Monday, August 29, 2011

ಭಗವದ್ಗೀತೆ -ಧರ್ಮ


ಲೇಖಕರು:
ಮಹಾಬಲ ಭಟ್, ಸಂಸ್ಕೃತ ಉಪನ್ಯಾಸಕರು, ಗೋವಾ

ಉದಯವಾಣಿಯ ಅಗಸ್ಟ್ ೨೧ರ ಸಂಚಿಕೆಯಲ್ಲಿ ಪ್ರಕಟವಾದ ಎಸ್. ಎನ್. ಬಾಲಗಂಗಾಧರ್ ಅವರ ’ಧರ್ಮದ ನಿಜ ಅರ್ಥವನ್ನು ಹುಡುಕುತ್ತ.’ ಎಂಬ ಲೇಖನ ಸಮತೋಲಿತವಾದ ಬರಹ. ’ಧರ್ಮ’ ಎಂಬ ಪದದ ಅರ್ಥವನ್ನು ಸ್ವಲ್ಪಮಟ್ಟಿಗೆ ವಿಸ್ತರಿಸುವ ಪ್ರಯತ್ನ ನನ್ನದು.

ನಾವು ಯಾವುದೇ ಶಬ್ದವನ್ನು ಭಾಷಾಂತರ ಮಾಡಿದಾಗ ಅದು ಮೂಲ ಶಬ್ದಕ್ಕೆ ಅತ್ಯಂತ ಸಮೀಪವಾದ ಅರ್ಥವನ್ನು ನೀಡುವುದೇ ಹೊರತು ಮೂಲ ಶಬ್ದದ ಎಲ್ಲ ಭಾವಗಳನ್ನೂ ಒಳಗೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ಸಂಸ್ಕೃತ ಶಬ್ದಕ್ಕೆ ಅದು ನಿರ್ದೇಶಿಸುವ ವಸ್ತುವಿನ ಹೊರತಾದ ಅರ್ಥವೊಂದಿರುತ್ತದೆ. ಉದಾ: ’ಉದಕಮ್’ ಎಂಬ ಪದವನ್ನು ಕನ್ನಡಕ್ಕೆ ಭಾಷಾಂತರಿಸಿದಾಗ ’ನೀರು’ ಎಂದು ಬರೆಯುತ್ತೇವೆ. ಈ ಭಾಷಾಂತರಪದವು ’ಉದಕಮ್’ ಎಂಬ ಶಬ್ದದಿಂದ ಸೂಚಿಸಲ್ಪಡುವ ವಸ್ತುವನ್ನು ನಿರ್ದೇಶಿಸುತ್ತದೆಯೇ ಹೊರತು ಮೂಲ ಶಬ್ದ ತಿಳಿಸಿಕೊಡುವ ’ಒದ್ದೆ ಮಾಡುವ ಗುಣವುಳ್ಳದ್ದು’ ಎಂಬ ಅರ್ಥವನ್ನು ಹೇಳುವುದಿಲ್ಲ. ಅದೇ ರೀತಿಯಲ್ಲಿ ’ರಿಲಿಜನ್’ ಎಂಬ ಆಂಗ್ಲಪದವನ್ನು ಕನ್ನಡಕ್ಕೆ ಅಥವಾ ಭಾರತೀಯ ಭಾಷೆಗಳಿಗೆ ಭಾಷಾಂತರಿಸುವಾಗ ಬೇರೆ ಬೇರೆಯವರು ಬೇರೆ ಬೇರೆ ಶಬ್ದಗಳನ್ನು ಉಪಯೋಗಿಸುತ್ತಾರೆ. ಕೆಲವರು ’ಮತ’ ಎಂದರು, ಇನ್ನು ಕೆಲವರು ’ಧರ್ಮ’ ಎಂದರು. ’ಮತ’ ಎಂಬ ಶಬ್ದಕ್ಕೆ ’ಜ್ಞಾನ’ ಎಂದರ್ಥ. ’ಅಭಿಪ್ರಾಯ’ ಎಂಬರ್ಥದಲ್ಲಿಯೂ ಇದರ ಬಳಕೆ ಇದೆ. ಹಾಗಾದರೆ ಮುಸ್ಲಿಂ, ಕ್ರಿಶ್ಚಿಯನ್ ಇತ್ಯಾದಿಗಳನ್ನು ಮತಗಳು ಎಂದು ಹೇಳಬಹುದೆ?
’ರಿಲಿಜನ್’ ಎಂಬ ಶಬ್ದಕ್ಕೆ ಧರ್ಮ ಎಂಬ ಶಬ್ದದ ಬಳಕೆಯನ್ನು ಬಹಳ ಮಂದಿ ವಿರೋಧಿಸುತ್ತಾರೆ. ಧರ್ಮ ಪದದ ವ್ಯಾಪ್ತಿ ಅತ್ಯಂತ ವಿಶಾಲವಾದದ್ದು ಎಂಬುದು ಅದಕ್ಕೆ ಕಾರಣ. ’ಧಾರಣಾತ್ ಧರ್ಮ ಇತ್ಯಾಹು:’ ಎಂಬುದು ಧರ್ಮ ಪದಕ್ಕೆ ಪ್ರಾಜ್ಞರು ಕೊಟ್ಟಿರುವ ವ್ಯಾಖ್ಯೆ. ಅಂದರೆ ಧರಿಸಲು ಯೋಗ್ಯವಾಗಿದ್ದು, ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗ್ಯವಾದದ್ದು ಎಂದರ್ಥ. ಸುಡುವುದು ಬೆಂಕಿಯ ಧರ್ಮ ಎಂಬಲ್ಲಿ ಧರ್ಮ ಶಬ್ದಕ್ಕೆ ’ಸ್ವಭಾವ’ ಎಂದರ್ಥ. ಜ್ಞಾನಾರ್ಜನೆ ವಿದ್ಯಾರ್ಥಿಯ ಧರ್ಮ ಎಂಬಲ್ಲಿ ಈ ಶಬ್ದವೇ ’ಕರ್ತವ್ಯ’ ಎಂಬರ್ಥವನ್ನು ಕೊಡುತ್ತದೆ. ನನ್ನ ಅಭಿಪ್ರಾಯದಲ್ಲಿ ಈ ಎಲ್ಲ ಅರ್ಥಗಳನ್ನು ’ರಿಲಿಜನ್’ ಗೆ ಅನ್ವಯಿಸಬಹುದು. ಯಾವುದೇ ರಿಲಿಜನ್ ಜೀವನದಲ್ಲಿ ಮಾಡಬಾರದ ಕೆಲಸಗಳನ್ನು ಮಾಡಲು ಹೇಳುವುದಿಲ್ಲ. ಮಾನವತೆ, ಸಚ್ಚಾರಿತ್ರ್ಯ ಮುಂತಾದ ಸದ್ಗುಣಗಳನ್ನೇ ಎಲ್ಲ ರಿಲಿಜನ್‌ಗಳೂ ಬೋಧಿಸುತ್ತವೆ. ಹಿಂಸೆಯನ್ನು ಯಾವುದಾದರೂ ರಿಲಿಜನ್ ಬೋಧಿಸುತ್ತದೆ ಎಂದು ಯಾರಾದರೂ ಹೇಳಿದರೆ ಅದು ಅರ್ಥೈಸಿಕೊಳ್ಳುವಿಕೆಯಲ್ಲಿರುವ ದೋಷ. ಅಂದರೆ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಒಳ್ಳೆಯ ಗುಣಗಳನ್ನು ಬೋಧಿಸುವುದೇ ಎಲ್ಲ ರಿಲಿಜನ್‌ಗಳ ಉದ್ದೇಶ. ಇನ್ನೊಂದರ್ಥದಲ್ಲಿ ಎಲ್ಲ ರಿಲಿಜನ್‌ಗಳು ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗ್ಯವಾದವುಗಳೇ. ಹಾಗಾಗಿ ಅವು ’ಧರ್ಮ’.
’ಸ್ವಭಾವ’ ಶಬ್ದಕ್ಕೆ ಸ್ವ ಭಾವ ಅಂದರೆ ತನ್ನ ಭಾವ ಎಂದರ್ಥ. ನಾನು ಹಾಗೂ ನನ್ನ ಭಾವ ಬೇರ್ಪಡಲು ಸಾಧ್ಯವಿಲ್ಲ. ಹಾಗೆಯೇ ರಿಲಿಜನ್‌ನಲ್ಲಿ ಹೇಳಿರುವ ವಿಚಾರಗಳು ನಮ್ಮ ಜೀವದಲ್ಲಿ ಪ್ರತ್ಯೇಕವಾಗಿ ಇರಬಾರದು ಅದು ನಮ್ಮ ಸ್ವಭಾವವೇ ಆಗಬೇಕು ಹಾಗಾಗಿ ರಿಲಿಜನ್ ಕೂಡ ಧರ್ಮ.
ರಿಲಿಜನ್ ನಮಗೆ ನಮ್ಮ ಕರ್ತವ್ಯವನ್ನು ತಿಳಿಸಿಕೊಡುತ್ತದೆ. ರಿಲಿಜನ್ನಿನಲ್ಲಿರುವ ಆಚರಣೆಗಳು ಐಚ್ಛಿಕ ಅಂತಿದ್ದರೂ ನಿಜವಾಗಿ ಅವು ಅನಿವಾರ್ಯವಾಗಿ ಮಾಡಬೇಕಾದ ಆಚರಣೆಗಳು. ಅವು ನಮ್ಮ ಕರ್ತವ್ಯದ ಒಂದು ಭಾಗ. ಈ ಅರ್ಥದಲ್ಲಿಯೂ ರಿಲಿಜನ್ ಧರ್ಮ.
ಹೀಗೆಂದಾಕ್ಷಣ ’ಧರ್ಮ’ ಎಂಬ ಪದವನ್ನು ’ರಿಲಿಜನ್’ ಎಂದು ಭಾಷಾಂತರಿಸಬಹುದು ಎಂಬುದು ನನ್ನ ಅಭಿಪ್ರಾಯವಲ್ಲ. ಧರ್ಮ ಶಬ್ದದ ವ್ಯಾಪ್ತಿ ’ರಿಲಿಜನ್’ ಎಂಬ ಶಬ್ದದ ವ್ಯಾಪ್ತಿಗಿಂತ ಬಹಳ ವಿಶಾಲವಾದದ್ದು. ಒಂದರ್ಥದಲ್ಲಿ ’ಧರ್ಮ’ ಎಂಬ ಪದವು ಭಾಷಾಂತರಿಸಲು ಸಾಧ್ಯವಿಲ್ಲದ ಪದ. ಆದರೆ ರಿಲಿಜನ್ ಪದವನ್ನು ಧರ್ಮ ಎಂದು ಭಾಷಾಂತರಿಸಲು ಅಡ್ಡಿಯಿಲ್ಲ ಎಂಬುದು ನನ್ನ ಅಭಿಪ್ರಾಯ.
ಇಸ್ಲಾಂ, ಕ್ರಿಶ್ಚಿಯಾನಿಟಿ, ಜೂಡಾಯಿಸಂ ಗಳು ಮಾತ್ರ ರಿಲಿಜನ್ನುಗಳು, ಹಿಂದೂ, ಬೌದ್ಧ ಇವೆಲ್ಲ ರಿಲಿಜನ್ನುಗಳಲ್ಲ ಎಂಬ ವಾದವೂ ಕೂಡ ಚರ್ಚಾಸ್ಪದ. ಯಾಕೆಂದರೆ ಈ ವಾದವನ್ನು ಹೂಡುವವರು ಹಿಂದೂಗಳು ಮಾತ್ರ. ಅದಕ್ಕೆ ಕಾರಣ ಉಳಿದೆಲ್ಲ ರಿಲಿಜನ್ನುಗಳು ಒಬ್ಬ ವ್ಯಕ್ತಿಯಿಂದ ಆರಂಭಿಸಲ್ಪಟ್ಟಂಥವು ಎಂಬುದೆ ಇರಬಹುದು. ವ್ಯತ್ಯಾಸ ಇಷ್ಟೆ ನಾವು ದೇವರಿಂದಲೇ ಧರ್ಮ ಆರಂಭಿಸಲ್ಪಟ್ಟಿತು ಎಂದು ಹೇಳುತ್ತೇವೆ. ಅವರು ಧರ್ಮವನ್ನು ಆರಂಭಿಸಿದವರನ್ನೇ ದೇವರೆಂದು ನಂಬುತ್ತಾರೆ. ಹಿಂದೂ ಎಂಬುದು ಒಂದು ’ಸಂಪ್ರದಾಯ’ ಎಂದು ಹೇಳಿದರೂ ಅದು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ’ಕೊಡಲ್ಪಟ್ಟ’ (ಸಂ-ಪ್ರದಾಯ) ಜೀವನಪದ್ಧತಿ ಎಂಬಷ್ಟೇ ಅರ್ಥವನ್ನು ಕೊಡುತ್ತದೆ. ಆಗ ಭಾಗವತ ಸಂಪ್ರದಾಯ, ಶೈವ ಸಂಪ್ರದಾಯ ಇವೆಲ್ಲ ಸ್ವತಂತ್ರವಾಗಿ ’ಹಿಂದೂ’ ಎಂಬ ಒಂದೇ ಛತ್ರದಡಿ ಬರುವುದಿಲ್ಲ. ಅಷ್ಟೇ ಅಲ್ಲ ಈ ಹಿಂದೂ ಎಂಬ ಪದ ಇತ್ತೀಚಿನದ್ದು. ’ವೈದಿಕ ಧರ್ಮ’ವೇ ಕೆಲವು ಬದಲಾವಣೆಗಳೊಂದಿಗೆ ಹಿಂದೂ ಧರ್ಮವಾಗಿ ಅನುಸರಿಸಲ್ಪಡುತ್ತದೆ. ಭಾರತದಲ್ಲಿರುವ ಎಲ್ಲ ಸಾಮ್ಯತೆ ಇರುವ ಸಂಪ್ರದಾಯಗಳನ್ನು ಒಟ್ಟುಗೂಡಿಸಿ ’ಹಿಂದೂಯಿಸಂ’ ಎಂದು ಕರೆದರೆ ಅದು ತಪ್ಪೇನಲ್ಲ. ಈಗ ಕ್ರಿಶ್ಚಿಯಾನಿಟಿ, ಇಸ್ಲಾಂ ಮುಂತಾದ ರಿಲಿಜನ್ನುಗಳ ಮಧ್ಯೆ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ’ಹಿಂದೂ’ ಜೀವನಪದ್ಧತಿಗೂ ’ರಿಲಿಜನ್’ ರೂಪನೀಡಿ ವ್ಯವಸ್ಥಿತ ಸಂಘಟನೆಯನ್ನಾಗಿ ಮಾಡುವುದು ಆವಶ್ಯಕವೇನೋ ಎನಿಸುತ್ತದೆ.
ಹಿಂದೂಗಳ ಧರ್ಮಗ್ರಂಥ ಭಗವದ್ಗೀತೆ ಎಂದು ಉದ್ಘೋಷಿಸಿದವರಾರೋ ಗೊತ್ತಿಲ್ಲ. ಪ್ರಾಯಶ: ವಿವೇಕಾನಂದರು ಚಿಕಾಗೊ ಸಮ್ಮೇಳನದಲ್ಲಿ ಭಗವದ್ಗೀತೆಯು ಹಿಂದೂಗಳ ಪವಿತ್ರ ಗ್ರಂಥ ಎಂದು ಪ್ರತಿಪಾದಿಸಿರುವುದರಿಂದ ಎಲ್ಲರಲ್ಲಿಯೂ ಆ ಅಭಿಪ್ರಾಯ ಮೂಡಿರಬೇಕು. ಭಗವದ್ಗೀತೆ ಒಂದು ಸ್ವತಂತ್ರ ಗ್ರಂಥವಲ್ಲ ಅದು ಮಹಾಭಾರತದ ಒಂದು ಚಿಕ್ಕ ಭಾಗ ಎಂಬುದನ್ನು ನಾವು ಗಮನಿಸಬೇಕು. ಭಗವದ್ಗೀತೆಯಲ್ಲಿ ಹೇಳಿರುವ ವಿಚಾರಗಳು ವೇದಗಳಲ್ಲೂ ಉಪನಿಷತ್ತುಗಳಲ್ಲೂ, ಬ್ರಹ್ಮಸೂತ್ರಗಳಲ್ಲೂ ಪುರಾಣಾದಿಗ್ರಂಥಗಳಲ್ಲೂ ಕಾಣಸಿಗುತ್ತವೆ. ಅಂತಿರುವಾಗ ಭಗವದ್ಗೀತೆಯೊಂದನ್ನೇ ಅದು ಭಗವಾನ್ ಕೃಷ್ಣನಿಂದಲೇ ಉಪದಿಷ್ಟವಾದದ್ದು ಎಂಬ ಒಂದೇ ಕಾರಣಕ್ಕಾಗಿ ಹಿಂದೂಗಳ ಪವಿತ್ರ ಗ್ರಂಥ ಎಂದು ಹೇಳುವುದು ಸರಿಯಲ್ಲ.
ಭಗವದ್ಗೀತೆಯನ್ನೂ ಕುರಾನನ್ನೂ ಬೈಬಲ್ಲನ್ನೂ ಶಾಲೆಗಳಲ್ಲಿ ಖಂಡಿತವಾಗಿಯೂ ಬೋಧಿಸಬಹುದು. ಮಾನವ ಜೀವನಕ್ಕೆ ಬೇಕಾದ ಎಲ್ಲ ಮೌಲ್ಯಗಳೂ ಈ ಗ್ರಂಥಗಳಲ್ಲಿವೆ. ಆದರೆ ಬೋಧಿಸುವಾಗ ಎಚ್ಚರವಹಿಸುವುದು ಅವಶ್ಯ. ಅಲ್ಲಿರುವ ದೇವರ ಸ್ತುತಿ, ಆಚರಣೆಯ ವಿಧಾನ ಪೂಜೆಯ ಪದ್ಧತಿ ಇತ್ಯಾದಿಗಳನ್ನು ಬೋಧಿಸುವ ಅವಶ್ಯಕತೆಯಿಲ್ಲ. ಯಾವುದನ್ನೇ ಬೋಧಿಸುವಾಗಲೂ ಇದು ಉಳಿದೆಲ್ಲವುದಕ್ಕಿಂತ ಶ್ರೇಷ್ಠ ಉಳಿದವೆಲ್ಲ ಕನಿಷ್ಠ ಎಂಬ ಭಾವ ಬರದಂತೆ ನೋಡಿಕೊಳ್ಳುವುದು ಅನಿವಾರ್ಯ. ಜೀಸಸ್ ಈಸ್ ಗ್ರೇಟ್, ಅಲ್ಲಾ ಹೋ ಅಕ್ಬರ್, ಹರಿಯೇ ಸರ್ವೋತ್ತಮ ಮುಂತಾದ ವಾಕ್ಯಗಳೆಲ್ಲ ಅಲ್ಲಿ ಬರದಂತೆ ನೋಡಿಕೊಳ್ಳಬೇಕು. ಧರ್ಮಗ್ರಂಥಗಳಲ್ಲಿರುವ ಮೌಲ್ಯವನ್ನು ಅನೌಪಚಾರಿಕವಾಗಿ ಆ ಧರ್ಮಕ್ಕೆ, ಧರ್ಮಗ್ರಂಥಕ್ಕೆ ಹೆಚ್ಚು ಒತ್ತು ಕೊಡದೆ ಮತಾಂತರ ಮಾಡುವ ಉದ್ದೇಶ ಇಲ್ಲದೆ ಬೋಧಿಸಬೇಕು. ಅಭಿಯಾನಗಳ ಹಿಂದೆ ಮೌಲ್ಯ ಪ್ರತಿಪಾದನೆಯ ಜೊತೆಗೆ ಇರುವ ಆ ಗ್ರಂಥಕ್ಕೆ ಪ್ರಚಾರ ಒದಗಿಸಬೇಕೆಂಬ ಸಣ್ಣ ಉದ್ದೇಶ ಸಮಸ್ಯೆಯನ್ನು ಹುಟ್ಟು ಹಾಕುತ್ತದೆ.
ಭಗವದ್ಗೀತೆ ಅನೇಕ ಮಾರ್ಗಗಳನ್ನು ಒಂದೆಡೆ ತಂದು ಆಯ್ಕೆಯನ್ನು ಸಾಧಕನಿಗೆ ಬಿಡುತ್ತದೆ. ಹಾಗಾಗಿ ಯಾರಾದರೂ ಭಗವದ್ಗೀತೆಯನ್ನು ಅನುಸರಿಸಬಹುದು. ಅದು ’ಹಿಂದುಯಿಸಂ’ನ್ನು ಬೋಧಿಸುವುದಿಲ್ಲ ಎಂಬ ಅಭಿಪ್ರಾಯವನ್ನು ಲೇಖಕರು ವ್ಯಕ್ತಪಡಿಸಿದ್ದಾರೆ. ಆನಂದವನ್ನು ಹೊಂದುವುದೇ ಭಗವದ್ಗೀತೆಯಲ್ಲಿ ಪ್ರತಿಪಾದಿತವಾದ ಮಾರ್ಗಗಳ ಗುರಿಯಾದರೂ ಆನಂದಾನ್ವೇಷಿಗಳಾದ ಕ್ರೈಸ್ತರಾಗಲೀ, ಮುಸ್ಲೀಮರಾಗಲೀ ತಮ್ಮ ಹಾದಿಯನ್ನು ಕಂಡುಕೊಳ್ಳಲು ಭಗವದ್ಗೀತೆಯನ್ನು ಆಶ್ರಯಿಸುವುದಿಲ್ಲ (ಇದಕ್ಕೆ ಅಪವಾದರೂಪವಾಗಿ ಬೆರಣಿಕೆಯಷ್ಟು ಮಂದಿ ಇರಬಹುದು). ಇದಕ್ಕೆ ಕಾರಣ ಅವರಿಗೆ ತಮ್ಮ ಧರ್ಮಗ್ರಂಥಗಳೇ ಮಾರ್ಗದರ್ಶನ ಮಾಡಲು ಸಮರ್ಥವಾಗಿವೆ ಎಂಬ ನಂಬಿಕೆಯಿರುತ್ತದೆ. ಅಷ್ಟೇ ಅಲ್ಲ ಭಗವದ್ಗೀತೆಯ ಹಿನ್ನೆಲೆಯಲ್ಲಿ ಹಿಂದೂಗಳು ಪೂಜಿಸುವ ’ಕೃಷ್ಣ’ ಎಂಬ ದೇವನಿದ್ದಾನೆ. ಅವನು ’ತಾನೇ ಪರಮಾತ್ಮ ಎಲ್ಲ ಧರ್ಮಗಳನ್ನೂ ಪರಿತ್ಯಜಿಸಿ ನನಗೇ ಶರಣು ಬಾ, ನನಗೇ ನಮಸ್ಕಾರ ಮಾಡು, ನಾನು ನಿನ್ನನ್ನು ಉದ್ಧರಿಸುತ್ತೇನೆ.’ ಎಂದೆಲ್ಲ ಸ್ಪಷ್ಟವಾದ ಮಾತುಗಳಲ್ಲಿ ಹೇಳಿದ್ದಾನೆ. ಅಂತಿರುವಾಗ ಬೇರೆ ರಿಲಿಜನ್ನಿನವರಿಗೆ ಇದು ಹಿಂದೂಗಳ ಪವಿತ್ರ ಗ್ರಂಥ, ಅದನ್ನು ಅನುಸರಿಸಿದರೆ ನಮ್ಮ ರಿಲಿಜನ್ನಿಗೆ ದ್ರೋಹ ಬಗೆದಂತಾಗುತ್ತದೆ ಎಂದು ಅನಿಸುವುದು ಸಹಜ ತಾನೆ?
ಒಂದು ಕಹಿಯಾದರೂ ಸತ್ಯವಾದ ವಿಚಾರವನ್ನು ಪ್ರತಿಪಾದಿಸಲೇಬೇಕಾಗಿದೆ. ದೇಶಕ್ಕಾಗಿ ಹೋರಾಡುವುದು, ದೇಶಕ್ಕಾಗಿ ಕೆಲಸಮಾಡುವುದು ಇವುಗಳ ಜೊತೆಗೆ ಈ ದೇಶದಲ್ಲಿ ಅನೇಕ ಶತಮಾನಗಳಿಂದ ನಡೆದುಬಂದ ಸಂಸ್ಕೃತಿ ಸಂಪ್ರದಾಯಗಳನ್ನು ತಿಳಿದುಕೊಳ್ಳುವುದು, ಗೌರವಿಸುವುದು, ಪುರಾತನವಾದ ಗ್ರಂಥಗಳ, ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳುವುದೂ ದೇಶಭಕ್ತಿಯ ಅಂಗ. ರಾಮಾಯಣ ಮಹಾಭಾರತ, ವೇದ ಪುರಾಣಗಳು ಸಂಸ್ಕೃತ ಭಾಷೆ ಇವೆಲ್ಲ ಕೇವಲ ಹಿಂದೂಗಳ ಸ್ವತ್ತಲ್ಲ. ಅದು ಭಾರತೀಯರೆಲ್ಲರ ಆಸ್ತಿ. ಹಿಂದೂಗಳು ಅವುಗಳನ್ನು ಪಠಿಸುತ್ತಿರಬಹುದು ಅಥವಾ ಅವುಗಳನ್ನು ಅನುಸರಿಸುತ್ತಿರಬಹುದು ಹಾಗೆಂದಾಕ್ಷಣ ಭಾರತದಲ್ಲಿ ಹುಟ್ಟಿದ, ತಾನೊಬ್ಬ ಭಾರತೀಯ ಪ್ರಜೆ ಎಂದುಕೊಳ್ಳುತ್ತಿರುವ ಕ್ರೈಸ್ತನಾಗಲೀ, ಮುಸ್ಲೀಮನಾಗಲಿ ಅದನ್ನು ತಾನು ಓದುವ ಗೌರವಿಸುವ ಆವಶ್ಯಕತೆಯಿಲ್ಲ ಎಂದರೆ ಅದು ದೇಶದ್ರೋಹದ ಮಾತೇ ಆದೀತು. ಇನ್ನ್ಯಾವುದೋ ದೇಶದ ಸಂಸ್ಕೃತಿಯನ್ನು, ಮತ್ತ್ಯಾವುದೋ ದೇಶದಲ್ಲಿ ಹುಟ್ಟಿದ ರಿಲಿಜನ್ನನ್ನು ಅನುಸರಿಸಿಸುವುದು ತಪ್ಪಲ್ಲ. ಆದರೆ ಅದು ಅನಿವಾರ್ಯವಲ್ಲ. ಈ ದೇಶದ ಪ್ರಜೆಯಾಗಿ ಈ ದೇಶದ ಸಂಸ್ಕೃತಿಯ ಕನ್ನಡಿಗಳಂತಿರುವ ಗ್ರಂಥಗಳನ್ನೂ ವೈಚಾರಿಕ ಸರಣಿಯನ್ನೂ ಆಚರಿಸದಿದ್ದರೂ ವಿರೋಧಿಸದೆ ಗೌರವಿಸುವುದು ಎಲ್ಲ ರಿಲಿಜನ್ನುಗಳ ಬಂಧುಗಳ ಕರ್ತವ್ಯವೇ ಹೌದು. ಅದಿಲ್ಲದಿದ್ದರೆ ಅದು ಅವರ ಭಾರತೀಯತೆಗೆ ಕುಂದು ತರುವುದು ಕಹಿಯಾದರೂ ಸತ್ಯ.

