ ವ್ಯಕ್ತ ಪಡಿಸುತ್ತಿರುವ ಸನ್ನಿವೇಶ. ನಮ್ಮ ಕೆಲಸದವಳು ಗೈರುಹಾಜರಾಗಿ ವಾರವೇ ಕಳೆದು ಹೋಗಿತ್ತು. ಗುಡಿಸುತ್ತಿದ್ದ ಪೊರಕೆಯನ್ನು ಎಸೆದು ಅಲ್ಲೇ ಸೋಪಾದ ಮೇಲೆ ಕುಳಿತು ನೋಡುತ್ತಿದ್ದ ನನ್ನವರ ಕೈಗಳನ್ನು ಅದುಮುತ್ತ ನಾನಂದೆ.
’ನೋಡಿ ಆ ಗಂಡನನ್ನ. ಈಗ ನಾನೂ ಹದಿನೈದು ದಿನ ಮನೆಗೆಲಸ ಮಾಡಬೇಕಿದೆ. ಮುಂದಕ್ಕೂ ಇನ್ನೆಷ್ಟು ದಿನ ಮಾಡಿಕೊಳ್ಳಬೇಕಾಗುತ್ತದೋ ಏನೋ.! ನೀವೂ ನನಗೆ ಸಿಂಗಾಪೂರ ತೋರಿಸಬಹುದಲ್ಲ!
ನಮ್ಮವರು ಸರಿ. ಹೋಗೋಣವಂತೆ. ಎಂದರು.
ಕೆಲವರ್ಷಗಳ ಹಿಂದೆ ಪೂರ್ವ ಏಷಿಯಾದ ಕೆಲ ದೇಶಗಳನ್ನು ಸುತ್ತಿ ಬಂದ ಅವರು ಯಾವಾಗಾದರೊಮ್ಮೆ ಹೇಳುತ್ತಿದ್ದಂತೆಯೇ ಈಗಲೂ ಸುಮ್ಮನೇ ಹೇಳುತ್ತಿದ್ದಾರೆಂದುಕೊಂಡೆ. ಆ ವಿಷಯಕ್ಕೆ ಅಷ್ಟೊಂದು ಮಹತ್ವ ಕೊಡಲಿಲ್ಲ. ಮರೆತೂ ಬಿಟ್ಟೆ. ಆದರೆ ಯಾವದೇವತೆಯೋ ತಥಾಸ್ತು ಎಂದಿರಬೇಕು. ನಮ್ಮವರು ಆ ನಿಟ್ಟಿನಲ್ಲಿ ಚಟುವಟಿಕೆ ಪ್ರಾರಂಭಿಸಿಯೇ ಬಿಟ್ಟರು. ಪ್ರವಾಸೀ ಕಂಪನಿಯೊಂದಕ್ಕೆ ಹೆಸರು ನೊಂದಾವಣೆ ಆಯ್ತು. ಕೊನೆಗೆ ಥೈಲೆಂಡ್, ಮಲೇಶೀಯಾ, ಸಿಂಗಪುರ್ ಪ್ರವಾಸದ ಮೊದಲ ಹೆಜ್ಜೆಯಾದ ಗೋವಾ- ಮುಂಬೈ ವಿಮಾನ ಪ್ರವಾಸ ಪ್ರಾರಂಭವೂ ಆಯ್ತು.

