Tuesday, November 30, 2010

ಒರಿಸ್ಸಾದಲ್ಲಿ ಸರಸೂ ಸರಿದಾಟ
ಸರಸ್ವತಿ ಸರದಾರ
ಬೆಳಿಗ್ಗೆ ೫ಕ್ಕೇ ಜನಸಂದಣಿಯಿರುವ ಜಾಗ ಯಾವುದು? ಎಂಬ ನನ್ನ ಪ್ರಶ್ನೆಗೆ "ಏರ‍್ಪೋರ್ಟ್" ಥಟ್ ಅಂತ ಉತ್ತರಿಸಿದ ೯ ವರ್ಷದ ಹಿತೇಶ್. ಇದನ್ನು ಪ್ರತ್ಯಕ್ಷ ನೋಡಿದ್ದು ಇಂದು. ನಂಗು - ಪಂಗು ವಿದೇಶೀಯರು, ಸರ್ಕಾರಿ ಖರ್ಚಿನಲ್ಲಿ ಸುತ್ತಾಡುವ ಅಧಿಕಾರಿಗಳು, ಖಾಸಗೀ ಕಂಪನಿಯ ಲ್ಯಾಪ್ ಟ್ಯಾಪ್ ಧಾರಿಗಳು. ಬೆಳಿಗ್ಗೆ ಹಾರಿ ಸಂಜೆಗೆ ಹಿಂತಿರುಗುವ ಉದ್ಯೋಗಪತಿಗಳು. ಠಾಕು ಠೀಕಾಗಿ ತಿರುಗಾಡುವ ಬೆಡಗಿಯರು. ಹೀಗೆ ಆಸಕ್ತಿ ಹುಟ್ಟಿಸುವಂತಹ ವಾತಾವರಣದಿಂದ ಮನಕ್ಕೆ ಮುದವುಂಟಾಯಿತು.
ಬ್ರೆಡ್ - ಜ್ಯಾಮ್ ಹಣ್ಣುಗಳ ನಾಷ್ಟಾ ಮಾಡಿ ಹಳೆಯ ಚಲನಚಿತ್ರವೊಂದನ್ನು ನೋಡುತ್ತಾ ಬಾಲ್ಯದ ದಿನಗಳನ್ನು ನೆನಸಿಕೊಂಡೆ. ಮೊದಲ ಬಾರಿಗೆ ವಿಮಾನದಲ್ಲಿ ಪಯಣಿಸಿದ್ದು ಮಾಮ ಅತ್ತೆಯೊಡನೆ ದಿಲ್ಲಿಗೆ ಹೋದಾಗ. ಆಗ ಬರೀ ಸಿರಿವಂತರೇ ಹಾರಾಡುತ್ತಿದ್ದರು. "ಬಲಗಾಲು ಇಟ್ಟು ವಿಮಾನ ಹತ್ತು." ಎಂದು ಹೇಳುತ್ತಿದ್ದ ಮಾಮ, ಬಾತ್ ರೂಮಿಗೆ ಹೋಗಿ ಬನ್ನಿ ಎಂದು ಕಾಳಜಿ ತೆಗೆದುಕೊಳ್ಳುತ್ತಿದ್ದ ಅತ್ತೆ, ಮನದಲ್ಲಿ ಮೂಡಿದ ಭಯ ಆತಂಕ ಮುಚ್ಚಿಕೊಳ್ಳಲು ಕಿಸಿಕಿಸಿ ನಗುವ ನಾನು ಮತ್ತು ಅನು- ಇಂದು ಟ್ರಾಲಿಯಲ್ಲಿ ಸಾಮಾನು vಳ್ಳಿಕೊಂಡು ಮೊಬೈಲ್ ನಲ್ಲಿ ಮಾತಾಡಿಕೊಂಡು ಅತಿಯಾದ ಸುರಕ್ಷಾ ಚಿಂತೆಗಳಿಂದ ಹೆಜ್ಜೆ ಹೆಜ್ಜೆಗೂ ಚೆಕಿಂಗ್ ಮಾಡಿಸಿಕೊಂಡು ಬ್ಲ್ಯಾಕ್ ಬೆರಿಯಲ್ಲಿ ಈ ಮೇಲ್ ಹಾವಳಿಯಲ್ಲಿ ನಿರತನಾದ ಪತಿಯೊಡನೆ ಪುಸ್ತಕದ ಮೊರೆಹೊಕ್ಕ ನನ್ನ ಪಯಣ ಆರಾಮದಾಯಕ.