ಲೇಖಕರು:
ಮಹಾಬಲ ಭಟ್, ಸಂಸ್ಕೃತ ಉಪನ್ಯಾಸಕರು, ಗೋವಾ

Monday, August 15, 2011

ಗಣೇಶ ಚತುರ್ಥಿ ಮತ್ತು ಪರಿಸರ ಪ್ರಜ್ಞೆ

ಮಹಾಬಲ ಭಟ್

ಭಾರತೀಯ ಸಂಸ್ಕೃತಿ ಮತ್ತು ಪ್ರಕೃತಿ ಪರಸ್ಪರ ಬೆಸೆದುಕೊಂಡಿವೆ. ನಮ್ಮ ಜೀವನ ಶೈಲಿ ಪ್ರಕೃತಿಗೆ ಅನುಕೂಲವಾಗಿರಬೇಕೆಂಬುದು ನಮ್ಮ ಪೂರ್ವಜರ ಕಲ್ಪನೆಯಾಗಿತ್ತು. ಅವರ ಜೀವನದ ಪ್ರತಿಯೊಂದು ಹೆಜ್ಜೆಯೂ ಪ್ರಕೃತಿಯ ಆರಾಧನೆಯ ಜೊತೆಗೂಡಿ ಇರುತ್ತಿತ್ತು. ಪ್ರಕೃತಿವಿರುದ್ಧವಾದ ಕೃತಿಯನ್ನೇ ಪಾಪವೆಂದು ಕರೆಯುತ್ತಿದ್ದರು. ಪ್ರಕೃತಿಯ ವಿಕೋಪಗಳಿಗೆ ಹೆದರಿ ಅವನ್ನು ದೇವರೆಂದು ಕರೆದು ಪೂಜಿಸುತ್ತಿದ್ದರು.

ವೈದಿಕ ಕಾಲದ ದೇವತೆಗಳೆಲ್ಲ ಪ್ರಕೃತಿದೇವತೆಗಳು. ಇಂದ್ರ ಮಳೆಯ ದೇವತೆ, ಪರ್ಜನ್ಯ ಮೋಡದ ದೇವತೆ, ವಾಯು ಗಾಳಿಯ ಒಡೆಯ, ಅಗ್ನಿ ಬೆಂಕಿಯ ಅಧಿದೇವತೆ ಹೀಗೆ ಪ್ರಕೃತಿಯ ಒಂದೊಂದು ಶಕ್ತಿಯನ್ನೂ ಒಂದೊಂದು ದೇವತೆಯಂತೆ ಕಂಡು ಸ್ತುತಿಸುವ ಪರಿಪಾಠ ಋಗ್ವೇದ ಕಾಲದಲ್ಲಿಯೇ ಆರಂಭವಾಯಿತು. ಬೆಳಿಗ್ಗೆ ಉಷೆಯ ಸ್ಮರಣೆಯೊಂದಿಗೆ ಆರಂಭವಾಗುತ್ತಿದ್ದ ದಿನಚರಿ ಸೂರ್ಯ, ಚಂದ್ರ, ಗ್ರಹಗಳು ಹೀಗೆ ಎಲ್ಲ ಪ್ರಕೃತಿಶಕ್ತಿಗಳನ್ನು ಆರಾಧಿಸಿ ರಾತ್ರಿಯ ಪೂಜೆಯೊಂದಿಗೆ ಮುಗಿಯುತ್ತಿತ್ತು. ಇದನ್ನೆಲ್ಲ ಕೇವಲ ಹೆದರಿಕೆಯಿಂದ ಮಾಡಿದ್ದಲ್ಲ. ಪ್ರಕೃತಿಯನ್ನು ಪ್ರೀತಿಸುತ್ತಿದ್ದ, ಪ್ರಕೃತಿಯೊಂದಿಗೆ ತಾದಾತ್ಮ್ಯವನ್ನು ಸಾಧಿಸಿದ್ದ ಸುಸಂಸ್ಕೃತ ಸಮಾಜದ ಜೀವನಕ್ರಮ ಇದಾಗಿತ್ತು.

ನಮ್ಮ ಹಬ್ಬಗಳೂ ಅಷ್ಟೇ. ಪ್ರಕೃತಿಯೊಡನೆಯ ನಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತಿದ್ದವು. ಸೂರ್ಯನ ಗತಿ ಬದಲಾದರೆ ಸಂಕ್ರಾಂತಿ ಹಬ್ಬ, ವಸಂತನ ಆಗಮನದಿಂದ ಚಿಗುರೆಲೆಗಳೊಡೆದರೆ ಯುಗಾದಿ ಹಬ್ಬ, ಹಾವನ್ನು ಪೂಜಿಸುವ ನಾಗಪಂಚಮಿ, ಮಣ್ಣಿನ ಆನೆಯ ಮೂರ್ತಿಯನ್ನು ಪೂಜಿಸುವ ಗಣೇಶ ಚತುರ್ಥಿ, ತುಲಸಿಯ ಪೂಜೆಗೆ ತುಲಸಿ ವಿವಾಹ, ಅಭ್ಯಂಗಸ್ನಾನಕ್ಕಾಗಿ ನರಕ ಚತುರ್ದಶಿ, ಗೋವುಗಳನ್ನು ಪೂಜಿಸುವ ಗೋಪೂಜೆ... ಒಂದೇ ಎರಡೇ.. ಯಾವ ಹಬ್ಬದಲ್ಲಿಯೂ ಪ್ರಕೃತಿಯ ಪೂಜೆ ಇಲ್ಲವೆಂದಿಲ್ಲ.

ಗಣೇಶ ಚತುರ್ಥಿ ಹತ್ತಿರ ಬರುತ್ತಿದೆ. ನಾವು ಎಂದಾದರೂ ಯೋಚಿಸಿದ್ದೇವಾ ಗಣೇಶ ಚತುರ್ಥಿಯ ಆಚರಣೆ ಹೇಗೆ ಯಾಕೆ ಎಂದು ?

