Saturday, April 23, 2011

ಅಣ್ಣಾ ಹಜಾರೆಗೆ ಜೈ

ವಸಂತ ಪ್ರಕಾಶ


ಹಳ್ಳಿ ಹಳ್ಳಿಗಳ ಉದ್ದಾರ ಎಂದು
ಭಾಷಣ ಬಿಗಿಯುವ ಜಾಗ ಅದು ದಿಲ್ಲಿ
ಮೂಕ ಪ್ರೇಕ್ಷಕನಾಗಿ ನಿಂತಿರುವುದು ಅದ ಕಂಡು
ಹನಿ ಮಾತ್ರ ತೊಟ್ಟಿಕ್ಕುವ ನಲ್ಲಿ

ಅಂದು ಗಾಂಧಿ ಕಂಡ ಕನಸು
ಹಳ್ಳಿ ಉದ್ದಾರದಿಂದಲೇ ರಾಮ ಆಜ್ಯ
ಕೋಟಿ ಕೋಟಿ ಕೈಯೊಳಗಿದ್ದರೂ ಕಾಸು
ಅಧಿಕಾರದಾಹದವರ ಮುಗಿಯದ ವ್ಯಾಜ್ಯ

ತನ್ನ ಹಿತವ ಮರೆತು ಪರಹಿತವ ಬಯಸಿತು
ಬಾಬುರಾವ್ ಹಜಾರೆಯವರು ಇನ್ನೊಂದು ಗಾಂಧಿ ನಿಜ
ಗಾಂಧಿ ಕನಸನ್ನು ತಲೆ ಮೇಲೆ ಹೊತ್ತು
ರಾಳೆಗಣ ಶಿದ್ದಿಯಿಂದ ಬಿತ್ತಿದರು ಬೀಜ

ಭ್ರಷ್ಟಚಾರ ಓಡಿಸಲು, ಹೆಜ್ಜೆಗೆ ಹೆಜ್ಜೆ ಸೇರಿಸಲು
ಕಟ್ಟಿಕೊಳ್ಳೊಣ ನಾವು ನಮ್ಮ ಕಾಲಿಗೆ ಗೆಜ್ಜೆ
ವಿಶ್ವದುದ್ದಕು ಭಾರತೀಯ ದೀಪ ಪ್ರಜ್ವಲಿಸಲು
ಮಾಡೋಣ ಶಾಂತಿಮಂತ್ರದೀ ಪೂಜೆ

ಹೆಂಡತಿಗೆ ಸಹಾಯ ಮಾಡಲು ಹಿಂಜರಿಕೆ ಏಕೆ?

ಶರ್ವಾಣಿ ಭಟ್

ಉಜ್ಜ್ವಲಾ ತುಂಬ ಸುಸ್ತಾಗಿದ್ದಾಳೆ. ಏಳು ತಿಂಗಳ ಗರ್ಭಿಣಿ. ಆಫೀಸಿನಲ್ಲಿ ನಿಂತು ಮಾಡುವ ಕೆಲಸ. ಕಾಲು ಸೋತು ಹೋಗಿದೆ. ಹೇಗೋ ಮನೆ ಸೇರಿ ಧೊಪ್ಪೆಂದು ಸೋಫಾದ ಮೇಲೆ ಕುಳಿತು ಹಿಂದಕ್ಕೆ ತಲೆಬಾಗಿ ಕಾಲನ್ನು ಚಾಚಿ ಕಣ್ಮುಚ್ಚಿದಳು. ಯಾರೋ ತನ್ನ ಕಾಲನ್ನು ಸ್ಪರ್ಶಿಸಿದಂತಾದಾಗ ಕಣ್ಬಿಟ್ಟಳು. ಮತ್ತಾರೂ ಅಲ್ಲ ಅವಳ ಗಂಡ ಸತೀಶ್ ಅವಳ ಕಾಲನ್ನು ತನ್ನ ತೊಡೆಯಮೇಲಿರಿಸಿಕೊಂಡು ಮೃದುವಾಗಿ ಒತ್ತುತ್ತಿದ್ದಾನೆ. ಅವಳಿಗೆ ಅದು ಅನಿರೀಕ್ಷಿತವಾಗಿತ್ತು. ಬೇಡವೆನ್ನುವ ಮನಸ್ಸಿದ್ದರೂ ಅದು ಕೊಡುತ್ತಿರುವ ಹಿತಾನುಭವ ಅವಳನ್ನು ತಡೆದಿತ್ತು. ಮುಖದಲ್ಲಿ ಕೃತಜ್ಞತಾ ಭಾವ. ಪತ್ನಿಯ ಮೊಗವನ್ನೇ ವೀಕ್ಷಿಸುತ್ತಿದ್ದ ಸತೀಶನ ಮುಖದಲ್ಲೂ ಅದೇನೋ ಸಮಾಧಾನ.

ಸತೀಶನಿಗಿರುವ ಧೈರ್ಯ ಎಷ್ಟು ಜನ ಗಂಡಸರಿಗಿದೆ? ಅಷ್ಟೇ ಅಲ್ಲ ಇಬ್ಬರೇ ಇರುವಾಗ ಈ ಧೈರ್ಯವನ್ನು ತೋರಿದ ಸತೀಶ ತನ್ನ ತಂದೆ ತಾಯಿಯರು ಮನೆಯಲ್ಲಿಯೇ ಇದ್ದರೆ ಅದನ್ನು ತೋರುತ್ತಿದ್ದನೆ? ಹೀಗೆ ನೂರಾರು ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಬಹುದು. ಹೌದು. ಅನೇಕ ಗಂಡಸರಿಗೆ ಪತ್ನಿಯ ಕಷ್ಟವನ್ನು ಹಂಚಿಕೊಳ್ಳಬೇಕು, ಅವಳ ಕಷ್ಟದಲ್ಲಿ ತಾನು ಪಾಲುದಾರನಾಗಬೇಕು, ಅವಳಿಗೆ ತಾನು ಸಹಾಯ ಮಾಡಬೇಕು ಎಂಬ ಮನಸ್ಸಿರುತ್ತದೆ. ಅದರೆ ಹಲವು ಕಾರಣಗಳಿಂದಾಗಿ ಅದು ಹೊರಗೆ ಬರುವುದೇ ಇಲ್ಲ. ಬಂದರೂ ಬೆಡ್ ರೂಮಿನಿಂದಾಚೆಯಂತೂ ಬರುವುದು ತೀರ ಅಪರೂಪ.

