Wednesday, March 16, 2011

ಗೋವಾ ಕನ್ನಡ ಸಮಾಜಕ್ಕೆ ಪ್ರಶಸ್ತಿಯ ಗರಿ


ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನವು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಕನ್ನಡ ಭಾಷೆ, ಕಲೆ, ಸಾಹಿತ್ಯ ಸಂಸ್ಕೃತಿ, ಇತಿಹಾಸ ಹಾಗೂ ಪರಂಪರೆಗಳನ್ನು ವಿವಿಧ ರಾಜ್ಯಗಳಲ್ಲಿ ಹರಡಿರುವ ಕನ್ನಡಿಗರಿಗೆ ತಲುಪಿಸುವ ಉದ್ದೇಶದಿಂದ ಕೇರಳ, ಕರ್ನಾಟಕ ಹಾಗೂ ಇತರ ರಾಜ್ಯಗಳಿಂದ ಅಷ್ಟೇ ಅಲ್ಲ ಅನಿವಾಸಿ ಭಾರತೀಯ ಕನ್ನಡಿಗರನ್ನು ಆಮಂತ್ರಿಸಿ ಪ್ರೋತ್ಸಾಹಿಸುವುದಕ್ಕಾಗಿ ಹಾಗೂ ಸಂಸ್ಕೃತಿ ವಿನಿಮಯಕ್ಕಾಗಿ ಕಾಸರಗೋಡಿನ ಲಲಿತಕಲಾ ಸದನದಲ್ಲಿ ಜನವರಿ ೨೯ ಹಾಗೂ ೩೦ರಂದು ಕೇರಳರಾಜ್ಯ ೪ನೇ ಕನ್ನಡ ಸಮ್ಮೇಳನ ಹಾಗೂ ಕೇರಳ ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಉತ್ಸವವನ್ನು ಹಮ್ಮಿಕೊಂಡಿತ್ತು.
ಈ ಸಂzರ್ಭದಲ್ಲಿ ಪ್ರತಿಷ್ಠಾನವು ತನ್ನ ೨೦ನೆಯ ವರ್ಷದ ಪ್ರತಿಷ್ಠಿತ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ರಾಷ್ಟ್ರೀಯ ಪ್ರಶಸ್ತಿಯನ್ನು ಗೋವಾ ಕನ್ನಡ ಸಮಾಜಕ್ಕೆ ನೀಡಿ ಗೌರವಿಸಿತು. ಸಮಾಜದ ಪರವಾಗಿ ಉಪಾಧ್ಯಕ್ಷೆ ಸೌ.ಅನುರಾಧಾ ಯಾಳಗಿಯವರು ಈ ಪ್ರಶಸ್ತಿಯನ್ನು ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆನಿಯ ಅಧ್ಯಕ್ಷ ಶ್ರೀ ಟಿ.ಎಸ್.ನಾಗಾಭರಣ ಅವರಿಂದ ಸ್ವೀಕರಿಸಿದರು. ವೇದಿಕೆಯಲ್ಲಿ ಪ್ರಸಿದ್ಧ ಚಲನಚಿತ್ರ ವಸ್ತ್ರವಿನ್ಯಾಸಕಿ ಶ್ರೀಮತಿ ನಾಗಾಭರಣ, ಸಾಹಿತಿ ಮೋಹನ ನಾಗಮ್ಮನವರ್, ಚಲನಚಿತ್ರ ನಟಿ ಕಾವ್ಯಶ್ರೀ ಪಂಡಿತ್, ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಶಿವರಾಮ ಕಾಸರಗೋಡು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಉತ್ಸವದ ಅಂಗವಾಗಿ ನಡೆದ ವಿವಿಧ ಸಾಂಸ್ಕ್ರುತಿಕ ಕಾರ್ಯಕ್ರಮಗಳಲ್ಲಿ ಯಕ್ಷಗಾನ ತೊಗಲು ಗೊಂಬೆಯಾಟ, ಡೊಳ್ಳೂ ಕುಣಿತ, ಸಂಭಾಳ ವಾದನ, ಕರಡಿ ಮಜಲು, ದಾಸವಾಣಿ, ಭರತನಾಟ್ಯ, ಕೂಚಿಪುಡಿ ನೃತ್ಯ, ಕರಗ ನೃತ್ಯ, ಮಯೂರಿ ನೃತ್ಯ, ನಾಗನೃತ್ಯ, ಸ್ಯಾಕ್ಸೊಫೊನ್ ವಾದನ, ನಾಟಕ ಮುಂತಾದವು ಮನ ಸೆಳೆದವು. ಹೊರನಾಡು ಹಾಗೂ ಗಡಿನಾಡ ಕನ್ನಡಿಗರ ಸಮಸ್ಯೆಗಳನ್ನು ಕುರಿತು ಚಿಂತನಾಗೋಷ್ಠಿ, ಕವಿಸಮ್ಮೇಳನ, ಪರಂಪರಾಗತ ಯಕ್ಷಗಾನ ಮುಖವರ್ಣಿಕೆಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಮೊದಲಾದವು ಸಮಾರಂಭಕ್ಕೆ ಮೆರಗು ನೀಡಿದ್ದವು.
ಗೋವಾ ಕೇಸರಿಗೆ ಪ್ರಶಸ್ತಿ:
ಇದೇ ಸಂದರ್ಬದಲ್ಲಿ ಗೋವಾದ ಪ್ರತಿಷ್ಠಿತ ಕನ್ನಡ ಪಾಕ್ಷಿಕ ಗೋವಾ ಕೇಸರಿ ಪತ್ರಿಕೆಗೂ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪತ್ರಿಕೆಯ ಪರವಾಗಿ ಶ್ರೀ ಅರುನಕುಮಾರ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

No comments:

Post a Comment