Thursday, January 20, 2011

ಥೈಲ್ಯಾಂಡ್ ಪ್ರವಾಸ

ಸೌ. ವೀಣಾ ದೇವ್
ದೂರದರ್ಶನದ ಮೇಲೆ ಜಾಹೀರಾತು ಸಾಗಿತ್ತು. ಪತಿ ಹೆಂಡತಿಗೆ ಸ್ವತಃ ಮನೆಗೆಲಸ ಮಾಡಿ ಕೆಲಸದವಳಿಗೆ ಕೊಡುವ ಹಣವುಳಿಸಿ ಸಿಂಗಾಪುರಕ್ಕೆ ಹೋಗಬಹುದೆಂಬ ಇಂಗಿತ ವ್ಯಕ್ತ ಪಡಿಸುತ್ತಿರುವ ಸನ್ನಿವೇಶ. ನಮ್ಮ ಕೆಲಸದವಳು ಗೈರುಹಾಜರಾಗಿ ವಾರವೇ ಕಳೆದು ಹೋಗಿತ್ತು. ಗುಡಿಸುತ್ತಿದ್ದ ಪೊರಕೆಯನ್ನು ಎಸೆದು ಅಲ್ಲೇ ಸೋಪಾದ ಮೇಲೆ ಕುಳಿತು ನೋಡುತ್ತಿದ್ದ ನನ್ನವರ ಕೈಗಳನ್ನು ಅದುಮುತ್ತ ನಾನಂದೆ.
’ನೋಡಿ ಆ ಗಂಡನನ್ನ. ಈಗ ನಾನೂ ಹದಿನೈದು ದಿನ ಮನೆಗೆಲಸ ಮಾಡಬೇಕಿದೆ. ಮುಂದಕ್ಕೂ ಇನ್ನೆಷ್ಟು ದಿನ ಮಾಡಿಕೊಳ್ಳಬೇಕಾಗುತ್ತದೋ ಏನೋ.! ನೀವೂ ನನಗೆ ಸಿಂಗಾಪೂರ ತೋರಿಸಬಹುದಲ್ಲ!
ನಮ್ಮವರು ಸರಿ. ಹೋಗೋಣವಂತೆ. ಎಂದರು.
ಕೆಲವರ್ಷಗಳ ಹಿಂದೆ ಪೂರ್ವ ಏಷಿಯಾದ ಕೆಲ ದೇಶಗಳನ್ನು ಸುತ್ತಿ ಬಂದ ಅವರು ಯಾವಾಗಾದರೊಮ್ಮೆ ಹೇಳುತ್ತಿದ್ದಂತೆಯೇ ಈಗಲೂ ಸುಮ್ಮನೇ ಹೇಳುತ್ತಿದ್ದಾರೆಂದುಕೊಂಡೆ. ಆ ವಿಷಯಕ್ಕೆ ಅಷ್ಟೊಂದು ಮಹತ್ವ ಕೊಡಲಿಲ್ಲ. ಮರೆತೂ ಬಿಟ್ಟೆ. ಆದರೆ ಯಾವದೇವತೆಯೋ ತಥಾಸ್ತು ಎಂದಿರಬೇಕು. ನಮ್ಮವರು ಆ ನಿಟ್ಟಿನಲ್ಲಿ ಚಟುವಟಿಕೆ ಪ್ರಾರಂಭಿಸಿಯೇ ಬಿಟ್ಟರು. ಪ್ರವಾಸೀ ಕಂಪನಿಯೊಂದಕ್ಕೆ ಹೆಸರು ನೊಂದಾವಣೆ ಆಯ್ತು. ಕೊನೆಗೆ ಥೈಲೆಂಡ್, ಮಲೇಶೀಯಾ, ಸಿಂಗಪುರ್ ಪ್ರವಾಸದ ಮೊದಲ ಹೆಜ್ಜೆಯಾದ ಗೋವಾ- ಮುಂಬೈ ವಿಮಾನ ಪ್ರವಾಸ ಪ್ರಾರಂಭವೂ ಆಯ್ತು.

ಥೈಲೆಂಡ್ ಪ್ರವಾಸ.