ಶ್ರೀಮತಿ ಪಟ್ನಾಯಕರ ಪ್ರೀತಿಪೂರ್ಣ ಸ್ವಾಗತ, ಆದರಾತಿಥ್ಯ, ಮನೆಯಿಂದ ಇಷ್ಟು ದೂರ ಬಂದಿದ್ದೇನೆ ಎಂಬುದನ್ನು ಮರೆಸುವಂತಿತ್ತು. ಪ್ರಶಸ್ತ, ಸ್ವಚ್ಛ ಪ್ರವಾಸೀ ಮಂದಿರ, ರುಚಿ ರುಚಿಯಾಗಿ "ಮ್ ಚಮೀತ್" ಅಡಿಗೆ ಮಾಡಿ ಹಾಕುವ "ದೇಬು" ಎಲ್ಲವೂ ನನಗಾಗಿ ಕಾದಂತಿತ್ತು. ೪೦ ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಎ.ಸಿ. ಇಲ್ಲದೇ ಇರುವುದು ಅಶಕ್ಯವೆನಿಸಿತ್ತು. ನಾನೆಷ್ಟು ವಿಲಾಸ ಪೂರ್ಣ ಜೀವನ ನಡೆಸಿದ್ದೇನೆ ಎನಿಸಿತ್ತು.
ಸಂಜೆ ಉತ್ಸಾಹದ ಚಿಲುಮೆಯಂತಿರುವ ಆಂಟಿ ಸ್ನೇಹಮಯೀ ಶೋಮಾ, ತುಂಟ ಸಿದ್ಧೇಶನೊಡನೆ ಮಾಸೀಮಾ ಮಂದಿರ ನೋಡಲು ಹೋದೆವು. ಹೊರಗಿನಿಂದ ಅತೀ ಸುಂದರ ಅನಿಸಿತು. ದೇವರಿಗೆ ಕೈ ಮುಗಿಯಲು ಒಳಗೆ ಕಾಲಿಟ್ಟರೆ ಶಿವಲಿಂಗದ ಮೇಲೆಲ್ಲಾ ತಿರುಗಾಡುತ್ತಿರುವ ಜಿರಳೆಗಳು.! ಕಿಮಟು ವಾಸನೆ! ದುಡ್ಡು ಕೀಳಲು ಕಾದಿರುವ ಪಾಂಡಾಗಳು.!
ಲಿಂಗರಾಜ ಮಂದಿರದ ಪ್ರಾಂಗಣದಲ್ಲಿ ಒಟ್ಟು ನೂರಾ ಎಂಟು ಚಿಕ್ಕ ದೊಡ್ಡ ಗುಡಿಗಳು. ಹೊರಗಿನಿಂದ ಅಭೂತ ಪೂರ್ವ ಎನಿಸುವ ಕಟ್ಟಡದ ಒಳಗೆ ಭೂಮಿಯಿಂದ ತಾನಾಗಿಯೇ ಉದ್ಭವಿಸಿರುವ ಶಿವಲಿಂಗ. ಹರಿಹರನ ಮಂದಿರವೆನಿಸಿರುವ ಇಲ್ಲಿ ಎಲ್ಲೆಡೆ ಹರಿಯ, ಹರನ, ಚಿಹ್ನೆಗಳು ಕಂಡುಬಂದವು. ದೇವರಿಗೆ ಎಡೆ ಉಣಿಸಲು ಪ್ರತೀ ದೇವಾಲಯದಲ್ಲೂ ಅಡುಗೆ ಮನೆ ವ್ಯವಸ್ಥೆ ಇದೆ. ಇಲ್ಲಿನ ’ಭೋಗ್’ ಎಂದರೆ ’ಪ್ರಸಾದ’ಕ್ಕೆ ನಮ್ಮ ಕಾಣಿಕೆ ಸಲ್ಲಿಸಬಹುದು. ಸಲ್ಲಿಸಲೇಬೇಕು ಎಂಬುದು ಕಳ್ಳ ಪಾಂಡಾಗಳ ಅಭಿಪ್ರಾಯ. ದಿನಕ್ಕೆ ಮೂರು ಹೊತ್ತು ಇಲ್ಲಿನ ಪ್ರಸಾದ ತಿಂದುಂಡು ಆರಾಮಾಗಿ ಕಾಲ ಕಳೆಯುವ ಮೈಗಳ್ಳರ ಸಂಖ್ಯೆಯೇನೂ ಕಡಿಮೆಯಿಲ್ಲ..
