Saturday, April 23, 2011

ಅಣ್ಣಾ ಹಜಾರೆಗೆ ಜೈ

ವಸಂತ ಪ್ರಕಾಶ


ಹಳ್ಳಿ ಹಳ್ಳಿಗಳ ಉದ್ದಾರ ಎಂದು
ಭಾಷಣ ಬಿಗಿಯುವ ಜಾಗ ಅದು ದಿಲ್ಲಿ
ಮೂಕ ಪ್ರೇಕ್ಷಕನಾಗಿ ನಿಂತಿರುವುದು ಅದ ಕಂಡು
ಹನಿ ಮಾತ್ರ ತೊಟ್ಟಿಕ್ಕುವ ನಲ್ಲಿ

ಅಂದು ಗಾಂಧಿ ಕಂಡ ಕನಸು
ಹಳ್ಳಿ ಉದ್ದಾರದಿಂದಲೇ ರಾಮ ಆಜ್ಯ
ಕೋಟಿ ಕೋಟಿ ಕೈಯೊಳಗಿದ್ದರೂ ಕಾಸು
ಅಧಿಕಾರದಾಹದವರ ಮುಗಿಯದ ವ್ಯಾಜ್ಯ

ತನ್ನ ಹಿತವ ಮರೆತು ಪರಹಿತವ ಬಯಸಿತು
ಬಾಬುರಾವ್ ಹಜಾರೆಯವರು ಇನ್ನೊಂದು ಗಾಂಧಿ ನಿಜ
ಗಾಂಧಿ ಕನಸನ್ನು ತಲೆ ಮೇಲೆ ಹೊತ್ತು
ರಾಳೆಗಣ ಶಿದ್ದಿಯಿಂದ ಬಿತ್ತಿದರು ಬೀಜ

ಭ್ರಷ್ಟಚಾರ ಓಡಿಸಲು, ಹೆಜ್ಜೆಗೆ ಹೆಜ್ಜೆ ಸೇರಿಸಲು
ಕಟ್ಟಿಕೊಳ್ಳೊಣ ನಾವು ನಮ್ಮ ಕಾಲಿಗೆ ಗೆಜ್ಜೆ
ವಿಶ್ವದುದ್ದಕು ಭಾರತೀಯ ದೀಪ ಪ್ರಜ್ವಲಿಸಲು
ಮಾಡೋಣ ಶಾಂತಿಮಂತ್ರದೀ ಪೂಜೆ

ಹೆಂಡತಿಗೆ ಸಹಾಯ ಮಾಡಲು ಹಿಂಜರಿಕೆ ಏಕೆ?

ಶರ್ವಾಣಿ ಭಟ್

ಉಜ್ಜ್ವಲಾ ತುಂಬ ಸುಸ್ತಾಗಿದ್ದಾಳೆ. ಏಳು ತಿಂಗಳ ಗರ್ಭಿಣಿ. ಆಫೀಸಿನಲ್ಲಿ ನಿಂತು ಮಾಡುವ ಕೆಲಸ. ಕಾಲು ಸೋತು ಹೋಗಿದೆ. ಹೇಗೋ ಮನೆ ಸೇರಿ ಧೊಪ್ಪೆಂದು ಸೋಫಾದ ಮೇಲೆ ಕುಳಿತು ಹಿಂದಕ್ಕೆ ತಲೆಬಾಗಿ ಕಾಲನ್ನು ಚಾಚಿ ಕಣ್ಮುಚ್ಚಿದಳು. ಯಾರೋ ತನ್ನ ಕಾಲನ್ನು ಸ್ಪರ್ಶಿಸಿದಂತಾದಾಗ ಕಣ್ಬಿಟ್ಟಳು. ಮತ್ತಾರೂ ಅಲ್ಲ ಅವಳ ಗಂಡ ಸತೀಶ್ ಅವಳ ಕಾಲನ್ನು ತನ್ನ ತೊಡೆಯಮೇಲಿರಿಸಿಕೊಂಡು ಮೃದುವಾಗಿ ಒತ್ತುತ್ತಿದ್ದಾನೆ. ಅವಳಿಗೆ ಅದು ಅನಿರೀಕ್ಷಿತವಾಗಿತ್ತು. ಬೇಡವೆನ್ನುವ ಮನಸ್ಸಿದ್ದರೂ ಅದು ಕೊಡುತ್ತಿರುವ ಹಿತಾನುಭವ ಅವಳನ್ನು ತಡೆದಿತ್ತು. ಮುಖದಲ್ಲಿ ಕೃತಜ್ಞತಾ ಭಾವ. ಪತ್ನಿಯ ಮೊಗವನ್ನೇ ವೀಕ್ಷಿಸುತ್ತಿದ್ದ ಸತೀಶನ ಮುಖದಲ್ಲೂ ಅದೇನೋ ಸಮಾಧಾನ.

ಸತೀಶನಿಗಿರುವ ಧೈರ್ಯ ಎಷ್ಟು ಜನ ಗಂಡಸರಿಗಿದೆ? ಅಷ್ಟೇ ಅಲ್ಲ ಇಬ್ಬರೇ ಇರುವಾಗ ಈ ಧೈರ್ಯವನ್ನು ತೋರಿದ ಸತೀಶ ತನ್ನ ತಂದೆ ತಾಯಿಯರು ಮನೆಯಲ್ಲಿಯೇ ಇದ್ದರೆ ಅದನ್ನು ತೋರುತ್ತಿದ್ದನೆ? ಹೀಗೆ ನೂರಾರು ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಬಹುದು. ಹೌದು. ಅನೇಕ ಗಂಡಸರಿಗೆ ಪತ್ನಿಯ ಕಷ್ಟವನ್ನು ಹಂಚಿಕೊಳ್ಳಬೇಕು, ಅವಳ ಕಷ್ಟದಲ್ಲಿ ತಾನು ಪಾಲುದಾರನಾಗಬೇಕು, ಅವಳಿಗೆ ತಾನು ಸಹಾಯ ಮಾಡಬೇಕು ಎಂಬ ಮನಸ್ಸಿರುತ್ತದೆ. ಅದರೆ ಹಲವು ಕಾರಣಗಳಿಂದಾಗಿ ಅದು ಹೊರಗೆ ಬರುವುದೇ ಇಲ್ಲ. ಬಂದರೂ ಬೆಡ್ ರೂಮಿನಿಂದಾಚೆಯಂತೂ ಬರುವುದು ತೀರ ಅಪರೂಪ.

ಇದಕ್ಕೆ ಮುಖ್ಯ ಕಾರಣ ನಮ್ಮ ಸಾಮಾಜಿಕ ವ್ಯವಸ್ಥೆ. ಪತಿ ಹೇಳಿದ್ದನ್ನು ಪಾಲಿಸುವ, ಪತಿಯ ಸೇವೆಯೇ ಪರಮ ಕರ್ತವ್ಯ ಎಂದು ಭಾವಿಸುವ ಹೆಣ್ಣನ್ನು ’ಪತಿವ್ರತೆ’ಯೆಂದು ಹೊಗಳಿದರೆ ಹೆಂಡತಿಯ ಮಾತನ್ನು ಕೇಳುವ, ಅವಳಿಗೆ ಕೆಲಸ ಮಾಡಿಕೊಡುವ ಗಂಡನನ್ನು ’ಅಮ್ಮಾವ್ರ ಗಂಡ’ ಎಂದು ಅಪಹಾಸ್ಯ ಮಾಡುತ್ತದೆ. ಗಂಡಸುತನವಿಲ್ಲದ ಪುಕ್ಕಲ ಎಂಬುದಾಗಿ ಅಂತಹ ಗಂಡನನ್ನು ನೋಡಿದರೆ, ಗಂಡನ ತಲೆಯ ಮೇಲೆ ಹತ್ತಿ ಕುಳಿತಿರುವ ಗಂಡುಬೀರಿಯೆಂಬಂತೆ ಹೆಂಡತಿಯನ್ನು ನೋಡುತ್ತಾರೆ. ನಮ್ಮ ಸಿನಿಮಾಗಳನ್ನೇ ನೋಡಿ ಗಂಡನಿಗೆ ವಿಧೇಯಳಾಗಿರುವ ಹೆಂಡತಿಯ ಸಿನಿಮಾ ಆದರೆ ಅದು ’ಭಕ್ತಿಪ್ರಧಾನ ಸಾಂಸಾರಿಕ ಚಿತ್ರ’. ಹೆಂಡತಿಗೆ ಹೆದರುವ ಗಂಡನ ಚಲನಚಿತ್ರಕ್ಕೆ ’ಹಾಸ್ಯ ಪ್ರಧಾನ’ ಎಂಬ ತಲೆಬರಹ ! ನಮ್ಮ ಪುರಾಣ ಕಥೆಗಳೆಲ್ಲ ಸೀತೆ, ಮಂಡೋದರಿ, ಅನಸೂಯಾ, ಸಾವಿತ್ರಿ ಇವರೆಲ್ಲ ಪತಿಸೇವೆಯಿಂದಲೇ ಸಾಯುಜ್ಯ ಹೊಂದಿದರು ಎಂಬುದಾಗಿ ಸಾರುತ್ತ ಪತಿಯಿಂದ ಸೇವೆ ಮಾಡಿಸಿಕೊಳ್ಳುವ ಸ್ತ್ರೀಯರು ನರಕಕ್ಕೆ ಹೋಗುವರು ಎಂಬುದಾಗಿ ಹೇಳುತ್ತವೆ. ಶೇಷಶಾಯಿ ನಾರಾಯಣನ ಕಾಲನ್ನು ಒತ್ತುತ್ತಿರುವ ಲಕ್ಷ್ಮೀದೇವಿಯ ಚಿತ್ರ ಆದರ್ಶರೂಪವಾಗಿ ನಮ್ಮ ಮನೆಯ ಗೋಡೆಯ ಮೇಲೆ ರಾರಾಜಿಸುತ್ತದೆ. ನಮ್ಮ ವಿವಾಹಪದ್ಧತಿ, ಕುಟುಂಬ ಪದ್ಧತಿಗಳೆಲ್ಲ ಇಂತಹ ಭಾವನೆಯ ಮೇಲೇ ಆಧಾರಿತವಾಗಿವೆ. ಹಾಗಾಗಿ ಸಮಾಜ ಹೆಂಡತಿಯ ’ಸೇವೆ’ ಮಾಡುವ ಗಂಡನನ್ನು ಒಪ್ಪಿಕೊಳ್ಳದು. ಇದು ಗಂಡಸರ ಹಿಂಜರಿಕೆಗೆ ಮೊದಲ ಕಾರಣ.

