Wednesday, March 16, 2011

ಗಂಧರ್ವಲೋಕ ಸೇರಿದ ಗಾನಗಾರುಡಿಗ

ಭಾರತರತ್ನ ಪ್ರಶಸ್ತಿ ಪುರಸ್ಕೃತ ಪಂ.ಭೀಮಸೇನ ಜೋಶಿ ಅವರ ಸಾಧನೆ ಅಪಾರ. ’ಓಡುವ ನದಿ ಸಮುದ್ರ ಸೇರಲೇ ಬೇಕು ’ ಎಂಬಂತೆ ಎಲ್ಲೊ ಹುಟ್ಟಿ ಎಲ್ಲೊ ಬೆಳೆದು ಹೆತ್ತ ತಾಯಿ, ಜನ್ಮಭೂಮಿ, ಕರ್ಮಭೂಮಿಗಳಿಗಲ್ಲದೆ ಇಡೀ ದೇಶಕ್ಕೆ ಕೀರ್ತಿಯನ್ನು ತಂದ ಹೆಮ್ಮೆಯ ಪುತ್ರ.
’ ವಿದ್ಯೆ ಸಾಧಕನ ಸೊತ್ತೇ ಹೊರತು ಸೋಮಾರಿಯ ಸೊತ್ತಲ್ಲ’ ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆ ಭೀಮಸೇನ ಜೋಶಿಯವರು. ಹಾರುತ ಹಾರುತ ಬಲುದೂರ ಸಾಗುವ ಗಾಳಿಪಟದಂತೆ ಸತತ ಪರಿಶ್ರಮದಿಂದ ಗಂಧರ್ವಲೋಕವನ್ನು ಮುಟ್ಟಿದ ಸಾಧಕರಿವರು. ಕೇಳುಗರ ಕಿವಿಗಿಂಪಾಗಿ, ಮನಸ್ಸಿಗೆ ತಂಪಾಗಿ ಭಾಸವಾಗುವ ಇವರ ಸಂಗೀತ, ಮುಖದಲ್ಲಿ ಎದ್ದು ಕಾಣುವ ಮುಗ್ಧತೆ ಸರಳತೆಗಳು ಅವರನ್ನು ಆತ್ಮೀಯರನ್ನಾಗಿಸುತ್ತವೆ. ಅವರ ಬಾಯಿಂದ ಬಂದ ಭಜನೆಗಳು, ಅಭಂಗಗಳು, ಖ್ಯಾಲ್‌ಗಳು ಜನರ ಬಾಯಲ್ಲಿ ನಲಿದಾಡುತ್ತಿವೆ. ಸಂಗೀತಕ್ಕೆ ಭಾಷೆಯ ತೊಡರಿಲ್ಲ. ಮರಾಠಿಯಲ್ಲಿ ಅವರು ಹಾಡಿದ ಅಭಂಗಗಳು ಕನ್ನಡಿಗರ ಹೃದಯವನ್ನೂ ಹೊಕ್ಕಿವೆ. ಸಂಗೀತದ ಗಂಧಗಾಳಿಯ ಅರಿವು ಇಲ್ಲದವರೂ ಇವರ ಹಾಡಿನ ಸಾಲುಗಳನ್ನು ಮೆಲುಕು ಹಾಕುವುದು ಸೋಜಿಗ.
ಸೌ. ಶೈಲಜಾ ಕಣವಿ, ಮಡಗಾಂವ್
ದಾಸರ ಪದಗಳಿಗೆ ಜೀವ ತುಂಬಿದ ಹಾಡುಗಾರ ಅವರು. ’ಪರಗತಿಗಿದು ನಿರ್ಧಾರಾ.. ನೋಡೋ’ ಎಂದು ಅವರು ಹಾಡಿದರೆಂದರೆ ಶ್ರೋತೃಗಳು ಪುರಂದರದಾಸರಂತೆ ತಮ್ಮೆಲ್ಲ ಆಸ್ತಿಯನ್ನು ದಾನಮಾಡಿ ದಾಸರಾಗಬೇಕೆಂಬ ಭಾವದಲ್ಲಿ ತೇಲಾಡುತ್ತಿದ್ದರು.
ಇಂತಹ ಮಹಾನ್ ಸಂಗೀತಗಾರ ಗಂಧರ್ವ ನಗರಿಯನ್ನು ಸೇರಿದ್ದಾರೆ. ಅವರ ನಾದಶರೀರ ಮಾತ್ರ ಎಂದಿಗೂ ಅಳಿಯದಷ್ಟು ಗಟ್ಟಿಯಾಗಿದೆ. ಅವರಿಗೊಂದು ಅಶ್ರುತರ್ಪಣ.

No comments:

Post a Comment