Sunday, January 16, 2011

ಕನ್ನಡದ ಕಟ್ಟಾಳು ಮುದವೀಡು ಕೃಷ್ಣರಾಯರು


ಕನ್ನಡಕ್ಕಾಗಿ ಕನ್ನಡದ ಉಳಿವಿಗಾಗಿ ಏಳಿಗೆಗಾಗಿ ಅವಿರತ ಶ್ರಮಿಸಿದ ಮಹಾನುಭಾವ ಕನ್ನಡದ ಗಂಡುಗಲಿ ದಿವಂಗತ ಮುದವೀಡು ಕೃಷ್ಣರಾಯರು ಕನ್ನಡಿಗರಿಗೆ ಸಂದೇಶರೂಪವಾಗಿ ನೀಡಿದ ಪದ್ಯ-"ಕೂಗುವೊಂದಾಗೊ ಕರುಳೊಂದಾಗಿ ಹೃದಯದನುರಾಗವೊಂದಾಗಿ ಸಂಘಬಿತ ಬಲಯುತರಾಗಿ ರಾಗ ವಿದ್ವೇಷ ಮತ್ಸರ ಮದಂಗಳ ನೀಗಿ ಸಾಗಲನುವಾಗಿರೈ ಭೋಗ ಬಿಟ್ಟೇಳಿರೈ ಕನ್ನಡಮ್ಮನ ಕುವರರೇ.!"
ಕನ್ನಡದ ಕಟ್ಟಾಭಿಮಾನಿ, ಸ್ವಾತಂತ್ರ್ಯ ಸೇನಾನಿ ಹೆಸರಾಂತ ಸಾಹಿತಿ ಶ್ರೀ ಮುದವೀಡು ಕೃಷ್ಣರಾಯರು ಜನಿಸಿದ್ದು ರಾಣೆಬೆನ್ನೂರಿನಲ್ಲಿ ೨೪-೦೭-೧೮೭೪ರಂದು. ಹುಟ್ಟಿದ್ದು ರಾಣೆ ಬೆನ್ನೂರಿನಲ್ಲಿ ಆದರೂ ಬೆಳೆದದ್ದು ಧಾರವಾಡದಲ್ಲಿ. ಮುಂಬೈ ಕರ್ನಾಟಕದ ಭಾಗವಾಗಿದ್ದ ಧಾರವಾಡದಲ್ಲಿ ಅಡ್ಡ ಹೆಸರಿಗೆ ಕರ ಹಚ್ಚುವುದು ಒಂದು ಪ್ರತಿಷ್ಠೆಯ ವಿಷಯವಾಗಿತ್ತೇನೋ? ಆದರೆ ನಮ್ಮ ಮುದುವೀಡ ಕೃಷ್ಣರಾಯರಿಗೆ ಮಾತ್ರ ’ಮುದುವೀಡಕರ್’ ಎಂದರೆ ಎಲ್ಲಿಲ್ಲದ ಸಿಟ್ಟು, ನಾನು ಕೇವಲ "ಮುದುವೀಡು", "ಮುದುವೀಡಕರ್" ಅಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದರು.
ಕಲಿಕೆಯ ಆರಂಭದ ಅ, ಆ, ಇ, ಈ.......... ಮರಾಠಿಯಲ್ಲಿ ಆದುದು ಒಂದು ವಿಪರ್ಯಾಸ ಎನ್ನಬಹುದು. ಕಾರವಾರದಿಂದ ಧಾರವಾಡಕ್ಕೆ ಸ್ಥಳಾಂತರಗೊಳ್ಳುವುದರೊಂದಿಗೆ ಕಲಿಕೆಯು ಕೂಡ ಮರಾಠಿಯಿಂದ ಕನ್ನಡಕ್ಕೆ ಬದಲಾಯಿತು. ವಿದ್ಯಾವರ್ಧಕ ಸಂಘದ ಸಂಸ್ಥಾಪಕರಲ್ಲೊಬ್ಬರಲ್ಲಾದ ಶ್ರೀ. ರಾ. ಹ. ದೇಶಪಾಂಡೆಯವರ ಪ್ರಭಾವವೆ ಇದಕ್ಕೆ ಕಾರಣ ಎನ್ನಬಹುದು.