’ಹೆಂಗಸರ ಬುದ್ಧಿ ಮೊಳಕಾಲ ಕೆಳಗೆ’ ಎನ್ನುವ ಗಾದೆ ಮಾತನ್ನು ಯಾರೋ ಮಾಡಿಟ್ಟುಬಿಟ್ಟಿದ್ದಾರೆ. ಅದು ಮನುವಿನ ’ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂಬ ಮಾತನ್ನೇ ಪುಷ್ಟಿಗೊಳಿಸುವಂಥದ್ದು. ಮನೆಯನ್ನು ಮುನ್ನಡೆಸುವ ಶಕ್ತಿ ಹೆಣ್ಣಿಗಿಲ್ಲ ಎಂಬುದಾಗಿ ಇಂದಿಗೂ ಅನೇಕರು ಭಾವಿಸುತ್ತಾರೆ. ಹೆಣ್ಣಿಗೆ ಅಧಿಕಾರ ಕೊಟ್ಟರೆ ಅದರ ದುರುಪಯೋಗವಾಗುತ್ತದೆ ಎಂಬುದಾಗಿ ನಂಬಿದವರಿದ್ದಾರೆ. ಗಂಡಿಗಾದರೆ ತಾನು ಹುಟ್ಟಿದ ಮನೆಯೇ ಕೊನೆತನಕ ಶಾಶ್ವತ. ಹೆಣ್ಣಿಗೆ ತನ್ನ ತವರು ಮನೆಯನ್ನು ತೊರೆದು ಗಂಡನ ಮನೆಯನ್ನು ತನ್ನ ಮನೆಯೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ. ಹೀಗಿರುವಾಗ ತಾನು ಹೆಂಡತಿಯ ಮಾತನ್ನು ಕೇಳಿದರೆ ಅವಳು ತನ್ನ ತವರುಮನೆಯ ಹಿತವನ್ನೇ ಸಾಧಿಸಬಹುದು ಎಂಬ ಅಳುಕು ಕೆಲವು ಗಂಡಸರಿಗಿರುತ್ತದೆ. ತಾನು ಮೃದುವಾದರೆ ಅವಳು ತನ್ನನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ತನ್ನ ತಂದೆ ತಾಯಿಯರಿಗೂ ಅಕ್ಕ ತಂಗಿಯರಿಗೂ ಅನ್ಯಾಯ ಮಾಡಬಹುದು ಎಂಬ ಸಣ್ಣ ಹೆದರಿಕೆ ಹೊಸದಾಗಿ ಮದುವೆಯಾದ ಎಲ್ಲ ಗಂಡಸರಲ್ಲೂ ಇರುತ್ತದೆ. ಅಂತಹ ಸಾಕಷ್ಟು ಘಟನೆಗಳು ನಡೆದೂ ಇವೆ. ’ಮದುವೆಯಾಗಿ ಒಂದು ವರುಷದಾಗ ನನ್ ಮಗಾ ಬೇರೆ ಆದ’ ಎಂಬ ಜಾನಪದ ಗೀತೆಯನ್ನು ನೀವು ಕೇಳಿರಬಹುದು. ಹೆಂಡತಿಯ ಮಾತು ಕೇಳಿ ತಂದೆ ತಾಯಿಯರನ್ನು ಕಡೆಗಣಿಸಿದ ಎಷ್ಟೋ ಮಕ್ಕಳು ಇದ್ದಾರೆ. ಇದಕ್ಕೆ ಅವನು ಹೆಂಡತಿಗೆ ಕೊಟ್ಟ ಸಲುಗೆಯೇ ಕಾರಣ ಎಂದು ಹೇಳುವವರಿದ್ದಾರೆ. ಇಂತಹ ಉದಾಹರಣೆಗಳನ್ನು ತೋರಿಸಿ ಹೆಂಡತಿಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕು ಎಂದು ಉಪದೇಶಿಸುವವರಿದ್ದಾರೆ. ಇದು ಗಂಡಸರ ಹಿಂಜರಿಕೆಗೆ ಇನ್ನೊಂದು ಕಾರಣ.

ಇಂದು ಸಣ್ಣ ಕುಟುಂಬಗಳಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿಯುವುದನ್ನು ನೋಡಬಹುದು. ಇದು ಪಟ್ಟಣಕ್ಕೆ ಮಾತ್ರ ಸೀಮಿತವಲ್ಲ. ಹಳ್ಳಿಯಲ್ಲಿ ಬಡ ಕೂಲಿಕಾರರ ವರ್ಗದಲ್ಲಿಯೂ ಇದು ಸಾಮಾನ್ಯ. ಗಂಡನ ಕರ್ತವ್ಯವಾದ ಕುಟುಂಬ ಪೋಷಣೆ ಎಂಬ ಜವಾಬ್ದಾರಿಯನ್ನು ಮಹಿಳೆ ಹಂಚಿಕೊಳ್ಳುತ್ತಿದ್ದಾಳೆ. ಆದರೆ ಮಹಿಳೆಯ ಜವಾಬ್ದಾರಿಯಾದ ಅಡುಗೆಮನೆ ನಿರ್ವಹಣೆ, ಕಸಮುಸುರೆಗಳನ್ನು ಹಂಚಿಕೊಳ್ಳಲು ಗಂಡಸರ ಸ್ವಾಭಿಮಾನ ಅಡ್ಡಬರುತ್ತದೆ. ಅದು ತನಗೆ ಸಂಬಂಧಿಸಿದ್ದೇ ಅಲ್ಲ ಎಂಬ ಧೋರಣೆ. ಗಂಡ ತನ್ನ ಕಾಲೊತ್ತಿ ಸೇವೆ ಮಾಡಲಿ ಎಂದು ಯಾವ ಹೆಂಡತಿಯೂ ಬಯಸುವುದಿಲ್ಲ. (ಗಂಡನ ಮೇಲೆ ಅಂತಹ ಅಧಿಕಾರ ಚಲಾಯಿಸುವ ಪತ್ನಿಯರು ಇದ್ದರೂ ಅದು ಬೆರಳೆಣಿಕೆಯಷ್ಟು ಮಾತ್ರ). ಆದರೆ ತಾನು ಬಟ್ಟೆ ತೊಳೆಯುವಾಗ ತನ್ನ ಗಂಡ ಅದನ್ನು ಹರವಲು ಬಂದರೆ, ಪಾತ್ರೆ ತೊಳೆಯುವಾಗ ಅದನ್ನು ಜೋಡಿಸಿಟ್ಟರೆ, ಅಡುಗೆ ಮಾಡುವಾಗ ತರಕಾರಿ ಹೆಚ್ಚಿಕೊಟ್ಟರೆ, ಕಸಗುಡಿಸುವಾಗ ಹರಡಿ ಬಿದ್ದಿರುವ ಸಾಮಾನುಗಳನ್ನೆಲ್ಲ ಸರಿಯಾಗಿ ಜೋಡಿಸಿಕೊಟ್ಟರೆ ಪತ್ನಿಗಾಗುವ ಆನಂದ ಕಡಿಮೆಯಾದದ್ದೆ? ಇಲ್ಲಿ ಗಂಡ ಸಹಾಯಮಾಡುತ್ತಾನೆ ಎನ್ನುವುದರ ಜೊತೆಗೆ ಮನೆಗೆಲಸದಲ್ಲಿ ಅವನು ನೀಡುತ್ತಿರುವ ಸಾಂಗತ್ಯ ಖುಷಿ ನೀಡುತ್ತದೆ. ಅವಳ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ. ಆಫೀಸಿನಿಂದ ಬಳಲಿ ಬಂದಾಗ ಅವನೇನಾದರೂ ಒಂದು ಕಪ್ ಕಾಫಿ ಮಾಡಿಕೊಟ್ಟರೆ ಅದು ಹೇಳತೀರದ ಸಂತೋಷವನ್ನು ನೀಡುತ್ತದೆ. ತನ್ನ ಬಗ್ಗೆ ಅವನು ತೋರುತ್ತಿರುವ ಕಾಳಜಿಯನ್ನು ಗಮನಿಸಿ ಅವಳ ಪ್ರೀತಿ ಹೆಚ್ಚುತ್ತದೆ.

ಹೆಂಡತಿ ಅನಾರೋಗ್ಯದಿಂದ ಬಳಲುತ್ತಿರುವಾಗ ಗಂಡ ಅವಳ ಆರೈಕೆ ಮಾಡಿದರೆ ಅದಕ್ಕೆ ’ಸೇವೆ’ ಎಂಬ ಹೆಸರನ್ನು ಕೊಡಬೇಕಾಗಿಲ್ಲ. ಆ ಹೆಸರು ಅವರಿಗೆ ಮುಜುಗರವನ್ನುಂಟು ಮಾಡೀತು. ಆರೈಕೆ ಮಾಡಲು ಇನ್ನಾರೂ ಇರದಿರುವಾಗ ಅದು ಅವನ ಕರ್ತವ್ಯವಾಗುತ್ತದೆ. ಹೆಂಡತಿಗೆ ತಲೆನೋವು ಬಂದಾಗ ಝಂಡುಬಾಮ್ ಹಚ್ಚಿಕೊಡಲು, ಬೆನ್ನು ನೋವು ಬಂದರೆ ನೋವು ನಿವಾರಕ ಕ್ರೀಮ್ ಹಚ್ಚಿಕೊಡಲು, ಕಾಲು ನೋಯುತ್ತಿದ್ದರೆ ಮಸಾಜ್ ಮಾಡಲು ಗಂಡಸರಿಗೆ ಪೂರ್ವಾಗ್ರಹ ಯಾಕೆ? ಹಿಂಜರಿಕೆ ಯಾಕೆ? ಪ್ರೀತಿ ಇಬ್ಬರನ್ನೂ ಒಂದಾಗಿ ಬೆಸೆದಿರುವಾಗ, ಪ್ರೇಮ ಉಚ್ಚ ನೀಚ ಭಾವವನ್ನು ಮೀರಿ ನಿಂತಾಗ, ಪರಸ್ಪರ ಸರಿಯಾಗಿ ಅರ್ಥಮಾಡಿಕೊಂಡಿರುವಾಗ ಒಬ್ಬರ ಸೇವೆಯನ್ನು ಇನ್ನೊಬ್ಬರು ಮಾಡಿದರೆ ತಪ್ಪೇನು? ಅದು ಮಾನವೀಯ ಧರ್ಮಕ್ಕೆ ವಿರುದ್ಧವಾದದ್ದಂತೂ ಅಲ್ಲ.

ವೇದಗಣಿತ - ಭಾಗ ೩

ಮಹಾಬಲ ಭಟ್

ಸೂತ್ರ: ಏಕನ್ಯೂನೇನ ಪೂರ್ವೇಣ
ಗುಣ್ಯ ಅಥವಾ ಗುಣಕ ಸ್ಥಾನದಲ್ಲಿ ಕೇವಲ ೯ ಎಂಬ ಅಂಕೆಯಿಂದಾದ ಸಂಖ್ಯೆ ಇದ್ದರೆ ಈ ಸೂತ್ರ ವನ್ನು ಉಪಯೋಗಿಸಬಹುದು.
ಉದಾ: ೧೨೩ x ೯೯೯
ವಿಧಾನ: ಗುಣಾಕಾರ ಚಿಹ್ನೆಯ ಎಡಭಾಗದಲ್ಲಿರುವ ಸಂಖ್ಯೆ ಪೂರ್ವ ಸಂಖ್ಯೆ. ಸೂತ್ರ ಹೇಳುವಂತೆ ಅದರಲ್ಲಿ ಒಂದನ್ನು ಕಳೆಯಬೇಕು. ಉದಾ: ೧೨೩-೧=೧೨೨. ಈಗ ಬಂದ ಉತ್ತರದ ಎಲ್ಲ ಅಂಕೆಗಳನ್ನು ಒಂಭತ್ತರಿಂದ ಕಳೆದು ಈ ಅಂಕೆಗಳ ಮುಂದೆ ಬರೆಯುತ್ತಾ ಹೋದರೆ ಆಯಿತು. ಅಂತಿಮ ಉತ್ತರ ಸಿದ್ಧ.
೧೨೩ x ೯೯೯ = (೧೨೩-೧)/(೯೯೯-೧೨೨)
= ೧೨೨/೮೭೭ = ೧೨೨೮೭೭ ಇದೇ ಅಪೇಕ್ಷಿತ ಉತ್ತರ!!
ಉದಾ:(೨): ೩೪೬೧೯೮೪೦೬೭೨ x ೯೯೯೯೯೯೯೯೯೯೯
(೩೪೬೧೯೮೪೦೬೭೨-೧)/(೯೯೯೯೯೯೯೯೯೯೯-೩೪೬೧೯೮೪೦೬೭೧)
= ೩೪೬೧೯೮೪೦೬೭೧ ೬೫೩೮೦೧೫೯೩೨೮
ಇದು ಕ್ಯಾಲ್ಕುಲೇಟರಿಗಿಂತ ಫಾಸ್ಟ್ ಇಲ್ಲವೆ? ಇದನ್ನು ಗಮನಿಸಿ-
೫೭*೯೯ = ೫೭ x (೧೦೦-೧) = ೫೭೦೦-೫೭ (ವಿಭಾಜಕ ನಿಯಮ)
= ೫೬೪೩. ಇದೇ ನಿಯಮವನ್ನು ಸ್ವಲ್ಪ ಪರಿವರ್ತಿಸಿ ಉಪಯೋಗಿಸಲಾಗಿದೆ ಅಷ್ಟೆ!
ಪ್ರಯತ್ನಿಸಿ: ೭೮೯೪೩೨x೯೯೯೯೯೯; ೬೮೯೬೫೪೭೮೩೦x೯೯೯೯೯೯೯೯೯೯; ೬೩x೯೯೯

