Sunday, January 16, 2011

ಬಸ್ಸೆಂಬ ರಥವನೇರಿ

ಸುಜಾತ ಬಸ್ಸನ್ನೇರಿದ್ದಾಗ್ಗೆ ಗಂಟೆ ೩.೩೦ ಆಗಿತ್ತು. ಗೆಳತಿ ಪ್ರಿಯಾ ಸುಖ ಪ್ರಯಾಣಕ್ಕೆಂದು ಹಾರೈಸಿದಾಗ ಖುಶಿಯಿಂದಲೇ ಇನ್ನೊಂದು ೪ ಗಂಟೆಯಲ್ಲಿ ಊರಲ್ಲಿರುತ್ತೇನೆಂದು ಲೆಕ್ಕ ಹಾಕುತ್ತಾ ಕುಳಿತಳು. ತಾನೊಂದು ಕಿಟಕಿಯ ಬಳಿ ಸೀಟು ಮಗನೊಂದು ಕಿಟಕಿಯಬಳಿ ಸೀಟು ಗಿಟ್ಟಿಸಿಕೊಂಡು ಕುಳಿತಾಗ ಆಹಾ! ನಿಜವಾಗಿ ಇಂದು ನಮ್ಮದು ತುಂಬಾ ಸುಖಕರವಾದ ಪ್ರಯಾಣವೇ ಸರಿ ಎಂದು ಕನಸು ಕಾಣುತ್ತ ಕುಳಿತ ಸುಜಾತಳಿಗೆ ಕಂಡಕ್ಟರನ ಕರೆ ಇಹಲೋಕಕ್ಕೆಳೆಯಿತು. ಬಸ್ಸಾಗಲೇ ಊರಿನ ಮಧ್ಯದಲ್ಲಿ ಬಂದಿತ್ತು. ದುಡ್ಡು ತೆಗೆದು ಟಿಕೇಟು ಕೊಳ್ಳುವಾಗ ಕೇಳಿದ್ದು ’ಬಸ್ಸು ಚೋರ್ಲಾ ಘಾಟ್ ದಾರಿಯಲ್ಲಿ ಹೋಗುತ್ತದೆಂದು. ಆಯಿತಲ್ಲ. ಇನ್ನು ಸ್ವಲ್ಪ ಬೇಗ ಊರು ಮುಟ್ಟಬಹುದಲ್ಲ ಎಂದು. ಹೊಟ್ಟೆ ತುಂಬಾ ಹಸಿದದ್ದರಿಂದ ಸ್ವೀಟ್ ಮಾರ್ಟ ನಲ್ಲಿ ಕಟ್ಟಿಸಿಕೊಂಡ ತಿಂಡಿಯನ್ನು ತೆಗೆದು ತಾಯಿ ಮಗ ತಿನ್ನುತ್ತಾ ಕುಳಿತರು. ಇನ್ನೇನು ಊರು ದಾಟಿ ಬಸ್ಸು ಊರ ಹೊರಗೆ ಬಂದಾಯ್ತಲ್ಲ ಎನ್ನುತ್ತಿದ್ದಂತೆ ಸುರುವಾಯಿತಲ್ಲ. ಹೊಂಡಗಳ ರಸ್ತೆ. ಇದೇನು ಸ್ಡಲ್ಪ ದೂರ ಇರಬಹುದು ಎಂದು ಹೊರಗೆ ನೋಡುತ್ತಾ ದಾರಿ ಸೆವೆಸುತ್ತಿದ್ದಾಗ ಇನ್ನೂ ಬಸ್ಸು ಓಲಾಡತೊಡಗಿತು.