ಶಾಲಾ ಕಾಲೇಜು ದಿನಗಳಲ್ಲಿ ಭಾಷಣದಲ್ಲಿ ಎತ್ತಿದ ಕೈ ಇವರದು. ಕಂಚಿನ ಕಂಠದ ಕೃಷ್ಣರಾಯರು ಭಾಷಣಕ್ಕೆ ನಿಂತರೆ ಸಾಕು ಪ್ರೇಕ್ಷಕರು ಮಂತ್ರಮುಗ್ಧರಾಗಿಬಿಡುತ್ತಿದ್ದರು. ಭಾಷಣ ಸ್ಪರ್ಧೆಗಳಲ್ಲಿ ಪ್ರಥಮಸ್ಥಾನ ಇವರಿಗೆ ಕಟ್ಟಿಟ್ಟ ಬುತ್ತಿ ಯಾವಾಗಲೂ. ಸಾಹಿತ್ಯ ರಾಜಕೀಯ, ಸಾಂಸ್ಕೃತಿಕ ಚಟುವಟಿಕೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕೈಯಾಡಿಸಿದ ಇವರು ಆಡು ಮುಟ್ಟದ ಗಿಡವಿಲ್ಲ, ಕೃಷ್ಣರಾಯರು ಕೈಯಾಡಿಸದ ಕ್ಷೇತ್ರವಿಲ್ಲ ಎಂದು ಪ್ರಸಿದ್ಧರಾಗಿದ್ದರು.
ಯಾವುದೂ ಒಂದು ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಬೇಕಾದರೆ ಸಾಕುಬೇಕಾಗುವ ಈ ದಿನಗಳಲ್ಲಿ ಇವರು ಎಲ್ಲ ಕ್ಷೇತ್ರಗಳಲ್ಲಿಯೂ ಉತ್ತುಂಗಕ್ಕೇರಿದ್ದು ಇವರ ಆದಮನೀಯ ಚೈತನ್ಯಕ್ಕೆ ಸಾಕ್ಷಿ ಎನ್ನಬಹುದು.
ಅದು ಸ್ವಾತಂತ್ರ್ಯ ಸಂಗ್ರಾಮದ ಸಮಯ. ಉತ್ತರದ ಅನೇಕ ಕಾಂಗ್ರೆಸ್ ನಾಯಕರು ಧಾರವಾಡಕ್ಕೆ ಭೇಟಿ ಕೊಡುತ್ತಿದ್ದರು. ಅವರು ಇಂಗ್ಲೀಷ ಅಥವಾ ಹಿಂದಿಯಲ್ಲಿ ಮಾಡುತ್ತಿದ್ದ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸುವುದು ಯಾವಾಗಲೂ ಕೃಷ್ಣರಾಯರ ಕೆಲಸವೇ.! ಇವರ ಭಾಷಾಂತರ ಎಷ್ಟೊಂದು ಪ್ರಭಾವ ಬೀರುತ್ತಿತ್ತೆಂದರೆ ಮೂಲ ಭಾಷಣಕ್ಕಿಂತ ಇವರ ಭಾಷಾಂತರಕ್ಕೆ ಚಪ್ಪಾಳೆ ಕೇಕೇ! ಇದರಿಂದ ಭಾಷಣಕಾರರು ಕಕ್ಕಾಬಿಕ್ಕಿಯಾಗುತ್ತಿದ್ದರು. ಕಾಂಗ್ರೆಸ್ಸಿನ ಅಂದಿನ ಹಿರಿಯ ನಾಯಕರಲ್ಲೊಬ್ಬರಾದ ಶ್ರೀ ಪಟ್ಟಾಭಿ ಸೀತಾರಾಮಯ್ಯನವರು ಕೃಷ್ಣರಾಯರ ಅನುವಾದ ಭಾಷಣಕ್ಕೆ ಜನರು ಅಟ್ಟಹಾಸದಿಂದ ನಗುವುದು ಸತತ ಚಪ್ಪಾಳೆ ತಟ್ಟುವುದ ಕಂಡು I am jealous of my translator, because he seems to be more elegant and lively than me.” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದು ಕೃಷ್ಣರಾಯರ ಭಾಷಣ ಪ್ರತಿಭೆಗೆ ಸಾಕ್ಷಿ !