ವನಿತೆ

ತನ್ನೆಲ್ಲ
ಆಸೆ ಆಕಾಂಕ್ಷೆಗಳನ್ನು
ಬದಿಗಿಟ್ಟು
ನಂದನವನದ
ಏಳ್ಗೆಗಾಗಿ ಒತ್ತುಕೊಟ್ಟು
ಶ್ರಮಿಸಿದಳಾ ವನಿತೆ
ನಾಲ್ಕಾರು ವರ್ಷಗಳಲ್ಲಿ
ನೂರಾರು ಹೂವರಳಿ
ಒಂದನ್ನೂ ಕಿತ್ತುಕೊಳ್ಳಲಾಗದೆ
ನೋಟದಲ್ಲಿಯೇ
ತೃಪ್ತಿಗೊಂಡಳಾ ಪುನೀತೆ

ಅಖಿಲಾ ಕುರಂದವಾಡ

ಹೆಣ್ಣು ಜಗದ ಕಣ್ಣು

ಶೈಲಜಾ ಕಣವಿ

ಅನಾದಿ ಕಾಲದಿಂದಲೂ ಹೆಣ್ಣು ಪೂಜಿಸಲ್ಪಡುತ್ತ ಬಂದಿದ್ದರೂ ನಿಂದನೆಗೂ ಗುರಿಯಾಗಿದ್ದಾಳೆ. ಹಿಂಸೆ ಸಹಿಸಿ ಬೆಂದಿದ್ದಾಳೆ. ಅತ್ಯಾಚಾರ,ಸತ್ವಪರೀಕ್ಷೆ, ಅಗ್ನಿಪರೀಕ್ಷೆಗಳಿಗೆ ಒಳಗಾಗಿದ್ದಾಳೆ.

ತ್ರೇತಾಯುಗದಲ್ಲಿ ಶ್ರೀರಾಮ ಸೀತಾದೇವಿಯನ್ನು ಅಗ್ನಿಪರೀಕ್ಷೆಗೆ ಗುರಿಮಾಡಿದ. ಅದರಲ್ಲಿ ಸಫಲಳಾಗಿ ಬಂದರೂ ಮುಂದೆ ಅಗಸನೊಬ್ಬನ ಮಾತನ್ನು ಕೇಳಿ ಕಳಂಕ ಹೊರಿಸಿ ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ. ಲವಕುಶರನ್ನು ರಾಮ ತನ್ನ ಮಕ್ಕಳೆಂದು ಒಪ್ಪಿದ ಮೇಲೂ ಅವಳು ಮನೆ ಸೇರಲಿಲ್ಲ. ಭೂಮಿತಾಯನ್ನು ಮರೆಹೊಕ್ಕಾಗ ಭೂಮಿ ಬಾಯ್ಬಿರಿದು ತನ್ನಲ್ಲಿ ತನ್ನ ಮಗಳನ್ನು ಅಡಗಿಸಿಕೊಂಡಿತು. ಆಗಿನ ಕಾಲದಲ್ಲಿ (ವಿಚ್ಛೇದನಾವಕಾಶ ಇರಲಿಲ್ಲ!)

ದ್ವಾಪರಯುಗದಲ್ಲಿ ಅರ್ಜುನ ದ್ರೌಪದಿಯನ್ನು ಗೆದ್ದು ತಂದು ತಾಯಿಯ ಮುಂದೆ ಭಿಕ್ಷೆ ತಂದಿದ್ದೇನೆ ಎಂದಾಗ ಐವರೂ ಸಮಪಾಲು ಮಾಡಿಕೊಳ್ಳಿ ಎಂಬ ಆದೇಶ ಬಂತು. ದ್ರೌಪದಿಯ ಆಶಯವನ್ನು ಕೇಳುವ ಔದಾರ್ಯವನ್ನು ಯಾರೂ ತೋರಲಿಲ್ಲ. ಐವರು ಬಲಶಾಲಿ ಪತಿಯರನ್ನು ಹೊಂದಿದ್ದರೂ ತುಂಬಿದ ಸಭೆಯಲ್ಲಿ ಮಾನಕಳೆದುಕೊಳ್ಳುವ ದುರ್ಭರ ಪ್ರಸಂಗ ಅವಳಿಗೆ ಒದಗಿ ಬಂತು.

ಸತ್ಯವ್ರತ ಪರಿಪಾಲನೆಗೆ ಹೆಸರಾದ ಸತ್ಯ ಹರಿಶ್ಚಂದ್ರ ತನ್ನ ಹೆಂಡತಿ ಮಕ್ಕಳನ್ನು ಮಾರಿದ.

ಮಹಿಳೆ, ಸ್ತ್ರೀ, ಹೆಣ್ಣು ಹೆಂಗಸು ಮುಂತಾದ ಅನೇಕ ಶಬ್ದಗಳಿಂದ ನಿರ್ದೇಶಿಸಲ್ಪಡುವ ಅವಳು ಜಗತ್ತಿಗೆಲ್ಲ ತಾಯಿ. ಮಮತೆಯ ಮೂರ್ತಿ. ಸಹನೆ, ತಾಳ್ಮೆ, ಹೊಂದಾಣಿಕೆ ಲಜ್ಜೆ, ನಾಚಿಕೆಯ ಜೊತೆಗೆ ಸ್ವಾಭಿಮಾನದ ಪ್ರತಿಬಿಂಬ.

ತನ್ನ ಮಗು ಹೆಣ್ಣಾಗಲಿ, ಗಂಡಾಗಲಿ ಸಮಭಾವದಿಂದ ಮುದ್ದಿನಿಂದ ಬೆಳೆಸುವಳು. ತನ್ನೆಲ್ಲ ಮಕ್ಕಳನ್ನೂ ಭೇದಭಾವತೋರಿಸದೆ ಪ್ರೀತಿಯಿಂದ ಕಾಣುವಳು. ಬಳ್ಳಿಯ ಕಾಯಿ ಬಳ್ಳಿಗೆ ಭಾರವೆ? ಎಷ್ಟು ಜನ ಮಕ್ಕಳಿದ್ದರೂ ಅವಳಿಗೆ ಬೇಸರವಿಲ್ಲ. ಅವರ ಲಾಲನೆ, ಪಾಲನೆ ಮಾಡಿ ಅನಾರೋಗ್ಯವಾದಾಗ ಆರೈಕೆ ಮಾಡಿ ಬೆಳೆಸುವಳು. ಬಡವಳಾಗಿದ್ದರೂ ಭಿಕ್ಷೆ ಬೇಡಿ ಸಾಕುವಳು. ತಾನು ರೋಗಿಯಾಗಿದ್ದರೂ, ಅಶಕ್ತಳಾಗಿದ್ದರೂ ಜೀವ ತೇದು ಮಕ್ಕಳನ್ನು ಪೋಷಿಸುವಳು. ವಿಧವೆ ಅಥವಾ ವಿಚ್ಛೇದಿತರ ಪಾಡಂತೂ ಹೇಳತೀರದು. ತಾನೇ ತಂದೆಯಾಗಿ ಮಕ್ಕಳ ಜೀವನ ಉಜ್ಜ್ವಲವಾಗಲು ಶ್ರಮಿಸುವಳು. ಇದಕ್ಕೆ ಅವಳು ಯಾವುದೇ ಫಲವನ್ನು ಬಯಸುವುದಿಲ್ಲ. ಬಯಸಿದರೂ ಸಿಗುತ್ತದೆಂದಿಲ್ಲ. ಹೆಣ್ಣು ಮಕ್ಕಳು ಅತ್ತೆಮನೆಯನ್ನು ಸೇರುತ್ತಾರೆ. ಗಂಡುಮಕ್ಕಳು ಮದುವೆಯಾಗಿ ಬೇರೆ ಮನೆ ಮಾಡುತ್ತಾರೆ. ಎಷ್ಟು ಜನ ಗಂಡುಮಕ್ಕಳಿದ್ದರೂ ಅವರಿಗೆ ತಾಯಿ ಒಂದು ಹೊರೆಯಾಗುತ್ತಾಳೆ. ಸರದಿ ಪ್ರಕಾರ ಕೆಲವು ತಿಂಗಳುಗಳ ಕಾಲ ಇಟ್ಟುಕೊಳ್ಳುವ ಏರ್ಪಾಡು ಮಾಡುತ್ತಾರೆ. ಒಬ್ಬನೇ ಮಗನಾದರೆ ಅನಾಥಾಶ್ರಮ ಸೇರಿಸುತ್ತಾನೆ.

ಹೆಣ್ಣು ಹುಟ್ಟಿದ ಮನೆಗೂ ಕೊಟ್ಟ ಮನೆಗೂ ಬೆಳಕಾಗುವಳು. ಅವಳ ಒಳ್ಳೆಯ ನಡೆ ನುಡಿ ವರ್ತನೆಗಳಿಂದ, ಮುಗ್ಧತೆಯಿಂದ ಬೆಳಕು ಚೆಲ್ಲುವಳು. ತಂದೆಯಿಲ್ಲದ ಮಕ್ಕಳನ್ನು ಒಬ್ಬಳು ತಾಯಿ ಸಾಕಬಹುದು. ಆದರೆ ತಾಯಿಯಿಲ್ಲದ ಮಗುವನ್ನು ಸಲಹಲು ಇನ್ನೊಬ್ಬಳು ಹೆಣ್ಣು ಬೇಕು. ಮಲತಾಯಿಯೋ, ಅಜ್ಜಿಯೊ, ದಾದಿಯೊ, ಅಯಾಳೊ, ಚಿಕ್ಕಮ್ಮನೊ, ದೊಡ್ಡಮ್ಮನೊ, ಅತ್ತೆಯೊ ಹೀಗೆ ಯಾವ ಸ್ತ್ರೀರೂಪದಲ್ಲಾದರೂ ಅವಳು ಬೇಕು. ಅವಳು ಮಗುವಿನ ತೊದಲು ನುಡಿಗಳನ್ನು ಕೇಳುತ್ತ, ಕಲಿಸುತ್ತ, ಕಥೆ ಹೇಳುತ್ತ ಬೆಳೆಸುತ್ತಾಳೆ.

’ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಜನನಿಯಿಂದ ಪಾಠ ಕಲಿತ ಜನರು ಧನ್ಯರು’. ಮನೆಯಿಂದ ಶಾಲೆಯನ್ನು ಸೇರಿದಾಗಲೂ ಮೊದಲ ಪಾಠ ಹೇಳಿಕೊಡುವ ಗುರು ಹೆಣ್ಣೇ. ಮಗುವಿನ ಮುಗ್ಧ ಮನಸ್ಸನ್ನು ಅರಿತುಕೊಂಡು ಕಲಿಯಲು ಸಹಕರಿಸುತ್ತಾರೆ.
ಆಸ್ಪತ್ರೆಗೆ ಹೋದರೆ ದಾದಿಯರು ಸೇವೆ ಮಾಡುತ್ತಾರೆ. ಅವರು ಹೆಣ್ಣು. ರೋಗಿ ಹೆಣ್ಣೊ ಗಂಡೊ ಎಂಬ ಭೇದ ಮಾಡದೆ ಶುಶ್ರೂಷೆ ಮಾಡುತ್ತಾರೆ.
ಹೆಣ್ಣು ಮಗಳಾಗಿ, ಅಕ್ಕ, ತಂಗಿ, ಅತ್ತಿಗೆ, ನಾದಿನಿ ಅತ್ತೆ, ಸೊಸೆ, ಅಜ್ಜಿ ಎಲ್ಲ ಹಂತಗಳನ್ನೂ ನಿಭಾಯಿಸುತ್ತಾಳೆ. ’ಗೃಹಿಣೀ ಗೃಹಮುಚ್ಯತೇ’ ಗೃಹಿಣಿಯಿಂದಲೇ ಮನೆ ಬೆಳಗುವುದು. ’ಒಲಿದರೆ ನಾರಿ ಸ್ವರ್ಗಕ್ಕೆ ದಾರಿ, ಮುನಿದರೆ ಮಾರಿ ನರಕಕ್ಕೆ ದಾರಿ’

ಹೆಣ್ಣು ಬಲು ಬೇಗ ಒಲಿದುಬಿಡುತ್ತಾಳೆ. ಜೊತೆಗೆ ಬೇಗನೆ ಮೋಸಹೋಗುತ್ತಾಳೆ. ಗಂಡಸು ತನ್ನ ಕಾರ್ಯಕ್ಕೆ ಹೆಣ್ಣನ್ನು ಬಳಸಿಕೊಳ್ಳುತ್ತಾನೆ.
ಹೆಣ್ಣಿನ ಕಾರಣದಿಂದಲೇ ಕೆಟ್ಟ ಪುರುಷರು ನಾಶವಾದದ್ದನ್ನು ಪುರಾಣಗಳಿಂದ ತಿಳಿದುಕೊಳ್ಳಬಹುದು. ಮಹೀಷಾಸುರನನ್ನು ಕೊಂದ ದುರ್ಗೆ, ರಾವಣನ ನಾಶಕ್ಕೆ ಕಾರಣಳಾದ ಸೀತೆ, ಕೀಚಕನನ್ನು ಕೊಲ್ಲಿಸಿದ ದ್ರೌಪದಿ, ವಿಶ್ವಾಮಿತ್ರನನ್ನು ಕೆಡಿಸಿದ ಮೇನಕೆ ಇವರೆಲ್ಲ ದುಷ್ಟ ಸಂಹಾರಕ್ಕೆ ಕಾರಣೀಕರ್ತರಾದವರು.

ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳಬಲ್ಲದು. ಯಾವ ಮಹಾನ್ ಪುರುಷನೇ ಆಗಿರಲಿ ಅವನು ಒಬ್ಬ ತಾಯಿಯ ಮಗ. ರಾಮ, ಕೃಷ್ಣ, ಬುದ್ಧ, ಬಸವ, ಅಲ್ಲಮ, ಏಸುಕ್ರಿಸ್ತ, ಶಂಕರಾಚಾರ್ಯ, ಶಿವಾಜಿ ಹೀಗೆ ಅನೇಕರು ತಮ್ಮ ತಾಯಿಯ ಹೆಸರನ್ನು ಅಜರಾಮರ ವಾಗಿಸಿದ್ದಾರೆ.

ಸಮಾಜದಲ್ಲಿ ನಡೆಯುವ ಎಲ್ಲ ಒಳಿತು ಕೆಡುಕುಗಳಿಗೂ ಹೆಣ್ಣೇ ಕಾರಣ. ಇಂದಿನ ದಿನಗಳಲ್ಲಿ ಮಹಿಳೆ ತನ್ನ ಮಕ್ಕಳನ್ನೇ ತಿದ್ದಲಾಗದೆ ಅವರ ತಪ್ಪುಗಳನ್ನು ಅಲಕ್ಷಿಸಿ ಅವರ ಅವನತಿಗೆ ಕಾರಣಳಾಗುತ್ತಿದ್ದಾಳೆ. ಅತಿಯಾದ ಮುದ್ದಿನಿಂದ ಅವರ ಜೀವನಶೈಲಿಯನ್ನು ಅಲಕ್ಷಿಸಿ ದೊಡ್ಡ ತಪ್ಪನ್ನು ಮಾಡುತ್ತಿದಾಳೆ. ಇಂದಿನ ಮಹಿಳೆಗೆ ತನ್ನ ಸುಖ ಮುಖ್ಯವಾಗಿದೆ. ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಅವರಿಗೀ ನಾಡಿನ, ಮನೆಯ ಸಂಸ್ಕೃತಿ, ವೇಷಭೂಷಣಗಳ ಬಗ್ಗೆ ತಿಳಿಸಿಕೊಡಬೇಕು. ಗಂಡು ಮಕ್ಕಳಿದ್ದರೆ ಅವರಿಗೆ ಸ್ತ್ರೀವರ್ಗದ ಬಗ್ಗೆ ಗೌರವಾದರಗಳು ಬರುವಂತೆ ಬೆಳೆಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಅತ್ಯಾಚಾರ ಕಡಿಮೆಯಾಗಬಹುದು.

ಮನೋಗತ (ಸಂಪಾದಕೀಯ)

ಮಹಾಬಲ ಭಟ್
ಮತ್ತೆ ಬಂದು ಹೋಯಿತು ಮಾರ್ಚ್ ೮. ಹೆಮ್ಮಕ್ಕಳ ಎದೆಯಲ್ಲಿ ಏನೋ ಮಿಂಚು. ತಮಗಾಗಿಯೂ ಒಂದು ದಿನವಿದೆಯಲ್ಲ ಎಂಬ ಹೊಳಪು. ನಿಜ. ಇತ್ತೀಚೆಗೆ ಮಹಿಳಾ ದಿನಾಚರಣೆ ರಂಗೇರುತ್ತಿದೆ. ಈ ಸಂಭ್ರಮಾಚರಣೆಗೆ ಇದೀಗ ೧೦೦ ವರುಷ. ನೂರು ವರ್ಷಗಳಲ್ಲಿ ಮಹಿಳೆಯ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಯ ಕುರಿತು ಲೇಖನ, ಚರ್ಚೆಗಳು ನಡೆಯುತ್ತಿವೆ. ಕೆಲವರು ಆಧುನಿಕ ಮಹಿಳೆಯನ್ನು ಉತ್ಪ್ರೇಕ್ಷಿಸಿ ಬರೆದರೆ ಇನ್ನು ಕೆಲವರು ಇಂದಿಗೂ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ ಎಂಬ ಋಣಾತ್ಮಕ ಚಿಂತನೆಯನ್ನೇ ತಮ್ಮ ವಿಚಾರದ ಉಸಿರನ್ನಾಗಿಸಿಕೊಳ್ಳುತ್ತಾರೆ. ಇನ್ನು ಭಾಷಣಗಳಲ್ಲಿ ಹೆಂಡತಿಯನ್ನು ಮಾರಿದ ಹರಿಶ್ಚಂದ್ರ, ಪತ್ನಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದ ರಾಮ, ಪತ್ನಿಯನ್ನು ದ್ಯೂತದಲ್ಲಿ ಪಣವಾಗಿರಿಸಿದ ಯುಧಿಷ್ಠಿರ ಇವರೆಲ್ಲ ಟೀಕೆಗೆ ಪಾತ್ರರಾಗಿ ಇಂದಿನ ಪೀಳಿಗೆ ಅವರ ಸಂತತಿಯೇ ಎಂಬಂತೆ ಸಾರಲಾಗುತ್ತದೆ.

ಕಾಲ ಬದಲಾಗಿದೆ, ವಿಚಾರ ಬದಲಾಗಿದೆ, ಮೌಲ್ಯಗಳು ಬದಲಾಗಿವೆ. ಪಾಶ್ಚಾತ್ಯರ ಚಿಂತನೆಯನ್ನೇ ಮೌಲಿಕವೆಂಬಂತೆ ಬಿಂಬಿಸಲಾಗುತ್ತ್ತಿದೆ. ಅದೆಲ್ಲ ಇರಲಿ, ಇಂದು ಮಹಿಳೆಗೆ ಮೇಲೇರಲು ಸಾಕಷ್ಟು ಅವಕಾಶಗಳಿರುವಾಗ ಮತ್ತೆ ’ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದ ಮನುವನ್ನು ಬೈಯುತ್ತ ಕುಳಿತುಕೊಳ್ಳುವುದು ಯಾಕೆ? ರಾಜಧರ್ಮಕ್ಕಿಂತ ಕುಟುಂಬ ಧರ್ಮವೇ ಮುಖ್ಯವಾಗಿರುವ ಈ ಪ್ರಜಾಪ್ರಭುತ್ವದಲ್ಲಿ ಮತ್ತೆ ರಾಮನಿಗೆ ಶಾಪ ಹಾಕುವುದ್ಯಾಕೆ? ಗಂಡನಿಗೆ ಬಡತನ ಬಂತೆಂದರೆ ವಿಚ್ಛೇದನ ಸ್ವೀಕರಿಸುವ ಸ್ವಾತಂತ್ರ್ಯ ಮಹಿಳೆಯರಿಗಿರುವಾಗ ಹರಿಶ್ಚಂದ್ರನನ್ನು ಬಯ್ಯುವುದು ಏಕೆ?
ನನಗೆ ಮಹಿಳಾದಿನ ಬಂತೆಂದರೆ ಗಾರ್ಗಿ, ಮೈತ್ರೇಯಿ, ನೆನಪಾಗುತ್ತಾರೆ. ಗಂಧರ್ವ ಕುಮಾರಿ ಮದಾಲಸಾ ಸ್ಮೃತಿಪಥದಲ್ಲಿ ಹಾದು ಹೋಗುತ್ತಾಳೆ. ದುಷ್ಯಂತ ತನ್ನನ್ನು ತಿರಸ್ಕರಿಸಿದಾಗ ಸೆಟೆದು ನಿಂತ ಶಕುಂತಲೆಯ ನೆನಪಾಗುತ್ತದೆ. ಸ್ತ್ರೀಯರಿಗೆ ಗೌರವ ಕೊಡಬೇಕೆಂಬ ವಿಚಾರವನ್ನು ನಾವು ಪಾಶ್ಚಾತ್ಯರಿಂದ ಕಲಿಯಬೇಕಾದ್ದಿಲ್ಲ. ನಮ್ಮ ಪುರಾತನ ಗ್ರಂಥಗಳಲ್ಲಿ, ವೈವಾಹಿಕ ವಿಧಾನದಲ್ಲಿ ಅವನ್ನೆಲ್ಲ ಹೇಳಲಾಗಿದೆ. ಹಾಗಾದರೆ ತಪ್ಪಿರುವುದು ನಮ್ಮ ಸಂಸ್ಕೃತಿಯಲ್ಲಲ್ಲ. ನಮ್ಮ ವಿಚಾರದಲ್ಲಲ್ಲ. ಆದರೆ ಆಚಾರದಲ್ಲಿ. ದೈಹಿಕ ಬಲವನ್ನು ಹೊಂದಿರುವ ಪುರುಷವರ್ಗ ಅದನ್ನೇ ಅಸ್ತ್ರವಾಗಿರಿಸಿಕೊಂಡು ಸ್ತ್ರೀ ಶೋಷಣೆಗೆ ಮುಂದುವರಿದಿರುವುದು ನಮ್ಮ ಆಚಾರದೋಷ.