ಇದಕ್ಕೆ ಮುಖ್ಯ ಕಾರಣ ನಮ್ಮ ಸಾಮಾಜಿಕ ವ್ಯವಸ್ಥೆ. ಪತಿ ಹೇಳಿದ್ದನ್ನು ಪಾಲಿಸುವ, ಪತಿಯ ಸೇವೆಯೇ ಪರಮ ಕರ್ತವ್ಯ ಎಂದು ಭಾವಿಸುವ ಹೆಣ್ಣನ್ನು ’ಪತಿವ್ರತೆ’ಯೆಂದು ಹೊಗಳಿದರೆ ಹೆಂಡತಿಯ ಮಾತನ್ನು ಕೇಳುವ, ಅವಳಿಗೆ ಕೆಲಸ ಮಾಡಿಕೊಡುವ ಗಂಡನನ್ನು ’ಅಮ್ಮಾವ್ರ ಗಂಡ’ ಎಂದು ಅಪಹಾಸ್ಯ ಮಾಡುತ್ತದೆ. ಗಂಡಸುತನವಿಲ್ಲದ ಪುಕ್ಕಲ ಎಂಬುದಾಗಿ ಅಂತಹ ಗಂಡನನ್ನು ನೋಡಿದರೆ, ಗಂಡನ ತಲೆಯ ಮೇಲೆ ಹತ್ತಿ ಕುಳಿತಿರುವ ಗಂಡುಬೀರಿಯೆಂಬಂತೆ ಹೆಂಡತಿಯನ್ನು ನೋಡುತ್ತಾರೆ. ನಮ್ಮ ಸಿನಿಮಾಗಳನ್ನೇ ನೋಡಿ ಗಂಡನಿಗೆ ವಿಧೇಯಳಾಗಿರುವ ಹೆಂಡತಿಯ ಸಿನಿಮಾ ಆದರೆ ಅದು ’ಭಕ್ತಿಪ್ರಧಾನ ಸಾಂಸಾರಿಕ ಚಿತ್ರ’. ಹೆಂಡತಿಗೆ ಹೆದರುವ ಗಂಡನ ಚಲನಚಿತ್ರಕ್ಕೆ ’ಹಾಸ್ಯ ಪ್ರಧಾನ’ ಎಂಬ ತಲೆಬರಹ ! ನಮ್ಮ ಪುರಾಣ ಕಥೆಗಳೆಲ್ಲ ಸೀತೆ, ಮಂಡೋದರಿ, ಅನಸೂಯಾ, ಸಾವಿತ್ರಿ ಇವರೆಲ್ಲ ಪತಿಸೇವೆಯಿಂದಲೇ ಸಾಯುಜ್ಯ ಹೊಂದಿದರು ಎಂಬುದಾಗಿ ಸಾರುತ್ತ ಪತಿಯಿಂದ ಸೇವೆ ಮಾಡಿಸಿಕೊಳ್ಳುವ ಸ್ತ್ರೀಯರು ನರಕಕ್ಕೆ ಹೋಗುವರು ಎಂಬುದಾಗಿ ಹೇಳುತ್ತವೆ. ಶೇಷಶಾಯಿ ನಾರಾಯಣನ ಕಾಲನ್ನು ಒತ್ತುತ್ತಿರುವ ಲಕ್ಷ್ಮೀದೇವಿಯ ಚಿತ್ರ ಆದರ್ಶರೂಪವಾಗಿ ನಮ್ಮ ಮನೆಯ ಗೋಡೆಯ ಮೇಲೆ ರಾರಾಜಿಸುತ್ತದೆ. ನಮ್ಮ ವಿವಾಹಪದ್ಧತಿ, ಕುಟುಂಬ ಪದ್ಧತಿಗಳೆಲ್ಲ ಇಂತಹ ಭಾವನೆಯ ಮೇಲೇ ಆಧಾರಿತವಾಗಿವೆ. ಹಾಗಾಗಿ ಸಮಾಜ ಹೆಂಡತಿಯ ’ಸೇವೆ’ ಮಾಡುವ ಗಂಡನನ್ನು ಒಪ್ಪಿಕೊಳ್ಳದು. ಇದು ಗಂಡಸರ ಹಿಂಜರಿಕೆಗೆ ಮೊದಲ ಕಾರಣ.