ಗಣಪತಿ ಪ್ರಥ್ವಿಯ ಸೃಷ್ಟಿಗಿಂತ ಮೊದಲೇ ಇದ್ದ ಪರಬ್ರಹ್ಮತತ್ತ್ವ. ಆನೆಯ ಘೀಳಿಡುವಿಕೆಯಂತಹ ಓಂಕಾರ ನಾದ ಹೊರಹೊಮ್ಮುತ್ತಿರುವುದರಿಂದ ಆ ತತ್ತ್ವಕ್ಕೆ ಆನೆಯ ಮುಖದ ಸಾಕಾರರೂಪವನ್ನು ಕೊಡಲಾಯಿತು. ಉಪನಿಷತ್ತಿನಲ್ಲಿ ಗಣಪತಿಯನ್ನು ತ್ವಂ ಭೂಮಿ: ಆಪೋ ಅನಲೋ ಅನಿಲೋ ನಭ: ಎಂದು ಸ್ತುತಿಸಿದ್ದಾರೆ. ಅಂದರೆ ಈ ಪ್ರಪಂಚಕ್ಕೆ ಆಧಾರಭೂತವಾಗಿರುವ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಗಳೆಂಬ ಪಂಚಭೂತಗಳೇ ನೀನು. ಅಂತಹ ವಿನಾಯಕನ ಪೂಜೆಗೆ ಪಂಚಭೂತ ವಿಶಿಷ್ಟವಾದ ವಸ್ತುಗಳೇ ಇರಬೇಕು. ಈ ಜಗತ್ತಿನ ಪ್ರತಿಯೊಂದು ಜೀವಿಯ ಶರೀರವೂ ಪಂಚಭೂತಗಳಿಂದಲೇ ಆಗಿವೆಯಾದರೂ ದೇಹಕ್ಕೆ ಸಾಕಾರ ರೂಪವನ್ನು ಕೊಡುವುದು ಪೃಥ್ವಿ ಅಂದರೆ ಭೂಮಿತತ್ತ್ವ. ಅದು ಜೀವಿ ಸತ್ತ ಮೇಲೂ ಪಾರ್ಥಿವ ಶರೀರದ ರೂಪದಲ್ಲಿ ಉಳಿದುಕೊಂಡಿರುತ್ತದೆ. ಹೀಗೆ ಎಲ್ಲ ಜೀವಿಗಳ ಶರೀರವೂ ಮಣ್ಣಿನ ಅಂಶದಿಂದಲೇ ಆಗಿರುವುದರಿಂದ ನಾವು ಪುಜಿಸುವ ದೇವರ ಮೂರ್ತಿಯನ್ನೂ ಮಣ್ಣಿನಿಂದಲೇ ಮಾಡುವುದು ಸೂಕ್ತ. ಮಳೆಗಾಲದಲ್ಲಿ ಮಣ್ಣಿನ ಜೊತೆ ನೀರು ಸೇರಿಕೊಂಡು ಮಣ್ಣಿಗೆ ವಿಶೇಷ ಶಕ್ತಿ ಬಂದಿರುತ್ತದೆ. ಮಳೆ ನೀರಿನಲ್ಲಿ ಅಡಕವಾಗಿರುವ ಆಕಾಶ, ಗಾಳಿ ಹಾಗೂ ತೇಜಸ್ಸಿನ ಅಂಶಗಳು ಮಣ್ಣಿನಲ್ಲಿ ಪಂಚಭೂತಗಳ ಸಾನ್ನಿಧ್ಯವನ್ನು ಉಂಟುಮಾಡುತ್ತವೆ. ಇಂತಹ ಮಣ್ಣಿನಿಂದ ಮಾಡಿದ ಮೂರ್ತಿಗೆ ವಿಶೇಷಶಕ್ತಿ ಇರದೇ ಇದ್ದೀತೆ? ಬರಿ ಮಣ್ಣನ್ನು ಪೂಜಿಸಿಯೆಂದರೆ ಯಾರೂ ಪೂಜಿಸುತ್ತಿರಲಿಲ್ಲ. ಹಾಗಾಗಿ ಅದನ್ನು ಮೂರ್ತಿಯ ರೂಪದಲ್ಲಿ ಪೂಜಿಸುವ ಸಂಪ್ರದಾಯವನ್ನು ಆರಂಭಿಸಲಾಯಿತು.

ಗಣಪತಿಗೆ ನಾವು ಅರ್ಪಿಸುವುದೇನು? ಗರಿಕೆಯ ಹುಲ್ಲು. ಮಳೆಗಾಲದಲ್ಲಿ ಸೊಂಪಾಗಿ ಬೆಳೆಯುವ ಈ ಹುಲ್ಲು ಔಷಧಿ ಸಸ್ಯವೂ ಹೌದು. ಗೋವಾದಲ್ಲಿ ಮಾಠೊಳ್ಳಿ ಎಂದು ಕರೆಯಲ್ಪಡುವ ಫಲಾವಳಿಯನ್ನು ನಾವು ಗಣಪತಿಯ ಮಂಟಪದಲ್ಲಿ ಕಟ್ಟುತ್ತೇವೆ. ಅಲ್ಲಿ ನಾವು ಕಟ್ಟುವುದು ಎಲ್ಲ ನಿಸರ್ಗದಿಂದ ಆಯ್ದ ವಸ್ತುಗಳೇ. ಈ ಕಾಲದಲ್ಲಿ ಸಿಗುವ ಎಲ್ಲ ಹಣ್ಣು,ಹಂಪಲ, ತರಕಾರಿ, ಬೆಳೆಗಳನ್ನು ಈ ಮಂಟಪದಲ್ಲಿ ಕಟ್ಟುತ್ತೇವೆ. ವಾತಾವರಣವನ್ನು ಶುದ್ಧಗೊಳಿಸುವ ತಳಿರಿನ ತೋರಣ ಕಟ್ಟುತ್ತೇವೆ. ಒಟ್ಟಿನಲ್ಲಿ ಸಂಪೂರ್ಣ ನಿಸರ್ಗವನ್ನೇ ಗಣಪತಿಯ ಸುತ್ತಲೂ ನಿರ್ಮಿಸುತ್ತೇವೆ.

ಗಣೇಶ ಚತುರ್ಥಿಯ ಆಚರಣೆಯನ್ನು ನಾವು ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ಮಾಡುತ್ತಿದ್ದೇವೆ. ಆದರೆ ಆಚರಿಸುವ ವಿಧಾನ ಮಾತ್ರ ಸಂಪೂರ್ಣ ಬದಲಾಗಿದೆ. ತಳಿರು ತೋರಣದ ಜಾಗದಲ್ಲಿ ಪ್ಲಾಸ್ಟಿಕ್ ತೋರಣಗಳು ಬಂದಿವೆ (ಅವು ಒಂದೇ ವರ್ಷಕ್ಕೆ ಹಾಳಾಗುವುದಿಲ್ಲವಲ್ಲ, ಮುಂದಿನವರ್ಷವೂ ಉಪಯೋಗಕ್ಕೆ ಬರುತ್ತವೆ!). ಹಣ್ಣು ತರಕಾರಿಗಳನ್ನೆಲ್ಲ ತರುವ ಕಷ್ಟ ಯಾರಿಗೆ ಬೇಕು ಹೇಳಿ? ಪ್ಲಾಸ್ಟಿಕ್‌ನಲ್ಲಿ ಏನು ಬೇಕಾದರೂ ಸಿಗುತ್ತದೆ ಈಗ. ಸುಂದರವಾಗಿಯೂ ಕಾಣಿಸುತ್ತದೆ, ಬೆಲೆಯೂ ಕಡಿಮೆ. ಥರ್ಮೋಕಾಲನಿಂದ ಸುಂದರವಾದ ಮಂಟಪವನ್ನು ನಿರ್ಮಿಸಬಹುದು, ಝಗಮಗಿಸುವ ವಿದ್ಯುತ್ ದೀಪಗಳನ್ನು ಹಾಕಿದರೆ ಆಹಾ! ಆ ವೈಭವವನ್ನು ವರ್ಣಿಸಲಾಗದು(?!)

ಇಂತಹ ಕೃತ್ರಿಮತೆಯ ಮಧ್ಯೆ ಕುಳಿತುಕೊಳ್ಳುವ ಗಣಪತಿಯಾದರೂ ಶುದ್ಧನೆ? ಈಗ ಮೊದಲಿನಂತೆ ಮಣ್ಣಿನಿಂದ ಗಣಪತಿಯನ್ನು ತಯಾರಿಸುವ ಕುಶಲ ಕರ್ಮಿಗಳಿಲ್ಲ. ಒಂದೇ ಅಚ್ಚಿನಿಂದ ತಯಾರಿಸಿದ ಸಾವಿರಾರು ಮೂರ್ತಿಗಳು ಮಾರುಕಟ್ಟೆಯಲ್ಲಿ ಸುಲಭ ಬೆಲೆಯಲ್ಲಿ ಲಭ್ಯ. ಅವೆಲ್ಲ ಪ್ಲಾಸ್ಟರ್ ಒಫ್ ಪ್ಯಾರಿಸ್ ಎಂಬ ಮಣ್ಣಿನ ವೈರಿಯಿಂದ ತಯಾರಿಸಿದ್ದು. ಮಣ್ಣಿನ ಗಣಪತಿಯನ್ನು ತಯಾರಿಸುತ್ತಿದ್ದಾಗ ಅದಕ್ಕಾಗಿ ಬೇಕಾಗಿದ್ದ ಬಣ್ಣವನ್ನೂ ಮಣ್ಣಿನಿಂದಲೋ ಇಲ್ಲ ಸಸ್ಯಗಳಿಂದಲೋ ತಯಾರಿಸುತ್ತಿದ್ದರು. ಈಗ ಬಳುಸುವ ರಾಸಾಯನಿಕವರ್ಣಗಳು ನೀರಿನಲ್ಲಿ ಕರಗುವುದಿಲ್ಲ, ಮಣ್ಣಿನಲ್ಲಿ ಒಂದಾಗುವುದಿಲ್ಲ. ಅದೆಲ್ಲ ನಮಗೇಕೆ? ನಾವು ಗಣಪತಿ ಪೂಜೆಯ ಸಂಪ್ರದಾಯವನ್ನು ಮುಂದುವರಿಸುತ್ತಿದ್ದೇವೋ ಇಲ್ಲವೋ? ದೊಡ್ಡ ಹೊಟ್ಟೆಯ ಗಣಪನಿಗೆ ವಿವಿಧ ಭಕ್ಷ್ಯಗಳನ್ನು ಅರ್ಪಿಸುತ್ತೇವೋ ಇಲ್ಲವೋ?! ಪುಣ್ಯಕ್ಕೆ ನೈವೇದ್ಯಕ್ಕೆ ಪ್ಲಾಸ್ಟಿಕ್ ಹಣ್ಣುಗಳನ್ನೂ ಲಡ್ಡುಗಳನ್ನೂ ತರುತ್ತಿಲ್ಲ; ಯಾಕೆಂದರೆ ಅವನ್ನು ನಾವು ಪ್ರಸಾದ ಎಂದು ಮುಕ್ಕಲು ಬರುವುದಿಲ್ಲವಲ್ಲ! ಆದರೆ ಬೇಕರಿ ಸಾಮಾನುಗಳು ಈಗಾಗಲೇ ಪುಜಾಗೃಹವನ್ನೂ ಅಡುಗೆ ಮನೆಯನ್ನೂ ಸೇರುತ್ತಿವೆ!

ಹೀಗೆ ಸಂಪೂರ್ಣ ನೈಸರ್ಗಿಕವಾಗಿದ್ದ ಪೂಜೆಯನ್ನು ಪ್ರಕೃತಿವಿರುದ್ಧವಾಗಿಯೇ ಮಾಡಿದರೆ ಏನು ಪ್ರಯೋಜನ? ರಾಸಾಯನಿಕಯುಕ್ತ ಗಣಪತಿ ಮೂರ್ತಿಗಳು ಭೂಮಿ-ನೀರುಗಳನ್ನು ಕೆಡಿಸುತ್ತಿದ್ದರೆ ವಿದ್ಯುತ್ ದೀಪಗಳು ಅಗ್ನಿತತ್ತ್ವವನ್ನು ಕೆಡಿಸುತ್ತಿವೆ. ಪಟಾಕಿಗಳು ಗಾಳಿಯನ್ನೂ ಧ್ವನಿವರ್ಧಕಗಳಿಂದಾಗುತ್ತಿರುವ ಶಬ್ದಮಾಲಿನ್ಯ ಆಕಾಶತತ್ತ್ವವನ್ನೂ ಕೆಡಿಸುತ್ತಿವೆ. ಪಂಚಭೂತಾತ್ಮಕವಾದ ಗಣಪತಿಯ ಪೂಜೆಯನ್ನು ಪಂಚಭೂತಗಳನ್ನು ಕೆಡಿಸುವ ಮೂಲಕ ಮಾಡುತ್ತಿದ್ದೇವೆ. ಇದು ಯಾವ ಪುರುಷಾರ್ಥಕ್ಕೆ?

ಇಂದು ಸಾರ್ವಜನಿಕ ಗಣೇಶೋತ್ಸವ ತುಂಬಾ ಜನಪ್ರಿಯವಾಗುತ್ತಿದೆ. ಅಲ್ಲಿಯೂ ಶೋಕಿಗೇ ಹೆಚ್ಚು ಪ್ರಾಧಾನ್ಯತೆ. ಸ್ವಾತಂತ್ರ್ಯಾಂದೋಲನಕಾಲದಲ್ಲಿ ಜನರ ಸಂಘಟನೆಗಾಗಿ ಲೋಕಮಾನ್ಯ ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವ ತನ್ನತನವನ್ನು ಕಳೆದುಕೊಳ್ಳುತ್ತಿದೆ ಎಂದೆನಿಸುತ್ತದೆ. ಆದರೂ ಕೆಲವೆಡೆ ಈ ಉತ್ಸವ ಸಾಂಸ್ಕೃತಿಕ ವೈಭವವನ್ನು ಮೆರೆಯುವ ಕಾರ್ಯಕ್ರಮವಾಗಿ ಹೊರಹೊಮ್ಮುತ್ತಿರುವುದು ಸಮಾಧಾನದ ಸಂಗತಿ. ಗೋವಾದಲ್ಲಿಯೂ ಗಣೇಶೋತ್ಸವ ಸಮಿತಿಗಳು ಭಜನಾ ಸ್ಪರ್ಧೆ, ನಾಟಕ ಸ್ಪರ್ಧೆ ಮುಂತಾದ ಸಂಸ್ಕೃತಿಯುಕ್ತ ಕಾರ್ಯಕ್ರಮಗಳನ್ನು ನಡೆಸುತ್ತವೆ. ಇದು ಸ್ತುತ್ಯರ್ಹ.

ನಾವು ಯಾವುದೇ ಹಬ್ಬ ಹರಿದಿನಗಳನ್ನು ಅವುಗಳ ಅರ್ಥವನ್ನು ತಿಳಿದು ಮಾಡೋಣ. ನಮ್ಮ ಮೋಜಿಗಾಗಿ ಪ್ರಕೃತಿವಿರುದ್ಧವಾದ ಉತ್ಸವಗಳನ್ನು ಆಚರಿಸದಿರೋಣ. ಇದರಿಂದ ದೇವರೂ ಸಂಪ್ರೀತನಾಗುತ್ತಾನೆ, ಪ್ರಕೃತಿದೇವಿಯೂ ಮುನಿಸಿಕೊಳ್ಳುವುದಿಲ್ಲ. ಶ್ರೀ ಗಣೇಶನು ಸರ್ವರಿಗೂ ಸನ್ಮಂಗಳವನ್ನುಂಟುಮಾಡಲಿ.

ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡದ ಕಹಳೆ

ವಿಘ್ನೇಶ್ವರ, ಶಿವಮೊಗ್ಗ

ಸ್ವಾತಂತ್ರ್ಯ ಹೋರಾಟದಲ್ಲಿ ಇತರ ಎಲ್ಲಾ ಭಾಷೆಗಳಂತೆ ಕನ್ನಡದ ಪಾತ್ರವೂ ಅತ್ಯಂತ ಗಣನೀಯವಾದುದು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಇಲ್ಲವೇ ದೇಶಭಕ್ತಿಪರ ಸಾಹಿತ್ಯ ರಚಿಸಿದ ಅನೇಕರು ಮುಂದೆ ಗಣ್ಯ ಸಾಹಿತಿಗಳೆನಿಕೊಂಡರು. ಆಲೂರು ವೆಂಕಟರಾಯರು, ದರಾ.ಬೇಂದ್ರೆ, ಎಸ್.ಕೆ.ಕರೀಂ ಖಾನ್, ಮುದವೀಡು ಕೃಷ್ಣರಾವ್, ಬಸವರಾಜ್ ಕಟ್ಟಿಮನಿ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಭಾರತೀಸುತ, ತರಾಸು, ಸಿದ್ಧವನಹಳ್ಳಿ ಕೃಷ್ಣಶರ್ಮ, ರಂಗನಾಥ ದಿವಾಕರ, ಜಯತೀರ್ಥ ರಾಜಪುರೋಹಿತ ಮುಂತಾದ ಕನ್ನಡದ ಮೇರು ಸಾಹಿತಿಗಲು ತಮ್ಮ ಸಾಹಿತ್ಯದ ಮೂಲಕ ಜನರಿಗೆ ಪ್ರೇರಣೆ ನೀಡಿದ್ದಲ್ಲದೆ, ಸ್ವತ: ಚಳುವಳಿಯಲ್ಲಿ ಭಾಗವಹಿಸಿ ಜೈಲು ಕಂಡರು. ಆಗ ಸರಕಾರಿ ಹುದ್ದೆಯಲ್ಲಿದ್ದ ಕನ್ನಡದ ವರಕವಿ ಬೇಂದ್ರೆಯವರು ತಮ್ಮ ನರಬಲಿ ಎಂಬ ರಾಷ್ಟ್ರ ಜಾಗೃತಿಯ ಕವನಕ್ಕಾಗಿ ಕೆಲಸ ಕಳೆದುಕೊಂಡಿದ್ದೇ ಅಲ್ಲದೆ ಜೈಲುವಾಸವನ್ನೂ ಅನುಭವಿಸಿದ್ದರು. ಮತ್ತೊಬ್ಬ ಮೇರುಕವಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಶಿವರಾಮ ಕಾರಂತರು ಗಾಂಧೀಜಿಯವರ ಅಸಹಕಾರ ಕರೆಯಂತೆ ಕಾಲೇಜು ತ್ಯಜಿಸಿ ಸೇವಾದಳದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಚಳುವಳಿಯ ಪ್ರಭಾವ ಕಾರಮ್ತರ ಮುಂದಿನ ಸಾಹಿತ್ಯ ಕೃತಿಗಳಲ್ಲಿ ದಟ್ಟವಾಗಿ ವ್ಯಾಪಿಸಿರುವುದನ್ನು ಕಾಣಬಹುದು. ಕಾರಂತರ ಔದಾರ್ಯದ ಉರುಳಲ್ಲಿ ಕಾದಂಬರಿಯು ದಕ್ಷಿಣ ಕನ್ನಡದ ಸ್ವಾತಂತ್ರ್ಯ ಯೋಧರೊಬ್ಬರ ಜೀವನದ ಛಾಯೆಯನ್ನು ಒಳಗೊಂಡಿದ್ದರೆ, ಅವರ ಚೋಮನ ದುಡಿ ಯ ಸೃಷ್ಟಿಯಲ್ಲೂ ಚಳುವಳಿಯ ಪ್ರಭಾವವಿದೆ. ಕುವೆಂಪು, ವಿ.ಕೃ.ಗೋಕಾಕ, ಜಿ.ಪಿ. ರಾಜರತ್ನಂ, ವಿ.ಸೀತಾರಮಯ್ಯ ಮುಂತಾದ ಹಿರಿಯರ ಬರಹಗಳು ಸ್ವಾತಂತ್ರ್ಯ ಯೋಧರಿಗೆ ನೀಡಿದ ಸ್ಫೂರ್ತಿ-ಪ್ರೇರಣೆ ಅನಿರ್ವಚನೀಯ. ಜಿ.ಪಿ. ರಾಜರತ್ನಂ ಅವರ ಗಂಡುಕೊಡಲಿ ನಾಟಕ, ತಿರುಮಲೆ ರಾಜಮ್ಮನವರ ಜೈ ಭಾರತಭುವಿಗೆ, ಮಾತೆಗೆ ಜೈ, ಸನ್ಮಂಗಳವಾಗಲಿ ಸತತಮ್ ಗೀತೆ, ಬಿ.ವೆಂಕಟಾಚಾರ್ಯರು ಬಂಗಾಳಿಯಿಂದ ಕನ್ನಡಕ್ಕೆ ಅನುವಾದ ಮಾಡಿದ ಬಂಕಿಮಚಂದ್ರರ ಆನಂದಮಠ ದೇವಿ ಚೌಧುರಾಣಿ ಕೃತಿಗಳು, ಶ್ರೀ ಗಳಗನಾಥರ ಕಾದಂಬರಿಗಳು ಜನಸಾಮಾನ್ಯರಲ್ಲಿ ಸ್ವಾತಂತ್ರ್ಯದ ಬಯಕೆಯನ್ನು ಬಡಿದೆಬ್ಬಿಸಿ ಹೋರಾಟಕ್ಕೆ ಎಳೆತಂದವು.
ಸ್ವಾತಂತ್ರ್ಯಾಂದೋಲನ ಕಾಲದಲ್ಲಿ ರಚಿತವಾದ ರಾಷ್ಟ್ರೀಯ ಸಾಹಿತ್ಯವನ್ನು ಅದರಲ್ಲೂ ವಿಶೇಷವಾಗಿ ಕಾವ್ಯವನ್ನು ನಾವು ಆರಾಧನಾ ಪ್ರಧಾನ ಮತ್ತು ಬೋಧನಾಪ್ರಧಾನವೆಂದು ವಿಂಗಡಿಸಬಹುದು. ಒಂದುಕಡೆ ದೇಶವನ್ನೇ ತಾಯಿಯೆಂದು, ದೇವರೆಂದು ಆರಾಧಿಸುವ ಸಾಹಿತ್ಯಗಳು ರಚನೆಯಾದರೆ, ಇನ್ನೊಂದೆಡೆ ಜನರಲ್ಲಿ ಬ್ರಿಟೀಷರ ವಿರುದ್ಧ ಆಕ್ರೋಶವನ್ನು ನಿರ್ಮಾಣ ಮಾಡುವ, ಜನರನ್ನು ದೀರ್ಘಕಾಲೀನ ನಿದ್ದೆಯಿಂದ ಬಡಿದೆಬ್ಬಿಸುವ ಸಾಹಿತ್ಯಗಳು ರಚನೆಗೊಂಡವು. ವಿಶೇಷವೆಂದರೆ ಈ ಎರಡೂ ಪ್ರಕಾರಗಳನ್ನು ಒಳಗೊಂಡ ಆನಂದಮಠ ದಂತಹ ಕಾದಂಬರಿಯೂ ಈ ಕಾಲದಲ್ಲಿ ರಚಿತವಾಯಿತು.
ಒಂದು ವಿಶಾಲ ಜನಸಮುದಾಯದ ಮಧ್ಯೆ ಕ್ರಾಂತಿಯ ಹೋರಾಟದ ಭೂಮಿಕೆಯನ್ನು ಸಿದ್ಧಪಡಿಸಬೇಕಾದರೆ ಈ ಎರಡೂ ಪ್ರಕಾರಗಳು ಅತ್ಯಂತ ಮಹತ್ತ್ವದ ಪಾತ್ರವನ್ನು ವಹಿಸುತ್ತವೆ. ಯಾವುದೇ ದೇಶದ ಜನ ಆ ದೇಶವನ್ನು ರಕ್ಷಿಸಿಕೊಳ್ಳಬೇಕು ಎಂತಾದರೆ ಆ ಜನರಿಗೆ ದೇಶದ ಕುರಿತಾಗಿ ಭಾವನಾತ್ಮಕ ಸಂಬಂಧ ಇರಬೇಕು. ಆ ಸಂಬಂಧ ಬರುವುದು ಭಕ್ತಿಯಿಂದ ಇಲ್ಲವೇ ಪ್ರೀತಿಯಿಂದ. ಸಾವಿರಾರು ವರ್ಷಗಳ ಪರಕೀಯರ ಆಕ್ರಮಣ-ಆಡಳಿತದಿಂದಾಗಿ ಭಾರತೀಯರಲ್ಲಿ ಮಸುಕಾಗಿ ಹೋಗಿದ್ದ ದೇಶದ ಕುರಿತಾದ ಭಕ್ತಿ ಪ್ರೀತಿಗಳು ಮತ್ತೆ ಪ್ರಜ್ವಲಿಸುವಂತೆ ಮಾಡಿದ್ದು ಸಾಹಿತ್ಯಗಳೇ. ಬಂಕಿಮರ ವಂದೇ ಮಾತರಮ್ ಅಂತೂ ದೇಶವಾಸಿಗಳಿಗೆ ದಿವ್ಯಮಂತ್ರವೆನಿಸಿತು. ತಾಯಿ ಭಾರತಿಯಲ್ಲಿ ದುರ್ಗೆಯ ದರ್ಶನ ಮಾಡಿಸಿತು. ಭಾವನಾತ್ಮಕವಾಗಿ ಜನರನ್ನು ಮೇಲಕ್ಕೆತ್ತಿದರಷ್ಟೆ ಸಾಲದು ಅವರ ಭಾವನೆಗಳು ಕ್ರಿಯಾತ್ಮಕವಾಗಿ ಹರಿಯಬೇಕು.ಹಾಗಾಗಬೇಕಾದರೆ ಜನರಿಗೆ ಒಂದು ಸ್ಪಷ್ಟ ದೃಷ್ಟಿಕೋನ-ದಿಕ್ಕು ಬೇಕು. ಬೋಧನಾಪ್ರಧಾನ ಸಾಹಿತ್ಯ ಈ ಕೊರತೆಯನ್ನು ನೀಗಿಸಿತು. ತಿಲಕ, ಅರವಿಂದ, ರವೀಂದ್ರ, ಸಾವರ್ಕರರ ಬರಹಗಳು ಜನರನ್ನು ಹೋರಾಟದ ಹಾದಿಗೆ ಎಳೆದು ತಂದವು.
ಸ್ವಾತಂತ್ರ್ಯ ಹೋರಾಟವನ್ನು ವ್ಯಾಪಕಗೊಳಿಸುವ, ಜನರನ್ನು ಹೋರಾಟಕ್ಕೆ ಅಣಿಗೊಳಿಸುವ ಕಾರ್ಯದಲ್ಲಿ ಕನ್ನಡ ಸಾಹಿತಿಗಳೇನೂ ಹಿಂದೆ ಬಿದ್ದಿಲ್ಲ. ಕನ್ನಡದಲ್ಲಿಯೂ ಕೂಡ ಎರಡೂ ರೀತಿಯ ಸಾಹಿತ್ಯ ರಚನೆಯಾಯಿತು.
ಆವಿನದ ನೊರೆಹಾಲನೊಲ್ಲೆನು, ದೇವಲೋಕದ ಸುಧೆಯನೊಲ್ಲೆನು
ಪಾವನಳೆ ನಿನ್ನಂಘ್ರಿಕಮಲದ ಸೇವೆಯದು ದೊರೆತಿಹುದು ತಾಯೆ |
ಶ್ರೀವರನ ಕೃಪೆಯಿಂದ ಬೇರಿನ್ನೇನು ಬೇಡೆನಗೆ ||
ಎಂದು ಹಾಡಿದ ಸಾಲಿ ರಾಮಚಂದ್ರರಾಯರು ತಾಯಿ ಭಾರತಿಯ ಸೇವೆಯ ಅವಕಾಶ ದೊರೆಯುವುದಕ್ಕಿಂತ ಹೆಚ್ಚಿನ ಭಾಗ್ಯ ಬೇರೆ ಇಲ್ಲ ಎಂದರು. ಶಾಲಾ ಶಿಕ್ಷಕರಾಗಿದ್ದ ಅವರು ನೇರವಾಗಿ ಹೋರಾಟದ ಮಾತುಗಳನ್ನಾಡುವಂತಿರಲಿಲ್ಲ. ಅಂದಿನ ಸಮಯದಲ್ಲಿ ದೇಶಸೇವೆಯೆಂದರೆ ತಾಯಿಯ ದಾಸ್ಯಮುಕ್ತಿಗಾಗಿ ಪ್ರಯತ್ನ. ರಾಮಚಂದ್ರರಾಯರೂ ಪರೋಕ್ಷವಾಗಿ ದಾಸ್ಯರಕ್ಕಸನ ವಿರುದ್ಧದ ಹೋರಾಟವೇ ಭಾಗ್ಯವೆಂದರು. ಅದಕ್ಕಾಗಿ ಜನರನ್ನು ಹುರಿದುಂಬಿಸಿದರು.
ಕನ್ನಡದ ಭಗವದ್ಗೀತೆ ಮಂಕುತಿಮ್ಮನ ಕಗ್ಗವನ್ನು ಬರೆದ ಡಿ.ವಿ.ಜಿ. ವಂದೇ ಮಾತರಂ ಅನ್ನು ಅನುಸರಿಸಿ ದೇಶವನ್ನು ವರ್ಣಿಸಿ ಕವನ ಬರೆದರು. ದೇಶಭಕ್ತಪ್ರತಿಜ್ಞೆ ಎಂಬ ಕವನದಲ್ಲಂತೂ
ಎನ್ನಯ ಮಾನಸಭವನದೊಳುನ್ನತ ವೇದಿಯಲಿ
ದೇಶಮಾತೆಯನಿರಿಸುತ್ತೆನ್ನಯ ಸರ್ವಸ್ತಮನಾ |
ಪುಣ್ಯೋರ್ವಿಯಂಘ್ರಿಗರ್ಪಿಸಿ ಮಣಿವೆಂ ||
ಎಂದು ತಾಯಿ ಭಾರತಿಗೆ ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಂಡರು. ದೇಶವೇ ತಾಯಿ, ತಾಯಿಗಾಗಿ ಎಲ್ಲವೂ ಎಂಬ ಮಾನಸಿಕತೆಯನ್ನು ತುಂಬಲು ಯತ್ನಿಸಿದರು.
ಸಾಲಿ ರಾಮಚಂದ್ರರಾಯರು ಮತ್ತು ಡಿ.ವಿ.ಜಿ.ಯವರದು ಆರಾಧನಾ ಮಾರ್ಗವಾದರೆ, ಕುವೆಂಪು ಅವರು ಆರಾಧನಾ ಮಾರ್ಗದ ಜೊತೆಗೆ ಬೋಧನಾ ಮಾರ್ಗದಲ್ಲೂ ನಡೆದರು. ಒಂದು ಕಡೆ ದೇಶದ ಬಗ್ಗೆ, ತಾಯಿ ಭಾರತಿಯ ಬಗ್ಗೆ ಭಕ್ತಿ, ಪ್ರೀತಿ, ಅಭಿಮಾನವನ್ನು ಮೂಡಿಸಿದುದರ ಜೊತೆ ಜೊತೆಯಲ್ಲೇ ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂದು ಬೆನ್ನು ತಟ್ಟಿದರು. ಸ್ವಾತಂತ್ರ್ಯ ಹೋರಾಟದ ರಣಾಂಗಣಕ್ಕೆ ಕಳಿಸಿದರು.
ಭರತಭೂಮಿ ನನ್ನ ತಾಯಿ
ನನ್ನ ಪೊರೆವ ತೊಟ್ಟಿಲು
ಜೀವನವನೆ ದೇವಿಗೆರೆವೆ
ಬಿಡುತೆ ಗುಡಿಯ ಕಟ್ಟಲು
ಎಂದು ಹಾಡಿದ ಕುವೆಂಪು ದೇಶದ ನದಿ ಕಡಲುಗಳನ್ನು ತೀರ್ಥವೆಂದು ಕೊಂಡಾಡಿದರು.
ಸಾತಂತ್ರ್ಯದ ಸ್ವರ್ಗಕೇರೆ
ಪುಣ್ಯದೇಣಿ ಮೆಟ್ಟಿಲು
ಎಂದು ಹೇಳುತ್ತಾ ಸ್ವಾತಂತ್ರ್ಯವೆ ಸ್ವರ್ಗ ಎಂಬ ಕನಸನ್ನು ಮತ್ತು ಅದನ್ನು ನನಸಾಗಿಸುವ ಹಂಬಲವನ್ನು ವ್ಯಕ್ತಪಡಿಸಿದರು. ಇನ್ನೊಂದೆಡೆ
ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ ಎಂದು ಹೇಳುತ್ತಾ ಕುಂದುಕೊರತೆಗಳಿವೆಯೆಂಬ ಅಳಲನ್ನು ಪ್ರಗತಿಯ ಪಥದಲ್ಲಿ ಹಿಂದುಳಿದವಳೆಂಬ ನೋವನ್ನು ನಾ ಬಲ್ಲೆ ಆದರೂ
ಆದರೊಲಿಯೆನು ಅನ್ಯರ, ಚಿನ್ನ ಒಲಿದಿಹ ಧನ್ಯರ
ಕುಂದು ಕೊರತೆಗಳಿರಲಿ ಮಹಿಮಳು ನೀನೆ, ಅನ್ಯರನೊಲ್ಲೆನು.
ಎಂದು ತಾಯಿಯೆಡೆಗಿನ ಅನನ್ಯ ಭಕ್ತಿ, ಪ್ರೀತಿಯನ್ನು ಅಭಿವ್ಯಕ್ತಗೊಳಿಸಿದರು. ಅಂತಿಮವಾಗಿ, ನಿನ್ನ ಸೇವೆಯೊಳಳಿವ ಭಾಗ್ಯಕೆ ಸಕಲ ಭಾಗ್ಯವ ತೊರೆವೆನು ಎಂದು ತಾಯಿಗಾಗಿ, ತಾಯಿಯ ಸೇವೆ ಮಾಡುತ್ತಲೇ ಅಳಿಯುವುದಕ್ಕಿಂತ ಬೇರೆ ಭಾಗ್ಯವಿಲ್ಲವೆಂದು ಹಾಡಿದರು ಕುವೆಂಪು. ಭಾವನಾತ್ಮಕವಾಗಿ ಒಂದೆಡೆ ದೇಶಭಕ್ತಿಯನ್ನು ಜಾಗೃತಗೊಳಿಸಿದ ಕುವೆಂಪು ಅದೇ ಸಮಯದಲ್ಲೇ ಕೆಲ ಬೋಧಪ್ರದ ಕವನಗಳ ಮೂಲಕ ಹೋರಾಟದ ಕಿಚ್ಚು ಹಚ್ಚಿದರು. ರಕ್ತತರ್ಪಣ ಕವನದ ಮೂಲಕ,
ಏಳಿರೈ ಸೋದರರಿರಾ, ನಿಮಗಾಗಿ ಮಡಿದೆಮ್ಮ
ಮರೆಯದಿರಿ ನಿಮ್ಮಣ್ಣ ತಮ್ಮಂದಿರನು
----------------------
ಸ್ವಾತಂತ್ರ್ಯ ಸಾಧನೆಗೆ ಸಂಗ್ರಾಮದೇವತೆಗೆ
ರಕ್ತ ತರ್ಪಣವಿತ್ತು ಎದೆಯ ಹರಿದು
ಹೊರಳಿದೆವು ನೆಲಕೆ, ಓ ಉರುಳಿ ಬಿದ್ದೆವು ನೆಲಕೆ
ಕೈಯ ಕತ್ತಿಯನೆಸೆದು ನಿಮ್ಮ ಕೈಗೆ
ಮತ್ತೆ ಬಾವುಟವೆಸೆದು ನಿಮ್ಮ ರಕ್ಷೆಯ ವಶಕೆ
ಹಿಡಿದೆತ್ತಿ ಮುಂಬರುವಿರೆಂದು ನಂಬಿ!
ಎಂದು ಹೇಳುತ್ತಾ,
ಸತ್ತವರ ಆ ನಂಬುಗೆಗೆ ಎರಡನೆಣಿಸದಿರಿ
ಹಂದೆಯಾಗದೆ ಮುಂದೆ ನುಗ್ಗಿ ಹೋಗಿ
ಎಂದು ಪ್ರಚೋದಿಸಿದರು.
ಹಿಂದಿನವರು ಸತ್ತಿದ್ದು ನಮಗಾಗಿ. ಅವರು ಯಾವ ಗುರಿಯ ಸಾಧನೆಗಾಗಿ ಸತ್ತರೋ ಆಗುರಿ ನಮ್ಮದು. ನಾವದನ್ನು ಮುಟ್ಟಬೇಕು, ಆಗಲೇ ಸತ್ತವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಇಲ್ಲದಿದ್ದರೆ
ನಿಮಗಾಗಿ ಸತ್ತೆಮಗೆ ಸೊಗವಿಲ್ಲ
ಬದುಕಿರುವ ನಿಮಗುಮಾ ಬದುಕೆ ಮಿತ್ತು
ಎಂದು ಹೇಳಿದ ಕವಿ,
ಇಂತು ಸತ್ತವರ ಕರೆ ಓ ಕೂಗುತಿದೆ ಕೇಳು
ಭೂತಕಾಲದ ಗರ್ಭಗೋರಿಯಿಂದ
ಆಲಿಸಿಯೂ ಅದನು ನೀ ಸುಮ್ಮನಿರುವೆಯ ಹೇಳು
ದೇಶಮಾತೆಯು ಹಡೆದ ವೀರಕಂದಾ ?
ಎಂದು ದೇಶವಾಸಿಗಳನ್ನು ಚುಚ್ಚಿದರು.
ಬೀಳಲಿ ಮೈ ನೆತ್ತರು ಕಾರಿ
ಹೋದರೆ ಹೋಗಲಿ ತಲೆಹಾರಿ
ತಾಯ್ನಾಡಿನ ಮೇಲ್ಮೈಗೆ ಹೋರಿ
ಸ್ವಾತಂತ್ರ್ಯದ ಸ್ವರ್ಗಕೆ ಏರಿ!
ಸೋದರ-ಸೋದರಿಯರೆ, ಮೇಲೇಳಿ
ಕರೆಯುತ್ತಿಹಳದೋ ರಣಕಾಳಿ
ದೇಶಪ್ರೇಮಾವೇಶವ ತಾಳಿ
ಖಳವೈರಿಯ ಸೀಳಿ!
ಎಂದು ಯುದ್ಧೋತ್ಸಾಹಿಯಾದ ಕುವೆಂಪು ಕೊನೆಗೆ,
ತ್ಯಾಗದ ಯಾನಕೆ ನುಗ್ಗಿರಿ ಮುಂದೆ
ಭೋಗದ ರೋಗವ ಬಿಡಿ ಹಿಂದೆ
ತಡಮಾಡಿದರಮ್ಮನ ನೀಂ ಕೊಂದೆ!
ಸುಮುಹೂರ್ತವೋ ಇಂದೆ!
ಎಂದು ದೇಶಮುಕ್ತಿಗಾಗಿ ಆತುರಗೊಂಡರು, ದೇಶವಾಸಿಗಳಲ್ಲೂ ಸ್ವಾತಂತ್ರ್ಯಕಾಗಿ ಕಾತರತೆಯನ್ನುಂಟುಮಾಡಿದರು.
ವರಕವಿ ಬೇಂದ್ರೆಯವರು ಕೂಡಾ ತಮ್ಮ ಮಕ್ಕಳಿವರೇನಮ್ಮ ೩೩ ಕೋಟಿ ಕವನದ ಮೂಲಕ ದೇಶಾವಾಸಿಗಳನ್ನು ಹಂಗಿಸಿದರು, ಇಂಥವರನ್ನು ತಾಯಿ ಮಕ್ಕಳನ್ನಾಗಿ ಪಡೆದುದಕ್ಕೆ ವಿಷಾದಿಸಿದರು, ಎಚ್ಚರಿಸಿದರು. ಕೊನೆಗೆ ತಾಯಿಯ ಕರೆಗೆ ಓಗೊಟ್ಟು ಬನ್ನಿ ಎಂದು ಕರೆದರು.
ಇವರೇ ಏನು ೩೩ ಕೋಟಿ ಮಕ್ಕಳು ಎಂದು ತಾಯಿಯಿಂದಲೇ ಕೇಳಿಸಿದ ಬೇಂದ್ರೆ,
ಹಲಕೆಲವು ಹುಳುಗಳೆನ್ನಿ! ಹಲಕೆಲವು ಕುರುಡುಕುನ್ನಿ!
---------------------------------
ಗಂಡಸುತನಕೇನೋ ಸೊನ್ನಿ !
ಲೆಕ್ಕಕ್ಕೆ ಮೂವತ್ತು ಮೂರು ಕೋಟಿ!!
ಎಂದು ಛೇಡಿಸಿದರು.
ಹಂಗಿನರಮನೆಯ ನರಕಾ- ತಂಗುವಿರಿ ಇಹುದೆ ಮರುಕಾ?
ಹಿಡಿಬೆರಳ ಹಿಡಿಯಲ್ಲಿ ಅಡಿಯೆರಡರಡಿಯಲ್ಲಿ ಹೊರಳಿ ಒರಲುವಿರಿ
ಅಕಟಾ! ಅಕಟಕಟಾ
ಎಂದು ಕೋಪಿಸಿಕೊಂಡರು.
ಹಡೆದೊಡಲು ಬಂಜೆಯಾಯ್ತೆ? ಬಾಳ್ಮೊದಲೆ ಸಂಜೆಯಾಯ್ತೆ?
ಎಂದು ಮರುಗಿದರು
ನನ್ನೆದೆಯ ಹಾಲನೆರಸಿ ನನ್ನೊಳಿಹ ಬೆಳಕ ಬೆರೆಸಿ
ವಜ್ರದೇಹಿಗಳೆಂದೆ ಗೊನೆಮಿಂಚೊ ಎನೆಕಂಡೆ
ನನ್ನಳಲು ಕೇಳದೇನೋ?
ಎಂದು ಪ್ರ್ರಲಾಪಿಸುತ್ತಲೇ
ಡಿಂಭಗಳನೊಡೆದು ಬನ್ನಿ! ಕಂಬಗಳನೊಡೆದು ಬನ್ನಿ!
ಮೈಯಲ್ಲಿ ಮಡಗದಿರಿ! ಮನದಲ್ಲಿ ಅಡಗದಿರಿ!
ತಾಯಿ ಇದೋ ಬಂದೆವೆನ್ನಿ!
ಎಂದು ಆಹ್ವಾನಿಸಿದರು.
ಹೇಡಿಯೊಬ್ಬನನ್ನು ಬಡಿದೆಬ್ಬಿಸಿ ಅವನಲ್ಲಿ ಆಕ್ರೋಶವನ್ನುಂಟುಮಾಡಿ ಅನಂತರ ಅವನನ್ನು ಕಾರ್ಯಸಾಧನೆಗೆ ಅಣಿಗೊಳಿಸುವ ಶೈಲಿ ಬೇಂದ್ರೆಯವರದು!
ಕನ್ನಡದ ಮತ್ತೊಬ್ಬ ಶ್ರೇಷ್ಠ ಕವಿ ಗೋಪಾಲಕೃಷ್ಣ ಅಡಿಗರ ನೆನೆನೆನೆ ಆ ದಿನವ, ಓ ಭಾರತಬಾಂಧವ! ನೆನೆನೆನೆ ಆದಿನವ ಎಂಬ ಗೀತೆ ಸುಪ್ರಸಿದ್ಧ. ಅವರ ಇನ್ನೊಂದು ಕವನವೂ ಅರ್ಥಪೂರ್ಣ.
ಎಂಥ ಯುದ್ಧವೊ ಗೆಳೆಯ ಭಾಟರ ಕೈ ಬರಿದು
ಮನದಲ್ಲಿ ಹಗೆತನದ ನಂಜಿಲ್ಲ ನಸುವೂ
ಮೊಗದ ನಸುನಗೆಯೊಂದೆ, ಮನದ ನಿಶ್ಚಯವೊಂದೆ,
ಆತ್ಮಾರ್ಪಣದ ಕಣವೆ ಕಣ್ಣ ಮುಂದೆ!
ಹಾಗೆಯೇ ಕೆಲವು ಪ್ರಸಿದ್ಧರಲ್ಲದ ಸಾಹಿತಿಗಳು ಬರೆದ ಕೃತಿಗಳು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಜಾಗೃತಿಯ ಅಲೆಯನೆಬ್ಬಿಸಿದವು. ಅಂತಹವರಲ್ಲೊಬ್ಬರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ದಿ|| ತಿಪ್ಪಯ್ಯ ಮಾಸ್ತರರು. ಕಡುಬಡತನದ ನಡುವೆಯೂ ಸ್ವಾತಂತ್ರ್ಯ ದೇವಿಗೆ ತಮ್ಮನ್ನು ಅರ್ಪಿಸಿಕೊಂಡವರು. ಅವರ ಜಪಿಸಿರಿ ಸ್ವರಾಜ್ಯ ಮಂತ್ರವನು, ಧರಿಸಿರಿ ಸ್ವದೇಶಿ ವಸ್ತ್ರವನು ಎಂಬ ಹಾಡು ಅಂದು ಜನಪ್ರಿಯವಾಗಿದ್ದ ಗೀತೆ. ೧೯೩೦ರಲ್ಲಿ ಪ್ರಕಟಗೊಂಡ ಅವರ ರಾಷ್ಟ್ರೀಯ ಪದ್ಯಗಳು ಎಂಬ ಕಿರು ಪುಸ್ತಕ ಜನಜಾಗೃತಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿತು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಒಂದು ಲಾವಣಿ ದೇಶಿ ಧುಮಧುಮ್ಮೆ. ಅದನ್ನು ಬರೆದವರು ಬೇಂದ್ರೆಯವರ ಮಿತ್ರರಾಗಿದ್ದ ಶ್ರೀಧರ ಖಾನೋಳ್ಕರ. ಸರಕಾರಿ ನೌಕರನಾಗಿದ್ದೂ ಸ್ವಾತಂತ್ರ್ಯ ಸಮರದಲ್ಲಿ ಪಾಲ್ಗೊಂಡಿದ್ದವರು. ಇವರು ಬರೆದ ಈ ದೀರ್ಘ ಲಾವಣಿಯನ್ನು ಸೀತಾತನಯ ಎಂಬ ಅವರ ಕಾವ್ಯನಾಮದಿಂದ ಪ್ರಕಟಿಸಿದ್ದು, ಅದನ್ನು ಮುದ್ರಿಸಿದ ನೆಪದಿಂದ ೧೯೨೩ರಲ್ಲಿ ಸಾಹಿತಿ ರಂಗನಾಥ ದಿವಾಕರ ಅವರಿಗೆ ರಾಜದ್ರೋಹದ ಆಪಾದನೆ ಮೇಲೆ ಜೈಲುಶಿಕ್ಷೆಯಾಯಿತು. ಏಳಿರಿ ಬಿಸಿಬಿಸಿ ರಕ್ತದ ತರುಣರೆ ಇಳಿಯಿರಿ ಸ್ವಾತಂತ್ರ್ಯ ರಣದೊಳಗೆ ಎಂಬ ದಿಟ್ಟ ಕರೆ ನೀಡಿ ಜಾಗೃತಿಯ ಅಲೆಯನ್ನೆಬ್ಬಿಸಿದ ಲಾವಣಿ ಅದು. ಬೆಂಗಳೂರಿನ ಶ್ರೀ ಬಿ. ನೀಲಕಂಠಯ್ಯನವರ ರಾಷ್ಟ್ರ ಚಿಂತನೆಯ ಲಾವಣಿಗಳು ಅಂದು ಕನ್ನಡಿಗರ ಮನೆಮಾತು.
೧೨ ನೇ ಪುಟದಿಂದ......

ನವಯುಗಪದ್ಧತಿ ನವ ಸ್ತ್ರೀ ಪುರುಷರ ನವರಂಗಾಟಗಳ್ಹೆಚ್ಚಾಯ್ತು
ಕನ್ನಡ ನಾಡಿನ ಕನ್ನಡ ಜನರಿಗೆ ಕನ್ನಡ ಭಾಷೆಯೆ ಮರೆತೋಯ್ತು |
ಕನ್ನಡ ಇಂಗ್ಲೀಷ ಬೆರೆತೋಯ್ತು, ಹೊನ್ನಿನ ದೇಶವು ಮಣ್ಣಾಯ್ತು
ತಿನ್ನಲು ಮನೆಯಲಿ ಸೊನ್ನೆಗಳಾದರು, ಉನ್ನತಷೋಕಿಯು ಬಲವಾಯ್ತು ||
ಎಂಬ ಬ್ರಿಟೀಷ ಪಾಶ್ಚಾತ್ಯ ಸಂಸ್ಕೃತಿಯ ಪರಿಣಾಮವನ್ನು ಹೀಗಳೆಯುವ ಲಾವಣಿ ಮುಂದುವರಿದು ಬ್ರಿಟೀಷ್ ಕುರಿಗಳನೊದ್ದೋಡಿಸಿ ದೇಶದ ಮಾನವ ರಕ್ಷಿಸಿ ಎಂಬ ಸಂದೇಶ ನೀಡಿ ಜನರನ್ನು ಹೋರಾ
ಟದ ಹಾದಿಗೆ ಎಳೆದು ತಂದಿತು.
ಹೀಗೆ ಸ್ವಾತಂತ್ರ್ಯದ ಹೋರಾಟದಲ್ಲಿ ಕನ್ನಡ ಸಾಹಿತಿಗಳೂ ಕೂಡ ಮಹತ್ತ್ವದ ಪಾತ್ರವನ್ನು ವಹಿಸಿದರು. ದೇಶದ ಬಗೆಗೆ ಭಕ್ತಿ-ಪ್ರೀತಿಯನ್ನು ಬೆಳೆಸಿದರು. ರಣರಂಗದಲ್ಲಿ ಸೈನ್ಯ ನಡೆಸುವ ಸೇನಾಪತಿಯಂತೆ ಹೋರಾಟಗಾರರಿಗೆ ಹುರುಪು ತುಂಬಿದರು. ಹೋರಾಟದ ಕಿಚ್ಚು ಮೂಡಿಸಿದರು. ಇದೆಲ್ಲದರ ಫಲವಾಗಿ ಬ್ರಿಟೀಷರ ಎಲ್ಲ ತಂತ್ರ-ಕುತಂತ್ರಗಳ ನಡುವೆಯೂ ಭಾರತೀಯರಲ್ಲಿ ೯೦ ವರ್ಷಗಳಷ್ಟು ಕಾಲ ನಿರಂತರವಾಗಿ ಸ್ವಾತಂತ್ರ್ಯ ದಾಹ ಉಳಿಯಿತು-ಬೆಳೆಯಿತು. ಅಂತಿಮವಾಗಿ ಗುರಿ ತಲುಪಿ, ದೇಶ ಸ್ವತಂತ್ರವಾಗುವ ಮೂಲಕವೇ ತಣ್ಣಗಾಯಿತು.

ಕೃಪೆ: ಚೈತ್ರರಶ್ಮಿ

ಗಂಗಕ್ಕನ ನೆನಪು

ವೀಣಾ ದೇವ್

ನಮ್ಮ ಕೆಲಸದಾಕೆ """ನಿನ್ನೆ ನಮ್ಮ ಗಂಗೂಬಾಯಿ ಒಬ್ಬಾಕೆ ತೀರ್ಕೊಂಡ್ಲಲ್ಲಪ್ಪ..." ಎನ್ನುತ್ತಲೇ ಪ್ರತ್ಯಕ್ಷಳಾದಳು. ಏನೋ ಎಂದಿನಂತೆ ಅವಳ ಬಳಗದ್ದೋ ಕೇರಿಯದ್ದೋ ಸುದ್ದಿ ಹೇಳುತ್ತಾಳೆ ಎಂದು ಭಾವಿಸುತ್ತಿದ್ದಂತೆಯೇ ಚಕ್ಕನೇ ಡಾ. ಗಂಗೂಬಾಯಿ ಹಾನಗಲ್ ಅವರ ನಿಧನವಾರ್ತೆಯ ನೆನಪಾಯ್ತು. ಅವರ ಬಗ್ಗೆ ಇವಳೇನು ಮಾತನಾಡಬಹುದು ಎಂದೇ ನನ್ನ ಭಾವನೆ. ಆದರೂ ಕೇಳಿಯೇ ಬಿಡೋಣವೆಂದು ಬಾಯ್ತೆರೆಯುವಷ್ಟರಲ್ಲಿಯೇ ಅವಳೇ "ಎಷ್ಟು ಛಂದ ಹಾಡ್ತಿದ್ಲು! ಭಾರಿ ಛಲೋ ಹೆಣ್ಮಗಳು, ದೊಡ್ಡ ಮನಸ್ರೇಪ ಆಕೀದು! ದೇ ಶಪಾಂಡೆ ನಗರದಾಗ ನಾವಿದ್ವಿ, ಗುರ್ತಾ ನೋಡ್ರಿ " ಎಂದಳು. ಇದನ್ನು ಇಲ್ಲಿ ಮುದ್ದಾಂ ಬರೆಯಲಿಕ್ಕೆ ಎರಡು ಕಾರಣಗಳಿವೆ. ಸಂಗೀತ ವಿಶ್ವದಲ್ಲೇ ಪ್ರಸಿದ್ಧಿ ಪಡೆದ ವಿದುಷಿಗೆ ಆ ನಿಟ್ಟಿನಲ್ಲಿ ಯಾವುದೇ ರೀತಿಯ ಶಿಕ್ಷಣ-ತರಬೇತಿ ಇಲ್ಲದ ಸಾಮಾನ್ಯ ಜನರನ್ನೂ ತಮ್ಮ ಸಂಗೀತದಿಂದ ಆಕರ್ಷಿಸುವ ಸಾಮರ್ಥ್ಯವಿತ್ತೆನ್ನುವುದೊಂದು; ಅಂತಹ ಸಾಮಾನ್ಯ ಜನರೂ ಇವರನ್ನು ತಮ್ಮವರು (ನಮ್ಮ ಗಂಗೂಬಾಯಿ ಎಂದಳು ಕೆಲಸದಾಕೆ) ಎಂದು ಅಭಿಮಾನದಿಂದ ಹೇಳಿಕೊಳ್ಳುವಂತೆ ಮಾಡುವ ನಡವಳಿಕೆ ಅವರದಾಗಿತ್ತೆನ್ನುವುದು ಇನ್ನೊಂದು.
ಅವರ ಸರಳ ಜೀವನ ಮತ್ತು ನಡವಳಿಕೆಯ ಪ್ರತ್ಯಕ್ಷ ಅನುಭವ ನನಗೂ ಆಗಿತ್ತು. ಶಿರಸಿಯ ನಮ್ಮ ಮನೆಯ ಎದುರು ನಿವೃತ್ತ ಶಿಕ್ಷಕಿಯೊಬ್ಬರಿದ್ದರು. ಒಂದಿನ ಸಂಜೆ ಅವರ ಮನೆಗೆ ಹೋದಾಗ ನೂಲಿನ ಸಾದಾ ಸೀರೆಯನ್ನುಟ್ಟು ಜಗಲಿಯ ನೆಲದ ಮೇಲೆಯೇ ಕುಳಿತು ಮಾತನಾಡುತ್ತಿದ್ದ ಮಹಿಳೆಯೊಬ್ಬರನ್ನು ಕಂಡೆ. ಅವರೇ ಪದ್ಮಭೂಷಣ ಪ್ರಶಸ್ತಿ ಪಡೆದ ಗಂಗೂಬಾಯಿ ಹಾನಗಲ್ ಎಂದಾಗ ನನಗೆ ನಂಬಿಕೆಯೇ ಆಗಲಿಲ್ಲ. ಅಸಾಮಾನ್ಯರಾದ ಅವರು ಅತೀ ಸಾಮಾನ್ಯಳಾದ ನನ್ನೊಡನೆ ನಡೆದುಕೊಂಡದ್ದೇ ಹಾಗೆ. ಅವರ ಬಾಹ್ಯ ರೂಪದಂತೆಯೇ ಯಾವ ಭೇದಭಾವವನ್ನರಿಯದ ಸಾದಾ-ಸರಳ ಅಂತರಾತ್ಮ ಅವರದಾಗಿತ್ತೆನ್ನುವುದು ಅವರ ಒಡನಾಟ ದೊರೆತ ಅನೇಕರ ಅನುಭವ. ಮನೆಗೆ ಬಂದವರಿಗೆ ಆತಿಥ್ಯ ನೀಡಿ ಸತ್ಕರಿಸುವುದು ಅವರಿಗೆ ಪ್ರಿಯವಾದ ಕೆಲಸವಾಗಿತ್ತಂತೆ.
ದಿ. ಗಂಗೂಬಾಯಿ ಹುಟ್ಟಿದ್ದು ೫ ಮಾರ್ಚ್ ೧೯೧೨. ಹುಟ್ಟೂರು ಧಾರವಾಡ. ಸಂಗೀತ ವಿದ್ಯೆಯ ವಿಷಯದಲ್ಲಿ ಅವರಿಗೆ ಮನೆಯೇ ಮೊದಲ ಪಾಠಶಾಲೆ. ಜನನಿ ತಾನೆ ಮೊದಲ ಗುರುವು. ನಂತರ ದಿ. ಕೃಷ್ಣಾಚಾರ್ಯ ಹುಲಗೂರ ಹಾಗೂ ಸವಾಯಿ ಗಂಧರ್ವ ( ದಿ. ರಾಮಾಭಾಯಿ ಕುಂದಗೋಳಕರ) ರಲ್ಲಿ ಕಲಿಕೆ. ಸವಾಯಿ ಗಂಧರ್ವರ ಶಿಷ್ಯತ್ವ ಸಂಪಾದಿಸುವುದು ಸುಲಭವಾಗಿರಲಿಲ್ಲ. ಆರು ತಿಂಗಳ ಕಾಲ ದಿನವೂ ಹುಬ್ಬಳ್ಳಿಯಿಂದ ಕುಂದಗೋಳಕ್ಕೆ ಓಡಾಡಿದರು. ಆ ಮೇಲೇ ಇವರು ಶ್ರದ್ಧೆಯಿಂದ ಸಂಗೀತ ಸಾಧನೆ ಮಾಡಿಯಾರೆಂಬ ವಿಶ್ವಾಸ ಹುಟ್ಟಿ ಇವರನ್ನು ಶಿಷ್ಯೆಯೆಂದು ಸ್ವೀಕರಿಸಿದರಂತೆ (೧೯೩೨ರಲ್ಲಿ). ಗುರುವಿನಿಂದ ದೊರೆತ ಜ್ಞಾನಭಾಂಡಾರವನ್ನು ಸಂರಕ್ಷಿಸಿ ಬೆಳೆಸುತ್ತ ರಸಿಕರನ್ನು ಸ್ವರಗಂಗೆಯಲ್ಲಿ ತೇಲಿಸಿದರು. ಕಲಾಜೀವನದಲ್ಲಿ ವಿಧಿ ತಂದ ಆಘಾತಗಳು, ಜನನಿಂದೆ, ಮೂದಲಿಕೆ, ಉಪೇಕ್ಷೆ, ಆರ್ಥಿಕ ಏರುಪೇರು ಎಲ್ಲವನ್ನೂ ದಿಟ್ಟತನದಿಂದ ಎದುರಿಸಿ ಸಾಧನೆಯತ್ತ ಲಕ್ಷ್ಯವಿತ್ತರು. ಗಾಯನ-ವಾದನಗಳನ್ನು ಕಲೆಯೆಂದು ಗೌರವದಿಂದ ನೋಡದೆ ಉಪೇಕ್ಷಾಭಾವದಿಂದ ಕಾಣುತ್ತಿದ್ದ ಅಂದಿನ ದಿನಗಳಲ್ಲಿ ಸ್ವಲ್ಪವೂ ವಿಚಲಿತರಾಗದೆ ಸ್ವರಾರಾಧನೆ ಮಾಡಿದರು.
ದಿ.ಗಂಗೂಬಾಯಿಯವರು ಕಥಕ್ ನೃತ್ಯದ ಶಿಕ್ಷಣವನ್ನು ಪಡೆದಿದ್ದರು. ಅವರು ರಂಗಭೂಮಿಯ ನಟಿಯಾಗಿ ಸಮರ್ಥ ಅಭಿನಯ ನೀಡಿದ್ದನ್ನು ಕಂಡವರಿದ್ದಾರೆ. ಮರಾಠಿ ಚಿತ್ರಪಟವೊಂದರಲ್ಲಿ ಗಾಯಕಿಯಾಗಿ ಅಭಿನಯಿಸಿದ್ದರಂತೆ. ಸಂಗೀತವೃತ್ತಿಗೆ ಕಾಲಿಟ್ಟ ಹೊಸದರಲ್ಲಿ ಎಚ್.ಎಮ್.ವಿ. ಅವರು ಗಾಂಧಾರಿ ಹಾನಗಲ್ ಎಂಬ ಹೆಸರಿನಲ್ಲಿ ಮಾಡಿದ್ದ ಅವರ ಹನ್ನೆರಡು ಧ್ವನಿಮುದ್ರಿಕೆಗಳು ಸಾಕಷ್ಟು ಜನಪ್ರಿಯವಾಗಿದ್ದವಂತೆ.
ಪದ್ಮವಿಭೂಷಣ ಗಂಗೂಬಾಯಿ ೧೧ ರ ಎಳೆವಯಸ್ಸಿನಲ್ಲೇ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಿ ಮಹಾತ್ಮಾ ಗಾಂಧಿಯವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸುಪ್ರಸಿದ್ಧ ಗಾಯಕ ಅಬ್ದುಲ್ ಕರೀಂ ಖಾನರೂ ಈ ಬಾಲಗಾಯಕಿಯನ್ನು ಮೆಚ್ಚಿಕೊಂಡಿದ್ದರು. ಮುಂದೆ ಸವಾಯಿ ಗಂಧರ್ವರ ಶಿಷ್ಯೆಯಾದ ಮೇಲೆ ಎಲ್ಲರ ಗಮನ ಸೆಳೆಯುತ್ತ ಖ್ಯಾತ ಬಾಲ ಗಾಯಕಿ ಎಂದೇ ಗುರುತಿಸಲ್ಪಡತೊಡಗಿದರು. ೧೯೫೦ ರಲ್ಲಿ ಟಾನ್ಸಿಲ್ಸ್ ಶಸ್ತ್ರಚಿಕಿತ್ಸೆಯ ನಂತರ ಧ್ವನಿ ಬದಲಾವಣೆಯಾದಾಗ ಅದನ್ನೇ ದೊಡ್ಡದು ಮಾಡಿ ಇಲ್ಲದ ಗೊಂದಲ ಮಾಡದೆ ದೃಢ ಮನಸ್ಸಿನಿಂದ ಸಂಗೀತ ಸಾಧನೆ ಮಾಡಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಗಿಟ್ಟಿಸಿದರು. ದೇಶ-ವಿದೇಶಗಳಲ್ಲಿ ಅವರ ಕಾರ್ಯಕ್ರಮಗಳಾಗಿವೆ. ಅವರಿಗೆ ೯೫ ವರ್ಷಗಳಾಗಿದ್ದಾಗ ಕೆ.ಎಲ್.ಇ. ಸಂಸ್ಥೆಯ ಕಾರ್ಯಕ್ರಮದಲ್ಲಿ (ಹತ್ತು ವರ್ಷಗಳ ಸುದೀರ್ಘ ವಿರಾಮದ ನಂತರ) ಅರ್ಧ ತಾಸು ಹಾಡಿದ್ದೇ ಅವರ ಕೊನೆಯ ಕಾರ್ಯಕ್ರಮ. ಅವರು ಪದ್ಮಭೂಷಣ, ಪದ್ಮವಿಭೂಷಣ ಮುಂತಾದ ೧೫ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರು. ಸುಮಾರು ನಲವತ್ತು ಡಾಕ್ಟರೇಟ್ ಗಳೂ ಇವರನ್ನರಸಿಕೊಂಡು ಬಂದಿವೆ. ಅವರ ಸ್ವರಾರಾಧನೆ , ಅಗಾಧ ಪಾಂಡಿತ್ಯ, ಶೈಲಿ, ನಿರೂಪಣಾ ಸಾಮರ್ಥ್ಯ, ವೈಶಿಷ್ಟ್ಯಗಳ ಬಗೆಗೆ ಆ ಕ್ಷೇತ್ರದ ದಿಗ್ಗಜರೆಲ್ಲರ ಅನಿಸಿಕೆಗಳು ದೇಶದ ಅನೇಕ ಪ್ರಸಾರ ಮಾಧ್ಯಮಗಳಲ್ಲಿ ಕಂಡು-ಕೇಳಿ ಬರುತ್ತಿವೆ. "ಸಾವಿರ ವರ್ಷಗಳಿಗೊಮ್ಮೆ ಹುಟ್ತುತ್ತಾರೆ ಇಂಥವರು" ಅನ್ನುತ್ತಾರೆ ಹಲವರು.
ತಮ್ಮ ಜ್ಞಾನವನ್ನು ನಿರ್ವಂಚನೆಯಿಂದ ಇತರರಿಗೆ ಬೋಧಿಸುವುದು ಇವರ ಇನ್ನೊಂದು ಹೆಗ್ಗಳಿಕೆ. ಸಮಕಾಲೀನ ಕಲಾಕಾರರ ವಿಷಯದಲ್ಲಿ ಆದರ-ಆತ್ಮೀಯತೆ, ಸಹಾಯಹಸ್ತ ಚಾಚುವುದು ಇವರ ಸ್ವಭಾವವಾಗಿತ್ತು. ಗುರುಗಳ ಅನಾರೋಗ್ಯ ಕಾಲದಲ್ಲಿ ತಮ್ಮಲ್ಲಿಯೇ ಅವರ ವಾಸದ ಏರ್ಪಾತು ಮಾಡಿ ಮಗಳ ಕೃಷ್ಣಾಳ ಕಲಿಕೆಯ ನೆಪದಲ್ಲಿ ಅವರಿಗೆ ಆರ್ಥಿಕ ಸಹಾಯ ಮಾಡಿದರು. ೨೦೦೫ ರಲ್ಲಿ ಹುಬ್ಬಳ್ಳಿಯ ತಮ್ಮ ಮನೆ ಗಂಗಾ ಲಹರಿಯನ್ನು ಸಂಗೀತಕ್ಕೇ ಅರ್ಪಿಸಿದರು. ಸಂಗೀತಪ್ರೇಮೀ ರಸಿಕ ಕಲಾಸಾಧಕರಿಗೆ ಅದೊಂದು ಆದರದ ಸ್ಥಾನವಾಗಿದೆ. ಅವರಿಗೆ ದೊರೆತ ಪುರಸ್ಕಾರಗಳು, ಛಾಯಾಚಿತ್ರಗಳು, ವಾದ್ಯಗಳು, ಸಂಗೀತದ ಮಾಹಿತಿ ಸಾಹಿತ್ಯಗಳ ಸಂಗ್ರಹ ಮುಂತಾದವುಗಳನ್ನು ನೋಡಬಹುದು.
ಕೆಲವರ್ಷಗಳಿಂದ ಕರ್ಕರೋಗದಿಂದ ಬಳಲುತ್ತಿದ್ದ ಅವರು ಜುಲೈ ೨೧ರಂದು ಬೆಳಗಿನ ೭ಗಂಟೆ ೧೫ ನಿಮಿಷಕ್ಕೆ ಅನಂತದಲ್ಲಿ ಲೀನವಾದರು. ಅಪಾರ ಜನರನ್ನು ತಣಿಸಿದ್ದ ಗಾನಗಂಗೆ ಶಿವನ ಪಾದ ಸೇರಿತು.

ವೇದಗಣಿತ ಭಾಗ -೪

ಮಹಾಬಲ ಭಟ್

ಹಿಂದಿನ ಸಂಚಿಕೆಯಲ್ಲಿ ಗುಣಾಕಾರ ಚಿಹ್ನೆಯ ಒಂದು ಬದಿಯಲ್ಲಿ ಕೇವಲ ೯ರಿಂದ ಆದ ಸಂಖ್ಯೆಯಿದ್ದರೆ ಗುಣಾಕಾರ ಮಾಡುವ ವಿಧಾನವನ್ನು ಕಲಿತೆವು. ಕೊನೆಯಲ್ಲಿ ಅಭ್ಯಾಸಕ್ಕಾಗಿ ಕೊಟ್ಟ ಸಂಖ್ಯೆಗಳಲ್ಲಿ ಒಂದು ೬೩x೯೯೯. ಇಲ್ಲಿ ಗುಣ್ಯದಲ್ಲಿ ಎರಡು ಅಂಕೆಗಳು, ಗುಣಕದಲ್ಲಿ ಮೂರು ಅಂಕೆಗಳೂ ಇವೆ. ನಾವು ಹಿಂದೆ ಕೊಟ್ಟ ಉದಾಹರಣೆಗಳಲ್ಲಿ ಎರಡೂ ಕಡೆ ಸಮಾನ ಅಂಕೆಗಳಿದ್ದವು ಇಂತಹ ಸಂದರ್ಭದಲ್ಲಿ ಈ ಕೆಳಗಿನಂತೆ ಸುಲಭವಾಗಿ ಸಮಸ್ಯೆಯನ್ನು ಬಿಡಿಸಬಹುದು.
೬೩x೯೯೯
೬೨ ೯ ೩೭
ಗುಣಕದಲ್ಲಿ ಒಂದು ಒಂಭತ್ತು ಹೆಚ್ಚಿಗೆ ಇರುವುದರಿಂದ ಅದನ್ನು ಮೊದಲನೆಯ ಹಂತದ ನಂತರ ಎರಡನೆಯ ಹಂತದ ಆರಂಭಕ್ಕಿಂತ ಮೊದಲು ಬರೆದು ಹಿಂದಿನ ಕ್ರಮವನ್ನೇ ಅನುಸರಿಸಬೇಕು.
ಇನ್ನೊಂದು ಉದಾಹರಣೆ:
೪೫x೯೯೯೯೯೯= ೪೪ ೯೯೯೯ ೫೪
ಈಗ ಮತ್ತೊಂದು ರೀತಿಯ ಸಮಸ್ಯೆಯನ್ನು ಕೈಗೆತ್ತಿಕೊಳ್ಳೋಣ
೭೩೯೫x೯೯
ಇಲ್ಲಿ ಗುಣಕದಲ್ಲಿ ಕಡಿಮೆ ಅಂಕಗಳಿವೆ. ಈ ಸಮಸ್ಯೆಯನ್ನು ಈ ಕೆಳಗಿನಂತೆ ಬಿಡಿಸಬಹುದು.
೭೩೯೫*೯೯
೭೩ ೯೪
-೭೩
೭೩ ೨೧ ೦೫
ಇನ್ನೊಂದು ಉದಾಹರಣೆ:
೫೬೯೪೯೩೧ x ೯೯೯
೫೬೯೪ ೯೩೦
-೫ ೬೯೪
೫೬೮೯ ೨೩೬ ೦೬೯

ಸ್ಪೂರ್ತಿಯ ಸೆಲೆ

ಅಖಿಲಾ ಕುರಂದವಾಡ

ಬರೆಯಲು ಕುಳಿತೆ ನಾನೊಂದು ಕವಿತೆ
ವಿಚಾರದ ಸುಳಿವಿಲ್ಲ
ಪದಪಂಕ್ತಿಯ ನೆರಳಿಲ್ಲ
ಯೋಚಿಸುತ್ತಲೇ ಕಳೆದೆ ಒಂದೆರಡು ಗಂಟೆ
ಹಿಡಿತವಿಲ್ಲದ ಮನಕೆ
ಹಾಕುವುದೆಂತು ಕಡಿವಾಣ
ಓಡುತಿದೆ ಮರ್ಕಟದಂತೆ
ಕೈಗೆಟುಕದೆ ಎತ್ತಬಂದತ್ತ
ಬರೆಯುವ ಚಪಲ ಒಂದೆಡೆ
ಕರ್ತವ್ಯದ ಸೆಲೆತ ಇನ್ನೊಂದೆಡೆ
ಮನದುಯ್ಯಾಲೆಯಲಿ
ಕುಳಿತೇ ಇದ್ದೆ ಛಲದಂಕ ಮಲ್ಲನಂತೆ
ಸೂರ್ಯ ಕಿರಣಗಳ ನೆರವಿಲ್ಲ
ಚಂದ್ರ-ತಾರೆಗಳ ಆಸರೆ ಇಲ್ಲ
ಹೊಳಪನ್ನು ಅರಸುತ್ತ ಕಳೆದೆ
ಮತ್ತಷ್ಟು ಘಳಿಗೆ
ಮೇಘರಾಜನ ಆರ್ಭಟವು
ಮಿಂಚಂತೆ ಸೇರಿ ಬಡಿದೆಬ್ಬಿಸಿತು
ಸ್ಪೂರ್ತಿಯ ಸೆಲೆಯನ್ನು
ಮನದ ಮಂದಿರದಲ್ಲಿ
ಬರೆಯುವ ಕೈಗಳು
ಸೆಣಸುವ ಮನವು
ಅಣಿಗೊಂಡು ಬರೆಯತೊದಗಿದೆ
ಅಳುಕದೆ ಹಲವು ಸಾಲುಗಳನ್ನು

ಭಾಷೆಯ ಗೊಂದಲ

ಮಹಾಬಲ ಭಟ್

ಮುಕ್ತಿಯ ಸ್ವರ್ಣಜಯಂತಿಯನ್ನು ಆಚರಿಸಿಕೊಳ್ಳುತ್ತಿರುವ ಗೋವಾದಲ್ಲಿ ದೊಡ್ಡ ಗೊಂದಲವೇರ್ಪಟ್ಟಿದೆ. ಅದು ಭಾಷೆಗೆ ಸಂಬಂಧಿಸಿದ್ದು. ತನ್ನ ವಿವಿಧತೆಗೆ ಹೆಸರಾದ ಭಾರತದಲ್ಲಿ ಪ್ರತ್ಯೇಕ ರಾಜ್ಯಕ್ಕೂ ಅದರದೇ ಆದ ಭಾಷೆಯೆಂಬುದಿದೆ. ನಾಡು-ನುಡಿಗಳ ಸಂಬಂಧ ಅವಿನಾಭಾವವಾದದ್ದು ಎಂಬುದನ್ನು ಪ್ರತಿಯೊಂದು ರಾಜ್ಯದ ಪ್ರಜೆಯೂ ಒಪ್ಪುತ್ತಾನೆ. ಅಲ್ಲದೆ ತನ್ನ ನಾಡನ್ನು ಗೌರವಿಸಿದಷ್ಟೇ ನುಡಿಯನ್ನೂ ಗೌರವಿಸುತ್ತಾನೆ. ತನ್ನ ತಾಯಿ, ತಾಯ್ನಾಡು ತಾಯ್ನುಡಿಗಳನ್ನು ಸಮಾನವಾಗಿ ಗೌರವಿಸುತ್ತಾನೆ. ಆದರೆ ಇದು ಗೋವಾದಲ್ಲಿ ಆಗುತ್ತಿಲ್ಲ. ಪರಕೀಯರ ಆಳ್ವಿಕೆಯಿಂದ ಮುಕ್ತಿ ಪಡೆದು ೫೦ ವರ್ಷಗಳು ಉರುಳಿದರೂ ತಮ್ಮ ತಾಯ್ನೆಲದಲ್ಲಿ ತಾಯ್ನುಡಿಗೊಂದು ಗೌರವದ ಸ್ಥಾನವನ್ನು ಕೊಡಲು ಗೋವೀಯರು ವಿಫಲರಾಗಿದ್ದಾರೆ. ಇದೊಂದು ನಾಚಿಕೆಗೇಡಿನ ಸಂಗತಿ.
ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ದೊರಕಬೇಕು ಎಂಬುದು ಅನೇಕ ಭಾಷಾ ಶಾಸ್ತ್ರಜ್ಞರ ಹಾಗೂ ಮನೋವಿಜ್ಞಾನಿಗಳ ಅಂಬೋಣ. ತಾನು ಮನೆಯಲ್ಲಿ ಆಡುತ್ತಿರುವ ಭಾಷೆಯನ್ನೇ ಶಾಲೆಯಲ್ಲಿಯೂ ಕೇಳಿದಾಗ ಸಹಜವಾಗಿಯೇ ಮಗುವಿನ ಮನಸ್ಸು ಉಲ್ಲಸಿತವಾಗಿ ಕಲಿಕೆಯತ್ತ ವಾಲುತ್ತದೆ ಎಂಬುದು ಯಾರಾದರೂ ಊಹಿಸಬಹುದಾದ ಸಂಗತಿ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಮಗುವಿನ ಹಕ್ಕೂ ಕೂಡ ಹೌದು. ಪ್ರಾಥಮಿಕ ಸ್ತರದಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಅಧ್ಯಯನ ಮಾಡದಿದ್ದರೆ ಮುಂದೆ ಇಂಗ್ಲೀಷ್ ಭಾಷೆಯ ಮೇಲೆ ಪ್ರಭುತ್ವ ಸಿಗಲಿಕ್ಕಿಲ್ಲ ಎಂಬ ಭ್ರಮೆ ಅನೇಕರದು. ಹಾಗಾಗಿ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಕಳಿಸಲು ಪಾಲಕರು ಮುಗಿ ಬೀಳುತ್ತಾರೆ. ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಕಳಿಸಲು ಇನ್ನೂ ಅನೇಕ ಕಾರಣಗಳಿವೆ.
ಬ್ರಿಟೀಷರು ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಿ ಸಾರ್ವಜನಿಕ ಶಿಕ್ಷಣದ ಹೆಸರಿನಲ್ಲಿ ಇಂಗ್ಲೀಷ್ ಶಿಕ್ಷಣವನ್ನು ನೀಡಲು ಅರಂಭಿಸಿದಾಗ ಬುದ್ಧಿಜೀವಿಗಳಿಗೆ ಅದೊಂದು ಪ್ರತಿಷ್ಠೆಯ ವಿಷಯವಾಯಿತು. ಇಂಗ್ಲೀಷ್ ವಿಷಯದಲ್ಲಿ ಪದವಿ ಪಡೆದ ಪ್ರಥಮ ಭಾರತೀಯನನ್ನು ಮೆರವಣಿಗೆ ಮಾಡಿ ಇಂಗ್ಲೀಷ್ ಕಲಿತವರಿಗೆ ಈ ರೀತಿಯ ಗೌರವ ಸಿಗುತ್ತದೆ ಎಂದು ತೋರಿಸಿದರು. ಎಷ್ಟೋ ಆಮಿಷಗಳನ್ನು ಒಡ್ಡಿ ಇಂಗ್ಲೀಷಿನತ್ತ ಜನರನ್ನು ಆಕರ್ಷಿಸಿದರು. ಇಂಗ್ಲೀಷ್ ಕಲಿತವರಿಗೆ ವಿದೇಶಕ್ಕೆ ಹೋಗುವ ಅವಕಾಶ ದೊರೆಯಿತು. ಇಂಗ್ಲೀಷ್ ಕಲಿತವರು ಗೌರವಸ್ಥರಾದರು. ಈ ಮಾನಸಿಕತೆ ನಮಗೆ ಇನ್ನೂ ಹೋಗಿಲ್ಲ. ಗೋವಾದ ಒಬ್ಬ ಪ್ರಜೆ ತನಗೆ ಕೊಂಕಣಿ ಬರದಿದ್ದರೆ ಅದನ್ನು ತಮಾಷೆಯಾಗಿ ಹೇಳುತ್ತಾನೆ. ಅದೇ ಇಂಗ್ಲೀಷ್ ಬರದಿದ್ದರೆ ಅದು ನಾಚಿಕೆಯ ವಿಷಯವೆಂಬಂತೆ ತಲೆತಗ್ಗಿಸಿ ಹೇಳುತ್ತಾನೆ. ಈ ಸ್ಥಿತಿ ಎಲ್ಲ ರಾಜ್ಯಗಳಲ್ಲೂ ಇದೆ.
ಇಂಗ್ಲೀಷ್ ಮಾಧ್ಯಮಶಾಲೆಗೆಳಿಗೆ ಹೋಗುವವರು ಹೆಚ್ಚಾಗಿ ಸಿರಿವಂತರ ಮಕ್ಕಳು ಅಂತಹ ಶಾಲೆಗಳು ಪಾಲಕರಿಂದ ಹಣವನ್ನು ಸ್ವೀಕರಿಸಿ ಉತ್ತಮ ವ್ಯವಸ್ಥೆಯನ್ನು ಮಾಡುತ್ತವೆ. ಮಕ್ಕಳ ಸಲುವಾಗಿ ಹಣ ಖರ್ಚು ಮಾಡಲು ಸಿದ್ಧವಿರುವ ಪಾಲಕರು ಅಲ್ಲಿಗೇ ತಮ್ಮ ಮಕ್ಕಳನ್ನು ಕಳಿಸಲು ಇಷ್ತಪಡುತ್ತಾರೆ. ಮಕ್ಕಳು ಉತ್ತಮ ವಾತಾವರಣದಲ್ಲಿ ಬೆಳೆಯುತ್ತಾರೆ ಎಂಬುದು ಅವರ ಅಂಬೋಣ. ಸರಕಾರಿ ಶಾಲೆಗಳಲ್ಲಿ ಇಂತಹ ವಾತಾವರಣ ಇಲ್ಲದಿರುವುದರಿಂದ, ಅಲ್ಲಿಗೆ ಬರುವವರು ಸ್ಥಿತಿವಂತರಲ್ಲದ ಶ್ರಮಿಕ ವರ್ಗದ ಮಕ್ಕಳಾದುದರಿಂದ, ಅವರೊಂದಿಗೆ ತಮ್ಮ ಮಕ್ಕಳು ಬೆರೆತು ಆಟವಾಡುವುದು ಈ ಪಾಲಕರಿಗೆ ಇಷ್ಟವಿಲ್ಲದುದರಿಂದ ’ಪೊಶ್’ ಎಂದು ಕರೆಸಿಕೊಳ್ಳುವ ಜನ ತಮ್ಮ ಮಕ್ಕಳನ್ನು ಸರಕಾರಿಶಾಲೆಗಳಿಗೆ ಕಳಿಸುವುದಿಲ್ಲ. ಇಲ್ಲಿ ಮಾಧ್ಯಮಕ್ಕಿಂತ ಹೆಚ್ಚಾಗಿ ಶಾಲೆಯ ವಾತಾವರಣ ನಿರ್ಣಾಯಕವಾಗಿರುತ್ತದೆ. ಮರಾಠಿ ಮಾಧ್ಯಮದಲ್ಲಿ ಶಿಕ್ಷಣನೀಡುವ ಅನೇಕ ಖಾಸಗಿ ಶಾಲೆಗಳ ದು:ಸ್ಥಿತಿಯೂ ಇದೇ ರೀತಿಯಾಗಿದೆ. ಮೇಲ್ವರ್ಗದ ಜನರು ಮೆಚ್ಚುವಂತಹ ವಾತಾವರಣಯುಕ್ತ ಸ್ಥಾನೀಯಭಾಷಾ ಮಾಧ್ಯಮದ ವಿದ್ಯಾಲಯಗಳ ಆವಶ್ಯಕತೆ ಇದೆ. ಇಂತಹ ಪಾಲಕರು ಸರಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ದೊರೆತರೂ ಅಲ್ಲಿಗೆ ತಮ್ಮ ಮಕ್ಕಳನ್ನು ಕಳಿಸುವುದಿಲ್ಲ.
ಕರ್ನಾಟಕದಂತಹ ರಾಜ್ಯದಲ್ಲೂ ಮಾತೃಭಾಷೆಯಲ್ಲಿ ಶಿಕ್ಷಣಕೊಡುವ ಪ್ರಾಥಮಿಕ ವಿದ್ಯಾಲಯಗಳಿಗೆ ಮಾತ್ರ ಅನುದಾನ ಸಿಗುತ್ತದೆ. ಅಂದಾಕ್ಷಣ ಆಂಗ್ಲ ಮಾಧ್ಯಮಶಾಲೆಗಳೇ ಇಲ್ಲ ಅಂತಿಲ್ಲ. ಖಾಸಗಿಯಾಗಿ ಅಂತಹ ಶಾಲೆಗಳು ನಡೆಯುತ್ತಲೇ ಇವೆ. ಜನರು ತಮ್ಮ ಮಕ್ಕಳನ್ನು ಆ ಶಾಲೆಗಳಿಗೆ ಕಳಿಸುತ್ತಲೇ ಇದ್ದಾರೆ. ಅದಕ್ಕೆ ಸರಕಾರದ ಅನುಮತಿಯೂ ಇದೆ. ಭಾರೀ ಶುಲ್ಕ, ಡೊನೇಶನ್‌ಗಳನ್ನು ನೀಡಲಾರದವರು ನಿರಾಸೆ ಅನುಭವಿಸುತ್ತಾರೆ. ಆಂಗ್ಲ ಮಾಧ್ಯಮಶಾಲೆಗಳಿಗೆ ಅನುದಾನ ನೀಡುವುದರಿಂದ ಬಡಮಕ್ಕಳಿಗೂ ಈ ಭಾಗ್ಯದೊರೆಯುತ್ತದೆ ಎಂಬುದು ಆಂಗ್ಲವಾದಿಗಳ ವಾದ. ತಮ್ಮ ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಓದಿಸಬೇಕು ಎಂಬುದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಎಲ್ಲ ಪಾಲಕರಿಗೂ ಸಿಗಬೇಕು ಎನ್ನುವುದು ಅವರ ಅಭಿಮತ ಆಂಗ್ಲಮಾಧ್ಯಮಶಾಲೆಗಳಿಗೆ ಅನುದಾನ ದೊರೆತಾಗ ಶುಲ್ಕದ ಕಾರಣದಿಂದ ಆಯ್ಕೆಯ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಭಯವಿಲ್ಲ. ಅಷ್ಟಾದರೂ ಮರಾಠಿ/ಕೊಂಕಣಿ ಮಾಧ್ಯಮವನ್ನೇ ಇಷ್ಟಪಡುವವರು ಹಾಗೆ ಮಾಡಲು ಈಗಲೂ ಸ್ವತಂತ್ರರು ಎಂಬುದು ಬಲವಾದ ವಾದ.
ಜೀವನದಲ್ಲಿ ಉನ್ನತಿಯನ್ನು ಸಾಧಿಸಲು ಅಥವಾ ಉತ್ತಮ ಉದ್ಯೋಗ ಸಂಪಾದಿಸಲು ಆಂಗ್ಲಭಾಷೆ ಅತ್ಯವಶ್ಯಕವೆ? ಮೇಲ್ನೋಟಕ್ಕೆ ಇದಕ್ಕೆ ಉತ್ತರ ’ಹೌದು’ ಎಂದೇ ತೋರುತ್ತದೆ. ಇದೇ ಪ್ರಶ್ನೆಯನ್ನು ಒಬ್ಬ ಜಪಾನಿ, ಚೀನೀ ಅಥವಾ ಬ್ರಿಟಿಷೇತರ ಯಾವುದೇ ಯುರೋಪಿಯನ್ನನನ್ನು ಕೇಳಿದರೂ ಉತ್ತರ ’ಇಲ್ಲ’ ಹಾಗಾದರೆ ಭಾರತದಲ್ಲಿ ಈ ಹೌದನ್ನು ಸೃಷ್ಟಿಸಿದವರ್ಯಾರು? ಬ್ರಿಟೀಷರು ಸೃಷ್ಟಿಸಿದ ಈ ಹೌದನ್ನು ನಾವು ಅಭಿಮಾನಶೂನ್ಯರು ಮುಂದುವರಿಸುತ್ತಿದ್ದೇವೆ. ಇಂದು ಅನೇಕ ಭಾರತೀಯರು ಚೀನೀ ಭಾಷೆಯನ್ನು ಕಲಿಯಲು ಮುಂದೆ ಬರುತ್ತಿದ್ದಾರೆ ಅದಕ್ಕೆ ಕಾರಣ ಚೀನಾ ದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಿರುವುದರಿಂದ. ಜಾಗತೀಕರಣದಲ್ಲಿ ’ನಮ್ಮ ಭಾಷೆ’, ’ಪ್ರಾದೇಶಿಕ ಭಾಷೆ’ ’ಮಾತೃಭಾಷೆ’ ಎಂಬುದೆಲ್ಲ ಅಸಂಬದ್ಧ ಪ್ರಲಾಪ, ನಾವು ಇಂತಹ ಸಂಕುಚಿತಭಾವನೆಯನ್ನು ತೊಡೆದುಹಾಕಬೇಕು ಎಂಬುದು ವಿಚಾರವಾದಿಗಳೆಂದು ತಮ್ಮನ್ನು ತಾವೇ ಕರೆದುಕೊಳ್ಳುವವರ ಹೇಳಿಕೆ. ಆದರೆ ಈ ವಿಚಾರವಾದಿಗಳು ಗಮನಿಸಬೇಕಾದ ಅಂಶವಿದೆ. ಜಾಗತೀಕರಣ ಎಂದಾಕ್ಷಣ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಮಾಡುವುದು, ವಿದೇಶೀ ವಸ್ತುಗಳನ್ನು ಆಮದು ಮಾಡಿ ಉಪಯೋಗಿಸುವುದು ಇಷ್ಟೇ ಅಲ್ಲ. ನಮ್ಮ ಸಂಸ್ಕೃತಿಯ ಪ್ರಸಾರ, ನಮ್ಮ ಉದ್ಯಮದ ವಿಸ್ತರಣೆ ಇವು ಕೂಡ ಜಾಗತಿಕರಣದಿಂದ ಸಾಧ್ಯ. ಇಂದು ಚೀನಾ, ಜಪಾನ್ ದೇಶಗಳು ತಮ್ಮ ಭಾಷೆ ಸಂಸ್ಕೃತಿಗಳ ಬಗ್ಗೆ ಅಭಿಮಾನ ಹೊಂದಿರುವುದರಿಂದಲೇ ಅಲ್ಲಿಗೆ ಹೋಗಬೇಕಾದ ನಾವು ಅವನ್ನು ಕಲಿಯಬೇಕು. ಜಗತ್ತಿನ ಇತರ ದೇಶಗಳು ಭಾರತೀಯ ಭಾಷೆಗಳನ್ನು ಅಧ್ಯಯನಮಾಡುವಂತೆ ಮಾಡಬೇಕು ಅಂದಾದರೆ ನಾವು ಮೊದಲು ಅವುಗಳ ಬಗ್ಗೆ ಅಭಿಮಾನ ಹೊಂದಿರಬೇಕು. ನಮ್ಮ ಮೂಲ ಸಂಸ್ಕೃತಿಯನ್ನೆಲ್ಲ ಕಟ್ಟಿಟ್ಟು ಭಾರತ ಸೂಪರ್ ಪವರ್ ಆದರೆ ಅಮೇರಿಕ ಸೂಪರ್ ಪವರ್ ಆಗುವುದಕ್ಕೂ, ಭಾರತ ಆಗುವುದಕ್ಕೂ ಏನೂ ವ್ಯತ್ಯಾಸ ಉಳಿಯುವುದಿಲ್ಲ.
ಭಾಷೆಗೂ ಸಂಸ್ಕೃತಿಗೂ ಸಂಬಂಧವಿದೆಯೆ? ಎಂಬುದು ಒಂದು ಮುಖ್ಯ ಪ್ರಶ್ನೆ. ಆಂಗ್ಲ ಮಾಧ್ಯಮದಲ್ಲಿ ಕಲಿತವರು ಉಳಿದವರಿಗಿಂತ ಚೆನ್ನಾಗಿ ’ಗುಡ್ ಮಾರ್ನಿಂಗ್’ ಹೇಳಬಲ್ಲರು, ಸೀನು ಬಂದರೂ ’ಸಾರಿ’ ಹೇಳುವರು, ಹೇಳಿದ್ದು ಕೇಳಿಸದಿದ್ದರೆ ’ಆಂ’ ಬಾಯಿ ತೆರೆಯುವುದಿಲ್ಲ ’ಐ ಬೆಗ್ ಯುವರ್ ಪಾರ್ಡನ್’ ಎಂದು ವಿನಯ ತೋರಿಸುತ್ತಾರೆ, ಪ್ರಾದೇಶಿಕಭಾಷೆಯಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿತವರಿಗೆ ಈ ಎಲ್ಲ ’ಮ್ಯಾನರ್ಸ್’ ಗೊತ್ತಿರುವುದಿಲ್ಲ. ಅಂತಿರುವಾಗ ಇಂಗ್ಲೀಷಿನಿಂದ ಸಂಸ್ಕೃತಿಯ ನಾಶ ಎಂಬುದು ಸುಳ್ಳಲ್ಲವೆ?
ಸಂಸ್ಕೃತಿ ಎಂದರೇನು? ’ಸಮ್ಯಕ್ ಕೃತಿ’. ಸರಿಯಾದ ನಡತೆ. ಆದರೆ ’ಮ್ಯಾನರ್ಸ್’ ಮಾತ್ರ ಸಂಸ್ಕೃತಿಯಲ್ಲ. ನನ್ನ ದೃಷ್ಟಿಯಲ್ಲಿ ಯಾವ ಸಂಸ್ಕೃತಿಯೂ ಕೆಟ್ಟದಲ್ಲ. ವಿದೇಶಿ ಸಂಸ್ಕೃತಿಯಲ್ಲೂ ಒಳ್ಳೆಯ ಅಂಶಗಳಿವೆ. ನಮ್ಮ ಸಂಸ್ಕೃತಿಯಲ್ಲೂ ಕೆಟ್ಟ ಅಂಶಗಳಿವೆ. ಆದರೆ ನಾವು ವಿದೇಶಿ ಸಂಸ್ಕೃತಿಯಲ್ಲಿರುವ ಒಳ್ಳೆಯ ಅಂಶಗಳನ್ನು ಅವರ ಮುಖಮುಸ್ತುತಿ ಮಾಡುವುದಕ್ಕೆ ಮಾತ್ರ ಹಾಗೂ ಕೆಟ್ಟ ಅಂಶಗಳನ್ನು ಅನುಸರಿಸಲು ಮಾತ್ರ ಉಪಯೋಗಿಸುವುದರಿಂದ ನಮ್ಮ ಸಂಸ್ಕೃತಿಯ ಒಳ್ಳೆಯ ಅಂಶಗಳೂ ಮರೆಯಾಗುತ್ತಿವೆ. ಆಂಗ್ಲ ಸಂಸ್ಕೃತಿ ಅದು ಹುಟ್ಟಿ ಬೆಳೆದ ದೇಶಕ್ಕೆ ಸರಿಯಾದುದೇ ಇರಬಹುದು. ಅದು ಕೆಟ್ಟದೆನ್ನಲು ನಮಗೆ ಅಧಿಕಾರವಿಲ್ಲ. ಆದರೆ ಅದನ್ನು ಅಂಧಾನುಕರಣೆ ಮಾಡಿ ’ಸ್ಕರ್ಟ್-ಕೋಟ್’ ಧರಿಸುವುದು ಒಳ್ಳೆಯದು ’ಸಲ್ವಾರ್’ ಧರಿಸುವುದು ಕೆಲಸದವರು ಮಾತ್ರ ಎಂಬ ಭಾವನೆ ತಳೆದರೆ ಅದರಿಂದ ತುಂಬ ಅಪಾಯವಿದೆ.
ಆಂಗ್ಲಭಾಷೆಯ ಮೂಲಕವೂ ಭಾರತೀಯ ಸಂಸ್ಕೃತಿಯನ್ನು ಕಲಿಸಬಹುದು ಎಂಬುದು ಮರೀಚಿಕೆಯೇ ಸರಿ. ಆಂಗ್ಲ ಮಾಧ್ಯಮ ಪೂರ್ವಪ್ರಾಥಮಿಕ ಶಾಲೆಯೊಂದನ್ನು ಹೊಕ್ಕು ನೋಡಿ. ಅಲ್ಲಿನ ಗೋಡೆಯ ಮೇಲೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಒಂದು ಚಿತ್ರವಾದರೂ ಇದ್ದರೆ ಹೇಳಿ. ಅಲ್ಲಿ ಸಿಂಡ್ರೆಲಾ ಇರುತ್ತಾಳೆ, ಝಾನ್ಸಿ ರಾಣಿಯ ಸುದ್ದಿಯಿಲ್ಲ, ಮಿಕ್ಕಿ ಮೌಸ್ ಇರುತ್ತದೆ, ಭಾರತೀಯ ಇಲಿ ಇಲ್ಲ, ಚಾರ್ಲಿ ಚಾಪ್ಲಿನ್ ಮುಂತಾದವರು ಇರುತ್ತಾರೆ ಶಿವಾಜಿ, ಸಂಭಾಜಿಗಳ ಸುಳಿವಿಲ್ಲ. ಭಾರತೀಯ ಸಂಸ್ಕೃತಿಯನ್ನು ಆಧರಿಸಿದ, ಭಾರತದ ಪರಿಸರವನ್ನು ಪ್ರತಿಬಿಂಬಿಸುವ ಒಂದೇ ಒಂದು ನರ್ಸರಿ ’ರೈಮ್’ ಇದ್ದರೆ ಹೇಳಿ. ನಮ್ಮ ದೇಶದ ರಾಜ ಮಹಾರಾಜರ ಪರಿಚಯವಿಲ್ಲದ ಮುಗ್ಧ ಮನಸ್ಸಿನಲ್ಲಿ ಇಂಗ್ಲೆಂಡ್ ರಾಣಿಯನ್ನು ತಂದು ಕೂಡ್ರಿಸುತ್ತೇವೆ. ಅದೇ ಹಳೆ ’ಪುಸಿ ಕ್ಯಾಟ್’ ಇಂಗ್ಲೆಂಡ್‌ಗೆ ಇಲಿಯನ್ನು ಹುಡುಕಿಕೊಂಡು ಹೋಗಿ ರಾಣಿಯ ಕುರ್ಚಿಯ ಕೆಳಗಿರುವ ಇಲಿಯನ್ನು ಹೆದರಿಸುತ್ತದೆ. ಬ್ರಿಟಿಷರು ನಮ್ಮನ್ನು ಬಿಟ್ಟು ಹೋಗಿ ೬೪ ವರ್ಷಗಳಾದರೂ ನಾವಿನ್ನೂ ಅದೇ ದಾಸ್ಯದ ಹಾಡನ್ನು ನಮ್ಮ ಮಕ್ಕಳಿಗೆ ಕಲಿಸುತ್ತೇವೆ. ಇಂಗ್ಲೀಷ್ ಪಾಠಗಳಲ್ಲಿ ಜಾನ್, ಪೀಟರ್ ಬರುತ್ತಾರೆ, ರಾಮ ಲಕ್ಷ್ಮಣರಿಗೆ ಅಲ್ಲಿ ಅವಕಾಶ ಇಲ್ಲ. ಇಂಗ್ಲೀಷ್ ಹಾಡನ್ನು ಹಿಂದೂಸ್ತಾನಿ ಪದ್ಧತಿಯಲ್ಲೋ ಕರ್ನಾಟಕಿ ಶೈಲಿಯಲ್ಲೋ ಹಾಡಲು ಸಾಧ್ಯವೆ? ಹೀಗಿರುವಾಗ ಇಂಗ್ಲೀಷ್ ಮಾಧ್ಯಮದಿಂದ ಭಾರತೀಯ ಸಂಸ್ಕೃತಿಗೆ ಯಾವುದೇ ಹಾನಿಯಿಲ್ಲ ಎನ್ನುವುದು ಹೇಗೆ?
ಸಂಸ್ಕೃತಿಯ ವಿಚಾರ ಬರುವುದು ಹೊಟ್ಟೆ ತುಂಬಿದ ಮೇಲೆ. ಸಂಸ್ಕೃತಿಯ ಬಗ್ಗೆ ಚಿಂತಿಸುತ್ತಿದ್ದರೆ ಹೊಟ್ಟೆ ತುಂಬುವುದಿಲ್ಲ. ಇಂಗ್ಲೀಷ್ ಮಾಧ್ಯಮ ಉದ್ಯೋಗ ಸಿಗಲು ಸಹಾಯ ಮಾಡುತ್ತದೆ ಎಂಬುದು ಇನ್ನೊಂದು ವಾದ. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತವರು ಮಾತ್ರ ನೌಕರಿ ಗಿಟ್ಟಿಸುತ್ತಾರೆ ಎಂಬುದು ವ್ಯರ್ಥ ವಾದವೆಂದು ಅನಿಸುತ್ತದೆ. ಹಳ್ಳಿಯ ಶಾಲೆಗಳಲ್ಲಿ ಮಾತೃಭಾಷಾ ಮಾಧ್ಯಮದಲ್ಲಿ ಓದಿದ ಎಷ್ಟೋ ಮಂದಿ ಇಂದು ನಮ್ಮ ದೇಶದಲ್ಲೂ ಪರದೇಶದಲ್ಲೂ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂಬುದು ಅಪ್ಪಟ ಸತ್ಯ. ತಮ್ಮ ಮಾತೃಭಾಷೆಯಲ್ಲೇ ಅಧ್ಯಯನ ಮಾಡಿದ ಕನ್ನಡಿಗರು, ತಮಿಳರು ಉನ್ನತ ಹುದ್ದೆಗಳನ್ನು ಗಿಟ್ಟಿಸುತ್ತಾರೆ. ಡಾ. ಅಬ್ದುಲ್ ಕಲಾಮ್, ಡಾ. ರಘುನಾಥ ಮಾಶೆಲ್ಕರ್ ಇವರೆಲ್ಲ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣಪಡೆದವರು. ಹಾಗಾಗಿ ಅವರಿಗೆ ವಿದೇಶಕ್ಕೆ ಹೋಗುವುದಕ್ಕಿಂತ ದೇಶದ ಅಭಿವೃದ್ಧಿಯೇ ಮುಖ್ಯವಾಗಿತ್ತು.
ಇಂದು ಇಂಗ್ಲೀಷಿನ ಜ್ಞಾನವಿಲ್ಲದೆ ನೌಕರಿ ಸಾಧ್ಯವಿಲ್ಲ ಅಂದರೆ ಅದಕ್ಕೆ ನಾವೇ ಹೊಣೆ. ಸ್ವಾಭಿಮಾನದ ಅಭಾವದಿಂದಾಗಿ ಅಂತಹ ಪರಿಸ್ಥಿತಿಯನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ಇನ್ನು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವುದು ಹಾಗು ವಿದೇಶದಲ್ಲಿ ಉದ್ಯೋಗ ಗಿಟ್ಟಿಸುವುದೇ ಜೀವನದ ಪರಮ ಸಾರ್ಥಕತೆ ಎಂದು ತಿಳಿದವರಿಗೆ ಆಂಗ್ಲ ವ್ಯಾಮೋಹ ಇರುವುದು ಸಹಜ.
ಮುಕ್ತಿಸಂಗ್ರಾಮದ ಸುವರ್ಣಮಹೋತ್ಸವ ವರ್ಷದಲ್ಲಿ ಇಂತಹ ನಿರ್ಧಾರ ತೆಗೆದುಕೊಂಡಿರುವುದು ನಾಚಿಕೆಯ ಸಂಗತಿ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನಾನಿಗಳನ್ನು ಅವಮಾನಿಸುತ್ತಿರುವುದು ಇನ್ನೂ ನಾಚಿಕೆಗೇಡು.