ಕೆಲವು ದಿನಾಚರಣೆಗಳು ಅರ್ಥಹೀನ ನಿಜ. ಒಂದು ದಿನದ ಪರಿವರ್ತನೆ ಯಾವ ವ್ಯತ್ಯಾಸವನ್ನೂ ಮಾಡಲಾರದು ಎಂಬುದೂ ಸತ್ಯ. ಆದರೆ ಮಹಿಳಾ ದಿನಾಚರಣೆಯು ಇಂದು ಮಾಧ್ಯಮಗಳ ಕಾರಣದಿಂದ ಹೆಚ್ಚು ಅರ್ಥಪೂರ್ಣವಾಗುತ್ತಿದೆ ಎನ್ನಬಹುದು. ಇದು ನಿಜಕ್ಕೂ ಆವಶ್ಯಕವಾಗಿರುವ ದಿನ. ಈ ನೆಪದಿಂದ ಮಹಿಳೆಯರಲ್ಲಿ ಸ್ವಾಭಿಮಾನ ಮೂಡಿಸುವ ಪ್ರಯತ್ನ ನಡೆಯುತ್ತಿರುವುದು ಸ್ವಾಗತಾರ್ಹ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರೂ ಸಕ್ರಿಯ ಪಾತ್ರ ವಹಿಸಬಹುದು ಎಂಬ ಭಾವ ಪ್ರತಿಯೊಬ್ಬರಲ್ಲೂ ಮೂಡಿದರೆ ಅದು ನಿಜಕ್ಕೂ ಅದ್ಭುತ ಪರಿವರ್ತನೆಯನ್ನು ತರಬಹುದು.

Thursday, April 21, 2011

ಮರ್ಕಟ ಲೋಕದಲ್ಲಿ

ದಿನಾಂಕ ೨೧-೦೪-೨೦೧೧ರ ಸಂಯುಕ್ತ ಕರ್ನಾಟಕದ ಚೇತನ ಪುರವಣಿಯಲ್ಲಿ ’ಮರ್ಕಟ ಲೋಕದಲ್ಲಿ’ ಎಂಬ ಶೀರ್ಷಿಕೆಯಡಿ ನನ್ನ ಒಂದು ಲೇಖನ ಪ್ರಕಟವಾಗಿದೆ. ತಾವೂ ಓದಿ ಪ್ರತಿಕ್ರಿಯಿಸಿ. ಪತ್ರಿಕೆ ದೊರೆಯದವರಿಗಾಗಿ ಲೇಖನದ ಯಥಾವತ್ ಪಾಠ ಇಲ್ಲಿದೆ.

ಮಹಾಬಲ ಭಟ್

ಇತ್ತೀಚೆಗೆ ಪಿ.ಯು.ಸಿ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ವಾರ್ತಾ ಪತ್ರಿಕೆಯನ್ನು ಓದುತ್ತಿರುವಾಗ ಆಘಾತವಾಗುತ್ತಿತ್ತು. ಪ್ರಶ್ನಪತ್ರಿಕೆ ಕಠಿಣವಾಗಿತ್ತೆಂದು ಆತ್ಮಹತ್ಯೆ ಮಾಡಿಕೊಂಡವರು, ತಾನು ಚೆನ್ನಾಗಿ ಬರೆದಿಲ್ಲ ಎಂದು ಜೀವ ತೆಗೆದುಕೊಂಡವರು, ಅನುತ್ತೀರ್ಣನಾಗಿ ಬಿಡುತ್ತೀನೇನೊ ಎಂಬ ಹೆದರಿಕೆಯಿಂದಲೇ ಆತ್ಮಹತ್ಯೆಗೆ ಶರಣು ಹೋದವರು ಹೀಗೆ ಯುವ ಜನಾಂಗ ಆತ್ಮಹತ್ಯೆಯತ್ತ ಹೊರಳುತ್ತಿರುವದನ್ನು ನೋಡಿ ವೇದನೆಯಾಗುತ್ತಿತ್ತು. ಪರೀಕ್ಷೆಯ ಪರಿಣಾಮ ಬಂದಾಗ ಫೇಲಾದೆ ಎಂದು ಸಾಯುವುದು ಸಾಮಾನ್ಯವಾಗಿಬಿಟ್ಟಿದೆ. ಈಗ ಇನ್ನೂ ಮುಂದೆ ಹೋಗಿ ಪರೀಕ್ಷೆ ಮುಗಿದ ತಕ್ಷಣವೇ ಫಲಿತಾಂಶವನ್ನು ಊಹಿಸಿಕೊಂಡು ಜೀವ ಕಳೆದುಕೊಳ್ಳುತ್ತಿದ್ದಾರೆ.
ಆತ್ಮಹತ್ಯೆಗೆ ಕಾರಣ ಆತ್ಮಹೀನತೆಯೇ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಉದ್ವೇಗವನ್ನು ನಿಯಂತ್ರಿಸಲಾರದೇ ಇರುವವರು, ತಮ್ಮ ಮೇಲೆಯೇ ಭರವಸೆಯನ್ನು ಹೊಂದದವರು, ನಿಂದನೆಯನ್ನು ಸಹಿಸಲಾರದವರು.... ಹೀಗೆ ಆತ್ಮಹತ್ಯೆಯತ್ತ ಮುಖ ಮಾಡುವ ವ್ಯಕ್ತಿಗಳ ದೊಡ್ಡ ಪಟ್ಟಿಯೇ ಸಿಗುತ್ತದೆ.
ಇಂತಹ ಪಟ್ಟಿಯಲ್ಲಿ ಹಗಲುಗನಸು ಕಾಣುವವರೂ ಒಬ್ಬರು. ನಮ್ಮ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಮರು "ಸ್ವಪ್ನವನ್ನು ಕಾಣಿರಿ. ಸ್ವಪ್ನ ನೋಡಲಾರದವನು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲಾರ" ಎನ್ನುತ್ತಿದ್ದರು. ಅವರ ಮಾತನ್ನು ಅಕ್ಷರಶ: ಪಾಲಿಸುವ ನಮ್ಮ ಯುವ ಜನತೆ ಇಂದು ಸ್ವಪ್ನ ನೋಡುವುದರಲ್ಲೇ ಕಾಲಕಳೆಯುತ್ತಿದ್ದಾರೆ. ಅದನ್ನು ಸಾಕಾರೀಕರಿಸಲು ಯಾವ ಪ್ರಯತ್ನವೂ ನಡೆಯುವುದಿಲ್ಲ.
ಸ್ವಪ್ನ ಮೂಡುವುದು ನಮ್ಮ ಮನಸ್ಸೆಂಬ ಭಿತ್ತಿಯ ಮೇಲೆ. ರಾತ್ರಿ ಕಣ್ಣು ಮುಚ್ಚಿದ್ದರೂ ಮನಸ್ಸು ಅದನ್ನು ನೋಡುತ್ತದೆ. ಮನಸ್ಸಿನ ಚಿಂತೆ-ಚಿಂತನೆ, ಆಲೋಚನೆ-ವಿಚಾರ, ಸಂಕಲ್ಪ-ವಿಕಲ್ಪ, ದೃಷ್ಟ-ಕಲ್ಪಿತ ಘಟನೆಗಳು, ಭಾವ-ಸ್ವಭಾವ ಇವೇ ಕನಸಿನ ರೂಪದಲ್ಲಿ ಮನೋಭಿತ್ತಿಯಲ್ಲಿ ಮೂಡುತ್ತವೆ ಎಂಬುದು ತತ್ತ್ವಜ್ಞಾನಿಗಳಿಂದ ಹಿಡಿದು ಮನ:ಶಾಸ್ತ್ರಜ್ಞರವರೆಗೆ ಎಲ್ಲರೂ ಒಪ್ಪುವ ವಿಚಾರ. ಮುಂದೊದಗುವ ಶುಭಾಶುಭಗಳನ್ನು ಕನಸುಗಳು ಸೂಚಿಸುತ್ತವೆ ಎಂದು ನಂಬಿದವರೂ ಇದ್ದಾರೆ. ಅದೇನೇ ಇರಲಿ ಇಂತಹ ಕನಸು ಅಪ್ರಯತ್ನವಾಗಿ ಬೀಳುವುದೇ ಹೆಚ್ಚು. ಪ್ರಯತ್ನ ಮಾಡಿ ಅದನ್ನು ಕಾಣಲಾಗದು. ಆದರೆ ಕಲಾಮರು ಹೇಳಿದ್ದು ಈ ರಾತ್ರಿಕನಸಿನ ಬಗ್ಗೆ ಅಲ್ಲ. ನಾನು, ನನ್ನ ಜೀವನ, ನನ್ನ ಸಮಾಜ, ನನ್ನ ದೇಶ ಇವುಗಳ ಬಗ್ಗೆ ಉದಾತ್ತ ಸ್ವಪ್ನ ಕಾಣಿರಿ ಎಂದು. ’ಕನಸು ಎಂದರೆ ನೀವು ನಿದ್ದೆ ಮಾಡುವಾಗ ಕಾಣುವುದಲ್ಲ, ಯಾವುದು ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲವೊ ಅದು ನಿಜವಾದ ಕನಸು’. ಕಲಾಮರು ಹೇಳಿದ್ದು ಇದು. ಹೌದು ಇಂತಹ ಸ್ವಪ್ನವನ್ನು ಕಾಣಬೇಕು. ಸ್ವಪ್ನ ಕಾಣದವ ತನ್ನ ಗುರಿಯನ್ನು ನಿರ್ಧರಿಸಲಾರ. ಯಾರೋ ಕೊಟ್ಟ ಸಲಹೆಯನ್ನೇ ತನ್ನ ಗುರಿಯಾಗಿಸಿಕೊಳ್ಳುತ್ತಾನೆ. ಹಾಗಂತ ಆಕಾಶಕ್ಕೆ ಏಣಿ ಹಾಕುವ ಸ್ವಪ್ನವನ್ನು ಕಾಣುವುದೇ?

ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್|
ಆಭಾಸಮಂ ಸತ್ಯವೆಂದು ಬೆಮಿಸುವುದುಮ್||
ಸೌಭಾಗ್ಯಗಳನರಸಿ ದೌರ್ಭಾಗ್ಯಕೀಡಹುದುಮ್ |
ಅಭಿಶಾಪ ನರಕುಲಕೆ-ಮಂಕುತಿಮ್ಮ ||