’ಹೆಂಗಸರ ಬುದ್ಧಿ ಮೊಳಕಾಲ ಕೆಳಗೆ’ ಎನ್ನುವ ಗಾದೆ ಮಾತನ್ನು ಯಾರೋ ಮಾಡಿಟ್ಟುಬಿಟ್ಟಿದ್ದಾರೆ. ಅದು ಮನುವಿನ ’ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂಬ ಮಾತನ್ನೇ ಪುಷ್ಟಿಗೊಳಿಸುವಂಥದ್ದು. ಮನೆಯನ್ನು ಮುನ್ನಡೆಸುವ ಶಕ್ತಿ ಹೆಣ್ಣಿಗಿಲ್ಲ ಎಂಬುದಾಗಿ ಇಂದಿಗೂ ಅನೇಕರು ಭಾವಿಸುತ್ತಾರೆ. ಹೆಣ್ಣಿಗೆ ಅಧಿಕಾರ ಕೊಟ್ಟರೆ ಅದರ ದುರುಪಯೋಗವಾಗುತ್ತದೆ ಎಂಬುದಾಗಿ ನಂಬಿದವರಿದ್ದಾರೆ. ಗಂಡಿಗಾದರೆ ತಾನು ಹುಟ್ಟಿದ ಮನೆಯೇ ಕೊನೆತನಕ ಶಾಶ್ವತ. ಹೆಣ್ಣಿಗೆ ತನ್ನ ತವರು ಮನೆಯನ್ನು ತೊರೆದು ಗಂಡನ ಮನೆಯನ್ನು ತನ್ನ ಮನೆಯೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ. ಹೀಗಿರುವಾಗ ತಾನು ಹೆಂಡತಿಯ ಮಾತನ್ನು ಕೇಳಿದರೆ ಅವಳು ತನ್ನ ತವರುಮನೆಯ ಹಿತವನ್ನೇ ಸಾಧಿಸಬಹುದು ಎಂಬ ಅಳುಕು ಕೆಲವು ಗಂಡಸರಿಗಿರುತ್ತದೆ. ತಾನು ಮೃದುವಾದರೆ ಅವಳು ತನ್ನನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ತನ್ನ ತಂದೆ ತಾಯಿಯರಿಗೂ ಅಕ್ಕ ತಂಗಿಯರಿಗೂ ಅನ್ಯಾಯ ಮಾಡಬಹುದು ಎಂಬ ಸಣ್ಣ ಹೆದರಿಕೆ ಹೊಸದಾಗಿ ಮದುವೆಯಾದ ಎಲ್ಲ ಗಂಡಸರಲ್ಲೂ ಇರುತ್ತದೆ. ಅಂತಹ ಸಾಕಷ್ಟು ಘಟನೆಗಳು ನಡೆದೂ ಇವೆ. ’ಮದುವೆಯಾಗಿ ಒಂದು ವರುಷದಾಗ ನನ್ ಮಗಾ ಬೇರೆ ಆದ’ ಎಂಬ ಜಾನಪದ ಗೀತೆಯನ್ನು ನೀವು ಕೇಳಿರಬಹುದು. ಹೆಂಡತಿಯ ಮಾತು ಕೇಳಿ ತಂದೆ ತಾಯಿಯರನ್ನು ಕಡೆಗಣಿಸಿದ ಎಷ್ಟೋ ಮಕ್ಕಳು ಇದ್ದಾರೆ. ಇದಕ್ಕೆ ಅವನು ಹೆಂಡತಿಗೆ ಕೊಟ್ಟ ಸಲುಗೆಯೇ ಕಾರಣ ಎಂದು ಹೇಳುವವರಿದ್ದಾರೆ. ಇಂತಹ ಉದಾಹರಣೆಗಳನ್ನು ತೋರಿಸಿ ಹೆಂಡತಿಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕು ಎಂದು ಉಪದೇಶಿಸುವವರಿದ್ದಾರೆ. ಇದು ಗಂಡಸರ ಹಿಂಜರಿಕೆಗೆ ಇನ್ನೊಂದು ಕಾರಣ.

ಇಂದು ಸಣ್ಣ ಕುಟುಂಬಗಳಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿಯುವುದನ್ನು ನೋಡಬಹುದು. ಇದು ಪಟ್ಟಣಕ್ಕೆ ಮಾತ್ರ ಸೀಮಿತವಲ್ಲ. ಹಳ್ಳಿಯಲ್ಲಿ ಬಡ ಕೂಲಿಕಾರರ ವರ್ಗದಲ್ಲಿಯೂ ಇದು ಸಾಮಾನ್ಯ. ಗಂಡನ ಕರ್ತವ್ಯವಾದ ಕುಟುಂಬ ಪೋಷಣೆ ಎಂಬ ಜವಾಬ್ದಾರಿಯನ್ನು ಮಹಿಳೆ ಹಂಚಿಕೊಳ್ಳುತ್ತಿದ್ದಾಳೆ. ಆದರೆ ಮಹಿಳೆಯ ಜವಾಬ್ದಾರಿಯಾದ ಅಡುಗೆಮನೆ ನಿರ್ವಹಣೆ, ಕಸಮುಸುರೆಗಳನ್ನು ಹಂಚಿಕೊಳ್ಳಲು ಗಂಡಸರ ಸ್ವಾಭಿಮಾನ ಅಡ್ಡಬರುತ್ತದೆ. ಅದು ತನಗೆ ಸಂಬಂಧಿಸಿದ್ದೇ ಅಲ್ಲ ಎಂಬ ಧೋರಣೆ. ಗಂಡ ತನ್ನ ಕಾಲೊತ್ತಿ ಸೇವೆ ಮಾಡಲಿ ಎಂದು ಯಾವ ಹೆಂಡತಿಯೂ ಬಯಸುವುದಿಲ್ಲ. (ಗಂಡನ ಮೇಲೆ ಅಂತಹ ಅಧಿಕಾರ ಚಲಾಯಿಸುವ ಪತ್ನಿಯರು ಇದ್ದರೂ ಅದು ಬೆರಳೆಣಿಕೆಯಷ್ಟು ಮಾತ್ರ). ಆದರೆ ತಾನು ಬಟ್ಟೆ ತೊಳೆಯುವಾಗ ತನ್ನ ಗಂಡ ಅದನ್ನು ಹರವಲು ಬಂದರೆ, ಪಾತ್ರೆ ತೊಳೆಯುವಾಗ ಅದನ್ನು ಜೋಡಿಸಿಟ್ಟರೆ, ಅಡುಗೆ ಮಾಡುವಾಗ ತರಕಾರಿ ಹೆಚ್ಚಿಕೊಟ್ಟರೆ, ಕಸಗುಡಿಸುವಾಗ ಹರಡಿ ಬಿದ್ದಿರುವ ಸಾಮಾನುಗಳನ್ನೆಲ್ಲ ಸರಿಯಾಗಿ ಜೋಡಿಸಿಕೊಟ್ಟರೆ ಪತ್ನಿಗಾಗುವ ಆನಂದ ಕಡಿಮೆಯಾದದ್ದೆ? ಇಲ್ಲಿ ಗಂಡ ಸಹಾಯಮಾಡುತ್ತಾನೆ ಎನ್ನುವುದರ ಜೊತೆಗೆ ಮನೆಗೆಲಸದಲ್ಲಿ ಅವನು ನೀಡುತ್ತಿರುವ ಸಾಂಗತ್ಯ ಖುಷಿ ನೀಡುತ್ತದೆ. ಅವಳ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ. ಆಫೀಸಿನಿಂದ ಬಳಲಿ ಬಂದಾಗ ಅವನೇನಾದರೂ ಒಂದು ಕಪ್ ಕಾಫಿ ಮಾಡಿಕೊಟ್ಟರೆ ಅದು ಹೇಳತೀರದ ಸಂತೋಷವನ್ನು ನೀಡುತ್ತದೆ. ತನ್ನ ಬಗ್ಗೆ ಅವನು ತೋರುತ್ತಿರುವ ಕಾಳಜಿಯನ್ನು ಗಮನಿಸಿ ಅವಳ ಪ್ರೀತಿ ಹೆಚ್ಚುತ್ತದೆ.