ಏಕಾಂಮ್ರ ಹಾಟ್ ಭುವನೇಶ್ವರದ ಒಂದು ಉದ್ಯಾನದಲ್ಲಿರುವ ಹ್ಯಾಂಡಿಕ್ರಾಪ್ಟ್ ಸೆಂಟರ್. ಅಲ್ಲಿನ ವೇದಿಕೆ ಮೇಲೆ ಉತ್ಕಲ್ ದಿವಸ ರಾಜ್ಯೋತ್ಸವ ಸಮಾರಂಭ ನಡೆದಿತ್ತು. ಎಪ್ರಿಲ್ ೧ ರಂದು ನೆರೆದ ಜನರನ್ನು ರಾಜಕಾರಣಿಗಳು ಫೂಲ್ ಮಾಡುತ್ತಿದ್ದರು. ಎಲ್ಲಾ ದರ ಕೇಳಿ ಏನೂ ಕೊಳ್ಳದೇ ಮನೆಗೆ ಹಿಂತಿರುಗಿದೆವು.
ಮರುದಿನ ಮುಂಜಾನೆ ಕೋನಾರ್ಕಕ್ಕೆ ಹೊರಟೆವು. ಎತ್ತಿನ ಗಾಡಿಗಿಂತ ಸ್ವಲ್ಪ ಹೆಚ್ಚು ವೇಗವಾಗಿ ಕಾರು ನಡೆಸುತ್ತಿದ್ದ ರಬಿ. ಇಲ್ಲಿನ ಜನರೆಲ್ಲಾ ಬಹಳ ಸೌಮ್ಯವಾಗಿ ಮಾತನಾಡುತ್ತಾರೆ. ಕೋನಾರ್ಕದ ಸೂರ್ಯ ಮಂದಿರ ವರ್ಲ್ಡ ಹೆರಿಟೇಜ್ ಮಾನ್ಯುಮೆಂಟ್ ಎಂದು ಕರೆಯಲ್ಪಟ್ಟಿದೆ. ದೊಡ್ಡ ಉದ್ಯಾನವನದ ನಡುವೆ ಇದೆ. ಸುಂದರವಾದ ಕಟ್ಟಡ. ಮೊದಲಿಗೆ ಕಂಡುಬರುವುದು ಮನುಷ್ಯನನ್ನು ತುಳಿದು ನಿಂತಿರುವ ಆನೆಗಳು, ಅದರ ಮೇಲೆ ಸವಾರಿ ಮಾಡುತ್ತಿರುವ ಸೂರ್ಯನ ರಥ. ದೇವಾಲಯದ ಹೊರಗಿನ ಕಟ್ಟಡ, ಕೆತ್ತನೆಯಷ್ಟೇ ನೋಡಬಹುದು. ಶಿಥಿಲಗೊಳ್ಳುತ್ತಿರುವ ದೇಗುಲದ ರಕ್ಷಣೆಗೆ ಕೆಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಬಾಲ ಸೂರ್ಯ, ಪ್ರೌಢ ಸೂರ್ಯ ಹೀಗೆ ಸೂರ್ಯನ ಮೂರು ವಿಗ್ರಹಗಳನ್ನು ಕಾಣಬಹುದು. ಗರ್ಭಗೃಹದ ಒಳಗೆ ಯಾವ ವಿಗ್ರಹವೂ ಇಲ್ಲ. ಇಲ್ಲಿನ ಸೂರ್ಯನ ವಿಗ್ರಹವನ್ನು ಬಹಳ ಹಿಂದೆಯೇ ಇಲ್ಲಿ ಸ್ಥಳಾಂತರಿಸಲಾಗಿದೆ. ೨೦ ನೇ ಶತಮಾನದ ಆಂಗ್ಲ ಅಧಿಕಾರಿಯೊಬ್ಬನ ಆಜ್ಞೆಯ ಮೇರೆಗೆ ದೇಗುಲದ ಒಳಗೆ ಯಾರೂ ಹೋಗದಂತೆ ಮರಳಿನ ಚೀಲಗಳನ್ನು ತುಂಬಿಸಿದ್ದಾರೆ. ಇಲ್ಲಿನ ಸೂರ್ಯನ ರಥದ ಚಕ್ರ ಅತೀ ಸುಂದರವಾಗಿದೆ. ದಾರಿಯುದ್ದಕ್ಕೂ ಇದೇ ’ಕೋನಾರ್ಕ ವೀಲ್’ ನ ಚಿಕ್ಕ ಪುಟ್ಟ ಪ್ರತಿಗಳನ್ನು ಮಾರಲು ಇಟ್ಟಿದ್ದಾರೆ. ಕಲ್ಲಿನಲ್ಲಿ ಮರದಲ್ಲಿ ಮಾಡಿದ ಈ ಕಲಾಕೃತಿಗಳು ಸುಂದರವಾಗಿವೆ.
ನಂತರ ಜಗನ್ನಾಥ ಮಂದಿರ ನೋಡಲು ಪುರಿಗೆ ಹೋದೆವು. ಕಾರನ್ನು ದೇವಸ್ಥಾನದಿಂದ ಒಂದು ಕಿಲೋಮೀಟರ್ ದೂರದಲ್ಲೇ ನಿಲ್ಲಿಸಿ ಸೈಕಲ್ ರಿಕ್ಷಾದಲ್ಲಿ ದೇಗುಲಕ್ಕೆ ಹೋಗಬೇಕು. ವಿಲಾಸೀ ಜೀವನದಿಂದ ಭಾರವಾದ ನಮ್ಮ ದೇಹಗಳನ್ನು ಈ ಬಡಕಲು ದೇಹದ ರಿಕ್ಷಾವಾಲಾಗಳ ಮೇಲೆ ಹೊರಿಸುವುದು ಹಿಂಸೆ ಉಂಟುಮಾಡಿತ್ತು. ಅವರ ಜೀವನ ಆಧಾರವನ್ನು ಅವರಿಮದ ಕಿತ್ತುಕೊಳ್ಳಬಾರದೆಂಬ ಶೋಮಾಳ ತರ್ಕವೂ ಸರಿ ಎನಿಸಿ, ಸೈಕಲ್ ರಿಕ್ಷಾ ಹತ್ತಿದೆವು. ದೇವಸ್ಥಾನಕ್ಕೆ ಹೋಗುವ ಬೀದಿಯಲ್ಲಿ ಹಲವಾರು ಸತ್ರ ಗಳಿದ್ದವು. ಇಲ್ಲಿ ಬಂದು ಇದ್ದುಬಿಡುವ ಭಕ್ತರಿಗೇನೂ ಕಡಿಮೆಯಿಲ್ಲ. ಇಲ್ಲಿನ ರಥಯಾತ್ರಾದ ಸಮಯದಲ್ಲಿ ಇರುವೆಗಳಿಗೂ ಜಾಗ ಇರುವುದಿಲ್ಲವಂತೆ.! ದೊಡ್ಡ ಪ್ರಾಂಗಣದ ತುಂಬೆಲ್ಲಾ ಭಕ್ತರು - ನಡೆಯಲು ಒದ್ದಾಡುವ ಮುದುಕ ಮುದುಕಿಯರು. ಭಕ್ತಿಯಿಂದ ಮಂತ್ರ ಪಠಿಸುತ್ತಾ ಓಡಾಡುವ ಹೆಂಗಸರು. ಅಪ್ಪ ಅಮ್ಮಂದಿರ ಒತ್ತಾಯಕ್ಕೆ ಬಂದ ಹರೆಯದವರು, ನಮ್ಮ ಆಚಾರ ವಿಚಾರ ಗಳನ್ನು ಕುತೂಹಲದಿಂದ ನೋಡುವ ವಿದೇಶೀಯರು, ಎಲ್ಲಿ ಎಷ್ಟು ಹೊಲಸಿದೆ ಎಂಬುದನ್ನೇ ಗಮನಿಸುವ ನಮ್ಮಂತಹ ಪಡ್ಡೆ ಬುದ್ಧಿಜೀವಿಗಳು. ಹೀಗೆ ಹತ್ತು ಹಲವರಿದ್ದರು. ಇಲ್ಲಿನ ಪದ್ಧತಿಯಂತೆ ತುಪ್ಪದ ಹಣತೆಯೊಂದನ್ನು ಕೊಂಡು ಅದಕ್ಕಾಗಿಯೇ ಮಾಡಿದ ಜಾಗದಲ್ಲಿ ಹಚ್ಚಿಟ್ಟೆವು. ಗೋವಾದ ಚರ್ಚುಗಳಲ್ಲೂ ಮೊಂಬತ್ತಿ ಹಚ್ಚುವ ಸಂಪ್ರದಾಯವಿದೆ. ನಮ್ಮ ಧರ್ಮಗಳು ಬಿನ್ನತೆಯಲ್ಲಿಯೂ ಏಕತೆಯನ್ನು ಹೊಂದಿರುವುದು ಸೋಜಿಗವಲ್ಲವೇ? ಅಲ್ಲಿನ ಬಿಸಿಲಿನಲ್ಲಿ ಮತ್ತೇನೂ ನೋಡುವ ಮನಸಾಗದೇ ಭುವನೇಶ್ವರಕ್ಕೆ ಮರಳಿದೆವು.
ಅದೇ ಸಂಜೆ ಕಟಕ್ ನೋಡಲು ಹೋದೆವು. ಕಟಕ್ ಓರಿಸ್ಸಾದ ಹಳೆಯ ರಾಜಧಾನಿ. ಇಲ್ಲಿನ ಗಜಿಬಿಜಿ ಗಲ್ಲಿಗಳು ಭುವನೇಶ್ವರದ ಸ್ವಚ್ಛ ಪ್ರಶಸ್ತ ರಾಜಬೀದಿಗಳಿಗಿಂತ ಬಹಳ ಬೇರೆ. ಇಲ್ಲಿ ಹರಿಯುವ ಚಂದ್ರಭಾಗಾ ನದಿ ದೊಡ್ಡದು ಅನಿಸಿತು. ಮರುದಿನ ಮುಂಜಾನೆಯೇ ವ್ಯಾಪಾರಕ್ಕಿಳಿದೆ. ಇಲ್ಲಿಮ ಸುಂದರ ಕಾಟನ್ ಸೀರೆಗಳನ್ನು ಕೊಂಡೆ. ಬೆಳ್ಳಿಯ ಫಿಲಿಗ್ರಿ ಮಾಡಿದ ಆಭರಣಗಳು ಇಲ್ಲಿನ ವೈಶಿಷ್ಟ್ಯ ಸೀರೆಗಳು ತುಟ್ಟಿ ಅನಿಸಿದರ ಒಡವೆಗಳು ಪರವಾಗಿಲ್ಲ ಅನಿಸಿದವು. ನಾಲ್ಕು ದಿನಗಳು ಹೇಗೆ ಕಳೆದೆವೆಂದೇ ತಿಳಿಯಲಿಲ್ಲ. ಮರಳಿ ಗೂಡು ಸೇರಿದಾಗ ಗೋವಾದ ಸ್ವಚ್ಛತೆಯ ಬೆಲೆ ತಿಳಿದಿತ್ತು.

1 comment:

  1. ಲೇಖನ ಚೆನ್ನಾಗಿದೆ.
    ಅಲ್ಲಿಯ ಛಾಯಚಿತ್ರ,ತಗಲುವ ಖರ್ಚು ವೆಚ್ಚ, ಅಲ್ಲಿಗೆ ಹೋಗುವಾಗ ವಹಿಸಬೇಕಾದ ಎಚ್ಚರಿಕೆಗಳು,ಹೋಗಲು ಸೂಕ್ತ ಸಮಯ, ಇದೆಲ್ಲನು ಒಳಗೊಂಡಿದ್ರೆ ಲೇಖನ ಮತ್ತಷ್ಟು ಪರಿಪೂರ್ಣ ಅನ್ನಿಸ್ತಿತ್ತು.
    ಆದರೂ ಖಂಡಿತವಾಗಿಯೂ ಒಳ್ಳೆಯ ಪ್ರಯತ್ನ.

    ReplyDelete