ಥೈಲೆಂಡ್ ಪ್ರವಾಸ.
ಬ್ಯಾಂಕಾಕ್ ಗೆ ಮುಂಬೈಯಿಂದ ರಾತ್ರಿ ಹನ್ನೊಂದು ಮೂವತ್ತೈದಕ್ಕೆ ಹೊರಡುವ ವಿಮಾನ ತಡವಾಗಿ ಹೊರಟಿತು. ಅಲ್ಲಿಯ ಸಮಯ ಭಾರತದಲ್ಲಿಯ ಸಮಯಕ್ಕಿಂತ ಒಂದೂವರೆತಾಸು ಮುಂದಿದೆ. ಐದುಗಂಟೆ ಪ್ರಯಾಣಿಸಿ ಅಲ್ಲಿಯ ಸ್ವರ್ಣಭೂಮಿ ವಿಮಾನ ನಿಲ್ದಾಣ ತಲುಪಿದಾಗ ಬೆಳಗಿನ ಆರುಗಂಟೆ. ಜಗತ್ತಿನ ಯಾವ ಸ್ಥಳದಲ್ಲೂ ನಿತ್ಯ ನೂತನವಾಗಿ ಸುಂದರ, ಹಿತಕರ ಅನುಭವ ನೀಡುವ ಕ್ಷಣಗಳೆಂದರೆ ಮುಂಜಾವೆಂದು ನನ್ನ ಭಾವನೆ. ಕಿಟಕಿಗಳಿಂದ ಬಾನನು ವೀಕ್ಷಿಸುತ್ತಿದ್ದಂತೇ ಇಳಿಯುವ ಸಮಯ ಬಂತು. ನಿಲ್ದಾಣದ ವಿಶಾಲ ಕಟ್ಟಡದಲ್ಲಿ ನಡಿಗೆ. ಚಲಿಸುವ ರಸ್ತೆಗಳಲ್ಲಿ ಮುಂದುರಿದೆವು. ಎದುರಲ್ಲಿ ಎತ್ತರದಲ್ಲಿ ಕಂಡದ್ದು ಶ್ರೀ ವಿಷ್ಣುವಿನ ಎದೆಯಮಟ್ಟದ ಸುಂದರ ಮೂರ್ತಿ. ಂನ್ನದ ಮೆರುಗಿನ ಸುಮಾರು ಐದು ಅಡಿಯ ಮೂರು ಮುಖದ ಚತುರ್ಭುಜ ಮೂರ್ತಿ ದೂರದಿಂದಲೇ ಆಕರ್ಷಿಸುತ್ತದೆ. ಮೂರ್ತಿ, ಅದರ ಮಂಟಪ, ಹೂಬಳ್ಳಿಗಳ ಅಲಂಕಾರ, ಎಲ್ಲವೂ ಇಲ್ಲಿಗೆ ಆಗಮಿಸುವ ಪ್ರವಾಸಿಗಳಿಗೆ ಪೂರ್ವ ಏಷಿಯಾದ ವಿಶಿಷ್ಟ ಕಲೆಯನ್ನು ಪರಿಚಯಿಸುತ್ತವೆ.
ಹೊರಬಂದು ನಮಗಾಗಿ ಸಿದ್ಧವಿರುವ ಹವಾನಿಯಂತ್ರಿತ ಬಸ್ ಏರಿದೆವು. ಸ್ಥಳೀಯ ಮಾರ್ಗದರ್ಶಿ ಒಬ್ಬರು ಜತೆಗೂಡಿದ ನಮ್ಮ ಪ್ರಯಾಣ ಪಟ್ಟಾಯಾಗೆ ಸಾಗಿತು. ಮೂರು ನಾಲ್ಕು ಗಂಟೆಗಳ ಆ ಪ್ರಯಾಣದಲ್ಲಿ ದಾರಿಯುದ್ದಕ್ಕೂ ಆ ಮಾರ್ಗದರ್ಶಿ ಥೈಲೆಂಡಿನ ಬಗ್ಗೆ ಮಾಹಿತಿ ನೀಡುತ್ತಿದ್ದ. ಥೈಲೆಂಡ್ ಎಂದರೆ ’ಸ್ವಾತಂತ್ರ್ಯದ ನಾಡು’ ಎಂದರ್ಥವಂತೆ. ಮೊದಲು ಇದು ಸಯಾಮ ಎಂದು ಕರೆಯಲ್ಪಡುತ್ತಿತ್ತು. ಬಹ್ವಂಶ ಜನ ಬೌದ್ಧ ಧರ್ಮಾನುಯಾಯಿಗಳು. ಧರ್ಮಾಚರಣೆ ಭಾರತೀಯ ದೇವರು ಪುರಾಣ, ಹಿಂದೂ ದೇವರುಗಳನ್ನು ಒಳಗೊಂಡಿದೆ. ಬುದ್ಧನಂತೆಯೇ ವಿಷ್ಣು ರಾಮ ಇವರಿಗೆ ಪವಿತ್ರರು. ರಾಜನಿಂದ ಹಿಡಿದು ಪ್ರತಿಯೋರ್ವನಿಗೂ ಒಂದು ಇಂಗ್ಲೀಷ್ ಇನ್ನೊಂದು ಥಾಯ್ ಹೆಸರಿರುತ್ತದೆ. (ನಮ್ಮ ಮಾರ್ಗದರ್ಶಿ ತನ್ನ ಇಂಗ್ಲೀಷ್ ಹೆಸರು ’ಲಿಯೋ’ ಥಾಯ್ ಹೆಸರು ’ಅನುಷಾ’ ಎಂದ) ಅವನ ರಾಜನ ಹೆಸರು ರಾಮ.(ಇಂಗ್ಲೀಷ್) ಈಗಿನವನು ೯ ನೆಯ ರಾಮ. ’ಭೂಮಿಪುತ್ರ’ ಎನ್ನುವುದು ಥಾಯ್ ಹೆಸರು. ರಾಜನಲ್ಲಿ ಪ್ರಜೆಗಳದು ಅಪಾರವಾದ ಶ್ರದ್ಧೆ. ಅವನನ್ನು ತಂದೆ ತಾಯಿ ಎಂದೇ ತಿಳಿಯುತ್ತಾರೆ. ಆತ ಮಳೆ ಬರಿಸಬಲ್ಲ ಎಂದು ಅವರ ನಂಬಿಕೆ. ಆತನಿಂದ ಶಿರ ಮುಟ್ಟಿಸಿಕೊಂಡ ವ್ಯಕ್ತಿ ತಾನು ಅನುಗ್ರಹೀತನೆಂದು ಭಾವಿಸುತ್ತಾನೆ. ನಮ್ಮಲ್ಲಿಯಂತೆ ಮೆಚ್ಚುಗೆಗಾಗಲೀ ಮುದ್ದಿಗಾಗಲೀ ಯಾರೂ ಇತರರು ತಲೆ ಮುಟ್ಟಿದರೆ ಅವರಿಗೆ ಇಷ್ಟವಾಗುವುದಿಲ್ಲವಂತೆ. ರಾಜನ ಬ್ಯಾಂಕಾಕ್ ಅರಮನೆಯ ಆವಾರದಲ್ಲಿ ಬತ್ತದಗದ್ದೆ, ಪಾಮ್ ತೋಟಗಳನ್ನೊಳಗೊಂಡ ಕೃಷೀ ಕ್ಷೇತ್ರವಿದೆ. ಸ್ವತಃ ರಾಜ ಅದರತ್ತ ಲಕ್ಷ್ಯ ವಹಿಸುತ್ತಾನೆ. ಅವುಗಳ ಬಗ್ಗೆ ಅರಿತುಕೊಳ್ಳ ಬಯಸುವವರು ಪರಿಣತಿ ಗಳಿಸಬೇಕೆನ್ನುವವರಿಗೆ ಅಲ್ಲಿ ಸದಾ ಸ್ವಾಗತವಿದೆ.
ಟೊಯೋಟಾ ಮೋಟಾರುಗಳು (ಐವತ್ತು ಚ.ಕೀ. ಮೀ. ವಿಸ್ತೀರ್ಣದ ಔದ್ಯೋಗಿಕ ವಸಾಹತ್ತಿದೆ.) ಜಸ್ಮಿನ್ ಎಂಬ ಸುವಾಸಿತ ಅಕ್ಕಿ, ರಬ್ಬರು, ಲಾಬ್ಸರ್ ಮುಂತಾದವು ಇಲ್ಲಿ ರಪ್ತಾಗುವ ಮುಖ್ಯ ವಸ್ತುಗಳು. ವಾಹನ ಸಂಚಾರಕ್ಕೆ ಸ್ಕೈ ವೇ’ ( ಫ್ಲೈ ಓವರ್) ಸ್ಕೈ ಟ್ರೇನ್’ ಸಬ್ ವೇ’ ಗಳಿವೆ. ಪಟ್ಟಾಯಾದಿಂದ ಬ್ಯಾಂಕಾಕ್ ಗೆ ಹೋಗುವಾಗ ೫೮ ಕಿ.ಮೀ. ಉದ್ದದ ’ಸ್ಕೈ ಬ್ರಿಜ್’ ಇದ್ದು ಕ್ರಮಿಸಲು ಅರ್ಧ ಗಂಟೆಯೂ ಬೇಕಾಗಲಿಲ್ಲ. ವಿಕಾಸ ಕಾರ‍್ಯಗಳಿಗೆ ಜಪಾನಿನ ಧನಸಹಾಯ ಪಡೆದಿದ್ದು ಮರು ಪಾವತಿಗೆಂದು ರಸ್ತೆಯ ಉಪಯೋಗಕ್ಕೆ ಭಾರೀ ಕರ ತೆರಬೇಕಾಗುತ್ತದೆ. ಆಲವಿದ್ಯುತ್ ಶಕ್ತಿ ಹಾಗೂ ಡೀಝೆಲ್ ವಿದ್ಯುತ್ ಶಕ್ತಿಯ ಪೂರೈಕೆ ಇದ್ದು ವಿದ್ಯುತ್ತು ಒಂದು ದಿನವೂ ಕಡಿತವಾಗುವಂತಿಲ್ಲ. ಮುಂಬರುವ ದಿನಗಳಲ್ಲಿ ’ಎಟೋಮಿಕ್’ ಎನರ್ಜಿ ಯಿಂದ ವಿದ್ಯುತ್ ನ್ನು ಉತ್ಪಾದಿಸುವ ಯೋಜನೆ ಇದೆಯಂತೆ.
ಇಲ್ಲಿರುವ ೭ eleven ಎಂಬ ಅಂಗಡಿಗಳು ಇಪ್ಪತ್ನಾಲ್ಕು ಗಂಟೆಗಳ ಕಾಲ ತೆರೆದಿರುತ್ತವೆ. ಎಲ್ಲ ಜೀವನಾವಶ್ಯಕ ವಸ್ತುಗಳೂ ಅಲ್ಲಿ ಲಭ್ಯ. ಪಟ್ಟಾಯಾ ಕ್ಕೆ ತಲ್ಪಿ ’ನೊಂಗ್ ನೂಚ್ ವಿಲೇಜ್’ ಎಂಬಲ್ಲಿ ನೃತ್ಯ, ಮಾರ್ಶಲ್ ಆರ್ಟ, ಹಿಂದಿ ಚಿತ್ರಗೀತೆಗಳನ್ನೂ ಕೂಡ ಒಳಗೊಂಡ ಸಾಂಸ್ಕೃತಿಕ ಕಾರ‍್ಯಕ್ರಮ, ಆನೆಗಳ ಕ್ರೀಡೆ, ಟ್ರಾಫಿಕಲ್ ಗಾರ್ಡನ್, ಪಾಟರೀ ಗಾರ್ಡನ್, ಗಳಲ್ಲಿ ಕಳೆದ ಕ್ಷಣಗಳು ಅವಿಸ್ಮರಣೀಯ. ಪಾಟರೀ ಗಾರ್ಡನ್ ನಲ್ಲಿ ಪುಟ್ಟ ಪುಟ್ಟ ಮಡಿಕೆ ಕುಡಿಕೆ ಗಳಿಂದ ತಯಾರಿಸಲ್ಪಟ್ಟ ವಾಹನಗಳು ಮಂಟಪಗಳು ಚೈನೀಜ್ ಡ್ರ್ಯಾಗನ್, ಗಳು ಪಕ್ಷಿಗಳು, ವೃಕ್ಷಗಳು ಮುಂತಾದವುಗಳ ರಚನೆಗಳಿವೆ. ಹತ್ತು ಎಕರೆ ಜಾಗದಲ್ಲಿದ್ದ ಈ ತೋಟದ ಉಸ್ತುವಾರಿಯನ್ನು ಓರ್ವ ಸ್ತ್ರೀ ನೋಡಿಕೊಳ್ಳುತ್ತಿದ್ದು ಹದಿನೈದು ನೂರು ಕೆಲಸಗಾರರಿದ್ದು ಅವರಿಗೆ ಎಲ್ಲ ರೀತಿಯ ಸೌಕರ‍್ಯಗಳೂ ಇವೆ.
ಪಟ್ಟಾಯಾ ದ ನಯನ ರಮ್ಯ ಆಲ್ಕಾ ಝಾ ಶೋ ಮೈ ಮರೆಯುವಂತೆ ಮಾಡುತ್ತದೆ. ವಿಶಿಷ್ಟ ವೇಷ ಭೂಷಣಗಳಿಂದ ಕೂಡಿದ ವಿಶೇಷ ಪರಿಣತಿ ಹೊಂದಿದ ಅನೇಕ ಕಲಾಕಾರರು ಅಷ್ಟೊಂದು ಸಹಜತೆಯಿಂದ ನರ್ತಿಸುವಾಗ ಕಣ್ಣೆವೆ ಮುಚ್ಚುವುದನ್ನು ಮರೆತುಬಿಡುತ್ತೇವೆ. ಕಾರ್ಯಕ್ರಮ ಹಾಡು, ನೃತ್ಯ, ಪ್ರಕಾಶ ಯೋಜನೆ, ಸ್ಪೆಶಲ್ ಇಫೆಕ್ಟ್, ಗಳಿಂದ ಕೂಡಿ ಮನಸ್ಸಿಗೆ ಮೋಡಿ ಮಾಡಿ ಮಾಯಾನಗರಿಗೆ ತಲುಪಿಸಿಬಿಡುತ್ತವೆ. ಶೋ ಮುಗಿಸಿ ಭಾರತೀಯ ಭೋಜನ ಗೃಹದಲ್ಲಿ ಊಟ ಮಾಡಿ ಪಂಚತಾರಾಂಕಿತ ಹೋಟೇಲಿನಲ್ಲಿ ಮಲಗಿ ನಿದ್ರಿಸುವಾಗಲೂ ಇಡೀ ದಿನದ ಕಾರ‍್ಯಕ್ರಮದ ಉಜಳಣೆ ಸಾಗಿತ್ತು.
ಮರುದಿನ ಸ್ಫೀಡ್ ಬೋಟ್ ನಿಂದ ಕೋರಲ್ ಆಯ್ಲೆಂಡ್ ಗೆ ಪ್ರಯಾಣ. ಪ್ಯಾರಾಸೇಲೀಂಗ್ ಗಾಜಿನ ತಳವಿದ್ದ ಬೋಟ್ ನಲ್ಲಿ ಪ್ರಯಾಣ ಮಾಡುತ್ತಾ ಸಮುದ್ರ ತಳದ ಜೀವಿಗಳ ಹವಳ ಗಿಡ ಮುಂತಾದ ಅದ್ಭುತ ರಚನೆಗಳ ವೈಭವದ ವೀಕ್ಷಣೆ ಆಯ್ತು. ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ನೀರಲ್ಲಿ ಸಮುದ್ರತಳದ ಮೇಲೆ ಓಡಿಯಾಡಿ ಬಂದರು ಕೆಲವರು. ಧೈರ್ಯ ಸಾಲದ ನನ್ನಂತವರು ಅವರ ಅನುಭವ ಕೇಳಿ ಸಂತೋಷಪಟ್ಟೆವು.
ನಂತರ ಮಿನಿ ಸಂಯಾಮ್ ಗೆ ಭೇಟಿ. ಅಲ್ಲಿ ವಿಸ್ತೀರ್ಣವಾದ ಸ್ಥಳದಲ್ಲಿ ಥೈಲೆಂಡ್ ಹಾಗೂ ಯುರೋಪಕ್ಕೆ ಸಂಬಂಧಪಟ್ಟ ಅನೇಕ ಸ್ಥಳಗಳ ಸೂಕ್ಷ್ಮಾಕಾರದ ಪ್ರತಿಕೃತಿಗಳಿವೆ. ಪ್ರವೇಶದ್ವಾರದಲ್ಲೇ ರಾವಣನ ಇಪ್ಪತ್ನಾಲ್ಕು ಇಪ್ಪತ್ತಾರು ಅಡಿ ಎತ್ತರದ ವರ್ಣರಂಜಿತ ಪ್ರತಿಮೆ ಎದುರಾಗುತ್ತದೆ. ಎಮರಾಲ್ಡ್ ಬುದ್ಧನ ದೇವಾಲಯ, ಕ್ವಾಯ್ ನದಿಯ ಮೇಲಿನ ಸೇತುವೆ, ಚಿನ್ನದ ಸ್ತೂಪಗಳು, ಒಂದು ಕಡೆ ಇದ್ದರೆ ಎಫೆಲ್ ಗೋಪುರ, ಅಮೇರಿಕದ ಸ್ವಾತಂತ್ರ್ಯ ದೇವತೆ, ಲಂಡನ್ನಿನ ಟ್ರಾಮ್ ಬ್ರಿಜ್ ಮುಂತಾದವನ್ನು ಇನ್ನೊಂದು ಕಡೆ ನೋಡಬಹುದು.
ನಂತರ ಥಾಯ್ ಮಸಾಜ್ ನಿಂದ ಇಡೀ ದಿನದ ಶ್ರಮ ಪರಿಹಾರವಾಗುತ್ತದೆ.
ಮರುದಿನ ಪಟ್ಟಾಯಾ ದಿಂದ ಬ್ಯಾಂಕಾಕ್ ಗೆ ಹೊರಟೆವು. ಮಾರ‍್ಗದಲ್ಲಿ ಜಗತ್ತಿನಲ್ಲೇ ಅತೀ ದೊಡ್ಡದೆಂದು ಖ್ಯಾತಿ ಪಡೆದ ’ಜೆಮ್ಸ್ ಗ್ಯಾಲರಿ’ಯನ್ನು ನೋಡಿದೆವು. ಗಣಿಗಳಿಂದ ಪಡೆಯುವ ಮೂಲವಸ್ತುವಿನಿಂದ ಹಿಡಿದು ವಜ್ರವೆಂದು ಕಣ್ಣು ಕೋರೈಸುವ ಆಕರ್ಷಕ ರೂಪವನ್ನು ಪಡೆಯುವವರೆಗಿನ ವಿವಿಧ ಹಂತಗಳ ಪರಿಚಯ ಆಯಿತು. ಇಷ್ಟೊಂದು ವಿಶಾಲವಾದ ಮಳಿಗೆ ಇದೆ ಎಂದಮೇಲೆ ಚಿನ್ನ-ಬೆಳ್ಳಿ - ವಜ್ರದ ಬೇಡಿಕೆಯ ಪ್ರಮಾಣ ನೋಡಿ ಆಶ್ಚರ್ಯವಾಯ್ತು. ಸಂಜೆ, ’ಚಾವೋ ಫ್ರಾಯಾ ರಿವರ್ ಕ್ರೂಜ್’ ಸಂಗೀತ ಊಟದ ಜೊತೆಗೆ, ನದಿಯ ಇಕ್ಕೆಲದಲ್ಲೂ ಇರುವ ನದಿಯಲ್ಲಿ ಪ್ರತಿಬಿಂಬಿಸುತ್ತಿರುವ ಜಗಮಗಿಸುವ ದೀಪಾಲಂಕಾರದ ದೇವಾಲಯ, ಭವನ ಮುಂತಾದವನ್ನು ನೋಡುತ್ತ, ವಿರಾಮವಾಗಿ ಕಾಲ ಕಳೆದೆವು.
ಬ್ಯಾಂಕಾಕಿನ ಸಫಾರಿ ವರ್ಲ್ಡ ನಲ್ಲಿ ಸ್ವೇಚ್ಛೆಯಿಂದ ಸಂಚರಿಸುತ್ತಿರುವ ಪಶು ಪಕ್ಷಿಗಳ ನೋಟ ಚೆನ್ನಾಗಿತ್ತು. ಅಲ್ಲಿಯ ಶೌಚಾಲಯಕ್ಕೆ ವಿಶ್ವದ ಅತೀ ಉತ್ಕೃಷ್ಟ ಶೌಚಾಲಯ ಎಂಬ ಸನ್ಮಾನ ದೊರೆತಿದೆಯಂತೆ. ಮರೀನ್ ಪಾರ್ಕ ಓರಾಂಗ- ಓಟಾಂಗ,-ಸೀಲಾಯನ್- ಡಾಲ್ಫಿನ್ ಗಳ ಚಾಕಚಕ್ಯತೆ ತುಂಬಿದ ಕ್ರೀಡಾ ಪ್ರದರ್ಶನ, ಕೌಬಾಯ್ ಶೋ, ಎಲ್ಲ ಮನರಂಜನೆ ನೀಡಿದವು.
ಬ್ಯಾಂಕಾಕ್ ನಲ್ಲಿಯ ದೊಡ್ಡ ಮಾಲ್ ಗಳಲ್ಲಿ ಎಮ್. ಬಿ. ಕೆ . ಎನ್ನುವುದೊಂದು. ಅಲ್ಲಿ ಎಂಟುಸಾವಿರ ಅಂಗಡಿಗಳಿದ್ದು ಹೇರ್‌ಪಿನ್ನಿನಿಂದ ಹಿಡಿದು ಹೆಲಿಕ್ಯಾಪ್ಟರ್ ವರೆಗಿನ ಎಲ್ಲಾ ಸರಕು ಅಲ್ಲಿ ಲಭ್ಯವಿದೆಯಂತೆ.
ನಗರ ದರ್ಶನದಲ್ಲಿ ’ಪ್ರಿನ್ಸಿಪಲ್ ಬುದ್ಧ ಅಯ್ದುವರೆ ಟನ್ನಿನ ೪೬ ಮೀ. ಉದ್ದ, ೧೫ಮೀ. ಎತ್ತರದ ’ರಿಕ್ಲ್ಯಾನಿಂಗ್ ಬುದ್ಧನ’ ದರ್ಶನವೂ ಆಯ್ತು. ಮಕ್ಕಳಾಗದವರು ಸಂತತಿಗಾಗಿ ಮೊರೆಹೋಗುವ ಶಿವಲಿಂಗವೂ ಅಲ್ಲಿದೆ.
ಬ್ಯಾಂಕಾಕ್ನಲ್ಲಿ ಮೂರುಸಾವಿರ ಗಗನಚುಂಬಿ ಕಟ್ಟಡಗಳಿವೆಯಂತೆ. ಸ್ಕ್ಯೆ ಬಯೋಕೆ ಎನ್ನುವ ಅತೀ ಎತ್ತರದ ಕಟ್ಟಡದ ಎಂಬತ್ನಾಲ್ಕನೆಯ ಮಹಡಿಯ ಮೇಲಿನ ಭ್ರಮಣಿಸುವ ಒಬ್ಜರ‍್ವೇಟರ್ ಡೆಕ್ ನಿಂದ ಸಮಗ್ರ ಬ್ಯಾಂಕಾಕ್ನ ವೀಕ್ಷಣೆ ಮಾಡಬಹುದು. ಮೇಲೇರಲು ಎಪ್ಪತ್ತೇಳನೆಯ ಮಹಡಿಯವರೆಗೆ ಒಂದು ಹಾಗೂ ಎಂಬತ್ಮೂರನೆಯ ಮಹಡಿಯವರೆಗೆ ಇನ್ನೊಂದು ಲಿಪ್ಟ್ ಇವೆ.
ಇಂದ್ರ ಸ್ಕ್ವೇರ್ ಎನ್ನುವ ಇನ್ನೊಂದು ಸ್ಥಳವೂ ಪ್ರವಾಸಿಗರು ಖರೀದಿಗೆ ಹೋಗುವ ಜನಪ್ರಿಯ ಸ್ಥಳ. ಪ್ರವಾಸಿಗರು ಥೈಲೆಂಡ್ ನಲ್ಲಿ ಥೈ ಸಿಲ್ಕ್ ಹಾಗೂ ಹತ್ತಿಬಟ್ಟೆ, ಬೆಲೆಬಾಳುವ ಹರಳುಗಳು, ಬಾಟಕ್, ಗೊಂಬೆಗಳು, ಹಾಗೂ ಮುಖವಾಡಗಳನ್ನು ಕೊಂಡುಕೊಳ್ಳುತ್ತಾರೆ. ಇಲ್ಲಿಯ ಚಲಾವಣೆಗೆ ಬಾಹ್ಟ್ ಎನ್ನುತ್ತಾರೆ. ಒಂದು ಬಾಹ್ಟ್ ಗೆ ಒಂದೂವರೆ ರೂ ಆಗುತ್ತದೆ.
ಇಲ್ಲಿ ಸ್ತ್ರೀ ಯರ ಜನಸಂಖ್ಯೆ ಪುರುಷರ ಸಂಖ್ಯೆಯ ಎರಡುಪಟ್ಟು. ಅಂಗಡಿಮುಂಗಟ್ಟು, ಹೊಟೇಲು, ಎಲ್ಲ ಕಡೆ ಸ್ತ್ರೀಯರೇ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಾರೆ. ಔಪಚಾರಿಕ ಸ್ಥಳಗಳಲ್ಲಿ ಸ್ವಾಗತ ಕಕ್ಷೆ, ಮದುವೆ ಮುಂತಾದ ಸಮಾರಂಭದಲ್ಲಿ ವೈಭವಯುತ ಜರತಾರಿ ರೇಶ್ಮೆಯ ಲುಂಗಿಯಂತ ಉಡುಗೆ, ತುಂಬುತೋಳಿನ ಉದ್ದವಾದ ಬ್ಲೌಜನ್ನು ಧರಿಸುತ್ತಾರೆ. ಮಿಕ್ಕಂತೇ ಪಾಶ್ಚಾತ್ಯ ಉಡುಪೇ ಹೆಚ್ಚು. ನನ್ನ ಗಮನಕ್ಕೆ ಬಂದ ಒಂದು ಸಂಗತಿಯೆಂದರೆ ನಮ್ಮಲ್ಲಿಯಂತೆ ಅಲ್ಲಿ ಎಲ್ಲೂ ವೃತ್ತ ಪತ್ರಿಕೆಗಳಾಗಲೀ ಮಾರುವವರಾಗಲೀ ಕಂಡುಬರಲಿಲ್ಲ. ಹೊಟೆಲ್ಲು, ಉಪಹಾರಗೃಹಗಳಲ್ಲಿ ಅವು ಕಂಡುಬರುವುದಿಲ್ಲ. ಬೆಲೆಯೂ ತುಂಬಾ ಜಾಸ್ತಿ. ಇಪ್ಪತ್ತೈದು, ಮುವ್ವತ್ತೈದು ರೂ.
ಪರವೂರು ಪರದೇಶಗಳಿಗೆ ಹೋಗುವವರ ಮನದಲ್ಲಿ ಅಲ್ಲಿ ಊಟ ತಿಂಡಿಗಳ ಬಗ್ಗೆ ಶಂಕೆ ಇದ್ದೇ ಇರುತ್ತದೆ. ಹೋಗಿ ಬಂದ ಅನುಭವ ಹಂಚಿಕೊಳ್ಳುವವರಿಗೆ ಕೇಳುವ ಪ್ರಶ್ನೆಗಳಲ್ಲಿ ಇದು ತಪ್ಪದೇ ಇರುವಂತ ಪ್ರಶ್ನೆ. ಪೂರ್ಣ ಶಾಕಾಹಾರೀ ಭಾರತೀಯ ಭೋಜನಾಲಯಗಳು ಇವೆ. ಇತರೆಡೆಯಲ್ಲೂ ವಿವಿಧ ಬ್ರೆಡ್‌ಗಳು, ಪೂರಿ, ಪಂಜಾಬೀ ಶಾಖಾಹಾರೀ ಪಲ್ಯಗಳು ಹೇರಳ ಹಣ್ಣು ಹಂಪಲುಗಳು, ಹಣ್ಣಿನರಸ, ಹಾಲು, ಮೊಸರು, ಲಭ್ಯ. ಅಲ್ಲಿಯ ವಿಶಿಷ್ಟ ಸಾಮಿಷ ಹಾಗೂ ಸಮುದ್ರಜನ್ಯ ಜೀವಿಗಳ ಪದಾರ್ಥಗಳೂ ಪ್ರವಾಸಿಗರ ಮೆಚ್ಚುಗೆ ಗಳಿಸಿವೆ.
ನಾವು ತಂಗಿದ ಎಲ್ಲ ಹೊಟೇಲ್ಲುಗಳ ಕೋನೆಯಲ್ಲಾಗಲೀ ಸ್ವಾಗತ ಕಕ್ಷದಲ್ಲಾಗಲೀ ಲಾಕರ್ ಗಳು ಇದ್ದದರಿಂದ ಬೆಲೆಬಾಳುವ ವಸ್ತು, ಹೆಚ್ಚಿನ ಹಣ, ಮುಖ್ಯವಾಗಿ ಪಾಸ್ ಪೋರ್ಟ ಗಳನ್ನು ಭದ್ರವಾಗಿಸಿಟ್ಟು ಹಾಯಾಗಿ ತಿರುಗಾಟ ಮಾಡಬಹುದು.
ತಮ್ಮ ಮನೋರಾಜ್ಯದಲ್ಲೇ ನಮ್ಮೊಡನೆ ಎಲ್ಲಡೆಯ ಸಂಚಾರದ ಅನುಭವ ಸವಿಯುತ್ತಲಿದ್ದ (ಹಾಗೆಂದು ನಂಬಿದ್ದೇನೆ) ಓದುಗರಿಗೆ ಒಮ್ಮೇಲೆ ದುರ್ವಾರ್ತೆ ಕೇಳಿದಂತಾಗಬಾರದೆಂದು ಒಂದು ವಿಷಯ ಸ್ವಲ್ಪ ಮರೆಮಾಚಿದ್ದೆ. ಥೈಲೆಂಡಿನ ಮನೋರಂಜನಾ ಕ್ಷೇತ್ರ, ಅತಿಥಿ ಸತ್ಕಾರ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವ್ಯಕ್ತಿ (ತರುಣಿಯರು)ಗಳಲ್ಲಿ ಬಹ್ವಂಶ ಹಿಬ್ರಾ ( ಣಡಿಚಿಟಿಛಿe zeಟಿಜeಡಿs) ಗಳೆಂದು ಕೇಳಿ ಮನ ನೊಂದಿತು. (ಅವರನ್ನು ಲೇಡೀ ಬಾಯ್ಸ್) ಎನ್ನುತ್ತಾರೆ. ಸೌಂದರ‍್ಯ ಹಾಗೂ ನೃತ್ಯ ಸಂಗೀತದಂತ ಕಲೆಯನ್ನು ಮುಕ್ತ ಹಸ್ತದಿಂದ ಅವರಿಗೆ ನೀಡಿದ ದೇವರು ಈ ಶಿಕ್ಷೆಯನ್ನೇಕೆ ವಿಧಿಸಿದ ಎಂದು ಮತ್ತೆ ಮತ್ತೆ ಕೇಳಿಕೊಂಡೆ. ಒಂದು ಸಮಾಧಾನ ಎಂದರೆ ಅಲ್ಲಿ ಸಮಾಜ ಅವರನ್ನು ಬೇರೆಯವರೆಂದು ನೋಡುವುದಿಲ್ಲ. ಅವರೂ ಸಹಜತೆಯಿಂದಲೇ ವ್ಯವಹರಿಸುವುದರಿಂದ ಮುಜುಗರ ಎನಿಸುವುದಿಲ್ಲ.
ಥೈಲೆಂಡಿನ ಐದು ದಿನಗಳ ವಾಸ ಮುಗಿಸಿ ಮರುದಿನ ಕೌಲಾಲಾಂಪೂರಿಗೆ ಹೊರಟೆವು..