ಬ್ಯಾಂಕಾಕ್ ಗೆ ಮುಂಬೈಯಿಂದ ರಾತ್ರಿ ಹನ್ನೊಂದು ಮೂವತ್ತೈದಕ್ಕೆ ಹೊರಡುವ ವಿಮಾನ ತಡವಾಗಿ ಹೊರಟಿತು. ಅಲ್ಲಿಯ ಸಮಯ ಭಾರತದಲ್ಲಿಯ ಸಮಯಕ್ಕಿಂತ ಒಂದೂವರೆತಾಸು ಮುಂದಿದೆ. ಐದುಗಂಟೆ ಪ್ರಯಾಣಿಸಿ ಅಲ್ಲಿಯ ಸ್ವರ್ಣಭೂಮಿ ವಿಮಾನ ನಿಲ್ದಾಣ ತಲುಪಿದಾಗ ಬೆಳಗಿನ ಆರುಗಂಟೆ. ಜಗತ್ತಿನ ಯಾವ ಸ್ಥಳದಲ್ಲೂ ನಿತ್ಯ ನೂತನವಾಗಿ ಸುಂದರ, ಹಿತಕರ ಅನುಭವ ನೀಡುವ ಕ್ಷಣಗಳೆಂದರೆ ಮುಂಜಾವೆಂದು ನನ್ನ ಭಾವನೆ. ಕಿಟಕಿಗಳಿಂದ ಬಾನನು ವೀಕ್ಷಿಸುತ್ತಿದ್ದಂತೇ ಇಳಿಯುವ ಸಮಯ ಬಂತು. ನಿಲ್ದಾಣದ ವಿಶಾಲ ಕಟ್ಟಡದಲ್ಲಿ ನಡಿಗೆ. ಚಲಿಸುವ ರಸ್ತೆಗಳಲ್ಲಿ ಮುಂದುರಿದೆವು. ಎದುರಲ್ಲಿ ಎತ್ತರದಲ್ಲಿ ಕಂಡದ್ದು ಶ್ರೀ ವಿಷ್ಣುವಿನ ಎದೆಯಮಟ್ಟದ ಸುಂದರ ಮೂರ್ತಿ. ಂನ್ನದ ಮೆರುಗಿನ ಸುಮಾರು ಐದು ಅಡಿಯ ಮೂರು ಮುಖದ ಚತುರ್ಭುಜ ಮೂರ್ತಿ ದೂರದಿಂದಲೇ ಆಕರ್ಷಿಸುತ್ತದೆ. ಮೂರ್ತಿ, ಅದರ ಮಂಟಪ, ಹೂಬಳ್ಳಿಗಳ ಅಲಂಕಾರ, ಎಲ್ಲವೂ ಇಲ್ಲಿಗೆ ಆಗಮಿಸುವ ಪ್ರವಾಸಿಗಳಿಗೆ ಪೂರ್ವ ಏಷಿಯಾದ ವಿಶಿಷ್ಟ ಕಲೆಯನ್ನು ಪರಿಚಯಿಸುತ್ತವೆ.
ಹೊರಬಂದು ನಮಗಾಗಿ ಸಿದ್ಧವಿರುವ ಹವಾನಿಯಂತ್ರಿತ ಬಸ್ ಏರಿದೆವು. ಸ್ಥಳೀಯ ಮಾರ್ಗದರ್ಶಿ ಒಬ್ಬರು ಜತೆಗೂಡಿದ ನಮ್ಮ ಪ್ರಯಾಣ ಪಟ್ಟಾಯಾಗೆ ಸಾಗಿತು. ಮೂರು ನಾಲ್ಕು ಗಂಟೆಗಳ ಆ ಪ್ರಯಾಣದಲ್ಲಿ ದಾರಿಯುದ್ದಕ್ಕೂ ಆ ಮಾರ್ಗದರ್ಶಿ ಥೈಲೆಂಡಿನ ಬಗ್ಗೆ ಮಾಹಿತಿ ನೀಡುತ್ತಿದ್ದ. ಥೈಲೆಂಡ್ ಎಂದರೆ ’ಸ್ವಾತಂತ್ರ್ಯದ ನಾಡು’ ಎಂದರ್ಥವಂತೆ. ಮೊದಲು ಇದು ಸಯಾಮ ಎಂದು ಕರೆಯಲ್ಪಡುತ್ತಿತ್ತು. ಬಹ್ವಂಶ ಜನ ಬೌದ್ಧ ಧರ್ಮಾನುಯಾಯಿಗಳು. ಧರ್ಮಾಚರಣೆ ಭಾರತೀಯ ದೇವರು ಪುರಾಣ, ಹಿಂದೂ ದೇವರುಗಳನ್ನು ಒಳಗೊಂಡಿದೆ. ಬುದ್ಧನಂತೆಯೇ ವಿಷ್ಣು ರಾಮ ಇವರಿಗೆ ಪವಿತ್ರರು. ರಾಜನಿಂದ ಹಿಡಿದು ಪ್ರತಿಯೋರ್ವನಿಗೂ ಒಂದು ಇಂಗ್ಲೀಷ್ ಇನ್ನೊಂದು ಥಾಯ್ ಹೆಸರಿರುತ್ತದೆ. (ನಮ್ಮ ಮಾರ್ಗದರ್ಶಿ ತನ್ನ ಇಂಗ್ಲೀಷ್ ಹೆಸರು ’ಲಿಯೋ’ ಥಾಯ್ ಹೆಸರು ’ಅನುಷಾ’ ಎಂದ) ಅವನ ರಾಜನ ಹೆಸರು ರಾಮ.