ಎಂದು ಡಿ.ವಿ.ಜಿ.ಯವರು ಹೇಳಿದಂತೆ ಸಾಧನೆಗೆ ಮಿತಿಯಿಲ್ಲವೆಂದು ಅಮಿತ ಸಾಧನೆಯ ಕನಸು ಕಾಣುವುದೇ? ನಿಜ, ನಮ್ಮ ಕನಸು ಉನ್ನತವಾಗಿದ್ದರೆ ಗುರಿಯೂ ಉನ್ನತವಾಗಿರುತ್ತದೆ. ನಾವು ಗುರಿಯನ್ನು ನಿರ್ಧರಿಸುವುದಕ್ಕಿಂತ ಮೊದಲು ಕನಸನ್ನು ಕಾಣಬೇಕು. ಕಂಡ ಸ್ವಪ್ನದಲ್ಲಿ ತನಗಿಷ್ಟವಾದುದನ್ನಾರಿಸಿಕೊಳ್ಳಬೇಕು. ಅದಾದ ನಂತರ ಆ ಗುರಿಯ ವಿಷಯದಲ್ಲಿ ಮಾತ್ರ ಸ್ವಪ್ನವನ್ನು ಕಾಣಬೇಕು. ಬೇರೆ ವಿಷಯಗಳು ಮನದಿಂದ ದೂರವಾಗಬೇಕು. ಬಹುಷ: ಸ್ವಪ್ನದಲ್ಲಿ ಕಂಡಿದ್ದನ್ನೇ ಗುರಿಯಾಗಿಸಿಕೊಂಡು, ತನ್ನ ಗುರಿಯನ್ನೇ ಸ್ವಪ್ನದಲ್ಲಿ ಕಂಡು ಸ್ವಪ್ನ-ಗುರಿಗಳ ಸಮನ್ವಯ ಸಾಧಿಸಿದ್ದರಿಂದಲೇ ಕಲಾಮರು ರಾಷ್ಟ್ರಪತಿ ಸ್ಥಾನವನ್ನಲಂಕರಿಸಿದ್ದು. ತಮ್ಮ ಗುರಿಯನ್ನು ಬಿಟ್ಟು ಸುಂದರ ಹುಡುಗಿಯ ಕೈ ಹಿಡಿಯಬೇಕು, ಕೆಲವು ಮಕ್ಕಳಿಗೆ ತಂದೆಯಾಗಬೇಕು ಎಂದೆಲ್ಲ ಕನಸು ಕಂಡಿದ್ದರೆ ಪ್ರಾಯ: ಕಲಾಮರು ಭಾರತದ ಲಲಾಮರಾಗದೇ ಸಂಸಾರದ ಗುಲಾಮರಾಗಿಯೇ ಉಳಿಯುತ್ತಿದ್ದರೇನೋ. ಆದರೆ ಎಲ್ಲರು ಕಲಾಮರಂತೆ ಆಗಲು ಸಾಧ್ಯವೇ?
ನಮ್ಮ ಯುವಕ ಯುವತಿಯರೂ ಸ್ವಪ್ನವನ್ನು ನೋಡುತ್ತಾರೆ. ಆದರೆ ಯಾವ ರೀತಿಯ ಸ್ವಪ್ನ? ಮಧುರ ಸ್ವಪ್ನ! ಬಹು ಜನರ ಸ್ವಪ್ನ ತನ್ನ ವೈಯಕ್ತಿಕ ಬದುಕಿಗೇ ಮೀಸಲು. ಪುಸ್ತಕವನ್ನು ಮುಚ್ಚಿಟ್ಟು ಕುರ್ಚಿಗೆ ತಲೆ ಆನಿಸಿ ಆಕಾಶದತ್ತ ದೃಷ್ಟಿ ಹಾಯಿಸಿದರೆ ಕಣ್ತುಂಬಾ, ಮನಸ್ಸು ತುಂಬಾ ಮಧುರ ಸ್ವಪ್ನಗಳು. ಪ್ರಿಯತಮನೊಂದಿಗೋ ಪ್ರಿಯತಮೆಯೊಂದಿಗೋ ಡಾನ್ಸ್ ಮಾಡಿದಂತೆ, ಮರ ಸುತ್ತಿದಂತೆ, ಸ್ವಿಮ್ಮಿಂಗ್ ಪೂಲ್‌ನಲ್ಲಿ ಜಲಕ್ರೀಡೆಯಾಡಿದಂತೆ ಹೀಗೆಲ್ಲ ಸ್ವಪ್ನಗಳು. ಹದಿಹರೆಯದ ಯುವಕ ಯುವತಿಯರಿಗೇಕೆ ಪ್ರಾಥಮಿಕ ಶಾಲಾ ಮಕ್ಕಳಿಗೂ ಅಂತಹುದೇ ಸ್ವಪ್ನ ಬಿದ್ದರೆ ಆಶ್ಚರ್ಯವೇನಲ್ಲ. ಯಾಕೆಂದರೆ ನಮ್ಮ ಪ್ರಸಾರ ಮಾಧ್ಯಮಗಳು ನಮ್ಮ ವಿಚಾರ ಚಿಂತನೆಗಳ ದಿಕ್ಕನ್ನೇ ಬದಲಿಸಿಬಿಟ್ಟಿವೆ. ಇಂತಹ ಸಂದರ್ಭದಲ್ಲಿ ದೇಶದ ಬಗ್ಗೆ ಅತ್ಯುನ್ನತ ಕನಸು ಕಾಣಲು ಸಮಯವೆಲ್ಲಿ? ನಮ್ಮ ಸುತ್ತಲಿನ ವಾತಾವರಣವೂ ಅದಕ್ಕೆ ಸಹಕರಿಸದು. ಗುಂಡುಗಳ ಅಬ್ಬರದಲ್ಲಿಯೇ ದಿನದೂಡುವ ಕಾಶ್ಮೀರದ ಜನತೆ ಉಗ್ರವಾದಿಗಳ ಮುಖವನ್ನು ಬಿಟ್ಟು ಸುಂದರ ಜೀವನದ ಸ್ವಪ್ನ ಕಾಣುವುದು ಸುಲಭದ ಮಾತಲ್ಲ.
ಸ್ವಪ್ನವನ್ನು ಗುರಿಯಾಗಿಸಿಕೊಳ್ಳದಿದ್ದರೆ ಕಂಡ ಸ್ವಪ್ನ ವ್ಯರ್ಥ. ಗುರಿ ಸ್ಪಷ್ಟವಾಗಿರುವಾಗಲೂ ಕನಸು ವ್ಯರ್ಥ. ಸೈನಿಕನೊಬ್ಬ ಸಮರಾಂಗಣಕ್ಕೆ ಹೊರಡುವ ಮುನ್ನ ತಾನು ವೈರಿ ಸೈನಿಕರನ್ನು ಕೊಚ್ಚಿಹಾಕಿದಂತೆ, ಪರಮವೀರಚಕ್ರ ಪ್ರಶಸ್ತಿಯನ್ನು ಪಡೆದಂತೆ ಕನಸನ್ನು ಕಂಡರೆ ತಪ್ಪಲ್ಲ. ಆದರೆ ಅದೇ ಕನಸನ್ನು ಯುದ್ಧರಂಗದಲ್ಲಿ ಶತ್ರು ಸೈನಿಕರು ಎದುರಾಗಿರುವಾಗ ಕಾಣುತ್ತ ನಿಂತರೆ...? ಇಂಜಿನಿಯರ್ ವಿದ್ಯಾರ್ಥಿಯೊಬ್ಬ ವೈದ್ಯಕೀಯಶಾಸ್ತ್ರದಲ್ಲಿ ನೊಬೆಲ್ ಬಹುಮಾನವನ್ನು ಪಡೆದಂತೆ ಕನಸನ್ನು ಕಂಡರೆ...?!
ಇಂತಹ ವ್ಯರ್ಥ ಸ್ವಪ್ನಲೋಕದಲ್ಲಿ ವಿಹಾರಮಾಡುವುದು ಇಂದಿನ ಯುವಜನತೆಯಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಓದುವ ಸಮಯದಲ್ಲಿ ಸ್ವಪ್ನಲೋಕದಲ್ಲಿ ವಿಹಾರಮಾಡುತ್ತ ಕುಳಿತರೆ ಫಲಿತಾಂಶ ಶೂನ್ಯವಾಗದೆ ಮತ್ತಿನ್ನೇನು ಆಗಲು ಸಾಧ್ಯ? ತಮ್ಮ ಗುರಿ ಹಾಗೂ ಸ್ವಪ್ನಗಳ ಮಧ್ಯೆ ಸಮನ್ವಯ ಸಾಧಿಸುವಲ್ಲಿ ನಮ್ಮ ಯುವಜನತೆ ಯಶಸ್ವಿಯಾಗುತ್ತಿಲ್ಲ. ಅದುವೇ ಆತ್ಮಹತ್ಯೆಗೆ ಕಾರಣ. ತಮ್ಮ ಸ್ವಪ್ನ ಸಾಕರಗೊಳ್ಳದಿರುವಾಗ ತಿರುಕನೋರ್ವನೂರಮುಂದೆ....... ಎಂಬಂತೆ ನಿರಾಶರಾಗಿ ಆತ್ಮಹತ್ಯೆಗೆ ಶರಣು ಹೋಗುತ್ತಾರೆ.
ಅನುತ್ತೀರ್ಣರಾದಾಗ ಅವರು ಸಮಾಜದಲ್ಲಿ ಎದುರಿಸಬೇಕಾದ ಅವಮಾನದ ಕಲ್ಪನೆಯೂ ಅವರ ಆತ್ಮಹತ್ಯೆಗೆ ಕಾರಣವಾಗಿರಬಹುದು. ಇಲ್ಲಿ ತಂದೆ ತಾಯಿಯರ ಪಾತ್ರ ಮಹತ್ತ್ವದ್ದು. ಅನುತ್ತೀರ್ಣರಾದ ತಮ್ಮ ಮಕ್ಕಳನ್ನು ಮೂದಲಿಸದೆ ಅವರಲ್ಲಿ ಧೈರ್ಯತುಂಬಿ ಪರೀಕ್ಷೆಯ ಪರಿಣಾಮವೇ ಜೀವನದ ನಿರ್ಧಾರಕ ಅಂಶವಲ್ಲ ಎಂಬುದನ್ನು ಮನವರಿಕೆ ಮಾಡಿ ಕೊಡಬೇಕು. ಆಗ ಅವರಲ್ಲಿ ಆತ್ಮಸ್ಥೈರ್ಯ ಮೂಡಿ ಮುಂದಿನ ಹೆಜ್ಜೆಯನ್ನು ಯಶಸ್ವಿಯಾಗಿ ಇಡಲು ಸಾಧ್ಯ.

Friday, April 8, 2011

ಸಂಸ್ಕೃತದಲ್ಲಿ ಹಾಸ್ಯ

- ಮಹಾಬಲ ಭಟ್, ಗೋವಾ.೦೯೮೬೦೦೬೦೩೭೩

ಇದೇನ್ ಸ್ವಾಮಿ ದೇವಭಾಷೆಯಲ್ಲೂ ಹಾಸ್ಯ ಮಾಡಲಿಕ್ ಬರ‍್ತದಾ ಎಂದು ಹುಬ್ಬೇರಿಸಬೇಡಿ. ನವರಸಗಳಲ್ಲಿ ಹಾಸ್ಯವೂ ಒಂದು ತಾನೆ? ಸಂಸ್ಕೃತಭಾಷೆ ನವರಸ ಭರಿತವಾದದ್ದರಿಂದ ಇಲ್ಲಿ ಹಾಸ್ಯವೂ ಇರಲೇಬೇಕು. ಜನಸಾಮಾನ್ಯರಿಗೂ ವಿನೋದವನ್ನು ನೀಡುವ ಈ ರಸವನ್ನು ಹೀರುವುದೆಂದರೆ ಎಲ್ಲರಿಗೂ ಹಿಗ್ಗು. ಸಂಸ್ಕೃತದಲ್ಲಿ ಅನೇಕ ಹಾಸ್ಯ ಶ್ಲೋಕಗಳಿವೆ. ಆದರೆ ಅವುಗಳಲ್ಲಿ ಮೇಲ್ನೋಟಕ್ಕೇ ಹಾಸ್ಯ ಗೋಚರವಾಗುತ್ತದೆಂದಿಲ್ಲ. ಕೆಲವೊಂದು ಶ್ಲೋಕಗಳ ಮರ್ಮ ಭಾಷಾಂತರಕ್ಕೆ ನಿಲುಕಲಾರದು. ಆದರೂ ಕೆಲವನ್ನು ಆರಿಸಿ ಉದಾಹರಿಸಿ, ಭಾಷಾಂತರಿಸಿ, ನಿಮ್ಮ ಮುಂದಿರಿಸುವ ಪ್ರಯತ್ನ ಮಾಡ್ತೇನೆ. ಈ ಶ್ಲೋಕಗಳಲ್ಲಿ ಕೇವಲ ಮನಕ್ಕೆ ಮುದನೀಡುವ ಹಾಸ್ಯ ಒಂದೇ ಅಲ್ಲದೆ ಚಿಂತನೆಯ ಕಿಚ್ಚು ಹಚ್ಚುವ ವಿಡಂಬನೆಯೂ ಸೇರಿದೆ.

ನನ್ನ ಲೇಖನವನ್ನು ಎಲ್ಲರಿಗೂ ಪ್ರಿಯವಾದ ವಿವಾಹದೊಂದಿಗೇ ಆರಂಭಿಸುತ್ತೇನೆ. ಇದು ಮನುಷ್ಯರ ವಿವಾಹದ ಕತೆಯಲ್ಲ, ಒಂಟೆಗಳ ವಿವಾಹದ ಕಥೆ.