ವೇದಗಣಿತ ಋಷಿ - ಪ.ಪೂ. ಭಾರತೀಕೃಷ್ಣತೀರ್ಥರು


ಸನಾತನ ಕಾಲದಿಂದಲೂ ಭರತ ಭೂಮಿ ಜ್ಞಾನ ವಿಜ್ಞಾನಗಳ ನೆಲೆವೀಡು. ಭಾರತೀಯರು ಒಂದೆಡೆ ಆಧ್ಯಾತ್ಮ ಸಾಧನೆಯ ಮೂಲಕ ಪಾರಮಾರ್ಥಿಕ ಸುಜ್ಞಾನದ ಗೌರೀಶಂಕರವನ್ನೇರಿ ಮೆರೆಯುತ್ತಿದ್ದರೆ ಇನ್ನೊಂದೆಡೆ ಐಹಿಕ ಸುಖೋಪಭೋಗವನ್ನು ನೀಡುವ ವಿಜ್ಞಾನದ ಮೇರುಶಿಖರದ ಮೇಲೆಯೂ ವಿಜೃಂಭಿಸುತ್ತಿದ್ದಾರೆ. ಹೊರ ನೋಟಕ್ಕೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಪ್ರವಹಿಸುತ್ತಿರುವಂತೆ ತೋರುವ ಆಧ್ಯಾತ್ಮ ಮತ್ತು ವಿಜ್ಞಾನ ಪ್ರವಾಹಗಳು ಅಂತಿಮವಾಗಿ ಪರಮಾನಂದ ಸಾಗರವನ್ನೇ ಸೇರುತ್ತವೆ ಎಂಬುದು ಭಾರತೀಯ ಸಂಸ್ಕೃತಿಯ ವಿಶೇಷತೆ. ಅಂತೆಯೇ ಸನಾತನ ಕಾಲದಿಂದಲೂ ಆಧ್ಯಾತ್ಮ ಸಾಧನೆಗೈಯುತ್ತಲೇ ಲೌಕಿಕ ವಿಚಾರದಲ್ಲಿಯೂ ಕೃತಪರಿಶ್ರಮರಾದ ಋಷಿ ಪರಂಪರೆ ನಮ್ಮೀ ನಾಡಿನಲ್ಲಿ ಪ್ರವಹಿಸುತ್ತದೆ. ಅಂತಹ ಪರಂಪರೆಯಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ಅವತರಿಸಿದವರು ಪ್ರಾಚೀನ ಅರ್ವಾಚೀನ ಜ್ಞಾನಸೇತುವಾಗಿ ಸುಜ್ಞಾನ - ವಿಜ್ಞಾನಗಳ ಸಂಗಮ ಮೂರ್ತಿಯಾಗಿ ಕಂಗೊಳಿಸಿದ ಶ್ರೀಮಚ್ಛಂಕರಾಚಾರ್ಯ ಶ್ರೀ ಭಾರತೀ ಕೃಷ್ಣ ತೀರ್ಥ ಸ್ವಾಮಿಗಳವರು . ಇವರು ಭಾರತದಲ್ಲಿ ಆಧ್ಯಾತ್ಮ ಜಾಗೃತಿ ಮೂಡಿಸಿದ ’ನವಯುಗ ಶಂಕರರು!’ ವಿದೇಶಗಳಲ್ಲಿ ಭಾರತೀಯ ಆಧ್ಯಾತ್ಮ ಸಂಸ್ಕೃತಿಯನ್ನು ಪಸರಿಸಿದ ದ್ವಿತೀಯ ವಿವೇಕಾನಂದರು.!!’ ವೈದಿಕಪದ್ದತಿಯಲ್ಲಿ ಗಣಿತವನ್ನು ಪುನರುಜ್ಜೀವನಗೊಳಿಸಿದ ’ಅಭಿನವ ಭಾಸ್ಕರಾಚಾರ್ಯರು!!!’
ತಮ್ಮ ಅತ್ಯಮೋಘ ಕಾರ್ಯಗಳಿಂದ ಭಾರತೀಯ ವಿದ್ವದ್ರತ್ನಗಳ ಸಾಲಿನಲ್ಲಿ ಶಾಶ್ವತ ಸ್ಥಾನಗಳಿಸಿದ ಪರಮಪೂಜ್ಯ ಭಾರತೀ ಕೃಷ್ಣ ತೀರ್ಥರ ಜೀವನ ವೃತ್ತಾಂತ ಒಂದು ರೋಮಾಂಚನಕಾರೀ ಕಥೆ. ಕ್ರಿ. ಶ. ೧೮೮೪ ಮಾರ್ಚ ೧೪ ಫಾಲ್ಗುಣ ಕೃಷ್ಣ ತೃತೀಯಾದಂದು ತಮಿಳುನಾಡಿನ ತಿನ್ನವೇಲಿ ಎಂಬ ಗ್ರಾಮದಲ್ಲಿ ಇವರ ಜನನವಾಯಿತು. ತಂದೆ ಪಿ. ನರಸಿಂಹ ಶಾಸ್ತ್ರಿಗಳು ತಿನ್ನವೇಲಿಯ ತಹಸೀಲ್ದಾರರಾಗಿದ್ದು ನಂತರ ತಿರುಚನಾಪಳ್ಳಿಯ ಡೆಪ್ಯುಟಿ ಕಲೆಕ್ಟರ್ ಆಗಿ ನಿವೃತ್ತರಾದರು. ಹತ್ತು ತಿಂಗಳಿರುವಾಗಲೇ ತನ್ನ ತಾಯಿಯನ್ನು ಕಳೆದುಕೊಂಡರು. ಇವರ ಬಾಲ್ಯ ನಾಮ ವೆಂಕಟರಮಣ. ತಂದೆ ನರಸಿಂಹ ಶಾಸ್ತ್ರಿಗಳು. ತಾಯಿಯ ಅಣ್ಣ ನ್ಯಾಯಮೂರ್ತಿ ರಂಗನಾಥ ಶಾಸ್ತ್ರಿಗಳು. ಇಬ್ಬರೂ ಸಂಸ್ಕೃತಜ್ಞರು. ಎರಡೂ ಮನೆಯ ಆಧ್ಯಾತ್ಮಿಕ ಪರಿಸರದಲ್ಲಿ ಅವರ ಮನೋಕುಸುಮದ ವಿಕಾಸವಾಯಿತು. ವಿಜ್ಞಾನವಿಷಯದಲ್ಲಿ ಆಸಕ್ತಿ ಬೆಳೆಸಿ ಕೊಳ್ಳುವುದರೊಂದಿಗೆ ಸಂಪ್ರದಾಯಬದ್ಧ ಸಂಸ್ಕೃತಾಭ್ಯಾಸವನ್ನೂ ಮಾಡಿದರು. ಶಾಲಾ ವಿಧ್ಯಾಭ್ಯಾಸದಲ್ಲಂತೂ ಅವರು ಯಾವಾಗಲೂ ಮೊದಲಿಗರು. ಕಿ.ಶ. ೧೮೯೯ ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಪ್ರಥಮ ಸ್ಥಾನದೊಂದಿಗೆ ಮೆಟ್ರಿಕ್ಯುಲೇಶನ್ ಪರೀಕ್ಷೆಯನ್ನು ಪಾಸು ಮಾಡಿದರು. ಅದೇ ವರ್ಷ ಅಂದರೆ ತಮ್ಮ ಹದಿನೈದನೆಯ ವಯಸ್ಸಿನಲ್ಲಿಯೇ ಪ್ರಗಲ್ಭ ಸಂಸ್ಕೃತ ಪಂಡಿತರಿಗೆ ’ಮದರಾಸು ಸಂಸ್ಕೃತ ಸಂಘ ’ ನೀಡುವ ’ಸರಸ್ವತಿ’ ಎಂಬ ಅಭಿದಾನಕ್ಕೆ ಅವರು ಪಾತ್ರರಾದರು. ತಿರುಚನಾಪಳ್ಳಿಯ ’ನ್ಯಾಶನಲ್ ಕಾಲೇಜ್ ’, ಚರ್ಚ್ ಮಿಶನರಿ ಸೊಸೈಟಿ ಕಾಲೇಜ್ ಹಾಗೂ ತಿನ್ನವೇಲಿಯ ಹಿಂದು ಕಾಲೇಜ್ ಗಳಲ್ಲಿ ಅಧ್ಯಯನ ನಡೆಸಿದ ಇವರು ಬಿ.ಎ. ಪರೀಕ್ಷೆಯಲ್ಲಿ ಸರ್ವೋಚ್ಚ ಸ್ಥಾನ ಪಡೆದು ನ್ಯೂಯಾರ್ಕಿನ " ಅಮೇರಿಕನ್ ಕಾಲೇಜ್ ಆಫ್ ಸೈನ್ಸ್‌ಸ್" ನ ಮುಂಬಯಿ ಕೇಂದ್ರದಲ್ಲಿ ಎಮ್. ಎ. ಅಧ್ಯಯನ ಮಾಡಿದರು. ೧೯೦೪ ರಲ್ಲಿ ಏಕಕಾಲದಲ್ಲಿ ಆರು ವಿಷಯಗಳಲ್ಲಿ ಸರ್ವೋಚ್ಛ ಅಂಕದೊಂದಿಗೆ ಎಮ್. ಎ. ಪದವಿಗಳನ್ನು ಪಡೆದ ದಾಖಲೆ ಇಂದಿಗೂ ಅಚ್ಚಳಿಯದೇ ನಿಂತಿದೆ. ಅಂದು ಅವರು ಆರಿಸಿಕೊಂಡ ವಿಷಯಗಳು ಸಂಸ್ಕೃತ, ತತ್ವಶಾಸ್ತ್ರ ಇಂಗ್ಲೀಷ್, ಗಣಿತ, ಇತಿಹಾಸ ಮತ್ತು ವಿಜ್ಞಾನ. ಅವರು ವಿದ್ಯಾಭ್ಯಾಸವನ್ನು ಮುಗಿಸಿದ ತಕ್ಷಣ ಬರೋಡಾ ಕಾಲೇಜಿನಲ್ಲಿ ಗಣಿತ ಹಾಗೂ ವಿಜ್ಞಾನ ಉಪನ್ಯಾಸಕ ಪದವಿ ಅವರನ್ನು ಕೈಬೀಸಿ ಕರೆಯಿತು. ಅದರಿಂದಾಗಿ ಅವರಿಗೆ ಅಲ್ಲಿಯೇ ಉಪನ್ಯಾಸಕರಾಗಿದ್ದ ಶ್ರೀ ಅರಬಿಂದೋ ಅವರ ಸಾಹಚರ್ಯ ದೊರೆಯಿತು. ಜೊತೆಗೆ ಗೋಪಾಲಕೃಷ್ಣ ಗೋಖಲೆ ಅಂತವರ ಪರಿಚಯ, ಕೆಚ್ಚೆದೆಯ ತರುಣರಾಗಿದ್ದ ವೆಂಕಟರಮಣರನ್ನು ಸ್ವಾತಂತ್ರ್ಯ ಹೋರಾಟದಲ್ಲಿಭಾಗವಹಿಸುವಂತೆ ಪ್ರೇರೇಪಿಸಿತು.
೧೯೦೫ ರ ರಾಷ್ಟ್ರೀಯ ಶಿಕ್ಷಣ ಆಂದೋಲನ ಹಾಗೂ ಬಂಗಾಳ ವಿಭಜನೆಯ ವಿರೋಧೀ ಚಳುವಳಿಯಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. ರಾಷ್ಟ್ರೀಯ ಪತ್ರಿಕೆಗಳಿಗೆ ಸಾಮಾಜಿಕ- ರಾಜಕೀಯ- ಆಧ್ಯಾತ್ಮ ಪರಿವರ್ತನೆಯ ಕುರಿತಾಗಿ ಲೇಖನಗಳನ್ನು ಬರೆಯುತ್ತಿದ್ದರು. ೧೯೦೯ರಲ್ಲಿ ನ್ಯಾಶನಲ್ ಕಾಲೇಜಿನ ಪ್ರಾಚಾರ್ಯರಾಗಿ ನಿಯುಕ್ತರಾದರು.
ಮಾನವ ಕುಲಕೋಟಿಯನ್ನು ಉದ್ಧರಿಸಬೇಕೆಂಬ ಅವರ ತುಡಿತ ಅವರನ್ನು ಬಲವಾದ ಆಧ್ಯಾತ್ಮಿಕ ಸೆಳೆತಕ್ಕೆ ಸಿಲುಕಿಸಿತ್ತು. ಆ ಆಕರ್ಷಣೆಯೇ ಅವgನ್ನು ಶೃಂಗೇರಿಯ ಶಂಕರಾಚಾರ್ಯ ಶ್ರೀ ಶ್ರೀ ಸಚ್ಛಿದಾನಂದ ಶಿವಾಭಿನವನೃಸಿಂಹ ಸರಸ್ವತಿಯವರ ಸನ್ನಿಧಾನದೊಡನೆ ಸೆಳೆದೊಯ್ದಿತು. ಮಧ್ಯೆ ಅವರ ಆಜ್ಞೆಯಂತೆಯೇ ರಾಜಮಂಡ್ರಿಯ ಕಾಲೇಜೊಂದರ ಪ್ರಾಂಶುಪಾಲರಾಗಿ ಕಾರ್ಯವನ್ನಾರಂಭಿಸಿದರೂ ಆಧ್ಯಾತ್ಮಜ್ಞಾನದ ಹಸಿವೆಯನ್ನು ತಡೆಯಲಾಗದೇ ಶೃಂಗೇರಿಗೆ ಮರಳಿ ಬಂದರು. ಶ್ರೀ ಶಾರದಾಂಬೆ ಪದತಲದಲ್ಲಿ ಕುಳಿತು ತೀವ್ರ ಅಧ್ಯಯನ ಸಾಧನೆಯಲ್ಲಿ ತೊಡಗಿದರು. ಅದು ಅವರ ಜೀವನದ ದಿಕ್ಕನ್ನೇ ಬದಲಿಸಿತು. ಶೃಂಗೇರಿಯ ಕಿಗ್ಗದ ಕಾಡಿನಲ್ಲಿ ಧ್ಯಾನಾಸಕ್ತರಾಗಿರುವಾಗಲೇ ಅವರಿಗೆ ವೇದಗಣಿತಗಳ ಸ್ಫುರಣೆಯಾದುದು. ಅದೇ ಮುಂದೆ ವೇದಗಣಿತ’ ಪದ್ಧತಿಯ ಆವಿಷ್ಕಾರಕ್ಕೆ ಕಾರಣೀಭೂತವಾಯಿತು. ಅನೇಕ ಸಂಘ ಸಂಸ್ಥೆಗಳು ಅವರ ಉಪನ್ಯಾಸ ಗಳನ್ನೇರ್ಪಡಿಸಿದವು. ಎಲ್ಲ ಕಡೆ ಆಧ್ಯಾತ್ಮ -ವಿಜ್ಞಾನಗಳನ್ನು ಸಮನ್ವಯಗೊಳಿಸಿ ಅವರು ಉಪನ್ಯಾಸ ನೀಡುತ್ತಿದ್ದರು. ನಂತರ ಸಂನ್ಯಾಸವೇ ಆತ್ಮಸಾಕ್ಷಾತ್ಕಾರಕ್ಕೆ ಉತ್ತಮ ಮಾರ್ಗವೆಂದು ಅರಿತ ವೆಂಕಟರಮಣ ಸರಸ್ವತಿಯವರು ಸಂನ್ಯಾಸ ದೀಕ್ಷೆ ಪಡೆಯಲು ತೀರ್ಮಾನಿಸಿದರು. ೧೯೧೯ರಲ್ಲಿ ಬನಾರಸ್ಸಿನಲ್ಲಿ ಶ್ರೀ ಶ್ರೀ ತ್ರಿವಿಕ್ರಮ ತೀರ್ಥರಿಂದ ಸಂನ್ಯಾಸ ದೀಕ್ಷೆ ಸ್ವೀಕರಿಸಿ ’ಭಾರತೀ ಕೃಷ್ಣ ತೀರ್ಥ’ರಾದರು.
ಭಾರತೀಕೃಷ್ಣ ತೀರ್ಥ ರ ವೈರಾಗ್ಯ ಸಂನ್ಯಾಸಗಳು ಮಾನವ ಜನಾಂಗದ ಸೇವೆಗೆ ಪೂರಕವಾಯಿತೇ ಹೊರತು ಬಾಧಕವಾಗಲಿಲ್ಲ. ಧರ್ಮಗಳಲ್ಲಿ ರಾಜಧರ್ಮವೂ ಒಂದು ಎಂದು ನಂಬಿದ್ದ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ೧೯೨೧ ಇವರು ದ್ವಾರಕಾ ಪೀಠದ ಅಧಿಪತಿಗಳಾಗಿ ನೇಮಕಗೊಂಡರೂ ಗೊಡ್ಡು ಸಂಪ್ರದಾಯಗಳನ್ನು ತಿರಸ್ಕರಿಸಿ ತಮ್ಮ ಹೋರಾಟಕಾರ್ಯವನ್ನು ಮುಂದುವರಿಸಿದರು. ಬ್ರಿಟಿಷರನ್ನು ಎದುರಿಸಲು ಹಿಂದೂ ಮುಸ್ಲಿಮರು ಒಂದಾಗಬೇಕು ಎಂಬ ಸತ್ಯವನ್ನು ಕಂಡುಕೊಂಡಿದ್ದ ಅವರು ಮುಸ್ಲಿಮ್ ಲೀಗ್ ನ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಖಿಲಾಪತ್ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕಾಗಿ ಅಲಿ ಸಹೋದರರೊಂದಿಗೆ ಒಂದು ವರ್ಷಕಾಲ ಸೆರೆಮನೆ ವಾಸವನ್ನು ಅನುಭವಿಸಿದರು. ಸೆರೆಮನೆ ವಾಸವನ್ನು ಅನುಭವಿಸಿದ ಪ್ರಪ್ರಥಮ ಧಾರ್ಮಿಕ ಮುಖಂಡ ಎಂಬ ಹೆಗ್ಗಳಿಕೆ ಅವರದ್ದು. ಆ ಸಮದರ್ಭದಲ್ಲಿ ಅವರಿಗೆ ಸ್ಥಾನಮಾನವನ್ನು ನೀಡದೇ ಅವಮಾನಿಸಿದ್ದಕ್ಕಾಗಿ ರೊಚ್ಚಿಗೆದ್ದು ಬ್ರಿಟೀಷ್ ಮ್ಯಾಜಿಸ್ಟ್ರೇಟರ ಮುಂದೆ ಅವರಾಡಿದ ಬಿರುನುಡಿಗಳು ಅವರ ಧೀರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿ ಚರಿತ್ರೆಯ ಪುಟಗಳಲ್ಲಿ ದಾಖಲೆಯಾಗಿದೆ.
ಕ್ರಿ. ಶ. ೧೯೨೫ ರಲ್ಲಿ ಪೂರ್ವಾಮ್ನಾಯ ಪೀಠ ಜಗನ್ನಾಥ ಪುರಿಯ ಗೋವರ್ಧನ ಪೀಠದ ಶಂಕರಾಚಾರ್ಯ ಶ್ರೀ. ಶ್ರೀ.ಮಧುಸೂದನ ತೀರ್ಥರ ಉತ್ತರಾಧಿಕಾರಿಯಾಗಿ ಇವರು ನಿಯುಕ್ತರಾದರು. ರಾಜಕೀಯ ದಾಸ್ಯದಿಂದ ವಿಮುಕ್ತರಾಗುವುದರ ಜೊತೆಗೆ ಬೌದ್ಧಿಕ ಗುಲಾಮಗಿರಿಯಿಂದಲೂ ಜನರನ್ನು ಬಿಡುಗಡೆಗೊಳಿಸುವುದು ಅಗತ್ಯವೆಂದು ಮನಗೊಂಡ ಅವರು ದೇಶಾದ್ಯಂತ ಸಂಚರಿಸಿತ್ತು ವಿವಿಧ ವರ್ಗದ ಜನರೊಡನೆ ಬೆರೆತು ಅವರ ಕಷ್ಟ ಸುಖಗಳಲ್ಲಿ ಪಾಲ್ಗೊಂಡು, ಅವರಿಗೆ ಭಾರತದ ಪರಂಪರೆಯ ಹಿರಿಮೆಯನ್ನು ಮನಗಾಣಿಸಿಕೊಡಲಾರಂಭಿಸಿದರು. ಸ್ವಾತಂತ್ರ್ಯ ದೊರೆತ ಮೇಲೂ ಅವರ ಈ ಪರಿಕ್ರಮ ಮುಂದುವರೆಯಿತು. ೧೯೫೩ ರಲ್ಲಿ ನಾಗಪುರದಲ್ಲಿ "ವಿಶ್ವ ಪುನರ್ ನಿರ್ಮಾಣ ಸಂಘ" ವನ್ನು ಸ್ಥಾಪಿಸಿ ತಮ್ಮ ಸಮಾಜ ಸೇವೆಗೊಂದು ಹೊಸ ಆಯಾಮವನ್ನಿತ್ತರು.
ಸ್ವಾಮೀಜಿಯವರ ಪ್ರವಚನ - ವ್ಯಕ್ತಿತ್ವಗಳಿಂದ ಪ್ರಭಾವಿತರಾದ ಅನೇಕ ವಿದೇಶೀಯರು ಅವರನ್ನು ತಮ್ಮ ದೇಶಕ್ಕೆ ಆಹ್ವಾನಿಸತೊಡಗಿದರು. ೧೯೫೮ ರಲ್ಲಿ ಲಾಸ್ ಏಂಜಲೀಸ್ ನ ಶ್ರೀಮತಿ ದಯಾಮಾತಾ ರವರು ಸ್ವಾಮೀಜಿಯವರ ಅಮೇರಿಕಾ ಯಾತ್ರೆಯನ್ನು ಏರ್ಪಡಿಸಿದರು. ಹೀಗೆ ವಿದೇಶ ಪ್ರಯಾಣ ಮಾಡಿದ ದ್ವಿತೀಯ ಸಂನ್ಯಾಸಿ ಹಾಗೂ ಪ್ರಥಮ ಶಂಕರಾಚಾರ್ಯರು ಇವರು. ಅಮೇರಿಕಾದ ಅನೇಕ ವಿಶ್ವವಿದ್ಯಾಲಯ- ಮಹಾ ವಿದ್ಯಾಲಯಗಳಲ್ಲಿಯೂ ವೇದಾಂತ ಸೊಸೈಟಿ ಮೊದಲಾದ ಸಂಘಗಳ ಆಶ್ರಯದಲ್ಲಿಯೂ ಸ್ವಾಮೀಜಿಯವರು ಉಪನ್ಯಾಸ ನೀಡಿದರು. ಮತ್ತೊಮ್ಮೆ ಅಮೇರಿಕಾ ದಲ್ಲಿ ಭಾರತೀಯ ತತ್ವಶಾಸ್ತ್ರ ಸಂಸ್ಕೃತಿಗಳ ಕಹಳೆ ಮೊಳಗಿತು. ಆಧ್ಯಾತ್ಮಿಕ ಕ್ಷೇತ್ರದಲ್ಲಷ್ಟೇ ಅಲ್ಲದೇ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲೂ ತಾವೇನೂ ನಿಮಗಿಂತ
ಕಮ್ಮಿಯಿಲ್ಲ ಎಂಬುದನ್ನು ವಿದೇಶೀಯರಿಗೆ ಮನವರಿಕೆ ಮಾಡಿಕೊಟ್ಟರು. ಇಂಗ್ಲೀಷ್ ಮತ್ತು ಸಂಸ್ಕೃತಗಳಲ್ಲಿ ಅಗಾಧ ಪಾಂಡಿತ್ಯ ಗಳಿಸಿದ್ದ ಅವರ ಅಸ್ಖಲಿತ ಧೀರವಾಣಿ ಅಮೇರಿಕಾದ್ಯಂತ ಜಯಭೇರಿ ಬಾರಿಸಿತು. ಅವರ "ವೇದಗಣಿತ" ಅಮೇರಿಕನ್ನರನ್ನು ವಿಶೇಷವಾಗಿ ಆಕರ್ಷಿಸಿತು.
ಶ್ರೀ ಭಾರತೀ ಕೃಷ್ಣ ತೀರ್ಥರು ಎಲ್ಲ ಕ್ಷೇತ್ರಗಳಲ್ಲೂ ಪರಿಣಿತಿ ಸಾಧಿಸಿದವರು. ವಿಜ್ಞಾನ-ಗಣಿತ, ರಾಜಕೀಯ, ಆಧ್ಯಾತ್ಮ ಮುಂತಾದ ಎಲ್ಲ ಕ್ಷೇತ್ರಗಳಿಗೂ ತಮ್ಮ ಅಮೂಲ್ಯ ಕೊಡುಗೆ ನೀಡಿದವರು. ಅವರು ಸನಾತನ ಧರ್ಮ, ಸ್ತೋತ್ರಭಾರತೀ ಕಂಠಹಾರ, ವೇದಿಕ್ ಮೆಟಾಫಿಸಿಕ್ಸ್, ಮುಂತಾದ ಅನೇಕ ಗ್ರಂಥಗಳನ್ನು ಇಂಗ್ಲೀಷಿನಲ್ಲೂ ಸಂಸ್ಕೃತದಲ್ಲೂ ಬರೆದಿದ್ದಾರೆ. ಅವರ ಗ್ರಂಥಗಳ ಸಾಲಿನಲ್ಲಿ ಅದ್ವಿತೀಯವೂ ಅಮೂಲ್ಯವೂ ಆದ ಗ್ರಂಥ "ವೇದಗಣಿತ". ಶೃಂಗೇರಿಯಲ್ಲಿ ತಪೋನಿರತರಾಗಿದ್ದಾಗ ಸ್ಫುರಿಸಿದ ಅಲ್ಪಾಕ್ಷರವೂ ಅಸಂದಿಗ್ಧವೂ ಆಗಿರುವ ಹದಿನಾರು ಮುಖ್ಯ ಸೂತ್ರ ಹಾಗೂ ಹದಿಮೂರು ಉಪಸೂತ್ರಗಳನ್ನೂ ಆಧರಿಸಿ ಕ್ಲಿಷ್ಟಗಣಿತ ಸಮಸ್ಯೆಗಳನ್ನು ಕ್ಷಿಪ್ರಗತಿಯಲ್ಲಿ ಬಿಡಿಸುವ ವಿಧಾನವನ್ನು ಈ ಕೃತಿಯು ವಿವರಿಸುತ್ತದೆ.
ನಿರಂತರ ಪ್ರವಾಸ ಸ್ವಾಮೀಜಿಯವರನ್ನು ಅನಾರೋಗ್ಯಕ್ಕೆ ಒಳಪಡಿಸಿತ್ತು. ಉತ್ತರಾಯಣ ಮಾಘ ಶುದ್ಧ ಪಂಚಮಿ ಅಂದರೆ ವಸಂತ ಪಂಚಮಿಯ ಪುಣ್ಯಕಾಲ (ದಿನಾಂಕ ೨ ಫೆಭ್ರವರಿ ೧೯೬೦) ಮುಂಬಯಿಯಲ್ಲಿ ಅವರು ದೇಹವನ್ನು ತ್ಯಜಿಸಿ ಪರಂಜ್ಯೋತಿಯಲ್ಲಿ ಲೀನವಾದರು. ಭರತಭೂಮಿಯಲ್ಲಿ ಅವತಾರವೆತ್ತಿದ ಋಷಿಕಲ್ಪ ಧೀಮಂತರ ಸಾಲಿನಲ್ಲಿ ಅಚ್ಚಳಿಯದ ಕೀರ್ತಿಯನ್ನು ಸ್ಥಾಪಿಸಿ ಭೌತಿಕವಾಗಿ ಕಣ್ಮರೆಯಾದರು. ಪ್ರಪಂಚದಾದ್ಯಂತ ಭಾರತೀಯ ತತ್ವಶಾಸ್ತ್ರದ ಕಂಪನ್ನು ಪಸರಿಸಿ ’ಜಗದ್ಗುರು’ ಪದವನ್ನು ಅನ್ವರ್ಥಗೊಳಿಸಿದ ಮಹಾಮಹಿಮರು ಸ್ವಾಮೀಜಿಯವರು. ಅವರು ಲೋಕಕ್ಕೆ ನೀಡಿದ ಕಾಣಿಕೆ ಸಾರ್ವಕಾಲಿಕ ಮಾರ್ಗದರ್ಶಕಗಳು. ಅಂತಹ ದಿವ್ಯಜ್ಯೋತಿಗಿದೋ ನುಡಿನಮನ!