ಹೆಂಡತಿ ಅನಾರೋಗ್ಯದಿಂದ ಬಳಲುತ್ತಿರುವಾಗ ಗಂಡ ಅವಳ ಆರೈಕೆ ಮಾಡಿದರೆ ಅದಕ್ಕೆ ’ಸೇವೆ’ ಎಂಬ ಹೆಸರನ್ನು ಕೊಡಬೇಕಾಗಿಲ್ಲ. ಆ ಹೆಸರು ಅವರಿಗೆ ಮುಜುಗರವನ್ನುಂಟು ಮಾಡೀತು. ಆರೈಕೆ ಮಾಡಲು ಇನ್ನಾರೂ ಇರದಿರುವಾಗ ಅದು ಅವನ ಕರ್ತವ್ಯವಾಗುತ್ತದೆ. ಹೆಂಡತಿಗೆ ತಲೆನೋವು ಬಂದಾಗ ಝಂಡುಬಾಮ್ ಹಚ್ಚಿಕೊಡಲು, ಬೆನ್ನು ನೋವು ಬಂದರೆ ನೋವು ನಿವಾರಕ ಕ್ರೀಮ್ ಹಚ್ಚಿಕೊಡಲು, ಕಾಲು ನೋಯುತ್ತಿದ್ದರೆ ಮಸಾಜ್ ಮಾಡಲು ಗಂಡಸರಿಗೆ ಪೂರ್ವಾಗ್ರಹ ಯಾಕೆ? ಹಿಂಜರಿಕೆ ಯಾಕೆ? ಪ್ರೀತಿ ಇಬ್ಬರನ್ನೂ ಒಂದಾಗಿ ಬೆಸೆದಿರುವಾಗ, ಪ್ರೇಮ ಉಚ್ಚ ನೀಚ ಭಾವವನ್ನು ಮೀರಿ ನಿಂತಾಗ, ಪರಸ್ಪರ ಸರಿಯಾಗಿ ಅರ್ಥಮಾಡಿಕೊಂಡಿರುವಾಗ ಒಬ್ಬರ ಸೇವೆಯನ್ನು ಇನ್ನೊಬ್ಬರು ಮಾಡಿದರೆ ತಪ್ಪೇನು? ಅದು ಮಾನವೀಯ ಧರ್ಮಕ್ಕೆ ವಿರುದ್ಧವಾದದ್ದಂತೂ ಅಲ್ಲ.

ವೇದಗಣಿತ - ಭಾಗ ೩

ಮಹಾಬಲ ಭಟ್

ಸೂತ್ರ: ಏಕನ್ಯೂನೇನ ಪೂರ್ವೇಣ
ಗುಣ್ಯ ಅಥವಾ ಗುಣಕ ಸ್ಥಾನದಲ್ಲಿ ಕೇವಲ ೯ ಎಂಬ ಅಂಕೆಯಿಂದಾದ ಸಂಖ್ಯೆ ಇದ್ದರೆ ಈ ಸೂತ್ರ ವನ್ನು ಉಪಯೋಗಿಸಬಹುದು.
ಉದಾ: ೧೨೩ x ೯೯೯
ವಿಧಾನ: ಗುಣಾಕಾರ ಚಿಹ್ನೆಯ ಎಡಭಾಗದಲ್ಲಿರುವ ಸಂಖ್ಯೆ ಪೂರ್ವ ಸಂಖ್ಯೆ. ಸೂತ್ರ ಹೇಳುವಂತೆ ಅದರಲ್ಲಿ ಒಂದನ್ನು ಕಳೆಯಬೇಕು. ಉದಾ: ೧೨೩-೧=೧೨೨. ಈಗ ಬಂದ ಉತ್ತರದ ಎಲ್ಲ ಅಂಕೆಗಳನ್ನು ಒಂಭತ್ತರಿಂದ ಕಳೆದು ಈ ಅಂಕೆಗಳ ಮುಂದೆ ಬರೆಯುತ್ತಾ ಹೋದರೆ ಆಯಿತು. ಅಂತಿಮ ಉತ್ತರ ಸಿದ್ಧ.
೧೨೩ x ೯೯೯ = (೧೨೩-೧)/(೯೯೯-೧೨೨)
= ೧೨೨/೮೭೭ = ೧೨೨೮೭೭ ಇದೇ ಅಪೇಕ್ಷಿತ ಉತ್ತರ!!
ಉದಾ:(೨): ೩೪೬೧೯೮೪೦೬೭೨ x ೯೯೯೯೯೯೯೯೯೯೯
(೩೪೬೧೯೮೪೦೬೭೨-೧)/(೯೯೯೯೯೯೯೯೯೯೯-೩೪೬೧೯೮೪೦೬೭೧)
= ೩೪೬೧೯೮೪೦೬೭೧ ೬೫೩೮೦೧೫೯೩೨೮
ಇದು ಕ್ಯಾಲ್ಕುಲೇಟರಿಗಿಂತ ಫಾಸ್ಟ್ ಇಲ್ಲವೆ? ಇದನ್ನು ಗಮನಿಸಿ-
೫೭*೯೯ = ೫೭ x (೧೦೦-೧) = ೫೭೦೦-೫೭ (ವಿಭಾಜಕ ನಿಯಮ)
= ೫೬೪೩. ಇದೇ ನಿಯಮವನ್ನು ಸ್ವಲ್ಪ ಪರಿವರ್ತಿಸಿ ಉಪಯೋಗಿಸಲಾಗಿದೆ ಅಷ್ಟೆ!
ಪ್ರಯತ್ನಿಸಿ: ೭೮೯೪೩೨x೯೯೯೯೯೯; ೬೮೯೬೫೪೭೮೩೦x೯೯೯೯೯೯೯೯೯೯; ೬೩x೯೯೯