(ಇಂಗ್ಲೀಷ್) ಈಗಿನವನು ೯ ನೆಯ ರಾಮ. ’ಭೂಮಿಪುತ್ರ’ ಎನ್ನುವುದು ಥಾಯ್ ಹೆಸರು. ರಾಜನಲ್ಲಿ ಪ್ರಜೆಗಳದು ಅಪಾರವಾದ ಶ್ರದ್ಧೆ. ಅವನನ್ನು ತಂದೆ ತಾಯಿ ಎಂದೇ ತಿಳಿಯುತ್ತಾರೆ. ಆತ ಮಳೆ ಬರಿಸಬಲ್ಲ ಎಂದು ಅವರ ನಂಬಿಕೆ. ಆತನಿಂದ ಶಿರ ಮುಟ್ಟಿಸಿಕೊಂಡ ವ್ಯಕ್ತಿ ತಾನು ಅನುಗ್ರಹೀತನೆಂದು ಭಾವಿಸುತ್ತಾನೆ. ನಮ್ಮಲ್ಲಿಯಂತೆ ಮೆಚ್ಚುಗೆಗಾಗಲೀ ಮುದ್ದಿಗಾಗಲೀ ಯಾರೂ ಇತರರು ತಲೆ ಮುಟ್ಟಿದರೆ ಅವರಿಗೆ ಇಷ್ಟವಾಗುವುದಿಲ್ಲವಂತೆ. ರಾಜನ ಬ್ಯಾಂಕಾಕ್ ಅರಮನೆಯ ಆವಾರದಲ್ಲಿ ಬತ್ತದಗದ್ದೆ, ಪಾಮ್ ತೋಟಗಳನ್ನೊಳಗೊಂಡ ಕೃಷೀ ಕ್ಷೇತ್ರವಿದೆ. ಸ್ವತಃ ರಾಜ ಅದರತ್ತ ಲಕ್ಷ್ಯ ವಹಿಸುತ್ತಾನೆ. ಅವುಗಳ ಬಗ್ಗೆ ಅರಿತುಕೊಳ್ಳ ಬಯಸುವವರು ಪರಿಣತಿ ಗಳಿಸಬೇಕೆನ್ನುವವರಿಗೆ ಅಲ್ಲಿ ಸದಾ ಸ್ವಾಗತವಿದೆ.
ಟೊಯೋಟಾ ಮೋಟಾರುಗಳು (ಐವತ್ತು ಚ.ಕೀ. ಮೀ. ವಿಸ್ತೀರ್ಣದ ಔದ್ಯೋಗಿಕ ವಸಾಹತ್ತಿದೆ.) ಜಸ್ಮಿನ್ ಎಂಬ ಸುವಾಸಿತ ಅಕ್ಕಿ, ರಬ್ಬರು, ಲಾಬ್ಸರ್ ಮುಂತಾದವು ಇಲ್ಲಿ ರಪ್ತಾಗುವ ಮುಖ್ಯ ವಸ್ತುಗಳು. ವಾಹನ ಸಂಚಾರಕ್ಕೆ ಸ್ಕೈ ವೇ’ ( ಫ್ಲೈ ಓವರ್) ಸ್ಕೈ ಟ್ರೇನ್’ ಸಬ್ ವೇ’ ಗಳಿವೆ. ಪಟ್ಟಾಯಾದಿಂದ ಬ್ಯಾಂಕಾಕ್ ಗೆ ಹೋಗುವಾಗ ೫೮ ಕಿ.ಮೀ. ಉದ್ದದ ’ಸ್ಕೈ ಬ್ರಿಜ್’ ಇದ್ದು ಕ್ರಮಿಸಲು ಅರ್ಧ ಗಂಟೆಯೂ ಬೇಕಾಗಲಿಲ್ಲ. ವಿಕಾಸ ಕಾರ‍್ಯಗಳಿಗೆ ಜಪಾನಿನ ಧನಸಹಾಯ ಪಡೆದಿದ್ದು ಮರು ಪಾವತಿಗೆಂದು ರಸ್ತೆಯ ಉಪಯೋಗಕ್ಕೆ ಭಾರೀ ಕರ ತೆರಬೇಕಾಗುತ್ತದೆ. ಆಲವಿದ್ಯುತ್ ಶಕ್ತಿ ಹಾಗೂ ಡೀಝೆಲ್ ವಿದ್ಯುತ್ ಶಕ್ತಿಯ ಪೂರೈಕೆ ಇದ್ದು ವಿದ್ಯುತ್ತು ಒಂದು ದಿನವೂ ಕಡಿತವಾಗುವಂತಿಲ್ಲ. ಮುಂಬರುವ ದಿನಗಳಲ್ಲಿ ’ಎಟೋಮಿಕ್’ ಎನರ್ಜಿ ಯಿಂದ ವಿದ್ಯುತ್ ನ್ನು ಉತ್ಪಾದಿಸುವ ಯೋಜನೆ ಇದೆಯಂತೆ.