೧. ಏಕಾಧಿಕೇನ ಪೂರ್ವೇಣ
೨. ನಿಖಿಲಂ ನವತ: ಚರಮಂ ದಶತ:
೩. ಊರ್ಧ್ವತಿರ್ಯಗ್ಭ್ಯಾಮ್
೪. ಪರಾವರ್ತ್ಯ ಯೋಜಯೇತ್
೫. ಶೂನ್ಯಂ ಸಾಮ್ಯ ಸಮುಚ್ಚಯೇ
೬. ಶೂನ್ಯಮನ್ಯತ್
೭. ಸಂಕಲನವ್ಯವಕಲನಾಭ್ಯಾಮ್
೮. ಪೂರಣಾಪೂರಣಾಭ್ಯಾಮ್
೯. ಚಲನಕಲನಾಭ್ಯಾಮ್
೧೦. ಯಾವದೂನಮ್
೧೧. ವ್ಯಷ್ಟಿಸಮಷ್ಟಿ:
೧೨. ಶೇಷಾಣ್ಯಂಕೇನ ಚರಮೇಣ
೧೩. ಸೋಪಾಂತ್ಯದ್ವಯಮಂತ್ಯಮ್
೧೪. ಏಕನ್ಯೂನೇನ ಪೂರ್ವೇಣ
೧೫. ಗುಣಿತಸಮುಚ್ಚಯ:
೧೬. ಗುಣಕಸಮುಚ್ಚಯ:

ಏಕಾಧಿಕೇನ ಪೂರ್ವೇಣ
ಈ ಸೂತ್ರವನ್ನು ಅನೇಕ ಸಂದರ್ಭಗಳಲ್ಲಿ ಉಪಯೋಗಿಸಬಹುದು. ೫ ರಿಂದ ಕೊನೆಗೊಳ್ಳುವ ಸಂಖ್ಯೆಗಳ ವರ್ಗವನ್ನು ಕಂಡುಹಿಡಿಯಲು ಈ ಸೂತ್ರ ಉಪಯುಕ್ತವಾಗಿದೆ.
ಉದಾಹರಣೆಗೆ ೨೫ರ ವರ್ಗವನ್ನು ಕಂಡುಹಿಡಿಯಲು ಈಗಿನ ಪದ್ಧತಿಯ ಪ್ರಕಾರ ೨೫ನ್ನು ೨೫ರಿಂದ ಗುಣಿಸಬೇಕು.
೨೫*೨೫
೧೨೫
೫೦+
೬೨೫
ಇದನ್ನೇ ವೇದಗಣಿತ ಪದ್ಧತಿಯಲ್ಲಿ ಸರಳವಾಗಿ ಮಾಡಬಹುದು.
೨೫೨=೨*(೨+೧) /೨೫
= ೨*೩/೨೫
=೬/೨೫=೬೨೫
೨೫ ಎಂಬ ಸಂಖ್ಯೆಯಲ್ಲಿ ಎರಡು ಅಂಕೆಗಳಿವೆ. ೨ ಎನ್ನುವುದು ಪೂರ್ವ ಅಂಕೆ, ೫ ಎನ್ನುವುದು ಪರ ಅಂಕೆ. ಐದರಿಂದ ಕೊನೆಗೊಳ್ಳುವ ಸಂಖ್ಯೆಯ ವರ್ಗದ ಕೊನೆಯಲ್ಲಿ ೨೫ ಇರುತ್ತದೆ. ಇದು ಸಾಮಾನ್ಯ ನಿಯಮವಾದ್ದರಿಂದ ಸೂತ್ರದ ಆವಶ್ಯಕತೆಯಿಲ್ಲ. ಹಾಗಾಗಿ ನಾವು ಉತ್ತರದಲ್ಲೂ / ಚಿಹ್ನೆಯ ಮೂಲಕ ಎರಡು ಭಾಗಗಳನ್ನು ಮಾಡಿದರೆ ಬಲಭಾಗದಲ್ಲಿ ನೇರವಾಗಿ ೨೫ನ್ನು ಬರೆಯಬಹುದು.
/ ಚಿಹ್ನೆಯ ಎಡಭಾಗದಲ್ಲಿರುವ ಸಂಖ್ಯೆಯನ್ನು ಪಡೆಯಲು ಮೇಲಿನ ಸೂತ್ರವನ್ನು ಉಪಯೋಗಿಸಬೇಕು. ಪೂರ್ವದ ಅಂಕೆಯನ್ನು ಅದಕ್ಕಿಂತ ಒಂದು ಹೆಚ್ಚಿನ ಅಂಕೆಯಿಂದ ಗುಣಿಸಬೇಕು ಎಂಬುದು ಸೂತ್ರದ ಅರ್ಥ.
ಪೂರ್ವದ ಅಂಕೆ ೨. ಅದಕ್ಕಿಂತ ಒಚಿದು ಹೆಚ್ಚು ಅಂದರೆ ೩. ಹಾಗಾಗಿ ೨ಘಿ೩ ಎಂದು ಮಾಡಿದರೆ ೬ ಸಿಗುತ್ತದೆ. ಅದು ಉತ್ತರದ ಎಡಭಾಗ. ಹಾಗಾಗಿ ನಮ್ಮ ಉತ್ತರ ೬೨೫.ಇದೇ ರೀತಿಯಲ್ಲಿ ೩೫*೩೫, ೪೫*೪೫ ೫೫*೫೫, ೧೦೫*೧೦೫ಮುಂತಾದ ಲೆಖ್ಖಗಳನ್ನು ಬಿಡಿಸಿ ನೋಡಿ.