ವನಿತೆ

ತನ್ನೆಲ್ಲ
ಆಸೆ ಆಕಾಂಕ್ಷೆಗಳನ್ನು
ಬದಿಗಿಟ್ಟು
ನಂದನವನದ
ಏಳ್ಗೆಗಾಗಿ ಒತ್ತುಕೊಟ್ಟು
ಶ್ರಮಿಸಿದಳಾ ವನಿತೆ
ನಾಲ್ಕಾರು ವರ್ಷಗಳಲ್ಲಿ
ನೂರಾರು ಹೂವರಳಿ
ಒಂದನ್ನೂ ಕಿತ್ತುಕೊಳ್ಳಲಾಗದೆ
ನೋಟದಲ್ಲಿಯೇ
ತೃಪ್ತಿಗೊಂಡಳಾ ಪುನೀತೆ

ಅಖಿಲಾ ಕುರಂದವಾಡ

ಹೆಣ್ಣು ಜಗದ ಕಣ್ಣು

ಶೈಲಜಾ ಕಣವಿ

ಅನಾದಿ ಕಾಲದಿಂದಲೂ ಹೆಣ್ಣು ಪೂಜಿಸಲ್ಪಡುತ್ತ ಬಂದಿದ್ದರೂ ನಿಂದನೆಗೂ ಗುರಿಯಾಗಿದ್ದಾಳೆ. ಹಿಂಸೆ ಸಹಿಸಿ ಬೆಂದಿದ್ದಾಳೆ. ಅತ್ಯಾಚಾರ,ಸತ್ವಪರೀಕ್ಷೆ, ಅಗ್ನಿಪರೀಕ್ಷೆಗಳಿಗೆ ಒಳಗಾಗಿದ್ದಾಳೆ.

ತ್ರೇತಾಯುಗದಲ್ಲಿ ಶ್ರೀರಾಮ ಸೀತಾದೇವಿಯನ್ನು ಅಗ್ನಿಪರೀಕ್ಷೆಗೆ ಗುರಿಮಾಡಿದ. ಅದರಲ್ಲಿ ಸಫಲಳಾಗಿ ಬಂದರೂ ಮುಂದೆ ಅಗಸನೊಬ್ಬನ ಮಾತನ್ನು ಕೇಳಿ ಕಳಂಕ ಹೊರಿಸಿ ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ. ಲವಕುಶರನ್ನು ರಾಮ ತನ್ನ ಮಕ್ಕಳೆಂದು ಒಪ್ಪಿದ ಮೇಲೂ ಅವಳು ಮನೆ ಸೇರಲಿಲ್ಲ. ಭೂಮಿತಾಯನ್ನು ಮರೆಹೊಕ್ಕಾಗ ಭೂಮಿ ಬಾಯ್ಬಿರಿದು ತನ್ನಲ್ಲಿ ತನ್ನ ಮಗಳನ್ನು ಅಡಗಿಸಿಕೊಂಡಿತು. ಆಗಿನ ಕಾಲದಲ್ಲಿ (ವಿಚ್ಛೇದನಾವಕಾಶ ಇರಲಿಲ್ಲ!)

ದ್ವಾಪರಯುಗದಲ್ಲಿ ಅರ್ಜುನ ದ್ರೌಪದಿಯನ್ನು ಗೆದ್ದು ತಂದು ತಾಯಿಯ ಮುಂದೆ ಭಿಕ್ಷೆ ತಂದಿದ್ದೇನೆ ಎಂದಾಗ ಐವರೂ ಸಮಪಾಲು ಮಾಡಿಕೊಳ್ಳಿ ಎಂಬ ಆದೇಶ ಬಂತು. ದ್ರೌಪದಿಯ ಆಶಯವನ್ನು ಕೇಳುವ ಔದಾರ್ಯವನ್ನು ಯಾರೂ ತೋರಲಿಲ್ಲ. ಐವರು ಬಲಶಾಲಿ ಪತಿಯರನ್ನು ಹೊಂದಿದ್ದರೂ ತುಂಬಿದ ಸಭೆಯಲ್ಲಿ ಮಾನಕಳೆದುಕೊಳ್ಳುವ ದುರ್ಭರ ಪ್ರಸಂಗ ಅವಳಿಗೆ ಒದಗಿ ಬಂತು.

ಸತ್ಯವ್ರತ ಪರಿಪಾಲನೆಗೆ ಹೆಸರಾದ ಸತ್ಯ ಹರಿಶ್ಚಂದ್ರ ತನ್ನ ಹೆಂಡತಿ ಮಕ್ಕಳನ್ನು ಮಾರಿದ.

ಮಹಿಳೆ, ಸ್ತ್ರೀ, ಹೆಣ್ಣು ಹೆಂಗಸು ಮುಂತಾದ ಅನೇಕ ಶಬ್ದಗಳಿಂದ ನಿರ್ದೇಶಿಸಲ್ಪಡುವ ಅವಳು ಜಗತ್ತಿಗೆಲ್ಲ ತಾಯಿ. ಮಮತೆಯ ಮೂರ್ತಿ. ಸಹನೆ, ತಾಳ್ಮೆ, ಹೊಂದಾಣಿಕೆ ಲಜ್ಜೆ, ನಾಚಿಕೆಯ ಜೊತೆಗೆ ಸ್ವಾಭಿಮಾನದ ಪ್ರತಿಬಿಂಬ.