ಇಲ್ಲಿರುವ ೭ eleven ಎಂಬ ಅಂಗಡಿಗಳು ಇಪ್ಪತ್ನಾಲ್ಕು ಗಂಟೆಗಳ ಕಾಲ ತೆರೆದಿರುತ್ತವೆ. ಎಲ್ಲ ಜೀವನಾವಶ್ಯಕ ವಸ್ತುಗಳೂ ಅಲ್ಲಿ ಲಭ್ಯ. ಪಟ್ಟಾಯಾ ಕ್ಕೆ ತಲ್ಪಿ ’ನೊಂಗ್ ನೂಚ್ ವಿಲೇಜ್’ ಎಂಬಲ್ಲಿ ನೃತ್ಯ, ಮಾರ್ಶಲ್ ಆರ್ಟ, ಹಿಂದಿ ಚಿತ್ರಗೀತೆಗಳನ್ನೂ ಕೂಡ ಒಳಗೊಂಡ ಸಾಂಸ್ಕೃತಿಕ ಕಾರ‍್ಯಕ್ರಮ, ಆನೆಗಳ ಕ್ರೀಡೆ, ಟ್ರಾಫಿಕಲ್ ಗಾರ್ಡನ್, ಪಾಟರೀ ಗಾರ್ಡನ್, ಗಳಲ್ಲಿ ಕಳೆದ ಕ್ಷಣಗಳು ಅವಿಸ್ಮರಣೀಯ. ಪಾಟರೀ ಗಾರ್ಡನ್ ನಲ್ಲಿ ಪುಟ್ಟ ಪುಟ್ಟ ಮಡಿಕೆ ಕುಡಿಕೆ ಗಳಿಂದ ತಯಾರಿಸಲ್ಪಟ್ಟ ವಾಹನಗಳು ಮಂಟಪಗಳು ಚೈನೀಜ್ ಡ್ರ್ಯಾಗನ್, ಗಳು ಪಕ್ಷಿಗಳು, ವೃಕ್ಷಗಳು ಮುಂತಾದವುಗಳ ರಚನೆಗಳಿವೆ. ಹತ್ತು ಎಕರೆ ಜಾಗದಲ್ಲಿದ್ದ ಈ ತೋಟದ ಉಸ್ತುವಾರಿಯನ್ನು ಓರ್ವ ಸ್ತ್ರೀ ನೋಡಿಕೊಳ್ಳುತ್ತಿದ್ದು ಹದಿನೈದು ನೂರು ಕೆಲಸಗಾರರಿದ್ದು ಅವರಿಗೆ ಎಲ್ಲ ರೀತಿಯ ಸೌಕರ‍್ಯಗಳೂ ಇವೆ.
ಪಟ್ಟಾಯಾ ದ ನಯನ ರಮ್ಯ ಆಲ್ಕಾ ಝಾ ಶೋ ಮೈ ಮರೆಯುವಂತೆ ಮಾಡುತ್ತದೆ. ವಿಶಿಷ್ಟ ವೇಷ ಭೂಷಣಗಳಿಂದ ಕೂಡಿದ ವಿಶೇಷ ಪರಿಣತಿ ಹೊಂದಿದ ಅನೇಕ ಕಲಾಕಾರರು ಅಷ್ಟೊಂದು ಸಹಜತೆಯಿಂದ ನರ್ತಿಸುವಾಗ ಕಣ್ಣೆವೆ ಮುಚ್ಚುವುದನ್ನು ಮರೆತುಬಿಡುತ್ತೇವೆ. ಕಾರ್ಯಕ್ರಮ ಹಾಡು, ನೃತ್ಯ, ಪ್ರಕಾಶ ಯೋಜನೆ, ಸ್ಪೆಶಲ್ ಇಫೆಕ್ಟ್, ಗಳಿಂದ ಕೂಡಿ ಮನಸ್ಸಿಗೆ ಮೋಡಿ ಮಾಡಿ ಮಾಯಾನಗರಿಗೆ ತಲುಪಿಸಿಬಿಡುತ್ತವೆ. ಶೋ ಮುಗಿಸಿ ಭಾರತೀಯ ಭೋಜನ ಗೃಹದಲ್ಲಿ ಊಟ ಮಾಡಿ ಪಂಚತಾರಾಂಕಿತ ಹೋಟೇಲಿನಲ್ಲಿ ಮಲಗಿ ನಿದ್ರಿಸುವಾಗಲೂ ಇಡೀ ದಿನದ ಕಾರ‍್ಯಕ್ರಮದ ಉಜಳಣೆ ಸಾಗಿತ್ತು.