ಮಹಾಬಲ ಭಟ್

Sunday, January 16, 2011

ಅಮರಕವಿ ಕಾಳಿದಾಸ




ಕಾಳಿದಾಸನ ಹೆಸರನ್ನು ಕೇಳದ ಭಾರತೀಯನಾರು? ಕವಿತ್ವದ ಮೂರ್ತ ಸ್ವರೂಪನೋ ಎಂಬಂತೆ ಕವಿಯೆಂದರೆ ಕಾಳಿದಾಸ ಎಂಬ ಅಜರಾಮರ ಕೀರ್ತಿಭಾಜನ ಕಾಳಿದಾಸ. ಭಾರತದಲ್ಲಷ್ಟೇ ಅಲ್ಲದೇ ಭಾರತದ ಅದರಲ್ಲೂ ಸಂಸ್ಕೃತ ಸಾಹಿತ್ಯದ ಸುಗಂಧವನ್ನು ದಿಗ್ದಗಂತಗಳಲೂ ಹಬ್ಬಿಸಿದ ಅದ್ವಿತೀಯ ಕವಿ ಕಾಳಿದಾಸ.
ಪ್ರಸಿದ್ಧ ವ್ಯಕ್ತಿಗಳ ಸುತ್ತೆಲ್ಲ ದಂತ ಕತೆಗಳ ಬಳ್ಳಿಯೇ ಹಬ್ಬಿಕೊಂಡಿರುತ್ತದೆ ಎಂಬುದಕ್ಕೆ ಕಾಳಿದಾಸನೂ ಅಪವಾದನಲ್ಲ. ಕಾಳಿದಾಸನ ಬಗ್ಗೆ ಇರುವ ಐತಿಹ್ಯಗಳಿಗೆ ಲೆಕ್ಕವಿಲ್ಲ. ಬಾಲ್ಯದಲ್ಲಿ ಕುರುಬನಾಗಿದ್ದವನು ಕಾಳಿಯ ವರಪ್ರಸಾದದಿಂದ ಕವಿತ್ವ ಶಕ್ತಿಯನ್ನು ಪಡೆದುಕೊಂಡು "ಕಾಳಿದಾಸ" ನಾದ ಎಂಬುದುಪ್ರಸಿದ್ಧ ದಂತಕತೆ. ಭೋಜರಾಜನ ಆಸ್ಥಾನ ಪಂಡಿತನಾಗಿದ್ದನೆಂಬುದು ಇನ್ನೊಂದು ದಂತಕತೆ. ಆದರೆ ಇತಿಹಾಸ ಮಾತ್ರ ಇವನು ಚಂದ್ರಗುಪ್ತ ವಿಕ್ರಮಾದಿತ್ಯನ ಆಸ್ಥಾನದಲ್ಲಿ ನವಮಣಿಗಳಲ್ಲಿ ಶ್ರೇಷ್ಠತಮನಾದ ಪಂಡಿತನಾಗಿದ್ದನೆಂಬುದನ್ನು ಒಪ್ಪುತ್ತದೆ.
ಕಾಳಿದಾಸನ ಅಮರ ಕೃತಿಗಳು ಏಳು. ಇವನ ಎಲ್ಲ ಕೃತಿಗಳಲ್ಲೂ ವಿಶಿಷ್ಟವಾದ ನವನವೋನ್ಮೇಷಶಾಲಿಯಾದ ಪ್ರತಿಭಾ ವಿಲಾಸವನ್ನು ಅನುಭವಿಸಬಹುದು. ಅವನ ಕವಿತಾ ರಸ ಮಾಧುರ್ಯ, ಶಬ್ದ ಸೌಂದರ್ಯ, ಅರ್ಥ ಗಾಂಭೀರ್ಯ, ಅಲಂಕಾರ ಚಾತುರ್ಯಗಳು ಎಂಥವನನ್ನೂ ಬೆರಗುಗೊಳಿಸುವಂಥದ್ದು.
ಅವನ ಅಭಿಜ್ಞಾನ ಶಾಕುಂತಲಮ್ ನಾಟಕವಂತೂ ವಿಶ್ವ ಪ್ರಸಿದ್ಧ. ’ಕಾವ್ಯೇಷು ನಾಟಕಮ್ ರಮ್ಯಂ ತತ್ರ ರಮ್ಯಾ ಶಾಕುಂತಲಾ’ ಎಂಬುದು ಪ್ರಸಿದ್ಧ ನುಡಿ.
ಶಕುಂತಲೆ - ದುಷ್ಯಂತರ ಅಮರ ಪ್ರೇಮ ಕಥೆ ಶೃಂಗಾರ ರಸಪೂರ್ಣವಾಗಿ ಅವರ್ಣನೀಯ ಕಾವ್ಯಾನಂದವನ್ನು ನೀಡುತ್ತದೆ. ಯಾವ ಸನ್ನಿವೇಶವನ್ನಾದರೂ ಹೃದಯ ಸ್ಪರ್ಶಿಯಾಗಿ ಚಿತ್ರಿಸುವುದು ಕಾಳಿದಾಸನ ವೈಶಿಷ್ಟ್ಯ. ತನ್ನ ಸಾಕು ಮಗಳಾದ ಶಾಕುಂತಲೆಯನ್ನು ದುಷ್ಯಂತನೆಡೆಗೆ ಕಳಿಸುವಾಗ ಕಣ್ವರ ಹೃದಯದಲ್ಲಾದ ವೇದನೆಯನ್ನು ಅವನು ಚಿತ್ರಿಸಿದ ಪರಿ ಮನ ಮಿಡಿಯುವಂತದ್ದು. - " ಯಾಸ್ಯತ್ಯದ್ಯ ಶಕುಂತಲೇತಿ ಹೃದಯಂ" (ಶಕುಂತಲೆಯೆಂಬ ಹೃದಯವೇ ಹೋಗುತ್ತಿದೆ) ಎಂಬ ಅವನ ಶಬ್ಧಗಳ ಶಕ್ತಿಗೆ ಅಳತೆಯುಂಟೇ? ಅವನ ಮಾಲವಿಕಾಗ್ನಿಮಿತ್ರಂ ಮತ್ತು ವಿಕ್ರಮೋರ್ವಶೀಯಂ ಗಳು ಸಹ ಶೃಂಗಾರ ರಸಧಾರೆಯನ್ನು ಹರಿಸುವಲ್ಲಿ ಹಿಂದೆ ಬೀಳಲಾರವು.
ಕಾಳಿದಾಸನ ರಘುವಂಶಂ ಮತ್ತು ಕುಮಾರ ಸಂಭವಂ ಎಂಬ ಎರಡು ಮಹಾ ಕಾವ್ಯಗಳು ಸಂಸ್ಕೃತದ ಪಂಚಮಹಾ ಕಾವ್ಯಗಳಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿವೆ. ದಿಲೀಪನಿಂದ ಹಿಡಿದು ಅಗ್ನಿಮಿತ್ರ ನ ವರೆಗೆ ರಘುವಂಶದ ದೊರೆಗಳೆಲ್ಲರ ಚರಿತ್ರೆಯನ್ನು ಕಾವ್ಯ ವೊಂದರಲ್ಲಿ ಸೆರೆ ಹಿಡಿದ ಅವನ ವೈಶಿಷ್ಟ್ಯ ಅದ್ಭುತ! ರಘುವಂಶದ ರಾಜರ ಆದರ್ಶವನ್ನು ಚಿತ್ರಿಸುವಲ್ಲಿ ವಾಲ್ಮೀಕಿ ಮಹರ್ಷಿಗಿಂತ ಒಂದು ಕೈ ಮಿಗಿಲಾಗಿದ್ದಾನೆ ಎಂದರೂ ಅತಿಶಯೋಕ್ತಿಯಲ್ಲ. ಕುಮಾರಸಂಭವದಲ್ಲಿ ವೈರಾಗ್ಯ ಶಿಖಾಮಣಿ ಪರಮೇಶ್ವರ ಹಾಗೂ ಶೃಂಗಾರ ಭಾವಪೂರ್ಣೆ ಪಾರ್ವತಿಯ ನಡುವಿನ ಪ್ರೇಮಸಂಗದ ಕಲ್ಪನಾ ವಿಲಾಸವು ಯಾರನ್ನೂ ಬೆರಗುಗೊಳಿಸುವಂತದ್ದು.
" ಋತು ಸಂಹಾರ" ಎಂಬುದು ಷಟ್ ಋತುಗಳ ಮನೋಜ್ಞ ವರ್ಣನೆಯಿಂದ ಕೂಡಿದ ಸಂಭೋಗ ಶೃಂಗಾರದ ಅನುಪಮ ಖಂಡಕಾವ್ಯ.
ಅವನ ಇನ್ನೊಂದು ಪ್ರಸಿದ್ಧ ಖಂಡಕಾವ್ಯ "ಮೇಘದೂತ" ವಿಪ್ರಲಂಭ ಶೃಂಗಾರದ ಮೇರು ಕೃತಿ. ಕುಬೇರನ ಶಾಪದಿಂದ ಒಂದು ವರ್ಷ ಕಾಲ ಪತ್ನಿಯಿಂದ ದೂರವಿರಬೇಕಾಗಿಬಂದ ಯಕ್ಷನೊಬ್ಬ ಆಷಾಢದ ಒಂದು ದಿನ ಆಕಾಶದಲ್ಲಿ ಸಂಚರಿಸುತ್ತಿದ್ದ ನೀಲಮೇಘವನ್ನೇ ತನ್ನ ಸಂದೇಶ ರವಾನೆಗಾಗಿ ಪತ್ನಿಯತ್ತ ಕಳಿಸಿದ ಕಲ್ಪನೆ ಯಾರ ಮನ ಸೂರೆಗೊಳ್ಳದು? ಅರ್ಥಾಂತರಾನ್ಯಾಸ ಅಲಂಕಾರಭೂಯಿಷ್ಠವಾದ ಈ ಕಾವ್ಯದಲ್ಲಿ ರಾಮಗಿರಿಯಿಂದ ಅಲಕಾ ಪಟ್ಟಣದವರೆಗಿನ ಭೂ ಪ್ರದೇಶಗಳ ವರ್ಣನೆಯೂ ಇರುವುದು ವೈಶಿಷ್ಟ್ಯ. (ಅಖಂಡ ಭಾರತದ ಕಲ್ಪನೆಯನ್ನು ಕೊಟ್ಟವರು ಬ್ರಿಟೀಷರು ಎಂಬ ದುರ್ವಾದಕ್ಕೆ ಪ್ರತ್ಯುತ್ತರ ಕೊಡುವ ಶಕ್ತಿ ಈ ಕಾವ್ಯಕ್ಕಿದೆ.)
ಕಾಳಿದಾಸನ ಪ್ರತಿಭೆಗೆ ಸಮನಾಗಿ ನಿಲ್ಲುವ ಕವಿ ಪ್ರಾಯಶಃ ಹುಟ್ಟಿಲ್ಲ. ಒಮ್ಮೆ ಕಿರುಬೆರಳಿನಿಂದ ಉತ್ತಮ ಕವಿಗಳನ್ನು ಎಣಿಸಲಾರಂಭಿಸಿದ ವಿದ್ವಾಂಸರು ಮೊದಲು ಕಾಳಿದಾಸನ ಹೆಸರನ್ನು ತೆಗೆದುಕೊಂಡರಂತೆ. ಆನಂತರ ಅವನ ಯೋಗ್ಯತೆಯ ಸನಿಹವಾದರೂ ಇರುವ ಕವಿಯನ್ನು ಕಾಣದೇ ಮುಂದಿನ ಬೆರಳಿಗೆ ಅನಾಮಿಕ (ಹೆಸರಿಲ್ಲದ್ದು) ಎಂದು ಹೆಸರಿಟ್ಟರಂತೆ! (ಅನಾಮಿಕಾ ಸಾರ್ಥವತೀ ಬಭೂವ - ಮಧ್ಯ ಬೆರಳು ಮತ್ತು ಕಿರುಬೆರಳಿನ ನಡುವಿನ ಉಂಗುರ ಬೆರಳಿಗೆ ಅನಾಮಿಕ ಎಂದು ಹೆಸರು. )
ಅನೇಕ ಸಮಸ್ಯಾ ಪೂರ್ತಿಯ ಸವಾಲುಗಳನ್ನು ಎದೆಗೊಟ್ಟು ಎದುರಿಸಿ ಚಮತ್ಕಾರ ಪೂರ್ಣವಾದ
ಶ್ಲೋಕ ಗಳನ್ನು ರಚಿಸಿದ್ದಾನೆ. ಕಮಲೇ ಕಮಲೋತ್ಪತ್ತಿಃ (ಕಮಲದಲ್ಲಿ ಕಮಲದ ಜನನ) ಎಂಬ ಸಮಸ್ಯೆಗೆ ’ಬಾಲೇ! ತವ ಮುಖಾಂ ಭೋಜೇ ಕಥಮಿಂದೀವರದ್ವಯಂ’ (ಹೇ ಬಾಲೆಯೇ, ನಿನ್ನ ಮುಖವೆಂಬ ಕಮಲದಲ್ಲಿ ಒಂದಲ್ಲ ಎರಡು ಕೆನ್ನೈದಿಲೆಗಳು ಹೇಗೆ? !) ಎಂದು ಪರಿಹಾರ ಹೇಳಿದ್ದು ಪ್ರಸಿದ್ಧವಾಗಿಯೇ ಇದೆ. ಇಲ್ಲಿ ಕಣ್ಣುಗಳಿಗೆ ಇಂದೀವರ (ಕಪ್ಪು ಕಮಲ) ಎಂದು ರೂಪಿಸಿದ ಅವನ ನೈಪುಣ್ಯತೆಗೆ ಎಣೆಯುಂಟೇ?
ರಘುವಂಶದಲ್ಲಿ ಅಪ್ರತಿಮ ಸುಂದರಿ ಇಂದುಮತಿಯನ್ನು ದೀಪಶಿಖೆ ( ಬೆಳಗುವ ಪಂಜು ) ಎಂದು ಉಪಮಿಸಿದ್ದುಂಟು. ನೂರಾರು ಪುಟಗಳ ವಿವರಣೆಯೂ ಆ ಒಂದು ಶ್ಲೋಕದ ಸೊಬಗನ್ನೂ ಚಮತ್ಕಾರವನ್ನೂ ಕೊಡಲಾರದು. ದೀಪಶಿಖೆಯಂತ ಇಂದುಮತಿಯು ಸ್ವಯಂವರಕ್ಕಾಗಿ ಕಾದಿರುವ ರಾಜಕುವರರ ಮುಂದೆ ಹಾಯ್ದು ಹೋಗುತ್ತಿರುವಂತೆ ಎದುರಿಗಿರುವವರ ಮುಖ ಬೆಳಗಿದರೆ ಹಿಂದುಳಿದ ರಾಜರ ಮುಖ ಕಪ್ಪಿಟ್ಟಿತಂತೆ. ರಾತ್ರಿ ಪಂಜು ಮುಂದೆ ಹೋದರೆ ಹಿಂದಿನ ಮಹಲುಗಳೆಲ್ಲ ಕಪ್ಪಾಗುವಂತೆ.! ಈ ಉಪಮೆಯಿಂದಾಗಿ ಕಾಳಿದಾಸ ಸಂಸ್ಕೃತ ಸಾಹಿತ್ಯೇತಿಹಾಸದ ತುಂಬೆಲ್ಲಾ ’ದೀಪಶಿಖಾ’ ಕಾಳಿದಾಸ ಎಂದೇ ಪ್ರಸಿದ್ಧನಾಗಿದ್ದಾನೆ.
ಇಂತಹ ಪ್ರತಿಭಾ ಶಾಲಿ ಕವಿಯೂ ತುಂಬಾ ವಿನಯಶೀಲನಾಗಿದ್ದ. ರಘುವಂಶವನ್ನು ಆರಂಭಿಸುವಾಗ ’ಸೂರ್ಯನಿಂದ ಹುಟ್ಟಿದ ವಂಶವೆಲ್ಲಿ ನನ್ನಂಥ ಅಲ್ಪಮತಿಯೆಲ್ಲಿ? ಕವಿಯೆಂಬ ಕೀರ್ತಿಯ ಆಶೆಯಿಂದಾಗಿ ಉಪಹಾಸಕ್ಕೀಡಾಗುತ್ತೀನೇನೋ’ ಎಂದು ವಿನಮ್ರತೆಯನ್ನು ತೋರ್ಪಡಿಸಿದ್ದಾನೆ.ಹಾಗೆಂದು ಅವನಿಗೆ ಸ್ವಾಭಿಮಾನ ಇರಲಿಲ್ಲವೆಂದಲ್ಲ. ಮಾಲವಿಕಾಗ್ನಿಮಿತ್ರದಲ್ಲಿ ಭಾಸಾದಿ ಕವಿಗ ನಾಟಕಗಳ ಮಧ್ಯೆ ಆಧುನಿಕ ಕವಿಯಾದ ಕಾಳಿದಾಸನ ಕಾವ್ಯವನ್ನಾರು ಮೆಚ್ಚುವರು? ಎಂಬ ಪ್ರಶ್ನೆಗೆ - ಪುರಾಣಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವದ್ಯಂ ( ಹಳೆಯದೆಂಬ ಮಾತ್ರಕ್ಕೆ ಎಲ್ಲವೂ ಒಳ್ಳೆಯದಲ್ಲ. ಹೊಸಕಾವ್ಯಗಳೆಲ್ಲ ತಿರಸ್ಕಾರ ಯೋಗ್ಯವಲ್ಲ) ಎಂದು ದಿಟ್ಟ ಉತ್ತರ ನೀಡಿದ್ದಾನೆ.
ಇಂತಹ ಅಪ್ರತಿಮ ಕವಿಯ ವರ್ಣನೆಗೆ ಯಾವ ಲೇಖಕನ ಶಬ್ಧಗಳು ಶಕ್ತವಾದಾವು? ನಮಃ ಕವಯೇ ಕಾಳಿದಾಸಾಯ...