ಉಷ್ಟ್ರಾಣಾಂ ಚ ವಿವಾಹೇಷು ಗೀತಂ ಗಾಯಂತಿ ಗರ್ದಭಾ:|
ಪರಸ್ಪರಂ ಪ್ರಶಂಸಂತಿ ಅಹೋರೂಪಮಹೋ ಧ್ವನಿ:||

ಒಂಟೆಗಳ ಮದುವೆಯಲ್ಲಿ ಕತ್ತೆಗಳ ಹಾಡಂತೆ. ಕತ್ತೆ ಒಂಟೆಯ ನೋಡಿ ಹಾಡಿತು- ’ಹಾ ಎಂಥಾರೂಪ!’ ಕತ್ತೆಯ ಧ್ವನಿ ಕೇಳಿ ಒಂಟೆ ಹೇಳಿತು, ’ಆಹಾ! ಎಂಥ(ಸುಮಧುರ) ಧ್ವನಿ !!’ ಹೇಗಿದೆ ಪರಸ್ಪರ ಪ್ರಶಂಸೆ?. ಮದುವೆ ವಿಷಯ ಬಂದಾಗ ಅಳಿಯನ ವಿಷ್ಯಾನೂ ಮಾತಾಡ್ಲೇ ಬೇಕು. ಅಳಿಯನ್ನ ಹತ್ತನೇ ಗ್ರಹ ಅಂತ ಕರೀತಾರೆ ಅಂತ ನಿಮಗೆಲ್ಲ ಗೊತ್ತು. ಆದರೆ ಈ ಗ್ರಹದ ವೈಶಿಷ್ಟ್ಯ ಗೊತ್ತೆ?

ಸದಾ ದುಷ್ಟ: ಸದಾ ರುಷ್ಟ: ಸದಾ ಪೂಜಾಮಪೇಕ್ಷತೇ|
ಕನ್ಯಾರಾಶಿ ಸ್ಥಿತೋ ನಿತ್ಯಂ ಜಾಮಾತಾ ದಶಮೋ ಗ್ರಹಃ||

ನವಗ್ರಹಗಳಲ್ಲಿ ಎಲ್ಲವೂ ಯಾವಾಗಲೂ ದುಷ್ಟವಲ. ಆದರೆ ಇವನು ಮಾತ್ರ ಸದಾ ದುಷ್ಟ. ಉಳಿದ ಗ್ರಹಗಳು ಕೆಲವು ಸಂದರ್ಭಗಳಲ್ಲಿ ಮಾತ್ರ ಸಿಟ್ಟಾದರೆ ಇವನು ಮಾತ್ರ ಯಾವಾಗ ಕೋಪಿಷ್ಟ. ಉಳಿದ ಗ್ರಹಗಳು ಯಾವಾಗಲೂ ಪೂಜೆಯನ್ನು ಅಪೇಕ್ಷಿಸುವುದಿಲ್ಲ. ಆದರೆ ಇವನಿಗೆ ಮಾತ್ರ ಸದಾ ಪೂಜೆ ಬೇಕು. ಬಾಕಿ ಗ್ರಹಗಳು ರಾಶಿಯಿಂದ ರಾಶಿಗೆ ಚಲಿಸಿದರೆ ಈ ಗ್ರಹಮಾತ್ರ ’ಕನ್ಯಾ’ ರಾಶಿಯಲ್ಲೇ ನಿಶ್ಚಲ. ’ಅಳಿಯ ಮನೆ ತೊಳೆಯ’ ಅಲ್ಲವೆ?.

ಮುಖ ತೊಳೆದ ಮೇಲೆ ನಾವು ದೇವರಿಗೆ ಕೈ ಮುಗೀತೇವೆ. ನಾನಂತೂ ಗಣಪತಿಗೆ ಕೈ ಮುಗೀತೇನೆ. ಅಲ್ಲ ಮಾರಾಯ್ರೇ ಈ ದೇವರು ಗಣೇಶ ಬೆಕ್ಕಿಗೆ ಕೈ ಮುಗೀತಾನಂತೆ ಯಾಕೆ ಗೊತ್ತಾ?

ಗಣೇಶ: ಸ್ತೌತಿ ಮಾರ್ಜಾರಂ ಸ್ವವಾಹಸ್ಯಾಭಿರಕ್ಷಣೇ|

ಗೊತ್ತಾಗ್ಲಿಲ್ವಾ? ಅವನ ವಾಹನ ಇಲಿ ಅಲ್ವೇನ್ರಿ! ಅದರ ರಕ್ಷಣೆ ಆಗ ಬೇಕು ಅಂತಾದರೆ ಬೆಕ್ಕಿಗೆ ಶರಣಾಗಬೇಕು ತಾನೆ?. ನಮ್ಮ ಜನ ದೇವ್ರನ್ನೂ ತಗೊಂಡೇ ವಿನೋದ ಮಾಡ್ತಾರೆ ನೋಡಿ. ನೀವು ಲಕ್ಷ್ಮೀದೇವಿ ಚಿತ್ರ ನೋಡಿದ್ದೀರಿ ತಾನೆ?. ಅವಳಿರೋದು ಎಲ್ಲಿ? ಕಮಲದ ಹೂವಿನ ಮೇಲೆ, ಶಿವ ಇರೋದೆಲ್ಲಿ? ಹಿಮದ ಆಲಯದಲಿ, ವಿಷ್ಣು ಮಲಗೋದೆಲ್ಲಿ? ಕ್ಷೀರಸಾಗರದಲಿ. ಇವರೆಲ್ಲ ಯಾಕೆ ನೆಲದ ಮೇಲೆ ಹಾಸಿಗೆ ಹಾಸಿ ಮಲಗೋದಿಲ್ಲ ಗೊತ್ತಾ?.


ಕಮಲೇ ಕಮಲಾ ಶೇತೇ ಹರ: ಶೇತೇ ಹಿಮಾಲಯೇ
ಕ್ಷೀರಾಬ್ದೌ ಚ ಹರಿ: ಶೇತೇ ಮನ್ಯೇ ಮತ್ಕುಣಶಂಕಯಾ|

ಉತ್ತರ ತಿಳೀಲಿಲ್ವಾ? ತಿಗಣೆಗೆ ಹೆದರಿ ಸ್ವಾಮಿ!. ಹೋಗ್ಲಿ ಬಿಡಿ ದೇವರು ಸಿಟ್ಟಾದಾನು. ಸರಕಾರಿ ಕೆಲಸ ದೇವರ ಕೆಲಸ ಅಂತ ಎಲ್ಲೋ ಓದಿದ್ದ ನೆನಪು. ನಾನು ಒಂದಿನ ದೇವಸ್ಥಾನಕ್ಕೆ ಹೋಗೋ ಬದ್ಲು ಸರಕಾರಿ ಕಛೇರಿಗೆ ಹೋಗ್ಬಿಟ್ಟಿದ್ದೆ. ನಾ ಓದಿದ್ದು ಸುಳ್ಳಲ್ಲ ಅನ್ನಿಸ್ತು ನನಗೆ. ಯಾಕೆಂದ್ರೆ ಅಲ್ಲಿರುವವರೆಲ್ಲ ’ಪ್ರಸಾದ’ .ತಿನ್ನೋದರಲ್ಲಿ ಬಹಳಾ ನಿಪುಣರು. ಅದರೊಳಗೊಬ್ಬ ಗುಮಾಸ್ತ ಅಂತೂ ತಿನ್ನೋದ್ರೊಳಗೆ ಬಹಳಾ ಬುದ್ಧಿವಂತ. ಇವನು ತಾಯಿ ಹೊಟ್ಟೇಲಿರುವಾಗ ಅವಳ ಕರುಳನ್ನೇ ಯಾಕೆ ತಿನ್ನಿಲ್ಲ ಅಂತ ಆಶ್ಚರ್ಯ ಆಯ್ತು. ಛೆ! ತಾಯಿಗಿಂತ ದೇವರಿಲ್ಲ ಅಲ್ವೆ? ಅಲ್ಲಲ್ಲ.... ಅದಕ್ಕಾಗಿ ಅಲ್ಲ....

ಕಾಯಸ್ಥೇನೋದರಸ್ಥೇನ ಮಾತುರಾಮಿಷಶಂಕಯಾ |
ಆಂತ್ರಾಣಿ ಯನ್ನ ಭುಕ್ತಾನಿ ತತ್ರ ಹೇತುರದಂತತಾ ||

ಆಗ ಅವನಿಗೆ ಹಲ್ಲೆಲ್ಲಿತ್ತು ಸರ್!. ಸುಲಭವಾಗಿ ಧನಸಂಪಾದನೆ ಮಾಡೋ ಇಂಥಾ ಉದ್ಯೋಗ ಇರಬೇಕು ನೋಡಿ. ನಮ್ಮ ಅದೃಷ್ಟ ಬೆಕ್ಕಿನ ಹಾಗೆ ಇರಬೇಕಂತೆ. ಈ ಶ್ಲೋಕ ಹಾಗೂ ಅದಕ್ಕೆ ಪಾ.ವೆಂ. ಆಚಾರ್ಯರು
ಮಾಡಿದ ಸೊಗಸಾದ ಭಾಷಾಂತರ ನೋಡಿ.

ಉದ್ಯೋಗ: ಖಲು ಕರ್ತವ್ಯ: ಫಲಂ ಮಾರ್ಜಾರವದ್ಭವೇತ್ |
ಜನ್ಮಪ್ರಭೃತಿ ಗೌರ್ನಾಸ್ತಿ ಪಯ: ಪಿಬತಿ ನಿತ್ಯಶಃ ||

ಬಿಡದೆ ಸಾಧನೆ ಮಾಡು ಮಾರ್ಜಾಲವನು ನೋಡು;
ಹಸುವ ಸಾಕಿದೆಯೆ ಅದು ನಿತ್ಯ ಕುಡಿಯದೆ ಹಾಲು?..

ಕನ್ನಡದ ರಸಋಷಿ ಡಿ.ವಿ.ಗುಂಡಪ್ಪನವರು ಕೃಷ್ಣಾಚಾರ್ಯರೆಂಬ ಸಜ್ಜನ ಮಾಧ್ವರನ್ನು ವ್ಯಾಕರಣ ಕಲಿಯುವುದಕ್ಕಾಗಿ ಆಶ್ರಯಿಸಿದ್ದರಂತೆ. ಅವರು ತನಗೆ ವ್ಯಾಕರಣ ವೇದಾಂತಗಳು ತಲೆಗೆ ಹತ್ತಲಿಲ್ಲ, ಆದರೆ ಕೃಷ್ಣಾಚಾರ್ಯರ ಮನೆಯ ಅಡಿಗೆಯ ರುಚಿ ನಾಲಿಗೆಗೆ ಹತ್ತಿತು ಎಂಬುದನ್ನು ಸಂಸ್ಕೃತ-ಕನ್ನಡಮಿಶ್ರಿತ ಶ್ಲೋಕದಲ್ಲಿ ಹೇಳಿದ ಅಂದವನ್ನು ನೋಡಿ.

ನ ವೇದಾಂತೇ ಗಾಢಾ ನ ಚ ಪರಿಚಿತಂ ಶಬ್ದಶಾಸ್ತ್ರಂ
ನ ವಾ ತರ್ಕೇ ವೇದೇ ನ ಚ ಸರಸತಾ ಕಾವ್ಯನಿವಹೇ |
ವಯಂ ಶ್ರೀಮದ್ಬ್ಯಾಳೀಹುಳಿಪಳದ್ಯಕೊಸಂಬ್ರಿತೊವ್ವೀ
ಹಯಗ್ರೀವಾಂಬೋಡೀಕರಿಗಡುಬುಚಿತ್ರಾನ್ನಚತುರಾ: ||

ಸಾಕು ಮುಗಿಸಿ ಮಾರಾಯ್ರೆ ನಿಮ್ಮ ಪುರಾಣ ಅನ್ನೋದಕ್ಕಿಂತ ಮೊದಲೇ ಮುಗಿಸ್ತೇನೆ ಸ್ವಾಮಿ. ಇಷ್ಟೆಲ್ಲ ಓದ್ಕೊಂಡೂ ನಗ್ದಿದ್ರೆ ನಿಮಗೆ ದೊಡ್ಡ ನಮಸ್ಕಾರ.