ಮರುದಿನ ಸ್ಫೀಡ್ ಬೋಟ್ ನಿಂದ ಕೋರಲ್ ಆಯ್ಲೆಂಡ್ ಗೆ ಪ್ರಯಾಣ. ಪ್ಯಾರಾಸೇಲೀಂಗ್ ಗಾಜಿನ ತಳವಿದ್ದ ಬೋಟ್ ನಲ್ಲಿ ಪ್ರಯಾಣ ಮಾಡುತ್ತಾ ಸಮುದ್ರ ತಳದ ಜೀವಿಗಳ ಹವಳ ಗಿಡ ಮುಂತಾದ ಅದ್ಭುತ ರಚನೆಗಳ ವೈಭವದ ವೀಕ್ಷಣೆ ಆಯ್ತು. ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ನೀರಲ್ಲಿ ಸಮುದ್ರತಳದ ಮೇಲೆ ಓಡಿಯಾಡಿ ಬಂದರು ಕೆಲವರು. ಧೈರ್ಯ ಸಾಲದ ನನ್ನಂತವರು ಅವರ ಅನುಭವ ಕೇಳಿ ಸಂತೋಷಪಟ್ಟೆವು.
ನಂತರ ಮಿನಿ ಸಂಯಾಮ್ ಗೆ ಭೇಟಿ. ಅಲ್ಲಿ ವಿಸ್ತೀರ್ಣವಾದ ಸ್ಥಳದಲ್ಲಿ ಥೈಲೆಂಡ್ ಹಾಗೂ ಯುರೋಪಕ್ಕೆ ಸಂಬಂಧಪಟ್ಟ ಅನೇಕ ಸ್ಥಳಗಳ ಸೂಕ್ಷ್ಮಾಕಾರದ ಪ್ರತಿಕೃತಿಗಳಿವೆ. ಪ್ರವೇಶದ್ವಾರದಲ್ಲೇ ರಾವಣನ ಇಪ್ಪತ್ನಾಲ್ಕು ಇಪ್ಪತ್ತಾರು ಅಡಿ ಎತ್ತರದ ವರ್ಣರಂಜಿತ ಪ್ರತಿಮೆ ಎದುರಾಗುತ್ತದೆ. ಎಮರಾಲ್ಡ್ ಬುದ್ಧನ ದೇವಾಲಯ, ಕ್ವಾಯ್ ನದಿಯ ಮೇಲಿನ ಸೇತುವೆ, ಚಿನ್ನದ ಸ್ತೂಪಗಳು, ಒಂದು ಕಡೆ ಇದ್ದರೆ ಎಫೆಲ್ ಗೋಪುರ, ಅಮೇರಿಕದ ಸ್ವಾತಂತ್ರ್ಯ ದೇವತೆ, ಲಂಡನ್ನಿನ ಟ್ರಾಮ್ ಬ್ರಿಜ್ ಮುಂತಾದವನ್ನು ಇನ್ನೊಂದು ಕಡೆ ನೋಡಬಹುದು.
ನಂತರ ಥಾಯ್ ಮಸಾಜ್ ನಿಂದ ಇಡೀ ದಿನದ ಶ್ರಮ ಪರಿಹಾರವಾಗುತ್ತದೆ.
ಮರುದಿನ ಪಟ್ಟಾಯಾ ದಿಂದ ಬ್ಯಾಂಕಾಕ್ ಗೆ ಹೊರಟೆವು. ಮಾರ‍್ಗದಲ್ಲಿ ಜಗತ್ತಿನಲ್ಲೇ ಅತೀ ದೊಡ್ಡದೆಂದು ಖ್ಯಾತಿ ಪಡೆದ ’ಜೆಮ್ಸ್ ಗ್ಯಾಲರಿ’ಯನ್ನು ನೋಡಿದೆವು. ಗಣಿಗಳಿಂದ ಪಡೆಯುವ ಮೂಲವಸ್ತುವಿನಿಂದ ಹಿಡಿದು ವಜ್ರವೆಂದು ಕಣ್ಣು ಕೋರೈಸುವ ಆಕರ್ಷಕ ರೂಪವನ್ನು ಪಡೆಯುವವರೆಗಿನ ವಿವಿಧ ಹಂತಗಳ ಪರಿಚಯ ಆಯಿತು. ಇಷ್ಟೊಂದು ವಿಶಾಲವಾದ ಮಳಿಗೆ ಇದೆ ಎಂದಮೇಲೆ ಚಿನ್ನ-ಬೆಳ್ಳಿ - ವಜ್ರದ ಬೇಡಿಕೆಯ ಪ್ರಮಾಣ ನೋಡಿ ಆಶ್ಚರ್ಯವಾಯ್ತು. ಸಂಜೆ, ’ಚಾವೋ ಫ್ರಾಯಾ ರಿವರ್ ಕ್ರೂಜ್’ ಸಂಗೀತ ಊಟದ ಜೊತೆಗೆ, ನದಿಯ ಇಕ್ಕೆಲದಲ್ಲೂ ಇರುವ ನದಿಯಲ್ಲಿ ಪ್ರತಿಬಿಂಬಿಸುತ್ತಿರುವ ಜಗಮಗಿಸುವ ದೀಪಾಲಂಕಾರದ ದೇವಾಲಯ, ಭವನ ಮುಂತಾದವನ್ನು ನೋಡುತ್ತ, ವಿರಾಮವಾಗಿ ಕಾಲ ಕಳೆದೆವು.