ಮಹಾಬಲ ಭಟ್

ಬಸ್ಸೆಂಬ ರಥವನೇರಿ

ಸುಜಾತ ಬಸ್ಸನ್ನೇರಿದ್ದಾಗ್ಗೆ ಗಂಟೆ ೩.೩೦ ಆಗಿತ್ತು. ಗೆಳತಿ ಪ್ರಿಯಾ ಸುಖ ಪ್ರಯಾಣಕ್ಕೆಂದು ಹಾರೈಸಿದಾಗ ಖುಶಿಯಿಂದಲೇ ಇನ್ನೊಂದು ೪ ಗಂಟೆಯಲ್ಲಿ ಊರಲ್ಲಿರುತ್ತೇನೆಂದು ಲೆಕ್ಕ ಹಾಕುತ್ತಾ ಕುಳಿತಳು. ತಾನೊಂದು ಕಿಟಕಿಯ ಬಳಿ ಸೀಟು ಮಗನೊಂದು ಕಿಟಕಿಯಬಳಿ ಸೀಟು ಗಿಟ್ಟಿಸಿಕೊಂಡು ಕುಳಿತಾಗ ಆಹಾ! ನಿಜವಾಗಿ ಇಂದು ನಮ್ಮದು ತುಂಬಾ ಸುಖಕರವಾದ ಪ್ರಯಾಣವೇ ಸರಿ ಎಂದು ಕನಸು ಕಾಣುತ್ತ ಕುಳಿತ ಸುಜಾತಳಿಗೆ ಕಂಡಕ್ಟರನ ಕರೆ ಇಹಲೋಕಕ್ಕೆಳೆಯಿತು. ಬಸ್ಸಾಗಲೇ ಊರಿನ ಮಧ್ಯದಲ್ಲಿ ಬಂದಿತ್ತು. ದುಡ್ಡು ತೆಗೆದು ಟಿಕೇಟು ಕೊಳ್ಳುವಾಗ ಕೇಳಿದ್ದು ’ಬಸ್ಸು ಚೋರ್ಲಾ ಘಾಟ್ ದಾರಿಯಲ್ಲಿ ಹೋಗುತ್ತದೆಂದು. ಆಯಿತಲ್ಲ. ಇನ್ನು ಸ್ವಲ್ಪ ಬೇಗ ಊರು ಮುಟ್ಟಬಹುದಲ್ಲ ಎಂದು. ಹೊಟ್ಟೆ ತುಂಬಾ ಹಸಿದದ್ದರಿಂದ ಸ್ವೀಟ್ ಮಾರ್ಟ ನಲ್ಲಿ ಕಟ್ಟಿಸಿಕೊಂಡ ತಿಂಡಿಯನ್ನು ತೆಗೆದು ತಾಯಿ ಮಗ ತಿನ್ನುತ್ತಾ ಕುಳಿತರು. ಇನ್ನೇನು ಊರು ದಾಟಿ ಬಸ್ಸು ಊರ ಹೊರಗೆ ಬಂದಾಯ್ತಲ್ಲ ಎನ್ನುತ್ತಿದ್ದಂತೆ ಸುರುವಾಯಿತಲ್ಲ. ಹೊಂಡಗಳ ರಸ್ತೆ. ಇದೇನು ಸ್ಡಲ್ಪ ದೂರ ಇರಬಹುದು ಎಂದು ಹೊರಗೆ ನೋಡುತ್ತಾ ದಾರಿ ಸೆವೆಸುತ್ತಿದ್ದಾಗ ಇನ್ನೂ ಬಸ್ಸು ಓಲಾಡತೊಡಗಿತು.
ಏನಪ್ಪಾ ಇದು ಎಂದು ಮುಂದೆ ನೋಡಿದಾಗ ಕಂಡಿದ್ದು ತಗ್ಗುದಿನ್ನೆಗಳ ಡಾಂಬರ್ ಹಾರಿದ್ದ ರಸ್ತೆ. ಹಿಂದಿದ್ದ ಪ್ರಯಾಣಿಕರೊಬ್ಬರು ಉಲಿದರು. ಇನ್ನು ೩೦ ೩೫ ಕಿ. ಮೀ. ರಸ್ಸತೆ ಹೀಗೆ ಇದೆ. ಮುಂದೆ ಇನ್ನೂ ಕೆಟ್ಟಿದೆಯೆಂದಾಗ ಮುಂದಿನ ತನ್ನ ಪರಿಸ್ಥಿತಿ ನೆನೆದು ಸುಖ ಪ್ರಯಾಣದ ಕನಸು ಜರ್ರೆಂದು ಇಳಿದು ಇಹಲೋಕಕ್ಕೆ ಬಂದು ಗಟ್ಟಿಯಾಗಿ ಮುಂದಿನ ಸೀಟಿನ ಪಟ್ಟಿಯನ್ನು ಹಿಡಿದು ಕುಳಿತಳು. ಅಷ್ಟೇ ಅಲ್ಲ ಹಿಂದಿನ ಸೀಟಿನಲ್ಲ್ಲಿದ್ದ ಮಗನಿಗೂ ಹುಶಾರಾಗಿ ಕುಳಿತುಕೊಳ್ಳಲು ಹೇಳಿದಳು. ( ಹೇಗೆ ವಿಮಾನದಲ್ಲಿ ಗಗನಸಖಿ ಬಂದು ಬೆಲ್ಟ್ ಕಟ್ಟಿಕೊಳ್ಳಲು ಹೇಳುತ್ತಾಳೋ ಹಾಗೆ. ) ಏನು ಮಾಡುವುದು ಇಲ್ಲಿ ಬೆಲ್ಟಿನ ಬದಲು ಸೀಟಿನ ಪಟ್ಟಿಯೇ ಗತಿ ಎಂದು! ಕಣ್ಣು ಮುಚ್ಚಿ ಕುಳಿತಳು.
ಸುಜಾತಾ ಮೊನ್ನೆಯ ದಿನ ಹೋಗಿದ್ದು ತನ್ನ ತಂದೆಯ ವರ್ಷದ ಶ್ರಾದ್ಧಕ್ಕಾಗಿ. ಅಲ್ಲಿ ಎಲ್ಲ ಸಾಂಗವಾಗಿ ನೆರವೇರಿಸಿ ಬಸ್ಸಲ್ಲಿ ಸ್ವಲ್ಪ ದೂರ ಸಾಗಿದಾಗ ಅನಿಸಿದ್ದು ’ಅಯ್ಯೋ ಇವತ್ತು ಊರು ಮುಟ್ಟುತ್ತೇನೋ ಇಲ್ಲ ಎಲ್ಲಿ ತಲುಪುತ್ತೇನೋ ಎಂದು ಇದ್ದ ಬಿದ್ದ ದೇವರನ್ನೆಲ್ಲ ನೆನೆಯುತ್ತಾ ಕುಳಿತಾಗ ಕಂಡ ದೇವರೆಂದರೆ ಬಸ್ಸು ಚಾಲಕನೊಬ್ಬನೇ... ಏಕೆಂದರೆ ಸದ್ಯ ನಮ್ಮನ್ನು ಸುರಕ್ಷಿತವಾಗಿ, ಜೀವಂತವಾಗಿ ಊರನ್ನು ತಲುಪಿಸುವ ದೇವರು ಅವನಲ್ಲದೇ ಮತ್ತಾರು? ಏಕೆಂದರೆ ಬಸ್ಸಿನ ಓಲಾಟ ೩೦ ರಿಂದ ೬೦ ಮತ್ತೆ ೯೦ ಡಿಗ್ರಿಯವರೆಗೆ ತಲುಪಿತ್ತು. ಇನ್ನಂತೂ ದೇವರು, ದಿಂಡರು, ಗುರು ಹಿರಿಯರು, ಬಂಧು ಬಳಗದವರನ್ನೆಲ್ಲ ನೆನೆಯುತ್ತ ಗಟ್ಟಿಯಾಗಿ ಮುಚ್ಚಿದ್ದ ಕಣ್ಣು ತೆರೆದದ್ದು ಕಂಡಕ್ಟರನ ಕೂಗಿನಿಂದ. ಅದೂ ಒಂದು ಹೊಟೇಲಿನ ಎದುರಿಗೆ. ಟೀ ಗಾಗಿ ಹತ್ತು ನಿಮಿಷವಿದೆಯೆಂದು ಕಣ್ಣುಬಿಟ್ಟು ಸುತ್ತ ಮುತ್ತ ನೋಡಿದಾಗ ದಟ್ಟ ಕಾಡಿನ ಮಧ್ಯದಲ್ಲಿದ್ದ ಎದುರಿಗೆ ಕಾಣುತ್ತಿದ್ದ ಹೊಟೇಲ್ ಮತ್ತು ಪಕ್ಕದಲ್ಲಿ ಕೆಟ್ಟು ನಿಂತಿದ್ದ ಮತ್ತೊಂದು ಬಸ್ಸಿನ ಪ್ರಯಾಣಿಕರು. ನಮ್ಮ ಬಸ್ಸು ನಿಂತಿದ್ದೇ ತಡ ಸ್ವರ್ಗದಿಂದ ಪುಷ್ಪಕ ವಿಮಾನವೇ ಬಂದಿತೆನ್ನುವಂತೆ ಮುಖವರಳಿಸಿ ಬಂದು ಬುದಬುದನೆ ಬಸ್ಸನ್ನೇರಿದರು.ಪಕ್ಕ ಬಂದು ಕುಳಿತಾಕೆ ಭಾರೀ ಗಾತ್ರದವಳು. ಬುಸಬುಸನೇ ಉಸಿರು ಬಿಡುತ್ತಾ ದೊಪ್ಪೆಂದು ಕುಳಿತಾಗ ಮೊದಲೇ ಮುದ್ದೆಯಾಗಿದ್ದ ಸುಜಾತ ಇನ್ನೂ ಮುದ್ದೆಯಾದಳು. ಪಾಪ! ಅವಳೋ ಬೆಳಿಗ್ಗೆಯಿಂದ ಇದು ಮೂರನೆಯ ಬಸ್ಸು ಬದಲಾಯಿಸಿದ್ದೆಂದಳು. ಮೊದಲು ಏನೆಂದು ಸುಜಾತಳಿಗೆ ತಿಳಿಯಲಿಲ್ಲ. ಏಕೆಂದು ಕೇಳಿದಾಗ ಬಂದ ಉತ್ತರ ಬಂದ ಎರಡೂ ಬಸ್ಸುಗಳೂ ರಸ್ತೆಯಲ್ಲಿ ಕೆಟ್ಟು ಇಲ್ಲಿಯವರೆಗೆ ತಲುಪಲು ತೆಗೆದುಕೊಂಡದ್ದು ೬ ತಾಸು. ಕಾಡಿನ ದಾರಿಯಲ್ಲಿ ಊಟವಿಲ್ಲ ನೀರಿಲ್ಲ. ಇವತ್ತು ಈ ಹೊಟೆಲ್ಲೇ ಅವರ ಅಕ್ಷಯ ಧಾಮವಾಗಿತ್ತು.
ಅಲ್ಲಿಂದ ಬಸ್ಸು ಹೊರಟಾಗ ಆಗಲೇ ಅರ್ಧಗಂಟೆ ತಡವಾಗಿತ್ತು. ಮುಂದಿನ ದಾರಿ ಕೆಟ್ಟದಿದ್ದರೂ ಬಸ್ಸು ಭರ್ತಿಯಿದ್ದುದರಿಂದ ಅಷ್ಟೇನೂ ಕುಲುಕಾಟವಿರಲಿಲ್ಲ. ಈಗ ಇನ್ನೊಂದು ತೊಂದರೆ ಶುರುವಾದದ್ದು ಪಕ್ಕದವಳಿಂದ. ಅವಳುಟ್ಟಿದ್ದ ಆ ಚಮಕ್ ಮತ್ತು ಟಿಕಲಿ ಹಚ್ಚಿದ ಭಾರೀ ಸೀರೆ. ಬಸ್ಸಿನ ಕುಲುಕಾಟ ಅನುಭವಿಸಿ ಸಾಕಾಗಿ ಉಸ್ಸೆಂದಾಗ ಶುರುವಾಗಿದ್ದು ಪಕ್ಕದಲ್ಲಿನ ಸೂಜಿ ಚುಚ್ಚಿದ ಅನುಭವ.ಈ ಸೂಜಿಗಿಂತ ಆ ಮೊದಲಿನ ಅನುಭವವೇ ಸ್ಡಲ್ಪ ಹಿತವಾಗಿತ್ತೇನೋ.!? ಏನೂ ಮಾಡುವ ಹಾಗಿಲ್ಲ. ಹಾ ಹೂ ಅನ್ನುತ್ತ ಅವಳನ್ನು ಸರಿಸುವ ಹರಸಾಹಸ ಮಾಡುವುದನ್ನು ನೋಡಲಾರದೇ ಆ ಧಡೂತಿ ಹೆಂಗಸಿನ ಪತಿ ಅವಳ ತೋಳಿನ ಮೇಲೆ ಟವಲ್ ನ್ನು ಹಾಕಿದಾಗ ಸುಜಾತ ನಿಟ್ಟುಸಿರು ಬಿಟ್ಟಳು.
ಇನ್ನು ಒಳ್ಳೆಯ ರಸ್ತೆ ಶುರುವಾಯಿತಲ್ಲ ಎಂದು ಕೊಳ್ಳುತ್ತಿರುವಾಗಲೇ ಇದೇ ಸಮಯದಲ್ಲಿ ನನ್ನದೂ ಒಂದು ಕೈ ತೋರಿಸಿಯೇ ಬಿಡೋಣವೆಂದು ವರುಣನಿಗೂ ಅನ್ನಿಸಿರಬೇಕು. ತನ್ನ ಕೆಲಸ ತಾನು ಶುರು ಮಾಡಿಯೇ ಬಿಟ್ಟ. ಕಿಟಕಿ ಮುಚ್ಚಲು ಹೋದರೆ ಎಳೆಯಲು ಬರುತ್ತಲೇ ಇರಲಿಲ್ಲ. ಇದ್ದ ಬಿದ್ದ ಶಕ್ತಿ ಪ್ರಯೋಗಿಸಿದರೂ ಅದೂ ಮುಷ್ಕರ ಶುರುಮಾಡಿತು. ಆಯಿತಲ್ಲ ಇನ್ನೇನು ಎಂದು ಬೇರೆಕಡೆ ಎದ್ದು ಹೋಗಲೂ ಜಾಗವಿಲ್ಲ. ಅಷ್ಟೊಂದು ಜನ. ಕೊನೆಗೊಂದು ಉಪಾಯ ಹೊಳೆಯಿತು. ಬ್ಯಾಗಿನಲ್ಲಿದ್ದ ಛತ್ರಿ ತೆಗೆದು ಏರಿಸಿ ಕಿಟಕಿಗಡ್ಡ ಹಿಡಿದು ಕುಳಿತಾಗ ಎಲ್ಲರ ಮುಖದಲ್ಲಿ ನಗೆಯೋ ನಗೆ. ತುಂಬಿದ ಬಸ್ಸಿನಲ್ಲಿ ಛತ್ರಿ ಏರಿಸಿ ಕುಳಿತ ಸುಜಾತಳಿಗೆ ಮುಜುಗರವೋ ಮುಜುಗರ. ಏನು ಮಾಡುವುದು ಉಪಾಯವಿಲ್ಲ. ಕೊನೆಗೆ ವರುಣನಿಗೇ ಬೇಜಾರಾಗಿ ಸುಮ್ಮನಾದಾಗ ಊರಿನ ಹತ್ತಿರ ಹತ್ತಿರ ಬಂದಿದ್ದರು. ಅಷ್ಟುದೂರದಿಂದ ತಮ್ಮೂರಿನ ಸೇತುವೆ ಕಂಡಾಗ ಸುಜಾತಳಿಗೆ ಹುರ್ರೇ ಎನ್ನುವಂತಾಗಿತ್ತು. ಬಸ್ಸಿಳಿಯುವಾಗ ಚಾಲಕನ ಜೊತೆಯಲ್ಲಿ ಮಾತನಾಡಿ ಧನ್ಯವಾದಗಳನ್ನೇಳಿದಾಗ ’ಇದೆಲ್ಲಿಂದ ಬಂತಪ್ಪಾ ಹೊಸ ಪ್ರಾಣಿ?’ ಎನ್ನುವಂತೆ ಅವನು ನೋಡುತ್ತಿದ್ದ. ಅವನಿಗೆ ಕೂಡ ಅದು ಹೊಸ ಅನುಭವವೇ ಸರಿ. ಇಲ್ಲಿಯವರೆಗೆ ಅವನು ನೋಡಿದ್ದು ಊರಿಗೆ ತಲುಪಿದ ಪ್ರಯಾಣಿಕರು ಹೀಗೆ ಹೇಳುವುದಿರಲಿ ತಿರುಗಿಕೂಡ ನೋಡುತ್ತಿದ್ದಿಲ್ಲ. ಇಷ್ಟೆಲ್ಲ ಪ್ರಯಾಣಿಕರ ಜೀವವನ್ನು ಸುರಕ್ಷಿತವಾಗಿ ಮುಟ್ಟಿಸಿದ ಈ ಚಾಲಕ ಸದ್ಯದ ದೇವರು. ಅವಾರ್ಡ ವಿನ್ಹರ್ ತರ ಕಂಡ ಸುಜಾತಳ ಕಣ್ಣಿಗೆ ಈ ದಿನದ ಹೀರೋ ಈ ಚಾಲಕನೇ!