ತನ್ನ ಮಗು ಹೆಣ್ಣಾಗಲಿ, ಗಂಡಾಗಲಿ ಸಮಭಾವದಿಂದ ಮುದ್ದಿನಿಂದ ಬೆಳೆಸುವಳು. ತನ್ನೆಲ್ಲ ಮಕ್ಕಳನ್ನೂ ಭೇದಭಾವತೋರಿಸದೆ ಪ್ರೀತಿಯಿಂದ ಕಾಣುವಳು. ಬಳ್ಳಿಯ ಕಾಯಿ ಬಳ್ಳಿಗೆ ಭಾರವೆ? ಎಷ್ಟು ಜನ ಮಕ್ಕಳಿದ್ದರೂ ಅವಳಿಗೆ ಬೇಸರವಿಲ್ಲ. ಅವರ ಲಾಲನೆ, ಪಾಲನೆ ಮಾಡಿ ಅನಾರೋಗ್ಯವಾದಾಗ ಆರೈಕೆ ಮಾಡಿ ಬೆಳೆಸುವಳು. ಬಡವಳಾಗಿದ್ದರೂ ಭಿಕ್ಷೆ ಬೇಡಿ ಸಾಕುವಳು. ತಾನು ರೋಗಿಯಾಗಿದ್ದರೂ, ಅಶಕ್ತಳಾಗಿದ್ದರೂ ಜೀವ ತೇದು ಮಕ್ಕಳನ್ನು ಪೋಷಿಸುವಳು. ವಿಧವೆ ಅಥವಾ ವಿಚ್ಛೇದಿತರ ಪಾಡಂತೂ ಹೇಳತೀರದು. ತಾನೇ ತಂದೆಯಾಗಿ ಮಕ್ಕಳ ಜೀವನ ಉಜ್ಜ್ವಲವಾಗಲು ಶ್ರಮಿಸುವಳು. ಇದಕ್ಕೆ ಅವಳು ಯಾವುದೇ ಫಲವನ್ನು ಬಯಸುವುದಿಲ್ಲ. ಬಯಸಿದರೂ ಸಿಗುತ್ತದೆಂದಿಲ್ಲ. ಹೆಣ್ಣು ಮಕ್ಕಳು ಅತ್ತೆಮನೆಯನ್ನು ಸೇರುತ್ತಾರೆ. ಗಂಡುಮಕ್ಕಳು ಮದುವೆಯಾಗಿ ಬೇರೆ ಮನೆ ಮಾಡುತ್ತಾರೆ. ಎಷ್ಟು ಜನ ಗಂಡುಮಕ್ಕಳಿದ್ದರೂ ಅವರಿಗೆ ತಾಯಿ ಒಂದು ಹೊರೆಯಾಗುತ್ತಾಳೆ. ಸರದಿ ಪ್ರಕಾರ ಕೆಲವು ತಿಂಗಳುಗಳ ಕಾಲ ಇಟ್ಟುಕೊಳ್ಳುವ ಏರ್ಪಾಡು ಮಾಡುತ್ತಾರೆ. ಒಬ್ಬನೇ ಮಗನಾದರೆ ಅನಾಥಾಶ್ರಮ ಸೇರಿಸುತ್ತಾನೆ.

ಹೆಣ್ಣು ಹುಟ್ಟಿದ ಮನೆಗೂ ಕೊಟ್ಟ ಮನೆಗೂ ಬೆಳಕಾಗುವಳು. ಅವಳ ಒಳ್ಳೆಯ ನಡೆ ನುಡಿ ವರ್ತನೆಗಳಿಂದ, ಮುಗ್ಧತೆಯಿಂದ ಬೆಳಕು ಚೆಲ್ಲುವಳು. ತಂದೆಯಿಲ್ಲದ ಮಕ್ಕಳನ್ನು ಒಬ್ಬಳು ತಾಯಿ ಸಾಕಬಹುದು. ಆದರೆ ತಾಯಿಯಿಲ್ಲದ ಮಗುವನ್ನು ಸಲಹಲು ಇನ್ನೊಬ್ಬಳು ಹೆಣ್ಣು ಬೇಕು. ಮಲತಾಯಿಯೋ, ಅಜ್ಜಿಯೊ, ದಾದಿಯೊ, ಅಯಾಳೊ, ಚಿಕ್ಕಮ್ಮನೊ, ದೊಡ್ಡಮ್ಮನೊ, ಅತ್ತೆಯೊ ಹೀಗೆ ಯಾವ ಸ್ತ್ರೀರೂಪದಲ್ಲಾದರೂ ಅವಳು ಬೇಕು. ಅವಳು ಮಗುವಿನ ತೊದಲು ನುಡಿಗಳನ್ನು ಕೇಳುತ್ತ, ಕಲಿಸುತ್ತ, ಕಥೆ ಹೇಳುತ್ತ ಬೆಳೆಸುತ್ತಾಳೆ.

’ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಜನನಿಯಿಂದ ಪಾಠ ಕಲಿತ ಜನರು ಧನ್ಯರು’. ಮನೆಯಿಂದ ಶಾಲೆಯನ್ನು ಸೇರಿದಾಗಲೂ ಮೊದಲ ಪಾಠ ಹೇಳಿಕೊಡುವ ಗುರು ಹೆಣ್ಣೇ. ಮಗುವಿನ ಮುಗ್ಧ ಮನಸ್ಸನ್ನು ಅರಿತುಕೊಂಡು ಕಲಿಯಲು ಸಹಕರಿಸುತ್ತಾರೆ.
ಆಸ್ಪತ್ರೆಗೆ ಹೋದರೆ ದಾದಿಯರು ಸೇವೆ ಮಾಡುತ್ತಾರೆ. ಅವರು ಹೆಣ್ಣು. ರೋಗಿ ಹೆಣ್ಣೊ ಗಂಡೊ ಎಂಬ ಭೇದ ಮಾಡದೆ ಶುಶ್ರೂಷೆ ಮಾಡುತ್ತಾರೆ.
ಹೆಣ್ಣು ಮಗಳಾಗಿ, ಅಕ್ಕ, ತಂಗಿ, ಅತ್ತಿಗೆ, ನಾದಿನಿ ಅತ್ತೆ, ಸೊಸೆ, ಅಜ್ಜಿ ಎಲ್ಲ ಹಂತಗಳನ್ನೂ ನಿಭಾಯಿಸುತ್ತಾಳೆ. ’ಗೃಹಿಣೀ ಗೃಹಮುಚ್ಯತೇ’ ಗೃಹಿಣಿಯಿಂದಲೇ ಮನೆ ಬೆಳಗುವುದು. ’ಒಲಿದರೆ ನಾರಿ ಸ್ವರ್ಗಕ್ಕೆ ದಾರಿ, ಮುನಿದರೆ ಮಾರಿ ನರಕಕ್ಕೆ ದಾರಿ’