ಬ್ಯಾಂಕಾಕಿನ ಸಫಾರಿ ವರ್ಲ್ಡ ನಲ್ಲಿ ಸ್ವೇಚ್ಛೆಯಿಂದ ಸಂಚರಿಸುತ್ತಿರುವ ಪಶು ಪಕ್ಷಿಗಳ ನೋಟ ಚೆನ್ನಾಗಿತ್ತು. ಅಲ್ಲಿಯ ಶೌಚಾಲಯಕ್ಕೆ ವಿಶ್ವದ ಅತೀ ಉತ್ಕೃಷ್ಟ ಶೌಚಾಲಯ ಎಂಬ ಸನ್ಮಾನ ದೊರೆತಿದೆಯಂತೆ. ಮರೀನ್ ಪಾರ್ಕ ಓರಾಂಗ- ಓಟಾಂಗ,-ಸೀಲಾಯನ್- ಡಾಲ್ಫಿನ್ ಗಳ ಚಾಕಚಕ್ಯತೆ ತುಂಬಿದ ಕ್ರೀಡಾ ಪ್ರದರ್ಶನ, ಕೌಬಾಯ್ ಶೋ, ಎಲ್ಲ ಮನರಂಜನೆ ನೀಡಿದವು.
ಬ್ಯಾಂಕಾಕ್ ನಲ್ಲಿಯ ದೊಡ್ಡ ಮಾಲ್ ಗಳಲ್ಲಿ ಎಮ್. ಬಿ. ಕೆ . ಎನ್ನುವುದೊಂದು. ಅಲ್ಲಿ ಎಂಟುಸಾವಿರ ಅಂಗಡಿಗಳಿದ್ದು ಹೇರ್‌ಪಿನ್ನಿನಿಂದ ಹಿಡಿದು ಹೆಲಿಕ್ಯಾಪ್ಟರ್ ವರೆಗಿನ ಎಲ್ಲಾ ಸರಕು ಅಲ್ಲಿ ಲಭ್ಯವಿದೆಯಂತೆ.
ನಗರ ದರ್ಶನದಲ್ಲಿ ’ಪ್ರಿನ್ಸಿಪಲ್ ಬುದ್ಧ ಅಯ್ದುವರೆ ಟನ್ನಿನ ೪೬ ಮೀ. ಉದ್ದ, ೧೫ಮೀ. ಎತ್ತರದ ’ರಿಕ್ಲ್ಯಾನಿಂಗ್ ಬುದ್ಧನ’ ದರ್ಶನವೂ ಆಯ್ತು. ಮಕ್ಕಳಾಗದವರು ಸಂತತಿಗಾಗಿ ಮೊರೆಹೋಗುವ ಶಿವಲಿಂಗವೂ ಅಲ್ಲಿದೆ.
ಬ್ಯಾಂಕಾಕ್ನಲ್ಲಿ ಮೂರುಸಾವಿರ ಗಗನಚುಂಬಿ ಕಟ್ಟಡಗಳಿವೆಯಂತೆ. ಸ್ಕ್ಯೆ ಬಯೋಕೆ ಎನ್ನುವ ಅತೀ ಎತ್ತರದ ಕಟ್ಟಡದ ಎಂಬತ್ನಾಲ್ಕನೆಯ ಮಹಡಿಯ ಮೇಲಿನ ಭ್ರಮಣಿಸುವ ಒಬ್ಜರ‍್ವೇಟರ್ ಡೆಕ್ ನಿಂದ ಸಮಗ್ರ ಬ್ಯಾಂಕಾಕ್ನ ವೀಕ್ಷಣೆ ಮಾಡಬಹುದು. ಮೇಲೇರಲು ಎಪ್ಪತ್ತೇಳನೆಯ ಮಹಡಿಯವರೆಗೆ ಒಂದು ಹಾಗೂ ಎಂಬತ್ಮೂರನೆಯ ಮಹಡಿಯವರೆಗೆ ಇನ್ನೊಂದು ಲಿಪ್ಟ್ ಇವೆ.