ಏನಪ್ಪಾ ಇದು ಎಂದು ಮುಂದೆ ನೋಡಿದಾಗ ಕಂಡಿದ್ದು ತಗ್ಗುದಿನ್ನೆಗಳ ಡಾಂಬರ್ ಹಾರಿದ್ದ ರಸ್ತೆ. ಹಿಂದಿದ್ದ ಪ್ರಯಾಣಿಕರೊಬ್ಬರು ಉಲಿದರು. ಇನ್ನು ೩೦ ೩೫ ಕಿ. ಮೀ. ರಸ್ಸತೆ ಹೀಗೆ ಇದೆ. ಮುಂದೆ ಇನ್ನೂ ಕೆಟ್ಟಿದೆಯೆಂದಾಗ ಮುಂದಿನ ತನ್ನ ಪರಿಸ್ಥಿತಿ ನೆನೆದು ಸುಖ ಪ್ರಯಾಣದ ಕನಸು ಜರ್ರೆಂದು ಇಳಿದು ಇಹಲೋಕಕ್ಕೆ ಬಂದು ಗಟ್ಟಿಯಾಗಿ ಮುಂದಿನ ಸೀಟಿನ ಪಟ್ಟಿಯನ್ನು ಹಿಡಿದು ಕುಳಿತಳು. ಅಷ್ಟೇ ಅಲ್ಲ ಹಿಂದಿನ ಸೀಟಿನಲ್ಲ್ಲಿದ್ದ ಮಗನಿಗೂ ಹುಶಾರಾಗಿ ಕುಳಿತುಕೊಳ್ಳಲು ಹೇಳಿದಳು. ( ಹೇಗೆ ವಿಮಾನದಲ್ಲಿ ಗಗನಸಖಿ ಬಂದು ಬೆಲ್ಟ್ ಕಟ್ಟಿಕೊಳ್ಳಲು ಹೇಳುತ್ತಾಳೋ ಹಾಗೆ. ) ಏನು ಮಾಡುವುದು ಇಲ್ಲಿ ಬೆಲ್ಟಿನ ಬದಲು ಸೀಟಿನ ಪಟ್ಟಿಯೇ ಗತಿ ಎಂದು! ಕಣ್ಣು ಮುಚ್ಚಿ ಕುಳಿತಳು.
ಸುಜಾತಾ ಮೊನ್ನೆಯ ದಿನ ಹೋಗಿದ್ದು ತನ್ನ ತಂದೆಯ ವರ್ಷದ ಶ್ರಾದ್ಧಕ್ಕಾಗಿ. ಅಲ್ಲಿ ಎಲ್ಲ ಸಾಂಗವಾಗಿ ನೆರವೇರಿಸಿ ಬಸ್ಸಲ್ಲಿ ಸ್ವಲ್ಪ ದೂರ ಸಾಗಿದಾಗ ಅನಿಸಿದ್ದು ’ಅಯ್ಯೋ ಇವತ್ತು ಊರು ಮುಟ್ಟುತ್ತೇನೋ ಇಲ್ಲ ಎಲ್ಲಿ ತಲುಪುತ್ತೇನೋ ಎಂದು ಇದ್ದ ಬಿದ್ದ ದೇವರನ್ನೆಲ್ಲ ನೆನೆಯುತ್ತಾ ಕುಳಿತಾಗ ಕಂಡ ದೇವರೆಂದರೆ ಬಸ್ಸು ಚಾಲಕನೊಬ್ಬನೇ... ಏಕೆಂದರೆ ಸದ್ಯ ನಮ್ಮನ್ನು ಸುರಕ್ಷಿತವಾಗಿ, ಜೀವಂತವಾಗಿ ಊರನ್ನು ತಲುಪಿಸುವ ದೇವರು ಅವನಲ್ಲದೇ ಮತ್ತಾರು? ಏಕೆಂದರೆ ಬಸ್ಸಿನ ಓಲಾಟ ೩೦ ರಿಂದ ೬೦ ಮತ್ತೆ ೯೦ ಡಿಗ್ರಿಯವರೆಗೆ ತಲುಪಿತ್ತು. ಇನ್ನಂತೂ ದೇವರು, ದಿಂಡರು, ಗುರು ಹಿರಿಯರು, ಬಂಧು ಬಳಗದವರನ್ನೆಲ್ಲ ನೆನೆಯುತ್ತ ಗಟ್ಟಿಯಾಗಿ ಮುಚ್ಚಿದ್ದ ಕಣ್ಣು ತೆರೆದದ್ದು ಕಂಡಕ್ಟರನ ಕೂಗಿನಿಂದ. ಅದೂ ಒಂದು ಹೊಟೇಲಿನ ಎದುರಿಗೆ. ಟೀ ಗಾಗಿ ಹತ್ತು ನಿಮಿಷವಿದೆಯೆಂದು ಕಣ್ಣುಬಿಟ್ಟು ಸುತ್ತ ಮುತ್ತ ನೋಡಿದಾಗ ದಟ್ಟ ಕಾಡಿನ ಮಧ್ಯದಲ್ಲಿದ್ದ ಎದುರಿಗೆ ಕಾಣುತ್ತಿದ್ದ ಹೊಟೇಲ್ ಮತ್ತು ಪಕ್ಕದಲ್ಲಿ ಕೆಟ್ಟು ನಿಂತಿದ್ದ ಮತ್ತೊಂದು ಬಸ್ಸಿನ ಪ್ರಯಾಣಿಕರು. ನಮ್ಮ ಬಸ್ಸು ನಿಂತಿದ್ದೇ ತಡ ಸ್ವರ್ಗದಿಂದ ಪುಷ್ಪಕ ವಿಮಾನವೇ ಬಂದಿತೆನ್ನುವಂತೆ ಮುಖವರಳಿಸಿ ಬಂದು ಬುದಬುದನೆ ಬಸ್ಸನ್ನೇರಿದರು.ಪಕ್ಕ ಬಂದು ಕುಳಿತಾಕೆ ಭಾರೀ ಗಾತ್ರದವಳು. ಬುಸಬುಸನೇ ಉಸಿರು ಬಿಡುತ್ತಾ ದೊಪ್ಪೆಂದು ಕುಳಿತಾಗ ಮೊದಲೇ ಮುದ್ದೆಯಾಗಿದ್ದ ಸುಜಾತ ಇನ್ನೂ ಮುದ್ದೆಯಾದಳು. ಪಾಪ! ಅವಳೋ ಬೆಳಿಗ್ಗೆಯಿಂದ ಇದು ಮೂರನೆಯ ಬಸ್ಸು ಬದಲಾಯಿಸಿದ್ದೆಂದಳು. ಮೊದಲು ಏನೆಂದು ಸುಜಾತಳಿಗೆ ತಿಳಿಯಲಿಲ್ಲ. ಏಕೆಂದು ಕೇಳಿದಾಗ ಬಂದ ಉತ್ತರ ಬಂದ ಎರಡೂ ಬಸ್ಸುಗಳೂ ರಸ್ತೆಯಲ್ಲಿ ಕೆಟ್ಟು ಇಲ್ಲಿಯವರೆಗೆ ತಲುಪಲು ತೆಗೆದುಕೊಂಡದ್ದು ೬ ತಾಸು. ಕಾಡಿನ ದಾರಿಯಲ್ಲಿ ಊಟವಿಲ್ಲ ನೀರಿಲ್ಲ. ಇವತ್ತು ಈ ಹೊಟೆಲ್ಲೇ ಅವರ ಅಕ್ಷಯ ಧಾಮವಾಗಿತ್ತು.
ಅಲ್ಲಿಂದ ಬಸ್ಸು ಹೊರಟಾಗ ಆಗಲೇ ಅರ್ಧಗಂಟೆ ತಡವಾಗಿತ್ತು. ಮುಂದಿನ ದಾರಿ ಕೆಟ್ಟದಿದ್ದರೂ ಬಸ್ಸು ಭರ್ತಿಯಿದ್ದುದರಿಂದ ಅಷ್ಟೇನೂ ಕುಲುಕಾಟವಿರಲಿಲ್ಲ. ಈಗ ಇನ್ನೊಂದು ತೊಂದರೆ ಶುರುವಾದದ್ದು ಪಕ್ಕದವಳಿಂದ. ಅವಳುಟ್ಟಿದ್ದ ಆ ಚಮಕ್ ಮತ್ತು ಟಿಕಲಿ ಹಚ್ಚಿದ ಭಾರೀ ಸೀರೆ. ಬಸ್ಸಿನ ಕುಲುಕಾಟ ಅನುಭವಿಸಿ ಸಾಕಾಗಿ ಉಸ್ಸೆಂದಾಗ ಶುರುವಾಗಿದ್ದು ಪಕ್ಕದಲ್ಲಿನ ಸೂಜಿ ಚುಚ್ಚಿದ ಅನುಭವ.ಈ ಸೂಜಿಗಿಂತ ಆ ಮೊದಲಿನ ಅನುಭವವೇ ಸ್ಡಲ್ಪ ಹಿತವಾಗಿತ್ತೇನೋ.!? ಏನೂ ಮಾಡುವ ಹಾಗಿಲ್ಲ. ಹಾ ಹೂ ಅನ್ನುತ್ತ ಅವಳನ್ನು ಸರಿಸುವ ಹರಸಾಹಸ ಮಾಡುವುದನ್ನು ನೋಡಲಾರದೇ ಆ ಧಡೂತಿ ಹೆಂಗಸಿನ ಪತಿ ಅವಳ ತೋಳಿನ ಮೇಲೆ ಟವಲ್ ನ್ನು ಹಾಕಿದಾಗ ಸುಜಾತ ನಿಟ್ಟುಸಿರು ಬಿಟ್ಟಳು.
ಇನ್ನು ಒಳ್ಳೆಯ ರಸ್ತೆ ಶುರುವಾಯಿತಲ್ಲ ಎಂದು ಕೊಳ್ಳುತ್ತಿರುವಾಗಲೇ ಇದೇ ಸಮಯದಲ್ಲಿ ನನ್ನದೂ ಒಂದು ಕೈ ತೋರಿಸಿಯೇ ಬಿಡೋಣವೆಂದು ವರುಣನಿಗೂ ಅನ್ನಿಸಿರಬೇಕು. ತನ್ನ ಕೆಲಸ ತಾನು ಶುರು ಮಾಡಿಯೇ ಬಿಟ್ಟ. ಕಿಟಕಿ ಮುಚ್ಚಲು ಹೋದರೆ ಎಳೆಯಲು ಬರುತ್ತಲೇ ಇರಲಿಲ್ಲ. ಇದ್ದ ಬಿದ್ದ ಶಕ್ತಿ ಪ್ರಯೋಗಿಸಿದರೂ ಅದೂ ಮುಷ್ಕರ ಶುರುಮಾಡಿತು. ಆಯಿತಲ್ಲ ಇನ್ನೇನು ಎಂದು ಬೇರೆಕಡೆ ಎದ್ದು ಹೋಗಲೂ ಜಾಗವಿಲ್ಲ. ಅಷ್ಟೊಂದು ಜನ. ಕೊನೆಗೊಂದು ಉಪಾಯ ಹೊಳೆಯಿತು. ಬ್ಯಾಗಿನಲ್ಲಿದ್ದ ಛತ್ರಿ ತೆಗೆದು ಏರಿಸಿ ಕಿಟಕಿಗಡ್ಡ ಹಿಡಿದು ಕುಳಿತಾಗ ಎಲ್ಲರ ಮುಖದಲ್ಲಿ ನಗೆಯೋ ನಗೆ. ತುಂಬಿದ ಬಸ್ಸಿನಲ್ಲಿ ಛತ್ರಿ ಏರಿಸಿ ಕುಳಿತ ಸುಜಾತಳಿಗೆ ಮುಜುಗರವೋ ಮುಜುಗರ. ಏನು ಮಾಡುವುದು ಉಪಾಯವಿಲ್ಲ. ಕೊನೆಗೆ ವರುಣನಿಗೇ ಬೇಜಾರಾಗಿ ಸುಮ್ಮನಾದಾಗ ಊರಿನ ಹತ್ತಿರ ಹತ್ತಿರ ಬಂದಿದ್ದರು. ಅಷ್ಟುದೂರದಿಂದ ತಮ್ಮೂರಿನ ಸೇತುವೆ ಕಂಡಾಗ ಸುಜಾತಳಿಗೆ ಹುರ್ರೇ ಎನ್ನುವಂತಾಗಿತ್ತು. ಬಸ್ಸಿಳಿಯುವಾಗ ಚಾಲಕನ ಜೊತೆಯಲ್ಲಿ ಮಾತನಾಡಿ ಧನ್ಯವಾದಗಳನ್ನೇಳಿದಾಗ ’ಇದೆಲ್ಲಿಂದ ಬಂತಪ್ಪಾ ಹೊಸ ಪ್ರಾಣಿ?’ ಎನ್ನುವಂತೆ ಅವನು ನೋಡುತ್ತಿದ್ದ. ಅವನಿಗೆ ಕೂಡ ಅದು ಹೊಸ ಅನುಭವವೇ ಸರಿ. ಇಲ್ಲಿಯವರೆಗೆ ಅವನು ನೋಡಿದ್ದು ಊರಿಗೆ ತಲುಪಿದ ಪ್ರಯಾಣಿಕರು ಹೀಗೆ ಹೇಳುವುದಿರಲಿ ತಿರುಗಿಕೂಡ ನೋಡುತ್ತಿದ್ದಿಲ್ಲ. ಇಷ್ಟೆಲ್ಲ ಪ್ರಯಾಣಿಕರ ಜೀವವನ್ನು ಸುರಕ್ಷಿತವಾಗಿ ಮುಟ್ಟಿಸಿದ ಈ ಚಾಲಕ ಸದ್ಯದ ದೇವರು. ಅವಾರ್ಡ ವಿನ್ಹರ್ ತರ ಕಂಡ ಸುಜಾತಳ ಕಣ್ಣಿಗೆ ಈ ದಿನದ ಹೀರೋ ಈ ಚಾಲಕನೇ!

ಅನುರಾಧಾ ಯಾಳಗಿ

No comments:

Post a Comment