ಅನುರಾಧಾ ಯಾಳಗಿ

ಕನ್ನಡದ ಕಟ್ಟಾಳು ಮುದವೀಡು ಕೃಷ್ಣರಾಯರು


ಕನ್ನಡಕ್ಕಾಗಿ ಕನ್ನಡದ ಉಳಿವಿಗಾಗಿ ಏಳಿಗೆಗಾಗಿ ಅವಿರತ ಶ್ರಮಿಸಿದ ಮಹಾನುಭಾವ ಕನ್ನಡದ ಗಂಡುಗಲಿ ದಿವಂಗತ ಮುದವೀಡು ಕೃಷ್ಣರಾಯರು ಕನ್ನಡಿಗರಿಗೆ ಸಂದೇಶರೂಪವಾಗಿ ನೀಡಿದ ಪದ್ಯ-"ಕೂಗುವೊಂದಾಗೊ ಕರುಳೊಂದಾಗಿ ಹೃದಯದನುರಾಗವೊಂದಾಗಿ ಸಂಘಬಿತ ಬಲಯುತರಾಗಿ ರಾಗ ವಿದ್ವೇಷ ಮತ್ಸರ ಮದಂಗಳ ನೀಗಿ ಸಾಗಲನುವಾಗಿರೈ ಭೋಗ ಬಿಟ್ಟೇಳಿರೈ ಕನ್ನಡಮ್ಮನ ಕುವರರೇ.!"
ಕನ್ನಡದ ಕಟ್ಟಾಭಿಮಾನಿ, ಸ್ವಾತಂತ್ರ್ಯ ಸೇನಾನಿ ಹೆಸರಾಂತ ಸಾಹಿತಿ ಶ್ರೀ ಮುದವೀಡು ಕೃಷ್ಣರಾಯರು ಜನಿಸಿದ್ದು ರಾಣೆಬೆನ್ನೂರಿನಲ್ಲಿ ೨೪-೦೭-೧೮೭೪ರಂದು. ಹುಟ್ಟಿದ್ದು ರಾಣೆ ಬೆನ್ನೂರಿನಲ್ಲಿ ಆದರೂ ಬೆಳೆದದ್ದು ಧಾರವಾಡದಲ್ಲಿ. ಮುಂಬೈ ಕರ್ನಾಟಕದ ಭಾಗವಾಗಿದ್ದ ಧಾರವಾಡದಲ್ಲಿ ಅಡ್ಡ ಹೆಸರಿಗೆ ಕರ ಹಚ್ಚುವುದು ಒಂದು ಪ್ರತಿಷ್ಠೆಯ ವಿಷಯವಾಗಿತ್ತೇನೋ? ಆದರೆ ನಮ್ಮ ಮುದುವೀಡ ಕೃಷ್ಣರಾಯರಿಗೆ ಮಾತ್ರ ’ಮುದುವೀಡಕರ್’ ಎಂದರೆ ಎಲ್ಲಿಲ್ಲದ ಸಿಟ್ಟು, ನಾನು ಕೇವಲ "ಮುದುವೀಡು", "ಮುದುವೀಡಕರ್" ಅಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದರು.
ಕಲಿಕೆಯ ಆರಂಭದ ಅ, ಆ, ಇ, ಈ.......... ಮರಾಠಿಯಲ್ಲಿ ಆದುದು ಒಂದು ವಿಪರ್ಯಾಸ ಎನ್ನಬಹುದು. ಕಾರವಾರದಿಂದ ಧಾರವಾಡಕ್ಕೆ ಸ್ಥಳಾಂತರಗೊಳ್ಳುವುದರೊಂದಿಗೆ ಕಲಿಕೆಯು ಕೂಡ ಮರಾಠಿಯಿಂದ ಕನ್ನಡಕ್ಕೆ ಬದಲಾಯಿತು. ವಿದ್ಯಾವರ್ಧಕ ಸಂಘದ ಸಂಸ್ಥಾಪಕರಲ್ಲೊಬ್ಬರಲ್ಲಾದ ಶ್ರೀ. ರಾ. ಹ. ದೇಶಪಾಂಡೆಯವರ ಪ್ರಭಾವವೆ ಇದಕ್ಕೆ ಕಾರಣ ಎನ್ನಬಹುದು.
ಶಾಲಾ ಕಾಲೇಜು ದಿನಗಳಲ್ಲಿ ಭಾಷಣದಲ್ಲಿ ಎತ್ತಿದ ಕೈ ಇವರದು. ಕಂಚಿನ ಕಂಠದ ಕೃಷ್ಣರಾಯರು ಭಾಷಣಕ್ಕೆ ನಿಂತರೆ ಸಾಕು ಪ್ರೇಕ್ಷಕರು ಮಂತ್ರಮುಗ್ಧರಾಗಿಬಿಡುತ್ತಿದ್ದರು. ಭಾಷಣ ಸ್ಪರ್ಧೆಗಳಲ್ಲಿ ಪ್ರಥಮಸ್ಥಾನ ಇವರಿಗೆ ಕಟ್ಟಿಟ್ಟ ಬುತ್ತಿ ಯಾವಾಗಲೂ. ಸಾಹಿತ್ಯ ರಾಜಕೀಯ, ಸಾಂಸ್ಕೃತಿಕ ಚಟುವಟಿಕೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕೈಯಾಡಿಸಿದ ಇವರು ಆಡು ಮುಟ್ಟದ ಗಿಡವಿಲ್ಲ, ಕೃಷ್ಣರಾಯರು ಕೈಯಾಡಿಸದ ಕ್ಷೇತ್ರವಿಲ್ಲ ಎಂದು ಪ್ರಸಿದ್ಧರಾಗಿದ್ದರು.
ಯಾವುದೂ ಒಂದು ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಬೇಕಾದರೆ ಸಾಕುಬೇಕಾಗುವ ಈ ದಿನಗಳಲ್ಲಿ ಇವರು ಎಲ್ಲ ಕ್ಷೇತ್ರಗಳಲ್ಲಿಯೂ ಉತ್ತುಂಗಕ್ಕೇರಿದ್ದು ಇವರ ಆದಮನೀಯ ಚೈತನ್ಯಕ್ಕೆ ಸಾಕ್ಷಿ ಎನ್ನಬಹುದು.
ಅದು ಸ್ವಾತಂತ್ರ್ಯ ಸಂಗ್ರಾಮದ ಸಮಯ. ಉತ್ತರದ ಅನೇಕ ಕಾಂಗ್ರೆಸ್ ನಾಯಕರು ಧಾರವಾಡಕ್ಕೆ ಭೇಟಿ ಕೊಡುತ್ತಿದ್ದರು. ಅವರು ಇಂಗ್ಲೀಷ ಅಥವಾ ಹಿಂದಿಯಲ್ಲಿ ಮಾಡುತ್ತಿದ್ದ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸುವುದು ಯಾವಾಗಲೂ ಕೃಷ್ಣರಾಯರ ಕೆಲಸವೇ.! ಇವರ ಭಾಷಾಂತರ ಎಷ್ಟೊಂದು ಪ್ರಭಾವ ಬೀರುತ್ತಿತ್ತೆಂದರೆ ಮೂಲ ಭಾಷಣಕ್ಕಿಂತ ಇವರ ಭಾಷಾಂತರಕ್ಕೆ ಚಪ್ಪಾಳೆ ಕೇಕೇ! ಇದರಿಂದ ಭಾಷಣಕಾರರು ಕಕ್ಕಾಬಿಕ್ಕಿಯಾಗುತ್ತಿದ್ದರು. ಕಾಂಗ್ರೆಸ್ಸಿನ ಅಂದಿನ ಹಿರಿಯ ನಾಯಕರಲ್ಲೊಬ್ಬರಾದ ಶ್ರೀ ಪಟ್ಟಾಭಿ ಸೀತಾರಾಮಯ್ಯನವರು ಕೃಷ್ಣರಾಯರ ಅನುವಾದ ಭಾಷಣಕ್ಕೆ ಜನರು ಅಟ್ಟಹಾಸದಿಂದ ನಗುವುದು ಸತತ ಚಪ್ಪಾಳೆ ತಟ್ಟುವುದ ಕಂಡು I am jealous of my translator, because he seems to be more elegant and lively than me.” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದು ಕೃಷ್ಣರಾಯರ ಭಾಷಣ ಪ್ರತಿಭೆಗೆ ಸಾಕ್ಷಿ !
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಲಿಖಿತ ಭಾಷಣವನ್ನು ವಾಚಿಸುವುದು ಸಂಪ್ರದಾಯ..ಆದರೆ ಬೆಳಗಾಂವಿಯಲ್ಲಿ ೧೯೩೯ ರಲ್ಲಿ ಜರುಗಿದ ೨೪ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಮುದುವೀಡು ಅವರು ಲಿಖಿತ ಭಾಷಣವನ್ನು ಬದಿಗಿರಿಸಿ ಆಡು ಭಾಷೆಯಲ್ಲಿನನ್ನನ್ನು ಈ ವರ್ಷದ ಅಧ್ಯಕ್ಷೀಯ ಖುರ್ಚಿಯ ಮ್ಯಾಲ ಕೂಡಿಸಿ ನಿಮ್ಮ ಕನ್ನಡ ಕಕ್ಕುಲಾತಿಯ ಕದಲಾರ್ತಿ ಬೆಳಗಿದ್ದೀರಿ. ಎಂದು ಆರಂಭಿಸುವುದರೊಂದಿಗೆ ಎಲ್ಲ ಪ್ರೇಕ್ಷಕರ ಹೃದಯ ಮುಟ್ಟಿದರು. ಅಂತ:ಕರಣ ತಟ್ಟಿದರು.
ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಶ್ರೀ ಕೃಷ್ಣರಾಯರದು ಎತ್ತಿದ ಕೈ. ರಾಯರು ಸ್ವತಃ ನಾಟಕಗಳನ್ನು ರಚಿಸಿ ಪ್ರಯೋಗಿಸುತ್ತಿದ್ದರು. ೧೯೦೪ ರಲ್ಲಿಯೇ ’ರಾಮರಾಜ್ಯ ನಿಯೋಗ’ ’ಸೌಭದ್ರ’ ನಾಟಕಗಳನ್ನು ಬರೆದು ರಂಗಮಂಚದ ಮೇಲೆ ಆಡಿಸಿದರು.
೧೮೯೯ ರಲ್ಲಿ ಮದಿಹಾಳದ ’ಕ್ರೀಡಾ ಸಂಘ’ ಎಂಬ ಹವ್ಯಾಸೀ ತಂಡವನ್ನು ’ಭಾರತ ಕಲೋತ್ತೇಜಕ ನಾಟ್ಯಸಭಾ’ ಎಂದು ಬದಲಾಯಿಸಿ ಶೇಷಗಿರಿ ರಾಯರ ’ಕನ್ನಡ ಶಾಕುಂತಲ’ ಮತ್ತು ಎರಡು ನಾಟಕಗಳಾದ ’ರಾಮರಾಜ್ಯ ನಿಯೋಗ’ ಹಾಗೂ ’ಸೌಭದ್ರ’ ಪ್ರಯೋಗಿಸಿದರು. ರಾಯರ ಕರ್ನಾಟಕಸಂಗೀತ ಜ್ಞಾನವೂ ಗಮನಾರ್ಹವಾಗಿತ್ತು.
ಬಹುಮುಖ ಪ್ರತಿಭೆಯ ವರ್ಣರಂಜಿತ ವ್ಯಕ್ತಿತ್ವದ ಕೃಷ್ಣರಾಯರು ಪತ್ರಿಕಾ ಸಂಪಾದನೆಯಲ್ಲೂ ಕೈಯಾಡಿಸಿದವರು. ಕರ್ನಾಟಕ ವೃತ್ತ ಮತ್ತು ಧನಂಜಯ ಎಂಬ ಎರಡು ಪತ್ರಿಕೆಗಳ ಸಂಪಾದಕರಾಗಿದ್ದುದು ಇವರ ಹೆಗ್ಗಳಿಕೆ.
ಸ್ವಾತಂತ್ರ್ಯದ ಸಂಗ್ರಾಮದ ಮಂಚೂಣಿಯಲ್ಲಿ ಇದ್ದ ಇವರು ನನ್ನ ದೇಸ ಸ್ವತಂತ್ರ ವಾದದ್ದನ್ನು ನೋಡಿಯೇ ನಾನು ಸಾಯ್ತೀನಿ ಎಂದು ಗುಡುಗುತ್ತಿದ್ದರು. ಅವರ ಇಚ್ಛಾಶಕ್ತಿ ಎಷ್ಟು ಪ್ರಭಲವಾಗಿತ್ತೆಂದರೆ ನಮ್ಮ ರಾಷ್ಟೃಕ್ಕೆ ಸ್ವಾತಂತ್ರ್ಯ ಬಂದು ಒಂದು ತಿಂಗಳು ಆಗುವ ಮೊದಲೇ ಅವರು ಇಹಲೋಕವನ್ನು ತ್ಯಜಿಸಿದರು. ೧೯೪೭ ಸೆಪ್ಟೆಂಬರ್ ೭ ರಂದು ಅವರು ಕೊನೆಯುಸಿರೆಳೆದರು. ಆದರೆ ತಾವು ನುಡಿದಂತೆ ಸ್ವಾತಂತ್ರ್ಯ ದೊರೆಯುವವರೆಗೆ ಸಾವನ್ನು ತಡೆದು ನಿಲ್ಲಿಸಿದ ಛಲಗಾರ ಇವರು!

ಉದಯಕುಮಾರ ದಾನಿ

Thursday, January 13, 2011

ಗೋವಾ ಕ್ರಾಂತಿಯ ರೂವಾರಿ- ರಾಮ ಮನೋಹರ ಲೋಹಿಯಾ


ರಾಮ ಮನೋಹರ ಲೋಹಿಯಾ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತೀಯ ಸಮಾಜವಾದದ ಪ್ರಮುಖ ಚಿಂತಕ. ರಾಜಕೀಯ ನಾಯಕ. ಇವರು ಮಾರ್ಚ್ ೨೩, ೧೯೧೦ ರಂದು ಉತ್ತರ ಪ್ರದೇಶ ರಾಜ್ಯದ ಫೈಜಾಬಾದ್ ಜಿಲ್ಲೆಯ ’ಅಕ್ಬರ್ ಪುರ’ ಎಂಬ ಹಳ್ಳಿಯಲ್ಲಿ ಜನಿಸಿದರು.
ಜೀವನ
ರಾಮ ಮನೋಹರ ಲೋಹಿಯಾ ಅವರ ತಂದೆ ಹೀರಾ ಲಾಲ್, ತಾಯಿ ಚಂದ್ರಿ. ಅವರು ವೃತ್ತಿಯಿಂದ ಶಿಕ್ಷಕರಾಗಿದ್ದರು ಮತ್ತು ರಾಷ್ಟ್ರೀಯತೆಯ ಕಿಚ್ಚನ್ನು ನಂಬಿದ್ದವರು. ರಾಮ ಚಿಕ್ಕ ವಯಸ್ಸಿನಲ್ಲಿ ಇದ್ದಾಗಲೇ ಅವರ ತಾಯಿ ಚಂದ್ರಿ ತೀರಿಕೊಂಡಿದ್ದರು. ಲೋಹಿಯಾ ಅವರನ್ನು ಅವರ ತಂದೆ ಚಿಕ್ಕ ವಯಸ್ಸಿನಲ್ಲೇ ತಾವು ತೆರಳುತ್ತಿದ್ದ ಸ್ವಾತಂತ್ರ್ಯ ಚಳುವಳಿಗಳಿಗೆ ಮತ್ತು ಸಮಾವೇಶಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಲೋಕಮಾನ್ಯ ಬಾಲ ಗಂಗಾಧರ ತಿಲಕರು ತೀರಿಕೊಂಡಾಗ, ಲೋಹಿಯಾ ಅವರು ಒಂದು ಪುಟ್ಟ ಪ್ರತಿಭಟನೆಯನ್ನು ಮಾಡುವ ಮೂಲಕ ತಮ್ಮ ಮೊದಲ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದರು.
ತಂದೆ ಹೀರಾ ಲಾಲ್’ ಅವರು ಮಹಾತ್ಮಾ ಗಾಂಧಿ ಅವರ ಅನುಯಾಯಿ ಯಾಗಿದ್ದರು. ಹೀಗಾಗಿ ಒಮ್ಮೆ ಲೋಹಿಯಾ ಅವರನ್ನು ತಮ್ಮೊಂದಿಗೆ ಗಾಂಧಿ ಅವರನ್ನು ಭೇಟಿ ಮಾಡಲು ಕರೆದುಕೊಂಡು ಹೋದರು. ಈ ಭೇಟಿಯೇ ಲೋಹಿಯಾ ಅವರಲ್ಲಿ ದೇಶಕ್ಕಾಗಿನ ಪ್ರೇಮ, ಬಲಿದಾನ ಮತ್ತು ಸ್ವರಾಜ್ ಚಿಂತನೆಯನ್ನು ಮೈಗೂಡಿಸಿಕೊಳ್ಳಲು ಸಹಾಯ ಮಾಡಿತು. ಲೋಹಿಯಾ ಅವರು ಗಾಂಧಿಯವರಿಂದ ಎಷ್ಟು ಪ್ರಭಾವಿತ ರಾದರೆಂದರೆ, ಮಹಾತ್ಮಾರ ತತ್ವಗಳನ್ನು ಪಾಲಿಸಲು ಪ್ರಾರಂಭಿಸಿದರು. ಲೋಹಿಯಾ ಅವರು ತಮ್ಮ ೧೦ನೇ ವಯಸ್ಸಿನಲ್ಲಿಯೇ ಸತ್ಯಾಗ್ರಹ ಚಳುವಳಿಗೆ ಸೇರ್ಪಡೆಯಾದರು.
ರಾಜಕೀಯದಲ್ಲಿ ಪ್ರವೇಶ
ಲೋಹಿಯಾ ಅವರು ಜವಹರಲಾಲ್ ನೆಹರೂ ಅವರನ್ನು ೧೯೨೧ನೇ ಇಸವಿಯಲ್ಲಿ ಭೇಟಿಯಾದರು. ಕೆಲವೇ ವರ್ಷಗಳಲ್ಲಿ ಇಬ್ಬರೂ ಆಪ್ತ ಸ್ನೇಹಿತರಾದರು. ಇಷ್ಟು ಒಳ್ಳೆಯ ಸ್ನೇಹಿತರಾದರೂ ನೆಹರೂ ಅವರು ತೆಗೆದುಕೊಳ್ಳುತ್ತಿದ್ದ ಕೆಲವು ನಿರ್ಣಯಗಳು ಮತ್ತು ರಾಜಕೀಯ ನಂಬಿಕೆಗಳ ಕುರಿತು ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ೧೯೨೮ರಲ್ಲಿ ಸೈಮನ್ ಕಮೀಷನ್ನಿನ ವಿರುದ್ಧ ವಿದ್ಯಾರ್ಥಿ ಪ್ರತಿಭಟನೆಯನ್ನು ಹಮ್ಮಿಕೊಂಡರು. ಸೈಮನ್ ಕಮೀಷನ್ನು ಭಾರತಕ್ಕೆ ಸ್ವಾಮಿತ್ವ (ಜomiಟಿioಟಿ sಣಚಿಣus) ನೀಡುವ ಕುರಿತು ಭಾರತೀಯ ಜನರ ಅಭಿಲಾಷೆಗಳನ್ನು ಕೇಳದೆ ಮುಂದೆ ಹೊರಟಿತ್ತು.