ಇಂದ್ರ ಸ್ಕ್ವೇರ್ ಎನ್ನುವ ಇನ್ನೊಂದು ಸ್ಥಳವೂ ಪ್ರವಾಸಿಗರು ಖರೀದಿಗೆ ಹೋಗುವ ಜನಪ್ರಿಯ ಸ್ಥಳ. ಪ್ರವಾಸಿಗರು ಥೈಲೆಂಡ್ ನಲ್ಲಿ ಥೈ ಸಿಲ್ಕ್ ಹಾಗೂ ಹತ್ತಿಬಟ್ಟೆ, ಬೆಲೆಬಾಳುವ ಹರಳುಗಳು, ಬಾಟಕ್, ಗೊಂಬೆಗಳು, ಹಾಗೂ ಮುಖವಾಡಗಳನ್ನು ಕೊಂಡುಕೊಳ್ಳುತ್ತಾರೆ. ಇಲ್ಲಿಯ ಚಲಾವಣೆಗೆ ಬಾಹ್ಟ್ ಎನ್ನುತ್ತಾರೆ. ಒಂದು ಬಾಹ್ಟ್ ಗೆ ಒಂದೂವರೆ ರೂ ಆಗುತ್ತದೆ.
ಇಲ್ಲಿ ಸ್ತ್ರೀ ಯರ ಜನಸಂಖ್ಯೆ ಪುರುಷರ ಸಂಖ್ಯೆಯ ಎರಡುಪಟ್ಟು. ಅಂಗಡಿಮುಂಗಟ್ಟು, ಹೊಟೇಲು, ಎಲ್ಲ ಕಡೆ ಸ್ತ್ರೀಯರೇ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಾರೆ. ಔಪಚಾರಿಕ ಸ್ಥಳಗಳಲ್ಲಿ ಸ್ವಾಗತ ಕಕ್ಷೆ, ಮದುವೆ ಮುಂತಾದ ಸಮಾರಂಭದಲ್ಲಿ ವೈಭವಯುತ ಜರತಾರಿ ರೇಶ್ಮೆಯ ಲುಂಗಿಯಂತ ಉಡುಗೆ, ತುಂಬುತೋಳಿನ ಉದ್ದವಾದ ಬ್ಲೌಜನ್ನು ಧರಿಸುತ್ತಾರೆ. ಮಿಕ್ಕಂತೇ ಪಾಶ್ಚಾತ್ಯ ಉಡುಪೇ ಹೆಚ್ಚು. ನನ್ನ ಗಮನಕ್ಕೆ ಬಂದ ಒಂದು ಸಂಗತಿಯೆಂದರೆ ನಮ್ಮಲ್ಲಿಯಂತೆ ಅಲ್ಲಿ ಎಲ್ಲೂ ವೃತ್ತ ಪತ್ರಿಕೆಗಳಾಗಲೀ ಮಾರುವವರಾಗಲೀ ಕಂಡುಬರಲಿಲ್ಲ. ಹೊಟೆಲ್ಲು, ಉಪಹಾರಗೃಹಗಳಲ್ಲಿ ಅವು ಕಂಡುಬರುವುದಿಲ್ಲ. ಬೆಲೆಯೂ ತುಂಬಾ ಜಾಸ್ತಿ. ಇಪ್ಪತ್ತೈದು, ಮುವ್ವತ್ತೈದು ರೂ.
ಪರವೂರು ಪರದೇಶಗಳಿಗೆ ಹೋಗುವವರ ಮನದಲ್ಲಿ ಅಲ್ಲಿ ಊಟ ತಿಂಡಿಗಳ ಬಗ್ಗೆ ಶಂಕೆ ಇದ್ದೇ ಇರುತ್ತದೆ. ಹೋಗಿ ಬಂದ ಅನುಭವ ಹಂಚಿಕೊಳ್ಳುವವರಿಗೆ ಕೇಳುವ ಪ್ರಶ್ನೆಗಳಲ್ಲಿ ಇದು ತಪ್ಪದೇ ಇರುವಂತ ಪ್ರಶ್ನೆ. ಪೂರ್ಣ ಶಾಕಾಹಾರೀ ಭಾರತೀಯ ಭೋಜನಾಲಯಗಳು ಇವೆ. ಇತರೆಡೆಯಲ್ಲೂ ವಿವಿಧ ಬ್ರೆಡ್‌ಗಳು, ಪೂರಿ, ಪಂಜಾಬೀ ಶಾಖಾಹಾರೀ ಪಲ್ಯಗಳು ಹೇರಳ ಹಣ್ಣು ಹಂಪಲುಗಳು, ಹಣ್ಣಿನರಸ, ಹಾಲು, ಮೊಸರು, ಲಭ್ಯ. ಅಲ್ಲಿಯ ವಿಶಿಷ್ಟ ಸಾಮಿಷ ಹಾಗೂ ಸಮುದ್ರಜನ್ಯ ಜೀವಿಗಳ ಪದಾರ್ಥಗಳೂ ಪ್ರವಾಸಿಗರ ಮೆಚ್ಚುಗೆ ಗಳಿಸಿವೆ.
ನಾವು ತಂಗಿದ ಎಲ್ಲ ಹೊಟೇಲ್ಲುಗಳ ಕೋನೆಯಲ್ಲಾಗಲೀ ಸ್ವಾಗತ ಕಕ್ಷದಲ್ಲಾಗಲೀ ಲಾಕರ್ ಗಳು ಇದ್ದದರಿಂದ ಬೆಲೆಬಾಳುವ ವಸ್ತು, ಹೆಚ್ಚಿನ ಹಣ, ಮುಖ್ಯವಾಗಿ ಪಾಸ್ ಪೋರ್ಟ ಗಳನ್ನು ಭದ್ರವಾಗಿಸಿಟ್ಟು ಹಾಯಾಗಿ ತಿರುಗಾಟ ಮಾಡಬಹುದು.
ತಮ್ಮ ಮನೋರಾಜ್ಯದಲ್ಲೇ ನಮ್ಮೊಡನೆ ಎಲ್ಲಡೆಯ ಸಂಚಾರದ ಅನುಭವ ಸವಿಯುತ್ತಲಿದ್ದ (ಹಾಗೆಂದು ನಂಬಿದ್ದೇನೆ) ಓದುಗರಿಗೆ ಒಮ್ಮೇಲೆ ದುರ್ವಾರ್ತೆ ಕೇಳಿದಂತಾಗಬಾರದೆಂದು ಒಂದು ವಿಷಯ ಸ್ವಲ್ಪ ಮರೆಮಾಚಿದ್ದೆ. ಥೈಲೆಂಡಿನ ಮನೋರಂಜನಾ ಕ್ಷೇತ್ರ, ಅತಿಥಿ ಸತ್ಕಾರ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವ್ಯಕ್ತಿ (ತರುಣಿಯರು)ಗಳಲ್ಲಿ ಬಹ್ವಂಶ ಹಿಬ್ರಾ ( ಣಡಿಚಿಟಿಛಿe zeಟಿಜeಡಿs) ಗಳೆಂದು ಕೇಳಿ ಮನ ನೊಂದಿತು. (ಅವರನ್ನು ಲೇಡೀ ಬಾಯ್ಸ್) ಎನ್ನುತ್ತಾರೆ. ಸೌಂದರ‍್ಯ ಹಾಗೂ ನೃತ್ಯ ಸಂಗೀತದಂತ ಕಲೆಯನ್ನು ಮುಕ್ತ ಹಸ್ತದಿಂದ ಅವರಿಗೆ ನೀಡಿದ ದೇವರು ಈ ಶಿಕ್ಷೆಯನ್ನೇಕೆ ವಿಧಿಸಿದ ಎಂದು ಮತ್ತೆ ಮತ್ತೆ ಕೇಳಿಕೊಂಡೆ. ಒಂದು ಸಮಾಧಾನ ಎಂದರೆ ಅಲ್ಲಿ ಸಮಾಜ ಅವರನ್ನು ಬೇರೆಯವರೆಂದು ನೋಡುವುದಿಲ್ಲ. ಅವರೂ ಸಹಜತೆಯಿಂದಲೇ ವ್ಯವಹರಿಸುವುದರಿಂದ ಮುಜುಗರ ಎನಿಸುವುದಿಲ್ಲ.
ಥೈಲೆಂಡಿನ ಐದು ದಿನಗಳ ವಾಸ ಮುಗಿಸಿ ಮರುದಿನ ಕೌಲಾಲಾಂಪೂರಿಗೆ ಹೊರಟೆವು..

1 comment:

  1. ಉತ್ತಮ ಲೇಖನ, ಮಾಹಿತಿ ಪೂರ್ಣವಾಗಿದೆ. coverage ಕೂಡ ತುಂಬಾ ಚೆನ್ನಾಗಿದೆ.ಕೌಲಾಲಾಂಪೂರದ ಬಗ್ಗೆ ಓದಲು ಕಾತುರಳಾಗಿದ್ದೇನೆ.

    ReplyDelete