Tuesday, April 5, 2011

ಹೊಸ ಚಿಗುರು ಹಳೆ ಬೇರು............

ಲೇಖನ: ಮಹಾಬಲ ಭಟ್


ಋತು ಚಕ್ರ ತಿರುಗುವುದು ಕಾಲನೆದೆ ಮರುಗುವುದು

ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು

ಕ್ಷಿತಿಗರ್ಭ ಧರಿಸುವಳು ಮತ್ತುದಿಸುವುದು ಜೀವ

ಸತತ ಕೃಷಿಯೊ ಪ್ರಕೃತಿ-ಮಂಕುತಿಮ್ಮ


ಪ್ರತಿವರ್ಷವೂ ಶಿಶಿರವಸಂತಗಳು ಪುನರಾವರ್ತನೆಗೊಳ್ಳುತ್ತವೆ. ಪ್ರಕೃತಿಯಲ್ಲಿ ಬದಲಾವಣೆಗಳಾಗುತ್ತವೆ. ಇದು ನಿರಂತರವಾಗಿ ನಡೆದೇ ಇರುತ್ತದೆ. ಪ್ರಕೃತಿಯು ಕ್ಯಾಲೆಂಡರನ್ನು ಅನುಸರಿಸಿ ಬದಲಾಗುವುದಿಲ್ಲ. ಪ್ರಕೃತಿಯ ಪರಿವರ್ತನೆಗನುಗುಣವಾಗಿ ನಾವು ಕ್ಯಾಲೆಂಡರನ್ನು ಮಾಡಿಕೊಳ್ಳುತ್ತೇವೆ. ಕ್ಯಾಲೆಂಡರನ್ನು ಬದಲಾಯಿಸಿಯೇ ಸಂಭ್ರಮಪಡುವ ನಾವು, ಅಂದು ಪ್ರಕೃತಿಯಲ್ಲಿ ಆಗಿರುವ ಬದಲಾವಣೆಯನ್ನು ಗಮನಿಸುವುದಿಲ್ಲ. ಇಂದು ನಾವು ನಮ್ಮ ವ್ಯವಹಾರದಲ್ಲಿ ಅಂತಾರಾಷ್ಟ್ರೀಯ ಪಂಚಾಂಗವನ್ನು ಉಪಯೋಗಿಸುತ್ತೇವೆ. ಧಾರ್ಮಿಕ ಕಾರ್ಯಕ್ರಮಗಳಿಗೆ ನಮ್ಮ ಧಾರ್ಮಿಕ ಪಂಚಾಂಗವನ್ನು ಉಪಯೋಗಿಸುತ್ತೇವೆ. ಭಾರತೀಯ ಧರ್ಮದ ಆಚರಣೆಗಳು ಭಾರತದ ಪ್ರಕೃತಿಯನ್ನವಲಂಬಿಸಿ ಇವೆ. ವಸಂತನ ಆಗಮನವಾದಾಗ ಪ್ರಕೃತಿಯಲ್ಲಿ ಏನೋ ಹೊಸತನವನ್ನು ಕಾಣುತ್ತೇವೆ. ಹಾಗಾಗಿಯೇ ಅವನನ್ನು ಋತುಗಳ ರಾಜನೆನ್ನುವುದು. ನಮ್ಮ ಬಾಳಿನಲ್ಲಿ ಹೊಸತನಕ್ಕೆ ತುಂಬಾ ಮಹತ್ತ್ವವಿದೆ.


ಹೊಸತನವೆ ಬಾಳು; ಹಳಸಿಕೆಯೆಲ್ಲ ಸಾವು ಬಿಡು

ರಸವು ನವನವತೆಯಿಂದನುದಿನವು ಹೊಮ್ಮಿ

ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ

ಪಸರುತಿರೆ ಬಾಳ್ ಚೆಲುವು - ಮಂಕುತಿಮ್ಮ


ಈ ಹೊಸತನ ಒಂದೇ ದಿನದಲ್ಲಿ ಬರುವಂಥದ್ದಲ್ಲ. ಹಾಗಾಗಿಯೇ ಸುಮಾರು ಶಿವರಾತ್ರಿಯ ಅನಂತರ ನಾವು ವಸಂತದ ಲಕ್ಷಣಗಳನ್ನು ಕಾಣುತ್ತೇವೆ. ಹಳೆಯದರೊಂದಿಗೆ ಬೆಸೆತುಕೊಂಡೇ ಹೊಸತನ ಕಾಣಿಸುತ್ತದೆ. ಹೊಸ ಚಿಗುರು ಹಳೆಬೇರನ್ನವಲಂಬಿಸಿಯೇ ಬರುವುದು ತಾನೆ?


ಹೊಸಚಿಗುರು ಹಳೆಬೇರು ಕೂಡಿರಲು ಮರ ಸೊಬಗು

ಹೊಸಯುಕ್ತಿ ಹಳೆ ತತ್ತ್ವದೊಡಗೂಡೆ ಧರ್ಮ

ಋಷಿ ವಾಕ್ಯದೊಡನೆ ವಿಜ್ಞಾನ ಮೇಳವಿಸೆ

ಜಸವು ಜೀವನಕದುವೆ-ಮಂಕುತಿಮ್ಮ

ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ನಮ್ಮ ಪೂರ್ವಜರ ಮಾತನ್ನು ಧಿಕ್ಕರಿಸಿ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಹಳೆಯ ನೆಲೆಗಟ್ಟಿನ ಮೇಲೆ ಹೊಸ ಜೀವನ ಸೌಧವನ್ನು ಕಟ್ಟಿ ಎಂಬುದೇ ಯುಗಾದಿಯ ಸಂದೇಶ. ಸತ್ಯಯುಗದಲ್ಲಿ ಸೃಷ್ಟಿ ಆರಂಭವಾದ ದಿನವೇ ಯುಗಾದಿ ಎಂಬ ನಂಬಿಕೆ ಇದೆ. ಚೈತ್ರಶುದ್ಧ ಪ್ರತಿಪದೆಯಂದು ಚಾಂದ್ರಮಾನ ಯುಗಾದಿ. ಸೂರ್ಯನ ಗತಿಗನುಸಾರವಾಗಿ ಮೇಷ ಮಾಸದ ಪ್ರಥಮದಿನವನ್ನು ಸೌರಮಾನ ಯುಗಾದಿಯೆಂದು ಆಚರಿಸುತ್ತಾರೆ. ಯುಗಾದಿಯ ಆಚರಣೆಗೆ ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯಿದೆ. ಆ ದಿನ ಅಭ್ಯಂಗಸ್ನಾನ, ತಳಿರುತೋರಣಗಳಿಂದ ಗೃಹಾಲಂಕರಣ, ದೇವತಾಪೂಜೆ, ವಿಶೇಷ ನೈವೇದ್ಯ- ಪಂಚಾಂಗಶ್ರವಣ ದಾನ ಮುಂತಾದ ಕರ್ಮಗಳನ್ನು ಶಾಸ್ತ್ರವು ವಿಧಿಸಿದೆ. ಅಭ್ಯಂಗವು ನಮ್ಮ ಶರೀರ ಮತ್ತು ಮನಸ್ಸುಗಳ ಪ್ರಸನ್ನತೆಗೆ ಸಹಕಾರಿ ಎಂಬುದನ್ನು ಆಯುರ್ವೇದವು ಸಾರಿ ಹೇಳುತ್ತದೆ. ಮಾವಿ ಚಿಗುರುಗಳು ವಾತಾವರಣವನ್ನು ಶುದ್ಧೀಕರಿಸುತ್ತವೆ ಎಂಬುದು ತೋರಣ ಕಟ್ಟುವುದರ ಹಿನ್ನೆಲೆ. ಅಂದು ಎತ್ತರದಲ್ಲಿ ಧ್ವಜವನ್ನು ಹಾರಿಸುವ ಪದ್ಧತಿಯಿದೆ. ಅದು ಭಗವಂತನು ಮಾಡಿದ ದೈತ್ಯನಿಗ್ರಹವೇ ಮೊದಲಾದ ಮಹತ್ಕಾರ್ಯಗಳನ್ನು ನೆನಪಿಗೆ ತರುವ ಧರ್ಮ ವೈಜಯಂತಿಯಷ್ಟೇ ಅಲ್ಲ, ನಮ್ಮ ವೈಚಾರಿಕ ಔನ್ನತ್ಯಕ್ಕಾಗಿ ಮಾಡಿರುವ ಸಂಕಲ್ಪದ ದ್ಯೋತಕವೂ ಆಗಿರುತ್ತದೆ. ಸೃಷ್ಟಿಕರ್ತನಾದ ಪ್ರಜಾಪತಿಯೂ ಕಾಲಪುರುಷನೂ ಯುಗಾದಿಪರ್ವದ ದೇವತೆಗಳು. ಅವರಿಗೆ ಅಂದು ಅರ್ಪಿಸುವ ವಿಶೇಷ ನೈವೇದ್ಯವು ಚಿಗುರುಬೇವು ಮತ್ತು ಬೆಲ್ಲವನ್ನು ಸೇರಿಸಿ ಕುಟ್ಟಿದ ಕಲ್ಕ. ಬೇವು ಎಲುಬಿಗೆ ಸಂಬಂಧಿಸಿದ ರೋಗವನ್ನು ವಿಷದ ಸೋಂಕನ್ನು ನಿವಾರಿಸುವ ಮಹೌಷಧಿ. ಆದರೂ ಕಹಿಯಾದ ಅದರಲ್ಲಿ ವಾತದೋಷವಿದೆ. (ಕಟುತಿಕ್ತ ಕಷಾಯಾ: :ವಾತಂ ಜನಯಂತಿ - ಚರಕ) ಸಿಹಿಯಾದ ಬೆಲ್ಲದೊಡನೆ ಅದು ಸೇರಿದರೆ ಆ ದೋಷವು ಶಮನ ಹೊಂದುತ್ತದೆ. ಜೀವನದಲ್ಲಿ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕೆಂಬ ಭಾವನೆಯೂ ಈ ಕ್ರಿಯೆಯ ಹಿಂದಿದೆ. ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಇವು ಪಂಚ ಅಂಗಗಳು (ಪಂಚಾಂಗ) ಇಡೀವರ್ಷದ ಪಂಚಾಂಗವನ್ನು, ಭವಿಷ್ಯವನ್ನು ಯುಗಾದಿಯ ದಿನ ಸಾಯಂಕಾಲ ಕೇಳುವ ಪದ್ಧತಿಯಿದೆ. ಈ ದಿನ ಜಲಪಾತ್ರೆಯನ್ನೂ ವಸ್ತ್ರಭೂಷಣಗಳನ್ನೂ ದಾನ ಮಾಡಬೇಕೆಂದು ಶ್ರುತಿಯು ಸಾರುವುದು. ಗ್ರಾಮೀಣ ಪ್ರದೇಶದಲ್ಲಿ ನೇಗಿಲಿನಿಂದ ಗೆರೆ ತೆಗೆದು ಬೇಸಾಯವನ್ನು ಸಾಂಕೇತಿಕವಾಗಿ ಆರಂಭಿಸುವ ಪದ್ಧತಿಯಿದೆ. ಯುಗಾದಿಯ ದಿನ ಮಂಗಲ ಕಾರ್ಯಗಳಿಗೆ ಪ್ರಶಸ್ತವಾದ (ಸಾಡೆತೀನ್) ಮುಹೂರ್ತಗಳಲ್ಲಿ ಒಂದು. ಆದ್ದರಿಂದ ಈ ದಿನ ಹೊಸ ಕಾರ್ಯಾರಂಭಕ್ಕೆ ಶುಭದಿನ. ಹೊಸ ಚಿಂತನೆ-ಹೊಸ ಉತ್ಸಾಹ, ಹೊಸ ಮನಸ್ಸುಗಳಿಂದ ಹೊಸವರ್ಷದಲ್ಲಿ ಮಾಡುವ ಕಾರ್ಯಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ.