Monday, August 15, 2011

ಸ್ಪೂರ್ತಿಯ ಸೆಲೆ

ಅಖಿಲಾ ಕುರಂದವಾಡ

ಬರೆಯಲು ಕುಳಿತೆ ನಾನೊಂದು ಕವಿತೆ
ವಿಚಾರದ ಸುಳಿವಿಲ್ಲ
ಪದಪಂಕ್ತಿಯ ನೆರಳಿಲ್ಲ
ಯೋಚಿಸುತ್ತಲೇ ಕಳೆದೆ ಒಂದೆರಡು ಗಂಟೆ
ಹಿಡಿತವಿಲ್ಲದ ಮನಕೆ
ಹಾಕುವುದೆಂತು ಕಡಿವಾಣ
ಓಡುತಿದೆ ಮರ್ಕಟದಂತೆ
ಕೈಗೆಟುಕದೆ ಎತ್ತಬಂದತ್ತ
ಬರೆಯುವ ಚಪಲ ಒಂದೆಡೆ
ಕರ್ತವ್ಯದ ಸೆಲೆತ ಇನ್ನೊಂದೆಡೆ
ಮನದುಯ್ಯಾಲೆಯಲಿ
ಕುಳಿತೇ ಇದ್ದೆ ಛಲದಂಕ ಮಲ್ಲನಂತೆ
ಸೂರ್ಯ ಕಿರಣಗಳ ನೆರವಿಲ್ಲ
ಚಂದ್ರ-ತಾರೆಗಳ ಆಸರೆ ಇಲ್ಲ
ಹೊಳಪನ್ನು ಅರಸುತ್ತ ಕಳೆದೆ
ಮತ್ತಷ್ಟು ಘಳಿಗೆ
ಮೇಘರಾಜನ ಆರ್ಭಟವು
ಮಿಂಚಂತೆ ಸೇರಿ ಬಡಿದೆಬ್ಬಿಸಿತು
ಸ್ಪೂರ್ತಿಯ ಸೆಲೆಯನ್ನು
ಮನದ ಮಂದಿರದಲ್ಲಿ
ಬರೆಯುವ ಕೈಗಳು
ಸೆಣಸುವ ಮನವು
ಅಣಿಗೊಂಡು ಬರೆಯತೊದಗಿದೆ
ಅಳುಕದೆ ಹಲವು ಸಾಲುಗಳನ್ನು

No comments:

Post a Comment