ಹೆಣ್ಣು ಬಲು ಬೇಗ ಒಲಿದುಬಿಡುತ್ತಾಳೆ. ಜೊತೆಗೆ ಬೇಗನೆ ಮೋಸಹೋಗುತ್ತಾಳೆ. ಗಂಡಸು ತನ್ನ ಕಾರ್ಯಕ್ಕೆ ಹೆಣ್ಣನ್ನು ಬಳಸಿಕೊಳ್ಳುತ್ತಾನೆ.
ಹೆಣ್ಣಿನ ಕಾರಣದಿಂದಲೇ ಕೆಟ್ಟ ಪುರುಷರು ನಾಶವಾದದ್ದನ್ನು ಪುರಾಣಗಳಿಂದ ತಿಳಿದುಕೊಳ್ಳಬಹುದು. ಮಹೀಷಾಸುರನನ್ನು ಕೊಂದ ದುರ್ಗೆ, ರಾವಣನ ನಾಶಕ್ಕೆ ಕಾರಣಳಾದ ಸೀತೆ, ಕೀಚಕನನ್ನು ಕೊಲ್ಲಿಸಿದ ದ್ರೌಪದಿ, ವಿಶ್ವಾಮಿತ್ರನನ್ನು ಕೆಡಿಸಿದ ಮೇನಕೆ ಇವರೆಲ್ಲ ದುಷ್ಟ ಸಂಹಾರಕ್ಕೆ ಕಾರಣೀಕರ್ತರಾದವರು.

ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳಬಲ್ಲದು. ಯಾವ ಮಹಾನ್ ಪುರುಷನೇ ಆಗಿರಲಿ ಅವನು ಒಬ್ಬ ತಾಯಿಯ ಮಗ. ರಾಮ, ಕೃಷ್ಣ, ಬುದ್ಧ, ಬಸವ, ಅಲ್ಲಮ, ಏಸುಕ್ರಿಸ್ತ, ಶಂಕರಾಚಾರ್ಯ, ಶಿವಾಜಿ ಹೀಗೆ ಅನೇಕರು ತಮ್ಮ ತಾಯಿಯ ಹೆಸರನ್ನು ಅಜರಾಮರ ವಾಗಿಸಿದ್ದಾರೆ.

ಸಮಾಜದಲ್ಲಿ ನಡೆಯುವ ಎಲ್ಲ ಒಳಿತು ಕೆಡುಕುಗಳಿಗೂ ಹೆಣ್ಣೇ ಕಾರಣ. ಇಂದಿನ ದಿನಗಳಲ್ಲಿ ಮಹಿಳೆ ತನ್ನ ಮಕ್ಕಳನ್ನೇ ತಿದ್ದಲಾಗದೆ ಅವರ ತಪ್ಪುಗಳನ್ನು ಅಲಕ್ಷಿಸಿ ಅವರ ಅವನತಿಗೆ ಕಾರಣಳಾಗುತ್ತಿದ್ದಾಳೆ. ಅತಿಯಾದ ಮುದ್ದಿನಿಂದ ಅವರ ಜೀವನಶೈಲಿಯನ್ನು ಅಲಕ್ಷಿಸಿ ದೊಡ್ಡ ತಪ್ಪನ್ನು ಮಾಡುತ್ತಿದಾಳೆ. ಇಂದಿನ ಮಹಿಳೆಗೆ ತನ್ನ ಸುಖ ಮುಖ್ಯವಾಗಿದೆ. ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಅವರಿಗೀ ನಾಡಿನ, ಮನೆಯ ಸಂಸ್ಕೃತಿ, ವೇಷಭೂಷಣಗಳ ಬಗ್ಗೆ ತಿಳಿಸಿಕೊಡಬೇಕು. ಗಂಡು ಮಕ್ಕಳಿದ್ದರೆ ಅವರಿಗೆ ಸ್ತ್ರೀವರ್ಗದ ಬಗ್ಗೆ ಗೌರವಾದರಗಳು ಬರುವಂತೆ ಬೆಳೆಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಅತ್ಯಾಚಾರ ಕಡಿಮೆಯಾಗಬಹುದು.

ಮನೋಗತ (ಸಂಪಾದಕೀಯ)

ಮಹಾಬಲ ಭಟ್
ಮತ್ತೆ ಬಂದು ಹೋಯಿತು ಮಾರ್ಚ್ ೮. ಹೆಮ್ಮಕ್ಕಳ ಎದೆಯಲ್ಲಿ ಏನೋ ಮಿಂಚು. ತಮಗಾಗಿಯೂ ಒಂದು ದಿನವಿದೆಯಲ್ಲ ಎಂಬ ಹೊಳಪು. ನಿಜ. ಇತ್ತೀಚೆಗೆ ಮಹಿಳಾ ದಿನಾಚರಣೆ ರಂಗೇರುತ್ತಿದೆ. ಈ ಸಂಭ್ರಮಾಚರಣೆಗೆ ಇದೀಗ ೧೦೦ ವರುಷ. ನೂರು ವರ್ಷಗಳಲ್ಲಿ ಮಹಿಳೆಯ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಯ ಕುರಿತು ಲೇಖನ, ಚರ್ಚೆಗಳು ನಡೆಯುತ್ತಿವೆ. ಕೆಲವರು ಆಧುನಿಕ ಮಹಿಳೆಯನ್ನು ಉತ್ಪ್ರೇಕ್ಷಿಸಿ ಬರೆದರೆ ಇನ್ನು ಕೆಲವರು ಇಂದಿಗೂ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ ಎಂಬ ಋಣಾತ್ಮಕ ಚಿಂತನೆಯನ್ನೇ ತಮ್ಮ ವಿಚಾರದ ಉಸಿರನ್ನಾಗಿಸಿಕೊಳ್ಳುತ್ತಾರೆ. ಇನ್ನು ಭಾಷಣಗಳಲ್ಲಿ ಹೆಂಡತಿಯನ್ನು ಮಾರಿದ ಹರಿಶ್ಚಂದ್ರ, ಪತ್ನಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದ ರಾಮ, ಪತ್ನಿಯನ್ನು ದ್ಯೂತದಲ್ಲಿ ಪಣವಾಗಿರಿಸಿದ ಯುಧಿಷ್ಠಿರ ಇವರೆಲ್ಲ ಟೀಕೆಗೆ ಪಾತ್ರರಾಗಿ ಇಂದಿನ ಪೀಳಿಗೆ ಅವರ ಸಂತತಿಯೇ ಎಂಬಂತೆ ಸಾರಲಾಗುತ್ತದೆ.