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಲಿಖಿತ ಭಾಷಣವನ್ನು ವಾಚಿಸುವುದು ಸಂಪ್ರದಾಯ..ಆದರೆ ಬೆಳಗಾಂವಿಯಲ್ಲಿ ೧೯೩೯ ರಲ್ಲಿ ಜರುಗಿದ ೨೪ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಮುದುವೀಡು ಅವರು ಲಿಖಿತ ಭಾಷಣವನ್ನು ಬದಿಗಿರಿಸಿ ಆಡು ಭಾಷೆಯಲ್ಲಿನನ್ನನ್ನು ಈ ವರ್ಷದ ಅಧ್ಯಕ್ಷೀಯ ಖುರ್ಚಿಯ ಮ್ಯಾಲ ಕೂಡಿಸಿ ನಿಮ್ಮ ಕನ್ನಡ ಕಕ್ಕುಲಾತಿಯ ಕದಲಾರ್ತಿ ಬೆಳಗಿದ್ದೀರಿ. ಎಂದು ಆರಂಭಿಸುವುದರೊಂದಿಗೆ ಎಲ್ಲ ಪ್ರೇಕ್ಷಕರ ಹೃದಯ ಮುಟ್ಟಿದರು. ಅಂತ:ಕರಣ ತಟ್ಟಿದರು.
ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಶ್ರೀ ಕೃಷ್ಣರಾಯರದು ಎತ್ತಿದ ಕೈ. ರಾಯರು ಸ್ವತಃ ನಾಟಕಗಳನ್ನು ರಚಿಸಿ ಪ್ರಯೋಗಿಸುತ್ತಿದ್ದರು. ೧೯೦೪ ರಲ್ಲಿಯೇ ’ರಾಮರಾಜ್ಯ ನಿಯೋಗ’ ’ಸೌಭದ್ರ’ ನಾಟಕಗಳನ್ನು ಬರೆದು ರಂಗಮಂಚದ ಮೇಲೆ ಆಡಿಸಿದರು.
೧೮೯೯ ರಲ್ಲಿ ಮದಿಹಾಳದ ’ಕ್ರೀಡಾ ಸಂಘ’ ಎಂಬ ಹವ್ಯಾಸೀ ತಂಡವನ್ನು ’ಭಾರತ ಕಲೋತ್ತೇಜಕ ನಾಟ್ಯಸಭಾ’ ಎಂದು ಬದಲಾಯಿಸಿ ಶೇಷಗಿರಿ ರಾಯರ ’ಕನ್ನಡ ಶಾಕುಂತಲ’ ಮತ್ತು ಎರಡು ನಾಟಕಗಳಾದ ’ರಾಮರಾಜ್ಯ ನಿಯೋಗ’ ಹಾಗೂ ’ಸೌಭದ್ರ’ ಪ್ರಯೋಗಿಸಿದರು. ರಾಯರ ಕರ್ನಾಟಕಸಂಗೀತ ಜ್ಞಾನವೂ ಗಮನಾರ್ಹವಾಗಿತ್ತು.
ಬಹುಮುಖ ಪ್ರತಿಭೆಯ ವರ್ಣರಂಜಿತ ವ್ಯಕ್ತಿತ್ವದ ಕೃಷ್ಣರಾಯರು ಪತ್ರಿಕಾ ಸಂಪಾದನೆಯಲ್ಲೂ ಕೈಯಾಡಿಸಿದವರು. ಕರ್ನಾಟಕ ವೃತ್ತ ಮತ್ತು ಧನಂಜಯ ಎಂಬ ಎರಡು ಪತ್ರಿಕೆಗಳ ಸಂಪಾದಕರಾಗಿದ್ದುದು ಇವರ ಹೆಗ್ಗಳಿಕೆ.
ಸ್ವಾತಂತ್ರ್ಯದ ಸಂಗ್ರಾಮದ ಮಂಚೂಣಿಯಲ್ಲಿ ಇದ್ದ ಇವರು ನನ್ನ ದೇಸ ಸ್ವತಂತ್ರ ವಾದದ್ದನ್ನು ನೋಡಿಯೇ ನಾನು ಸಾಯ್ತೀನಿ ಎಂದು ಗುಡುಗುತ್ತಿದ್ದರು. ಅವರ ಇಚ್ಛಾಶಕ್ತಿ ಎಷ್ಟು ಪ್ರಭಲವಾಗಿತ್ತೆಂದರೆ ನಮ್ಮ ರಾಷ್ಟೃಕ್ಕೆ ಸ್ವಾತಂತ್ರ್ಯ ಬಂದು ಒಂದು ತಿಂಗಳು ಆಗುವ ಮೊದಲೇ ಅವರು ಇಹಲೋಕವನ್ನು ತ್ಯಜಿಸಿದರು. ೧೯೪೭ ಸೆಪ್ಟೆಂಬರ್ ೭ ರಂದು ಅವರು ಕೊನೆಯುಸಿರೆಳೆದರು. ಆದರೆ ತಾವು ನುಡಿದಂತೆ ಸ್ವಾತಂತ್ರ್ಯ ದೊರೆಯುವವರೆಗೆ ಸಾವನ್ನು ತಡೆದು ನಿಲ್ಲಿಸಿದ ಛಲಗಾರ ಇವರು!

ಉದಯಕುಮಾರ ದಾನಿ

No comments:

Post a Comment