ವಿದ್ಯಾಭ್ಯಾಸ
ಲೋಹಿಯಾ ಅವರು ಮೆಟ್ರಿಕ್ ನಲ್ಲಿ ತಮ್ಮ ಶಾಲೆಗೇ ಮೊದಲ ಸ್ಥಾನದಲ್ಲಿ ತೇರ್ಗಡೆಯಾಗಿ, ನಂತರ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಇಂಟರ್ ಮೀಡಿಯೇಟ್ ಕೋರ್ಸಿಗೆ ಸೇರಿದರು. ೧೯೨೯ರಲ್ಲಿ ಬಿ.ಎ. ಪದವಿಯನ್ನು ಕೋಲ್ಕತ್ತ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು. ಇವರು ಬ್ರಿಟೀಷ್ ತತ್ವ ಶಾಸ್ತ್ರವನ್ನು ನಂಬುತ್ತಿರಲಿಲ್ಲ. ಹೀಗಾಗಿ ತಮ್ಮ ಅಭಿಪ್ರಾಯಗಳನ್ನು ಸಮರ್ಪಕವಾಗಿ ಮುಂದಿಡಲು ಜರ್ಮನಿಯ ಬರ್ಲಿನ್ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು. ಬಹು ಬೇಗನೆ ಜರ್ಮನ್ ಭಾಷೆಯನ್ನು ಕಲಿತು, ತಮ್ಮ ಅಪ್ರತಿಮ ಸಾಧನೆಗಾಗಿ ಹಣ ಸಹಾಯವನ್ನೂ ಪಡೆದರು. ಇಲ್ಲಿನ ಉಪ್ಪಿನ ಸತ್ಯಾಗ್ರಹ ಕುರಿತು ಪ್ರೌಢ ಪ್ರಬಂಧ ಬರೆದು, ಅರ್ಥಶಾಸ್ತ್ರದಲ್ಲಿ ಪಿ.ಎಚ್.ಡಿ ಗಳಿಸಿದರು. ಜರ್ಮನ್ ಭಾಷೆಯಲ್ಲೇ ಮಾರ್ಕ್ಸ್ ಮತ್ತು ಹೆಗೆಲ್‌ರ ಕೃತಿಗಳನ್ನು ಅಭ್ಯಸಿಸಿ ಅವರಿಗಿಂತ ಭಿನ್ನವಾಗಿ ಚರಿತ್ರೆಯನ್ನು ಅರಿಯುವ ಅಗತ್ಯವನ್ನು ಕುರಿತು ಚಿಂತಿಸಿದರು.

ಸ್ವಾತಂತ್ರ್ಯ ಹೋರಾಟಗಾರರಾಗಿ
ಐರೋಪ್ಯ ರಾಷ್ಟ್ರದಲ್ಲಿದ್ದಾಗ, ಲೋಹಿಯಾ ಅವರು ಜಿನೀವಾದಲ್ಲಿ ಜರುಗಿದ ಲೀಗ್ ಆಫ್ ನೇಷನ್ಸ್ ಅಸೆಂಬ್ಲಿ’ಯಲ್ಲಿ ಭಾಗವಹಿಸಿದ್ದರು. ೧೯೩೪ ರಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷದ ಸ್ಥಾಪನೆಗಾಗಿ ದುಡಿದರು. ೧೯೩೬-೩೮ ರ ವರೆಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ವಿದೇಶಾಂಗ ವ್ಯವಹಾರ ವಿಭಾಗದ ಕಾರ್ಯದರ್ಶಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅನೇಕ ಬಾರಿ ಕಾರಾಗೃಹ ವಾಸವನ್ನು ಅನುಭವಿಸಿದರು. ೧೯೪೨ ರ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಆಂದೋಳನದಲ್ಲಿ ಭೂಗತ ಹೋರಾಟ ಮುಂದುವರೆಸಿದರು. ೧೯೪೬ ರ ಜೂನ್ ೬ ರಂದು ಗೋವಾ ಸ್ವಾತಂತ್ರ್ಯ ಹೋರಾಟದಲ್ಲಿ ಬಂಧನಕ್ಕೊಳಗಾಗಿದ್ದರು. ಗಾಂಧಿಯವರ ಆರಾಧಕರಂತೆ ಅವರ ಟೀಕೆಯನ್ನು ಮಾಡುತ್ತಿದ್ದರು. ಸ್ವಾತಂತ್ರ್ಯೋತ್ತರದ ಭಾರತದ ನೆಹರೂ ಯುಗದ ಕಟು ಟೀಕಾಕಾರರಾಗಿದ್ದರು. ಅಲ್ಲದೆ ಕಾಂಗ್ರೆಸ್ ವಿರೋಧಿವಾದದ ಪ್ರತಿಪಾದಕರಾಗಿದ್ದರು. ೧೯೫೨ ರಲ್ಲಿ ಪ್ರಜಾಸಮಾಜವಾದಿ ಪಕ್ಷದ ಸ್ಥಾಪಕರಾಗಿದ್ದ ಅವರು, ನೆಹರೂ ವಿರುದ್ಧ ಲೋಕಸಭೆಗೆ ಸ್ಪರ್ಧಿಸಿ ಸೋತರು. ೧೯೬೩ ರ ಚುನಾವಣೆಯಲ್ಲಿ ’ಫರೂಕಾಬಾದ್’ ಲೋಕಸಭಾಕ್ಷೇತ್ರದಿಂದ ಆಯ್ಕೆಯಾಗಿಬಂದರು. ೧೯೬೭ ರಲ್ಲಿ ’ಕನೌಜ್’ ಕ್ಷೇತ್ರದಿಂದ ಜಯಗಳಿಸಿದರು.

ಇವರು ಒಳ್ಳೆಯ ಲೇಖಕರು. ಅನೇಕ ನಿಯತಕಾಲಿಕಗಳ ಸಂಪಾದಕರಾಗಿದ್ದರು. ಅವುಗಳಲ್ಲಿ ಮ್ಯಾನ್ ಕೈಂಡ್ (ಇಂಗ್ಲೀಷ್)
ಚೌಕಂಭಾ (ಹಿಂದಿ) ಪ್ರಮುಖವಾದವು
ಇಂಗ್ಲೀಷ್ ಕೃತಿಗಳು:
The Cast system
Marks, Gandhi and Socialism
Guilty men of India's partision
Interval during Politics
Language
Rupees 25,000/- A Day
Note and Comments

ಹಿಂದಿಯಲ್ಲಿ ಬರೆದ ಮುಖ್ಯ-ಕೃತಿಗಳು:
ಸಮಾಜವಾದಿ ಅಂದೊಳನ್ ಕಾ ಇತಿಹಾಸ್
ಹಿಂದು ಮುಸಲ್ಮಾನ್
ಆಝಾದ್ ಹಿಂದೂಸ್ಥಾನ್ ಕ ನಯೀ ರುಜುಹಾನ್
ನಿಧನ: ರಾಮ ಮನೋಹರ ಲೋಹಿಯಾರವರು, ಅವಿವಾಹಿತರಾಗಿದ್ದರು. ೧೯೬೭ ರ ಅಕ್ಟೋಬರ್, ೧೨ ರಂದು ಕಾಲವಶರಾದರು.

ಗೋವಾ ಕ್ರಾಂತಿಯ ಸ್ಪೂರ್ತಿಯ ಸೆಲೆ
ಗೋವಾ ಮುಕ್ತಿ ಸಂಗ್ರಾಮ ಸ್ಪಷ್ಟರೂಪವನ್ನು ಪಡೆದುಕೊಂಡಿದ್ದು ರಾಮಮನೋಹರ ಲೋಹಿಯಾ ಅವರು ದಾರಿ ತೋರಿದ ಮೇಲೆಯೇ. ಕ್ರಾಂತಿಯ ಕೊನೆಯ ಚರಣವನ್ನು ಸತ್ತರಿಯ ರಾಣೆ ಕುಟುಂಬ ಆರಂಭಿಸಿತ್ತು. ಅದೇ ಸಂದರ್ಭದಲ್ಲಿ ೧೯೪೬ ಜೂನ್ ೧೮ರಂದು ರಾಮ ಮನೋಹರ ಲೋಹಿಯಾ ಅವರು ಮಡಗಾಂವ್‌ನಲ್ಲಿ ಪೋಲಿಸ್ ಪಡೆಯ ಕಾವಲನ್ನು ತಪ್ಪಿಸಿ ಪೋರ್ಚುಗೀಸ್ ಸರಕಾರದ ಕಾನೂನನ್ನು ಉಲ್ಲಂಘಿಸಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಡಗಾಂವ್ ನ ಆಡಳಿತಾಧಿಕಾರಿ ಫೊರ್ತುನಟೊ ಮಿರಾಂಡಾರಿಂದ ಬಂಧಿತರಾಗುವ ಮೊದಲು ತಮ್ಮ ಭಾಷಣದ ಮೂಲಕ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದರು. ಈ ನಾಗರಿಕ ಅಸಹಕಾರ ಚಳುವಳಿಯ ಮುಖ್ಯ ಉದ್ದೇಶ ನಾಗರಿಕ ಸ್ವಾತಂತ್ರ್ಯವನ್ನು ಪಡೆಯುವುದು. ಎಂದು ಸ್ಪಷ್ಟಪಡಿಸಿದರು. ನಿಮ್ಮ ಅಗತ್ಯಕ್ಕೆ ದೆಹಲಿ ಅಥವಾ ವಿಶ್ವಸಂಸ್ಥೆಯ ಕಡೆಗೆ ಮುಖ ಮಾಡಬೇಡಿ. ನಿಮ್ಮ ಸ್ವಾತಂತ್ರ್ಯ ನಿಮ್ಮಲ್ಲೇ ಇದೆ. ಎಂದು ಸ್ವಾಭಿಮಾನಿಗಳಾಗುವಂತೆ ಗೋವನ್ನರಿಗೆ ಕರೆ ನೀಡಿದರು. ಗೋವಾ ಭಾರತದ ಅವಿಭಾಜ್ಯ ಅಂಗ; ಅದು ಭಾರತಕ್ಕೇ ಸೇರಬೇಕು ಎಂದು ಉದ್ಘೋಷಿಸಿದ ಪ್ರಥಮ ಭಾರತೀಯ ನಾಯಕ ಇವರು. ಗೋವಾ ಪೋರ್ಚುಗೀಸರಿಂದ ವಿಮುಕ್ತಗೊಳ್ಳಲು ಸಹಾಯ ಮಾಡುವಂತೆ ಭಾರತೀಯರನ್ನು ಪ್ರಚೋದಿಸಿದರು. ಲೋಹಿಯಾರ ಮಾತು ಹಾಗೂ ಕೃತಿಗಳು ಇತರ ಭಾರತೀಯರೂ ಗೋವಾದ ಬಗ್ಗೆ ಯೋಚಿಸುವಂತೆ ಮಾಡಿತು. ಮಹಾತ್ಮಾ ಗಾಂಧಿಯವರು ೩೦ ಜೂನ್ ೧೯೪೬ ರಂದು ತಮ್ಮ ಹರಿಜ ಪತ್ರಿಕೆಯಲ್ಲಿ ಗೋವಾ ಮುಕ್ತಿಗೆ ಲೋಹಿಯಾ ಪಡುತ್ತಿರುವ ಶ್ರಮವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಲೋಹಿಯಾ ಅವರ ಈ ಅಪಾರ ಶ್ರಮದ ಪರಿಣಾಮವಾಗಿ ವರ್ಧಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಪೋರ್ಚುಗೀಸರ ದಬ್ಬಾಳಿಕೆಯನ್ನು ವಿರೋಧಿಸುವ ಹಾಗೂ ಗೋವಾದ ಜನತೆಗೆ ಸಂಪೂರ್ಣ ಸಹಕಾರ ನೀಡುವ ನಿರ್ಣಯವನ್ನು ಕೈಗೊಳ್ಳಲಾಯಿತು.

ಗೋವೆಯೆಂಬ ನಾವೆ......

ಗೋವಾ ಮುಕ್ತಿ ದಿನಾಚರಣೆ ಇತ್ತೀಚೆಗಷ್ಟೆ ಮುಗಿದಿದೆ. ಎಂದಿನಂಥಲ್ಲ ಈ ವರ್ಷದ ಆಚರಣೆ. ಗೋವಾ ಮಾತೆಗೆ ಈಗ ೫೦ರ ಹರೆಯ. ಸ್ವರ್ಣಜಯಂತಿಯ ಸಂಭ್ರಮದಲ್ಲಿ ಗೋವಾದ ಜನತೆ ಇದ್ದಾರೆ. ಸರಕಾರವೂ, ಅನೇಕ ಸಂಘ ಸಂಸ್ಥೆಗಳೂ ವರ್ಷಾದ್ಯಂತ ಇದರ ಆಚರಣೆಯನ್ನು ಮಾಡಲಿವೆ.
ಇಂತಹ ಒಂದು ಸಂದರ್ಭ ಮೂಲತ: ಈ ಭೂಮಿಯಲ್ಲೇ ಹುಟ್ಟಿ ಬೆಳೆದವರಿಗೆ ಪುಳಕದ ಕ್ಷಣವಾಗುವುದು ಸಹಜ. ಆದರೆ ಒಮ್ಮೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಕರ್ನಾಟಕದ ಜನತೆಗೆ ಸುವರ್ಣ ಕರ್ನಾಟಕ ನೀಡಿದ ಸಂತಸವನ್ನು ಗೋವಾದ ಸ್ವರ್ಣ ಜಯಂತಿ ಗೋವನ್ನರಿಗೆ ನೀಡುತ್ತಿಲ್ಲ ಎಂಬುದು. ಇದಕ್ಕೆ ಕಾರಣ ಗೋವಾದಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಹೊರಗಿನವರು ಎಂಬುದೆ? ಖಂಡಿತ ಅಲ್ಲ. ಗೋವಾದಲ್ಲಿಯೇ ಅನೇಕರಿಗೆ ಈ ಮುಕ್ತಿ ಬೇಡವಾಗಿತ್ತು. ಅವರಿಗೆ ಭಾರತೀಯ ಎನಿಕೊಳ್ಳುವುದಕ್ಕಿಂತ ಪೋರ್ತುಗೀಸ ಎನಿಸಿಕೊಳ್ಳುವುದರಲ್ಲಿ ಹೆಚ್ಚಿನ ಆಸಕ್ತಿ, ಅಭಿಮಾನ. ಕೊಂಕಣಿ, ಹಿಂದಿಗಳನ್ನು ಮಾತನಾಡಲಾರದವರೂ ಪೋರ್ಚುಗೀಸನ್ನು ಹೆಮ್ಮೆಯಿಂದ ಮಾತನಾಡುತ್ತಾರೆ. ಪೋರ್ಚುಗೀಸರು ಗೋವಾಕ್ಕೆ ಕಾಲಿರಿಸಿದ ದಿನವನ್ನು ಕುಣಿದು ಕುಪ್ಪಳಿಸಿ ಆಚರಿಸುತ್ತಾರೆ. ಈಗಿನ ಪ್ರಜಾಪ್ರಭುತ್ವಕ್ಕಿಂತ ಪೋರ್ಚುಗೀಸರ ದಬ್ಬಾಳಿಕೆಯೇ ಉತ್ತಮವಾಗಿತ್ತೆಂದು ಭಾಷಣ ಬಿಗಿಯುತ್ತಾರೆ. ಅಂತಿರುವಾಗ ವಿಮೋಚನೆಯ ಸ್ವರ್ಣಜಯಂತಿ ಬರಲಿ ಅಥವಾ ಶತಮಾನೋತ್ಸವವೇ ಬರಲಿ ಅದು ಸಂತಸದ ಕ್ಷಣ ಹೇಗಾದೀತು?
ಇಂದು ರಾಷ್ಟ್ರಾಭಿಮಾನ, ಪ್ರಾದೇಶಿಕ ಅಭಿಮಾನಗಳು ಕೆಲವರಿಗಷ್ಟೇ ಸೀಮಿತವಾಗಿವೆ. ವಿಶಾಲ ಮನೋಭಾವದ ಹೆಸರಿನಲ್ಲಿ ವಿದೇಶಗಳನ್ನು ಅಪ್ಪಿಕೊಳ್ಳುವುದು ಹೆಚ್ಚಾಗಿದೆ.
ಇಷ್ಟರಲ್ಲೇ ಕೆಲವು ಸಂಘಟನೆಗಳು ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಸುವರ್ಣ ವರ್ಷವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿವೆ. ಹೊರಗಿನವರು ಎಂದು ಪಟ್ಟಗಟ್ಟಿಸಿಕೊಂಡಿರುವ ಕನ್ನಡಿಗರು ನೇತ್ರದಾನ ಎಂಬ ವಿಶಿಷ್ಟ ತ್ಯಾಗಪೂರ್ಣ ಕಾರ್ಯಕ್ರಮವನ್ನು ನೀಡುವ ಮೂಲಕ ತಮ್ಮ ಕರ್ಮಭೂಮಿ ಗೋಮಂತಕ ಮಾತೆಗೆ ಭಾವ ನಮನ ಸಲ್ಲಿಸಿದ್ದಾರೆ. ನಿಜಕ್ಕೂ ಇದೊಂದು ಶ್ಲಾಘನೀಯ ಕಾರ್ಯ. ನಮಗೆ ನೆರಳು ಕೊಡುವ ಮರಕ್ಕೆ ಒಂದು ಕೊಡ ನೀರನ್ನಾದರೂ ಹಾಕಬೇಕಲ್ಲವೆ?