ಕಾಲ ಬದಲಾಗಿದೆ, ವಿಚಾರ ಬದಲಾಗಿದೆ, ಮೌಲ್ಯಗಳು ಬದಲಾಗಿವೆ. ಪಾಶ್ಚಾತ್ಯರ ಚಿಂತನೆಯನ್ನೇ ಮೌಲಿಕವೆಂಬಂತೆ ಬಿಂಬಿಸಲಾಗುತ್ತ್ತಿದೆ. ಅದೆಲ್ಲ ಇರಲಿ, ಇಂದು ಮಹಿಳೆಗೆ ಮೇಲೇರಲು ಸಾಕಷ್ಟು ಅವಕಾಶಗಳಿರುವಾಗ ಮತ್ತೆ ’ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದ ಮನುವನ್ನು ಬೈಯುತ್ತ ಕುಳಿತುಕೊಳ್ಳುವುದು ಯಾಕೆ? ರಾಜಧರ್ಮಕ್ಕಿಂತ ಕುಟುಂಬ ಧರ್ಮವೇ ಮುಖ್ಯವಾಗಿರುವ ಈ ಪ್ರಜಾಪ್ರಭುತ್ವದಲ್ಲಿ ಮತ್ತೆ ರಾಮನಿಗೆ ಶಾಪ ಹಾಕುವುದ್ಯಾಕೆ? ಗಂಡನಿಗೆ ಬಡತನ ಬಂತೆಂದರೆ ವಿಚ್ಛೇದನ ಸ್ವೀಕರಿಸುವ ಸ್ವಾತಂತ್ರ್ಯ ಮಹಿಳೆಯರಿಗಿರುವಾಗ ಹರಿಶ್ಚಂದ್ರನನ್ನು ಬಯ್ಯುವುದು ಏಕೆ?
ನನಗೆ ಮಹಿಳಾದಿನ ಬಂತೆಂದರೆ ಗಾರ್ಗಿ, ಮೈತ್ರೇಯಿ, ನೆನಪಾಗುತ್ತಾರೆ. ಗಂಧರ್ವ ಕುಮಾರಿ ಮದಾಲಸಾ ಸ್ಮೃತಿಪಥದಲ್ಲಿ ಹಾದು ಹೋಗುತ್ತಾಳೆ. ದುಷ್ಯಂತ ತನ್ನನ್ನು ತಿರಸ್ಕರಿಸಿದಾಗ ಸೆಟೆದು ನಿಂತ ಶಕುಂತಲೆಯ ನೆನಪಾಗುತ್ತದೆ. ಸ್ತ್ರೀಯರಿಗೆ ಗೌರವ ಕೊಡಬೇಕೆಂಬ ವಿಚಾರವನ್ನು ನಾವು ಪಾಶ್ಚಾತ್ಯರಿಂದ ಕಲಿಯಬೇಕಾದ್ದಿಲ್ಲ. ನಮ್ಮ ಪುರಾತನ ಗ್ರಂಥಗಳಲ್ಲಿ, ವೈವಾಹಿಕ ವಿಧಾನದಲ್ಲಿ ಅವನ್ನೆಲ್ಲ ಹೇಳಲಾಗಿದೆ. ಹಾಗಾದರೆ ತಪ್ಪಿರುವುದು ನಮ್ಮ ಸಂಸ್ಕೃತಿಯಲ್ಲಲ್ಲ. ನಮ್ಮ ವಿಚಾರದಲ್ಲಲ್ಲ. ಆದರೆ ಆಚಾರದಲ್ಲಿ. ದೈಹಿಕ ಬಲವನ್ನು ಹೊಂದಿರುವ ಪುರುಷವರ್ಗ ಅದನ್ನೇ ಅಸ್ತ್ರವಾಗಿರಿಸಿಕೊಂಡು ಸ್ತ್ರೀ ಶೋಷಣೆಗೆ ಮುಂದುವರಿದಿರುವುದು ನಮ್ಮ ಆಚಾರದೋಷ.

ಕೆಲವು ದಿನಾಚರಣೆಗಳು ಅರ್ಥಹೀನ ನಿಜ. ಒಂದು ದಿನದ ಪರಿವರ್ತನೆ ಯಾವ ವ್ಯತ್ಯಾಸವನ್ನೂ ಮಾಡಲಾರದು ಎಂಬುದೂ ಸತ್ಯ. ಆದರೆ ಮಹಿಳಾ ದಿನಾಚರಣೆಯು ಇಂದು ಮಾಧ್ಯಮಗಳ ಕಾರಣದಿಂದ ಹೆಚ್ಚು ಅರ್ಥಪೂರ್ಣವಾಗುತ್ತಿದೆ ಎನ್ನಬಹುದು. ಇದು ನಿಜಕ್ಕೂ ಆವಶ್ಯಕವಾಗಿರುವ ದಿನ. ಈ ನೆಪದಿಂದ ಮಹಿಳೆಯರಲ್ಲಿ ಸ್ವಾಭಿಮಾನ ಮೂಡಿಸುವ ಪ್ರಯತ್ನ ನಡೆಯುತ್ತಿರುವುದು ಸ್ವಾಗತಾರ್ಹ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರೂ ಸಕ್ರಿಯ ಪಾತ್ರ ವಹಿಸಬಹುದು ಎಂಬ ಭಾವ ಪ್ರತಿಯೊಬ್ಬರಲ್ಲೂ ಮೂಡಿದರೆ ಅದು ನಿಜಕ್ಕೂ ಅದ್ಭುತ ಪರಿವರ್ತನೆಯನ್ನು ತರಬಹುದು.